Monday 23 April 2012

೧೬ ವರ್ಷಗಳ ನಂತರ ತವರಿಗೆ ಸೇರಿದ ಸವಿತಾ




೧೬ ವರ್ಷಗಳ ಬಳಿಕ ಸವಿತಾ ಮರಳಿ ಸೇರಿದಳು ತವರಿಗೆ...
-ಸಂದೇಶ ಶೆಟ್ಟಿ ಆರ್ಡಿ
ಚಿಕ್ಕಮಗಳೂರು ತರಿಕೆರೆ ಕಲ್ಲೆತ್ತಿಪುರದ ಸವಿತಾ ೧೬ ವರ್ಷಗಳ ನಂತರ ತವರಿಗೆ ಸೇರಿದ ವಿನೂತನ ಘಟನೆ ಶನಿವಾರ ನಡೆದಿದೆ. ಹಲವು ತರದ ಕಷ್ಟಗಳನ್ನು ಎದುರಿಸಿ ಕಳೆದ ಒಂದೂವರೆ ವರ್ಷಗಳಿಂದ ನಗರದ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ವಾಸವಾಗಿದ್ದ ಸವಿತಾಗೆ ಒಂದು ವಾರದ ಸತತ ಪ್ರಯತ್ನದಿಂದ ತವರುಮನೆಗೆ ಸೇರುವ ಭಾಗ್ಯ ದೊರೆತಿದೆ.
ಸವಿತಾಳ ಪಾಲಿಗೆ ಖಳನಾಯಕನಾಗಿ ಬಂದ ಕರುಣಾಕರ:
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ ವಾಟರ್ ಫಾಲ್ ಎಸ್ಟೇಟ್‌ನಲ್ಲಿ ರೈಟರ್ ಆಗಿ ಬಂದವನು ಕರುಣಾಕರ. ಸವಿತಾಳ ತಂದೆ ಸಗಾಯ್ ಅವರಲ್ಲಿ ಉಡುಪಿಯಲ್ಲಿ ಮನೆಕೆಲಸದೊಂದಿಗೆ ಶಾಲೆಗೆ ಕಳುಹಿಸುವ ವ್ಯವಸ್ಥೆ ಇದೆ ಎಂದು ೭ ವರ್ಷದ ಬಾಲೆ ಸವಿತಾಳನ್ನು ಉಡುಪಿಯ ಹೆಜಮಾಡಿ ಕೋಡಿಯ ಅಂಚೆ ಅಧಿಕಾರಿ ಕೆ.ಶ್ರೀಧರ ಅವರ ಮನೆಯಲ್ಲಿ ಬಿಡುತ್ತಾನೆ. ಮನೆಕೆಲಸಕ್ಕೆಂದು ಬಂದ ಸವಿತಾ ಶಾಲೆಯ ಮೆಟ್ಟಿಲನ್ನು ನೋಡದೇ ಮನೆ ಕೆಲಸದಲ್ಲಿ ಜೀವನವನ್ನು ಕಾಣುತ್ತಾಳೆ. ಹೀಗೆ ಮನೆಯ ಸಂಪರ್ಕವನ್ನೆ ಕಳೆದುಕೊಂಡ ಅವಳ ನೋವಿನ ದುರಂತ ಕಥೆ ಇಲ್ಲಿದೆ ನೋಡಿ:
ಸವಿತಾಳ ದುರಂತ ಬದುಕು:
ಸವಿತಾ ಏಳು ವರ್ಷವಾಗಿದ್ದಾಗ ಮೂರನೇ ತರಗತಿಗೆ ಸೇರಿದ ಸಂದರ್ಭ ಉಡುಪಿಯ ಸಮೀಪದ ಹೆಜಮಾಡಿ ಕೋಡಿಯಲ್ಲಿ ಮನೆಕೆಲಸಕ್ಕೆಂದು ರೈಟರ್ ಕರುಣಾಕರ ಅವಳ ಚಿಕ್ಕಪ್ಪನೊಂದಿಗೆ ಬಂದು ಬಿಟ್ಟು ಹೋಗಿದ್ದಾರೆ. ಅಲ್ಲಿಂದ ಮನೆಯವರ ಸಂಪರ್ಕವನ್ನು ಕಳೆದುಕೊಂಡು ಕೆಲಸದ ಮನೆಯಲ್ಲಿ ಜೀತದಾಳಿನಂತೆ ದುಡಿಯುತ್ತಾಳೆ. ಮನೆಯವರು ಹೇಳಿದ ಕಾರ್ಯವನ್ನು ಮಾಡಿಕೊಂಡಿದ್ದರೂ ಮನೆಯವರ ದೌರ್ಜನ್ಯ ಸಾಮಾನ್ಯ ಬಾಲೆಗೆ ಎದುರಿಸುವ ದೈರ್ಯವಿಲ್ಲದೇ ಹೋಯಿತು. ಹೀಗೆ ಸತತ ಏಳೂವರೆ ವರ್ಷಗಳವರೆಗೆ ಬಾಲ್ಯದ ಜೀವನ ಸಂತೋಷದಿಂದ ಕಳೆಯಬೇಕಾಗಿದ್ದ ಬಾಲೆ ಅಂಚೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಕೆ.ಶ್ರೀಧರ ಅವರ ಮನೆಯಲ್ಲಿ ಕತ್ತಲಿನಲ್ಲಿ ಕಳೆಯಬೇಕಾಗಿ ಬಂತು. ಸರಿಯಾಗಿ ತಿಂಗಳಾದ ಕೂಡಲೇ ಚಿಕ್ಕಪ್ಪನ ಸ್ನೇಹಿತ ಕರುಣಾಕರ ಬಂದು ಸಂಬಳವನ್ನು ಈಕೆಯ ಪಾಲಿಗಿಲ್ಲದಂತೆ ಮಾಡುತ್ತಿದ್ದ. ನಂತರ ಅವಳು ಅಲ್ಲಿಂದ ಮನೆಯವರ ಕಣ್ತಪ್ಪಿಸಿ ಮಂಗಳೂರಿನ ಫಳ್ಳೀರ್‌ನಲ್ಲಿರುವ ಪ್ರವೀಣ್ ಕುಮಾರ್ ಅವರ ಮನೆಯಲ್ಲಿ ಮೂರುವರೆ ವರ್ಷ ಮತ್ತೆ ಅದೇ ಕಷ್ಟನಷ್ಟಗಳ ಜೀವನ. ಹೀಗೆ ಅವಳ ಕಷ್ಟವೆಂದು ಮನೆಯವರ ಮುಂದೆ ತೋಡಿಕೊಂಡಾಗ ಅವರು ಪೊಲೀಸರ ವಶಕ್ಕೆ ಕೊಟ್ಟು ತಮ್ಮ ಕೈತೊಳೆದುಕೊಳ್ಳುತ್ತಾರೆ. ಪೊಲೀಸರು ಈಕೆಯನ್ನು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ವಶಕ್ಕೆ ಒಂದೂವರೆ ಹಿಂದೆ ಒಪ್ಪಿಸಿದ್ದರು. ಹೀಗೆ ಜೀವನಕ್ಕೆ ಆಧಾರವಾಗಿ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಅವಳ ಬಾಳಿಗೆ ಬೆಳಕಾಗಿ ಬಂದಿದೆ.
ಆಪದ್ಬಾಂಧವನಂತೆ ಬಂದ ವಿಲಿಯಮ್ಸ್:
೧೫ ನಂಬರ್ ಬಸ್‌ನಲ್ಲಿ ಕಂಡೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಹಿಂದೊಮ್ಮೆ ಮೋರ್ಗನ್ಸ್‌ಗೇಟ್ ಬಳಿ ನಿಂತಿದ್ದಾಗ ಈಕೆಯನ್ನು ನೋಡಿ ಈಕೆ ಸವಿತಾಳೆ ಇರಬೇಕೆಂದು ಮನಸ್ಸಿನಲ್ಲಿ ಆಲೋಚಿಸಿದ್ದ. ಧನಾತ್ಮಕ ಚಿಂತನೆಗೆ ಧನಾತ್ಮಕವಾಗಿಯೇ ಪ್ರತಿಕ್ರಿಯೆ ದೊರೆಯುತ್ತದೆ ಎನ್ನುವಂತೆ ಇವಳು ಎ.೧೧ರಂದು ಲಾಲ್‌ಬಾಗ್‌ನಲ್ಲಿ ಬಸ್ ಹತ್ತಿ ಕಂಕನಾಡಿ ಟಿಕೆಟ್ ಪಡೆಯುತ್ತಾಳೆ. ವಿಲಿಯಮ್ಸ್ ಈಕೆಯನ್ನು ಮಾತನಾಡಿಸಿದಾಗ ೧೬ ವರ್ಷಗಳ ಹಿಂದೆ ಕಾಣೆಯಾದ ತನ್ನೂರಿನ ಸವಿತ ಈಕೆ ಎನ್ನುವುದನ್ನು ಖಚಿತಪಡಿಸಿಕೊಂಡು ತಾಯಿಯೊಂದಿಗೆ ಸೇರಿ ಅವರ ಮನೆಯ ವಿಳಾಸ ಪತ್ತೆಹಚ್ಚಿ ಅವರ ಕುಟುಂಬಿಕರೊಂದಿಗೆ ಸೇರುವಂತೆ ಮಾಡಿದ್ದಾನೆ.
ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಪಾತ್ರ:
ಕಳೆದೊಂದು ವರ್ಷದಿಂದ ಸಂಸ್ಥೆಯಲ್ಲಿರುವ ೨೨ ವರ್ಷದ ಸವಿತಾಳಿಗೆ ಮದುವೆ ಮಾಡಿಸಬೇಕೆಂಬ ಆಸೆಯಿಂದ ಹಲವಾರು ಹುಡುಗರನ್ನು ತೋರಿಸಿದಾಗ ಅವಳ ತಲೆಯಲ್ಲಿ ಕಡಿಮೆ ಕೂದಲು ಇರುವುದರಿಂದ ಹುಡುಗರು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದರು. ಹೀಗೆ ವಿಲಿಯಮ್ಸ್ ಬಂದು ಆಕೆಗೆ ತಂದೆ ಇದ್ದಾರೆ. ಅವಳು ನಮ್ಮ ಊರಿನವಳು ಎಂದು ಹೇಳಿದಾಗ ಅವಳನ್ನು ತಲುಪಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದರು. ಸಾಕ್ಷಿಗೆ ಬೇಕಾಗಿ ಶಾಲೆಯ ಸರ್ಟಿಫಿಕೇಟ್, ಸಣ್ಣ ಪೋಟೊ, ರೇಶನ್ ಕಾರ್ಡ್‌ನಲ್ಲಿದ್ದ ಹೆಸರನ್ನು ಸಂಗ್ರಹಿಸಿದ್ದಾರೆ. ತರಿಕೆರೆ ಸಾಂತ್ವಾನ ಕೇಂದ್ರದಿಂದ ಕುಟುಂಬಿಕರ ಕುರಿತು ವಿಚಾರಣೆ, ಜಿಲ್ಲೆಯಲ್ಲಿರುವ ಡಿಡಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿ ತಂದೆಯೊಂದಿಗೆ ಕಳುಹಿಕೊಡಲು ತೀರ್ಮಾನ ಮಾಡಿದ್ದಾರೆ.


೧೬ ವರ್ಷಗಳ ಬಳಿಕ ತಂದೆಯನ್ನು ಕಾಣುವ ಭಾಗ್ಯ ನನ್ನ ಪಾಲಿಗೆ ದೊರಕಿದೆ. ತಂದೆಯೊಂದಿಗೆ ತೋಟದ ಕೆಲಸವನ್ನು ಮಾಡಿ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಮನೆಯ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದು ಮಾತ್ರವಲ್ಲ. ಜೀವಿತದಲ್ಲಿ ತಂದೆಯನ್ನು ನೋಡುವ ಅವರೊಂದಿಗೆ ಬಾಳುವ ಅವಕಾಶವನ್ನು ಮಾಡಿಕೊಟ್ಟಿದೆ.
-ನತದೃಷ್ಠೆ ಸವಿತಾ

ಎಲ್ಲಾ ಮಕ್ಕಳಂತೆ ಅವಳು ಕೂಡ ಸಂತೋಷದಿಂದ ನಮ್ಮಲ್ಲಿ ಬೆರೆತಳು. ಇಲ್ಲಿಗೆ ಬಂದ ಸ್ವಲ್ಪ ಸಮಯ ಮಂಕು ಕವಿದಂತೆ ಯಾರೊಂದಿಗೂ ಸೇರುತ್ತಿರಲಿಲ್ಲ. ಕಾಲಕ್ಕೆ ತಕ್ಕಂತೆ ಎಲ್ಲರೊಂದಿಗೆ ಹೊಂದಾಣಿಕೆಯಿಂದ ಜೀವನ ನಡೆಸಲು ಕಲಿತಳು. ಅವಳ ಮದುವೆಗೆ ಸಹಾಯ ಮಾಡುವ ಆಸೆಯಿದೆ.
ಪ್ರೊ. ಹಿಲ್ಡಾ ರಾಯಪ್ಪನ್- ಪ್ರಜ್ಞಾ ಸಂಸ್ಥೆಯ ಅಧ್ಯಕ್ಷೆ

ಯಕ್ಷಗಾನ



ಕರಾವಳಿ ದರ್ಶನ:
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯ ಯಕ್ಷಗಾನದಲ್ಲಿ ನೋಡಬನ್ನಿ....
(ಓದು,ಬರೆಯಲು ಬಾರದ ಕಲಾವಿದರ ನೈಪುಣ್ಯತೆ... ನಿರರ್ಗಳವಾಗಿ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳ ಅವಿರತ ಸಾಧನೆ.....
ತುಳುನಾಡಿನ ಗಂಡುಕಲೆ ಯಕ್ಷಗಾನ. ಹಿಂದೆ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಸಾಗರತೀರದ ಈ ಕಲೆಯನ್ನು ಮಕ್ಕಳು, ಹೆಂಗಸರು ನಮ್ಮಲ್ಲಿಯೂ ಕೂಡ ಸಾಮರ್ಥ್ಯವಿದೆ ಎಂದು ಸಾಧಿಸಿತೋರಿಸುತ್ತಿದ್ದಾರೆ. ಯಕ್ಷಗಾನ ಕನ್ನಡ ಸಂಸ್ಕೃತಿಯನ್ನು ದೇಶದ ಮೂಲೆಗಳಿಗೂ ಪಸರಿಸಿ, ವಿದೇಶದಲ್ಲೂ ಕನ್ನಡ ಕಂಪನ್ನು ಪಸರಿಸಿದ ಕೀರ್ತಿ ಯಕ್ಷಗಾನಕ್ಕಿದೆ. ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ತಮ್ಮ ಬೆಚ್ಚನೆಯ ಗೂಡಿನೊಳಗೆ ಸೇರಿದ ಸಾಗರ ತೀರದ ಸಮೃದ್ದ ಕಲೆಯಾದ ಯಕ್ಷಗಾನ ಮೇಳಗಳು ಈಗ ಗೂಡುಬಿಟ್ಟು ಹೊರಟು ಕರಾವಳಿಯಾಧ್ಯಂತ ಸಂಚರಿಸುತ್ತಾ ಕಲಾರಸಿಕರ ಮನ ತಣಿಸುತ್ತಿವೆ. ವೃತ್ತಿ ಯಕ್ಷಗಾನ ಮೇಳಗಳು ಪುರುಷರಿಗೆ ಸೀಮಿತವಾಗಿದೆ. ವಿದ್ವನ್‌ಮಣಿಗಳ ಪ್ರಕಾರ ಯಕ್ಷಗಾನವೆನ್ನುವುದು ಜಾಗೃತ ಕಲೆ; ಅರಿವಿನ ನೆಲೆ; ಆನಂದದ ಅಲೆ; ಸಾಂಸ್ಕೃತಿಕ ,ಧಾರ್ಮಿಕ, ಸಾಮಾಜಿಕ, ಸಾಂಪ್ರದಾಯಿಕ ಜೀವನಮೌಲ್ಯಗಳ ಆಧಾರ ಸೆಲೆ; ರವರಸಗಳನ್ನು ಬಿತ್ತುವ ಹೊಳೆ; ಇದುವೇ ಹಿಂದೂ ಸಂಸ್ಕೃತಿಯ ಸಂಜೀವಿನಿ. ಇದು ಕೇವಲ ಕರಾವಳಿಗೆ ಸೀಮಿತವಾಗಿರದೆ, ಮಲೆನಾಡಿನ ಉದ್ದಗಲಕ್ಕೂ ತನ್ನ ಬಾಹುಳ್ಯವನ್ನು ಪ್ರದರ್ಶಿಸುತ್ತಾ, ದೇಶ ವಿದೇಶಗಳಲ್ಲೂ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿದೆ.
ಯಕ್ಷಗಾನ ಮೇಳಗಳ ವೈಶಿಷ್ಟ್ಯವೇ ಹಾಗೇ...ಎಲ್ಲಾ ಮೇಳಗಳು ದೇವರ ಗುಡಿಯಿಂದಲೇ ಹೊರಟು, ಕೊನೆಗೆ ಬಂದು ಸೇರುವುದು ಅದೇ ಸುಂದರವಾದ ಭೂರಮೆಯ ಮಡಿಲಿಗೆ....ಸಾಗರದ ನೀರಿನಂತೆ.... ಆವಿಯಾಗಿ, ಮಂಜು ಕವಿದು, ಮೋಡ ಮಳೆಯಾಗಿ ಸುರಿದು ಕೊನೆಯಲ್ಲಿ ಸೇರುವುದು ಸಾಗರದ ಒಡಲಿಗೆ.
ತೆಂಕುತಿಟ್ಟು ಅಥವಾ ಬಡಗುತಿಟ್ಟು ಯಾವುದೇ ಮೇಳವಾದರೂ, ತಿರುಗಾಟ ಹೊರಡುವುದು ಮಾತ್ರ ದೇವರ ಹೆಸರಿನಲ್ಲಿಯೇ? ಕಲೆ ಕಾಸಿಗಾಗಿ, ಕಾಲಯಾಪನೆಗಾಗಿ ಎನ್ನುವ ಜನರಿಗೆ ಮುದ ನೀಡುವುದಕ್ಕಾಗಿ ಮುಂದಾದ ಡೇರೆ ಮೇಳಗಳಾದರೂ, ತಿರುಗಾಟ ನಡೆಸುವುದು ದೇವರ ಹೆಸರಿನಿಂದ ಮತ್ತು ದೇವಸ್ಥಾನದ ನಾಮಮುದ್ರೆಯಿಂದ.
ಪ್ರತಿಯೊಬ್ಬ ಕಲಾವಿದನ ಬಾಳಭೂಮಿಯಲ್ಲಿ ನೀಳವಾಗಿ ಬಿಳಲುಗಳನ್ನು ಇಳಿಬಿಟ್ಟು, ಬಲವಾಗಿ ಬೇರುಬಿಟ್ಟ ಆಲದ ಮರವೇ ಯಕ್ಷಗಾನ. ಇದೊಂದು ಅದ್ಬುತವಾದ ಕಲೆ. ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಯಕ್ಷಗಾನಕ್ಕೆ ಮಾತ್ರ ಸಲ್ಲುತ್ತದೆ. ಮನಸ್ಸಿಗೆ ಮುದ ನೀಡುವ,ನೆಮ್ಮದಿಯನ್ನು, ಜೀವನಮೌಲ್ಯವನ್ನು ಸಾರುವ ಯಕ್ಷಗಾನ, ಜನಮನ ರಂಜನೆಗೊಳಪಡಿಸುತ್ತಾ ರಂಜನೆ ನೀಡುತ್ತಿರುವ ದೃಶ್ಯ ಮಾತ್ರ ಮನಮೋಹಕವಾಗಿರುತ್ತದೆ.
ಎಷ್ಟೇ ಹಠಮಾರಿ ಗಂಡನಾದರೂ, ಹೆಂಡತಿಯ ಮಮತೆಯ ಮುಂದೆ ಮುಗುಳುನಗುವಿನ ಮುಗ್ದ ಮಗುವಿನಂತಾಗುತ್ತಾನೆ. ಯಕ್ಷಗಾನದ ಅಭಿರುಚಿಯೇ ಅಂತದ್ದು, ಮನಸ್ಸಿನಲ್ಲಿ ಎಂತಹ ದುಗುಡ,ದುಮ್ಮಾನಗಳಿದ್ದರೂ ಕ್ಷಣಮಾತ್ರದಲ್ಲಿ ಪರಿಹರಿಸುವ ಸಾಧನ.
ಗೆಜ್ಜೆ ಕಟ್ಟುವ ಸೇವೆಯನ್ನು ಹರಕೆಯಾಗಿ, ಕರಾವಳಿ ಮತ್ತು ಮಲೆನಾಡಿನ ಜನತೆ ಆಚರಿಸಿಕೊಂಡು ಬಂದಿದ್ದಾರೆ. ಎದೆಯ ಕುದಿ ಕಳೆಯಲು, ಒಡಲು ತಂಪಾಗಿಸಲು, ಬಗೆಯ ಬಯಕೆ ಹಣ್ಣಾಗಲು ಹರಕೆ ಹೊತ್ತು ಅದೃಷ್ಟದ ಫಲ ದೊರೆತಾಗ ಸೇವೆಯನ್ನು ಮಾಡುತ್ತಾರೆ. ಪ್ರತಿಯೊಂದು ದೇವಾಸ್ಥಾನದಲ್ಲೂ ಅದರದೇ ಆದ ವೈಶಿಷ್ಟವಿರುತ್ತದೆ. ಮಂದಾರ್ತಿ ದೇಗುಲದಲ್ಲಿ ರಚಿಸಿದ ಹಾಡನ್ನು ಕೇಳಿದಾಗ, ಮಗದೊಮ್ಮೆ ಕೇಳಬೇಕು ಎನಿಸುವಂಥದ್ದು...
`ಯಕ್ಷಗಾನ ಸೇವೆ ನೀಡಿ, ಮಂದಾರ್ತಿ ದುರ್ಗೆ
ಮನ ಒಲಿಸಿ ಧನ್ಯರಾಗಿ.....`
ಹೀಗೆ ಮುಂದೆ ಸಾಗುವ ಹಾಡು ಅನೇಕ ಯಕ್ಷಪ್ರೇಮಿಗಳ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುವಂಥದ್ದು. ಯಾವುದೇ ಮೇಳವಿರಲಿ ಅವರು ಸಾರುವ ಸಂಸ್ಕೃತಿಯೊಂದೆ. ಜನರಲ್ಲಿ ತಮ್ಮ ಧರ್ಮದ ಬೀಜವನ್ನು ಬಿತ್ತುವ, ಪ್ರಪಂಚಾನುಭವವನ್ನು ಹರಹುವ, ಚಲಿಸುವ ವಿಶ್ವವಿದ್ಯಾಲಯ. ಸಂಸ್ಕೃತಿಯನ್ನು ಪಸರಿಸುವ ಈಗಿನ ಯಾವುದೇ ಮಾದ್ಯಮಗಳಿಗಿಂತ ಮಿಗಿಲಾದ ಸಾಧನವೇ ಯಕ್ಷಗಾನ.
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯನ್ನು ಓದುಬಾರದ, ನಿರರ್ಗಳವಾಗಿ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳು ತಮ್ಮ ತಿರುಗಾಟ ಮಾಡಿ, ಜಗತ್ತು ಮಲಗಿರುವಾಗ ಇವರ ಕಾಯಕ ಪ್ರಾರಂಭ, ಜನರೊಂದಿಗೆ ಬೆರೆಯುವ ಹಗಲಿನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಪವಡಿಸುವ, ಕಲಾಮಾತೆಯ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು, ಅದರಲ್ಲೇ ತಮ್ಮ ಜೀವನದ ಗೋಪುರವನ್ನು ಕಟ್ಟುವಲ್ಲಿ ಯಶಸ್ಸು ಕಂಡವರು. ಅನೇಕ ಜೀವನಮೌಲ್ಯ,ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಪುಣ್ಯತಮವಾದ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೇ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುತ್ತಾನೆ.
ಯಕ್ಷಗಾನದಲ್ಲಿ ಯಾರು ವೇಷವನ್ನು ಮಾಡುತ್ತಾರೋ ಅವರನ್ನು ಮುಮ್ಮೇಳವೆಂದೂ, ಅವರುಗಳಿಗೆ ಪೂರಕವಾಗಿ ಹಾಡು, ಮದ್ದಳೆ, ಚೆಂಡೆ ಹಾಗೂ ಶ್ರುತಿಗಳನ್ನೊಳಗೊಂಡ ತಂಡವೇ ಹಿಮ್ಮೇಳ. ಮುಮ್ಮೇಳದವರು ವೇಷವನ್ನು ಧರಿಸಿ ಹಿಮ್ಮೇಳಕ್ಕೆ ಸರಿಹೊಂದುವಂತೆ ನವರಸಗಳಗಳನ್ನೊಳಗೊಂಡ ಅಭಿನಯ, ಹಾವ, ಭಾವ ಹಾಗೂ ಶ್ರುತಿಬದ್ದವಾದ ಮಾತುಗಾರಿಕೆಯಿಂದ ಕಲಾವಿಧನ ಕಲಾಪ್ರೌಢಿಮೆ ಗುರುತಿಸಲ್ಪಡುತ್ತದೆ. ಕಾಲಿನ ಗೆಜ್ಜೆ, ಭಾಗವತನ ತಾಳ/ ಜಾಗಟೆ, ಶ್ರುತಿ, ಮದ್ದಳೆ, ಚೆಂಡೆಗಳ ಹದಬರಿತ ಮೇಳವೇ ಹಿಮ್ಮೇಳ. ಈ ವಿಭಾಗ ನೃತ್ಯ ಮತ್ತು ಅಭಿನಯಕ್ಕೆ ತಳಪಾಯ.
`ಅ' ಎನ್ನುವ ಒಂದು ಅಕ್ಷರವನ್ನು ಉಚ್ಚರಿಸುವ ಕಾಲಕ್ಕೆ ಒಂದು ಮಾತ್ರಾಕಾಲ ಎಂದು ಹೆಸರು. ಈ ಮಾತ್ರಾಕಾಲದ ಸಮೂಹವನ್ನೆ ತಾಳ ಎನ್ನುತ್ತೇವೆ. ನಿಯತವಾದ ತಾಳದ ಗತಿಯನ್ನೆ ಲಯ ಎನ್ನುತ್ತೇವೆ. ಉದಾಹರಣೆಯಾಗಿ ಗಡಿಯಾರದ ಮುಳ್ಳು ತಿರುಗಿದ ಹಾಗೆ.
ಯಕ್ಷಗಾನ ನಾಟ್ಯಾಭ್ಯಾಸಿಯು ನೃತ್ಯ ಮಾಡಲು ಅನೂಕೂಲ ವಾಗುವಂತೆ ಕೈಕಾಲು, ಕಣ್ಣುಗಳನ್ನು ಬೇಕಾದಂತೆ ಹೊಂದಿಸಿಕೊಳ್ಳಲು ಅಂಗಸಾಧನೆಯನ್ನು ಮೊದಲಿಗೆ ಅಭ್ಯಾಸ ಮಾಡಬೇಕು. ಹಸ್ತ, ಕಣ್ಣು, ಮನಸ್ಸುಗಳ ಸಂಯೋಗದಿಂದ ಭಾವನೆಗಳೂ ಮೇಳೈಸಿ ಮಾಡುವ ನಾಟ್ಯ ನಯನ ಮನೋಹರವಾಗಿ ಚಿತ್ತ ಆಕರ್ಷಿತವಾಗಿರುತ್ತದೆ.`` ಯಥಾ ಹಸ್ತಾ, ತಥಾ ದೃಷ್ಠಿ"- ಕೈ ಎಲ್ಲಿ ಹೋಗುವುದೋ ಅಲ್ಲಿ ಕಣ್ಣು ಹೋಗುವುದು. ಈ ವಿಷಯ ಎಲ್ಲಾ ನಾಟ್ಯಾಭ್ಯಾಸಿಯು ಗಮನದಲ್ಲಿಡಬೇಕಾದ ಅಂಶವಾಗಿರುತ್ತದೆ.
ಯಕ್ಷಗಾನದಲ್ಲಿ ಎರಡು ವಿಧ: ೧.ತೆಂಕು ತಿಟ್ಟು
೨.ಬಡಗು ತಿಟ್ಟು
ಬಡಗು ತಿಟ್ಟಿನಲ್ಲಿ ಬಡಾಬಡಗು ಹಾಗೂ ಬಡಗು ಎನ್ನುವ ಎರಡು ವಿಧಗಳಿವೆ. ದಕ್ಷಿಣ ಕನ್ನಡದಲ್ಲಿರುವ ಯಕ್ಷಗಾನವನ್ನು ತೆಂಕುತಿಟ್ಟು ಎಂತಲೂ, ಉಡುಪಿ ಮತ್ತು ಉತ್ತರಕನ್ನಡದಲ್ಲಿಯ ಯಕ್ಷಗಾನವನ್ನು ಬಡಗು ಮತ್ತು ಬಡಾಬಡಗು ಎಂದು ಗುರುತಿಸಲಾಗುತ್ತದೆ.
ತೆಂಕು ತಿಟ್ಟು ಹಾಗೂ ಬಡಗು ತಿಟ್ಟು ಯಕ್ಷಗಾನ ಮೇಳವಾದರೂ ವೇಷಭೂಷಣದಲ್ಲಿ ವ್ಯತ್ಯಾಸವಿದೆ. ಮುಖವರ್ಣಿಕೆ ಆಯಾ ವೇಷಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ತೆಂಕು ತಿಟ್ಟಿನಲ್ಲಿ ಹೇಳುವ ಪಗಡಿ ವೇಷವನ್ನು ಬಡಗು ತಿಟ್ಟಿನಲ್ಲಿ ಕ್ಯಾದಿಗೆ ಮುಂದಲೆ ಎಂದು ಕರೆಯುತ್ತಾರೆ. ಈ ವೇಷಗಳಿಗೆ ಅನುಗುಣವಾಗಿ ಅವರು ಮುಖವರ್ಣಿಕೆಯನ್ನು ಮಾಡಬೇಕಾಗುತ್ತದೆ. ತೆಂಕು ತಿಟ್ಟಿನಲ್ಲಿ ದಿಗಣ(ಗಿರಕಿ) ಹೊಡೆಯುವುದಕ್ಕೆ ಅನುಕೂಲವಾಗುವಂತೆ ಬಾಲ್‌ಮುಂಡ್ ಕಟ್ಟುತ್ತಾರೆ. ಆದರೆ ಬಡಗುವಿನಲ್ಲಿ ಮಂಡಿ ಹಾಕಲು ಅನುಕೂಲವಾಗುವುದಕ್ಕೆ ಹಾಗೂ ಇಲ್ಲಿಯ ಕ್ಯಾದಿಗೆ ಮುಂದಲೆಗೆ ಹೊಂದಿಕೆಯಾಗುವ ಕಸೆಯನ್ನು ಕಟ್ಟುತ್ತಾರೆ. ತೆಂಕುವಿನಲ್ಲಿ ಮಾತುಗಾರಿಕೆಗೆ ಮಹತ್ವ ನೀಡಿದರೆ ಬಡಗುವಿನಲ್ಲಿ ಅಭಿನಯಕ್ಕೆ ಮಹತ್ವವನ್ನು ನೀಡುತ್ತಾರೆ. ಈ ರೀತಿಯ ವ್ಯತ್ಯಾಸವನ್ನು ಯಕ್ಷಗಾನದ ಅಭಿರುಚಿ ಇದ್ದವರೂ ಬಹಳ ಬೇಗನೆ ಗುರುತಿಸುತ್ತಾರೆ. ಆದರೆ ಸಾಮಾನ್ಯನಿಗೂ ಗುರುತಿಸುವುದಕ್ಕೆ ಅನೂಕೂಲವಾಗುವಂಥ ವ್ಯತ್ಯಾಸವೆಂದರೆ ತೆಂಕುವಿನಲ್ಲಿ ನಿಂತು ಎಡಗಡೆಯಲ್ಲಿ ಚೆಂಡೆಯನ್ನು ಹೊಡೆದರೆ, ಬಡಗುವಿನಲ್ಲಿ ಬಲಗಡೆ ಕುಳಿತು ಬಾರಿಸುತ್ತಾರೆ.
ಸಾಮಾನ್ಯವಾಗಿ ಎರಡು ತಿಟ್ಟುಗಳಲ್ಲಿ ತಾಳಗಳು ಒಂದೆಯಾಗಿರುತ್ತವೆ. ಆದರೆ ಕುಣಿತದ ಶೈಲಿ ಬದಲಾಗಿರುತ್ತದೆ. ಯಕ್ಷಗಾನದಲ್ಲಿ ತಾಳಗಳು ಒಟ್ಟು ೧೩. ಅವುಗಳು ೧.ಆದಿತಾಳ, ೨.ಮಟ್ಟೆತಾಳ, ೩.ರೂಪಕತಾಳ, ೪.ಝಂಪೆತಾಳ, ೫.ತ್ರಿವುಡೆ ತಾಳ, ೬.ಏಕತಾಳ, ೭.ಏಕತಾಳ, ೮.ಉಡಾಪೆತಾಳ, ೯.ಕೋರೆತಾಳ, ೧೦. ಚೌತಾಳ, ೧೧.ತ್ವರಿತ ಝಂಪೆ, ೧೨.ತ್ವರಿತ ತ್ರಿವುಡೆ, ೧೩.ತ್ವರಿತ ಅಷ್ಟ..
ತೆಂಕು ತಿಟ್ಟಿನಲ್ಲಿ ಪಧ್ಯದ ಪ್ರಾರಂಭದಲ್ಲಿ ಆಲಾಪನೆಯೊಂದಿಗೆ ಬಿಡ್ತಿಗೆಗೆ ಬಂದು ಮುಕ್ತಾಯವಾಗುತ್ತದೆ. ಬಡಗುವಿನಲ್ಲಿ ಪದ್ಯದೊಂದಿಗೆ ಚಾಲು ಪ್ರಾರಂಭವಾಗಿ ನಂತರ ಪದ್ಯದಲ್ಲಿ ಕೊನೆಗೊಳ್ಳುತ್ತದೆ. ಯಕ್ಷಗಾನದಲ್ಲಿ ಭಾಗವತರನ್ನು ಒಂದನೇ ವೇಷಧಾರಿಗಳೆಂದು ಅಥವಾ ಸೂತ್ರದಾರಿಯೆಂದೂ ಕರೆಯುತ್ತಾರೆ. ಎರಡನೆ ವೇಷಧಾರಿಯು ಖಳನಾಯಕ ಹಾಗೂ ಕಥಾನಾಯಕನ ಪಾತ್ರವನ್ನು ಮಾಡುತ್ತಾರೆ. ಸೌಮ್ಯ ಸ್ವಭಾವದ ಪಾತ್ರಗಳನ್ನು ಮಾಡುವವರೆ ಪುರುಷವೇಷಧಾರಿಗಳು. ಬಡಗಿನ ಮೂರನೇ ವೇಷಧಾರಿಯನ್ನು ತೆಂಕಿನಲ್ಲಿ ಪುಂಡುವೇಷವೆಂದು ಕರೆಯುತ್ತಾರೆ. ಅಭಿಮನ್ಯು, ಬಬ್ರುವಾಹನ ಇತ್ಯಾದಿ ಚುರುಕಿನ ವೇಷಗಳನ್ನು ಮಾಡುವವರು. ಸ್ತ್ರೀವೇಷದಲ್ಲಿ ನೆರಿವೇಷ ಹಾಗೂ ಕಸೆವೇಷಗಳೆಂಬ ಎರಡು ವಿಧಗಳಿವೆ. ಮುಖ್ಯವಾಗಿ ಎಲ್ಲಾ ಕಥಾನಕಗಳಲ್ಲಿ ಬರುವಂಥಾ ರಾಣಿ ಹಾಗೂ ಸಖಿವೇಷವೇಷ ಯಕ್ಷಗಾನಕ್ಕೆ ಆಧಾರ. ಯುದ್ದಕ್ಕೆ ಸಿದ್ದಗೊಂಡು, ವೀರವನಿತೆಯಂತೆ ನಿಂತ ಪ್ರಮೀಳೆ, ಮೀನಾಕ್ಷಿ ಇಂತಹ ವೇಷಗಳನ್ನು ಕಸೆಸ್ತ್ರೀವೇಷವೆಂದೂ ಗುರುತಿಸಲಾಗುತ್ತದೆ. ರಾಕ್ಷಸ ವೇಷ ಯಕ್ಷಗಾನಕ್ಕೊಂದು ಮೆರುಗು. ಇಲ್ಲಿ ಗಂಡು ರಕ್ಕಸಿ ಹಾಗೂ ಹೆಣ್ಣು ರಕ್ಕಸಿ ಎನ್ನುವ ಎರಡು ವಿಧಗಳಿವೆ. ಎಲ್ಲಾ ವಿಧದ ವೇಷಗಳ ಮುಖವರ್ಣಿಕೆಗಾಗಿ ಸಫೇತು ಬಿಳಿ ಬಣ್ಣದ ಪುಡಿ, ಹಳದಿ, ಕೆಂಪು ಬಣ್ಣವನ್ನು ತೆಂಗಿನ ಎಣ್ಣೆಯೊಂದಿಗೆ ಹದವರಿತು ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಲಾಗುತ್ತದೆ. ನಂತರ ಪೌಡರ್‌ನ್ನು ಉಪಯೋಗಿಸಲಾಗುತ್ತದೆ. ಕಪ್ಪು ಅಥವಾ ಎಣ್ಣೆ ಮಸಿಯನ್ನು ಹುಬ್ಬು ಹಾಗೂ ಮುದ್ರೆಯನ್ನು ಬರೆಯಲು ಉಪಯೊಗಿಸುತ್ತಾರೆ. ಹಸುರು ಬಣ್ಣವನ್ನು ಬಿಳಿಬಣ್ಣದೊಂದಿಗೆ ಬೆರೆಸಿದಾಗ ಎಳೆಹಸುರು, ಕಡುಹಸುರು ಮೊದಲಾದ ಬಣ್ಣಗಳನ್ನು ರಾಮ ಕೃಷ್ಣನ ಮುಖವರ್ಣಿಕೆಯಲ್ಲಿ ಬಳಸುತ್ತಾರೆ. ಬೆಳ್ತಿಗೆ ಅಕ್ಕಿಯನ್ನು ಅರೆದು ಒಂದು ಪ್ರಮಾಣದಲ್ಲಿ ಸುಣ್ಣ ಸೇರಿಸಿ ಚಿಟ್ಟೆಹಿಟ್ಟನ್ನು ಸಿದ್ದಪಡಿಸುತ್ತಾರೆ. ರಾಕ್ಷಸ ಭೂಮಿಕೆಗಳ ಮುಖಾಲಂಕಾರಕ್ಕೆ ಈ ಚಿಟ್ಟೆ ಹಿಟ್ಟನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ರಂಗಸ್ಥಳ ೧೫ ಅಡಿ ಉದ್ದ ಹಾಗೂ ೧೨ ಅಡಿ ಅಗಲವಿರುತ್ತದೆ.
ಯಾವುದೇ ಹರಕೆ ಮೇಳ ಅಥವಾ ಡೇರೆಮೇಳಗಳಾದರೂ ಕೂಡ, ತಾವು ಮಾಡುತ್ತಿರುವುದು ಕಲಾಮಾತೆಯ ಸೇವೆಯೆನ್ನುವುದನ್ನು ಮನಗಾಣಬೇಕು. ಕಾಲಕ್ಕೆ ತಕ್ಕ ಬದಲಾವಣೆ ಸಹಜವಾಗಿರಬೇಕು.ಆದರೆ ಬದಲಾವಣೆಯೊಂದಿಗೆ ಆಧುನಿಕ ಜೀವನಮೌಲ್ಯಗಳು ಪ್ರಸಂಗದಲ್ಲಿ ಬಂದಾಗ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಅಲ್ಲಿಯೂ ಕೂಡ ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಕ್ಷಗಾನಕ್ಕೆ ಅದರದೇ ಆದ ವೇಷಭೂಷಣ, ಸಂಪ್ರದಾಯ. ಕಟ್ಟುಪಾಡುಗಳಿವೆ. ಅದನ್ನು ಬಿಟ್ಟು ಆಧುನಿಕತೆಯಂತೆ ವೇಷಭೂಷಣಗಳನ್ನು ತಂದರೆ ಅಪಹಾಸ್ಯ ಮಾಡಿದಂತಾಗುತ್ತದೆ. ವಾತಾವರಣವನ್ನು ಕೆಡಿಸುವ ಮತ್ತು ಪ್ರೇಕ್ಷಕನನ್ನು ತಪ್ಪು ದಾರಿಗೆಳೆಯುವ ಸಾದ್ಯತೆಗಳು ಹೆಚ್ಚು. ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ.ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಲಿ. ಸಂಗತವಲ್ಲದ ಮೌಲ್ಯಗಳನ್ನು ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವ ........ ಯಕ್ಷಗಾನಂ ಗೆಲ್ಗೆ

ಸ್ಕೂಲ್ ಟೈಮ್


ಮಧ್ಯಂತರ ರಜೆ ಕಳೆದು ಮತ್ತೆ ಪ್ರಾರಂಭವಾಯ್ತು ಶಾಲೆ
ಎಲ್ಲಾ ಕಡೆಯೂ ದೀಪಾವಳಿಯ ಸಂಭ್ರಮ, ಪಟಾಕಿಯ ಸದ್ದು ಒಂದೆಡೆಯಾದರೆ, ಮಕ್ಕಳಿಗೆ ಮಾತ್ರ ಬೇಸರ. ಬೆಳಗಾದರೆ ಶಾಲೆಗೆ ಹೋಗಬೇಕು ಎನ್ನುವ ಆತಂಕ. ಮನೆಯ ಹಿರಿಯರೊಂದಿಗೆ ದೀಪಾವಳಿಯನ್ನು ಆಚರಿಸಿ, ಸವಿನೆನಪುಗಳು ಮಾಸುವುದರೊಳಗೆ, ಮಧ್ಯಂತರ ರಜೆಕಳೆದು ಪುನಃ ಶಾಲೆ ಪ್ರಾರಂಭವಾಯಿತು ಎನ್ನುವ ನಿರಾಸೆ.
ರಜೆಯಲ್ಲಿ ತಂದೆ ತಾಯಿಯ ಮಾತಿಗೆ ಕಿವಿಕೊಡದೆ ಬೆಟ್ಟದ ನೆಲ್ಲಿಕಾಯಿ ಕೊಯ್ಯಲು ಹೋದದ್ದು, ಒಟ್ಟಿಗೆ ನದಿಯಲ್ಲಿ ಈಜಿದ್ದು,ಹೀಗೆ ಅನೇಕ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಮಕ್ಕಳ ಮನದಲ್ಲಿ ಪುನಃ ರಗಳೆ ಪ್ರಾರಂಭವಾಯ್ತಲ್ಲ ಎನ್ನುವ ಭಾವನೆಯಾದರೆ, ತಂದೆ ತಾಯಿ ಮಾತ್ರ ಅಬ್ಬಾ ಎಂದು ನಿಟ್ಟುಸಿರು ಬಿಡುವ ಕಾಲ.ರಗಳೆ ಮುಗಿಯಿತಲ್ಲ ಅಂತೂ ಶಾಲೆ ಪ್ರಾರಂಭವಾಯ್ತಲ್ಲ ಎನ್ನುವ ಪೋಷಕರು. ಸ್ವಚ್ಚಂದವಾಗಿ ಊರಿನ ಸುತ್ತಲೂ ಓಡಾಡುತ್ತಿದ್ದ ಮಕ್ಕಳಿಗೆ ಮಾತ್ರ ಇನ್ನೂ ಸ್ವಲ್ಪ ದಿನ ರಜೆ ಇರಬಾರದೆ ಎನ್ನುವ ಆಸೆ.
ಮಧ್ಯಂತರ ರಜೆ ಕಳೆದು ಶಾಲೆಯಲ್ಲಿ ಮಕ್ಕಳ ಬರನಿರೀಕ್ಷೆಯಲ್ಲಿರುವ ಗುರುಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಕಳಕಳಿಯನ್ನು ಹೊಂದಿದ್ದಾರೆ ಎನ್ನುವುದು ಸ್ಪಷ್ಟ. ಮಕ್ಕಳಿಗೆ ರಜೆ ನೀಡಿದ್ದರೂ ತಾವು ಮಾತ್ರ ಮಕ್ಕಳ ಸರ್ವತೋಮುಖ ಏಳ್ಗೆಗಾಗಿ ಶ್ರಮಿಸಿ,ಅವರ ಜೀವನದಲ್ಲಿ ತಮ್ಮ ಪ್ರಭಾವವನ್ನು ಬೀರಿ, ಸುಂದರ ಜೀವನವನ್ನು ಹಾಗೂ ಶಾಲೆಯ ಕೀರ್ತಿಯನ್ನು ಏರಿಸುವ ಹೇಗೆ ಎನ್ನುವ ದೃಷ್ಟಿಯಿಂದಲೇ ಬಂದಿರುತ್ತಾರೆ.
ಆದರೆ ಇಷ್ಟು ವರ್ಷದವರೆಗೆ ಇದ್ದ ಮಧ್ಯಂತರ ರಜೆ ಈ ವರ್ಷದ್ದಾಗಿಲ್ಲ. ಇಷ್ಟರವರೆಗೆ ಬೇಸಗೆಯ ಬಿಸಿಲಿನಂತೆ ಸೂರ್ಯದೇವ ಮಕ್ಕಳನ್ನು ಆಗಮನ ಮಾಡಿದರೆ, ಈ ವರ್ಷ ಸೂರ್ಯನಿಗೆ ವಿಶ್ರಾಂತಿಯನ್ನು ನೀಡಿ ವರುಣದೇವ ಕಾರ್ಯ ನಿರ್ವಹಿಸುತ್ತಿದ್ದಾನೆ.
ಎನೇ ಇರಲಿ ಮಕ್ಕಳು ಮಾತ್ರ ಮೂಲೆಯಲ್ಲಿಟ್ಟ ಭಾರದ ಪುಸ್ತಕದ ಮೂಟೆಯನ್ನು ಹೊತ್ತು ಶಾಲೆಗೆ ಹೊರಡುವಾಗ ಮಾತ್ರ ಬೈಯ್ಯುವುದು ಸುಳ್ಳಲ್ಲ..ಆದಷ್ಟೂ ಬೇಗ ಬರಲಿ ಬೇಸಗೆಯ ರಜೆ ಎನ್ನುತ್ತಾ ಶಾಲೆಗೆ ಹೋಗುವ ಸಂಭ್ರಮ ಮಕ್ಕಳ ಮನದಲ್ಲಿ....



ಉಡುಪಿಯಲ್ಲಿ ಭವಿತವ್ಯದ ಭಾರತ ನಿರ್ಮಾಣಕ್ಕಾಗಿ ಸಿಂಹಿಣಿಯರ ಸ್ವಾಭಿಮಾನದ ಘರ್ಜನೆ
೧೯೩೬ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಪ್ರಾರಂಭವಾದ ರಾಷ್ಟ್ರಸೇವಿಕಾ ಸಮಿತಿಗೆ ಈಗ ೭೫ನೇ ವರ್ಷದ ಸಂಭ್ರಮ.ಆ ನಿಟ್ಟಿನಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವವನ್ನೆ ತೋರದ ಉಡುಪಿ ಜಿಲ್ಲೆಯಲ್ಲಿ ಆದ ಪ್ರಶಿಕ್ಷಣಾ ವರ್ಗ ಹೆಮ್ಮೆಯ ವಿಚಾರವಾಗಿದೆ. ``ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತೇ`` ಸಮಾಜದಲ್ಲಿ ಪುರುಷರಷ್ಟೇ ಪ್ರಬಲರಾಗಬೇಕು ಎನ್ನುವ ದೃಷ್ಟಿಕೋನದಿಂದ ರಾಷ್ಟ್ರಸೇವಿಕಾ ಸಮಿತಿಯ ನಿರ್ಮಾಣ ಮಾಡಿದವರು ಮಾತಾಜಿ ಮೋಶಿಜಿಯವರು.ಹೆಣ್ಣು ಅಬಲೆ, ಸಬಲೆಯಲ್ಲ ಎನ್ನುವ ಕೀಳರಿಮೆ ಪುರುಷ ಪ್ರಧಾನ ಸಮಾಜದಲ್ಲಿದ್ದ ಹೊತ್ತಿನಲ್ಲಿ ,ಹೆಣ್ಣು ಸಬಲೆ,ಅವಳಿಗೂ ಸಮಾಜದಲ್ಲಿ ಒಂದು ಉನ್ನತವಾದ ನೆಲೆಯಿದೆ,ಸ್ಥಾನಮಾನವಿದೆ ಎನ್ನುವ ಅಭಿಲಾಷೆ,ಅದನ್ನು ಗಳಿಸುವ ನಿಟ್ಟಿನಲ್ಲಿ ಪ್ರಾರಂಭವಾದುದರ ಫಲರೂಪವೇ ಸಮಿತಿ.ಸಂಸ್ಕಾರಯುತವಾದ ಶಿಕ್ಷಣ ನೀಡದ ಹೊರತಾಗಿ ಮಹಿಳೆ ಸಬಲೆಯಾಗುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್ ಅವರ ಸಲಹೆ ಪಡೆದು, ಕೌಟುಂಬಿಕ ಜವಾಬ್ದಾರಿಯೊಂದಿಗೆ, ರಾಷ್ಟ್ರದ ಕುರಿತು ಬದ್ದತೆ ಬರುವ ದೃಷ್ಟಿಕೋನದಿಂದ ನಡೆದ ಮೌನ ಕ್ರಾಂತಿಯೇ ಸಮಿತಿಯ ಹುಟ್ಟು.
ದೇಶದ ಬಗ್ಗೆ ಡಾಕ್ಟರ್‌ಜೀಯವರ ಚಿಂತನೆ, ಗಾಂಧೀಜಿಯವರ ಚಿಂತನೆಗಿಂತ ಭಿನ್ನವಾಗಿತ್ತು.ಗಾಂಧಿಯವರ ಚಿಂತನೆ ಸ್ವರಾಜ್ಯವಾದರೆ, ಡಾಕ್ಟರ್‌ಜೀಯವರದು ಸುರಾಜ್ಯವಾಗಿತ್ತು.ನಮಗೆ ಸ್ವಾತಂತ್ರ್ಯ ದಕ್ಕಲಿಲ್ಲ ಎನ್ನುವ ಕಾರಣಕ್ಕಿಂತ ನಾವೇಕೆ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ ಎನ್ನುವುದಾಗಿತ್ತು.ಕೇವಲ ವ್ಯಾಪಾರದ ತಕ್ಕಡಿಯನ್ನು ಹಿಡಿದುಕೊಂಡು ಬಂದ ಕೆಂಪು ಮೂತಿಯ ಬಿಳಿ ಪಿಶಾಚಿಗಳ ಎದುರು ಗುಲಾಮರಾಗಿರಲು ಕಾರಣ ಏನು? ಎನ್ನುವುದರ ಫಲ ರೂಪವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆ. ಆ ಸಂಘಟನೆಯ ಸ್ಥಾಪಕರಾದ ಡಾಕ್ಟರ್‌ಜೀಯವರ ಮಾರ್ಗದರ್ಶನದಿಂದ, ಮೋಶಿಜಿಯವರು ಮಹಾರಾಷ್ಟ್ರದ ವಾರ್ದಾದಲ್ಲಿ ೧೯೩೬ರಲ್ಲಿ ಸಮಿತಿಯನ್ನು ರಚನೆಮಾಡಿದರು.
ದೇಶಕ್ಕಾಗಿ ಸಮರ್ಪಣೆ ಮಾಡುವ ಗುಣಬೆಳೆದಾಗ ಭವಿತವ್ಯದ ಭಾರತ ನಿರ್ಮಾಣ ಸಾಧ್ಯ. ಹಿಂದುತ್ವ ಎನ್ನುವುದು ಜಾತಿಸೂಚಕವಲ್ಲ.ಅದು ದೇಶದ ಪ್ರಜೆಯೊಬ್ಬನ ಅಸ್ಮಿತೆ.ರಾಷ್ಟ್ರೀಯತೆ, ಜಿbಛ್ಞಿಠಿಜಿಠಿqs.ಪುಣ್ಯತಮವಾದ ಭರತಭೂಮಿಯಲ್ಲಿ ಅನೇಕ ಮತಗಳನ್ನು ಹೊಂದಿದವರಿದ್ದಾರೆ.ಮುಸ್ಲಿಂ,ಕ್ರೈಸ್ತ, ಸಿಖ್, ಬೌದ್ದ ಇನ್ನೂ ಅನೇಕ. ಯಾವ ಮತಾವಲಂಬಿಯೇ ಆಗಿರಲಿ, ಆತ ಹಿಂದು.ಹಿಂದುತ್ವ ಎನ್ನುವುದು ಒಂದು ರಾಷ್ಟ್ರವ್ಯವಸ್ಥೆ.
೧೮೯೩ರಲ್ಲಿ ಚಿಕಾಗೋ ವಿಶ್ವಧರ್ಮ ಸಮ್ಮೇಳನಕ್ಕೆ ಹೋದ ಕಾವಿವಸ್ತ್ರದಾರಿ ಸ್ವಾಮಿವಿವೇಕಾನಂದರಿಗೆ ಅವಮಾನ ಮಾಡಬೇಕು ಎನ್ನುವ ಉದ್ದೇಶದಿಂದ, ಜಗತ್ತಿನ ಎಲ್ಲಾ ಮೂಲೆಯಿಂದ ಬಂದ ಧರ್ಮಾನುಯಾಯಿಗಳ ಧರ್ಮಗ್ರಂಥಗಳನ್ನು ಹಿಂದೂ ಧರ್ಮಗ್ರಂಥದ ಇಡುತ್ತಾರೆ.ಎಳ್ಳಷ್ಟೂ ವಿಚಲಿತರಾಗದ ವಿವೇಕಾನಂದರು ಪ್ರಥಮ ಮಾತಿನಲ್ಲೆ, ಅಲ್ಲಿಯವರ ಮನಸ್ಸನ್ನು ಗೆದ್ದು, ಹಿಂದೂ ಸಂಸ್ಕೃತಿಯ ಮಹತ್ವವನ್ನೇ ಬಾನೆತ್ತರಕ್ಕೆ ಏರಿಸುತ್ತಾರೆ. ಅಮೇರಿಕದ ಸಹೋದರ, ಸಹೋದರಿಯರೆ ಎಂಬ ಅಣಿಮುತ್ತುಗಳಾದಾಗ ಸಭಿಕರ ಕರತಾಡನ. ಅಲ್ಲಿಯವರೆಗೆ ಅಷ್ಟು ಗೌರವಯುತವಾತ ಮಾತುಗಳನ್ನೆ ಕೇಳಿರದ ಜನ, ಆ ಸಂದರ್ಭದಲ್ಲಿ ಮುಂದಿನ ಮಾತುಗಳಿಗಾಗಿ ಕುತೂಹಲಿಗಳಾಗುತ್ತಾರೆ. ಒಂದೇ ಬಾರಿಗೆ ಕೆಳಗಡೆ ಇಟ್ಟಿದ್ದ ಹಿಂದು ಧರ್ಮಗ್ರಂಥವನ್ನು ತೆಗೆದಾಗ,ಉಳಿದ ಗ್ರಂಥಗಳು ಬುಡ ಕಡಿದ ಮರದಂತೆ ದೊಪ್ಪನೆ ಬಿದ್ದವು. ಆ ಸಂದರ್ಭದ ವಿವೇಕಾನಂದರ ನುಡಿ ಹಿಂದುತ್ವಕ್ಕೆ ಶಿಖರಪ್ರಾಯವಾದುದು.ದೇಶದ ಎಲ್ಲಾ ಧರ್ಮಗ್ರಂಥಗಳೂ ನಿಂತಿರುವುದು ಹಿಂದುಧರ್ಮದ ಭದ್ರಬುನಾಧಿಯ ಮೇಲೆ. ಎಂತಹ ಪರಿಕಲ್ಪನೆ ಸ್ವಾಮೀಜಿಯವರದು....
ಪ್ರತಿಯೊಬ್ಬನ ಮಾನಸಿಕತೆ ಬದಲಾವಣೆ ಆದಾಗ ಸಮಾಜಮುಖಿ ಕಾರ್ಯ ಅದ್ಭುತವಾಗಿ ನಡೆಯುತ್ತದೆ. ಹಿಂದು ಸಮಾಜದಲ್ಲಿ ಸ್ತ್ರೀಯರಿಗೆ ಪೂಜನೀಯ ಸ್ಥಾನವಿದೆ. ಜಗತ್ತಿನಲ್ಲಿ ಅನೇಕ ಸಂಸ್ಕ್ರತಿಗಳು ಹುಟ್ಟಿ, ಹೇಳಹೆಸರಿಲ್ಲದೇ ನಾಶವಾಗಿ ಹೋದವು.ಹಿಂದು ಸಂಸ್ಕೃತಿ ನಾಶವಾಗಲಿಲ್ಲ ಕಾರಣವಿಷ್ಟೆ ಇಲ್ಲಿನ ವ್ಯವಸ್ಥೆಗಳು ಕುಟುಂಬ ನಿರ್ವಹಣೆಯಲ್ಲಿ ಆಳವಾಗಿ ಬೇರೂರಿದೆ. ಎಲ್ಲಿಯವರೆಗೆ ಹೆಣ್ಣು ತ್ಯಾಗಮಯಿ,ವಿಚಾರವಂತೆ, ಸಹನಶೀಲೆಯಾಗಿರುತ್ತಾಳೊ, ಅಲ್ಲಿಯವರೆಗೆ ಅಯೋಗ್ಯ ಪುರುಷ ಇರುವುದಕ್ಕೆ ಸಾಧ್ಯವಿಲ್ಲ. ಹೆಣ್ಣೊಬ್ಬಳು ಉತ್ತಮ ವಿದ್ಯೆಯನ್ನು ಕಲಿತಾಗ ಸಮಾಜದ ಕಳೆಯನ್ನು ತೆಗೆಯಲು ಸಹಕಾರಿಯಾಗುತ್ತಾಳೆ.
ಮುಖ್ಯವಾಗಿ ಬ್ರಿಟಿಷರು ನಮ್ಮ ಸಂಸ್ಕೃತಿಯನ್ನು ನಾಶಪಡಿಸಲು ಕಂಡುಕೊಂಡ ದ್ವಿ-ಸೂತ್ರಗಳು ೧.ಕೃಷಿಪದ್ದತಿಯ ನಾಶ
೨.ಗುರುಕುಲ ಪದ್ದತಿಯ ಶಿಕ್ಷಣ ನಾಶ
ನಮ್ಮ ಗುರುಕುಲ ಶಿಕ್ಷಣ ಪದ್ದತಿಯ ನಾಶಪಡಿಸಬೇಕೆಂದು ಮೆಕಾಲೆ ಇಂಗ್ಲೀಷ್ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದನು.ಇದರಿಂದ ವಿದ್ಯೆ ಕಲಿತ ನಾಯಕರು ಇಂದು ಗೋಮುಖ ವ್ಯಾಘ್ರಗಳಂತೆ ವರ್ತಿಸುತ್ತಿದ್ದಾರೆ.ಇದು ನಮ್ಮ ನಾಯಕರ ಸ್ಥಿತಿಯಾದರೆ ನಮ್ಮ ಮಕ್ಕಳ ಪರಿಸ್ಥಿತಿಯೆ ಬಹಳ ಶೋಚನೀಯವಾಗಿದೆ.
ಇತ್ತೀಚಿಗೆ ಶಾಲಾ ಮಕ್ಕಳಿಗೆ ನಡೆದ ರಸಪ್ರಶ್ನೆಯಲ್ಲಿ ಒಂದು ಪ್ರಶ್ನೆ ಕೇಳಲಾಯಿತು. ನಿಮ್ಮ ನೆಚ್ಚಿನ ನಾಯಕ ಯಾರು? ಅದಕ್ಕಾಗಿ ಇದ್ದ ಉತ್ತರಗಳು ಸಲ್ಮಾನ್‌ಖಾನ್, ಸಚಿನ್ ತೆಂಡೂಲ್ಕರ್. ಈಗಿನ ಮಕ್ಕಳಿಗೆ ಚಿತ್ರನಟ,ನಟಿಯರು ಹಾಗೂ ಕ್ರಿಕೆಟ್ ಆಟಗಾರ ನಾಯಕನಾಗುತ್ತಾನೆ ಆದರೆ ವಿಕ್ರಂ ಬ್ರಾತ್ರಾ, ಉನ್ನಿಕೃಷ್ಣನ್ ಹಾಗೂ ಗಡಿಯಲ್ಲಿ ಹೋರಾಡಿ ಮಣಿದ ವೀರರು ಯಾಕೆ ನಾಯಕರಾಗುತ್ತಿಲ್ಲ..? ಇದು ಇಂದಿನ ಶಿಕ್ಷಣ ಪದ್ದತಿಯ ದುರಂತವಲ್ಲದೆ ಮತ್ತೆನು? ಪ್ರಸ್ತುತ ಸಮಾಜದಲ್ಲಿ ಅಪ್ರಸ್ತುತ ವಿಷಯಗಳು ಬೇಗ ಮನದಾಳಕ್ಕೆ ಹೋಗುತ್ತವೆ.ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದು ಪ್ರತಿಯೊಬ್ಬರ ಭಾವಕ್ಕೆ ಸೀಮಿತವಾಗಿರುವುದು.
ಗುರುವಿಗೆ ಉತ್ತಮವಾದ ಸ್ಥಾನವಿಲ್ಲಾ. ``ಗುರುಬ್ರಹ್ಮ, ಗುರುವಿಷ್ಣು,ಗುರುದೇವೋ ಮಹೇಶ್ವರಃ ಗುರುಸಾಕ್ಷತ್ ಪರಃಬ್ರಹ್ಮ ತಸ್ಮೆಯೀ ಶ್ರೀ ಗುರುವೇ ನಮಃ``
ಮೂವರು ದೇವರನ್ನೂ ಒಬ್ಬರಲ್ಲೆ ಕಾಣುವ ಗುರುಸ್ವರೂಪಿ ಇಂದು ಕಾಮಪೀಪಾಸು ಆಗಿದ್ದಾನೆ.ಅಂಥ ಗುರುವಿನಿಂದ ಕಲಿತ ಸಮಾಜದ ಸ್ಥಿತಿ ದೇವರೆಗತಿ.
ಬೆಂಗಳೂರಿನಲ್ಲಿ ಈಗ ಒಂದು ದಿನದ ಮಟ್ಟಿಗೆ ಹೆಂಡತಿಯ ಬದಲಾವಣೆ,ಜಿqಜ್ಞಿಜ ಠಿಟಜZಠಿeಛ್ಟಿ,ಜZqs ಜಿಜeಠಿo ಈಗ ಚಾಲ್ತಿಯಲ್ಲಿದೆ. ಮದುವೆ ಎನ್ನುವುದು ಹಿಂದೂ ಸಂಸ್ಕೃತಿಯಲ್ಲಿ ಎರಡು ವ್ಯಕ್ತಿಗಳ ಮಿಲನ ಅಲ್ಲಾ ಅದು ಹಿರಿಯರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದು,ಸಪ್ತಪದಿ ತುಳಿದು ಜೀವನ ಪರ್ಯಂತ ಹಾಲುಜೇನಿನಂತೆ, ಅನ್ಯೋನ್ಯತೆಯಿಂದ ಬಾಳುವೆ ಮಾಡುತ್ತೆನೆಂದು, ಮಾಂಗಲ್ಯಧಾರಣೆ ಮಾಡುವುದೇ ಮದುವೆ. ಯೌವನದಲ್ಲಿ ಪ್ರಣಯದ ಸಾರಥಿಯಾಗಿ,ನಡುವಯಸ್ಸಿನಲ್ಲಿ ಹೆಗಲಿಗೆ ಹೆಗಲಾಗಿ, ಇಳಿವಯಸ್ಸಿನಲ್ಲಿ ಕೈಹಿಡಿದು ಸಲಹುವ ಸಂಗಾತಿ ಇರಬೇಕೆಂದು ಹೆಣ್ಣು ಬಯಸುತ್ತಾಳೆ.ಆದರೆ ಹೆಂಡತಿಯನ್ನು ಇನ್ನೊಬ್ಬರ ಬಳಿ ಸೆರಗೊಡ್ಡುವಂತೆ ಪ್ರಚೋದನೆ ಮಾಡುವುದು, ಮದುವೆಯಾಗುವುದಕ್ಕಿಂತ ಮುಂಚೆ ಒಂದಾಗಿ ಜೀವನ ನಡೆಸುವುದು, ಸಲೀಂಗ ಕಾಮಕ್ಕೆ ಕಾನೂನು ಅನುಮತಿ ಕೊಟ್ಟಿರುವಾಗ ನಮ್ಮ ಶಿಕ್ಷಣ ಪದ್ದತಿಯ ಸ್ಪಷ್ಟ ಚಿತ್ರಣ ತಿಳಿಯಬಹುದು.
ಬೆಳವಣಿಗೆಗೆ ಸ್ವಾತಂತ್ರ್ಯ ಬೇಕು ನಿಜ, ಅದು ಮೌಲ್ಯಾಧಾರಿತವಾಗಿದ್ದು, ಸಮಾನತೆ ಇರಬೇಕು...ಆದರೆ ಮದ್ಯರಾತ್ರಿಯಲ್ಲಿ ಕುಣಿದು ಕುಪ್ಪಳಿಸುವ ಸ್ವಾತಂತ್ರ್ಯ ಬೇಕೆ?
ಇಂದು ಅನೇಕ ಮಾದ್ಯಮಗಳು ವಿಕೃತ ವಿಚಾರಗಳನ್ನು ಪ್ರಸಾರ ಮಾಡುತ್ತಿವೆ. ತನ್ನ ಹೆಂಡತಿಗೆ ಹೊಡೆದು ಜೈಲು ಸೇರಿ ಚಿತ್ರನಟ, ಸಮಾಜದಲ್ಲಿ ನಾಯಕನಾಗುತ್ತಾನೆ.ನಾವಿಂದು ನಾಲ್ಕು ಗೋಡೆಗಳ ಮದ್ಯೆ ಕುಳಿತು ವಿದೇಶಿ ಸಂಸ್ಕೃತಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ. ಜಾಗತಿಕ ಅಲೆಯಲ್ಲಿ ಭೋಗಕ್ಕೆ ಕಟ್ಟುಬಿದ್ದು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಲವ್‌ಜಿಹಾದ್, ಮತಾಂತರ,ಮಾನವ ಕಳ್ಳಸಾಗಣೆಯಂಥ ದುಷ್ಟಶಕ್ತಿಗಳುತಮ್ಮ ಕಬಂಧ ಬಾಹುಗಳನ್ನು ಚಾಚಿವೆ.ಮಾನವ ಕಳ್ಳಸಾಗಣೆಯ ೨೦೦೦ ಪ್ರಕರಣಗಳು ತಿರುವನಂತಪುರದಲ್ಲಿ ದಾಖಲಾಗಿವೆ.ಇದೆಲ್ಲಾ ದಾಖಲಾದ ಪ್ರಕರಣಗಳಾದರೆ ದಾಖಲಾಗದ್ದು ಇನ್ನೆಷ್ಟೋ...
ಕೃಷಿಪದ್ದತಿಯ ಮೇಲೂ ದುಷ್ಪರಿಣಾಮವಾಗಿದೆ.೧೭೬೦ರಲ್ಲಿ ತಮಿಳ್ನಾಡಿನ ಆರ್ಕಾಟ್‌ನಲ್ಲಿ ೧ಎಕರೆ ಜಮೀನಿನಲ್ಲಿ ೫೬ಕ್ವಿ. ಬೆಳೆ ತೆಗೆಯುತ್ತಿದ್ದರು.ಅದೇಸಮಯ ಇಂಗ್ಲೆಂಡ್‌ನಲ್ಲಿ ೧ಎಕರೆಗೆ ೨೬ಕ್ವಿ. ಮಾತ್ರ ಬೆಳೆ ತೆಗೆಯುತ್ತಿದ್ದರು. ಇದನ್ನು ಮನಗಂಡ ಬ್ರಿಟಿಷರು ನಮ್ಮ ಕೃಷಿಪದ್ದತಿಯ ಮೇಲೆ ವಾಸಿಯಾಗದ ಬರೆಯನ್ನೆಳೆದರು.ಅವರು ನಮ್ಮ ಕೃಷಿಪದ್ದತಿಯ ನಾಶಕ್ಕಾಗಿ ಆಯ್ದುಕೊಂಡ ಮಾರ್ಗ ಗೋಹತ್ಯೆ. ಆಗ ೩೫೦ ಇದ್ದ ಕಸಾಯಿಖಾನೆಗಳು ಈಗ ೩೬೦೦ಕ್ಕೂ ಮಿಕ್ಕಿವೆ.
ಮತಾಂತರ, ರಾಷ್ಟ್ರಾಂತರ, ಭ್ರಷ್ಟಾಚಾರಗಳು ಘೋರ ಪಿಡುಗುಗಳಾಗಿವೆ. ನಮ್ಮ ಕಾನೂನು ವ್ಯವಸ್ಥೆ ಎಲ್ಲಿಯವರೆಗೆ ಮುಟ್ಟಿದೆಯೆಂದರೆ ಸಂಸತ್ ಭವನದ ಮೇಲೆ ದಾಳಿಮಾಡಿದ ಅಫಜಲ್ ಗುರುವಿನ ಗಲ್ಲುಶಿಕ್ಷೆ ಆದರೂ, ಮುಂಬೈ ದಾಳಿ ಮಾಡಿದ ಕಸಬ್‌ನಂಥ ರಾಷ್ಟ್ರದ್ರೋಹಿಗಳಿಗೆ ರಾಜಮರ್ಯಾದೆ ಸಿಗುತ್ತಿದೆ. ಅವರಿಗೆ ಶಿಕ್ಷೆಯಾಗದೇ ಕಾಯುವುದಕ್ಕೆ ಕೋಟಿಗಟ್ಟಲೇ ಖರ್ಚುಮಾಡುತ್ತಿದೆ ನಮ್ಮ ಘನ ಸರ್ಕಾರ...qಟಠಿಛಿ ಚಿZh mಟ್ಝಜಿಠಿಜ್ಚಿo ಅಲ್ವೇ ಇದು?
ಅನೇಕ ಹೆಣ್ಣುಮಕ್ಕಳು ದುಡಿಯುವ ಆಸೆಯಿಂದ ಪಟ್ಟಣವನ್ನು ಸೇರುತ್ತಾರೆ.ಸರಿಯಾದ ದಾರಿ ಕಾಣದೆ, ಭ್ರಮನಿರಸನ ಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.ಇಂತಹ ಅನೇಕ ಸಮಸ್ಯೆಗಳು ಸಮಾಜದಲ್ಲಿ ಇದೆ. ಇದರಿಂದ ಪಲಾಯನವಾದಿಗಳಾಗದೇ ಎಚ್ಚೆತ್ತುಕೊಳ್ಳುವ ಶಕ್ತಿ, ಸ್ವಾವಲಂಭನೆಯ ಶಿಕ್ಷಣ ಆಗಬೇಕು. ಪ್ರತಿಯೊಂದು ಮನೆಯಿಂದ ದುಷ್ಟಶಕ್ತಿಯ ದಮನಗೈಯುವ ದುರ್ಗೆಯರ ಅವತಾರ ಆಗಬೇಕು ಆಗಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ.

ರಾಜಕೀಯ ತಂತ್ರ



ಸತ್ತಸಮಾಧಿಯ ಮೇಲೆ ಸೌಧವನ್ನು ನಿರ್ಮಿಸಲು ಹೊರಟ ನಾಯಕರುಗಳು....
ಪ್ರಥ್ವಿಯ ಆತ್ಮಹತ್ಯೆಯ ಎಳೆಯನ್ನು ಬಿಡಿಸುತ್ತಾ ಹೋದಂತೆ ಕಂಡ ನೈಜ ಘಟನೆಗಳು
ಪ್ರತಿಯೊಬ್ಬರ ಮನಸ್ಸು ಅವರ ಭಾವನೆಗಳಿಗೆ ತಕ್ಕಂತೆ ವರ್ತಿಸುತ್ತವೆ. ನೋಡುವ ದೃಷ್ಟಿಗೆ ತೆರನಾಗಿ ಪ್ರಪಂಚದಲ್ಲಿರುವ ವಸ್ತುಗಳು ಗೋಚರವಾಗುತ್ತದೆ. ಒಬ್ಬನಿಗೆ ಸುಂದರವಾಗಿ ಕಂಡ ವಸ್ತು ಮತ್ತೊಬ್ಬನಿಗೆ ಬೇಡವಾಗಬಹುದು. ಯಾರಿಗೂ ಬೇಡವೆಂದು ಬಿಸಾಡಿದ ವಸ್ತುಗಳು ಸಂಧರ್ಭಕ್ಕೆ ಅನುಸಾರವಾಗಿ ಮಹತ್ವವನ್ನು ಪಡೆಯುತ್ತದೆ. ಮಲ್ಲಿಗೆ ಹೂವು ಎಲ್ಲರಿಗೂ ಇಷ್ಟ ಹಾಗಂತ ಮಲ್ಲಿಗೆಗೆ ಬೆಲೆ ಬರುವುದು ಯಾವಾಗ ಎನ್ನುವ ವಿಷಯ ಮುಖ್ಯವಾಗಿರುತ್ತದೆ. ದಾರದೊಂದಿಗೆ ಸರಿಯಾಗಿ ಪೋಣಿಸಿದಾಗ ದೇವರ ಕಂಠವನ್ನೊ ಅಥವಾ ಹೆಣ್ಮಕ್ಕಳ ಮುಡಿಯನ್ನು ಅಲಂಕರಿಸುತ್ತದೆ. ಇಲ್ಲಿ ಗಮನಿಸಬೇಕಾದದು ದಾರದ ಮಹಿಮೆ, ಎನ್ನುವ ವಿಷಯವನ್ನು ಮರೆಯಬಾರದು.
ಪ್ರಸ್ತುತ ಸಮಾಜದಲ್ಲಿ ಯಾಕೆ ಈ ರೀತಿ ಉಪಮೆ ಎನ್ನುವ ಕುತೂಹಲ ಸಾಮಾನ್ಯ ಜನರಿಗಿರುತ್ತದೆ. ರಾಷ್ಟ್ರೀಯ ಕ್ರೀಡಾಪಟುವೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಸಮಾಜದಲ್ಲಿ ನಡೆದ ವಿದ್ಯಮಾನವನ್ನು ಗಮನಿಸಿದಾಗ ಇದೆಲ್ಲಾ ಕೇವಲ ಪ್ರಚಾರದ ದೃಷ್ಟಿಯಿಂದಲೋ ಅಥವಾ ಸ್ವಾರ್ಥ ಸಾಧನೆಗಾಗಿಯೋ ಎನ್ನುವ ಸಂಶಯ ಮೂಡುವುದು ಸಹಜ.ಪ್ರಥ್ವಿ ಬದುಕಿರುವಾಗ ಸಹಾಯಕ್ಕಾಗಿ, ಕಣ್ಣೆತ್ತಿಯೂ ನೋಡದ ಗಣ್ಯವ್ಯಕ್ತಿಗಳು ಸತ್ತಮೇಲೆ ಅನುಕಂಪ ಬೀರುವುದನ್ನು ಕಂಡಾಗ ಸಂಶಯದ ಅಲೆ ಮನದ ಮೂಲೆಯಲ್ಲಿ ಮೂಡಲಾರಂಬಿಸುತ್ತದೆ.
ಪ್ರತಿಯೊಂದು ಧರ್ಮದಲ್ಲಿಯೂ ಅನೇಕ ಜಾತಿಗಳಿವೆ. ಜಾತಿಯನ್ನು ಒಳಗೆ ತೂರಿಸಿ ಹೊರನೋಟಕ್ಕೆ ನಾವೆಲ್ಲಾ ಒಂದೇ ಎಂದು ಸಾರುವ ಧರ್ಮಗಳು ಅನೇಕ. ಎಲ್ಲಾ ಧರ್ಮಕ್ಕೂ ಆಧಾರವಾಗಿರುವ ಹಿಂದೂ ಧರ್ಮದಲ್ಲಿ ಮಾತ್ರ ಯಾಕೆ ಜಾತಿಯನ್ನು ಮುಂದಿಟ್ಟು, ಅವರ ಸ್ವಾರ್ಥವನ್ನು ಸಾಧಿಸುವುದಕ್ಕೆ ನೋಡುತ್ತಾರೆ. ರಾಜಕೀಯ ನಾಯಕರು, ಜಾತಿ ಮುಖಂಡರು ಜಾತಿಯನ್ನು ಮೂಲವಾಗಿರಿಸಿ ಸಮಾಧಿಯ ಮೇಲೆ ಸೌಧವನ್ನು ನಿರ್ಮಿಸಲು ತೊಡಗಿದಂತಿದೆ. ಅವರ ಆಶ್ವಾಸನೆಗಳು, ಬರಿದೆ ಆಡುವ ಪೊಳ್ಳು ಭರವಸೆಗಳಿಂದ, ಅವರಲ್ಲಿಟ್ಟಿರುವ ಘನತರವಾದ ನಂಬಿಕೆಗಳಿಗೆ ಹುಳಿಹಿಂಡಿಸಿಕೊಳ್ಳುತ್ತಿದ್ದಾರೆ.
ಪಕ್ಷದ ನಾಯಕರು ಹಾಗೂ ಜಾತಿಮುಖಂಡರು ರಾಷ್ಟ್ರೀಯ ಕ್ರೀಡಾಪಟುವೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ, ಅದರ ರಹಸ್ಯವನ್ನು ಭೇದಿಸಲು ಆಡಿದ ನಾಟಕವೇ? ದಾಸರೆ ಹೇಳಿರುವ ಹಾಗೆ ಜಗವೇ ಒಂದು ನಾಟಕರಂಗ...ಅದರಲ್ಲಿ ನಾವೆಲ್ಲಾ ಪಾತ್ರಧಾರಿಗಳು, ಪರಮಾತ್ಮ ಸೂತ್ರಧಾರಿ ಎನ್ನುವುದು ಜನಗಣಿತವಾಗಿದೆ. ಇಂದಿನ ಚಟುವಟಿಕೆ ಗಮನಿಸಿದರೆ ದೇವನ ಸೂತ್ರಧಾರಿಕೆ ನಮ್ಮ ನಾಯಕರುಗಳ ಮುಂದೆ ಏನು ಅಲ್ಲ ಎನ್ನುವುದು ಸಾಮಾನ್ಯನಿಗೂ ಅರ್ಥವಾಗುತ್ತದೆ.
ದಸರಾ ಕ್ರೀಡಾಕೂಟದಲ್ಲಿ ವಿಜಯಮಾಲಿಕೆಯನ್ನು ಧರಿಸಿಬಂದ ಪ್ರಥ್ವಿ, ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಎಲ್ಲರಿಗೂ ಗೊತ್ತು. ಆ ಬಗ್ಗೆ ಪ್ರಸ್ತಾಪಿಸುವುದಕ್ಕೆ ವಿಷಾದವಾಗುತ್ತದೆ. ಆದರೂ ನಡೆಯುತ್ತಿರುವ ಬೆಳವಣಿಗೆ ಹಾಗೂ ಜನರು ಆಡಿಕೊಳ್ಳುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂದು ಸಂತೋಷ ಪಡುವ ಹಾಗೆ ಇಲ್ಲ, ತಿಂಗಳಾದರೂ ಅದಕ್ಕೆ ಸಂಬಂದಪಟ್ಟ ಯಾವುದೇ ಮಾಹಿತಿಗಳು ಲಭ್ಯವಾಗದೇ ಪೋಲಿಸ್ ಸ್ಟೇಷನ್‌ನಲ್ಲಿ ಈಗಾಗಲೇ ಇದ್ದ ಹಳೆ ಪೈಲುಗಳ ಜಾಗಕ್ಕೆ ಸೇರಿರಬೇಕು ಎನ್ನುವ ತರ್ಕ ಎಲ್ಲರ ಮನಸ್ಸಿನಲ್ಲಿಯಾದರೆ ನನ್ನ ಪ್ರಶ್ನೆ ಅದಲ್ಲ....
ಜಿಲ್ಲಾ ಉಸ್ತುವಾರಿ ಸಚಿವರು ಆ ನಿಟ್ಟಿನಲ್ಲಿ ಸಮಗ್ರ ತನಿಖೆಗೆ ಆದೇಶ ನೀಡಿದ್ದರೂ, ಸಮಸ್ಯೆಯ ಎಳೆಯನ್ನು ಭೇದಿಸಲಾಗದಿರುವುದು ಪೋಲಿಸರ ವೈಫಲ್ಯವೇ? ಒಂದು ತಿಂಗಳಲ್ಲಿ ಗಣ್ಯವ್ಯಕ್ತಿಗಳು ಮಾಡಿದ ಸಾಹಸವಾದರೂ ಸಾಮಾನ್ಯವೇ? ರಾಜಕೀಯ ನಾಯಕರು, ಜಾತಿ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆ ಆತ್ಮಹತ್ಯೆಯನ್ನು ಖಂಡಿಸಿ, ಸಮಗ್ರ ತನಿಖೆ ಹಾಗೂ ಸಿಓಡಿ ತನಿಖೆಗೆ ಒತ್ತಾಯ ಮಾಡಿದ್ದಾರೆ ಎನ್ನುವಾಗ ಸಂತೋಷ ಪಡಲೇ? ಅದು ಹೇಗೆ ಸಾಧ್ಯ. ಸಾವಿನಲ್ಲಿಯೂ ಕೂಡ ರಾಜಕೀಯದ ಸ್ವಾರ್ಥ, ಪ್ರಚಾರವನ್ನು ಬಯಸಿ ಖಂಡನೆ ಮಾಡಿರುವುದು ಹಾಗೂ ಜಾತಿಯ ಪ್ರಭುತ್ವವನ್ನು ಸಾಧಿಸುವುದಕ್ಕೆ ಮಾಡಿರುವ ಕಾರ್ಯ ಎನ್ನುವುದು ಸ್ಪಷ್ಟವಾಗುತ್ತದೆ.
ಜಾತೀಯತೆಯ ನಾಡು, ನಾವೆಲ್ಲರೂ ಒಂದು ಎಂದು ಸಾರುವ ದೇಶದಲ್ಲಿ ಪ್ರಥ್ವಿಯ ಆತ್ಮಹತ್ಯೆಯಲ್ಲಿ ಜಾತಿ ಮುಖ್ಯವಾಗಿರುತ್ತದೆಯೇ? ಕ್ರೀಡಾಪಟುವು ದೇಶದ ಸ್ವತ್ತು ಎನ್ನುವ ನಾಯಕರು, ನಮ್ಮ ಸಮಾಜದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅದನ್ನು ನಾವು ಖಂಡಿಸಬೇಕೆನ್ನುವ ಜಾತಿವಾತ್ಸಲ್ಯ....ಜಿಲ್ಲೆಯಲ್ಲಿ ಅವರದೇ ಸಮಾಜದ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಾಗ ಖಂಡಿಸಿದಿದ್ದರೆ ಪ್ರಜಾಪ್ರಭುತ್ವದಲ್ಲಿ ಜಾತೀಯತೆಯ ಮಹತ್ವ ಪಡೆಯುತ್ತಿತ್ತು. ಇಲ್ಲಿ ಇನ್ನೊಂದು ಪ್ರಶ್ನೆಯು ಕೂಡ ಉದ್ಬವವಾಗುತ್ತದೆ. ಪ್ರಥ್ವಿ ಸಮಾಜದಲ್ಲಿ ಹೆಸರು ಮಾಡಿದ್ದಾಳೆ ಎನ್ನುವ ಕಾರಣಕ್ಕಾಗಿಯೋ? ಉಳಿದವರು ತೆರೆಮರೆಯಲ್ಲಿ ಇದ್ದರು ಎನ್ನುವ ಕಾರಣವೋ? ಪ್ರಥ್ವಿ ಅಂತರಾಷ್ಟ್ರೀಯ ಕ್ರೀಡಾಪಟುವೆನ್ನುವ ಕಾರಣಕ್ಕೆ ಅವಳನ್ನು ಪ್ರೋತ್ಸಾಹಿಸಬೇಕು ಎನ್ನುವ ಮನೋಭಿಲಾಷೆ ಇದ್ದದ್ದೆ ಆದರೆ ಸತ್ತಮೇಲೆ ಅಂತ ಪ್ರೀತಿ ಯಾಕಾಗಿ? ಪೋಷಕರು ಹೇಳುವ ಹಾಗೆ ಕ್ರೀಡಾಇಲಾಖೆಯವರು ದತ್ತು ಪಡೆದಿದ್ದಾರೆ ಎಂದ ಮೇಲೆ ಅವಳ ಪೂರ್ಣ ಜವಾಬ್ದಾರಿ ಅವರ ಮೇಲಿರಲಿಲ್ಲವೇ? ಆದರೂ ಕೂಡ ಅವಳು ಹಣಕ್ಕಾಗಿ ಮನೆಯನ್ನೇ ಅವಲಂಬಿಸಿದ್ದಾಳೆಂದರೆ ದತ್ತು ಪಡೆದದ್ದಾದರೂ ಕೇವಲ ಪ್ರಚಾರಕ್ಕಾಗಿಯೇ? ಎನ್ನುವ ಪ್ರಶ್ನೆಗಳು ಮೂಡುತ್ತವೆ.
ಬದುಕಿರುವಾಗಅವಳ ಖರ್ಚಿಗೆ ಹಣ ಬೇಕೆ ಎಂದು ಕೇಳದ ನಾಯಕರು ಸತ್ತ ನಂತರ ಸಂತಾಪ ವ್ಯಕ್ತಪಡಿಸುವುದು ಮಾನವೀಯತೆಯಿಂದ ಎಂದು ಕರೆದರೂ ರಾಜಕೀಯ ಷಡ್ಯಂತ್ರ ಇಲ್ಲದೇ ಇಲ್ಲಾ. ಯಾವುದೇ ಕ್ರೀಡಾಪಟುವಿನ ಪ್ರತಿಭೆ ಗುರುತಿಸದೇ, ಜಾತಿಯೇ ಪ್ರಭಾವವನ್ನು ಬೀರುವುದಾದರೆ ಎಲ್ಲಾ ಜಾತಿಯವರಿಗೂ ಅವರ ಜಾತಿಯೇ ಮುಖ್ಯವಾಗುತ್ತದೆ. ಕ್ರೀಡೆಯನ್ನು ನಿಷ್ಪಕ್ಷಪಾತವಾಗಿ ಒಂದೇ ತಕ್ಕಡಿಯಲ್ಲಿಟ್ಟು ತುಲನೆ ಮಾಡಬೇಕು ಅದನ್ನು ಬಿಟ್ಟು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆಯನ್ನು ಸವರಿ ಸಾಚಾಗಳಂತೆ ವರ್ತಿಸುವುದು ಯಾವ ತೆರನಾದ ಮಾನವೀಯತೆ ಸ್ವಾಮೀ...!
ನಾನು ಶಾಲೆಗೆ ಹೋಗುವಾಗ ನಡೆದ ಸುಚೇತಾ ಶೆಟ್ಟಿಯ ಬಲಾತ್ಕಾರ ಮತ್ತು ಕೊಲೆಯನ್ನು ರಾಜಕೀಯದ ಚದುರಂಗದಾಟಕ್ಕೆ ದಾಳವನ್ನಾಗಿ ಬಳಸಿ, ಶಾಸಕರಾದದ್ದು ಹಾಗೆ ಮುಂದಿನ ಅವಧಿಯಲ್ಲಿ ವಿರೋಧ ಪಕ್ಷಗಳು ಅದೇ ವಿಷಯವನ್ನು ಪ್ರಸ್ತಾಪ ಮಾಡಿ ವಿಧಾನಸಭೆಗೆ ಆಯ್ಕೆ ಆದದ್ದು ಜನರು ಇನ್ನು ಮರೆತಿಲ್ಲ.
ಹಿಂದು ಸಮಾಜದಲ್ಲಿ ಹುಟ್ಟಿದ ಹುಡುಗಿ, ಸಂಪ್ರದಾಯಸ್ಥ ಮನೆತನದ ದೈವಭಕ್ತ ತಂದೆತಾಯಿಯ ಮಗಳ ಕೊರಳಲ್ಲಿ ಶಿಲುಬೆಯನ್ನು ಹೊಂದಿದ್ದ ಸರವಿತ್ತಂತೆ? ಅವಳ ಮೊಬೈಲಿಗೆ ಕರೆ ಮಾಡುತ್ತಿದ್ದ ಅನ್ಯಮತೀಯನ ಜೊತೆ ಪ್ರೇಮವಿತ್ತಂತೆ? ಅವನನ್ನು ಬಂದಿಸಿ ನಂತರದ ಎರಡೆ ದಿನದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನಂತೆ? ಚರ್ಚಿನ ಧರ್ಮಗುರುಗಳು ತಡರಾತ್ರಿಯಲ್ಲೂ ಲೇಡಿಸ್ ಹಾಸ್ಟೆಲ್‌ಗೆ ಬರುತ್ತಿದ್ದರಂತೆ? ಇಲ್ಲಿ ಕಾಲೇಜ್ ಹಾಗೂ ಹಾಸ್ಟೆಲ್ ವಾರ್ಡನ್ ಕೈವಾಡ ಇದೆಯಂತೆ? ಹೀಗೆ ಅನೇಕ ಅಂತೆ ಕಂತೆಗಳ ವಿಚಾರಗಳನ್ನು ಹಿಡಿದು ರಾಜಕೀಯ ನಾಯಕರು, ಜಾತಿ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆ ಹೊರಾಡುತ್ತಿದ್ದರೆ, ಮಹಿಳಾ ಹಕ್ಕುಗಳಿಗಾಗಿ ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮಹಿಳಾ ಸಂಘಟನೆ ಪ್ರಗತಿಪರ ಹಣೆಪಟ್ಟಿ ಹೊತ್ತಿರುವ ಸಂಘಟನೆಗಳು ಮತ್ತು ಬುದ್ದಿಜೀವಿಗಳು ಪ್ರಥ್ವಿಯ ಆತ್ಮಹತ್ಯೆಯ ವಿಚಾರದಲ್ಲಿ ನಿರಾಶಭಾವನೆ ತಾಳಿ ತಟಸ್ಥರಾಗಿರುವುದಾದರೂ ಯಾಕೆ? ಮಹಿಳೆಯ ಧ್ವನಿಯಿಲ್ಲದ ಧ್ವನಿಯಿಂದ ಸಮಾಜದಲ್ಲಿ ತನ್ನ ಹಕ್ಕುಗಳಿಗಾಗಿ ಹೋರಾಡಿದ ಮಹಿಳೆ ಎಷ್ಟು ಹೋರಾಡಿದರೂ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವ ಅಸಹಾಯಕತೆಯಂದಲೋ? ಅಥವಾ ರಾಜಕೀಯದ ಚದುರಂಗದಾಟದಲ್ಲಿ ತನ್ನ ಧ್ವನಿಪೆಟ್ಟಿಗೆಯಿಂದ ಧ್ವನಿ ಹೊರಬಂದರೂ, ಅದು ಪಸರಿಸದಂತೆ ತಡೆಗೋಡೆ ಒಡ್ಡುತ್ತಾರೆ ಎನ್ನುವ ನೈಜತೆಯಿಂದಲೋ? ಯಾವುದು ಸ್ಪಷ್ಟವಾಗಿಲ್ಲ.
ಆತ್ಮಹತ್ಯೆ ಎನ್ನುವುದು ಮಹಾಪಾಪ ಎನ್ನುವುದು ಗೊತ್ತಿದ್ದರೂ, ಯಾವುದೋ ಒತ್ತಡಕ್ಕೆ ಸಿಲುಕಿ, ಸಂಕುಚಿತ ಭಾವನೆಗೆ ಒಳಗಾಗಿ, ಇನ್ನು ಮುಂದೆ ತನಗೆ ಉಳಿಗಾಲವಿಲ್ಲವೆನ್ನುವ ಮನಸ್ಥಿತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂಥವರಿಗೆ ಸಮಾಜದಲ್ಲಿ ಸ್ಥಾನಮಾನ ಸಿಗುತ್ತದೆಯೇ ಎಂದಾಗ ಉತ್ತರ ಮಾತ್ರ ಶೂನ್ಯ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಲಿಗಳು ಹಾಗೂ ಗಡಿಗಳಲ್ಲಿ ಹೋರಾಡಿದ ವೀರಯೋಧರನ್ನೆ ನೆನಪು ಮಾಡಿಕೊಳ್ಳದ ಜನತೆ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸ್ಮರಿಸುತ್ತಾ ಕಾಲಹರಣ ಮಾಡುವ ಔದಾರ್ಯವನ್ನು ತೋರಿಯಾರೆ? ಸತ್ತು ಉತ್ತರ ಕ್ರಿಯೆಗಳು ಮುಗಿಯುವ ಮುನ್ನವೇ ಘಟನೆಯನ್ನು ಮರೆಯುವ ಒತ್ತಡದ ಸಮಾಜದಲ್ಲಿದ್ದೇವೆ.
ಜೇಡರ ಬಲೆ, ಧೂಳುಗಳಿಂದ ಆವೃತವಾದ ಸತ್ತ ತಂದೆ ತಾಯಿಯ ಭಾವಚಿತ್ರವನ್ನು ಸ್ವಚ್ಚಮಾಡದ ಮಕ್ಕಳು, ಚುನಾವಣೆ ಸಂದರ್ಭ ರಾಜಕೀಯ ನಾಯಕರ(ಇಂದಿರಾಗಾಂಧಿ,ರಾಜೀವಗಾಂಧಿ) ಭಾವಚಿತ್ರವನ್ನು ಸ್ವಚ್ಚತೆ ಮಾಡುವ ನಾಯಕರೆ ಸಮಾಜದಲ್ಲಿ ತುಂಬಿರುವಾಗ, ಪ್ರಥ್ವಿಯ ವಿಚಾರದಲ್ಲಿ ಪೋಷಕರಿಗೆ ನ್ಯಾಯ ಒದಗಿಸುತ್ತೇನೆ ಎಂದು ಹೋರಾಡಲು ಸಾಧ್ಯವೇ?ನಂಬಿಕೆಯನ್ನು ಕಳೆದುಕೊಂಡ ನಾಯಕರು ಸಾಂತ್ವಾನ ಮಾಡುವುದು ಮರುಚುನಾವಣೆ ಬಂತೆನ್ನುವ ಸೂಚನೆಯಲ್ಲವೆ?
ಎಲ್ಲಾ ಪಕ್ಷದವರು ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುತ್ತಾ ತಮ್ಮ ರಾಜಕೀಯದ ಸೌಧ ನಿರ್ಮಾಣಕ್ಕೆ ಬಡಪಾಯಿಗಳ ಸಮಾಧಿಯೇ ಆಗಬೇಕೆ? ನಾಯಕರೇ ನಿಜವಾಗಿ ನೀವು ಮಾನವೀಯತೆಯಿಂದ ಈ ಕಾರ್ಯ ಮಾಡಿದ್ದೆ ಆದರೆ ಜಿಲ್ಲೆಯಲ್ಲಿ ಅನೇಕ ಬಡಪ್ರತಿಭೆಗಳು ಪ್ರಯಾಣದ ಭತ್ಯೆಯನ್ನು ಭರಿಸಲಾಗದೆ ಹಾಗೂ ಉತ್ತಮ ತರಭೇತಿಯನ್ನು ಪಡೆಯಲಾಗದೆ ಕರಟಿ ಕಮರಿ ಹೋಗುವ ಸ್ಥಿತಿಯಲ್ಲಿದ್ದಾರೆ. ಅನೇಕ ಅರಳುವ ಪ್ರತಿಭೆಗಳು, ವಿಶೇಷ ಮಕ್ಕಳು ಹಳ್ಳಿಯಲ್ಲಿದ್ದಾರೆ ಅವರಿಗೆ ಸಹಾಯಹಸ್ತ ನೀಡಿದರೆ ಒಂದು ಮಹತ್ಕಾರ್ಯ ಮಾಡಿದಂತಾಗುತ್ತದೆ. ಹಸಿ ಮಡಕೆಯ ಮೇಲೆ ರಚಿಸಿದ ಚಿತ್ರವಿಚಿತ್ರ ರೇಖೆಗಳು ಮಡಕೆಯನ್ನು ಸುಟ್ಟಾಗಲು ಹೇಗೆ ಅಚ್ಚಳಿಯದೇ ಉಳಿಯುತ್ತದೋ..ಚಿಕ್ಕ ವಯಸ್ಸಿನಲ್ಲಿ ಮಾಡಿದ ಸಹಾಯ ನೆನಪಿಟ್ಟುಕೊಳ್ಳುತ್ತಾರೆ ಅವರಿಗೆ ಸಹಾಯ ಮಾಡಿ, ಅವರ ಬಾಳಿನಲ್ಲಿ ಬೆಳಕಾಗಿ....ಇನ್ನಾದರೂ ಅನೇಕ ಕಂದಮ್ಮಗಳ ಆತ್ಮಹತ್ಯೆ ಹಾಗೂ ಕೊಲೆಯ ಚಿದಂಬರ ರಹಸ್ಯ ಹೊರಬಿಳುವುದೇ?
ಕೊನೆಯ ಮಾತು:ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ... ಸಮಾಜ ಘಾತಕರನ್ನು ಮಟ್ಟಹಾಕಲು ಸಮಾಜಘಾತುಕ ವಿಷಯಗಳನ್ನು ಬಹಿರಂಗಪಡಿಸೋಣ...

Saturday 21 April 2012

ಸ್ಲಂ ಚೈಲ್ಡ್



ಸೇವಾಬಸದಿಯ ಮಕ್ಕಳ ವಿಕಾಸಕ್ಕೆ ಕಟಿಬದ್ದವಾಗಿರುವ ಸಂಘಪರಿವಾರಗಳು
ನವೆಂಬರ್ ೧೪ ಮಕ್ಕಳ ದಿನಾಚರಣೆ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಹುಟ್ಟಿದ ದಿನ. ಅವರು ಖಾಸಗಿ ಜೀವನದಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದನ್ನೆ ಗಮನದಲ್ಲಿರಿಸಿ ಮಕ್ಕಳೆಲ್ಲಾ ಸಂಭ್ರಮ ಪಡುವಂತೆ ಮಾಡಿದ್ದಾರೆ ಎಂದು ಸಂತೋಷಪಡಲೆ? ಅವರ ವೈಯಕ್ತಿಕ ಜೀವನದಲ್ಲಿ ಹಾಗೂ ರಾಜಕೀಯ ಜೀವನದಲ್ಲಿ ಯಾರು ಮರೆಯಲಾಗದ ನೋವನ್ನು ಮಾಡಿದ್ದಾರೆ ಎಂದು ಬೇಸರ ಮಾಡಿಕೊಳ್ಳಲೇ?ಆದರೂ ಮಕ್ಕಳನ್ನು ಪ್ರೀತಿಸಿ ಹಾಗೂ ವೈಯಕ್ತಿಕ ವಿಷಯಗಳಲ್ಲಿ ತನ್ನ ಹೆಸರನ್ನು ಸಮಾಜದಲ್ಲಿ ಮರೆಯಾಗದಂತೆ ಮಾಡಿದ್ದಾರೆ. ಅವರ ಹುಟ್ಟಿದ ಹಬ್ಬವನ್ನು ಮಕ್ಕಳ ದಿನವನ್ನಾಗಿ ಆಚರಿಸುವ ನಾವು, ಅವರ ವೈಯಕ್ತಿಕ ಜೀವನದಲ್ಲಿ ಪರರ ಹೆಂಡತಿಯನ್ನು ಕಾಮದೃಷ್ಟಿಯಿಂದ ನೋಡಿದ ಹಾಗೂ ಸೈನ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಮಹತ್ವದ ಸ್ಥಾನವನ್ನು ನೀಡಿ, ಹಿಂದು ಬಾಂದವರನ್ನು ತುಚ್ಚವಾಗಿ ನೋಡಿದ ನೆಹರೂ ಅವರು ಮಕ್ಕಳಿಗೆ ಪ್ರೇರಣೆ ಆಗುವುದಕ್ಕೆ ಸಾಧ್ಯವಿದೆಯೇ? ಹಾಗೂ ಪ್ರಸ್ತುತ ಸಮಾಜದಲ್ಲಿ ಎಲ್ಲಾ ಮಕ್ಕಳಿಗೂ ಸಮಾನವಾದ ಸ್ಥಾನಮಾನ ಸಿಗುತ್ತಿದೆಯೇ ಎಂದಾಗ ಉತ್ತರ ಮಾತ್ರ ಶೂನ್ಯ.....
ಮಕ್ಕಳ ದಿನಾಚರಣೆ ಬಂದರೆ ಸಾಕು ಎಲ್ಲಾ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತುಗಳು ಪ್ರಸಾರವಾಗುತ್ತದೆ. ಪುಟಾಣಿ ಮಕ್ಕಳ ವೇಷದ ಸ್ಪರ್ಧೆ, ಚಿತ್ರ ಬಿಡಿಸುವುದು, ಹಾಡು, ನೃತ್ಯ, ಭಾಷಣ ಒಂದೆ ಎರಡೇ ಅನೇಕ ಸ್ಫರ್ಧೆಗಳನ್ನು ವಿವಿಧ ಸಂಸ್ಥೆಗಳು ಆಯೋಜಿಸುತ್ತವೆ. ಮಕ್ಕಳಿಂದ ಹಿಡಿದು ಎಲ್ಲಾ ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಕೂಡ ಇಂತಹ ಸ್ಫರ್ದೆಗಳನ್ನು ಎರ್ಪಡಿಸುವುದು ಸರ್ವೇ ಸಾಮಾನ್ಯ. ಅವರ ಕಂಪೆನಿಯು ಸಮಾಜದಲ್ಲಿ ಹೆಸರು ಗಳಿಸಬೇಕೆನ್ನುವ ಸ್ವಾರ್ಥ ಇದರಲ್ಲಿದ್ದರೂ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಭದ್ರ ಬುನಾದಿಯಾಗುವುದರಲ್ಲಿ ಸಂದೇಹವಿಲ್ಲಾ. ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಿ, ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬಹುಮಾನವನ್ನು ಕೊಟ್ಟು ಸತ್ಕರಿಸುತ್ತಾರೆ. ಬಹುಮಾನ ಪಡೆದ ಮಕ್ಕಳು ಸಂತೋಷ ಪಟ್ಟರೆ, ಬಹುಮಾನ ಪಡೆಯದ ಮಕ್ಕಳು ಮಾತ್ರ ಭಾಗವಹಿಸಿದ ತೃಪ್ತಿ ಇದ್ದರೂ, ಬಹುಮಾನ ಸಿಗಲಿಲ್ಲ ಎನ್ನುವ ಹತಾಶ ಭಾವನೆ ಮೂಡುವುದು ಸಹಜ. ನೆಹರೂರವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವ ನ.೧೪ ದೇಶದಲ್ಲಿರುವ ಎಲ್ಲಾ ಮಕ್ಕಳು ಆ ಸಂತೋಷ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಾಗ್ಯ ಸಿಗುತ್ತಿದೆಯೇ ಎನ್ನುವುದು ಪ್ರಶ್ನೆಯಾಗಿದೆ.
ಶಾಲೆಯಲ್ಲಿ ವಿಶೇಷವಾಗಿ ಮಕ್ಕಳ ದಿನಾಚರಣೆಯಂದು ಬೌದ್ದಿಕ ಹಾಗೂ ಕ್ರಿಯಾತ್ಮಕ ಚಟುವಟಿಕೆಯೊಂದಿಗೆ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಆಟೋಟ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ. ಹಳ್ಳಿಯ ಶಾಲೆಯಲ್ಲಂತೂ ಮಕ್ಕಳಿಗೆ ಆಟವೇ ಪ್ರಧಾನವಾಗಿರುತ್ತದೆ. ಆಂಗ್ಲ ಭಾಷೆಯೆ ಮುಖ್ಯವೆಂದು ಅದರ ಬೆನ್ನತ್ತಿ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ನಾವು ಕೂಡ ನಿಮ್ಮಷ್ಟೆ ಸಮರ್ಥರು ಎಂದು ಜಗಜ್ಜಾಹಿರ ಗೊಳಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುತ್ತಾ, ದಾಖಲೆಯನ್ನೇ ನಿರ್ಮಿಸುತ್ತಿದ್ದಾರೆ. ಕ್ರೀಡೆ, ಬೌದ್ದಿಕ ಹಾಗೂ ಸಾಂಸ್ಕೃತಿಕ ಯಾವುದೇ ಕ್ಷೇತ್ರವಿರಲಿ ನಮ್ಮಲ್ಲಿ ಕೂಡ ವಿರಾಟ ಶಕ್ತಿಯಿದೆ ಎಂದು ತೋರಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿಯೂ ಕೂಡ ವಿಶೇಷವಾದ ಶಕ್ತಿ ಇದೆ ಎಂದು ನಿರ್ದೇಶಕ ಕಿಶನ್, ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಹೆಸರು ಮಾಡಿದ ಉಮಾಭಾಗ್ಯಲಕ್ಷ್ಮೀ , ಹಾಡುಗಾರಿಕೆಯಲ್ಲಿ ಪಲ್ಲವಿ ಪ್ರಭು ಹಾಗೂ ನೃತ್ಯದಲ್ಲಿ ಜ್ಞಾನ ಐತಾಳ ಹೀಗೆ ಅನೇಕ ಪುಟಾಣಿಗಳ ಸಾಧನೆ ಮೆಚ್ಚುವಂಥದ್ದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಭಾಷಣೆಯ ಚತುರತೆ ಇಲ್ಲದಿದ್ದರೂ ಸಾಧನೆ ಮಾತ್ರ ಗಣನೀಯವಾದುದು.
ಆ ನಿಟ್ಟಿನಲ್ಲಿ ಅನೇಕ ಪತ್ರಿಕೆಗಳು ಹಾಗೂ ನಮ್ಮ ಪತ್ರಿಕೆ ಶನಿವಾರ ಪುಟಾಣಿಗಳಿಗಾಗಿಯೇ ಪುರವಣಿಯನ್ನು ಪ್ರಸಾರ ಮಾಡುತ್ತಿದ್ದು, ಮಕ್ಕಳಿಗೆ ವಿಶಿಷ್ಟ ವೇದಿಕೆಯೊಂದನ್ನು ನಿರ್ಮಾಣ ಮಾಡುತ್ತಿದೆ ಎಂದು ಸಂತೋಷಪಡುವ ಹಾಗಿಲ್ಲ? ಸುಪ್ತ ಮನಸ್ಸುಗಳ ವಿಶಿಷ್ಟ ತೆರನಾದ ಭಾವ ಪ್ರಪಂಚದಲ್ಲಿರುವ ಕ್ಲಪ್ತವಾಗಿರುವ ಪ್ರತಿಭೆಯನ್ನು ಪ್ರಚುರ ಪಡಿಸಲು ಸಂಘಸಂಸ್ಥೆಗಳು ವೇದಿಕೆ ಒದಗಿಸಿವೆ ಎಂದು ಸಂತೋಷ ಪಡುವುದಕ್ಕೆ ಹೇಗೆ ಸಾಧ್ಯ....
ದೇಶದ ಅನೇಕ ನಗರಗಳ ಸೇವಾಬಸದಿಗಳಲ್ಲಿ ಅನೇಕ ಅರಳುವ ಕಂಗಳು ಸೂಕ್ತ ವೇದಿಕೆ ಸಿಗದೆ ಕಣ್ಣೀರಿನಲ್ಲಿ ದಿನದೂಡುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಶಾಲೆಯ ಮೆಟ್ಟಿಲನ್ನು ತುಳಿಯಲು ಸಾಧ್ಯವಿಲ್ಲದೇ ಕಡುಬಡತನದಲ್ಲಿ, ಬದುಕುವುದಕ್ಕಾಗಿ ಬಿಕ್ಷೆ ಬೇಡುತ್ತಾ ಶಾಲೆಗೆ ಹೋಗುವ ಮಕ್ಕಳನ್ನು ಆಸೆಯ ಕಂಗಳಿಂದ ನೋಡುತ್ತಿರುವ ಮಕ್ಕಳಿಗೆಲ್ಲಿ ಸ್ವಾಮೀ ಸಂತೋಷದ ಆಚರಣೆ.ಸೇವಾ ಬಸದಿಯಲ್ಲಿರುವ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಲೂ ಶ್ರಮಿಸುವ ಸಂಘಸಂಸ್ಥೆಗಳಿದ್ದರೂ, ಮಕ್ಕಳೂ ಮಾತ್ರ ಬಡತನದ ಕರಿಛಾಯೆಯಲ್ಲಿ ಜೀವನ ನಡೆಸುತ್ತಿದ್ದಾರೆ.ಆ ಮಕ್ಕಳಿಗೂ ನಾನು ಉಳಿದ ಮಕ್ಕಳಂತೆ ಶಾಲೆಗೆ ಹೋಗಬೇಕೆನ್ನುವ ತುಡಿತ ಇರುವುದಿಲ್ಲವೇ? ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾವುದೋ ಅದ್ಬುತ ಶಕ್ತಿ ಇರಬಹುದು ಎಂದು ಭಾಸವಾಗುವುದಿಲ್ಲವೇ? ಬೀದಿಯಲ್ಲಿ ಸ್ವತಂತ್ರವಾಗಿ ಅಲೆದಾಡಿಕೊಂಡಿದ್ದ ಮಕ್ಕಳಿಗೆ ಸ್ವಲ್ಪದಿನ ಸ್ವಾತಂತ್ರ್ಯ ಕಸಿದುಕೊಂಡಂತಾಗುತ್ತದೆ.
ಸೇವಾ ಬಸದಿಗಳು ಎಂದು ನಾವು ಯಾವುದನ್ನು ಕರೆಯುತ್ತೆವೋ ಅಲ್ಲಿರುವಂಥ ಮಕ್ಕಳನ್ನು ಸಮಾಜದಲ್ಲಿ ದುಷ್ಟಕೃತ್ಯಗಳಿಗೆ ತಮ್ಮ ದಾಳವನ್ನಾಗಿ ಬಳಸುತ್ತಾರೆ. ವಿದ್ಯೆಯ ಗಂಧ ಗಾಳಿಯೇ ತಿಳಿಯದ ಮಕ್ಕಳು ಅವರು ಹೇಳಿದ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ನೀಡಿದ ಆಮಿಷಗಳಿಗೆ ಬಲಿಯಾಗಿ ಅಮೂಲ್ಯ ಜೀವನವನ್ನು ನಾಶಮಾಡಿಕೊಳ್ಳುತ್ತಾರೆ. ಮಕ್ಕಳ ತಂದೆ ತಾಯಿ ಕುಡಿತಕ್ಕೆ ದಾಸರಾಗಿರುವುದರಿಂದ ಸುಲಭವಾಗಿ ಅವರನ್ನು ವಂಚಿಸಬಹುದು. ಸಣ್ಣ ಮಕ್ಕಳು ಲೇಖನಿ ಹಿಡಿಯಬೇಕಾದ ಕೈಯಲ್ಲಿ ಗಾಂಜಾ, ಅಫಿಮು, ಚರಸ್‌ನಂಥ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಚಕ್ರವ್ಯೂಹದಲ್ಲಿ ಸಿಕ್ಕಿ ಹೊರಬರಲಾರದೆ ವಿಲವಿಲ ಒದ್ದಾಡುತ್ತಿದ್ದಾರೆ. ಮೊದಲು ಸಣ್ಣ ದೇಶ ವಿರೋದಿ ಚಟುವಟಿಕೆಯಲ್ಲಿ ತೊಡಗಿದ ಮಕ್ಕಳು, ಬೆಳೆದು ದೊಡ್ಡವರಾದಾಗ, ಜೀವನದಲ್ಲಿ ಗುರಿಯಿಲ್ಲದೆ, ಬೇರೆ ದಾರಿ ಕಾಣದೆ ಆ ನರಕದಲ್ಲಿ ಬದುಕನ್ನು ಸವೆಸುತ್ತಿರುತ್ತಾರೆ. ಮುಂದೊಂದು ದಿನ ತಮ್ಮ ಜೀವನ ಮೃತ್ಯುಕೂಪದಲ್ಲಿ ಬೀಳುತ್ತವೆ ಎಂದು ತಿಳಿಯುವುದರೊಳಗೆ ಕಾಲ ಕೈ ಮೀರಿ ಹೋಗಿರುತ್ತೆ? ರೈಲು ಹೋದ ಮೇಲೆ ಟಿಕೆಟ್ ಖರೀದಿ ಮಾಡಿದರೆ ಏನು ಪ್ರಯೋಜನ? ಕೆಲವೊಂದು ಕಾಯಿಲೆಗೆ ಪ್ರಾರಂಭದಲ್ಲಿಯೇ ಔಷಧಿ ಮಾಡಿದರೆ ನಿವಾರಿಸಬಹುದು ಅಥವಾ ರೋಗದ ಪ್ರಖರತೆಯನ್ನು ಹತೋಟಿಗೆ ತರಬಹುದು. ಮಾದಕ ವಸ್ತುಗಳು ಮಕ್ಕಳ ಕೈಯಲ್ಲಿ ಸಾರಾಸಗಾಟಾಗಿ ಓಡಾಡುವಾಗ, ಲೇಖನಿಯು ಕೂಡ ಚಲಿಸಬಹುದಲ್ಲವೇ? ಕ್ರಿಶ್ಚಿಯನ್ ಸಮುದಾಯ ಇಂತಹ ಕುಟುಂಬಗಳನ್ನೆ ಗುರಿಯಾಗಿಸಿ, ಮತಾಂತರ ಮಾಡಿದ ಘಟನೆಗಳು ಸಾಕಷ್ಟಿವೆ.
ಮನೆಯ ಬಡತನ, ತಂದೆ ತಾಯಿಯ ಕಿರುಕುಳ, ಮಾನಸಿಕ ಬೆಳವಣಿಗೆಯ ಕೊರತೆ, ಅನಕ್ಷರತೆ, ಅತಿಯಾಸೆ ಹೀಗೆ ಅನೇಕ ಸಮಸ್ಯೆಗಳಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ. ಕೇವಲ ಮಕ್ಕಳನ್ನು ಮಾತ್ರ ದೂರಿದರೆ ಸಾಲದು. ಪರೋಕ್ಷವಾಗಿ ಸಮಾಜವು ಕೂಡ ಮಕ್ಕಳನ್ನು ಆ ಮಾನಸಿಕತೆಯಲ್ಲಿ ಬೆಳೆಯುವ ಹಾಗೆ ಮಾಡುತ್ತವೆ. ಖಟ್ಚಜಿಛಿಠಿqs mಛಿmZಛಿo ಠಿeಛಿ ಜಿಞಛಿ, ಠಿeಛಿ ಜಿಞಜ್ಞಿZ ಟಞಞಜಿಠಿo ಜಿಠಿ ಎಂದು ಹೆನ್ರಿ ಥೋಮಸ್ ಹೇಳುತ್ತಾನೆ. ಕಳ್ಳತನ ಮಾಡುವುದು, ಮಾದಕ ವಸ್ತುಗಳ ಮಾರಾಟ ಒಂದು ಸಮಸ್ಯೆಯಾದರೆ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಗಾಂಜಾ, ಡ್ರಗ್ಸ್ , ಕುಡಿತದ ದಾಸರಾಗುತ್ತಿದ್ದಾರೆ. ಗಂಡು ಮಕ್ಕಳು ಈ ರೀತಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದರೆ ಪಾಪ ಹೆಣ್ಣು ಮಕ್ಕಳ ಸ್ಥಿತಿ ಇನ್ನಷ್ಟೂ ಶೋಚನೀಯವಾಗಿದೆ. ಅಪ್ರಾಪ್ತ ಬಾಲೆಯರು ಕಾಮಾಂಧರ ಭೋಗದ ವಸ್ತುಗಳಾಗಿ, ಕೊಲೆಯಾಗಿ ಈ ಲೋಕದಿಂದಲೇ ಬೆರ್ಪಡುತ್ತಿದ್ದಾರೆ. ಮೈಕಲ್ ಜಾಕ್ಸನ್ ಕಾಮತೃಷೆಯನ್ನು ತೀರಿಸಿಕೊಳ್ಳಲು ಅಪ್ರಾಪ್ತೆಯರನ್ನೆ ಬಳಸುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ.. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಮಧ್ಯಮ ವರ್ಗದ ಹೆಣ್ಣಿನ ಮೇಲಾದ ಲೈಂಗೀಕ ದೌರ್ಜನ್ಯವನ್ನು ಕಂಡಾಗ, ನಮ್ಮ ದೇಶದಲ್ಲಿಯೂ ಕೂಡ ಮೈಕಲ್‌ನಂಥ ಕಾಮಾಸುರರು ಬೇಕಾದಷ್ಟಿದ್ದಾರೆ. ಲೈಂಗೀಕ ದೌರ್ಜನ್ಯ ಒಂದೆಡೆಯಾದರೆ ವಾಮಾಚಾರವೆಂಬ ಮಾಯೆಗೆ ಬಲಿಯಾಗಿ ಪುಟಾಣಿಗಳನ್ನೆ ಬಲಿಕೊಡುವಂಥ ಕಟುಕರು ಸಮಾಜದಲ್ಲಿ ಇದ್ದಾರೆ.
ನಮ್ಮ ದೇಶದಲ್ಲಿರುವ ಮಕ್ಕಳ ಸಮಾಜ ವಿರೋಧಿ ಚಟುವಟಿಕೆಯನ್ನು ಘೆZಠಿಜಿಟ್ಞZ ಇಜಿಞಛಿ ಛ್ಚಿಟ್ಟbo ಆಛಿಟ(ಘೆಇಆ) ವರದಿ ಮಾಡಿದೆ. ಜೈಪುರದಲ್ಲಿ ೩೬೯ ಕ್ರೈಮ್ ಮತ್ತು ಬಲಾತ್ಕಾರ ದೂರುಗಳು ದಾಖಲಾಗಿದೆ. ರಾಜ್ಯಗಳಲ್ಲಿ ರಾಜಸ್ತಾನ-೧೩೧೮, ಮಧ್ಯಪ್ರದೇಶ-೪೯೧೨, ಮಹಾರಾಷ್ಟ್ರ-೩೬೨೪, ಉತ್ತರ ಪ್ರದೇಶ-೨೩೩೨ ದೂರುಗಳಿವೆ. ರಾಜ್ಯದ ರಾಜಧಾನಿಗಳಲ್ಲಿ ೨೦೧೦ರ ವರದಿಯಂತೆ ಬಾಂಬೆ-೫೩೨, ಪುಣೆ-೩೫೩, ಇಂದೋರ್-೩೨೫, ವಿಜಯ್‌ವಾಡಾ-೧೮೮, ಲಥೈನ್-೧೫೦, ಬೋಪಾಲ್-೧೧೧, ಜೈಪುರ-೯೮ ಬಲಾತ್ಕಾರ ದೂರುಗಳು ದಾಖಲಾಗಿದೆ. ೧೫-೨೯ ವರ್ಷದೊಳಗಿನ ಆತ್ಮಹತ್ಯೆ ಪ್ರಕರಣಗಳು ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ೬೫೭ ಪ್ರಕರಣಗಳಲ್ಲಿ ೩೨೯ ಮಹಿಳೆಯರು, ದೆಹಲಿ-೬೫೧, ಮುಂಬೈ-೫೮೨, ಚೆನೈ-೪೭೨ ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸ್ವಲ್ಪ ತಿಳುವಳಿಕೆ ಇರುವ ಮಕ್ಕಳೇ ಆತ್ಮಹತ್ಯೆಗೆ ಮುಂದಾದರೆ, ವಿದ್ಯೆ ಕಲಿಯದ ಸೇವಾಬಸದಿಯ ಮಕ್ಕಳ ಗತಿಯೇನು?
ಸೇವಾ ಬಸದಿಯಲ್ಲಿರುವ ಮಕ್ಕಳಿಗೆ ಹಾಗು ಬಡತನದಲ್ಲಿರುವ ಮಕ್ಕಳಿಗೆ ವಿದ್ಯೆ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸೇವಾಸಂಸ್ಥೆಗಳು ಶ್ರಮಿಸುತ್ತಿವೆ. ೧೯೮೦ರ ದಶಕದಲ್ಲಿ ಒರಿಸ್ಸಾದಲ್ಲಿ ಫ್ಲಾಟ್‌ಫಾರಂ ಶಾಲೆಗಳು ಪ್ರಾರಂಭವಾದವು. ನಿವೃತ್ತ ಸೇನಾಧಿಕಾರಿಯ ಪತ್ನಿ ಇಂದರ್‌ಜಿತ್ ಖುರಾನ ರುಚಿಕಾ ಸೋಷಿಯಲ್ ಸರ್ವಿಸ್ ಆರ್ಗನೈಜೇಷನ್ ಪ್ರಾರಂಭ ಮಾಡಿದರು. ಈಗ ಆ ಸಂಸ್ಥೆ ೮೨೦ ಫ್ಲಾಟ್‌ಫಾರಂ ಶಾಲೆಗಳು, ೭೫ ಸೇವಾ ಬಸದಿ ಶಾಲೆ, ೨೫ ನರ್ಸರಿ ಶಾಲೆಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದೆ. ನಮ್ಮ ಭೂಮಿ, ಹಿಂದೂ ಸೇವಾ ಪ್ರತಿಷ್ಠಾನದ ನೆಲೆ, ವಿಶ್ವಹಿಂದೂ ಪರಿಷತ್ತಿನ ವನಿತಾಶ್ರಮ ಹಾಗು ಕುತ್ತಾರು ಆಶ್ರಮದಲ್ಲಿ ಅನೇಕ ನಿರಾಶ್ರಿತ ಮಕ್ಕಳು ತಮ್ಮ ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಕ್ರಿಶ್ಚಿಯನ್ ಸಮುದಾಯದವರು ನಾವು ಸೇವೆ ಮಾಡುತ್ತೇವೆ ಎನ್ನುವ ಕವಚ ದರಿಸಿದ್ದರೂ, ಮತಾಂತರವನ್ನೇ ಗುರಿಯಾಗಿಸಿ ಸ್ವಾರ್ಥವನ್ನು ಸಾಧಿಸುತ್ತಿದ್ದಾರೆ.
ಸರ್ಕಾರದಿಂದ ಮಕ್ಕಳ ವಿಕಾಸಕ್ಕೆಂದೇ ಹಲವಾರು ಕ್ರಮಗಳು, ಸ್ವಯಂಸೇವಾ ಸಂಸ್ಥೆಗಳು, ಅಂಗನವಾಡಿಗಳು ಶಾಲಾಪೂರ್ವ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡುತ್ತವೆ. ೧೯೫೨ರಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆಯನ್ನು ಅದರಡಿಯಲ್ಲಿ ಬಾಲವಿಕಾಸ ಕೇಂದ್ರ ಹಾಗೂ ೧೯೫೫ ಮಕ್ಕಳ ಕಲ್ಯಾಣವನ್ನೇ ಗುರಿಯಾಗಿಸಿ ರಾಷ್ಟ್ರೀಯ ಮಕ್ಕಳ ಮಂಡಳಿಯನ್ನು ಪ್ರಾರಂಭಮಾಡಿದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣ ಮಾಡಲಾಗಿದೆ. ಸಂವಿಧಾನದಲ್ಲಿ ೧೪,೧೫,೧೬ನೇ ವಿಧಿಗಳು ಸಾರ್ವಜನಿಕ ಹುದ್ದೆಗಳಲ್ಲಿ ಸ್ತ್ರೀ ಪುರುಷರಿಗೆ ಸಮಾನ ಅವಕಾಶ ಕಲ್ಪಿಸಿ, ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಿದೆ. ಇಷ್ಟೆಲ್ಲಾ ವ್ಯವಸ್ಥೆಗಳು ಸರ್ಕಾರದಲ್ಲಿದ್ದರೂ ದುಷ್ಟಕೃತ್ಯಗಳಲ್ಲಿ ಭಾಗವಹಿಸುವುದು ಮಿತಿಮಿರುತ್ತಿದೆ.
ಸರ್ಕಾರದ ಈಗಿನ ಶಾಲೆಗಳ ವಿಲೀನಿಕರಣ ನೀತಿಯಿಂದ ಬಡಮಕ್ಕಳು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸವಿಲ್ಲದೆ ಪಶ್ಚಾತ್ತಾಪ ಪಡುವ ಸಮಯ ದೂರವಿಲ್ಲ. ಅದಕ್ಕಾಗಿ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ ಅಲ್ಲಿಯೂ ಕೂಡ ಬುದ್ದಿಜೀವಿಗಳ ಕೊಂಕು ಮಾತುಗಳಿಗೆ ಗುರಿಯಾಗಬೇಕಾಗುತ್ತದೆ. ಮತಾಂತರ ಮಾಡುವ ಗುರಿಯಿರಿಸಿ, ಸ್ವಾರ್ಥಸಾಧಿಸುವ ಕ್ರಿಶ್ಚಿಯನ್ ಸಮುದಾಯಕ್ಕೆ ಸಮಾಜದಲ್ಲಿ ಮನ್ನಣೆ ಸಿಗುತ್ತಿದೆ. ಯಾವುದೇ ಸ್ವಾರ್ಥಾಪೇಕ್ಷೆಯಿಲ್ಲದೆ ೮೬ ವರ್ಷಗಳಿಂದ ಸಾವಿರಾರು ಸೇವಾಚಟುವಟಿಕೆಯನ್ನು ಮಾಡುತ್ತಾ ಬಂದಿರುವ ಸಂಘಪರಿವಾರಗಳಿಗೆ ಕೋಮುಸಂಘಟನೆ ಎನ್ನುವ ಪಟ್ಟ ಇದು ಯಾವ ನ್ಯಾಯ? ಹಿಂದು ಸಮಾಜದ ಬಂದುಗಳಿಗೆ ನೆಲೆಯನ್ನು ಕಲ್ಪಿಸಬೇಕು ಹಾಗೂ ಭವ್ಯಭಾರತದ ನಿರ್ಮಾಣ ಮಾಡಬೇಕೆನ್ನುವ ಮನೋಭಿಲಾಷೆ ಕೋಮುವಾದಕ್ಕೆ ಎಲ್ಲಿಯಾದರೂ ಆಸ್ಪದ ಕೊಡುತ್ತದೆಯೇ? ಬಸದಿಯಲ್ಲಿರುವ ಮಕ್ಕಳಿಗೂ ವಿದ್ಯಾಭ್ಯಾಸ ಮಾಡಿಸಿ ಸತ್ಪ್ರಜೆಗಳನ್ನಾಗಿ ಮಾಡಬೇಕೆನ್ನುವ ಸಂಘದ ಆಸೆ vಪ್ಪಾಗುತ್ತದೆಯೇ?
-ಸಂದೇಶ ಶೆಟ್ಟಿ ಆರ್ಡಿ-೯೯೮೦೬೨೧೮೧೦




ದೇಶೀ ವಸ್ತುಗಳ ಸೊಗಡು, ನಮ್ಮ ಅಂಗಡಿಯಲ್ಲೊಂದು ಸುತ್ತು
ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ತೆರೆದುಕೊಂಡಿರುವ ನಮ್ಮ ಅಂಗಡಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನೊಮ್ಮೆ ಸಂದರ್ಶಿಸಿದರೆ ಅಲ್ಲಿ ಗ್ರಾಮೀಣ ಸೊಗಡಿನ ಅಲ್ಲೇ ತಯಾರಾದ ವಸ್ತುಗಳು ಕಾಣಸಿಗುತ್ತವೆ. ಅಲ್ಲಿ ಏನುಂಟು ಏನಿಲ್ಲ.... ಎಂದು ಹುಡುಕುವುದೇ ಕಷ್ಟ! ಗ್ರಾಮೀಣ ಸೊಗಡಿನ ನಿತ್ಯೋಪಯೋಗಿ ಹಾಗೂ ಕಲಾವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ನಾವು ಬೇಡವೆಂದು ಬಿಸಾಡುವ ಚಿಕ್ಕ ಚಿಕ್ಕ ಬಟ್ಟೆಯಚೂರುಗಳು ನಮ್ಮ ಭೂಮಿ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಮಕ್ಕಳ ಕೈಗೆ ಸಿಕ್ಕಾಗ ಸುಂದರ ವಸ್ತುವಾಗಿ ಮಾರ್ಪಾಡಾಗುತ್ತದೆ. ಕಸದಿಂದ ರಸ ಎನ್ನುವ ಮಾತನ್ನು ನಿಜ ಮಾಡಿದ ನಮ್ಮಭೂಮಿಯ ಕನಸು ಕಂಗಳ ಅದ್ಭುತ ಕೈಚಳಕ ನಮ್ಮ ಅಂಗಡಿಯಲ್ಲಿ ಅನಾವರಣಗೊಳ್ಳುತ್ತದೆ.
ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿರುವ ನಮ್ಮಭೂಮಿಯಲ್ಲಿ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೇ ನಮ್ಮ ಅಂಗಡಿ. ಇದರ ಒಳಗೆ ಪ್ರವೇಶ ಮಾಡುವಾಗಲೇ ಸೆಣಬಿನಿಂದ ತಯಾರಿಸಿದ ಪುರುಷರ ಮತ್ತು ಮಹಿಳೆಯರ ದೇಶೀಯ ಶೈಲಿಯ ಬಟ್ಟೆ, ಗ್ರಾಹಕರ ಮನಸ್ಸನ್ನು ತಮ್ಮೆಡೆಗೆ ಬರಮಾಡಿಕೊಳ್ಳುತ್ತವೆ. ಮುಂದೆ ಸಾಗಿದರೆ ಟೆರ್ರಕೊಟ ವಸ್ತುಗಳು, ಬಿದಿರಿನಿಂದ ಮಾಡಿದ ಸುಂದರ ಕಲಾಕೃತಿಗಳು, ಎರಕ ಶಿಲ್ಪಗಳು ಕಲಾಸಕ್ತರನ್ನು ಸೆಳೆಯುತ್ತವೆ.
ಕುಚ್ಚಿಗೆ ಅಕ್ಕಿಯನ್ನು ಅಂಗಡಿಯಲ್ಲಿ ಖರೀದಿಸುವುದು ಪಾಲೀಶ್ ಆಗಿರುವುದಾದರೂ ನಮ್ಮ ಅಂಗಡಿಯಲ್ಲಿ ಒರಳಲ್ಲಿ ಕುಟ್ಟಿ ತಯಾರಿಸಿದ ಕೆಂಪಕ್ಕಿ ಇದೆ. ಬೆಟ್ಟದ ನೆಲ್ಲಿಯ ಉತ್ಪನ್ನಗಳು, ಶುದ್ದಜೇನು, ಗೆಣಸಿನಿಂದ ತಯಾರಿಸಿದ ಹಪ್ಪಳ, ಬಾಳೆಕಾಯಿ ಸಂಡಿಗೆಗಳು, ಚಕ್ಕುಲಿ, ಬಡವರ ಬಾದಾಮಿ ಕಡಲೆಕಾಯಿ ಇನ್ನೂ ಅನೇಕ ಆಹಾರೋತ್ಪನ್ನಗಳು ಇಲ್ಲಿವೆ. ಪ್ಲಾಸ್ಟಿಕ್‌ನ ಅಟ್ಟಹಾಸದ ಮುಂದೆ ಎಡೆಯಲ್ಲಿ ನಾನೂ ಕೂಡ ಇದ್ದೇನೆ ಎಂದು ತನ್ನ ಇರುವಿಕೆಯನ್ನು ಸಾರುವ ಬೆತ್ತದ ಬುಟ್ಟಿಗಳು, ಬಹಳ ದಿನದವರೆಗೆ ಅಕ್ಕಿಯನ್ನು ಸುರಕ್ಷಿತವಾಗಿಡುವ ತಿರಿಗಳು, ಅಕ್ಕಿಮುಡಿಗಳು, ಮಹಿಳೆಯರಿಗಾಗಿ ಜ್ಯುವೆಲ್ಲರಿಗಳು, ಮನೆಯ ಸೊಬಗನ್ನು ಹೆಚ್ಚಿಸುವ ಈಚಲು ಓಲೆಯಿಂದ ಮಾಡಿದ ಅಲಂಕಾರಿಕ ವಸ್ತುಗಳು, ಹಣೆಹಾಳೆಯ ಬೀಸಣಿಗೆ, ಲಾವಂಚದಿಂದ ತಯಾರಿಸಿದ ವಿವಿಧ ವಸ್ತುಗಳು, ಪಾದರಕ್ಷೆಗಳು ಇಲ್ಲಿ ಸ್ಥಾನ ಪಡೆದಿವೆ. ತೋಟದಲ್ಲಿ ಕೊಳೆತು ಮಣ್ಣಾಗುವ ಅಡಿಕೆ ಹಾಲೆಗಳು ಕುಶಲಕರ್ಮಿಗಳ ಕೈಗೆ ಸಿಕ್ಕಿ ಸುಂದರ ದಿನಬಳಕೆಯ ವಸ್ತುಗಳಾಗಿದ್ದು, ಹಾಲೆಯ ವಿವಿಧ ವಸ್ತುಗಳನ್ನು ಇಲ್ಲಿ ಕಾಣಬಹುದು. ಸೀಗೆ ಕಾಯಿ ಉತ್ಪನ್ನ, ಚಂದನ ಹೀಗೆ ಹಲವಾರು ದೇಸೀ ವಸ್ತುಗಳು ನಮ್ಮ ಅಂಗಡಿಯಲ್ಲಿ ಕಾಣಸಿಗುತ್ತವೆ.
ಹೊರಗಡೆ ಯಾವ ವಸ್ತು ಖರೀದಿ ಮಾಡಿದರೂ ತೃಪ್ತಿಯಿಲ್ಲ. ಇಲ್ಲಿ ಮಾತ್ರ ಹಾಗಲ್ಲ, ಕರಕುಶಲ ವಸ್ತುಗಳು ಮನಸ್ಸಿಗೆ ಖುಷಿ ಕೊಡುತ್ತದೆ. ಇನ್ನು ಹೆಚ್ಚು ಯುವಜನತೆ ಮುಂದೆ ಬಂದಾಗ, ಅಷ್ಟಲ್ಲದೇ ಗುಡಿಕೈಗಾರಿಕೆಯ ಬಗ್ಗೆ ಒಲವು ಮೂಡಿಸಿಕೊಂಡು ಅದನ್ನು ಕಲಿತಾಗ ನಮ್ಮ ಸಂಸ್ಕೃತಿ ಉಳಿಯುತ್ತದೆ ಎನ್ನುವುದು ಚಿತ್ರಕಲಾ ವಿದ್ಯಾರ್ಥಿಗಳಾದ ಚಿತ್ರ ಮತ್ತು ಶ್ವೇತಾರ ಅಭಿಪ್ರಾಯ.
ಕಾಲಕ್ಕೆ ತಕ್ಕ ಬದಲಾವಣೆ ಆಗಿದೆ ನಿಜ ಆದರೆ ಇಲ್ಲಿ ಮಾತ್ರ ಹಾಗೆ ಇಲ್ಲ. ಇಲ್ಲಿರುವ ವಸ್ತುಗಳು ಮಕ್ಕಳೇ ತಯಾರಿಸಿದ್ದು. ಇವರೆಲ್ಲಾ ಕಡುಬಡತನದಿಂದ ಬಂದವರು. ಅವರಿಗೆ ಉತ್ತಮ ನೆಲೆಯನ್ನು ಕೊಡುವ ನಿಟ್ಟಿನಲ್ಲಿ ನಮ್ಮ ಭೂಮಿ ಸಂಸ್ಥೆ ಅನೇಕ ವರ್ಷದಿಂದ ಕೆಲಸ ಮಾಡುತ್ತಿದೆ. ಅವರಿಗೆ ಸ್ವ-ಉದ್ಯೋಗದ ಜೊತೆಗೆ ಸ್ವಂತಿಕೆಯನ್ನು ಕಲಿಸಿ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಛತ್ತೀಸ್‌ಗಢದಿಂದ ನುರಿತ ಕಲಾಕಾರರನ್ನು ಕರೆಸಿ, ಮಕ್ಕಳಿಗೆ ೧೨ದಿನಗಳ ತರಬೇತಿ ಶಿಬಿರ ಆಯೋಜಿಸಿ ಅವರಿಗೆ ಕುಶಲ ವಸ್ತುಗಳನ್ನು ತಯಾರಿಸಿವ ಕಲೆಯನ್ನು ಹೇಳಿಕೊಡಲಾಗಿದೆ. ಇಲ್ಲಿ ತಂದೆ ತಾಯಿಯ ಮುಖವನ್ನೆ ನೋಡದ ಮಕ್ಕಳು, ಕಡುಬಡತನವೆಂದು ಪಂಚಾಯಿತಿಯ ಮೂಲಕ ಬಂದವರು, ಪೋಲಿಸ್‌ರಿಂದ ಪಡೆದ ಅನಾಥ ಮಕ್ಕಳು ಇವರೆಲ್ಲರಿಗೆ ಆಶ್ರಯ ಪಡೆದಿದ್ದಾರೆ. ಎರೆಹುಳ ಗೊಬ್ಬರದ ಮಾಹಿತಿಯನ್ನು ರೈತರಿಗೆ ನೀಡುತ್ತಿದ್ದೇವೆ. ಕುಂದಾಪುರ, ವಂಡ್ಸೆ, ಬಾಂಡ್ಯ ಹಾಗೂ ವಕ್ವಾಡಿ ಬೀಜಾಡಿಯಲ್ಲಿ ಸಾವಯವ ಗೊಬ್ಬರ ತಯಾರಿಸಿ ನಮಗೆ ಕೊಡುವ ರೈತರಿದ್ದಾರೆ ಎನ್ನುತ್ತಾರೆ ನಮ್ಮ ಅಂಗಡಿಯ ನಿರ್ದೇಶಕ ಶೇಡಿಮನೆ ಅನಂತ ನಾಯ್ಕ. ಅದರಂತೆ ಬೇಬಿ ಕನ್ಯಾನ, ಆಲೂರು ರಘುರಾಮ ಹೀಗೆ ಅನೇಕರು ಸ್ವ-ಉದ್ಯೋಗದ ಜೊತೆ, ಅನೇಕರ ಪಾಲಿಗೆ ಉದ್ಯೋಗದಾತರಾಗಿದ್ದಾರೆ.
ನಮ್ಮಭೂಮಿಯಲ್ಲಿ ಬದುಕು
ನಮ್ಮ ಭೂಮಿಯಲ್ಲಿ ೯೦ ಮಂದಿಗೆ ಉಳಿಯುವ ವ್ಯವಸ್ಥೆಯಿದ್ದು, ಈಗ ೮೦ ಜನ ಉಳಿದುಕೊಂಡಿದ್ದಾರೆ. ಅದರಲ್ಲಿ ೪೦ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವೃತ್ತಿ ತರಬೇತಿಯನ್ನು ಪಡೆಯುತ್ತಿದ್ದಾರೆ ಎನ್ನುತ್ತಾರೆ ದಿನೇಶ್.
ತಂದೆ ತಾಯಿಯ ಮುಖವನ್ನು ನೋಡದ ನಾನು ಮತ್ತು ನನ್ನ ಒಡಹುಟ್ಟಿದ ತಮ್ಮ ಮತ್ತು ತಂಗಿಯರು ಈ ಸಂಸ್ಥೆಯಲ್ಲಿ ಆಶ್ರಯ ಪಡೆದು , ಉತ್ತಮ ನೆಲೆಯನ್ನು ಕಂಡುಕೊಂಡಿದ್ದೇವೆ. ಮೊದಲು ಹಿರಿಯರಲ್ಲಿ ಹೇಗೆ ಮಾತನಾಡಬೇಕು ಎಂದು ಗೊತ್ತಿರದ ನಾನು ಈಗ ಚೆನ್ನಾಗಿ ಮಾತನಾಡುವ ಕಲೆ ಹಾಗೂ ಸ್ವ-ಉದ್ಯೋಗ ಮಾಡಿ ಒಡಹುಟ್ಟಿದ ತಮ್ಮ, ತಂಗಿಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವ ಭರವಸೆ ನನಗಿದೆ ಎನ್ನುವುದು ನಮ್ಮ ಭೂಮಿಯಲ್ಲಿ ಆಶ್ರಯ ಪಡೆದ ಅರಸಮ್ಮಕಾನಿನ ಆರತಿ ಅವರ ಆಂಬೋಣ.
-ಸಂದೇಶ್ ಶೆಟ್ಟಿ ಆರ್ಡಿ

ವಿಚ್ಚೇದನ ಎನ್ನುವ ವೈರಸ್




ದಾಂಪತ್ಯ ಜೀವನಕ್ಕೆ ಆವರಿಸಿಕೊಂಡಿರುವ ವಿಚ್ಛೇದನವೆಂಬ ವೈರಸ್‌ಗೆ ಕೊನೆ ಎಂದು....?
( ನ್ಯಾಯಾಲಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿಚ್ಛೇದನ ದೂರುಗಳು ಹಾಗೂ ಹಿಂದು ಧರ್ಮದಲ್ಲಿ ಉಲ್ಲೇಖವಾಗಿರುವ ದಾಂಪತ್ಯ ಜೀವನದ ಸವಿಯನ್ನು ಆದರಿಸಿ...)
ಹಿಂದು ಧರ್ಮ ಯಾವ ವ್ಯಕ್ತಿಯೂ ಸ್ಥಾಪನೆ ಮಾಡಿರುವಂಥದ್ದಲ್ಲ. ಜೀವನ ಮೌಲ್ಯಗಳನ್ನು ಒಳಗೊಂಡ ಜೀವನಕಲೆಯನ್ನು ಸಾರುವ ಬರವಣಿಗೆರಹಿತ ಮನುಕುಲದ ಧರ್ಮವೇ ಹಿಂದುಧರ್ಮ. ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಸಾರುವುದಕ್ಕೆ ಯಾವ ಗುಣಗಳು ಪೂರಕ ವಾಗಿರಬೇಕು ಹಾಗೂ ಸಂಸ್ಕಾರ, ಸಂಸ್ಕೃತಿಗಳಿಂದ ಜನರು ಯಾವ ರೀತಿ ಬದುಕಬೇಕೆನ್ನುವುದೇ ಹಿಂದುಧರ್ಮದ ಸಾರ. ಹಿಂದುಸ್ಥಾನದಲ್ಲಿರುವ ಪ್ರತಿಯೊಂದು ಜೀವಿಯು ಕೂಡ ತನ್ನದೇ ಆದ ವ್ಯಕ್ತಿತ್ವವನ್ನು ಸಾರುತ್ತಾ ಸಮಾಜದಲ್ಲಿ ಗುರುತಿಸಿಕೊಳ್ಳುತ್ತದೆ. ಆದರೆ ಜೀವಿಗಳಲ್ಲಿ ಬುದ್ದಿಜೀವಿಯೆನಿಸಿದ ಮಾನವ ಮಾತ್ರ ಪ್ರಾಣಿಗಳಿಗಿಂತ ಕಡೆಯಾದ ಮೌಲ್ಯಗಳನ್ನು ಬೆಳೆಸಿಕೊಂಡು, ಕೀಳುಮಟ್ಟಕ್ಕೆ ಇಳಿದಿದ್ದಾನೆ. ಶಿಕ್ಷಣ, ಕೃಷಿ, ಸಂಸ್ಕಾರ, ಸಂಸ್ಕೃತಿಯ ಮೇಲೆ ಹೊಡೆತ ಬಿದ್ದಿರುವುದಲ್ಲದೇ ಮದುವೆಯಲ್ಲಿಯೂ ಕೂಡ ವಿಚ್ಛೇದನ ಎನ್ನುವ ವೈರಸ್ ಆಕ್ರಮಿಸಿ ಹಿಂದುಧರ್ಮದಲ್ಲಿರುವ ಮದುವೆಯ ಸುಂದರ ಬಾಂದವ್ಯಕ್ಕೆ ಹುಳಿ ಹಿಂಡಿದಂತಾಗಿದೆ.
ಹಿಂದು ಧರ್ಮದಲ್ಲಿ ಸಾರಿರುವ ೧೬ಸಂಸ್ಕಾರಗಳಲ್ಲಿ ಮದುವೆ ವ್ಯಕ್ತಿಯೊಬ್ಬನ ಜೀವನಶ್ರೇಷ್ಟ ಅಂಗ. ಹಿಂದು ಸಂಪ್ರದಾಯದಂತೆ ಮದುವೆಯಲ್ಲಿ ನಾಂದಿಯಿಡುವುದು, ಅರಸಿನ ಎಣ್ಣೆ ಸವರುವುದು, ಎದುರುಗೊಳ್ಳುವುದು, ಮಾಲಾರ್ಪಣೆ, ಧಾರೆ, ಮಾಂಗಲ್ಯಕಟ್ಟುವುದು, ಕಾಲುಂಗುರತೊಡಿಸುವುದು, ಹಣೆಗೆ ಬೊಟ್ಟು, ಸಪ್ತಪದಿ, ಹೆಣ್ಣೊಪ್ಪಿಸುವುದು, ಆರತಾಕ್ಷತೆ, ವಧುಗೃಹ ಪ್ರವೇಶ, ಜಲಕೇಳಿ ಪ್ರಮುಖವಾದ ಅಂಶಗಳು.
ದಾಂಪತ್ಯ ಎನ್ನುವುದು ಎರಡು ವ್ಯಕ್ತಿಗಳ ಮಿಲನ ಅಲ್ಲ, ಯಾರನ್ನು ಪತಿಯಾಗಿ ಸ್ವೀಕಾರ ಮಾಡಬೇಕು ಎನ್ನುವುದು ನಿಶ್ಚಿತವಾಗಬೇಕು. ಪ್ರತಿಯೊಬ್ಬ ಹೆಣ್ಣುಮಗಳು ಯೌವನದಲ್ಲಿ ಪ್ರಣಯದ ಸಾರಥಿಯಾಗಿ, ನಡುವಿನಲ್ಲಿ ಹೆಗಲಿಗೆ ಹೆಗಲಾಗಿ, ಇಳಿವಯಸ್ಸಿನಲ್ಲಿ ಕೈಹಿಡಿದು ಸಲಹಬೇಕು ಎಂದು ಬಯಸುತ್ತಾಳೆ.ಹಿಂದು ಧರ್ಮದಲ್ಲಿರುವ ನಂಬಿಕೆಯಂತೆ ಜನ್ಮತಳೆಯುವುದಕ್ಕಿಂತ ಮುಂಚೆ ಗಂಡು-ಹೆಣ್ಣಿನ ಸಂಬಂಧ ಏರ್ಪಟ್ಟಿರುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂಸ್ಕೃತ ಶ್ಲೋಕವೊಂದು ಮನುಷ್ಯ ಸಂಬಂಧದ ಬಗ್ಗೆ ಈ ರೀತಿಯಾಗಿ ತಿಳಿಸುತ್ತದೆ.
``ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ
ಋಣ ಗಶ್ಚಂತೇ ಗಶ್ಚಂತೇ ಕಾಕತ್ರ ಪರಿಬೇದನಃ"
ಹೆಂಡತಿ ಮಕ್ಕಳು ಬಾಹ್ಯಪ್ರಪಂಚದಲ್ಲಿ ಋಣ ಇರುವವರೆಗೆ ಒಟ್ಟಿಗೆ ಇರುತ್ತಾರೆ. ಋಣದ ಅಂಶ ಯಾವಾಗ ಮುಗಿಯುತ್ತದೋ ಆಗ ಪ್ರಪಂಚವನ್ನೇ ಬಿಟ್ಟು ಹೋಗುತ್ತಾರೆ ಎನ್ನುವುದು ಸಾರಾಂಶವಾಗಿದೆ. ಪ್ರಸ್ತುತ ಸಮಾಜದಲ್ಲಿ ದಿನ ಬೆಳಗಾದರೆ ವಿಚ್ಚೇಧನಕ್ಕಾಗಿ ಹತ್ತಾರು ವ್ಯಾಜ್ಯಗಳು ನ್ಯಾಯಾಯಲದ ಮುಂದಿರುತ್ತದೆ. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಹೇಳುವ ಪ್ರಕಾರ ಈ ವರ್ಷ ನ.೨೪ರವರೆಗೆ ೫೫,೦೦೦ ಜೋಡಿಗಳು ವಿಚ್ಛೇಧನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಮುಂಬೈಯಲ್ಲಿ ೭,೫೦೦, ದೆಹಲಿಯಲ್ಲಿ ೯,೦೦೦ ಹಾಗೂ ಬೆಂಗಳೂರಿನಲ್ಲಿ ೩,೦೦೦ ಜೋಡಿ ವಿಚ್ಛೇದನಕ್ಕೆ ಮನಃ ಮಾಡಿರುವುದು ವರದಿಯಾಗಿದೆ. ಅವರೆಲ್ಲಾ ಸಂಸಾರ ಜೀವನವನ್ನು ನಡೆಸಿ ಅನುಭವವನ್ನು ಪಡೆದ ವ್ಯಕ್ತಿಗಳೆಂದು ಭಾವಿಸಿದರೆ ಅದು ತಪ್ಪು. ಸಂಸಾರ ನೌಕೆಯನ್ನು ಸಾಗಿಸಲಾರದೆ, ಬೇಸತ್ತು ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸುವ ನವವಿವಾಹಿತರು ನಮ್ಮ ಕಣ್ಣಮುಂದಿದ್ದಾರೆ. ಇಂದಿನ ಶಿಕ್ಷಣ ಪದ್ದತಿ ಅವರಲ್ಲಿರುವ ಸಹನೆ, ತಾಳ್ಮೆ, ಹೊಂದಿಕೊಂಡು ಬಾಳುವ ಗುಣ, ಸಮಾಜದ ಬಗ್ಗೆ ಕಾಳಜಿ ಹಾಗೂ ಮಾನವನಿಗೆ ಅವಶ್ಯಕವಾಗಿ ಯಾವ ಗುಣಗಳು ಬೇಕೊ ಅದನ್ನೆಲ್ಲಾ ಕಬಂಧ ಬಾಹುಗಳಿಂದ ಆಕ್ರಮಿಸಿಕೊಂಡಿದೆ. ಕೇವಲ ಸ್ವಾರ್ಥ, ಸ್ವ-ಹಿತ ಚಿಂತನೆಯೇ ಹೆಮ್ಮರವಾಗಿ ಬೆಳೆದಿದೆ. ನಾಲ್ಕು ಗೋಡೆಗಳ ಮದ್ಯೆ ಕುಳಿತು ನಾವು ಪಾಶ್ಚತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ.
ಕವಿ ಮಹಾಶಯರು ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳಿದ ಮಾತುಗಳು ಕೇವಲ ಹಿಂದಿನವರಿಗೆ ಮಾತ್ರ ಅನ್ವಯವಾಗುತ್ತಿತ್ತೆ ಎನ್ನುವ ಸಂಶಯ ಮೂಡುತ್ತದೆ. ನಗುಮೊಗದೊಂದಿಗೆ ಕಾಫಿ-ಟೀಯನ್ನು ಮಾಡಿಕೊಡುವ ಹಿರಿಯರ ಸಂಸಾರದ ಗುಟ್ಟೇನು? ಮಾತೆತ್ತಿದರೆ ಡೈವೋರ್‍ಸ್‌ಗೆ ಮನಮಾಡುವ ನವವಧುಗಳ ಪಾಡೇನು? ಯಾಕೆ ಹೀಗಾಡುತ್ತಿದ್ದೇವೆ...ನಾವು ಎಲ್ಲಿ ಎಡವುತ್ತಿರುವುದು... ಅದರ ಎಳೆಯನ್ನು ಹಿಡಿದು ಹೊರಟಾಗ ಸಿಗುವುದೇ ನಮ್ಮ ಗುರುಕುಲ ಶಿಕ್ಷಣ ಪದ್ದತಿಯ ಮೇಲೆ ಪೆಟ್ಟುಕೊಟ್ಟು, ಇಂಗ್ಲೀಷ್ ಶಿಕ್ಷಣ ಪದ್ದತಿಯನ್ನು ಅಳವಡಿಸಿದ್ದರಿಂದಾಗಿ ಇಂದು ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ಸ್ಫಷ್ಟ.
ಭಾರತ ಎನ್ನುವ ಹೆಸರು ಕೇಳಿದಾಕ್ಷಣ ದೇಹದಲ್ಲಿ ಒಂದು ರೀತಿಯ ರೋಮಾಂಚನ. ಆ ಹೆಸರಿನಲ್ಲಿ ಅಂಥ ಮಹತ್ವವಿದೆ. ಹಸಿದು ಬಂದವರಿಗೆ ಹಸಿವೆಯನ್ನು ತಣಿಸುವ ಅಮೃತಧಾರೆ.ಆಶ್ರಯವನ್ನು ಬೇಡಿಬಂದವರ ಪಾಲಿಗೆ ಆಶ್ರಯದಾತೆ. ಅನೇಕ ಪುಣ್ಯ ಪುರುಷರಿಗೆ ಜನ್ಮನೀಡಿ ಸಲಹುತ್ತಿರುವ ಜನ್ಮದಾತೆ,ಮಾತೃಸ್ವರೂಪಿಣಿ, ರಾಮಾಯಣ, ಮಹಾಭಾರತವೆನ್ನುವ ಮಹದೃಂತಗಳು ಸಾಕ್ಷಾತ್ಕಾರವಾದಂತ ಭವ್ಯಭೂಮಿ, ದೀರ ಶೂರರನ್ನು ಸಲಹಿದ ವಾತ್ಸಲ್ಯಮಯಿ, ದುಷ್ಟ-ಶಿಷ್ಟರನ್ನು ಸಮಾನವಾಗಿ ಕಂಡು ಸಲಹುತ್ತಿರುವ ತ್ಯಾಗಮಯಿ ನಮ್ಮ ದೇಶ.
ಭಾ-ಜ್ಞಾನ,ಪ್ರಕಾಶ: ರತ-ನಾಲ್ಕು ಕಡೆ ಬೆಳಕು ಪಸರಿಸುವುದು. ಮೂರು ಕಡೆ ನೀರಿನಿಂದ, ಒಂದು ಕಡೆ ನೆಲದಿಂದ ಕಂಗೊಳಿಸಿ, ತನ್ನದೇ ಆದ ವಿಶಿಷ್ಟತೆಯನ್ನು ಮೆರೆಯುತ್ತಿರುವ ದೇಶ. ಉತ್ತರದಲ್ಲಿ ಭಾರತಾಂಬೆಯ ಭವ್ಯವಾದ ಕಿರೀಟದಂತೆ ಶೋಭಿಸುವ ಹಿಮರಾಜ ನಗುತ್ತಿದ್ದರೆ, ದಕ್ಷಿಣದಲ್ಲಿ ಯಾವಾಗಲೂ ಮಾತೆಯ ಪಾದವನ್ನು ತೊಳೆಯುತ್ತಿರುವ ಸಮುದ್ರರಾಜನಿಂದ ಭಾರತಾಂಬೆ ನಿತ್ಯನೂತನವೂ ಶೃಂಗಾರ ಭರಿತಳಾಗಿದ್ದಾಳೆ.
ಭಾರತಭೂಮಿಯಲ್ಲಿ ಅದರಲ್ಲೂ ಹಿಂದು ಧರ್ಮದಲ್ಲಿ ಹುಟ್ಟಿ, ನಮ್ಮ ಸಂಸ್ಕೃತಿಯನ್ನು ಮೈದಳೆದು ಜೀವಸುವ ಭಾಗ್ಯ ಪುಣ್ಯವಂತರಿಗೆ ಮಾತ್ರ ಸಲ್ಲುತ್ತದೆ. ಅವಿಭಕ್ತ ಕುಟುಂಬದ ರಚನೆ, ಗುರು-ಶಿಷ್ಯರ, ತಂದೆ ತಾಯಿಯ ಸಂಬಂಧ, ಮದುವೆಯ ಬಂಧನ ಎಲ್ಲವೂ ಕೂಡ ಮಾದರಿಯಾಗಿತ್ತು. ನಮ್ಮ ಸಂಸ್ಕೃತಿಯನ್ನು ನಾಶಮಾಡುವುದಕ್ಕಾಗಿ ಮೆಕಾಲೆ ಇಂಗ್ಲೀಷ್ ಶಿಕ್ಷಣವನ್ನು ಜಾರಿಮಾಡಿದಾಗ ನಮ್ಮಲ್ಲಿ ವಿರೋಧವಾದರೂ ಹೊಸದನ್ನು ಕಲಿಯುತ್ತೇವೆ ಎನ್ನುವ ಕಿಂಚಿತ್ ಆಸೆ, ನಮ್ಮ ಸಂಸ್ಕೃತಿಯ ನಾಶವಾಗುತ್ತದೆ ಎಂದು ಯಾರು ಕೂಡ ಲೆಕ್ಕಿಸಿರಲಿಲ್ಲ.
ಭಾರತೀಯರು ಗುರುಕುಲ ಶಿಕ್ಷಣ ಪದ್ದತಿಯಿಂದ ಇಂಗ್ಲೀಷ್ ಶಿಕ್ಷಣಪದ್ದತಿಗೆ ಮಾರುಹೋದಾಗಲೇ ನಮ್ಮ ಸಂಸ್ಕೃತಿಯ ನಾಶಮಾಡುವಂಥ ಒಂದೊಂದೇ ಅಂಶಗಳು ಗೋಚರವಾಗ ತೊಡಗಿದವು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘೋರ ದುರಂತಗಳಿಂದ ಹಿಂದುಸಮಾಜ ಸಂಕಟದ ಸ್ಥಿತಿಯಲ್ಲಿದೆ. ತಂದೆ-ತಾಯಿಯ ಮೇಲಿದ್ದ ಗೌರವಗಳು , ಗುರು-ಹಿರಿಯರ ಮೇಲಿದ್ದ ಪೂಜ್ಯಭಾವನೆಗಳು ಮಾಯವಾಗುತ್ತ ಬಂದವು. ಹಿಂದಿನ ಕಾಲದಲ್ಲಿ ಅನಕ್ಷರಸ್ಥರಾಗಿದ್ದರೂ ಕೂಡ ತಂದೆ ತಾಯಿ, ಗುರು-ಹಿರಿಯರ ಮೇಲೆ ಗೌರವವನ್ನು ತಾಳಿದ್ದ ಹಿರಿಯರು ಈ ದುರಂತವನ್ನು ನೋಡಿ ಸಹಿಸಿಯಾರೆ? ಎನ್ನುವ ಅಂಜಿಕೆ ಎಲ್ಲರನ್ನು ಕಾಡುತ್ತದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಮತ್ತು ಅತಿಥಿದೇವೋಭವ ಎಂದು ಸಾರಿ, ಹಿಂದು ಧರ್ಮದಲ್ಲಿ ಮಹನೀಯ ಪೂಜ್ಯಭಾವನೆಗಳ ಸಾಕಾರಮೂರ್ತಿಗಳ ನಾಡಿನಲ್ಲಿ ಮದುವೆಯ ಬಗ್ಗೆ ಯೋಚಿಸುವಾಗ ನಾವು ಯಾವ ಸ್ಥಿತಿಗೆ ತಲುಪಿದ್ದೇವೆ. ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಮ್ಮ ಸಂಸ್ಕೃತಿಯನ್ನು ಮರೆತು ಅವರ ಸಂಸ್ಕೃತಿಗೆ ದಾಸರಾಗುತ್ತಿದ್ದೇವೆ.
ಹಿಂದು ಸಂಸ್ಕೃತಿ ಹಾಗೂ ಹಿಂದು ಮನೆಯ ಬಗ್ಗೆ ದೇಶದ ನಾನಾ ಕಡೆ ಪಸರಿಸುತ್ತಾ ಆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕ್ಷೇತ್ರಿಯ ಪ್ರಚಾರಕರಾದ ನ.ಕೃಷ್ಣಪ್ಪನವರು ಹೇಳಿದ ಎರಡು ಘಟನೆಗಳನ್ನು ಕೇಳಿದಾಗ ನಮ್ಮ ಸಂಸ್ಕೃತಿಯ ಮೌಲ್ಯ ತಿಳಿಯುತ್ತದೆ. ನಮ್ಮ ದೇಶದ ಹಿರಿಯರು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಅಲ್ಲಿರುವ ಪ್ರಸಿದ್ದ ಸ್ಥಳಗಳನ್ನು ತೋರಿಸಿ, ಕೊನೆಯಲ್ಲಿ ಸ್ಮಶಾನವನ್ನು ತೋರಿಸಲು ಕರೆದೊಯ್ಯುತ್ತಾರೆ. ಅಲ್ಲಿರುವಂಥ ಗೋರಿಯನ್ನೆಲ್ಲಾ ನೋಡುತ್ತಾ ಬರುವಾಗ ೨೫ವರ್ಷದ ತರುಣಿ ಸಮಾಧಿಯ ಮುಂದೆ ಕುಳಿತು ಬೀಸಣಿಗೆಯಿಂದ ಗಾಳಿ ಹಾಕುತ್ತಿದ್ದಳು. ಹಿರಿಯ ಅಧಿಕಾರಿಗೆ ಕೂತುಹಲ ತಾಳಲಾರದೆ ಅವಳಲ್ಲಿ ಪ್ರಶ್ನಿಸಿದಾಗ ಈ ಸಮಾಧಿ ನನ್ನ ಗಂಡನದು ಎನ್ನುವ ಉತ್ತರ ಕೇಳಿ ಸಂತೋಷವಾಗುತ್ತದೆ. ಹಿಂದು ಧರ್ಮದಲ್ಲಿರುವ ಗಂಡ ಹೆಂಡತಿಯ ಮಧುರವಾದ ಸಂಬಂಧ ಸಾವಿರಾರು ಮೈಲಿದೂರದವರೆಗೆ ಹರಡಿದೆ ಎಂದು ಸಂತೋಷ ಪಡುತ್ತಿರುವಾಗ ಆ ತರುಣಿಯೇ ಮಾತನ್ನು ಪ್ರಾರಂಬಿಸುತ್ತಾಳೆ. ನಾವಿಬ್ಬರೂ ಮದುವೆಗೆ ಮುಂಚೆ ಒಂದು ಒಪ್ಪಂದ ಮಾಡಿಕೊಂಡಿದ್ದೇವು. ನಮ್ಮಲ್ಲಿ ಯಾರೂ ಮುಂಚೆ ಸತ್ತರೂ ಸಮಾಧಿಗೆ ಬಳಿದ ಬಣ್ಣ ಒಣಗುವ ಮುಂಚೆ ಬೇರೆ ಮದುವೆ ಆಗುವ ಹಾಗಿಲ್ಲ.... ಅದಕ್ಕಾಗಿಯೇ ಬೀಸಣಿಗೆಯಿಂದ ಗಾಳಿ ಹಾಕಿ, ಒಣಗಿದ ನಂತರ ಇನ್ನೋದು ಗಂಡಿನ ಬೇಟೆಗೆ ಸಿದ್ದಳಾಗಿದ್ದಾಳೆ..ಈ ಸತಿ ಶಿರೋಮಣಿಗೆ ಎಂತಹ ಆತುರ ನೋಡಿ.
ಬೆಂಗಳೂರಿನ ಘಟನೆಗೆ ಇದಕ್ಕೆ ತದ್ವಿರುದ್ದ :
ಹಳ್ಳಿಯ ವಯಸ್ಸಾದ ಗಂಡ ಹೆಂಡತಿ ತಮ್ಮ ಆಪ್ತರ ಮಗಳಿಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮದುವೆಗೆ ಹೋದಾಗ ಅಲ್ಲಿ ಪುರುಷರಿಗೆ ಒಂದು ಕಡೆ ಹಾಗೂ ಮಹಿಳೆಗೆ ಇನ್ನೊಂದು ಕಡೆ ವ್ಯವಸ್ಥೆ ಮಾಡಿದ್ದರು.ಇಲ್ಲಿಯವರೆಗೆ ಒಬ್ಬರನ್ನು ಬಿಟ್ಟು ಊಟಮಾಡದ ಆ ದಂಪತಿಗಳು ಅನಿವಾರ್ಯವಾಗಿ ಬೇರೆ ತೆರಳಬೇಕಾಯಿತು. ಅಲ್ಲಿಯೂ ಕೂಡ ಅವರು ಸರಿಯಾಗಿ ಊಟಮಾಡದೇ, ಹೆಂಡತಿಯು ಯಜಮಾನರ ಚಿಂತೆಯಲ್ಲಿ, ಯಜಮಾನರು ಹೆಂಡತಿಯ ಚಿಂತೆಯಲ್ಲಿ ಹೇಗೋ ಊಟಮುಗಿಸಿದರೆನ್ನಿ.... ಇದು ನಮ್ಮ ಹಿಂದು ಸಂಸ್ಕೃತಿಯ ಅನ್ಯೋನ್ಯಭಾವ.
ಈ ಘಟನೆಗಳಲ್ಲಿ ಎರಡನೇಯದು ಹಳ್ಳಿಗಳಲ್ಲಿ ಕಂಡುಬಂದರೂ, ಯುವಜನತೆ ಮಾತ್ರ ಮೊದಲಿನ ಘಟನೆಯನ್ನು ಅನುಸರಿಸುತ್ತಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಮೂರು ಬಾರಿ ತಲಾಖ್ ಹೇಳಿದರೆ ಗಂಡ-ಹೆಂಡತಿಯ ಮಧ್ಯೆ ಯಾವುದೇ ಸಂಬಂಧವಿರುವುದಿಲ್ಲ. ಹೆಂಗಸರೆಂದರೆ ಕೇವಲ ಹೆರಿಗೆಯ ಯಂತ್ರಗಳು ಎಂದು ಸಾರುವ ಶಿಲಾಯುಗದ ಮೂಢನಂಬಿಕೆಗಳನ್ನು ಇಂದು ಕೂಡ ಆಚರಿಸುತ್ತಾ, ಮಹಿಳೆಯರನ್ನು ಕೇವಲ ಭೋಗದ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮದುವೆಯಾದ ಹೊಸತರಲ್ಲೆ ಅನ್ಯೋನ್ಯವಾಗಿರುವ ನವಜೋಡಿ, ಕ್ಷುಲ್ಲಕ ಕಾರಣಕ್ಕೆ ಕಟಕಟೆಯನ್ನು ಏರಿ ವಿಚ್ಚೇದನಕ್ಕೆ ಮನಃ ಮಾಡುತ್ತಿದ್ದಾರೆ. ಸಪ್ತಪದಿ ತುಳಿದು, ಜೀವನ ಪರ್ಯಂತ ಒಟ್ಟಿಗೆ ಇರುತ್ತೆವೆಂದು ಗುರುಹಿರಿಯರ ಸಮ್ಮುಖದಲ್ಲಿ ಮಾಂಗಲ್ಯವನ್ನು ಕಟ್ಟಿಸಿಕೊಂಡು ದಾಂಪತ್ಯಜೀವನಕ್ಕೆ ಕಾಲಿರಿಸಿ ಅದರಂತೆ ಯಾರು ಬದುಕುತ್ತಾರೋ ಅದುವೇ ಶ್ರೇಷ್ಟ ಹಿಂದುಸಮಾಜದ ಲಕ್ಷಣ. ಜೀವನದಲ್ಲಿ ವಿಚ್ಛೇದನ ಪಡೆದ ವ್ಯಕ್ತಿಗೆ ಸಮಾಜದಲ್ಲಿ ಸಿಗುವ ಮನ್ನಣೆಯಾದರೂ ಏನು? ದಾಂಪತ್ಯ ಜೀವನದಲ್ಲಿ ಸಾಧ್ವಿ-ಶಿರೋಮಣಿಯಂತೆ ಬದುಕಿ ಮಕ್ಕಳಿಗೆ ಪ್ರೇರಣೆಯಾಗಿ ಬದುಕಬೇಕು. ಯುವಜನತೆ ಸೀತೆ, ಸಾವಿತ್ರಿ,ದ್ರೌಪದಿ,ಅನುಸೂಯ,ಅರುಂದತಿಯರ ಗುಣಗಳನ್ನು ಬೆಳೆಸಿಕೊಂಡು ತಾಳ್ಮೆ, ಸಹನೆಯಿಂದ ಜೀವನ ನಡೆಸಿದ್ದೆ ಆದರೆ ಹಿಂದು ಸಮಾಜದ ಮೇಲೆ ನಡೆಯಬಹುದಾದ ಘನಘೋರ ದುರಂತವನ್ನು ತಡೆಯಬಹುದು.ಒಮ್ಮೆ ನಮ್ಮೆಲ್ಲರ ಅಂತರಂಗವನ್ನು ಕೆದಕಿನೊಡೋಣ......
-ಕೆ.ಎಸ್.ಶೆಟ್ಟಿ

ಮಂದಾರ್ತಿ ದುರ್ಗೆ




ಕಾರ್ತಿಕ ಮಾಸದ ಶುಭಮೂಹೂರ್ತದಲ್ಲಿ ಆರಂಭಗೊಂಡ ಐದು ಮೇಳಗಳ ಸೇವೆ:
ತುಳುನಾಡಿನ ಗಂಡುಕಲೆ ಯಕ್ಷಗಾನ. ಈಗಾಗಲೇ ಕೆಲವು ಮೇಳಗಳು ತಿರುಗಾಟವನ್ನು ಪ್ರಾರಂಭಮಾಡಿವೆ. ಅಂತೆಯೇ ತುಳುನಾಡು ಹಾಗೂ ಮಲೆನಾಡಿನಲ್ಲಿ ತನ್ನ ಮಹಿಮೆಯನ್ನು ಸಾರಿ, ಭಕ್ತರ ಕೈಯಿಂದ ಸೇವಾರೂಪದಲ್ಲಿ ಹರಕೆಯನ್ನು ಪಡೆಯುತ್ತಿರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಕೂಡ ಒಂದು. ಕಳೆದ ಮಳೆಗಾಲದಲ್ಲಿ ತಮ್ಮ ಗೂಡನ್ನು ಸೇರಿದ ಮೇಳದ ಗಣಪತಿ ಶುಕ್ರವಾರ ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಐದು ಮೇಳಗಳ ಗಣಪತಿ ಮೂರ್ತಿಗಳು ಗಣಹೋಮದೊಂದಿಗೆ ವಿಶೇಷ ಪೂಜೆಯನ್ನು ಪಡೆದು ರಾತ್ರಿ ಚೌಕಿಯಲ್ಲಿ ಪೂಜೆಯನ್ನು ಸ್ವೀಕರಿಸಿ ಬೆಳಕಿನ ಸೇವೆಯನ್ನು ಪಡೆದು ಸತತ ಆರು ತಿಂಗಳುಗಳ ಕಾಲ ಭಕ್ತರ ಸೇವೆಯನ್ನು ತೀರಿಸಲು ಅಣಿಯಿಟ್ಟವು.
ದೇವಳದ ರಥಬೀದಿಯಲ್ಲಿ ನಿರ್ಮಿಸಿದ ರಂಗಸ್ಥಳಗಳು ವಿದ್ಯುತ್‌ನಿಂದ ಹಾಗೂ ಪುಷ್ಪಗಳಿಂದ ಅಲಂಕೃತಗೊಂಡಿದ್ದವು. ಕರ್ನಾಟಕ ದತ್ತುನಿಧಿ ಪ್ರಾಧಿಕಾರ ಮಂದಾರ್ತಿ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಎನ್ನುವ ನಾಮಾಂಕಿತದೊಂದಿಗೆ ಮೇಳದ ಐದು ಬಸ್ಸುಗಳು ಸಿದ್ದವಾಗಿ, ಅವುಗಳು ಕೂಡ ಪೂಜೆಯನ್ನು ಪಡೆದವು.ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ , ಊರಿನ ಗಣ್ಯರು ಮತ್ತು ದೇವಸ್ಥಾನದ ಸಿಬ್ಬಂದಿಗಳು, ಕರಾವಳಿ ಹಾಗೂ ಮಲೆನಾಡಿನ ವಿವಿಧ ಭಕ್ತರು ದೇವಿಯ ಸಾನಿಧ್ಯದಲ್ಲಿ ನಡೆದ ಪ್ರಥಮ ದೇವರ ಸೇವೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಂದು ಮೇಳದಲ್ಲಿ ೨೦ ಕಲಾವಿದರು, ಹಿಮ್ಮೇಳ ಮತ್ತು ಕೆಲಸಗಾರರು ಸೇರಿ ೪೦ ಮಂದಿಯಂತೆ ೫ಮೇಳಗಳ ೨೦೦ ಜನ ತಮ್ಮ ಸೇವಾ ಕೈಂಕರ್ಯದಲ್ಲಿ ಪಾಲ್ಗೊಂಡರು.
ಚಾರಿತ್ರಿಕ ಹಿನ್ನೆಲೆ:
ನಾಗಲೋಕವನ್ನು ಆಳುತ್ತಿದ್ದ ಶಂಖಚೂಡನಿಗೆ ಹಲವು ವರ್ಷಗಳಿಂದ ಮಕ್ಕಳಾಗದೇ ಶಿವನ ಮೊರೆಹೋದಾಗ,ಅವನ ಅನುಗ್ರಹದಿಂದ ಐವರು ಮಕ್ಕಳು ಜನಿಸುತ್ತಾರೆ. ದೇವರ ಅನುಗ್ರಹದಿಂದ ಜನಿಸಿದ ಕಾರಣ ಬಹಳ ಮುದ್ದಿನಿಂದ ಸಾಕಿ ಬೆಳೆಸಿ, ದೇವರತಿ, ನಾಗರತಿ, ಚಾರುರತಿ, ಮಂದರತಿ ಹಾಗೂ ನೀಲರತಿ ಎಂದು ಅವರ ರೂಪಕ್ಕನುಗುಣವಾಗಿ ಹೆಸರಿಟ್ಟನು. ಶಂಖಚೂಡನು ಮಕ್ಕಳ ಮದುವೆಯನ್ನು ಶಿವನಕುಮಾರ ಷಣ್ಮುಕನೊಂದಿಗೆ ಮಾಡುವ ಇಚ್ಚೆಯನ್ನು ಮಕ್ಕಳಲ್ಲಿ ವ್ಯಕ್ತಪಡಿಸಿ, ಸಂತೋಷ ಪಡುತ್ತಿರುವಾಗ ಹೃದಯಾಘಾತದಿಂದ ಮರಣಹೊಂದುತ್ತಾನೆ. ಹೆಣ್ಣುಮಕ್ಕಳೇ ಮುಂದೆ ನಿಂತು ತಂದೆಯ ಅಂತ್ಯಸಂಸ್ಕಾರವನ್ನು ಮಾಡಿ ಹಿರಿಯವಳಾದ ದೇವರತಿಯೇ ನಾಡಿನ ಅಧಿಕಾರವನ್ನು ಸ್ವೀಕರಿಸಿ ತಂಗಿಯರನ್ನು ನೋಡಿಕೊಳ್ಳುತ್ತಾಳೆ. ತಂದೆಯ ಆಸೆಯನ್ನು ನೆರವೇರಿಸುವುದಕ್ಕಾಗಿ ಕೈಲಾಸಗಿರಿಯನ್ನು ಸೇರಿ ಷಣ್ಮುಕನೊಂದಿಗೆ ಮದುವೆ ಆಗಬೇಕು ಎಂದು ಬರುತ್ತಿರುವಾಗ ಗಿರಿಯ ಬುಡದಲ್ಲಿ ನಂದಿ ತಡೆದು, ಅಕಾಲದಲ್ಲಿ ಶಿವನನ್ನು ಸಂಧಿಸುವ ಅವಕಾಶ ನೀಡದೇ ವಾದ-ವಿವಾಧಗಳಾಗಿ ಕ್ರೋಧಗೊಂಡ ನಾಗಕನ್ಯೆಯರು ಇಂಥ ಪವಿತ್ರವಾದ ಕೈಲಾಸಬೆಟ್ಟದಲ್ಲಿ ನೀವಿರಲು ಯೋಗ್ಯನಲ್ಲವೆಂಬ ತೀರ್ಮಾನದಿಂದ ಅಸುರಗುಣಗಳು ತಾಂಡವವಾಡುತ್ತಿರುವುದರಿಂದ ನೀನು ಭೂಲೋಕದಲ್ಲಿ ನರಭಕ್ಷಕನಾಗಿ ಜನಿಸು ಎಂದು ಶಾಪವನ್ನು ನೀಡುತ್ತಾರೆ. ಅಂತೆಯೇ ನಂದಿಯು ಕ್ರೋಧಗೊಂಡು ನೀವು ಯಾವ ಇಚ್ಚೆಯನ್ನು ಇರಿಸಿಕೊಂಡು ಇಲ್ಲಿಯವರೆಗೆ ಬಂದಿದ್ದಿರೋ ಅದು ಫಲಿಸದೇ ಹೋಗಲಿ ಮತ್ತು ಭೂಲೋಕದಲ್ಲಿ ಬೇರೆ ಬೇರೆಯಾಗಿ ಬಿದ್ದಿರಿ ಎನ್ನುವ ಶಾಪದಿಂದ ಭೂಲೋಕಕ್ಕೆ ಬರುತ್ತಾರೆ. ಧರೆಯಲ್ಲಿ ಮುನಿಯಿಂದ ಮತ್ತೆ ಶಾಪವನ್ನು ಪಡೆದು ದೇವವರ್ಮ ಎನ್ನುವ ರಾಜನಿಂದ ರಕ್ಷಣೆ ಪಡೆಯುತ್ತಾರೆ. ಅವನ ಉತ್ತರೀಯದಲ್ಲಿ ಕಟ್ಟಿ ಕಾಡಿನ ಮಾರ್ಗದಲ್ಲಿ ಸಾಗುತ್ತಿರುವಾಗ ಹಿರಿಯವಳಾದ ದೇವರತಿ ನೆಲೆನಿಂತ ಸ್ಥಳವನ್ನು ಅರಸನಕಾನು ಈಗ ಅರಸಮ್ಮಕಾನು ಎಂದು ಪ್ರಸಿದ್ದಿ ಪಡೆದಿದೆ. ನಾಗರತಿಯು ನಾಗೇರ್‍ತಿಯಲ್ಲಿ, ಚಾರುರತಿ ಚೋರಾಡಿಯಲ್ಲಿ , ಮಂದಗಮನೆ ಮಂದರತಿಯು ಮಂದಾರ್ತಿಯಲ್ಲಿ ಮತ್ತು ನೀಲರತಿಯು ನೀಲಾವರದಲ್ಲಿ ನೆಲೆಗೊಳ್ಳುತ್ತಾರೆ. ದೇವವರ್ಮನು ವಾರಾಹಿ ನದಿಯಲ್ಲಿರುವ ದೇವಿಯ ಮೂರ್ತಿಯನ್ನು ತಂದು ಸುಂದರ ಗುಡಿಯನ್ನು ನಿರ್ಮಿಸುತ್ತಾನೆ. ನಾಗನನ್ನು ಕೊಂದ ಪಾಪದಿಂದ ಕುಷ್ಠರೋಗದಿಂದ ನರಳುತ್ತಿದ್ದ ಸುಶರ್ಮ ಮಂದಾರ್ತಿಗೆ ಬಂದು ಪವಿತ್ರ ಕೆರೆಯಲ್ಲಿ ಸ್ಥಾನ ಮಾಡಿದಾಗ ರೋಗವೆಲ್ಲಾ ವಾಸಿಯಾಗಿ ಅಲ್ಲಿಯೇ ನೆಲೆನಿಂತು ಪೂಜೆಯನ್ನು ಕೈಗೊಳ್ಳುತ್ತಾನೆ. ಅನೇಕ ರಕ್ಕಸರ ಮರ್ಧನ ಮಾಡಿ, ಭಕ್ತರನ್ನು ರಕ್ಷಿಸಿ ಶ್ರೀದೇವಿಯು ಪ್ರಸಿದ್ದಿಯನ್ನು ಪಡೆಯುತ್ತಾಳೆ.
ಸೂರ್ಗೋಳಿ ಅಂತು ಎನ್ನುವ ಕಳ್ಳ ಶ್ರೀಮಂತರ ಹಾಗೂ ದೇವಸ್ಥಾನದ ಕಳ್ಳತನವನ್ನು ಮಾಡಲು ತಂಡವನ್ನು ನಿರ್ಮಿಸಿಕೊಂಡಿದ್ದ. ಆನೆಗುಡ್ಡೆಯ ವಿನಾಯಕ ದೇವಸ್ಥಾನಕ್ಕೆ ಹೊದಾಗ ಯಾವ ರೀತಿ ಪ್ರಯತ್ನ ಮಾಡಿದರೂ ಒಳಗಡೆ ಪ್ರವೇಶ ಮಾಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಪ್ರಯತ್ನ ಪಟ್ಟಾಗ ಅಶರೀರವಾಣಿಯಂತೆ ಒಳಗಡೆ ಪ್ರವೇಶ ಮಾಡಿದಾಗ ಯಾವ ವಸ್ತು ಕಣ್ಣಿಗೆ ಕಾಣುತ್ತದೋ ಅದನ್ನು ತೆಗೆದುಕೊಂಡು ಹೋಗು ಎನ್ನುವ ನುಡಿಯನ್ನು ಕೇಳಿ, ಕೈಗೆ ಸಿಕ್ಕಿದ ಬೆತ್ತದ ಬುಟ್ಟಿಯನ್ನು ಹೊತ್ತು ತರುತ್ತಾರೆ. ನಡೆದುಕೊಂಡು ಬರುವಾಗ ಪೆಟ್ಟಿಗೆ ಭಾರವಾಗುವುದಕ್ಕೆ ಪ್ರಾರಂಭವಾಗಿ ಬಂಡೆಕಲ್ಲಿನ ಮೇಲೆ ಇಟ್ಟು ವಿಶ್ರಾಂತಿ ಪಡೆದು, ಪುನಃ ಅಲ್ಲಿಂದ ತೆಗೆಯಲು ಸಾಧ್ಯವಾಗದೇ ಪೆಟ್ಟಿಗೆ ಬಿಚ್ಚಿನೋಡುತ್ತಾರೆ. ಅಲ್ಲಿದ್ದ ಗಣಪತಿ ಮೂರ್ತಿಯನ್ನು ಅಲ್ಲಿಯೇ ಪ್ರತಿಷ್ಠಾಪಿಸಿ, ಭಾರವಾಗಿ ಇಳಿಸಿದ ಕಾರಣ ಭಾರಾಳಿ ಎನ್ನುವ ಹೆಸರಿಟ್ಟು ಖ್ಯಾತಿ ಪಡೆಯಿತು. ಉಳಿದ ಬೆಳ್ಳಿಯ ಗೆಜ್ಜೆಯನ್ನು ಹಿಡಿದು ಮಂದಾರ್ತಿ ಸ್ಥಳಕ್ಕೆ ಬಂದಾಗ ಗೆಜ್ಜೆ ಹಿಡಿದವರು ನರ್ತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆಗ ದೇವರ ನುಡಿಯಂತೆ, ಸೂರ್ಗೋಳಿ ಅಂತುವಿನಿಂದ ಪ್ರಾರಂಭವಾದ ಗೆಜ್ಜೆ ಸೇವೆ ಅಥವಾ ಬೆಳಕಿನ ಸೇವೆ ಇಂದು ಭಕ್ತರ ಹರಕೆಯನ್ನು ತೀರಿಸುತ್ತ ಬಂದಿದೆ. ಕಳ್ಳನಿಂದ ಪ್ರಾರಂಭವಾದ ಯಕ್ಷಗಾನ ಮೇಳಗಳು ಇಂದು ಕರಾವಳಿ ಹಾಗೂ ಮಲೆನಾಡ ಪ್ರದೇಶಗಳಲ್ಲಿ ಅಪಾರ ಜನಮನ್ನಣೆಯನ್ನು ಪಡೆದು ೫ ಮೇಳಗಳಾಗಿ ಶುಕ್ರವಾರದ ಶುಭಮೂಹೂರ್ತದಲ್ಲಿ ಕಲಾಮಾತೆಯ ಸೇವೆಗಾಗಿ, ಭಕ್ತರ ಬೆಳಕಿನ ಸೇವೆಯನ್ನು ಪೂರೈಸಲು ಸಿದ್ದವಾಗಿದ್ದವು.
ಮಂದರತಿಯನ್ನು ನಂಬಿದ ಭಕ್ತರು, ಮನದ ಬೇಗುದಿಯನ್ನು ಪರಿಹರಿಸಲು, ಮಕ್ಕಳಾಗದೇ ಜೀವನದಲ್ಲಿ ಪರಿತಪಿಸುತ್ತಿವವರು, ಆಪತ್ಕಾಲದಲ್ಲಿ ಹೇಳಿಕೊಂಡ ಹರಕೆಯೇ ಬೆಳಕಿನ ಸೇವೆ. ಅವರ ಕಷ್ಠಗಳೆಲ್ಲಾ ಪರಿಹಾರವಾದ ನಂತರ, ಸೇವಾರೂಪದಲ್ಲಿ ಬೆಳಕಿನ ಸೇವೆಯನ್ನು ಭಕ್ತರು ನೀಡುತ್ತಾರೆ. ಈಗಾಗಲೇ ೨೦೨೦ರವರೆಗೆ ಮುಂಗಡ ಸೇವೆಯ ಬುಕ್ಕಿಂಗ್ ಆಗಿದ್ದು, ಐದು ಮೇಳಗಳಿಂದ ಸೇವೆಯನ್ನು ಪೂರೈಸಲು ಕಷ್ಠವಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಕಾಲಕ್ಕೆ ತಕ್ಕ ಬದಲಾವಣೆ:
೧೯೭೫ರಲ್ಲಿ ಮೇಳಕ್ಕೆ ಬಸ್ಸುಗಳಿರಲಿಲ್ಲ. ಮೇಳದ ಪೆಟ್ಟಿಗೆಯನ್ನು ತಲೆಯ ಮೇಲಿಟ್ಟುಕೊಂಡು ನಡೆದೆ ಹೋಗಬೇಕಾಗಿತ್ತು. ಎತ್ತರದ ಸ್ಥಳದಲ್ಲಿ ಅಥವಾ ಮರದ ಕೊಂಬೆಯಿರುವಲ್ಲಿ ಇಟ್ಟು, ದೇಹದ ದಣಿವನ್ನು ನಿವಾರಿಸುತ್ತಿದ್ದೇವು. ಜೊತೆಗಾರರಿಗೆ ದಾರಿ ತಿಳಿಯುವುದಕ್ಕಾಗಿ ಮರದ ಸೊಪ್ಪುಗಳನ್ನು ರಸ್ತೆಯಲ್ಲಿ ಹಾಕುತ್ತಿದ್ದೆವು. ಈಗಿನಂತೆ ಜನರೇಟರ್‌ನ ವ್ಯವಸ್ಥೆ ಇರಲಿಲ್ಲ. ರಾತ್ರಿಯಿಂದ ಬೆಳಗಿನವರೆಗೆ ದೀವಟಿಗೆ ಬೆಳಕಿನಲ್ಲಿ ಯಕ್ಷಗಾನ ಮಾಡುತ್ತಿದ್ದೆವು. ಈಗ ಹಿಂದಿನ ಕಲಾವಿದರಿಗೆ ಹೋಲಿಸಿದರೆ, ತುಂಬಾ ಬದಲಾವಣೆಯಾಗಿದೆ ಎಂದು ಔಪಚಾರಿಕವಾಗಿ ಹುಣ್ಸೆಮಕ್ಕಿ ಬಸವ ಹೇಳಿದರು.
-ಸಂದೇಶ ಶೆಟ್ಟಿ ಆರ್ಡಿ



ಗಂಡ ಸತ್ತರೂ ಮಂಗಳಸೂತ್ರ ತೆಗೆಯೊಲ್ಲ ಎನ್ನುವ ಮಹಿಳಾಮಣಿಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಜನಾರ್ಧನ ಪೂಜಾರಿ
ಮಂಗಳೂರಿನ ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ಕರ್ನಾಟಕದಲ್ಲಿ ಪ್ರಸಿದ್ದಿಯನ್ನು ಪಡೆದು, ಮಿನಿ ಮೈಸೂರು ಎನ್ನುವ ಹೆಸರನ್ನು ಗಳಿಸಿದೆ. ದಾರಾವಾಹಿಗಳ ಪರಿಚಯ ಗೀತೆಯಲ್ಲಿ ಹಾಗೂ ಸಿನಿಮಾ ಚಿತ್ರಿಕರಣದಲ್ಲಿ ಈ ದೇವಳದ ಮುಖಮಂಟಪ ಕಾಣಿಸಿಕೊಂಡಿದೆ. ಗೋಕರ್ಣನಾಥ ಜನತೆಯ ಕಷ್ಟವನ್ನು ದೂರಗೊಳಿಸಿ, ಅನೇಕ ಭಕ್ತರ ಮನದಲ್ಲಿ ನೆಲೆಯಾಗಿದ್ದಾನೆ. ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಂತೆಯೇ ಸೇವಾ ಹಾಗೂ ಸಮಾಜಕಾರ್ಯಗಳಿಂದ ವಿದೇಶಿಯರು ಆಕರ್ಷಿತರಾಗಿದ್ದಾರೆ. ದೇಶದ ಮೂಲೆಯಲ್ಲಿಯೂ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಕೆಲವರು ಮನಸ್ಸಿನ ನೆಮ್ಮದಿಗಾಗಿ ಮದಿರೆಯ ಮತ್ತಿನಲ್ಲಿ ತೂರಾಡಿದರೆ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಬೃಹತ್ ಹಿಂದು ಸಮಾಜದಲ್ಲಿರುವ ಕೆಲವೊಂದು ಅನಿಷ್ಟಪದ್ದತಿಗಳ ಬದಲಾವಣೆ ಕಾರ್ಯ ನಡೆದಿದೆ. ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಕಲ್ಪಿಸುವಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಅವರ ಕಾರ್ಯ ಮಾತ್ರ ಶ್ಲಾಘನೀಯವಾದುದು.....
ಭಾರತದ ಜೀವವ್ಯವಸ್ಥೆಯ ಸಂಬಂಧ ಹಾಗೂ ಕುಟುಂಬ ನಿರ್ವಹಣೆ ವ್ಯವಸ್ಥೆಯಿಂದ ಪ್ರಪಂಚದಲ್ಲಿರುವ ಎಲ್ಲಾ ದೇಶಗಳಿಗೂ ಮಾದರಿಯಾಗಿದೆ. ಅಪ್ಪ-ಅಮ್ಮ ಎನ್ನುವ ಪ್ರಾಥಮಿಕ ಕುಟುಂಬ ವ್ಯವಸ್ಥೆ ದೇಶದ ಎಲ್ಲಾ ಭಾಷೆಗಳನ್ನು ಮಾತನಾಡುವ ಯಾವುದೇ ಧರ್ಮವನ್ನು ಅವಲಂಬಿಸಿದ ಜನರಲ್ಲೂ ಕೂಡ ಈ ಸಂಬಂಧವಿದೆ. ಮನುಷ್ಯನ ಭಾವನೆಗಳು ಭಾಷೆಯಲ್ಲಿ ಅಡಕವಾಗಿದೆ. ತಕ್ಷಣ ಅರಳುವ ಭಾವನೆಗಳು ಅದ್ಬುತವಾದ ಶಕ್ತಿಯನ್ನು ಹೊರಹಾಕುತ್ತದೆ. ಸಸ್ಯಸಂಪತ್ತಿಗೆ ಆದಾರಪ್ರಾಯವಾದ ಭೂಮಿಯಲ್ಲಿ ಪ್ರತಿಯೊಂದು ಪ್ರಾಣಿಗಳಿಗೂ ವಿಶಿಷ್ಟ ತೆರನಾದ ಸಂಬಂಧವಿದೆ. ಮನಸ್ಸುಗಳ ಆಚೆ ಒಂದು ಅವ್ಯಕ್ತವಾದ ಶಕ್ತಿಯಿದೆ ಅದನ್ನು ಗುರುತಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕಿದೆ.
ತಾಯಿ-ಮಗುವಿನ ಸಂಬಂಧ ಮಗು ಲೋಕದ ಬೆಳಕನ್ನು ಕಾಣುವುದಕ್ಕಿಂಥ ಮುಂಚೆನೇ ಅವ್ಯಕ್ತವಾಗಿರುತ್ತದೆ. ಪ್ರಪಂಚದಲ್ಲಿ ಹುಟ್ಟಿದ ಯಾವುದೇ ಜೀವಿಯಾದರೂ ಅವುಗಳ ಮದ್ಯೆ ವಿಶಿಷ್ಟ ತೆರನಾದ ಸಂಬಂಧಗಳು ನಿರ್ಮಿಸಲ್ಪಟ್ಟಿರುತ್ತದೆ. ಸಂಬಂಧಗಳು ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸಲು ಸಹಕಾರಿಯಾಗುತ್ತದೆ. ಹುಟ್ಟಿನಿಂದ ಬರುವ ಸಂಬಂಧಗಳು ಹಾಗೂ ಹುಟ್ಟಿದ ನಂತರದ ಸಂಬಂಧಗಳು ಎನ್ನುವುದಾಗಿ ವಿಂಗಡಿಸಬಹುದು. ತಂದೆ-ತಾಯಿಯ, ಒಡಹುಟ್ಟಿದವರ ಸಂಬಂಧ ಹುಟ್ಟುವಾಗಲೇ ಬೆಸೆಯಲ್ಪಟ್ಟಿರುತ್ತದೆ ಹಾಗೂ ಗಂಡ-ಹೆಂಡತಿ, ಗುರುವಿನ ಸಂಬಂಧ ಜೀವತಳೆದ ನಂತರದವು. ಸಮಾಜದಲ್ಲಿ ಸಂಬಂಧಗಳು ಉಳಿಯಬೇಕಾದರೆ ಶಬ್ದಗಳು ಅರಳಬೇಕು. ಮಕ್ಕಳಿಗೆ ವಿವರಿಸುವಾಗ ಪುರಾಣ ಸ್ತ್ರೀ-ಪುರುಷರ ಉದಾಹರಣೆ ನೀಡುತ್ತೇವೆ. ಹೀಗೆ ಪ್ರತಿಯೊಂದು ವಸ್ತುವನ್ನು ಉದಾಹರಣೆ ನೀಡುವ ನಾವುಗಳು ಕೆಲವೊಮ್ಮೆ ಅಲ್ಪಜ್ಞಾನಿಗಳಂತೆ ವರ್ತಿಸುತ್ತಿದ್ದೇವೆ ಎನ್ನುವುದಂತೂ ಸ್ಪಷ್ಟ....
ಕುಕ್ಕೆ ಸುಬ್ರಹ್ಮಣ್ಯ ಮತ್ತು ನಾಡಿನ ಇತರ ಕೆಲವು ದೇವಳದಲ್ಲಿ ಪ್ರಚಲಿತವಿರುವ ಮಡೆಸ್ನಾನ ಪದ್ದತಿಯನ್ನು ಅನಾಗರಿಕ ಮತ್ತು ಜೀವವಿರೋಧಿ ಎಂದು ಕೆಲವರು ಹೇಳಿದ್ದಾರೆ. ಧಾರ್ಮಿಕ ಕ್ಷೇತ್ರಗಳಲ್ಲಿ ಪುರೋಹಿತ ಶಾಹಿಗಳು ಉಂಡು ಎದ್ದ ಎಲೆಗಳ ಮೇಲೆ ಉರುಳಾಡುವ ಮಡೆಸ್ನಾನವನ್ನು ಸರಕಾರ, ಪೇಜಾವರ ಶ್ರೀಗಳು, ವೀರೇಂದ್ರ ಹೆಗ್ಗಡೆಯವರಂಥ ಧಾರ್ಮಿಕ ಮುಖಂಡರು ಸಮರ್ಥಿಸಿಕೊಂಡಿದ್ದಾರೆ ಎಂದು ನೀಡುಮಾಮಿಡಿ ಮಾನವ ಧರ್ಮಪೀಠದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ದಾವಣಗೆರೆಯಲ್ಲಿ ಇತ್ತೀಚಿಗೆ ಹೇಳಿಕೆಯನ್ನು ನೀಡಿದ್ದಾರೆ.
ಒಂದು ಧರ್ಮಪೀಠದಲ್ಲಿ ಕುಳಿತು ಸಮಾಜದಲ್ಲಿರುವ ಕಂಠಕಗಳನ್ನು ಸರಿಯಾಗಿ ತುಲನೆಮಾಡಿ, ನ್ಯಾಯಸಮ್ಮತವಾದ ತೀರ್ಮಾನ ಕೈಗೊಳ್ಳಬೇಕಾದ ಸ್ವಾಮಿಗಳು ಈ ತೆರನಾಗಿ ಮಾತನಾಡುವುದು ತೆರವೇ? ಅವರು ಸಣ್ಣ ಮಕ್ಕಳಂತೆ ವರ್ತಿಸುತ್ತಿರುವುದನ್ನು ನೋಡಿದರೆ ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನ ಸೃಷ್ಠಿಯಾಗುತ್ತದೆ.
ಬ್ರಾಹ್ಮಣರು ಎಂಜಲೆಲೆಯ ಮೇಲೆ ಯಾವತ್ತಾದರೂ ಉರುಳಾಡಿ ಎಂದು ಹೇಳಿಕೆ ನೀಡಿದ್ದಾರೆಯೇ? ಅಥವಾ ದೇವಳದ ಸಂಪ್ರದಾಯ ಈ ರೀತಿಯಾಗಿದೆ ಎಂದು ಮುಚ್ಚಳಿಕೆ ಬರೆದಿದ್ದೇಯೇ? ಸಾವಧಾನವಾಗಿ ಅಲೋಚನೆ ಮಾಡಿದಾಗ ಯಾರು ಮಡೆಸ್ನಾನವನ್ನು ಕೈಗೊಂಡಿದ್ದಾರೋ ಅವರೆಲ್ಲಾ ವಿದ್ಯಾವಂತರೇ? ಅನಕ್ಷರಸ್ಥನಾದರೂ ಅವನಿಗೆ ಅಲೋಚಿಸಿ, ಸ್ವಂತ ನಿರ್ಧಾರವನ್ನು ಕೈಗೊಳ್ಳುವಂಥ ಸ್ವಾತಂತ್ರ್ಯವಿದೆ. ದೇವರ ಮೇಲಿನ ಭಯ ಅಥವಾ ಭಕ್ತಿಯಿಂದ, ಜೀವಿತದಲ್ಲಿ ಮಾಡಿದ ಪಾಪದ ಪರಿಹಾರಕ್ಕಾಗಿಯೋ ಅಥವಾ ಮನಸ್ಸಿನ ನೆಮ್ಮದಿಗಾಗಿ ಹರಕೆಯನ್ನು ಹೊರುತ್ತಾರೆ. ಯಾವತ್ತು ಕೂಡ ಸರ್ವಾಧಿಕಾರತ್ವದಿಂದ ನೀವು ಈ ರೀತಿ ಮಾಡಬೇಕೆಂದು ಯಾವ ದೇವಳದ ಅಧಿಕಾರ ಮಂಡಳಿಯು ಹೇಳಿಲ್ಲ....
ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ವಿಷಯಗಳನ್ನು ನಾವು ಯಾವ ರೀತಿಯಾಗಿ ತೆಗೆದುಕೊಳ್ಳುತ್ತೇವೆ ಎನ್ನುವುದು ಅವರ ಮನಸ್ಸಿಗೆ ಬಿಟ್ಟದ್ದು. ಮನವೆನ್ನುವುದು ಒಂದು ದೊಡ್ಡ ಬುಟ್ಟಿ. ಆ ಬುಟ್ಟಿಯಲ್ಲಿ ಮಲ್ಲಿಗೆ ಹೂವನ್ನಾದರೂ ತುಂಬಿಸಿಕೊಳ್ಳಬಹುದು. ಮಾಲಿನ್ಯವನ್ನಾದರೂ ತುಂಬಿಸಿಕೊಳ್ಳಬಹುದು. ಮನದಲ್ಲಿ ಒಳ್ಳೆಯ ಗುಣಗಳು ಹುಟ್ಟುತ್ತವೆ. ಕೆಟ್ಟ ಗುಣಗಳು ಹುಟ್ಟುತ್ತವೆ. ಒಳ್ಳೆಯ ಗುಣಗಳನ್ನು ಬೆಳಿಸಿಕೊಂಡು ಅಂತೆಯೇ ಜೀವನಪಥದಲ್ಲಿ ಸಾಗಿದರೆ ಉತ್ತಮ ವ್ಯಕ್ತಿಯಾಗುತ್ತಾನೆ. ಕೆಟ್ಟಗುಣಗಳಿಂದ ಪ್ರಭಾವಿತನಾಗಿ ಅದನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಹೋದರೆ ಆತ ಅಧೋಗತಿ ಹೊಂದುತ್ತಾನೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಾದರೆ, ಸಮಾಜದಲ್ಲಿಯೂ ಕೂಡ ಯಾವ ವಿಷಯವನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆಯೋ ಅದರ ಮೇಲೆ ಸಮಾಜದ ಸ್ವಾಸ್ಥ್ಯ ಅಡಗಿರುತ್ತದೆ.
ಹಿಂದು ಧರ್ಮದಲ್ಲಿ ಅನಿಷ್ಟ ಪದ್ದತಿಗಳು ಸಾಕಷ್ಟು ಇದ್ದಾಗಲೂ ಯಾವುದೇ ತೊಂದರೆಯನ್ನು ಕಾಣದೇ ಪ್ರಗತಿಯನ್ನು ಸಾಧಿಸಿದೆ. ರಾಜರಾಮ್ ಮೋಹನ್ ರಾಯ್‌ರಂಥ ಸಮಾಜ ಸುಧಾರಕರು ಸತಿಪದ್ದತಿಯಂಥ ಘೋರಪದ್ದತಿಯನ್ನು ತೊಲಗಿಸಿದ್ದಾರೆ. ಇಂದು ಬಾಲ್ಯವಿವಾಹ, ಮಡೆಸ್ನಾನ, ವಿಧವೆಯರ ಸ್ಥಾನಮಾನ ಹೀಗೆ ಅನೇಕ ಪದ್ದತಿಗಳ ಪಟ್ಟಿ ನಮ್ಮ ಕಣ್ಣೆದುರಿಗೆ ಕಾಣುತ್ತಿವೆ. ಇದಕ್ಕೆಲ್ಲಾ ಕಾರಣ ನಮ್ಮ ಸಂಕುಚಿತ ಮನಸ್ಸೆ ಆಗಿದೆ. ನಾವು ಕೇವಲ ಸಣ್ಣ ಪರಿಧಿಯಲ್ಲಿ ಅವನ್ನೆಲ್ಲಾ ನೋಡುತ್ತಿದ್ದೇವೆಯೇ ವಿನಃ ವಿಶಾಲದೃಷ್ಠಿಯಿಂದ ನೋಡುತ್ತಿಲ್ಲ.
ವಿಧವೆಯರಿಗೆ ಉತ್ತಮ ಕಾರ್ಯಗಳಿಗೆ ಅವಕಾಶವಿಲ್ಲ ಎನ್ನುವುದನ್ನು ಹಿಂದು ಸಮಾಜ ಹೇಳುತ್ತಿದೆಯೇ? ಅಥವಾ ವಿಧವೆಯರೇ ಸಂಕುಚಿತ ಭಾವನೆಗಳಿಗೆ ಒಳಗಾಗಿ ಸಮಾಜದ ಶ್ರೇಷ್ಠ ಕಾರ್ಯಗಳಲ್ಲಿ ಭಾಗವಹಿಸುತ್ತಿಲ್ಲವೇ? ಎಂದು ಆಲೋಚಿಸಿ, ಅವರಿಗೆ ಒಂದು ಉತ್ತಮ ನೆಲೆಯನ್ನು ಕಲ್ಪಿಸಿದವರು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ಧನ ಪೂಜಾರಿ.
ಕಳೆದ ನವರಾತ್ರಿ ಸಂದರ್ಭದಲ್ಲಿ ೨,೫೦೦ ವಿಧವೆಯರಿಂದ ರಥವನ್ನು ಎಳೆಯಿಸಿ, ಅವರಿಗೂ ಕೂಡ ಬದುಕಿದೆ ಎಂದು ತೋರಿಸಿದ ಕೀರ್ತಿ ಅವರದ್ದಾಗಿದೆ. ದೀಪಾವಳಿಯ ಸಂಧರ್ಭದಲ್ಲಿಯೂ ಕೂಡ ಇಂತಹುದೇ ಕಾರ್ಯವನ್ನು ಮಾಡಿದ್ದಾರೆ. ಜನವರಿ ೧ರಂದು ಅವರು ಮತ್ತೊಮ್ಮೆ ಮಹಿಳೆಯರ ಪಾಲಿಗೆ ಸಮಾಜಸುಧಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಗಂಡ ಸತ್ತ ಬಳಿಕ ಮಹಿಳೆಗೆ ವಿಧವೆಯ ಪಟ್ಟ ಸಿಗುತ್ತದೆ. ನಂತರದ ದಿನದಲ್ಲಿ ಆಕೆ ಆಕರ್ಷಣೀಯ ಸೊತ್ತುಗಳನ್ನು ಬಳಸಿಕೊಳ್ಳುವ ಹಾಗಿಲ್ಲ ಇದು ಹಿಂದು ಧರ್ಮದಲ್ಲಿ ನಡೆದು ಬಂದ ಕ್ರಮವಾಗಿತ್ತು. ಆದರೆ ಪೂಜಾರಿಯವರು, ಮಹಿಳೆಯೂ ಗಂಡ ಸತ್ತಬಳಿಕವೂ ಮೊದಲಿನಂತೆಯೇ ಇರಬೇಕು ಹಾಗೂ ಅವರು ಸುಮಂಗಲೀಯರು ಎನ್ನುವ ನೆಲೆಯಲ್ಲಿ ಜನವರಿ ೧ರಂದು ೫,೦೦೦ಕ್ಕೂ ಹೆಚ್ಚು ಮಹಿಳೆಯರಿಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಸ್ವ-ಇಚ್ಚೆಯಿಂದ ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದಾರೆ.
``ನನ್ನ ಜೀವಿತ ಕಾಲದಲ್ಲಿ ಅಕಸ್ಮಾತ್ ನನ್ನ ಪತಿ ವಿಧಿವಶರಾದರೆ, ನನ್ನ ಪತಿ ನನಗೆ ಪ್ರೀತಿ ಹಾಗೂ ರಕ್ಷಣೆಯ ದ್ಯೋತಕವಾಗಿ ಶಾಶ್ವತವಾಗಿ ಕಟ್ಟಿದ ಮಾಂಗಲ್ಯದ ತಾಳಿಯನ್ನು ತೆಗೆಯುವುದಿಲ್ಲ. ಕಾಲುಂಗುರ, ಕುಂಕುಮ, ಬಳೆ ಹಾಗೂ ಹೂವು ಮುಂದೆಯೂ ಧರಿಸುತ್ತೇನೆ. ಧಾರ್ಮಿಕ, ಸಾಮಾಜಿಕ ಹಾಗೂ ಮನೆಮದುವೆ ಮುಂತಾದ ಶುಭಕಾರ್ಯದಲ್ಲಿ ಮುಂದೆ ನಿಂತು ಮಾತೃಸ್ವರೂಪಿಣಿ ಸ್ತ್ರೀ ಪರಂಪರೆಯ ಗೌರವವನ್ನು ಎತ್ತಿ ಹಿಡಿಯುತ್ತೇನೆ".ಎನ್ನುವ ಬೋಧನಾ ನುಡಿ.
ಗಂಡ ಸತ್ತ ನಂತರ ಪತ್ನಿ ಬಿಳಿಯ ಬಟ್ಟೆ ಧರಿಸಬೇಕು, ಹಣೆಗೆ ತಿಲಕವಿಡಬಾರದು, ಬಣ್ಣಬಣ್ಣದ ಸೀರೆ ಉಟ್ಟುಕೊಳ್ಳಬಾರದು, ಹೂ ಮುಡಿಯಬಾರದು, ಸಾಧ್ಯವಾದರೆ ಕೂದಲು ತೆಗೆಯಬೇಕು, ಗಾಜಿನ ಬಳೆ ತೊಡಬಾರದು ಇತ್ಯಾದಿ ನಿರ್ಬಂಧಗಳಿಂದ ವಿಧವೆಯರು ಹೊರಬರಬೇಕಿದ್ದರೆ ನಾವು ಮಂಗಳಸೂತ್ರ ತೆಗೆಯುವುದಿಲ್ಲ ಎನ್ನುವ ಪ್ರಮಾಣ ಮಾಡಬೇಕು. ವಿವಾಹದ ದಿನ ಕಟ್ಟಿದ ಮಂಗಳಸೂತ್ರ ಜೀವನ ಪರ್ಯಂತವಿರಬೇಕು. ಗಂಡ ಸತ್ತನೆಂದು ತೆಗೆಯುವುದು ಮೂರ್ಖತನವಾಗುತ್ತದೆ. ತಾವು ಕೂಡ ಇತರ ಮಹಿಳೆಯರಂತೆ ಸದಾ ಸುಮಂಗಲೀಯರು ಎನ್ನುವಂತ ದಿಟ್ಟತನ ತೋರಿಸಬೇಕು. ಪುರುಷ ಪ್ರಧಾನ ಸಮಾಜ ನಿಮ್ಮ ಮೇಲೆ ವಕ್ರದೃಷ್ಠಿಯನ್ನು ಹರಿಸುವುದು ತಪ್ಪುತ್ತದೆ. ಈ ರೀತಿಯಾಗಿ ಬದಲಾವಣೆ ಆಗುವುದರಿಂದ ಹೆಣ್ಣಿಗೆ ಸಮಾಜದಲ್ಲಿ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಹಾಗೂ ಗಂಡನ ಮೇಲಿನ ಪ್ರೀತಿಯನ್ನು ನಿರೂಪಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಸುಮಂಗಲೀಯರು ತಾವೂ ಗಂಡ ಸತ್ತ ಬಳಿಕ ಧಾರ್ಮಿಕ ಪೂಜೆ ಪುನಸ್ಕಾರ, ಮದುವೆ-ಮುಂಜಿಗಳಲ್ಲಿ ಭಾಗವಹಿಸಲು ಅರ್ಹರು ಎಂಬ ಸಂಕಲ್ಪ ಮಾಡಿದ್ದಾರೆ.
ಇಲ್ಲಿ ಸ್ವಾಮೀಜಿಯವರನ್ನು ದೂರುವಂಥ ಅಥವಾ ಪೂಜಾರಿಯವರನ್ನು ಹೊಗಳುವ ಕಾರ್ಯವಲ್ಲ. ಮುಖ್ಯವಾಗಿರುವುದು ಸಮಾಜ ಸುಧಾರಣೆಯಲ್ಲಿ ನಡೆದ ಮಹತ್ವದ ತಿರುವು. ಇಂಥ ಕೆಲಸವನ್ನು ಯಾರೇ ಕೈಗೊಂಡರೂ ಕೂಡ ಅವರಿಗೆ ಗೌರವ ಕೊಡಬೇಕಾದುದು ಕರ್ತವ್ಯ ಎನ್ನುವ ಮಾನವೀಯ ನೆಲೆಯಲ್ಲಿ ಈ ರೀತಿಯಾಗಿ ಹೇಳಬೇಕಾಯಿತು.
ಸಮಾಜದಲ್ಲಿರುವ ಅನಿಷ್ಟ ಪದ್ದತಿಗಳ ನಿರ್ಮೂಲನಕ್ಕೆ ಯಾವನೇ ರಾಜಕೀಯ ಅಥವಾ ಧಾರ್ಮಿಕ ಮುಖಂಡ ಪತ್ರಿಕಾ ಹೇಳಿಕೆ ನೀಡುವುದರಿಂದಲೋ ಅಥವಾ ಉಳಿದವರನ್ನು ಟೀಕೆ ಮಾಡುವುದರಿಂದಲೋ ದೂರಿಕರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಮನದಲ್ಲಿಯೂ ಕೂಡ ಅಂತಹ ಪದ್ದತಿಯ ಒಳಿತು-ಕೆಡುಕುಗಳನ್ನು ತರ್ಕಿಸಿ ದೃಢನಿರ್ಧಾರವನ್ನು ಕೈಗೊಳ್ಳಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಬದಲಾವಣೆ ಆಗಬೇಕು. ಆಗುವಂಥ ಸಾಮರ್ಥ್ಯವಿದೆ. ಪರಿವರ್ತನೆ ಆಗದಿರುವುದು ಸಮುದ್ರದಲ್ಲಿರುವ ಬಂಡೆಮಾತ್ರ. ಮೇಲಿನ ಎರಡೂ ಘಟನೆಗಳಲ್ಲಿ ವೃಥಾ ಇನ್ನೊಬ್ಬರ ಮೇಲೆ ಗೂಬೆಕೂರಿಸುತ್ತಾ ವ್ಯವಹರಿಸುವುದಕ್ಕಿಂತ ಸುಖಿಸಮಾಜ ನಿರ್ಮಾಣಕ್ಕೆ ನಮ್ಮ ಪಾತ್ರವೇನು ಎನ್ನುವ ವಿಷಯವನ್ನು ನಾವು ಅರಿಯಬೇಕು. ನಮ್ಮ ಚಿಂತನೆ, ಆಲೋಚನೆಗಳು ಬದಲಾವಣೆಯಾದಾಗ ಅಮೂಲ್ಯಯುತವಾದ, ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ..ಈ ರೀತಿಯ ಕಾರ್ಯಗಳು ದೇಶದ ಮೂಲೆಗಳಿಗೂ ವ್ಯಾಪಿಸಲಿ...
ಕೆ.ಎಸ್.ಶೆಟ್ಟಿ

ಕರಾವಳಿ ಕನ್ನಡ


ಕಾಸರಗೋಡಿನಿಂದ ಕಾರವಾರ ವರೆಗಿನ ಕರಾವಳಿ ಕನ್ನಡದ ಸೊಗಸು
ಪ್ರಪಂಚದಲ್ಲಿ ೪,೦೦೦ಕ್ಕೂ ಹೆಚ್ಚು ಭಾಷೆಗಳ ವರದಿಯಾಗಿದೆ.ದೇಶದಲ್ಲಿ ೧,೦೦೦ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಮಾನವ ಜನಾಂಗ ಬೇರೆ ಬೇರೆ ಮೂಲಗಳಿಂದ ಬಂದು ವಿವಿಧ ಭಾಷೆಗಳನ್ನು ನೆಲೆಗೊಳಿಸಿದ್ದಾರೆ. ಭಾಷಾಧಾರಿತವಾಗಿ ಜಗತ್ತನ್ನು ೧೦ಕುಟುಂಬಗಳಾಗಿ ವಿಂಗಡಿಸಿದ್ದರೂ, ಭಾರತದಲ್ಲಿ ಮುಖ್ಯವಾಗಿ ನಾಲ್ಕು ಕುಟುಂಬಗಳಿವೆ. ದ್ರಾವಿಡ ಭಾಷಾ ವಿಂಗಟನೆಯೂ ದಕ್ಷಿಣ ಭಾರತದ ಕನ್ನಡ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಕನ್ನಡದ ಭಾಷೆಗೆ ಅನುಗುಣವಾಗಿ ಉತ್ತರಮಾರ್ಗ,ದಕ್ಷಿಣಮಾರ್ಗವೆಂದು ಪ್ರಾಥಮಿಕವಾಗಿ ವಿಂಗಡಿಸಿದ್ದರೂ, ಮೈಸೂರು,ದಾರವಾಡ,ಗುಲ್ಬರ್ಗ ಹಾಗೂ ಕರಾವಳಿ ಕನ್ನಡವೆಂಬ ನಾಲ್ಕು ಪ್ರಬೇದಗಳನ್ನು ಗುರುತಿಸಲಾಗುತ್ತದೆ. ಒಂದು ಪ್ರದೇಶದ ಸಾಮ್ಯತೆ, ಶಬ್ದಗಳನ್ನು ಗುರುತಿಸಿ ಅಸ್ತಿತ್ವವನ್ನು ನೀಡುತ್ತೇವೆ. ಕರಾವಳಿ ಕನ್ನಡವನ್ನು ಕೇವಲ ಮಂಗಳೂರು ಕನ್ನಡವೆಂದು ಮಾತ್ರ ವಿಭಾಗಿಸಬೇಕೆ ಎನ್ನುವ ಜಿಜ್ಞಾಸೆ ಮೂಡಿದೆ. ಕಾಸರಗೋಡಿನಿಂದ ಕಾರವಾರದವರೆಗೆ ಕರಾವಳಿ ವ್ಯಾಪಿಸಿದ್ದರೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟು ಕನ್ನಡವು ಜನರ ಜೀವನ ದೃಷ್ಠಿ, ಭಾಷಾದೃಷ್ಠಿಯಿಂದ ನೋಡಿದಾಗ ಆಡುಭಾಷೆಯ ಬಳಕೆ ತಿಳಿಯುತ್ತದೆ.
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡವನ್ನು ಬೈಂದೂರು, ಶಿರೂರು ಸ್ಥಳವು ಬೇರ್ಪಡಿಸುತ್ತದೆ. ಉ.ಕ ವನ್ನು ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎನ್ನುವುದಾಗಿ ಭಾಷೆಯನ್ನು ದೃಷ್ಠಿಯಲ್ಲಿರಿಸಿ ವಿಂಗಡಿಸಲಾಗಿದೆ. ದಕ್ಷಿಣಕನ್ನಡದಲ್ಲಿ ಆ ರೀತಿಯ ಬೇದಗಳು ಇಲ್ಲಾ. ಆಡುಭಾಷೆ ಹಾಗೂ ಹವಾಮಾನದ ದೃಷ್ಠಿಯಿಂದ ಉ.ಕವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಅಂಗಡಿಯಲ್ಲಿ ಹೋಗಿ ಬೆಲೆಯ ಕುರಿತು ಚರ್ಚೆಮಾಡುವ ವ್ಯಕ್ತಿಯನ್ನು ಉತ್ತರ ಕರ್ನಾಟಕದವ ಎಂದು ಕೂಡಲೇ ಗುರುತಿಸಬಹುದು. ಭಾಷೆಯ ಸ್ವರೂಪವನ್ನು ಗಮನಿಸಿದಾಗ ಅವರು ಯಾವ ತೆರನಾದ ಭಾಷೆಯನ್ನು ಮಾತನಾಡುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ದೇಶದ ಜನತೆ ಮಾತನಾಡುವ ಆಂಗ್ಲಭಾಷೆ ಗ್ರಾಂಥಿಕ ಭಾಷೆಯಾಗಿದೆ. ಇಲ್ಲಿ ಆಂಗ್ಲಭಾಷೆ ಆಡುಭಾಷೆಯಾಗಿರದೇ ಎರಡನೇ ಸ್ಥಾನದಲ್ಲಿದೆ. ಮಾತೃಭಾಷೆಯ ತುಲನೆ ಮಾಡುವಾಗ ಸಾಮ್ಯತೆಯ ವೈಶಮ್ಯತೆಯನ್ನು ಗುರುತಿಸುವ ವೇದಿಕೆ ಸಿದ್ದವಾಗಬೇಕು.
ಕರಾವಳಿಯಲ್ಲಿ ಮಾತನಾಡುವ ಹವ್ಯಕ ಭಾಷೆಯಲ್ಲಿಯೂ ವ್ಯತ್ಯಾಸ ಕಾಣುತ್ತದೆ. ಉ.ಕನ್ನಡದಲ್ಲಿ ವೇಗವನ್ನು ಕಂಡರೆ, ದ.ಕನ್ನಡದಲ್ಲಿ ನಿಧಾನಗತಿಯನ್ನು ಕಾಣಬಹುದು. ಕರಾವಳಿಯಲ್ಲಿ ತುಳು, ಕುಂದಗನ್ನಡ, ಬ್ಯಾರಿ, ಕೊಂಕಣಿ, ಮರಾಠಿ ಹೀಗೆ ಅನೇಕ ಮಾತೃಭಾಷೆಗಳು ಅವರ ಜನಾಂಗಕ್ಕೆ ಅನುಗುಣವಾಗಿ ಸೃಷ್ಠಿಯಾಗಿದೆ. ವ್ಯಕ್ತಿಗತ ಸಾಮಾಜಿಕವಾಗಿ ಭಾಷೆ ಬರುವುದು. ಭಾಷಾ ವ್ಯವಸ್ಥೆ ಬೇರೆಯವರಲ್ಲಿ ಇದ್ದಾಗ ಸಂವಹನ ಸಾಧ್ಯ. ಮಾತೃಭಾಷೆಯಲ್ಲಿ ಸಾಹಿತ್ಯಗಳು ಕಂಗೊಳಿಸಿದಾಗ ಮಾನ್ಯತೆ ಸಿಗುತ್ತದೆ. ಪ್ರತಿಯೊಬ್ಬನ ಭಾಷೆಯಲ್ಲಿಯೂ ಕೂಡ ವ್ಯಾಕರಣವಿದೆ. ಹುಚ್ಚನ ಭಾಷೆ, ಮಗುವಿನ ಭಾಷೆ ಹಾಗೂ ಆಡುಭಾಷೆಯಲ್ಲಿಯೂ ವ್ಯಾಕರಣವಿದೆ. ವ್ಯಾಕರಣ ಎಂದರೆ ಸಂಕ್ಷಿಪ್ತವಾಗಿ ಬಳಸುವ ಕ್ರಮಬದ್ದವಾದ ಯೋಜನೆ. ನಾವಿನ್ಯತೆ ಎನ್ನುವುದು ಭಾಷೆಯ ಪ್ರಮುಖಾಂಶವಾಗಿದೆ. ಭಾಷೆ ಯಾವುದಿದ್ದರೂ ಸಾಮಾಜಿಕವಾಗಿ ವಿಂಗಟನೆ ಮಾಡುವಾಗ ನಾವು ಕರಾವಳಿ ಕನ್ನಡಿಗರು ಎನ್ನುವುದು ಸ್ಪಷ್ಟವಾಗಿದೆ.
ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳು:
ರಾಜ್ಯವಿಭಜನೆಯಲ್ಲಿ ಕಾಸರಗೋಡ್ ಕೇರಳ ರಾಜ್ಯಕ್ಕೆ ಸೇರಲ್ಪಟ್ಟರೂ ಭಾಷೆಯ ಆದಾರದ ಮೇಲೆ ಗುರುತಿಸುವುದಾದರೆ ಕಾಸರಗೋಡ್ ಕರ್ನಾಟಕ ಎಂದೇ ಉಲ್ಲೇಖಿಸಲಾಗುತ್ತದೆ. ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳ ಕೊಡುಗೆ ಮಹತ್ತರವಾದುದು. ಮಹಾಲಿಂಗ ಭಟ್ ಅವರ ಕಾಸರಗೋಡ್ ಸಮಾಚಾರ ಎನ್ನುವ ಪ್ರಥಮ ಪತ್ರಿಕೆ ಕನ್ನಡದ ಬಗ್ಗೆ ತಿಳಿಸುವಲ್ಲಿ ಸಹಕಾರಿಯಾಗಿದೆ. ಕನ್ನಡ ಪತ್ರಿಕೆಗಳು ಕಾಸರಗೋಡು ಕನ್ನಡಿಗರ ಕಣ್ಣು ತೆರೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುವ ಕನ್ನಡ ಪತ್ರಿಕೆಗಳು ಮಲೆಯಾಳ ಪತ್ರಿಕೆಗಳ ಪ್ರಭಾವದಿಂದ ತೆರೆಮರೆಗೆ ಸರಿಯುವ ಸ್ಥಿತಿಯಲ್ಲಿವೆ. ಪ್ರಸ್ತುತ ಸಮಾಜದಲ್ಲಿ ಕೇರಳ ಸರ್ಕಾರದ ದೋರಣೆಯನ್ನು ಸರಿಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಹೊಣೆಗಾರಿಕೆ ಮುಖ್ಯವಾಗಿದೆ. ಸಾಮಾಜಿಕ ಭದ್ರತೆ ಹಾಗೂ ಜನಜೀವನ ನಿರ್ಧರಿಸುವ ವಿಷಯಗಳನ್ನು ಸರ್ಕಾರ ಕೈಗೊಂಡಿದ್ದರೂ ಜನರಿಗೆ ತಲುಪುತ್ತಿಲ್ಲ. ಕನ್ನಡ ಪತ್ರಿಕೆಗಳು ತ್ರಿಶಂಕು ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ನಿಂತಿವೆ.
ಕಾಸರಗೋಡಿನಲ್ಲಿ ಕನ್ನಡದ ಕಂಪನ್ನು ಜನಸಾಮಾನ್ಯರಿಗೆ ತಲುಪಿಸಿದ ಪ್ರಥಮ ಪತ್ರಕರ್ತ ಕಯ್ಯಾರ ಕಿಂಞಣ್ಣ ರೈ ಅವರ ನೆನಪು ಮಾಡಬೇಕಾದದು ಪ್ರತಿಯೊಬ್ಬ ಕಾಸರಗೋಡು ಕನ್ನಡಿಗನ ಕರ್ತವ್ಯ. ಕೊನೆಯ ಪುಟದಿಂದ ಪಾಠಮಾಡುವ ಕೆ.ಟಿ.ಶ್ರೀಧರ ಅವರ ಗುಣಗಾನ ಈ ಸಂಧರ್ಭದಲ್ಲಿ ಔಚಿತ್ಯಪೂರ್ಣವಾಗಿದೆ. ಕನ್ನಡದ ಉಳಿವಿಗಾಗಿ ಅಹರ್ನಿಶಿ ದುಡಿದವರ ಮೇಲೆ ಅನುಕಂಪ ವ್ಯಕ್ತಪಡಿಸಬೇಕಾಗುತ್ತದೆ ಕಾರಣ ಸದ್ಯದ ಕಾಸರಗೋಡಿನ ಕನ್ನಡ ಸ್ಥಿತಿ...
ಪ್ರಸ್ತುತ ಕಾಸರಗೋಡಿನ ಕನ್ನಡ ಬೆಳವಣಿಗೆ ನೋಡಿದರೆ ಬೇಸರವಾಗುತ್ತದೆ. ಶುದ್ದ ಕನ್ನಡ ಮರೆಯಾಗುತ್ತಿದೆ. ಪ್ರತಿಯೊಂದು ಪತ್ರಿಕೆಗಳಲ್ಲಿ ಹೊಸ ಹೊಸ ಪದಗಳ ಬಳಕೆಯಾದಾಗ ಭಾಷೆಯ ಅಭಿವೃದ್ದಿ ಸಾಧ್ಯ ಆದರೆ ಕಾಸರಗೋಡಿನ ಕನ್ನಡ ಪತ್ರಿಕೆಗಳಲ್ಲಿ ಮಲೆಯಾಳದ ಶಬ್ದಗಳು ಎಲ್ಲೆಂದರಲ್ಲಿ ನುಸುಳುತ್ತಿವೆ. ಇತ್ತೀಚಿಗೆ ಕಾಸರಗೋಡಿನ ಸಂಜೆಯ ಪತ್ರಿಕೆಯೊಂದನ್ನು ನೋಡಿದಾಗ ಕನ್ನಡವೋ ಅಥವಾ ಮಲೆಯಾಳ ಪತ್ರಿಕೆಯೋ ಎನ್ನುವ ಆತಂಕ ಪ್ರತಿಯೊಬ್ಬ ಕನ್ನಡ ಅಭಿಮಾನಿಯದ್ದು. ಎಲ್ಲಿ ಹೊಸ ಹೊಸ ಪದಗಳು ಧಾವಂತಿಸುತ್ತದೋ ಅಲ್ಲಿ ಭಾಷೆಯ ಅಳಿವು ಸಂಭವನೀಯ.
ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಯ ಓದುಗರು ಹೆಚ್ಚಿದ್ದಾರೆ ಎನ್ನುವುದೇನೋ ನಿಜವಾದರೂ ಯುವಜನತೆ, ವಿದ್ಯಾರ್ಥಿಗಳು ಕನ್ನಡ ಪತ್ರಿಕೆ ಓದುವ ಅಭ್ಯಾಸ ಮಾಡಿದಾಗ ಕನ್ನಡ ಪತ್ರಿಕೆಯ ಉಳಿವು ಸಾಧ್ಯ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳು ಉಳಿಯಬೇಕು. ದೊಡ್ಡ ಪತ್ರಿಕೆಗಳು ಮಾರುಕಟ್ಟೆಗೆ ಬಂದಾಗ ಸಣ್ಣ ಪತ್ರಿಕೆಗಳು ಬಾಗಿಲು ಮುಚ್ಚಿದ ಘಟನೆ ಸಾಕಷ್ಟಿವೆ. ಕನ್ನಡದ ಅಭಿವೃದ್ದಿಗಾಗಿ, ಕನ್ನಡ ಭಾಷೆಯ ಉಳಿವಿಗಾಗಿ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಮುಂದಾದರೂ ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳು ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಪೂರ್ಣ ಶ್ರಮವಹಿಸಬೇಕು.
ಕೆ.ಎಸ್.ಶೆಟ್ಟಿ

Friday 20 April 2012


ಕರಾವಳಿ ದರ್ಶನ:
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯ ಯಕ್ಷಗಾನದಲ್ಲಿ ನೋಡಬನ್ನಿ....
(ಓದು,ಬರೆಯಲು ಬಾರದ ಕಲಾವಿದರ ನೈಪುಣ್ಯತೆ... ನಿರರ್ಗಳವಾಗಿ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳ ಅವಿರತ ಸಾಧನೆ.....
ತುಳುನಾಡಿನ ಗಂಡುಕಲೆ ಯಕ್ಷಗಾನ. ಹಿಂದೆ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಸಾಗರತೀರದ ಈ ಕಲೆಯನ್ನು ಮಕ್ಕಳು, ಹೆಂಗಸರು ನಮ್ಮಲ್ಲಿಯೂ ಕೂಡ ಸಾಮರ್ಥ್ಯವಿದೆ ಎಂದು ಸಾಸಿತೋರಿಸುತ್ತಿದ್ದಾರೆ. ಯಕ್ಷಗಾನ ಕನ್ನಡ ಸಂಸ್ಕೃತಿಯನ್ನು ದೇಶದ ಮೂಲೆಗಳಿಗೂ ಪಸರಿಸಿ, ವಿದೇಶದಲ್ಲೂ ಕನ್ನಡ ಕಂಪನ್ನು ಪಸರಿಸಿದ ಕೀರ್ತಿ ಯಕ್ಷಗಾನಕ್ಕಿದೆ. ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ತಮ್ಮ ಬೆಚ್ಚನೆಯ ಗೂಡಿನೊಳಗೆ ಸೇರಿದ ಸಾಗರ ತೀರದ ಸಮೃದ್ದ ಕಲೆಯಾದ ಯಕ್ಷಗಾನ ಮೇಳಗಳು ಈಗ ಗೂಡುಬಿಟ್ಟು ಹೊರಟು ಕರಾವಳಿಯಾಧ್ಯಂತ ಸಂಚರಿಸುತ್ತಾ ಕಲಾರಸಿಕರ ಮನ ತಣಿಸುತ್ತಿವೆ. ವೃತ್ತಿ ಯಕ್ಷಗಾನ ಮೇಳಗಳು ಪುರುಷರಿಗೆ ಸೀಮಿತವಾಗಿದೆ. ವಿದ್ವನ್‌ಮಣಿಗಳ ಪ್ರಕಾರ ಯಕ್ಷಗಾನವೆನ್ನುವುದು ಜಾಗೃತ ಕಲೆ; ಅರಿವಿನ ನೆಲೆ; ಆನಂದದ ಅಲೆ; ಸಾಂಸ್ಕೃತಿಕ ,ಧಾರ್ಮಿಕ, ಸಾಮಾಜಿಕ, ಸಾಂಪ್ರದಾಯಿಕ ಜೀವನಮೌಲ್ಯಗಳ ಆಧಾರ ಸೆಲೆ; ರವರಸಗಳನ್ನು ಬಿತ್ತುವ ಹೊಳೆ; ಇದುವೇ ಹಿಂದೂ ಸಂಸ್ಕೃತಿಯ ಸಂಜೀವಿನಿ. ಇದು ಕೇವಲ ಕರಾವಳಿಗೆ ಸೀಮಿತವಾಗಿರದೆ, ಮಲೆನಾಡಿನ ಉದ್ದಗಲಕ್ಕೂ ತನ್ನ ಬಾಹುಳ್ಯವನ್ನು ಪ್ರದರ್ಶಿಸುತ್ತಾ, ದೇಶ ವಿದೇಶಗಳಲ್ಲೂ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿದೆ.
ಯಕ್ಷಗಾನ ಮೇಳಗಳ ವೈಶಿಷ್ಟ್ಯವೇ ಹಾಗೇ...ಎಲ್ಲಾ ಮೇಳಗಳು ದೇವರ ಗುಡಿಯಿಂದಲೇ ಹೊರಟು, ಕೊನೆಗೆ ಬಂದು ಸೇರುವುದು ಅದೇ ಸುಂದರವಾದ ಭೂರಮೆಯ ಮಡಿಲಿಗೆ....ಸಾಗರದ ನೀರಿನಂತೆ.... ಆವಿಯಾಗಿ, ಮಂಜು ಕವಿದು, ಮೋಡ ಮಳೆಯಾಗಿ ಸುರಿದು ಕೊನೆಯಲ್ಲಿ ಸೇರುವುದು ಸಾಗರದ ಒಡಲಿಗೆ.
ತೆಂಕುತಿಟ್ಟು ಅಥವಾ ಬಡಗುತಿಟ್ಟು ಯಾವುದೇ ಮೇಳವಾದರೂ, ತಿರುಗಾಟ ಹೊರಡುವುದು ಮಾತ್ರ ದೇವರ ಹೆಸರಿನಲ್ಲಿಯೇ? ಕಲೆ ಕಾಸಿಗಾಗಿ, ಕಾಲಯಾಪನೆಗಾಗಿ ಎನ್ನುವ ಜನರಿಗೆ ಮುದ ನೀಡುವುದಕ್ಕಾಗಿ ಮುಂದಾದ ಡೇರೆ ಮೇಳಗಳಾದರೂ, ತಿರುಗಾಟ ನಡೆಸುವುದು ದೇವರ ಹೆಸರಿನಿಂದ ಮತ್ತು ದೇವಸ್ಥಾನದ ನಾಮಮುದ್ರೆಯಿಂದ.
ಪ್ರತಿಯೊಬ್ಬ ಕಲಾವಿದನ ಬಾಳಭೂಮಿಯಲ್ಲಿ ನೀಳವಾಗಿ ಬಿಳಲುಗಳನ್ನು ಇಳಿಬಿಟ್ಟು, ಬಲವಾಗಿ ಬೇರುಬಿಟ್ಟ ಆಲದ ಮರವೇ ಯಕ್ಷಗಾನ. ಇದೊಂದು ಅದ್ಬುತವಾದ ಕಲೆ. ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಯಕ್ಷಗಾನಕ್ಕೆ ಮಾತ್ರ ಸಲ್ಲುತ್ತದೆ. ಮನಸ್ಸಿಗೆ ಮುದ ನೀಡುವ,ನೆಮ್ಮದಿಯನ್ನು, ಜೀವನಮೌಲ್ಯವನ್ನು ಸಾರುವ ಯಕ್ಷಗಾನ, ಜನಮನ ರಂಜನೆಗೊಳಪಡಿಸುತ್ತಾ ರಂಜನೆ ನೀಡುತ್ತಿರುವ ದೃಶ್ಯ ಮಾತ್ರ ಮನಮೋಹಕವಾಗಿರುತ್ತದೆ.
ಎಷ್ಟೇ ಹಠಮಾರಿ ಗಂಡನಾದರೂ, ಹೆಂಡತಿಯ ಮಮತೆಯ ಮುಂದೆ ಮುಗುಳುನಗುವಿನ ಮುಗ್ದ ಮಗುವಿನಂತಾಗುತ್ತಾನೆ. ಯಕ್ಷಗಾನದ ಅಭಿರುಚಿಯೇ ಅಂತದ್ದು, ಮನಸ್ಸಿನಲ್ಲಿ ಎಂತಹ ದುಗುಡ,ದುಮ್ಮಾನಗಳಿದ್ದರೂ ಕ್ಷಣಮಾತ್ರದಲ್ಲಿ ಪರಿಹರಿಸುವ ಸಾಧನ.
ಗೆಜ್ಜೆ ಕಟ್ಟುವ ಸೇವೆಯನ್ನು ಹರಕೆಯಾಗಿ, ಕರಾವಳಿ ಮತ್ತು ಮಲೆನಾಡಿನ ಜನತೆ ಆಚರಿಸಿಕೊಂಡು ಬಂದಿದ್ದಾರೆ. ಎದೆಯ ಕುದಿ ಕಳೆಯಲು, ಒಡಲು ತಂಪಾಗಿಸಲು, ಬಗೆಯ ಬಯಕೆ ಹಣ್ಣಾಗಲು ಹರಕೆ ಹೊತ್ತು ಅದೃಷ್ಟದ ಫಲ ದೊರೆತಾಗ ಸೇವೆಯನ್ನು ಮಾಡುತ್ತಾರೆ. ಪ್ರತಿಯೊಂದು ದೇವಾಸ್ಥಾನದಲ್ಲೂ ಅದರದೇ ಆದ ವೈಶಿಷ್ಟವಿರುತ್ತದೆ. ಮಂದಾರ್ತಿ ದೇಗುಲದಲ್ಲಿ ರಚಿಸಿದ ಹಾಡನ್ನು ಕೇಳಿದಾಗ, ಮಗದೊಮ್ಮೆ ಕೇಳಬೇಕು ಎನಿಸುವಂಥದ್ದು...
`ಯಕ್ಷಗಾನ ಸೇವೆ ನೀಡಿ, ಮಂದಾರ್ತಿ ದುರ್ಗೆ
ಮನ ಒಲಿಸಿ ಧನ್ಯರಾಗಿ.....`
ಹೀಗೆ ಮುಂದೆ ಸಾಗುವ ಹಾಡು ಅನೇಕ ಯಕ್ಷಪ್ರೇಮಿಗಳ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುವಂಥದ್ದು. ಯಾವುದೇ ಮೇಳವಿರಲಿ ಅವರು ಸಾರುವ ಸಂಸ್ಕೃತಿಯೊಂದೆ. ಜನರಲ್ಲಿ ತಮ್ಮ ಧರ್ಮದ ಬೀಜವನ್ನು ಬಿತ್ತುವ, ಪ್ರಪಂಚಾನುಭವವನ್ನು ಹರಹುವ, ಚಲಿಸುವ ವಿಶ್ವವಿದ್ಯಾಲಯ. ಸಂಸ್ಕೃತಿಯನ್ನು ಪಸರಿಸುವ ಈಗಿನ ಯಾವುದೇ ಮಾದ್ಯಮಗಳಿಗಿಂತ ಮಿಗಿಲಾದ ಸಾಧನವೇ ಯಕ್ಷಗಾನ.
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯನ್ನು ಓದುಬಾರದ, ನಿರರ್ಗಳವಾಗಿ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳು ತಮ್ಮ ತಿರುಗಾಟ ಮಾಡಿ, ಜಗತ್ತು ಮಲಗಿರುವಾಗ ಇವರ ಕಾಯಕ ಪ್ರಾರಂಭ, ಜನರೊಂದಿಗೆ ಬೆರೆಯುವ ಹಗಲಿನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಪವಡಿಸುವ, ಕಲಾಮಾತೆಯ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು, ಅದರಲ್ಲೇ ತಮ್ಮ ಜೀವನದ ಗೋಪುರವನ್ನು ಕಟ್ಟುವಲ್ಲಿ ಯಶಸ್ಸು ಕಂಡವರು. ಅನೇಕ ಜೀವನಮೌಲ್ಯ,ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಪುಣ್ಯತಮವಾದ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೇ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುತ್ತಾನೆ.
ಯಕ್ಷಗಾನದಲ್ಲಿ ಯಾರು ವೇಷವನ್ನು ಮಾಡುತ್ತಾರೋ ಅವರನ್ನು ಮುಮ್ಮೇಳವೆಂದೂ, ಅವರುಗಳಿಗೆ ಪೂರಕವಾಗಿ ಹಾಡು, ಮದ್ದಳೆ, ಚೆಂಡೆ ಹಾಗೂ ಶ್ರುತಿಗಳನ್ನೊಳಗೊಂಡ ತಂಡವೇ ಹಿಮ್ಮೇಳ. ಮುಮ್ಮೇಳದವರು ವೇಷವನ್ನು ಧರಿಸಿ ಹಿಮ್ಮೇಳಕ್ಕೆ ಸರಿಹೊಂದುವಂತೆ ನವರಸಗಳಗಳನ್ನೊಳಗೊಂಡ ಅಭಿನಯ, ಹಾವ, ಭಾವ ಹಾಗೂ ಶ್ರುತಿಬದ್ದವಾದ ಮಾತುಗಾರಿಕೆಯಿಂದ ಕಲಾವಿಧನ ಕಲಾಪ್ರೌಢಿಮೆ ಗುರುತಿಸಲ್ಪಡುತ್ತದೆ. ಕಾಲಿನ ಗೆಜ್ಜೆ, ಭಾಗವತನ ತಾಳ/ ಜಾಗಟೆ, ಶ್ರುತಿ, ಮದ್ದಳೆ, ಚೆಂಡೆಗಳ ಹದಬರಿತ ಮೇಳವೇ ಹಿಮ್ಮೇಳ. ಈ ವಿಭಾಗ ನೃತ್ಯ ಮತ್ತು ಅಭಿನಯಕ್ಕೆ ತಳಪಾಯ.
`ಅ' ಎನ್ನುವ ಒಂದು ಅಕ್ಷರವನ್ನು ಉಚ್ಚರಿಸುವ ಕಾಲಕ್ಕೆ ಒಂದು ಮಾತ್ರಾಕಾಲ ಎಂದು ಹೆಸರು. ಈ ಮಾತ್ರಾಕಾಲದ ಸಮೂಹವನ್ನೆ ತಾಳ ಎನ್ನುತ್ತೇವೆ. ನಿಯತವಾದ ತಾಳದ ಗತಿಯನ್ನೆ ಲಯ ಎನ್ನುತ್ತೇವೆ. ಉದಾಹರಣೆಯಾಗಿ ಗಡಿಯಾರದ ಮುಳ್ಳು ತಿರುಗಿದ ಹಾಗೆ.
ಯಕ್ಷಗಾನ ನಾಟ್ಯಾಭ್ಯಾಸಿಯು ನೃತ್ಯ ಮಾಡಲು ಅನೂಕೂಲ ವಾಗುವಂತೆ ಕೈಕಾಲು, ಕಣ್ಣುಗಳನ್ನು ಬೇಕಾದಂತೆ ಹೊಂದಿಸಿಕೊಳ್ಳಲು ಅಂಗಸಾಧನೆಯನ್ನು ಮೊದಲಿಗೆ ಅಭ್ಯಾಸ ಮಾಡಬೇಕು. ಹಸ್ತ, ಕಣ್ಣು, ಮನಸ್ಸುಗಳ ಸಂಯೋಗದಿಂದ ಭಾವನೆಗಳೂ ಮೇಳೈಸಿ ಮಾಡುವ ನಾಟ್ಯ ನಯನ ಮನೋಹರವಾಗಿ ಚಿತ್ತ ಆಕರ್ಷಿತವಾಗಿರುತ್ತದೆ.`` ಯಥಾ ಹಸ್ತಾ, ತಥಾ ದೃಷ್ಠಿ"- ಕೈ ಎಲ್ಲಿ ಹೋಗುವುದೋ ಅಲ್ಲಿ ಕಣ್ಣು ಹೋಗುವುದು. ಈ ವಿಷಯ ಎಲ್ಲಾ ನಾಟ್ಯಾಭ್ಯಾಸಿಯು ಗಮನದಲ್ಲಿಡಬೇಕಾದ ಅಂಶವಾಗಿರುತ್ತದೆ.
ಯಕ್ಷಗಾನದಲ್ಲಿ ಎರಡು ವಿಧ: ೧.ತೆಂಕು ತಿಟ್ಟು
೨.ಬಡಗು ತಿಟ್ಟು
ಬಡಗು ತಿಟ್ಟಿನಲ್ಲಿ ಬಡಾಬಡಗು ಹಾಗೂ ಬಡಗು ಎನ್ನುವ ಎರಡು ವಿಧಗಳಿವೆ. ದಕ್ಷಿಣ ಕನ್ನಡದಲ್ಲಿರುವ ಯಕ್ಷಗಾನವನ್ನು ತೆಂಕುತಿಟ್ಟು ಎಂತಲೂ, ಉಡುಪಿ ಮತ್ತು ಉತ್ತರಕನ್ನಡದಲ್ಲಿಯ ಯಕ್ಷಗಾನವನ್ನು ಬಡಗು ಮತ್ತು ಬಡಾಬಡಗು ಎಂದು ಗುರುತಿಸಲಾಗುತ್ತದೆ.
ತೆಂಕು ತಿಟ್ಟು ಹಾಗೂ ಬಡಗು ತಿಟ್ಟು ಯಕ್ಷಗಾನ ಮೇಳವಾದರೂ ವೇಷಭೂಷಣದಲ್ಲಿ ವ್ಯತ್ಯಾಸವಿದೆ. ಮುಖವರ್ಣಿಕೆ ಆಯಾ ವೇಷಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ತೆಂಕು ತಿಟ್ಟಿನಲ್ಲಿ ಹೇಳುವ ಪಗಡಿ ವೇಷವನ್ನು ಬಡಗು ತಿಟ್ಟಿನಲ್ಲಿ ಕ್ಯಾದಿಗೆ ಮುಂದಲೆ ಎಂದು ಕರೆಯುತ್ತಾರೆ. ಈ ವೇಷಗಳಿಗೆ ಅನುಗುಣವಾಗಿ ಅವರು ಮುಖವರ್ಣಿಕೆಯನ್ನು ಮಾಡಬೇಕಾಗುತ್ತದೆ. ತೆಂಕು ತಿಟ್ಟಿನಲ್ಲಿ ದಿಗಣ(ಗಿರಕಿ) ಹೊಡೆಯುವುದಕ್ಕೆ ಅನುಕೂಲವಾಗುವಂತೆ ಬಾಲ್‌ಮುಂಡ್ ಕಟ್ಟುತ್ತಾರೆ. ಆದರೆ ಬಡಗುವಿನಲ್ಲಿ ಮಂಡಿ ಹಾಕಲು ಅನುಕೂಲವಾಗುವುದಕ್ಕೆ ಹಾಗೂ ಇಲ್ಲಿಯ ಕ್ಯಾದಿಗೆ ಮುಂದಲೆಗೆ ಹೊಂದಿಕೆಯಾಗುವ ಕಸೆಯನ್ನು ಕಟ್ಟುತ್ತಾರೆ. ತೆಂಕುವಿನಲ್ಲಿ ಮಾತುಗಾರಿಕೆಗೆ ಮಹತ್ವ ನೀಡಿದರೆ ಬಡಗುವಿನಲ್ಲಿ ಅಭಿನಯಕ್ಕೆ ಮಹತ್ವವನ್ನು ನೀಡುತ್ತಾರೆ. ಈ ರೀತಿಯ ವ್ಯತ್ಯಾಸವನ್ನು ಯಕ್ಷಗಾನದ ಅಭಿರುಚಿ ಇದ್ದವರೂ ಬಹಳ ಬೇಗನೆ ಗುರುತಿಸುತ್ತಾರೆ. ಆದರೆ ಸಾಮಾನ್ಯನಿಗೂ ಗುರುತಿಸುವುದಕ್ಕೆ ಅನೂಕೂಲವಾಗುವಂಥ ವ್ಯತ್ಯಾಸವೆಂದರೆ ತೆಂಕುವಿನಲ್ಲಿ ನಿಂತು ಎಡಗಡೆಯಲ್ಲಿ ಚೆಂಡೆಯನ್ನು ಹೊಡೆದರೆ, ಬಡಗುವಿನಲ್ಲಿ ಬಲಗಡೆ ಕುಳಿತು ಬಾರಿಸುತ್ತಾರೆ.
ಸಾಮಾನ್ಯವಾಗಿ ಎರಡು ತಿಟ್ಟುಗಳಲ್ಲಿ ತಾಳಗಳು ಒಂದೆಯಾಗಿರುತ್ತವೆ. ಆದರೆ ಕುಣಿತದ ಶೈಲಿ ಬದಲಾಗಿರುತ್ತದೆ. ಯಕ್ಷಗಾನದಲ್ಲಿ ತಾಳಗಳು ಒಟ್ಟು ೧೩. ಅವುಗಳು ೧.ಆದಿತಾಳ, ೨.ಮಟ್ಟೆತಾಳ, ೩.ರೂಪಕತಾಳ, ೪.ಝಂಪೆತಾಳ, ೫.ತ್ರಿವುಡೆ ತಾಳ, ೬.ಏಕತಾಳ, ೭.ಏಕತಾಳ, ೮.ಉಡಾಪೆತಾಳ, ೯.ಕೋರೆತಾಳ, ೧೦. ಚೌತಾಳ, ೧೧.ತ್ವರಿತ ಝಂಪೆ, ೧೨.ತ್ವರಿತ ತ್ರಿವುಡೆ, ೧೩.ತ್ವರಿತ ಅಷ್ಟ..
ತೆಂಕು ತಿಟ್ಟಿನಲ್ಲಿ ಪಧ್ಯದ ಪ್ರಾರಂಭದಲ್ಲಿ ಆಲಾಪನೆಯೊಂದಿಗೆ ಬಿಡ್ತಿಗೆಗೆ ಬಂದು ಮುಕ್ತಾಯವಾಗುತ್ತದೆ. ಬಡಗುವಿನಲ್ಲಿ ಪದ್ಯದೊಂದಿಗೆ ಚಾಲು ಪ್ರಾರಂಭವಾಗಿ ನಂತರ ಪದ್ಯದಲ್ಲಿ ಕೊನೆಗೊಳ್ಳುತ್ತದೆ. ಯಕ್ಷಗಾನದಲ್ಲಿ ಭಾಗವತರನ್ನು ಒಂದನೇ ವೇಷಧಾರಿಗಳೆಂದು ಅಥವಾ ಸೂತ್ರದಾರಿಯೆಂದೂ ಕರೆಯುತ್ತಾರೆ. ಎರಡನೆ ವೇಷಧಾರಿಯು ಖಳನಾಯಕ ಹಾಗೂ ಕಥಾನಾಯಕನ ಪಾತ್ರವನ್ನು ಮಾಡುತ್ತಾರೆ. ಸೌಮ್ಯ ಸ್ವಭಾವದ ಪಾತ್ರಗಳನ್ನು ಮಾಡುವವರೆ ಪುರುಷವೇಷಧಾರಿಗಳು. ಬಡಗಿನ ಮೂರನೇ ವೇಷಧಾರಿಯನ್ನು ತೆಂಕಿನಲ್ಲಿ ಪುಂಡುವೇಷವೆಂದು ಕರೆಯುತ್ತಾರೆ. ಅಭಿಮನ್ಯು, ಬಬ್ರುವಾಹನ ಇತ್ಯಾದಿ ಚುರುಕಿನ ವೇಷಗಳನ್ನು ಮಾಡುವವರು. ಸ್ತ್ರೀವೇಷದಲ್ಲಿ ನೆರಿವೇಷ ಹಾಗೂ ಕಸೆವೇಷಗಳೆಂಬ ಎರಡು ವಿಧಗಳಿವೆ. ಮುಖ್ಯವಾಗಿ ಎಲ್ಲಾ ಕಥಾನಕಗಳಲ್ಲಿ ಬರುವಂಥಾ ರಾಣಿ ಹಾಗೂ ಸಖಿವೇಷವೇಷ ಯಕ್ಷಗಾನಕ್ಕೆ ಆಧಾರ. ಯುದ್ದಕ್ಕೆ ಸಿದ್ದಗೊಂಡು, ವೀರವನಿತೆಯಂತೆ ನಿಂತ ಪ್ರಮೀಳೆ, ಮೀನಾಕ್ಷಿ ಇಂತಹ ವೇಷಗಳನ್ನು ಕಸೆಸ್ತ್ರೀವೇಷವೆಂದೂ ಗುರುತಿಸಲಾಗುತ್ತದೆ. ರಾಕ್ಷಸ ವೇಷ ಯಕ್ಷಗಾನಕ್ಕೊಂದು ಮೆರುಗು. ಇಲ್ಲಿ ಗಂಡು ರಕ್ಕಸಿ ಹಾಗೂ ಹೆಣ್ಣು ರಕ್ಕಸಿ ಎನ್ನುವ ಎರಡು ವಿಧಗಳಿವೆ. ಎಲ್ಲಾ ವಿಧದ ವೇಷಗಳ ಮುಖವರ್ಣಿಕೆಗಾಗಿ ಸಫೇತು ಬಿಳಿ ಬಣ್ಣದ ಪುಡಿ, ಹಳದಿ, ಕೆಂಪು ಬಣ್ಣವನ್ನು ತೆಂಗಿನ ಎಣ್ಣೆಯೊಂದಿಗೆ ಹದವರಿತು ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಲಾಗುತ್ತದೆ. ನಂತರ ಪೌಡರ್‌ನ್ನು ಉಪಯೋಗಿಸಲಾಗುತ್ತದೆ. ಕಪ್ಪು ಅಥವಾ ಎಣ್ಣೆ ಮಸಿಯನ್ನು ಹುಬ್ಬು ಹಾಗೂ ಮುದ್ರೆಯನ್ನು ಬರೆಯಲು ಉಪಯೊಗಿಸುತ್ತಾರೆ. ಹಸುರು ಬಣ್ಣವನ್ನು ಬಿಳಿಬಣ್ಣದೊಂದಿಗೆ ಬೆರೆಸಿದಾಗ ಎಳೆಹಸುರು, ಕಡುಹಸುರು ಮೊದಲಾದ ಬಣ್ಣಗಳನ್ನು ರಾಮ ಕೃಷ್ಣನ ಮುಖವರ್ಣಿಕೆಯಲ್ಲಿ ಬಳಸುತ್ತಾರೆ. ಬೆಳ್ತಿಗೆ ಅಕ್ಕಿಯನ್ನು ಅರೆದು ಒಂದು ಪ್ರಮಾಣದಲ್ಲಿ ಸುಣ್ಣ ಸೇರಿಸಿ ಚಿಟ್ಟೆಹಿಟ್ಟನ್ನು ಸಿದ್ದಪಡಿಸುತ್ತಾರೆ. ರಾಕ್ಷಸ ಭೂಮಿಕೆಗಳ ಮುಖಾಲಂಕಾರಕ್ಕೆ ಈ ಚಿಟ್ಟೆ ಹಿಟ್ಟನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ರಂಗಸ್ಥಳ ೧೫ ಅಡಿ ಉದ್ದ ಹಾಗೂ ೧೨ ಅಡಿ ಅಗಲವಿರುತ್ತದೆ.
ಯಾವುದೇ ಹರಕೆ ಮೇಳ ಅಥವಾ ಡೇರೆಮೇಳಗಳಾದರೂ ಕೂಡ, ತಾವು ಮಾಡುತ್ತಿರುವುದು ಕಲಾಮಾತೆಯ ಸೇವೆಯೆನ್ನುವುದನ್ನು ಮನಗಾಣಬೇಕು. ಕಾಲಕ್ಕೆ ತಕ್ಕ ಬದಲಾವಣೆ ಸಹಜವಾಗಿರಬೇಕು.ಆದರೆ ಬದಲಾವಣೆಯೊಂದಿಗೆ ಆಧುನಿಕ ಜೀವನಮೌಲ್ಯಗಳು ಪ್ರಸಂಗದಲ್ಲಿ ಬಂದಾಗ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಅಲ್ಲಿಯೂ ಕೂಡ ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಕ್ಷಗಾನಕ್ಕೆ ಅದರದೇ ಆದ ವೇಷಭೂಷಣ, ಸಂಪ್ರದಾಯ. ಕಟ್ಟುಪಾಡುಗಳಿವೆ. ಅದನ್ನು ಬಿಟ್ಟು ಆಧುನಿಕತೆಯಂತೆ ವೇಷಭೂಷಣಗಳನ್ನು ತಂದರೆ ಅಪಹಾಸ್ಯ ಮಾಡಿದಂತಾಗುತ್ತದೆ. ವಾತಾವರಣವನ್ನು ಕೆಡಿಸುವ ಮತ್ತು ಪ್ರೇಕ್ಷಕನನ್ನು ತಪ್ಪು ದಾರಿಗೆಳೆಯುವ ಸಾದ್ಯತೆಗಳು ಹೆಚ್ಚು. ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ.ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಲಿ. ಸಂಗತವಲ್ಲದ ಮೌಲ್ಯಗಳನ್ನು ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವ ........ ಯಕ್ಷಗಾನಂ ಗೆಲ್ಗೆ


ಮಾತೃಭಾಷೆ, ಮಾತೃಭೂಮಿಯ ಮೇಲೆ ಅಭಿಮಾನಮೂಡಿಸಿಕೊಳ್ಳೋಣ....
ರಾಜ್ಯೋತ್ಸವದಂದು ಹಾಗೂ ಮುನ್ನಾದಿನ ನಡೆದ ಘಟನೆಯನ್ನಾಧರಿಸಿ ಭಾಷೆಯ ಕುರಿತು ಎರಡು ನುಡಿ...
ನವೆಂಬರ್ ೧ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಸಂಭ್ರಮ. ಕನ್ನಡಾಂಬೆಯು ಕೂಡ ಶೃಂಗಾರ ಭರಿತಳಾಗುತ್ತಾಳೆ. ಈ ತಿಂಗಳಲ್ಲಿ ಕನ್ನಡ ಪ್ರೇಮ ಚಿಗುರಿ, ಅಭಿವೃದ್ದಿಯ ಹೊಸತಾದ ಆಲೋಚನೆಗೆ ಎಡೆಮಾಡಿಕೊಟ್ಟು , ಅಡಿಪಾಯ ಹಾಕುವ ಸುವರ್ಣಾವಕಾಶವನ್ನು ನಾಡಿನ ಜನತೆಗೆ ಒದಗಿಸುತ್ತದೆ ರಾಜ್ಯದ ಮೂಲೆಯಲ್ಲಿಯೂ ಕನ್ನಡ ನಾಡು, ನುಡಿಯ ಬಗ್ಗೆ ಜನತೆ ಆನಂದದಿಂದ ಹರ್ಷೋದ್ಗಾರ ಮಾಡುತ್ತಾರೆ. ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ , ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಮೈಸೂರು ರಾಜ್ಯದ ಹೆಸರು ಕರ್ನಾಟಕ ಎಂದು ಮರುನಾಮಕರಣವಾಗಿ ಅನೇಕ ವರ್ಷಗಳೆ ಕಳೆದಿವೆ. ಹಳೆಯ ಕವಿಗಳಾದಿಯಾಗಿ ಈಗಿನ ನವಕವಿಗಳೆಲ್ಲಾ ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ಹೊಂದಿದವರೆ ಆಗಿದ್ದಾರೆ. ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.ತಮ್ಮ ದೇಹವನ್ನು ದಣಿಸಿ ಕನ್ನಡದ ಕಂಪನ್ನು ಸಾಗರದಾಚೆ ಪಸರಿಸುವುದಕ್ಕೆ ಪಟ್ಟ ಶ್ರಮ ಸಾಮಾನ್ಯವೇ?
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕಾ ಬಂಡಿ...ಎಂದು ಅಣ್ಣಾವ್ರು ಹಾಡಿದಾಗ ಕನ್ನಡ ಜನತೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಸೆಯನ್ನು ಹೊತ್ತು, ಕುಣಿದು ಕುಪ್ಪಳಿಸುತ್ತಾರೆ.
ಕನ್ನಡದ ಕಂಪನ್ನು ಪಸರಿಸುವಲ್ಲಿ ನಮ್ಮ ಪ್ರಯತ್ನ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಅದರ ಮಹತ್ವ ತಿಳಿಯುವುದಿಲ್ಲ. ಕನ್ನಡದ ಮೇಲೆ ಅಭಿಮಾನವಿದ್ದರೆ ಸಾಲದು.ಅದನ್ನು ನಾವು ಎಷ್ಟರಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗಿರುತ್ತದೆ. ಪತ್ರಿಕಾ ಮಾದ್ಯಮ ಹಾಗೂ ವಿದ್ಯುನ್ಮಾನ ಮಾದ್ಯಮಗಳಿಂದ ಕನ್ನಡದ ಕಂಪನ್ನು ಮನೆಗಳಿಗೆ ತಲುಪಿಸಲು ಮಾತ್ರ ಸಾಧ್ಯ, ಅದರೆ ಅದನ್ನು ಮನೆಯಲ್ಲಿರುವ ಮನಗಳಿಗೆ ತಲುಪಿಸಿದಾಗ ಕನ್ನಡದ ಗರಿಮೆಯನ್ನು ಹೆಚ್ಚಿಸಬಹುದು.ಕನ್ನಡ ರಾಜ್ಯೋತ್ಸವವನ್ನು ಒಂದು ದಿನ ಆಚರಣೆ ಮಾಡಿದರೆ ಸಾಲದು, ಎಲ್ಲಾ ಕನ್ನಡ ಮನಸ್ಸುಗಳ ನಿತ್ಯಉತ್ಸವ ಆಗಬೇಕು.
ತಮ್ಮ . ಶ್ರೀರಾಮಚಂದ್ರ ಲಂಕಾಧೀಶ ರಾವಣನನ್ನು ಕೊಂದು, ಹಿಂತಿರುಗುವ ಸಂದರ್ಭ ತಮ್ಮನಾದ ಲಕ್ಷ್ಮಣ ಅಲ್ಲಿಯ ಸಂಪತ್ತನ್ನು ನೋಡಿ, ಅಣ್ಣಾ ಸುವರ್ಣಮಯವಾದ ಲಂಕೆಯಲ್ಲಿ ನಾವಿರೋಣ ಎಂದು ಹೇಳುತ್ತಾನೆ. ಆ ಸಂದರ್ಭದಲ್ಲಿ ರಾಮ ``ಹೇ ಲಕ್ಷ್ಮಣಾ, ಅಪೀ ಸ್ವರ್ಣಮಯಿ ಲಂಕಾ ನ ಮೇ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸಿ". ಲಂಕೆ ಎಷ್ಟು ಸುವರ್ಣಮಯವಾಗಿದ್ದರೂ, ಹೆತ್ತ ತಾಯಿ, ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು. ಅದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ನವಮಾಸ ಪರ್ಯಂತ ಹೊತ್ತು, ಹತ್ತನೇ ತಿಂಗಳಿಗೆ ಭೂಮಿಯ ಬೆಳಕನ್ನು ತೋರಿಸಿದ ತಾಯಿ, ಆಶ್ರಯ ನೀಡಿ ಸಲಹುತ್ತಿರುವ ಮಮತಾಮಯಿ, ಸಹನಶೀಲೆ ಭೂಮಿದೇವಿ ಹಾಗೂ ಉತ್ತಮ ಸಂಸ್ಕಾರದ ಜೊತೆಗೆ, ಸಂಬಂಧವನ್ನು ಬೆಸೆದು ಸಮಾಜದಲ್ಲಿ ವ್ಯಕ್ತಿಯನ್ನಾಗಿ ನಿರ್ಮಿಸಲು ಸಹಕಾರಿಯಾಗುವ ಮಾತೃಭಾಷೆಯ ಮೇಲೆ ಅಭಿಮಾನವಿರಬೇಕು.
ಕನ್ನಡ ರಾಜ್ಯೋತ್ಸವದಲ್ಲಿ ರಾಜಕಾರಣಿಗಳು, ಯುವಜನತೆ ಸುಂದರ ಕನ್ನಡವನ್ನು ಬಿಟ್ಟು, ಕಂಗ್ಲಿಷ್‌ನಲ್ಲಿ ಮಾತನಾಡುತ್ತಾರಲ್ಲ.ಅವರಿಗೆ ಭಾಷೆಯ ಬಗ್ಗೆ ಅಭಿಮಾನ ಇಲ್ಲವೇ? ಇಲ್ಲದಿದ್ದರೆ ಯಾಕೆ ಅಷ್ಟು ಆಡಂಬರವಾಗಿ ರಾಜ್ಯೋತ್ಸವ ಆಚರಿಸುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಅದು ತಪ್ಪಲ್ಲ ಸಂತೋಷದ ಸಂಭ್ರಮವನ್ನು ಆ ರೀತಿ ವ್ಯಕ್ತಪಡಿಸುತ್ತಾರೆ ಎಂದು ಸಂತೋಷ ಪಟ್ಟುಕೊಳ್ಳಲೇ? ಹೇಗೆ ಸಾಧ್ಯ ಸ್ವಾಮೀ..ಸಾವಿರಾರು ಬಡನೌಕರರು ನಾನಾ ಕಡೆ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವ ಸ್ಥಿತಿಯನ್ನು ಕಲ್ಪನೆ ಮಾಡಿಕೊಂಡರೆ ಮೈ ಜುಂ ಎನ್ನುತ್ತದೆ ಹಾಗಿರುವಾಗ ನಾವೇ ಆ ಸ್ಥಿತಿಯಲ್ಲಿದ್ದರೆ ಕಲ್ಪನೆ ಮಾಡುವುದಕ್ಕೂ ಕಷ್ಟಸಾಧ್ಯ. ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಂತೋಷಕ್ಕಾಗಿ ಕುಣಿದು ಕುಪ್ಪಳಿಸುತ್ತಾರೆ ಎಂದು ಭಾವಿಸಿದರೆ,ಅದು ಶುದ್ದ ತಪ್ಪು. ಕೇವಲ ಆಡಂಬರಕ್ಕಾಗಿ ಎನ್ನುವುದು ಸ್ಪಷ್ಟ.
ರಾಜ್ಯೋತ್ಸವದ ರಾತ್ರಿ ಬೆಂಗಳೂರಿನಿಂದ ನನ್ನ ಮಿತ್ರನೊಬ್ಬ ಕರೆಮಾಡಿದ್ದ. ಅವನಲ್ಲಿ ಕ್ಷೇಮ ಸಮಚಾರದ ಬಗ್ಗೆ ವಿಚಾರಿಸಿ, ಹೇಗಿತ್ತಪ್ಪ ರಾಜ್ಯೋತ್ಸವ ಅಂತ ಕೇಳಿದರೆ.... ಹಗಲಿನಲ್ಲಿ ರಾಜ್ಯೋತ್ಸವ ಆಚರಿಸುತ್ತಾ, ಕುಣಿದು ಕುಪ್ಪಳಿಸುತ್ತಾರೆ. ಸಂಜೆ ನೋಡಿದರೆ ಅಮಲಾಸುರನ ಮನೆಯಲ್ಲಿ , ಕುಡಿದ ಮತ್ತಿನಲ್ಲಿ ತೇಲಾಡುತ್ತ ಆಂಗ್ಲಭಾಷೆಯ ಅಣಿಮುತ್ತುಗಳು ಅವರ ಬಾಯಿಂದ ಉದುರುತ್ತವೆ.ಕನ್ನಡ ಭಾಷೆ ಉಳಿಸಬೇಕು , ಅದಕ್ಕೆ ನಾವು ಹೋರಾಟ ಮಾಡುತ್ತೇವೆ ಎನ್ನುವ ಇವರು ಕೊನೆಯಲ್ಲಿ ನಾನು ಕನ್ನಡ ಲೈಕ್ ಮಾಡ್ತೆನೆ ಎನ್ನುವ ಅಚ್ಚ ಕನ್ನಡಿಗರು ಈಗ ಎಲ್ಲಾ ಕಡೆ ಬೆಳೆದಿದ್ದಾರೆ. ಇದನ್ನು ಸ್ವತಃ ನೋಡಿರುವ, ಹಳ್ಳಿಯಿಂದ ಹೊಟ್ಟೆಪಾಡಿಗಾಗಿ ಪಟ್ಟಣ ಸೇರಿ ಬಾರ್‌ನಲ್ಲಿ ನೌಕರಿ ಮಾಡುತ್ತಿರುವ ಸಣ್ಣ ಪ್ರಾಯದ ನನ್ನ ಗೆಳೆಯನ ಅಂತರಾಳದ ಮಾತು.
ಜಾಗತೀಕರಣದ ಪ್ರಭಾವದಿಂದ ಬೆಂಗಳೂರಿನಲ್ಲಿ ಅನ್ಯಭಾಷೆಯ ಜನರು ಸೇರಿ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದಾರೆ. ಅನೇಕ ಕಂಪೆನಿಗಳು ಕನ್ನಡ ನಾಡಿಗೆ ಲಗ್ಗೆ ಇಟ್ಟು ಕನ್ನಡ ಭಾಷೆಯ ಕಂಪನ್ನು ಹೊರಸೂಸಲು ಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಊಟದ ಜೊತೆ ಉಪ್ಪಿನ ಕಾಯಿ ಇದ್ದರೆ, ಅದರ ರುಚಿಯೇ ಬೇರೆ ಆದರೆ ಉಪ್ಪಿನಕಾಯಿಯೇ ಪ್ರಧಾನವಾದರೆ ಊಟದ ರುಚಿಯೇ ಕೆಡುತ್ತದೆ.
ರಾಜ್ಯೋತ್ಸವದಂದು ಉಡುಪಿಯಲ್ಲಿ ನಡೆದ ಘಟನೆಗಳು ಕನ್ನಡ ಯಾವ ಮಟ್ಟದಲ್ಲಿವೆ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ.
ಮದ್ಯಾಹ್ನದ ಉರಿಬಿಸಿಲು, ಗಂಟಲು ಒಣಗಿದ್ದರಿಂದ ಏನಾದರೂ ತಂಪು ಪಾನೀಯ ಕುಡಿಯೋಣವೆಂದು ಅಂಗಡಿಗೆ ಹೋಗಿ ನನಗೆ ಬೇಕಾದ ಪಾನೀಯ ಕೇಳಿ ಪಡೆದುಕೊಂಡು ಕುಡಿಯುತ್ತಾ ಕುಳಿತುಕೊಂಡೆ. ನನಗೆ ಪಾನೀಯ ತಂದುಕೊಟ್ಟ ಹುಡುಗ ನನಗಿಂತ ಐದಾರು ವರ್ಷ ಸಣ್ಣವನಿರಬಹುದು. ಬಡತನದ ಬೇಗೆಯಿಂದ ಬಳಲಿ ಬೆಂಡಾದ ತಂದೆ ತಾಯಿಯ ಜವಾಬ್ದಾರಿ ಹೊತ್ತು, ಕುಟುಂಬದ ಪರಿಸ್ಥಿತಿಯನ್ನು ನಿಭಾಯಿಸಲು ಅನ್ಯಮಾರ್ಗವಿಲ್ಲದೇ ಆ ಕಾಯಕದಲ್ಲಿ ತೊಡಗಿದ್ದಾನೆ ಎನ್ನುವುದು ನೋಡಿದಾಗಲೇ ತಿಳಿಯುತ್ತದೆ.
ಅದೇ ಸಮಯಕ್ಕೆ ಐದಾರು ಶಾಲೆಯ ವಿದ್ಯಾರ್ಥಿನೀಯರು ಮಾತೃಭಾಷೆ ತುಳು ಅಥವಾ ಕನ್ನಡ ಬಾರದವರ ರೀತಿ, ಆಂಗ್ಲಭಾಷೆಯಲ್ಲಿ ಐ ವಾಂಟ್ ಫಿಸ್ತಾ, ಕೋಲ್ಡ್ ಬಾದಾಮಿ, ಹಾರ್ಲೆಕ್ಸ್ ಹೀಗೆ ತಮಗೆ ಬೇಕಾದ ಪಟ್ಟಿಯನ್ನೆ ನೀಡುತ್ತಾರೆ. ಹುಡುಗ ಅನುಭವವಿರುವುದರಿಂದ ಅವರ ಪಟ್ಟಿಯಲ್ಲಿರುವ ವಸ್ತುವನ್ನು ಕೊಡುತ್ತಾನೆ. ಇಲ್ಲಿ ನನ್ನ ಸಂಶಯ ಅವನಿಗೆ ಆಂಗ್ಲಭಾಷೆ ಬರುತ್ತಿದ್ದರೆ ಆ ಅಂಗಡಿಯಲ್ಲಿ ಯಾಕೆ ಕೆಲಸ ಮಾಡುತ್ತಿದ್ದ? ತುಳು ಮಾತೃಭಾಷೆಯವರೆ ತುಳುಮಾತನಾಡದೇ ಪರಭಾಷೆಯ ವ್ಯಾಮೋಹದಿಂದ ಅದರ ದಾಸರಾಗುತ್ತಿದ್ದಾರೆ. ಆಂಗ್ಲಭಾಷೆಯೆ ನನ್ನ ಸರ್ವಸ್ವ ಎನ್ನುತ್ತಿರಬೇಕಾದರೆ ಕನ್ನಡ ಇಷ್ಟಾದರೂ ಉಳಿದಿದೆಯೆಂದು ಸಂತೋಷ ಪಡಬೇಕು.
ಸ್ವಲ್ಪ ದಿನದ ಹಿಂದೆ ಕುಂದಾಪುರದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಇಬ್ಬರು ಯುವಕರು ಯಾವುದೋ ಉತ್ತಮ ಸಂಸ್ಥೆಯಲ್ಲಿ ಕೆಲಸಮಾಡುತ್ತಿವವರಂತೆ ಕಂಡು ಬರುತ್ತಿದ್ದರು. ಪಕ್ಕದಲ್ಲಿಯೇ ನಿಂತು ಅವರ ಮಾತುಗಳನ್ನೇ ಆಲಿಸುತ್ತಿದ್ದೆ. ಸ್ವಚ್ಚ ಕನ್ನಡದಲ್ಲಿ ಯಾವುದೇ ಆಂಗ್ಲಪದಗಳ ಬಳಕೆಯಿಲ್ಲದೆ ನಿರರ್ಗಳವಾಗಿ ಮಾತನಾಡುತ್ತಿದ್ದರು.ಅದೇ ಸಂದರ್ಭದಲ್ಲಿ ಒಬ್ಬರ ಸ್ನೇಹಿತ ಬಂದಾಗ ಮಾತೃಭಾಷೆಯಲ್ಲಿ ಮಾತನಾಡಿದ್ದು ನೋಡಿ ಆಶ್ಚರ್ಯವಾಯಿತು. ಅಲ್ಲಿಯವರೆಗೆ ಕುಂದಾಪುರ ಕನ್ನಡ ಬಾರದ ಉತ್ತರ ಕರ್ನಾಟಕದ ಸ್ನೇಹಿತನಲ್ಲಿ ಶುದ್ದ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿ, ಊರಿನ ಮಿತ್ರ ಬಂದಾಗ ಮಾತೃಭಾಷೆಯ ಕಂಪನ್ನು ಹೋರಹಾಕಿದ್ದು, ಆಡಂಬರದ ರಾಜ್ಯೋತ್ಸವ ಆಚರಿಸಿ ಕುಣಿದು ಕುಪ್ಪಳಿಸುವ ಎಲ್ಲರಿಗೂ ಆದರ್ಶವಾಗುವಂತಿದೆ. ಅದನ್ನು ಕುಂದಗನ್ನಡದಲ್ಲಿಯೇ ಹೇಳಿದರೆ ಚೆನ್ನಾಗಿರುತ್ತದೆ. ಗಡೆ, ಎಲ್ಲ ಹೊಯಿದ್ಯಾ,ಉಂಡ ಆಯ್ತನಾ...ಇವತ್ ಆಟಕ್ ಹೋಪುವಾ...ನಿ ಹೋಪುದಾರೆ ನಮ್ಮನಿಗ್ ಬಾ.. ಇಲ್ದಿದ್ರೆ ಅಪ್ಪಯ್ಯ ಬಿಡುದಿಲ್ಲ ಮರಯಾ..ಆಟ ಒಳ್ಳೆಯಿತ್ತಂಬ್ರ..ಇದು ನಿಜವಾದ ಭಾಷಾಭಿಮಾನ.
ಅಕ್ಬರನ ಆಸ್ಥಾನದಲ್ಲಿ ಪಂಡಿತನೊಬ್ಬ ಬಂದು ನನ್ನ ಮಾತೃಭಾಷೆ ಯಾವುದು? ಎಂದು ಸವಾಲು ಹಾಕಿದ ಕಥೆಯನ್ನು ನಾವು ಕೇಳಿದ್ದೇವೆ. ಎಲ್ಲಾ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಅವನ ಮಾತೃಭಾಷೆಯನ್ನು ಕಂಡುಹಿಡಿಯುವುದು ಕೊಂಚ ಕಷ್ಟವೇ? ಆದರೆ ಬೀರಬಲ್ ಮಾತ್ರ ಬುದ್ದಿವಂತಿಕೆಯಿಂದ ಅವನು ಮಲಗಿರುವ ಹೊತ್ತಿನಲ್ಲಿ ಮೈಮೇಲೆ ನೀರನ್ನು ಸುರಿದು ಅವನ ಮಾತೃಭಾಷೆ ಕಂಡುಹಿಡಿಯುತ್ತಾನೆ. ಯಾವ ವ್ಯಕ್ತಿಯೇ ಆಗಲಿ ತನ್ನ ಮಾತೃಭಾಷೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಂಡು, ಇತರ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸಿದಾಗಲೇ ಘನತೆ ಹೆಚ್ಚುತ್ತದೆ.ಮಾತೃಭಾಷೆ, ಮಾತೃಭೂಮಿಯ ಬಗ್ಗೆ ಅಭಿಮಾನ ಮೂಡಿದಾಗಲೇ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ.
ಕನ್ನಡ ರಾಜ್ಯೋತ್ಸವದಂದು ಮಾತ್ರವಲ್ಲದೇ ದಿನನಿತ್ಯ ಕನ್ನಡ ಮಾತನಾಡುವವರೆ ಕನ್ನಡಾಭಿಮಾನಿಗಳು. ಕನ್ನಡವೇ ಮಾತನಾಡಿದರೆ ಪ್ರಸ್ತುತ ಸಮಾಜದಲ್ಲಿ ವ್ಯವಹಾರ ಮಾಡುವುದು ಕಷ್ಟ. ಆಡಳಿತ ವ್ಯವಹಾರಕ್ಕೆ ಆಂಗ್ಲಭಾಷೆಯ ಮೊರೆಹೋದರೂ, ಸ್ಥಳ, ಸಮಯವನ್ನು ನೋಡಿ ಕನ್ನಡ ಮಾತನಾಡುವುದಕ್ಕೆ ಹಿಂಜರಿಕೆಯಾಕೆ? ನಮ್ಮ ಊರಿನಲ್ಲಿ ನಮ್ಮವರೊಂದಿಗೆ ನಮ್ಮ ಮಾತೃಭಾಷೆಯನ್ನು ಮಾತನಾಡುವುದಕ್ಕೆ ಸಂಕೋಚವೇಕೆ? ಹಿಂಜರಿಕೆ ಲಜ್ಜೆಯನ್ನು ಕಿತ್ತೊಗೆದು ಮಾತೃಭಾಷೆಯನ್ನು ಪ್ರೋತ್ಸಾಹಿಸಿದಾಗ ಕನ್ನಡವನ್ನು ಉಳಿಸಿ ಬೆಳೆಸಬಹುದು ಆಕಾಶದೆತ್ತರಕ್ಕೆ ಕನ್ನಡದ ಕಂಪನ್ನು ಪಸರಿಸಿಸೋಣ ಮತ್ತು ಮನಸ್ಸನ್ನು ಕನ್ನಡ ಭಾಷೆಗೆ ಸಂಕುಚಿತಗೊಳಿಸದೇ, ವಿಶಾಲ ದೃಷ್ಟಿಯಿಂದ ಆಲೋಚನೆ ಮಾಡೋಣ. ನಮ್ಮ ಸಂಸ್ಕೃತಿಯನ್ನು ಹಾಳುಮಾಡುವ ದುಷ್ಟಶಕ್ತಿಯನ್ನು ಹಿಮ್ಮೆಟ್ಟೊಣ....
ಸಂದೇಶ ಶೆಟ್ಟಿ ಆರ್ಡಿ

ಆರ್ಡಿಯಲ್ಲಿ ವಿಶೇಷ ಶಿಬಿರ



ಗ್ರಾಮೀಣ ಭಾಗದಲ್ಲಿ ದಲಿತಯುವತಿಯರಿಗೆ ಸ್ವಾಭಿಮಾನದ ಬದುಕು ನಿರ್ಮಿಸುವಲ್ಲಿ ದಿಟ್ಟ ಹೆಜ್ಜೆ-ಕೈಮಗ್ಗದ ಶಿಬಿರ:
ಗ್ರಾಮೀಣ ಕೈಗಾರಿಕೆಗಳು ಕಣ್ಮರೆಯಾಗುತ್ತಿರುವ ಸಮಾಜದಲ್ಲಿ ಯುವಜನತೆಗೆ ಗ್ರಾಮೀಣ ಕುಲಕಸುಬುಗಳ ಕುರಿತು ಸಂಪೂರ್ಣವಾದ ಮಾಹಿತಿಯೊಂದಿಗೆ ತರಬೇತಿಯನ್ನು ಕೊಟ್ಟು ಸ್ವ-ಉದ್ಯೋಗವನ್ನು ಕಲ್ಪಿಸಿಕೊಡುವಲ್ಲಿ ಮಾದರಿಯಾದ ಘಟನೆ ಕುಂದಾಪುರ ತಾಲೂಕಿನ ಆರ್ಡಿಯ ಪರಿಸರದಲ್ಲಿ ನಡೆಯುತ್ತಿದೆ.
ಕಳೆದ ಐದಾರು ತಿಂಗಳಿನಿಂದ ಸದ್ದಿಲ್ಲದೇ, ಪ್ರಚಾರವನ್ನು ಬಯಸದೇ ಸಮಾಜದ ಹಿಂದುಳಿದ ವರ್ಗವೆಂದು ಗುರುತಿಸಲ್ಪಟ್ಟ ಕೊರಗ ಸಮುದಾಯದ ಅರೆವಿದ್ಯಾವಂತ ಯುವಕ- ಯುವತಿಯರಿಗೆ ಕೈಮಗ್ಗದ ಕುರಿತು ತರಬೇತಿಯನ್ನು ನೀಡುತ್ತಾ ಸ್ವಾವಲಂಬಿ ಜೀವನ ನಿರ್ಮಿಸುವಲ್ಲಿ ಜಿಲ್ಲೆಯ ಖಾದಿ ಮತ್ತು ಕೈಮಗ್ಗ ಇಲಾಖೆ, ಐಟಿಡಿಪಿ ಹಾಗೂ ಕೊರಗ ಅಭಿವೃಧ್ದಿ ಸಂಘಗಳ ಒಕ್ಕೂಟಗಳು ಕಾರ್ಯನಿರತವಾಗಿವೆ.
ಕೊರಗ ಜನಾಂಗ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯವಾಗಿದೆ. ಸಮಾಜದಲ್ಲಿ ಇವರಿಗೆ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟರೂ ಅವರು ಇತರ ಜನರೊಂದಿಗೆ ಬೆರೆಯದೇ ತಮ್ಮದೇ ಆದ ಕಟ್ಟುಪಾಡು, ರೀತಿ-ನೀತಿಯ ಜಾತಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದವರು. ಇವರುಗಳು ವಿದ್ಯಾಭ್ಯಾಸದತ್ತ ಆಸಕ್ತಿ ತಾಳದೇ ತಮ್ಮದೇ ಕುಲಕಸುಬು ಬುಟ್ಟಿನೇಯುವುದು, ತಲೆಯ ಹಾಳೆ(ಮಂಡಾಳೆ) ವಿಶೇಷ ಸಂದರ್ಭದಲ್ಲಿ ಡೋಲು ಬಾರಿಸುವ ಪದ್ದತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಕಾಲಚಕ್ರ ಉರುಳಿದಂತೆ ಸರ್ಕಾರದ ಸವಲತ್ತುಗಳು ದೊರಕಿದಾಗ ಕೆಲವು ಮಕ್ಕಳು ವಿದ್ಯಾಭ್ಯಾಸದತ್ತ ಆಸಕ್ತಿ ತಳೆದು, ತಮ್ಮದೇ ನೆಲೆಯಲ್ಲಿ ಜೀವನ ನಡೆಸುವ ಕನಸ್ಸನ್ನು ಹೊತ್ತು ಜೀವನ ಸಾರ್ಥಕ ಪಡಿಸಿಕೊಂಡಿದ್ದಾರೆ. ಅವರದೇ ಆದ ಕೆಲವೊಂದು ಸಂಘಟನೆಗಳನ್ನು ಹುಟ್ಟುಹಾಕಿದ್ದರೂ ಕೆಲವೊಂದು ಹಳ್ಳಿಯಲ್ಲಿ ಈಗಲೂ ಕೂಡ ಕೆಲಸವನ್ನು ಮಾಡದೇ ಅಲೆಮಾರಿ ಜೀವನವನ್ನು ನಡೆಸುತ್ತಿದ್ದಾರೆ. ವಿದ್ಯಾಭ್ಯಾಸ ಕಲಿಯದ ತಂದೆ ತಾಯಿಯಂತೆ ಮಕ್ಕಳೂ ಕೂಡ ಅವರ ಹಾದಿಯನ್ನು ಅನುಸರಿಸುತ್ತಾ ಸೋಮಾರಿಗಳಾಗಿ ಬದುಕುತ್ತಿದ್ದರು. ಕೆಲವು ಮಕ್ಕಳು ಶಾಲೆಗೆ ಹೋದರೂ ಅರ್ಧದಲ್ಲಿಯೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸರಿಯಾಗಿ ಕೆಲಸವನ್ನು ಮಾಡದೇ, ವಾರದಲ್ಲಿ ಒಂದೆರಡು ದಿನ ಕೆಲಸ ಮಾಡಿ ಉಳಿದ ದಿನದಲ್ಲಿ ಆನಂದವನ್ನು ಕಾಣುವ ಕೊರಗ ಸಮುದಾಯದ ಮಕ್ಕಳಿಗೆ ಘನತೆ ಮತ್ತು ಅಸ್ತಿತ್ವವನ್ನು ಏರ್ಪಡಿಸುವಲ್ಲಿ ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರಿಗೆ ಅವರದೆ ಆದ ನೆಲೆಯಲ್ಲಿ ತಮ್ಮ ಜೀವನ ಸಂತೋಷ ಕಾಣುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಖಾದಿ ಮತ್ತು ಕೈಮಗ್ಗ ಇಲಾಖೆ, ಐಟಿಡಿಪಿ ಹಾಗೂ ಕೊರಗ ಅಭಿವೃಧ್ದಿ ಸಂಘಗಳ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕು ಅಲ್ಬಾಡಿ ಗ್ರಾಮದ ಆರ್ಡಿಯ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗ ಆಶ್ರಮ ಶಾಲೆಯಲ್ಲಿ ತಾಲೂಕಿನ ಒಟ್ಟು ೧೫ ಕೊರಗ ಯುವತಿಯರಿಗೆ ಕೈಮಗ್ಗ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಯುವತಿಯರಿಗೆ ಉಚಿತ ತರಬೇತಿಯೊಂದಿಗೆ ೨,೦೦೦ರೂ. ಶಿಷ್ಯವೇತನವನ್ನು ನೀಡಲಾಗುತ್ತಿದ್ದು, ತರಬೇತಿ ಪೂರ್ಣಗೊಂಡ ನಂತರ ಖಾದಿ ಮತ್ತು ಕೈಮಗ್ಗ ಇಲಾಖೆಯ ವತಿಯಿಂದ ಉಚಿತ ಉಪಕರಣವನ್ನು ನೀಡಲಾಗುತ್ತಿದೆ. ಆರ್ಡಿಯಲ್ಲಿ ಪ್ರಥಮ ತರಬೇತಿ ಶಿಬಿರ.ಎಂಟು ತಿಂಗಳುಗಳ ಶಿಬಿರದಲ್ಲಿ ಈಗಾಗಲೇ ೬ತಿಂಗಳ ಶಿಕ್ಷಣವನ್ನು ಪೂರೈಸಿದ್ದಾರೆ. ಶಿರ್ವ ಮಂಚಕಲ್‌ನ ಪೆರ್ನಾಲು ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಕೊರಗ ಯುವತಿಯರಿಗೆ ಪ್ರಥಮ ಶಿಬಿರವನ್ನು ನಡೆಸಲಾಗಿದೆ. ಯುವತಿಯರು ತರಬೇತಿ ಅವದಿಯಲ್ಲಿ ಬೆಡ್‌ಶೀಟ್, ಲುಂಗಿ, ಟವಲ್‌ನ್ನು ತಯಾರಿಸುತ್ತಿದ್ದಾರೆ. ಇವರಿಗೆ ಕಚ್ಚಾವಸ್ತುವನ್ನು ನೀಡಿ ತರಬೇತಿ ಅವಧಿಯಲ್ಲಿ ತಯಾರಿಸಿದ ಕೈಮಗ್ಗಧಾರಿತ ವಸ್ತ್ರವನ್ನು ಮಂಗಳೂರಿನ ಜವುಳಿ ಇಲಾಖೆಯವರು ಖರೀದಿಸುತ್ತಾರೆ. ಹೆಚ್ಚಿನ ಜನತೆ ಬಾಳಿಕೆ ಹಾಗೂ ಗುಣಮಟ್ಟದ ದೃಷ್ಠಿಯಿಂದ ಕೈಮಗ್ಗದ ವಸ್ತ್ರಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ತರಬೇತಿಯ ನಂತರ ಅವರಿಗೆ ಅನೂಕೂಲವಾಗುವಂತೆ ಅವರ ಊರಿನಲ್ಲಿ ನಾಲ್ಕೈದು ಜನ ಒಟ್ಟಾಗಿ ಶೆಡ್‌ನ್ನು ನಿರ್ಮಿಸಿ ಅವರಿಗೆ ಬೇಕಾದ ಪೂರ್ಣ-ಸಹಕಾರವನ್ನು ನೀಡಿ ಸ್ವಾಭಿಮಾನದ ಜೀವನ ನಿರ್ಮಿಸುವಲ್ಲಿ ಸಹಕಾರಿಯಾಗಿದ್ದಾರೆ. ಪ್ರಾರಂಭದಲ್ಲಿ ೨೦ ಯುವತಿಯರು ಸೇರಿದ್ದರೂ ಮನೆಯವರ ಸಮಸ್ಯೆಯಿಂದ ಹಾಗೂ ವಿವಿದ ಕಾರಣಗಳಿಂದ ಐವರು ಶಿಬಿರವನ್ನು ತೊರೆದಿದ್ದಾರೆ. ಹುಬ್ಬಳ್ಳಿಯ ಶಂಕರಪ್ಪ ಹಾಗೂ ಬೆಳ್ತಂಗಡಿಯ ಸುರೇಖಾ ಯುವತಿಯರಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ.
ಶಿಕ್ಷಕಿ ಬೆಳ್ತಂಗಡಿಯ ಸುರೇಖಾ ಸಂತೋಷದಿಂದ ನಾನು ೧೦ನೇ ತರಗತಿ ಓದಿ ಮನೆಯಲ್ಲಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಾ ಕೈ-ಮಗ್ಗ ಇಲಾಖೆಗೆ ಅರ್ಜಿಯನ್ನು ಹಾಕಿ, ಮುಡಿಪು ನವಚೇತನ ನವಜೀವನ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣವನ್ನು ಮುಗಿಸಿದ್ದೇನೆ. ತಂದೆ ನಮ್ಮನ್ನು ತೊರೆದ ನಂತರ ತಾಯಿ, ಅಕ್ಕ, ತಮ್ಮ ನ ಜವಾಬ್ದಾರಿ ನಾನು ನೋಡಿಕೊಳ್ಳಬೇಕಾಯಿತು. ತರಬೇತಿಯ ನಂತರ ತರಬೇತಿ ಹೊಂದಿದ ಊರಿನ ೪ ಜನ ಒಂದಾಗಿ ಶೆಡ್‌ನ್ನು ನಿರ್ಮಿಸಿ ಬಟ್ಟೆಯನ್ನು ತಯಾರಿಸಿ ಕೊಡುತ್ತಿದ್ದೇವು. ಬೀಡಿ ಕಟ್ಟುವಾಗ ೧,೦೦೦ಕ್ಕೆ ರೂ.೮೨ ಮಾತ್ರ ಸಿಕ್ಕುತ್ತಿತ್ತು. ಆ ದಿನದಲ್ಲಿ ದಿನಕ್ಕೆ ೨ ಬೆಡ್‌ಶೀಟ್ ಮಾಡಿ ೧೧೬ ರೂ ಸಂಪಾದನೆ ಮಾಡತೊಡಗಿದೆವು. ಈಗ ನಾನು ಇಲ್ಲಿ ತರಬೇತಿ ನೀಡುತ್ತಿದ್ದೇನೆ.
ನಾವು ಶಿಬಿರಕ್ಕೆ ಬರುವ ಮುಂಚೆ ಗೇರುಬೀಜದ ಕೆಲಸಮಾಡುತ್ತಿದ್ದೆವು. ೨ದಿನಕ್ಕೆ ೧೦ಕೆ.ಜಿ ಮಾಡಿ ಕೆ.ಜಿ.ಗೆ ೧೧ರೂನಂತೆ ೧೧೦ನ್ನು ಪಡೆಯುತ್ತಿದ್ದೆವು. ತರಬೇತಿಯ ನಂತರ ಊರಿನಲ್ಲಿ ಶೆಡ್‌ನ್ನು ನಿರ್ಮಿಸಿ ಸ್ವ-ಉದ್ಯೋಗವನ್ನು ಕಲ್ಪಿಸಿಕೊಂಡು ಹೆಚ್ಚಿನ ದುಡಿಮೆಯಿಂದ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗುತ್ತೇವೆ ಎನ್ನುವುದು ಸಿದ್ದಾಪುರದ ದೇವಕಿ ಹಾಗೂ ಕೊಲ್ಲೂರು ಮೂರೂರಿನ ಸುಶೀಲ ಅವರದು.
ಕಾರ್ಯವೈಖರಿ:
ಬೇರೆ ಬೇರೆ ಬಣ್ಣದ ಅಟ್ಟೆಯ ನೂಲನ್ನು ಚರಕದಿಂದ ಬಾಬಿನ್‌ಗೆ ಸುತ್ತಲಾಗುತ್ತದೆ. ಈ ರೀತಿಯಾಗಿ ಸುತ್ತಿದ ನೂಲನ್ನು ವಾರ್ಫ್ ಮೂಲಕ ಬಣ್ಣವನ್ನು ಸಿದ್ದಗೊಳಿಸಲಾಗುತ್ತದೆ. ಬಣ್ಣ ಸಿದ್ದಗೊಳಿಸಿದ ನಂತರ ಮಗ್ಗದ ಮೂಲಕ ಹೊಡೆಯುವುದರಿಂದ ನಮಗೆ ಬೇಕಾದ ಬಣ್ಣದ ವಸ್ತ್ರವನ್ನು ತಯಾರಿಸಲಾಗುತ್ತದೆ. ತುಂಬಾ ಸೂಕ್ಷ್ಮವಾದ ಕೆಲಸದಲ್ಲಿ ನೂಲು ತುಂಡಾಗದ ಹಾಗೆ ನೋಡಿಕೊಳ್ಳಬೇಕು.ಅಕಸ್ಮಾತ್ ತುಂಡಾದರೆ ಗಂಟು ಹಾಕಲಾಗುತ್ತದೆ.ಮಗ್ಗದಲ್ಲಿ ರೆಕ್ಕೆ, ರೀಡ್, ಬಡ್ಡಿ ಎನ್ನುವ ಸಾಧನಗಳಿವೆ.
ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯಲ್ಲಿ ಹಿಂದೆ ಉತ್ತರ ಕರ್ನಾಟಕದ ೨೫ ಮಕ್ಕಳನ್ನು ತಂದು ಅವರಿಗೆ ವಿದ್ಯೆಯನ್ನು ಕಲಿಸಲಾಗುತ್ತಿತ್ತು. ವಿದ್ಯಾರ್ಥಿಗಳ ಕೊರತೆಯಿಂದ ಅದನ್ನು ಮುಚ್ಚಿದ್ದರು. ಕಳೆದ ಜುಲೈನಿಂದ ತಾಲೂಕಿನ ಕೊರಗ ಸಮುದಾಯದ ಯುವತಿಯರಿಗೆ ಸ್ವ-ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈ-ಮಗ್ಗ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ ಎನ್ನುವುದು ತಾಲೂಕು ಪಂಚಾಯತ್ ಸದಸ್ಯೆ ದೀಪಿಕಾ ಶೆಟ್ಟಿ ಅವರ ಅಭಿಪ್ರಾಯ.
ಆರ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕರು ವಾರದಲ್ಲಿ ಬಂದು ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಯುವಕ ಮಂಡಲ ಹಾಗೂ ಯುವತಿ ಮಂಡಲಗಳು ಬೇಕಾದ ಸಹಾಯವನ್ನು ನೀಡುತ್ತಿದ್ದಾರೆ.ಬಿ.ಜೆ.ಪಿ ತಾಲೂಕ್ ಪಂಚಾಯತ್ ಸದಸ್ಯೆ ದೀಪಿಕಾ ಶೆಟ್ಟಿ ವಾರಕ್ಕೊಮ್ಮೆ ಬಂದು ವಿಚಾರಿಸಿಕೊಂಡು ಹೋಗುತ್ತಾರೆ ಎಂದು ಸಮಾಜ ಸೇವಕ ಕುಮಾರ್‌ದಾಸ ಸಂತೋಷದಿಂದ ಹೇಳುತ್ತಾರೆ.
ಶಿಕ್ಷಣದ ಅವದಿಯಲ್ಲಿ ವಿದ್ಯಾರ್ಥಿನಿಯರು ೫೦ಮೀಟರ್ ಉದ್ದದ ಬಂಡಲ್‌ನಿಂದ ಎರಡೂಕಾಲು ಮೀಟರ್‌ನ ೨೧ ಬೆಡ್‌ಶೀಟ್‌ನ್ನು, ೨೫ ಲುಂಗಿ ಹಾಗೂ ೩೦ ಟವಲ್‌ನ್ನು ತಯಾರಿಸಲಾಗುತ್ತದೆ. ಪ್ರಥಮವಾಗಿ ಕಲಿಸುವಾಗ ವಿದ್ಯಾರ್ಥಿನೀಯರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಸಮಾಜದ ಜನರೊಂದಿಗೆ ಬೆರೆಯುವುದಕ್ಕೆ ಸಂಕೋಚಪಡುತ್ತಿದ್ದರು. ಈಗ ದೈರ್ಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಹುಬ್ಬಳ್ಳಿಯ ಶಿಕ್ಷಕ ಶಂಕರಪ್ಪ ಅವರ ಸಂತೋಷದ ನುಡಿ.
ಸಂದೇಶ ಶೆಟ್ಟಿ ಆರ್ಡಿ

ಜಾಗ್ರತಿ ಶಿಕ್ಷಣ

ಉಡುಪಿಯ ಕೇಶವಶಿಲ್ಪದಲ್ಲಿ ಜಾಗೃತ ಶಿಕ್ಷಣ...!
ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ..
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿ ಹಿಮಾಲಯವಿದ್ದರೆ...
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ..
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ...?
ದಿ.ಶಿವರಾಮು ಅವರ ಪದ್ಯದ ಸಾಲುಗಳ ಮನನ ಮಾಡಿದರೆ ಶನಿವಾರ ಉಡುಪಿಯ ಕೇಶವ ಶಿಲ್ಪದಲ್ಲಿ ನಡೆದ ಘಟನೆ ನೋಡಿದರೆ ತದ್ವೀರುದ್ದ ಅನಿಸುತ್ತೆ...
ಸೈನಿಕ ಶಿಕ್ಷಣ ಪದ್ದತಿಯಲ್ಲಿ ಬೌದ್ದಿಕ, ಶಾರೀರಿಕ ಹಾಗೂ ಜಾಗೃತ ಶಿಕ್ಷಣವನ್ನು ನೀಡಿ ಉತ್ತಮ ಸೈನಿಕನ ತಯಾರಿ ಮಾಡುವುದು ಹಿಂದಿನಿಂದಲೂ ನಡೆದು ಬಂದ ಕ್ರಮ. ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ, ಶಾರೀರಿಕ ದೃಢತೆಯನ್ನು ಗಮನಿಸಿ ಅವನನ್ನು ಸೈನಿಕ ಶಾಲೆಗೆ ಸೇರಿಕೊಳ್ಳುತ್ತಿದ್ದರು ಎಂದು ನಾವು ಕೇಳಿದ್ದೇವೆ. ಅಲ್ಲಿಗೆ ಸೇರಿದ ಕೆಲವರು ಅಲ್ಲಿಯ ಶಿಕ್ಷಣ ಪದ್ದತಿಗೆ ಹೆದರಿ ಕಾಲ್ಕಿತ್ತಿದ್ದು ಇದೆ. ಅಂತ ಕಠಿಣವಾದ ಶಿಕ್ಷಣ ಪದ್ದತಿ. ಎಷ್ಟೇ ಚಳಿ, ಮಳೆ ಗಾಳಿ ಇದ್ದರೂ ಕೂಡ ಕರೆ ಬಂದಾಗ ಹೋಗಬೇಕಾಗುತ್ತದೆ. ಅಂಥ ಮನಸ್ಥಿತಿ ನಿರ್ಮಾಣ ಮಾಡಿರುತ್ತಾರೆ.ಆದರೆ ಉಡುಪಿಯ ಕೇಶವ ಶಿಲ್ಪದಲ್ಲಿ ಆದ ಘಟನೆ ನೋಡಿದಾಗ ಇವರಿಗೆ ಆದ ಶಿಕ್ಷಣ ಎಲ್ಲಿಯದು ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡುವುದು ಸಹಜವೇ?
ಅ.೨೨ ಶನಿವಾರ ತಡರಾತ್ರಿಯಲ್ಲಿ ಜಗತ್ತೆ ಮಲಗಿ ನಿದ್ರಿಸುತ್ತಿದ್ದರೆ ಕೇಶವ ಶಿಲ್ಪದಲ್ಲಿ ಮಾತ್ರ ಮೂವರೂ ಕುಳಿತು ಗಂಭಿರವಾದ ವಿಷಯ ಚರ್ಚೆಮಾಡುತ್ತಿರುವ ಹಾಗೆ ನನಗೆ ತೋರಿತು. ನನ್ನ ಮನಸ್ಸಿನಲ್ಲಿ ಇವರಿಗೇನಾಗಿದೆ. ಹಿರಿಯವರಾದ ಕಾರಣ ವಿಚಾರಮಾಡದೆ ಸುಮ್ಮನೆ ಮಲಗಿದೆ. ನಿದ್ರಾದೇವಿಯ ಮಡಿಲಿಗೆ ತಲೆಯಿಟ್ಟಿದ್ದೆ ತಡ ಯಾವ ಪರಿಯ ನಿದ್ರೆಯೋ? ಪಕ್ಕದಲ್ಲಿ ಬಾಂಬ್ ಸಿಡಿದ ಶಬ್ದವಾದರೂ ಕೂಡಲೇ ಎಚ್ಚರವಾಗುವುದಿಲ್ಲ. ಎನ್ನುವುದಕ್ಕೆ ಆಗ ನಡೆದ ಘಟನೆಯೆ ಜ್ವಲಂತ ಸಾಕ್ಷಿಯಾಯಿತು. ಅನೇಕ ವಿದ್ಯಾರ್ಥಿಗಳೊಂದಿಗೆ ಬೈಠಕ್ ಮುಗಿಸಿ ಮಲಗಿದ್ದು ಗೊತ್ತು...ನಂತರ ಪ್ರಕಾಶ್‌ಜೀ ಬಂದು ಕರೆದಾಗ ಎನೋ ಎಡವಟ್ಟಾಗಿದೆ ಎಂದು ತಿಳಿಯಿತು. ಅದೇ ಸಮಯದಲ್ಲಿ ಭೂಮಿಯೇ ಅಲುಗಾಡುವಷ್ಟು ಭಯಂಕರ ಶಬ್ದ...ಎಲ್ಲರಿಗೂ ಗಾಬರಿ ಆಗ ಅವರು ಹೇಳಿದ ಮಾತು ನಮ್ಮಲ್ಲಿಗೆ ಭಯೋತ್ಪಾಧಕರು ಬಂದಿದ್ದಾರೆ. ಎಬಿವಿಪಿಯ ಚೇತನ್ ಹಾಗೂ ಅವನ ಸ್ನೇಹಿತರನ್ನು ಬಂದಿಸಿದ್ದಾರೆ. ೨ನೇ ಮಾಳಿಗೆಯಲ್ಲಿ ಇದ್ದಾರೆ. ಅವರೆಲ್ಲರನ್ನು ಮುಗಿಸುವಷ್ಟು ವಿದ್ಯಾರ್ಥಿಗಳಿದ್ದರೂ, ಅವರಲ್ಲಿ ಅತ್ಯಾಧುನೀಕ ಬಂದೂಕುಗಳಿರುತ್ತವೆ ಎಂದು ಹಿರಿಯರು ಹೇಳಿದ್ದರಿಂದ ಜೀವದ ಮೇಲಿನ ಆಸೆಯಿಂದ ಧೈರ್ಯ ಮಾಡಲೇ ಇಲ್ಲಾ. ಹಿರಿಯರೆಲ್ಲಾ ನಗರದ ಸ್ವಯಂಸೇವಕರಿಗೆ ಕರೆಮಾಡುವುದಕ್ಕೆ ಶುರುವಿಟ್ಟರು. ಕ್ಷಣ ಹೊತ್ತಿನಲ್ಲಿ ಉಟ್ಟಬಟ್ಟೆಯಲ್ಲಿ ಸುಮಾರು ೨೦ ಜನ ಸ್ವಯಂಸೇವಕರ ಆಗಮನ ಕಾರ್ಯಲಯದತ್ತ.ಕೆಲವರ ಕೈಯಲ್ಲಿ ದಂಡ, ಕತ್ತಿಗಳನ್ನು ಹಿಡಿದು ಬಂದರೆ,ಕೆಲವರು ಪಂಚೆಯನ್ನು ಹರಿದು ಅದರೊಳಗೆ ಕಲ್ಲನ್ನು ಇಟ್ಟು ವೀರಯೋಧರಂತೆ ಕಂಡುಬಂದರು. ಆಗಲೇ ನಮಗೆಲ್ಲಾ ಧೈರ್ಯ.. ತುಂಬಾ ಜನ ಇರುವಾಗ ಅವರೆಲ್ಲಾ ಯಾವ ಲೆಕ್ಕ ಎನ್ನುವುದು ಎಲ್ಲರ ಅಭಿಪ್ರಾಯ...
ಹಾಗೆ ಒಳಗಡೆ ಹೊಗುವುದಕ್ಕೂ ಸಮಸ್ಯೆ ಎದುರಾಯಿತು. ಒಳಗಡೆ ಭಯೋತ್ಪಾಧಕರು ಚಿಲಕ ಹಾಕಿಕೊಂಡಿದ್ದಾರೆ.ಆಗಲೇ ಕನಕನ ಕಿಂಡಿಯಂತಿರುವ ದಾರಿಯಿಂದ ಹೊರಗಡೆ ಇದ್ದವರಲ್ಲಿ ಚಿಕ್ಕವನನ್ನು ಆರಿಸಿ ಒಳಗೆ ಕಳುಹಿಸಿ,ಅವನು ಬಾಗಿಲನ್ನು ತೆರೆದ ಮೇಲೆ ಎಲ್ಲರೂ ಒಳಗಡೆ ಹೋದೆವು. ಮೊದಲನೇ ಮಹಡಿಯ ಕಡೆ ಹೋದದ್ದೆ ತಡ ಎನೋ ಒಂದು ಬೆಳಕು ಕಂಡಿತು. ಅಲ್ಲಿ ಅವರೆಲ್ಲಾ ಇರಬಹುದು ಎಂದು ಭಾವಿಸಿ, ಯುದ್ದಕ್ಕೆ ಸಿದ್ದರಾಗುವ ಸೈನಿಕರಂತೆ ಸಿದ್ದರಾದಾಗ ದೇಶಭಕ್ತಿಗೀತೆ ಮೊಳಗಿತು. ಮಂದಬೆಳಕಿನಲ್ಲಿ ಪಾಂಡುರಂಗಣ್ಣ ಎದ್ದು ನಿಂತು ಬೌದ್ದಿಕ್ ಪ್ರಾರಂಭಿಸಿಯೇ ಬಿಟ್ಟರು.ಆಗಲೇ ಮೂವರು ಹಿರಿಯರು ಕುಳಿತು, ಗಂಭೀರವಾಗಿ ಚರ್ಚೆಮಾಡುತ್ತಿದ್ದುದರ ಮರ್ಮ ತಿಳಿಯಿತು ಸ್ವಯಂಸೇವಕರಿಗೆ ತಡರಾತ್ರಿಯಲ್ಲಿ ಭಯೋತ್ಪಾದಕರ ಹೆಸರಿನಲ್ಲಿ ಕಲಿಸಿದ ಜಾಗೃತ ಶಿಕ್ಷಣ ಎಂದು ತಿಳಿದಾಗ ಮನಸ್ಸು ನಿರಾಳವಾಯಿತು.
ನಗರದ ಸ್ವಯಂಸೇವಕರಿಗೆ ತಮ್ಮ ಕಾರ್ಯಲಯದ ಮೇಲೆ ಯಾವ ತೆರನಾದ ಕಾಳಜಿ, ನಮ್ಮ ಹಿಂದು ಬಾಂದವರೂ ಕಷ್ಟದಲ್ಲಿ ಸಿಲುಕಿದ್ದಾರೆ ಎಂದು ತಿಳಿದಾಗ ತಮ್ಮ ಪ್ರಾಣವನ್ನೆ ಪಣವಾಗಿಟ್ಟು ಹೊರಾಟಕ್ಕಿಳಿಯುತ್ತಾರೆ ಎಂದು ಕಣ್ಣಾರೆ ನೋಡಿದಾಗ ಸಂತೋಷದ ಕಂಬನಿ ಉಕ್ಕಿ ಬಂತು.
ಬಂದವರಲ್ಲಿ ಹೆಚ್ಚಿನವರೂ ಯುವಕರೇ...ನಾನೂ ಮಲಗಿದ್ದೆ ವಾದಿರಾಜ್‌ಜೀ ಕರೆ ಮಾಡಿದಾಗ ಹಾಗೆ ಓಡಿ ಬರುತ್ತಿದ್ದೆ. ಬೇರೆ ಆಯುಧ ಯಾವುದು ಕಣ್ಣಿಗೆ ತೋರಲಿಲ್ಲ. ಶಾಖೆಗೆ ಹೋಗಿ ತಂದಿಟ್ಟ ದಂಡ ನೋಡಿ ಅದನ್ನೇ ತೆಗೆದು ರಸ್ತೆಯಲ್ಲಿ ಬರುವಾಗ ಅವರನ್ನು ಯಾವ ರೀತಿ ಹೊಡೆಯುವುದು ಎಂದು ಅಬ್ಯಾಸ ಮಾಡುತ್ತಾ ಬಂದೆ ಎಂದು ಶರಣ್ ನಗುತ್ತಾ ಹೇಳುತ್ತಾರೆ.
ಆದರೆ ಭಯೋತ್ಪಾಧಕರು ಬಾರದೇ ಹಿರಿಯರು ನಮ್ಮನ್ನೆಲ್ಲಾ ನಂಬಿಸಿದ ಪರಿ ಮೆಚ್ಚಲೇಬೇಕು. ಯಾರಿಗೂ ಸಂಶಯಬರದ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿ... ತಡರಾತ್ರಿಯಲ್ಲಿ ಜಾಗೃತ ಶಿಕ್ಷಣವನ್ನು ಅದರಲ್ಲೂ ದೀಪಾವಳಿಯ ಮುನ್ನಾದಿನ ಉಡುಗೊರೆಯಾಗಿ ನೀಡಿ ಸಂತೋಷದ ಹೊನಲಿನಲ್ಲಿ ತಮ್ಮ ಮನೆ ಸೇರುವಂತೆ ಮಾಡಿದ ಸ್ವಯಂಸೇವಕರಿಗೆ ಚಿರಋಣಿ....
ಸಂದೇಶ ಶೆಟ್ಟಿ ಆರ್ಡಿ