Sunday 22 July 2012




ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆನಿಂತು ಭಕ್ತರ ಸಲಹುತ್ತಿರುವ ಕೊಲ್ಲೂರಿನ ಮೂಕಾಂಬಿಕೆ
ಪಶ್ಚಿಮ ಘಟ್ಟಗಳ ತಪ್ಪಲಿನ ಸೌಪರ್ಣಿಕಾ ನದಿಯ ದಂಡೆಯಲ್ಲಿ ನೆಲೆನಿಂತಿರುವ ಕೊಲ್ಲೂರು ಶ್ರೀ ಮೂಕಾಂಬಿಕೆ ಭಕ್ತರ ಕಷ್ಟಗಳನ್ನು ಅನುದಿನವೂ ಪೂರೈಸುತ್ತಿರುವಳು. ನದಿಯ ಇಕ್ಕೆಲಗಳಲ್ಲಿ ಸೊಂಪಾಗಿ ಬೆಳೆದಿರುವ ಹಸಿರು ಹುಲ್ಲಿನ ಪಕ್ಕದಲ್ಲಿಯೆ ಇರುವ ಕೊಡಚಾದ್ರಿ ಬೆಟ್ಟದ ಸೌಂದರ್ಯ ಸಿರಿಯೊಂದಿಗೆ ದೇವಿಯ ಭವ್ಯ ಮಂದಿರ ಕಂಗೊಳಿಸುತ್ತದೆ. ಘಟ್ಟದ ತಪ್ಪಲಿನಲ್ಲಿರುವ ಮೂಕಾಂಬಿಕಾ ಕ್ಷೇತ್ರವು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಸುತ್ತದೆ.
೧೨೦೦ ವರ್ಷಗಳ ಹಿಂದೆಯೆ ಸ್ಥಾಪಿತವಾಗಿದ್ದು, ಹಿಂದು ಸಂತ, ವೈದಿಕ ವಿದ್ವಾಂಸ ಆದಿಶಂಕರರೊಂದಿಗೆ ಈ ದೇವಸ್ಥಾನ ಸಂಬಂಧವಿರುವುದರಿಂದ ಅಗಾಧ ವಿಶೇಷತೆಯಿದೆ. ದೇವಿಯು ಶಕ್ತಿ, ಸರಸ್ವತಿ, ಮಹಾಲಕ್ಷ್ಮೀಯ ಆವಿರ್ಭಸುವಿಕೆ ಎಂದು ನಂಬಿರುವುದರಿಂದ ಭಕ್ತರು ಅತೀವವಾದ ನಂಬಿಕೆ ಇರಿಸಿಕೊಂಡಿದ್ದಾರೆ. ಈ ದೇವಸ್ಥಾನ ಕರ್ನಾಟಕದಲ್ಲಿನ ಸಪ್ತ ಮುಕ್ತಿ ಸ್ಥಳ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಕೊಲ್ಲೂರು, ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣಗಳೇ ಸಪ್ತ ಕ್ಷೇತ್ರಗಳಾಗಿದೆ.
ಕೊಡಚಾದ್ರಿ ಶಿಖರದ ತಪ್ಪಲಿನಲ್ಲಿ ಮೂಕಾಂಬಿಕೆಯು ನೆಲೆಗೊಂಡಿದ್ದು ಶಿವ ಹಾಗೂ ಶಕ್ತಿ ಇವರೀರ್ವರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಿಂದ ಈ ದೇವತೆ ಕಂಡು ಬರುತ್ತಾಳೆ. ಶ್ರೀ ಚಕ್ರದ ಮೇಲೆ ಸ್ಥಾಪಿತವಾಗಿರುವ ದೇವತೆ ಪಂಚಲೋಹದಿಂದ ಶೋಭಿಸುತ್ತಾಳೆ.  ಈ ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು. ಮೂಕಾಂಬಿಕೆಯ ಮೂಲಸ್ಥಾನ ಕೊಡಚಾದ್ರಿ ಶಿಖರದ ತುತ್ತತುದಿಯ ಮೇಲಿದೆ. ಸಮುದ್ರ ಮಟ್ಟದಿಂದ ೩೮೮೦ ಮೀ ಎತ್ತರದಲ್ಲಿದೆ. ಕೊಡಚಾದ್ರಿಯನ್ನು ಸಂಪೂರ್ಣವಾಗಿ ಚಾರಣ ಮಾಡಿಕೊಂಡು ಮೂಲಸ್ಥಳ ತಲುಪುವುದು ಸಾಮಾನ್ಯ ಜನರಿಗೆ ಕಷ್ಟಕರವಾದ್ದರಿಂದ ಶಂಕರಾಚಾರ್ಯರು ಮೂರ್ತಿಯನ್ನು ಕೊಲ್ಲೂರಿನಲ್ಲಿ ಪುನರ್ ಸ್ಥಾಪಿಸಿದರು. ದೇವಳದಲ್ಲಿ ಪಂಚಮುಖಿ ಗಣೇಶನ ಮನಮೋಹಕ ವಿಗ್ರಹವನ್ನು ಕಾಣಬಹುದಾಗಿದೆ.  ಕರ್ನಾಟಕದಲ್ಲಿನ ಪರಶುರಾಮ ಕ್ಷೇತ್ರದ ಸಪ್ತ ಮುಕ್ತಿ ಸ್ಥಳದ ತೀರ್ಥಯಾತ್ರಾ ತಾಣಗಳ ಪೈಕಿ ಕೊಲ್ಲೂರು ಒಂದಾಗಿದೆ.
ದೇವಸ್ಥಾನದಲ್ಲಿ ಸುಬ್ರಹ್ಮಣ್ಯ, ಪಾರ್ಥಿಶ್ವರ, ಪಂಚಮುಖಿ ಗಣಪತಿ, ಚಂದ್ರ ಮೌಳೀಶ್ವರ, ಪ್ರಾಣಲಿಂಗೇಶ್ವರ, ನಂಜುಂಡೇಶ್ವರ, ಆಂಜನೇಯ, ವೆಂಕಟರಮಣ ತುಳಸಿ ಗೋಪಾಲಕೃಷ್ಣ ದೇವರುಗಳನ್ನು ನೋಡಬಹುದಾಗಿದೆ. ನವರಾತ್ರಿಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿರುತ್ತದೆ. ಜನ್ಮಾಷ್ಟಮಿ ಅಥವಾ ಕೃಷ್ಣ ಜಯಂತಿ ಇಲ್ಲಿನ ಜನಪ್ರಿಯ ಉತ್ಸವ ಎನಿಸಿಕೊಂಡಿದೆ. ಈ ದಿನದಂದು ಶಂಭು ಲಿಂಗವು ಕಾಣಿಸಿಕೊಂಡಿತು ಎನ್ನುವ ಪ್ರತೀತಿಯಿದೆ. ನವರಾತ್ರಿ ಕೊನೆಯ ದಿನದಂದು ಇಲ್ಲಿನ ಸಂಸ್ಕೃತಿ ಮಂಟಪದಲ್ಲಿ ಪುಟ್ಟ ಮಕ್ಕಳಿಗೆ ಅವರದೇ ಮಾತೃಭಾಷೆಯಲ್ಲಿ ವರ್ಣಮಾಲೆಯ ಅಕ್ಷರಗಳಲ್ಲಿ ದೀಕ್ಷೆ ಅಥವಾ ಉಪದೇಶ ನೀಡಲಾಗುತ್ತದೆ. ಇದು ವಿದ್ಯಾರಂಭದ ದ್ಯೋತಕವಾಗಿರುತ್ತದೆ. ಈ ದೇವಳದಲ್ಲಿ ಯಾವುದೇ ಸೂಕ್ತವಾದ ದಿನದಂದು ವಿದ್ಯಾರಂಭದ ಕೈಂಕರ್ಯವನ್ನು ನಡೆಸಬಹುದಾಗಿದೆ. ದೇವಸ್ಥಾನದಲ್ಲಿ ಪ್ರತಿದಿನದ ಮಧ್ಯಾಹ್ನದ ಅವ ಮತ್ತು ಸಾಯಂಕಾಲ ಎರಡೂ ಸಂದರ್ಭದಲ್ಲಿ ಭಕ್ತರಿಗೆ ಅನ್ನದಾನ ಮಾಡಲಾಗುತ್ತದೆ.
ಕ್ಷೇತ್ರದ ಇತಿಹಾಸ:
ಪಶ್ಚಿಮ ಘಟ್ಟವೆಂದು ಕರೆಯಲ್ಪಡುವ ಘೋರವಾದ ಕಾನನದಲ್ಲಿ ಹಲವಾರು ವರ್ಷಗಳ ಹಿಂದೆ ಕೋಲ ಮಹರ್ಷಿ ತಪಸ್ಸು ಮಾಡುತ್ತಿದ್ದನು. ಲೋಕಕಲ್ಯಾಣಕ್ಕಾಗಿ ದೇವರನ್ನು ಸಂಪ್ರೀತಗೊಳಿಸಿ ಅವರಿಂದ ಬೇಕಾದ ವರವನ್ನು ಪಡೆಯುವ ಉದ್ದೇಶದಿಂದ ತಪಸ್ಸನ್ನಾಚರಿಸುತ್ತಿದ್ದ ಈ ಕೋಲ ಮಹರ್ಷಿ. ಆದರೆ ಸ್ವಾರ್ಥ ಸಾಧನೆಗಾಗಿ ಶಿವನನ್ನು ಮೆಚ್ಚಿಸಿ ವರವನ್ನು ಪಡೆದು ಸಜ್ಜನರಿಗೆ ತೊಂದರೆ ಕೊಡುವ ದುರುದ್ದೇಶವನ್ನು ಹೊತ್ತ ರಾಕ್ಷಸನೊಬ್ಬ ಕೂಡ ಅದೇ ಕಾಡಿನಲ್ಲಿ ದೀರ್ಘ ಘನಘೋರ ತಪಸ್ಸನ್ನು ಮಾಡುತ್ತಿದ್ದನು. ರಾಕ್ಷಸ ತನ್ನ ದುಷ್ಟ ಬಯಕೆ ಪೂರೈಸದಂತೆ ಅವನನ್ನು ತಡೆಗಟ್ಟುವ ಸಲುವಾಗಿ ಆದಿಶಕ್ತಿಯು ಆತನನ್ನು ಮೂಗನನ್ನಾಗಿ ಮಾಡಿದಳು. ಹೀಗೆ ರಾಕ್ಷಸನ ದೀರ್ಘ ತಪಸ್ಸಿಗೆ ಮೆಚ್ಚಿ ಶಿವ ರಾಕ್ಷಸನ ಮುಂದೆ ಪ್ರತ್ಯಕ್ಷನಾದಾಗ ರಾಕ್ಷಸನ ಬಾಯಿಯಿಂದ ಒಂದು ಮಾತು ಕೂಡ ಹೊರಳದೆ ಯಾವ ವರವನ್ನು ಕೇಳಲು ಸಾಧ್ಯವಾಗಲಿಲ್ಲ. ಶಿವ ಪ್ರತ್ಯಕ್ಷನಾದಾಗಲೂ ಯಾವುದೇ ವರವನ್ನು ಕೇಳಲು ಅಸಾಧ್ಯವಾದ್ದರಿಂದ ಸಿಟ್ಟುಗೊಂಡ ರಾಕ್ಷಸ ಋಷಿ ಮುನಿಗಳಿಗೆ ತೊಂದರೆ ಕೊಡಲು ಪ್ರಾರಂಬಿಸಿದನು.  ಕೋಲ ಮಹರ್ಷಿಯ ಪ್ರಾರ್ಥನೆಯಿಂದ ಆದಿಶಕ್ತಿ ಮೂಕಾಸುರನನ್ನು ಕೊಲ್ಲುತ್ತಾಳೆ. ಮೂಕಾಸುರನನ್ನು ಕೊಂದ ಅಂಬಿಕೆಗೆ ಋಷಿಗಳು ಹಾಗೂ ದೇವತೆಗಳು  ``ಮೂಕಾಂಬಿಕಾ" ಎಂದು ಗುಣಗಾನ ಮಾಡುತ್ತಾರೆ. ಕೋಲ ಮಹರ್ಷಿಯ ಪ್ರಾರ್ಥನೆಗೆ ಅನುಸಾರವಾಗಿ ದಿವ್ಯಮಾತೆಯು ಎಲ್ಲಾ ದೇವರುಗಳ ಜೊತೆಗೂಡಿ ಅಲ್ಲಿಯೇ ನೆಲೆಗೊಂಡು ಭಕ್ತರನ್ನು ಅನುಗ್ರಹಿಸುತ್ತಿರುವಳು.
ಇನ್ನೊಂದು ಕಥೆ:
ಆದಿ ಶಂಕರರು ತಾವು ಪಡೆದ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಮಾತ್ರದಿಂದ ದೇವತೆಯ ವಾಕ್ಯಕ್ಕೆ ಕಟ್ಟುಬಿದ್ದು ಅಲ್ಲಿ ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಆ ಕಥೆಯಲ್ಲಿ ಆದಿ ಶಂಕರರು ಕೊಡಚಾದ್ರಿ ಬೆಟ್ಟದಲ್ಲಿ ಧ್ಯಾನಮಾಡಿ ಅವರ ಮುಂದೆ ಪ್ರತ್ಯಕ್ಷಳಾದ ದೇವಿಯು ಬಯಕೆಯೇನೆಂದು ಕೇಳಿದಾಗ ತಾನು ಪೂಜಿಸಲು ಬಯಸಿರುವ ಕೇರಳದಲ್ಲಿನ ಸ್ಥಳವೊಂದರಲ್ಲಿ ದೇವಿಯನ್ನು ಸಂಘಟಿಸಿ ಸ್ಥಾಪಿಸುವ ತಮ್ಮ ಬಯಕೆಯನ್ನು ಹೊರಗೆಡವಿದರು. ಇದಕ್ಕೆ ದೇವಿ ಸಮ್ಮತಿಸಿದಳು ಹಾಗೂ ಶಂಕರರಿಗೆ ಸವಾಲನ್ನು ಇರಿಸಿದಳು. ತಾನು ಆದಿ ಶಂಕರರನ್ನು ಅನುಸರಿಸುವುದಾಗಿಯೂ ಮತ್ತು ಶಂಕರರು ತಮ್ಮ ಗವ್ಯಸ್ಥಾನ ತಲುಪವರೆಗೆ ಹಿಂತಿರುಗಿ ನೋಡಬಾರದು ಎಂದು ಸವಾಲನ್ನು ಕೂಡ ಶಂಕರರಿಗೆ ನೀಡುತ್ತಾಳೆ. ಕೊಡಚಾದ್ರಿ ಬೆಟ್ಟದಿಂದ ಹೊರಟು ಬೆಟ್ಟದ ಬುಡದಲ್ಲಿ ಬರುವಾಗ ದೇವಿಯು ಶಂಕರರನ್ನು ಪರೀಕ್ಷಿಸುವ ದೃಷ್ಠಿಯಿಂದ ತನ್ನ ನಡೆಗೆ ಉದ್ದೇಶಪೂರ್ವಕವಾಗಿ ಅಲ್ಪವಿರಾಮ ನೀಡುತ್ತಾಳೆ. ಶಂಕರರಿಗೆ ದೇವಿಯ ಗೆಜ್ಜೆಯ ಧ್ವನಿ ಕೇಳದಾದಾಗ ತತ್‌ಕ್ಷಣವೇ ಹಿಂದುರುಗಿ ನೋಡಿದರು. ಆಗ ದೇವಿಯು ಅವರನ್ನು ಅನುಸರಿಸುವುದನ್ನು ಬಿಟ್ಟು ಆ ಸ್ಥಳದಲ್ಲಿ ತನ್ನ ವಿಗ್ರಹ ಸ್ಥಾಪಿಸುವಂತೆ ಶಂಕರರಿಗೆ ತಿಳಿಸಿದಳು ಎಂದು ಇನ್ನೊಂದು ಕಥೆಯಲ್ಲಿ ಬರುತ್ತದೆ.
ಶಂಕರಾಚಾರ್ಯರ ತವರು ಕೇರಳದ ಹುಟ್ಟು:
ಕೊಲ್ಲೂರು ಕ್ಷೇತ್ರವು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಹಬ್ಬಿದ್ದ ಪ್ರಾಚೀನ ಕೇರಳದ ಒಂದು ಭಾಗವೂ ಆಗಿತ್ತು. ಕೇರಳದ ಹುಟ್ಟಿನ ಕುರಿತಾದ ಒಂದಷ್ಟು ಪುರಾಣದ ಕಥೆಗಳನ್ನು ಕಾಣಬಹುದಾಗಿದೆ. ವೀರ ಸನ್ಯಾಸಿ ಪರಶುರಾಮನಿಂದ ಕೇರಳ ಸೃಷ್ಟಿಯಾದದ್ದು ಎನ್ನುವ ಪುರಾಣ ಕಥೆಯಿದೆ. ಬ್ರಾಹ್ಮಣರ ಪುರಾಣದಲ್ಲಿ ಮಹಾವಿಷ್ಣುವಿನ ೬ ನೇ ಅವತಾರವಾದ ಪರಶುರಾಮನು ತನ್ನ ಕದನ ಕೊಡಲಿಯನ್ನು ಸಮುದ್ರದೊಳಗೆ ಎಸೆದ ಪರಿಣಾಮವಾಗಿ ಕೇರಳದ ಭೂಭಾಗವು ಹುಟ್ಟಿಕೊಂಡಿತು. ಜಲರಾಶಿಯಿಂದಾವೃತವಾದ ಈ ಸ್ಥಳವನ್ನು ವಾಸಯೋಗ್ಯವನ್ನಾಗಿ ಪರಿವರ್ತಿಸಲಾಯಿತು.
ದುಷ್ಟರ ಸಂಹಾರಕ್ಕಾಗಿ ಯುಗ-ಯುಗದಲ್ಲಿ ಬಗೆ ಬಗೆಯ ಅವತಾರವನ್ನೆತ್ತಿ ಬರುತ್ತೇನೆ ಎಂದು ಭಕ್ತ ಜನರಿಗೆ ಮಹಾವಿಷ್ಣು ಅಭಯವನ್ನಿತ್ತು ಪರಿಣಾಮವೇ ವಿಷ್ಣುವಿನ ೬ ನೇ ಅವತಾರ ಪರಶುರಾಮನದು. ಕ್ಷತ್ರಿಯ ರಾಜ ಕಾರ್ತವೀರ್ಯ ದರ್ಪದಿಂದ ಪರಶುರಾಮನ ತಂದೆ ಜಮದಗ್ನಿಯನ್ನು ಕೊಂದ ಪರಿಣಾಮವೇ ೨೧ ಬಾರಿ ಭೂಮಂಡಲ ಸುತ್ತಿ ದುಷ್ಟ ಕ್ಷತ್ರೀಯರ ಸಂಹಾರ ಮಾಡಿ ಅವರ ರಕ್ತವನ್ನು ಐದು ಸರೋವರದಲ್ಲಿ ಭರ್ತಿ ಮಾಡಿದ. ಕ್ಷತ್ರೀಯ ರಾಜರನ್ನು ನಾಶಮಾಡಿದ ನಂತರ ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ವಿದ್ವಜ್ಜನರ ಸಮೂಹವನ್ನು ಸಂಪರ್ಕಿಸಿದ. ಶಾಶ್ವತ ನರಕ ಶಿಕ್ಷೆಯಿಂದ ತನ್ನ ಆತ್ಮವನ್ನು ರಕ್ಷಿಸಿಕೊಳ್ಳಲು ಜಯಿಸಿದ್ದ ಭೂಭಾಗವನ್ನು ಬ್ರಾಹ್ಮಣರಿಗೆ  ಹಸ್ತಾಂತರಿಸಬೇಕು ಎನ್ನುವ ಸಲಹೆ ನೀಡಲಾಯಿತು. ವಿದ್ವಜ್ಜನರು ನೀಡಿದ ಸಲಹೆಯಂತೆ ಪರಶುರಾಮನು ನಡೆದುಕೊಂಡು ಹೋಗಿ ಗೋಕರ್ಣದಲ್ಲಿ ಧ್ಯಾನಕ್ಕೆ ಕುಳಿತುಕೊಂಡನು. ಅಲ್ಲಿ ಸಾಗರಗಳ ದೇವರಾದ ವರುಣ ಮತ್ತು ಭೂದೇವತೆಯಾದ ಭೂಮಿದೇವಿಯು ಅವರನ್ನು ಹರಸಿದರು. ಗೋಕರ್ಣದಿಂದ ನೇರವಾಗಿ ಹೊರಟು ಕನ್ಯಾಕುಮಾರಿ ತಲುಪಿ, ತನ್ನ ಕೈಯಲ್ಲಿದ್ದ ಕೊಡಲಿಯನ್ನು ಸಾಗರದ ಉತ್ತರದ ಕಡೆಗೆ ಎಸೆದನು. ಆ ಕೊಡಲಿಯು ನೆಲೆಗೊಂಡ ಸ್ಥಳವೇ ಕೇರಳವಾಗಿತ್ತು. ಇದು ಗೋಕರ್ಣ ಮತ್ತು ಕನ್ಯಾಕುಮಾರಿಯ ನಡುವೆ ನೆಲೆಗೊಂಡಿರುವ ಭೂಭಾಗವಾಗಿದೆ. ಪುರಾಣ ಹೇಳುವಂತೆ ಪರಶುರಾಮನು ಕ್ಷತ್ರಿಯರನ್ನು ಕೊಂದ ಪಾಪ ಪರಿಹಾರಾರ್ಥವಾಗಿ ಉತ್ತರದಿಂದ ೬೪ ಬ್ರಾಹ್ಮಣ ಕುಟುಂಬಗಳನ್ನು ಕೇರಳದಲ್ಲಿ ನೆಲೆಗೊಳಿಸಿದ. ಪುರಾಣಗಳ ಅನುಸಾರ ಕೇರಳದ ಭೂಭಾಗ ಪರಶುರಾಮ ಕ್ಷೇತ್ರಂಎನ್ನುವುದಾಗಿ ಕರೆಯಲ್ಪಡುತ್ತದೆ. ಸಮುದ್ರದಿಂದ ಭೂಬಾಗವನ್ನು ಅವನು ವಾಸಯೋಗ್ಯವಾಗಿಸಿದ ಐತಿಹ್ಯವೇ ಈ ಹೆಸರಿಗೆ ಕಾರಣವಾಗಿದೆ.
ದೇವಳದ ವಿಶೇಷ:
ದೇವಸ್ಥಾನದಲ್ಲಿ ಉಪಕಾರ ಸ್ಮರಣೆಗಾಗಿ ಭಕ್ತರು ಕೊಡಮಾಡಿದ ಆಭರಣಗಳ ಬೃಹತ್ ಸಂಗ್ರಹವೇ ಇದೆ. ದೇವತೆಯ ಕೃಪಾಕಟಾಕ್ಷದಿಂದ ತಮ್ಮ ಕನಸು ಹಾಗೂ ಈಡೇರಿದ ಬಯಕೆಯ ನೆನಪಾರ್ಥವಾಗಿ ಕೊಡುಗೆಯನ್ನು ನೀಡಿರುತ್ತಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.  ದೇವಿಯ ನಾನಾ ಬಗೆಯ ಆಭರಣಗಳ ಪೈಕಿ ಪಚ್ಚೆಯಲ್ಲಿರುವ ಆಭರಣವು ಅತ್ಯಮೂಲ್ಯ ಎನಿಸಿಕೊಂಡಿದೆ. ಪಚ್ಚೆಯು ಜ್ಞಾನವನ್ನು ಸಂಕೇತಿಸುತ್ತದೆ. ದೇವಳದ ಉತ್ಸವದಲ್ಲಿ ಬಂಗಾರದಲ್ಲಿ ಮಾಡಿರುವ ಎರಡು ಉತ್ಸವಮೂರ್ತಿಯನ್ನು ಬಳಸಲಾಗುತ್ತದೆ. ಮೂಲ ವಿಗ್ರಹ ಕಳೆದುಹೋದಾಗ ಅದಕ್ಕೆ ಪರ್ಯಾಯವಾಗಿ ಚೆನ್ನಮ್ಮ ರಾಣಿಯು ಮತ್ತೊಂದನ್ನು ನೀಡಿದ್ದಳು. ಆದರೆ ಕಳೆದುಹೋದ ಉತ್ಸವಮೂರ್ತಿಯು ತರುವಾಯದಲ್ಲಿ ಸಿಕ್ಕಿತು. ಹೀಗಾಗಿ ಕೊಲ್ಲೂರಿನಲ್ಲಿ ಎರಡು ಉತ್ಸವಮೂರ್ತಿಯನ್ನು ಕಾಣಬಹುದು. ತಮಿಳ್ನಾಡಿನ ಹಿಂದಿನ ಮುಖ್ಯಮಂತ್ರಿ ಈ ದೇವಸ್ಥಾನಕ್ಕೆ ಒಂದು ಬಂಗಾರದ ಕತ್ತಿಯನ್ನು ಕೊಡುಗೆಯಾಗಿ ನೀಡಿದ್ದು ಅದು ಒಂದು ಕೆ.ಜಿ.ಯಷ್ಟು ತೂಗುತ್ತದೆ ಹಾಗೂ ಎರಡೂವರೆ ಅಡಿ ಉದ್ದವಿದೆ. ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಗುಂಡೂರಾವ್ ಬೆಳ್ಳಿಯಿಂದ ಮಾಡಿದ ಇದೇ ಬಗೆಯ ಕತ್ತಿಯೊಂದನ್ನು ಕೊಡುಗೆಯಾಗಿ ನೀಡಿದ್ದರು. ಮೂಕಾಂಬಿಕಾ ದೇವಿಯ ಮುಖವಾಡ ಸಂಪೂರ್ಣ ಸುವರ್ಣಮಯವಾಗಿದೆ. ಇದು ವಿಜಯ ನಗರ ಸಾಮ್ರಾಜ್ಯದ ಕೊಡುಗೆಯಾಗಿದೆ. ಕೆಳದಿಯ ಚೆನ್ನಮ್ಮಾಜಿಯವರಿಂದ ಕೊಡುಗೆಯಾಗಿ ನೀಡಲ್ಪಟ್ಟ ಜ್ಯೋತಿರ್ಲಿಂಗದ ಬಂಗಾರದ ಮುಖವಾಡವು ಇಲ್ಲಿನ ಅನನ್ಯ ಆಭರಣವಾಗಿದೆ. ಸಂಗೀತ ಉತ್ಸವ ಕಳೆದ ೩೦ ನಡೆಯುತ್ತಿದ್ದು  ಸಂಗೀತ ಚಕ್ರವರ್ತಿ ಯೇಸುದಾಸ ತಮ್ಮ ಜನ್ಮದಿನದಂದು ಶ್ರೀ ಕ್ಷೇತ್ರಕ್ಕೆ ಬಂದು ಸರಸ್ವತಿ ಕುರಿತಾದ ಕೀರ್ತನೆಗಳನ್ನು ಹಾಡುತ್ತಿದ್ದಾರೆ. ಒಂಬತ್ತು ದಿನಗಳ ಅವದಿಯ ಸಂಗೀತ ಉತ್ಸವ ಪ್ರತಿ ಜನವರಿಯಲ್ಲಿ ಆರಂಭವಾಗುತ್ತದೆ.
ಸ್ಥಳ ಮಹಿಮೆ:
ದಟ್ಟವಾದ ನಿತ್ಯಹರಿಧ್ವರ್ಣದ ಕಾಡಿನಿಂದ ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ಇತರ ಪುಟ್ಟ ಹಳ್ಳಿಗಳಿಂದ ಕೊಲ್ಲೂರು ಸುತ್ತುವರಿಯಲ್ಪಟ್ಟಿದೆ. ಕೊಡಚಾದ್ರಿ ಶಿಖರದೊಂದಿಗೆ ಪಶ್ಚಿಮ ಘಟ್ಟಗಳ ಇತರ ಶಿಖರಗಳು ಸೇರಿಕೊಂಡು ದೇವಸ್ಥಾನಕ್ಕೆ ಒಂದು ಸುಂದರ ನೋಟ ನೀಡುತ್ತಿದೆ. ಇಲ್ಲಿನ ಕಾಡುಗಳು ಯಾವಾಗಲೂ ಹಸಿರಿನಿಂದ ಕಂಗೊಳಿಸಿರುತ್ತವೆ ಮತ್ತು ಹಲವಾರು ಕಾಡುಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಆಶ್ರಯ ನೀಡಿದೆ. ಇಲ್ಲಿ ಅಪರೂಪದ ಸಸ್ಯಗಳನ್ನು ಸಹ ಕಾಣಬಹುದು. ಕೊಲ್ಲೂರು ಮತ್ತು ಕೊಡಚಾದ್ರಿಯ ನಡುವೆ ಇರುವ ಅಂಬಾವನ ಎನ್ನುವ ಕಾಡು ಅಭೇಧ್ಯವಾದ ಕಾಡು ಎಂದು ಬಣ್ಣಿಸಲಾಗಿದೆ.
ದೇವಸ್ಥಾನದಿಂದ ಸುಮಾರು ೪ ಕಿ.ಮೀ. ದೂರದಲ್ಲಿ ಅರಶಿನಗುಂಡಿ ಎನ್ನುವ ಹೆಸರಿನ ಸುಂದರ ಜಲಪಾತವಿದೆ. ಈ ಜಲಪಾತವು ಕೊಡಚಾದ್ರಿ ಬೆಟ್ಟಗಳ ತಪ್ಪಲು ಪ್ರದೇಶದಲ್ಲಿ ನೆಲೆಗೊಂಡಿದ್ದು, ಇದು ಸುಂದರ ದೃಶ್ಯಗಳ ಪೈಕಿ ಒಂದೆನಿಸಿದೆ. ಈ ಜಲಪಾತವು ದಾಲಿ ಹಳ್ಳಿಯ ಸಮೀಪದಲ್ಲಿದ್ದು ಇಲ್ಲಿಗೆ ತಲುಪಲು ಚಾರಣಿಗರು ೩.ಕಿ.ಮೀ ನಷ್ಟು ಅಂತರವನ್ನು ಚಾರಣ ಮಾಡ ಬೇಕಾಗುತ್ತದೆ.
ಮೂಕಾಂಬಿಕಾ ದೇವಿಯ ಪವಿತ್ರ ಸ್ಥಳದಲ್ಲಿ ಹರಿಯುವ ಎರಡು ನದಿಗಳಾದ ಅಗ್ನಿತೀರ್ಥ ಮತ್ತು ಸೌಪರ್ಣಿಕಾ ಕೊಡಚಾದ್ರಿ ಬೆಟ್ಟಗಳಿಂದ ಉದ್ಬವವಾಗುತ್ತದೆ. ತಂಪಾದ ನೀರಿನ ಪುಟ್ಟ ಚಿಲುಮೆಯು ಕಾಲಭೈರವ ಮತ್ತು ಉಮಾಮಹೇಶ್ವರ ದೇವಸ್ಥಾನಗಳ ನಡುವೆ ನೆಲೆಗೊಂಡಿದ್ದು ಇದೇ ಸೌಪರ್ಣಿಕಾ ನದಿಯ ಉಗಮ ಸ್ಥಾನವಾಗಿದೆ.
ಸೌಪರ್ಣಿಕೆಯ ಹಿನ್ನೆಲೆ:
ಪುರಾಣದ ಪ್ರಕಾರ ಸುಪರ್ಣನು(ಗರುಡ) ತನ್ನ ತಾಯಿ ವಿನುತಾಳ ಅಳಲನ್ನು ಉಪಶಮನ ಗೊಳಿಸಬೇಕೆಂದು ದೇವತೆಗೆ ಮೊರೆಯಿಡುತ್ತಾ ಈ ನದಿಯ ದಂಡೆಗಳ ಮೇಲೆ ಕುಳಿತು ತಪಸ್ಸು ಮಾಡಿದ. ದೇವತೆಯು ಅವನ ಮುಂದೆ ಪ್ರತ್ಯಕ್ಷಳಾದಾಗ ಈ ನದಿಯನ್ನು ಇನ್ನು ಮುಂದೆ ತನ್ನ ಹೆಸರಿನಿಂದ ಕರೆಯಬೇಕೆಂದು ಪ್ರಾರ್ಥಿಸಿದ. ಆದ್ದರಿಂದಲೇ ಈ ನದಿಯನ್ನು ಸೌಪರ್ಣಿಕಾ ಎನ್ನುವುದಾಗಿ ಕರೆಯಲಾಗುತ್ತದೆ. ಆತ ತಪಸ್ಸಿಗೆ ಕುಳಿತ ಎನ್ನಲಾಗುವ ಜಾಗದಲ್ಲಿ ಈಗಲೂ ಒಂದು ಪುಟ್ಟ ಗವಿಯಿದ್ದು ಅದನ್ನು ಗರುಡನ ಗವಿಯೆಂದು ಕರೆಯಲಾಗುತ್ತದೆ.
ಈ ಪವಿತ್ರ ನದಿಯು ಕೊಡಚಾದ್ರಿಯಲ್ಲಿ ಉಗಮವಾಗಿ ಅಂತರ್ಗಾಮಿ ಪ್ರದೇಶದ ಅಂಚಿನವರೆಗೆ ಹರಿಯುತ್ತದೆ. ಈ ಪ್ರದೇಶದಲ್ಲಿ ಭೃಂಗೀಶ ಮತ್ತು ತಿಪ್ಪಲಾದ ಎನ್ನುವ ಎರಡು ಸಣ್ಣ ನದಿಗಳು ಅದಕ್ಕೆ ಸೇರುತ್ತದೆ. ನಂತರ ಇದು ಪಶ್ಚಿಮದ ಕಡೆಗೆ ಹರಿಯುತ್ತದೆ. ಸಂಪಾರ ಎನ್ನುವ ಹೆಸರಿನೊಂದಿಗೆ ಕೊಲ್ಲೂರನ್ನು ಸುತ್ತುವರಿದು ಸಾಗುತ್ತದೆ. ಮರವಂತೆಯ ಮಹಾರಾಜ ಸ್ವಾಮಿ( ವರಾಹ ಸ್ವಾಮಿ) ದೇವಸ್ಥಾನದ ಸಮೀಪ ಇದು ಸಮುದ್ರವನ್ನು ಸೇರುತ್ತದೆ. ಈ ನದಿಯು ಹರಿಯುತ್ತಾ ಹೋಗುವಾಗ ೬೪ ವಿಭಿನ್ನ ಔಷದಿ ಸಸ್ಯಗಳು ಹಾಗೂ ಭೇರುಗಳ ಅಂಶ ಧಾತುಗಳನ್ನು ಹೀರಿಕೊಳ್ಳುವುದರಿಂದ ಈ ನದಿಯಲ್ಲಿ ಸ್ನಾನ ಮಾಡುವವರ ಎಲ್ಲಾ ಕಾಯಿಲೆಗಳನ್ನು ಇದು ವಾಸಿ ಮಾಡುತ್ತದೆ ಎನ್ನುವ ನಂಬಿಕೆಯು ಮನೆಮಾತಾಗಿದೆ. ಆದ್ದರಿಂದಲೇ ಈ ನದಿಯಲ್ಲಿನ ಸ್ನಾನ ಪ್ರಾಮುಖ್ಯತೆಯನ್ನು ಪಡೆದು ಬಹಳ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.
ಕೊಲ್ಲೂರಿಗೆ ತಲುಪುವ ಬಗೆ ಹಾಗೂ ಸೌಲಭ್ಯಗಳು:
ಉಡುಪಿ ಶ್ರೀ ಕೃಷ್ಣನ ಕ್ಷೇತ್ರ ಹಾಗೂ ಕುಂದಾಪುರದಿಂದ ಹಲವಾರು ಬಸ್ಸುಗಳು ಶ್ರೀಕ್ಷೇತ್ರಕ್ಕೆ ಸಂಪರ್ಕವನ್ನು ಕಲ್ಪಿಸುತ್ತವೆ. ಕೊಂಕಣ ರೈಲ್ವೇ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್ ಎಂದೆ ಕರೆಯಲ್ಪಡುವ ಬೈಂದೂರಿನಲ್ಲಿ ಇಳಿದು ತಗ್ಗರ್ಸೆ ಮೂಲಕ ಕೊಲ್ಲೂರು ಕ್ಷೇತ್ರವನ್ನು ತಲುಪ ಬಹುದಾಗಿದೆ. ಶ್ರೀಕ್ಷೇತ್ರದಲ್ಲಿ ಹಲವಾರು ವಸತಿ ಸೌಕರ್ಯಗಳಿವೆ. ಆಡಳಿತ ಮಂಡಳಿಯ ಸೌಪರ್ಣಿಕಾ ಅತಿಥಿಗೃಹವು ಭಕ್ತಾಗಳಿಗೆ ವಸತಿಯ ವ್ಯವಸ್ಥೆಯನ್ನು ನೀಡುತ್ತಿದೆ. ಅಲ್ಲದೇ ಸ್ಥಳದಲ್ಲಿ ಲಲಿತಾಂಬಿಕಾ ಅತಿಥಿಗೃಹ, ಮಾತಾಛತ್ರಂ, ಗೊಯೆಂಕಾ ವಸತಿ ಗೃಹಗಳಿದ್ದು, ಸುಮಾರು ೪೦೦ ಕೋಣೆಗಳು ಸಂಯೋಜಿಸಲ್ಪಟ್ಟಿದೆ. ಸಾಮಾನ್ಯ ಜನರಿಗೆ ಪಾವತಿ ಮಾಡಲು ಶಕ್ಯವಾಗುವಷ್ಟರ ಮಟ್ಟಿಗೆ ಇಲ್ಲಿನ ಕೋಣೆಗಳ ದರವನ್ನು ನಿಗದಿಪಡಿಸಲಾಗಿದೆ. ಏಕೈಕ ಸಂದರ್ಶಕರಿಗಾಗಿ ಬಸ್‌ನಿಲ್ದಾಣದ ಸಂಕೀರ್ಣದಲ್ಲಿ ಒಂದು ವಿಶ್ರಾಂತಿ ಗೃಹದ ವ್ಯವಸ್ಥೆ, ಅತಿಥಿ ಮಂದಿರ ಮತ್ತೊಂದು ಸೌಕರ್ಯವಾಗಿದ್ದು ಇದನ್ನು ರಾಮಕೃಷ್ಣ ಯೋಗಾಶ್ರಮ ನಿರ್ವಹಿಸುತ್ತದೆ.




ಅವಿಭಜಿತ ದ.ಕ ಮತ್ತು ಉಡುಪಿಯಲ್ಲಿ...
ಕೃಷಿ ಭೂಮಿಯನ್ನು ಆಕ್ರಮಿಸುತ್ತಿರುವ ಅಕ್ರಮ ಕಲ್ಲುಕೋರೆಗಳು  
ಭಾರತ ರೈತರ ನಾಡು. ಇಲ್ಲಿರುವ ರೈತ ದೇಶದ ಆರ್ಥಿಕತೆಯ ಬೆನ್ನೆಲು ಬಾಗಿದ್ದಾನೆ. ಆದರೆ ಇತ್ತೀಚಿನ ದಿನದಲ್ಲಿ ರೈತನ ಬೆನ್ನು ಮೂಳೆ ಮುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು. ಕೃಷಿಭೂಮಿಯೇ ರೈತನ ಜೀವಾಳ. ಆದರೆ ನೈಸರ್ಗಿಕ ಸಂಪತ್ತುಗಳಿಗಾಗಿ ಕೃಷಿಭೂಮಿಯ ನಾಶ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದೆ. ದೇಶದ ಅಭಿವೃದ್ಧಿಗೆ ನೈಸರ್ಗಿಕ ಸಂಪತ್ತುಗಳು ಪೂರಕವಾಗಿದೆ. ಪೆಟ್ರೋಲಿಯಂ, ಕಲ್ಲಿದ್ದಲು, ಕಬ್ಬಿಣದ ಅದಿರು, ಕಲ್ಲುಗಳು  ನೈಸರ್ಗಿಕವಾಗಿ ದೊರಕುವ ಸೌಲಭ್ಯಗಳಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾಧ್ಯಂತ ಹೆಚ್ಚಾಗಿ ಸಿಗುವ ಸೋಮನಾಥ ಶಿಲೆ, ಕಪ್ಪುಶಿಲೆ, ಕೆಂಪುಶಿಲೆಗಳು ಕಟ್ಟಡದ ಸೌಂದರ್ಯ ಹೆಚ್ಚಿಸುವುದರೊಂದಿಗೆ ದೇಶದ ಅಭಿವೃದ್ಧಿಗೆ ಸಾಕಾರವಾಗಿದೆ.
ಆದರೆ ಇಂದು ಈ  ನೈಸರ್ಗಿಕ ಸಂಪತ್ತುಗಳನ್ನು ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುತ್ತಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಣ್ತಪ್ಪಿಸಿ ಅಕ್ರಮ ಕಲ್ಲುಕೋರೆ  ನಡೆಸುವ ದಂಧೆ ಕರಾವಳಿಯಲ್ಲಿ ಪ್ರಾರಂಭವಾಗಿದೆ. ನೈಸರ್ಗಿಕ ಸಂಪತ್ತಾದ ಕಲ್ಲು ಮನುಷ್ಯನ ಜೀವನಕ್ಕೆ ಅವಿಭಾಜ್ಯ ಅಂಗವಾಗಿದೆ ನಿಜ ಆದರೆ ಕೃಷಿ ಭೂಮಿ, ಸರಕಾರಿ ಅರಣ್ಯ ಇಲಾಖೆಯ ಸ್ಥಳವನ್ನು ಇಲಾಖೆಯ ಅನುಮತಿಯನ್ನು ಮೀರಿ ಅಕ್ರಮವಾಗಿ ಬಳಸುವುದು ಯಾವ ನ್ಯಾಯ? ಅಲ್ಲದೇ ಕ್ರಷರ್‌ಗಳಲ್ಲಿ ಬಳಸುವ ಸುಡುಮದ್ದುಗಳ ಸ್ಪೋಟದಿಂದಾಗಿ ಇಬ್ಬರು ಮಹಿಳೆಯರು ಮೃತ ಪಟ್ಟಿರುವುದು ಆತಂಕಕ್ಕೆ ಎಡೆಮಾಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಕ್ಸಲರ ಹಾವಳಿ ಒಂದೆಡೆಯಾದರೆ ಅಕ್ರಮ ಕಲ್ಲುಕೋರೆಗಳ ಮಾಲಕರಿಂದ ಕೃಷಿ ಭೂಮಿಯ ನಾಶ ಹಾಗೂ ಅನೇಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ದಿನ ಬೆಳಗಾದರೆ ಆತಂಕದಿಂದ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಕಲ್ಲು ಕೋರೆಯಿಂದ ಅಲಂಕಾರಿಕ ಕಲ್ಲುಗಳು, ಕಪ್ಪು ಶಿಲೆ ಹಾಗೂ ಕೆಂಪುಕಲ್ಲುಗಳು ಎಂದು ವಿಭಾಗ ಮಾಡಲಾಗಿದ್ದು ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಶಿಲೆ ಕಲ್ಲು (ಕ್ರಷರ್) ಮತ್ತು ಕೆಂಪು ಕಲ್ಲು ಕೋರೆಗಳೆ ಜಾಸ್ತಿ ಕಾರ್ಯವೆಸಗುತ್ತಿದೆ. ಸಾಮಾನ್ಯವಾಗಿ ಶಿಲೆ ಕಲ್ಲುಗಳು ವಿಶಾಲವಾದ ಜಾಗದಲ್ಲಿ ಎತ್ತರವಾಗಿರುತ್ತದೆ. ಇವುಗಳು ತುಂಬಾ ಗಡುಸುತನ ಹೊಂದಿರುವುದರಿಂದ ಒಡೆಯಲು ಸಿಡಿಮದ್ದುಗಳನ್ನು ಬಳಸಬೇಕಾಗುತ್ತದೆ. ಸಿಡಿಸಲು ಬಳಸುವ ಅಪಾಯಕಾರಿ ವಸ್ತುಗಳ ಶೇಖರಣೆಗೆ ಸರಿಯಾದ ಸ್ಥಳ ಹಾಗೂ ಅನುಭವ ಕೊರತೆಯಿರುವ ಕಾರ್ಮಿಕರಿಂದ ಅಪಾಯ ಜಾಸ್ತಿಯಾಗಿದೆ. ಕೆಂಪುಕಲ್ಲುಗಳು ಭೂಮಿಯ ಒಳಭಾಗದಲ್ಲಿ ಸೇರಿಕೊಂಡಿರುವುದರಿಂದ ಅವುಗಳನ್ನು ತೆಗೆಯಲು ತುಂಬಾ ಆಳದವರೆಗೆ ಹೋಗಿ ಜಾಗರೂಕತೆಯಿಂದ ಕತ್ತರಿಸಿ ಮಾರಬೇಕಾಗುತ್ತದೆ. ಬೇಸಿಗೆಯಲ್ಲಿ ಮಾತ್ರ ಕಾರ್ಯಚರಣೆಗೈಯುವ ಈ ಕೋರೆಗಳು ಮಳೆಗಾಲದಲ್ಲಿ ನೀರಿನಿಂದ ತುಂಬಿಕೊಂಡು ಅಪಾಯವನ್ನು ಕೈಬೀಸಿ ಕರೆಯುತ್ತಿರುತ್ತದೆ. ಇತ್ತೀಚಿನ ದಿನದಲ್ಲಿ ಕರಾವಳಿ ಕೋರೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಅನ್ಯಜಿಲ್ಲೆ ಹಾಗೂ ಅನ್ಯರಾಜ್ಯದವರಾಗಿದ್ದಾರೆ. ಗುತ್ತಿಗೆದಾರರು ಕೂಡ ಅನ್ಯ ರಾಜ್ಯದವರೇ ಆಗಿ ಸರಕಾರಿ ಜಾಗ ಹಾಗೂ ಅರಣ್ಯ ಇಲಾಖೆಯ ಸ್ಥಳವನ್ನು ಆಕ್ರಮಿಸುತ್ತಿದ್ದಾರೆ.
ದ.ಕ ಜಿಲ್ಲೆಯು ೪,೭೭,೧೪೯ ಹೆಕ್ಟೇರ್ ವಿಸ್ತೀರ್ಣವಿದೆ. ಇದರಲ್ಲಿ  ೧,೨೮,೪೭೬ ಹೆ. ಅರಣ್ಯ ಪ್ರದೇಶವಿದೆ. ಜಿಲ್ಲೆಯ ಒಟ್ಟು ವಿಸ್ತೀರ್ಣದ ಶೇ.೨೭ ಭಾಗವನ್ನು ಅರಣ್ಯ ಪ್ರದೇಶ ಒಳಗೊಂಡಿದೆ. ಉಳಿದಂತೆ ೧,೫೭,೩೨೬ ಸಾಗುವಳಿ, ೭೦.೩೮೭ ಹೆ. ನೀರಾವರಿ, ೮೬೯೩೯ ಕುಷ್ಕಿ ಜಮೀನು ಹೊಂದಿದೆ. ಸಾಗುವಳಿ ಭೂಮಿ ಹಾಗೂ ಗುಡ್ಡಗಾಡು, ಅರಣ್ಯ ಪ್ರದೇಶಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಗುತ್ತಿಗೆದಾರರಿಗೆ ನೀಡಿದ ಅನುಮತಿಯ ದಿಕ್ಕರಿಸಿ ಅಕ್ರಮ ಕಲ್ಲುಕೋರೆಗಳು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲೆಯೆತ್ತಿವೆ.
ಇಲಾಖೆಯಿಂದ ಗುತ್ತಿಗೆ ನೀಡುವ ಪದ್ದತಿ ಹೇಗೆ:
ಇಲಾಖೆ ವತಿಯಿಂದ ಕಲ್ಲು ಗಣಿ ಗುತ್ತಿಗೆಯನ್ನು ೫ ಅಥವಾ ೧೦ ವರ್ಷಗಳಿಗೆ ನೀಡಲಾಗುತ್ತದೆ. ಗುತ್ತಿಗೆದಾರ ಸ್ಥಳದ ಮಾಹಿತಿ ಪತ್ರ, ಕೋರೆಯ ನಕ್ಷೆ, ಪಹಣಿ ಪತ್ರ(ಆರ್‌ಟಿಸಿ)ವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಬೇಕು. ಇದರೊಂದಿಗೆ ಅರಣ್ಯ ಇಲಾಖೆ, ಜಮೀನಿನ ಮಾಲಕರಿಂದ ಅನುಮತಿ ಹಾಗೂ ಪರಿಸರ ವಿಮೋಚನ ಪತ್ರವನ್ನು ಲಗತ್ತಿಸಬೇಕು. ಎಲ್ಲಾ ವರದಿಯನ್ನು ಗಮನಿಸಿ ಇಲಾಖೆ ಗುತ್ತಿಗೆದಾರರು ಸಲ್ಲಿಸಿದ ಅರ್ಜಿಗೆ ನಕ್ಷೆಯನ್ನು ರಚಿಸಿ ಅನುಮತಿಯನ್ನು ನೀಡುತ್ತದೆ. ಕಪ್ಪು ಶಿಲೆಗೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ೮ ವಿಭಾಗಗಳಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ.
ರಸ್ತೆಯಿಂದ ಕನಿಷ್ಟ ೫೦ ಮೀಟರ್ ದೂರದಲ್ಲಿ ಕೋರೆ ಮಾಡಬೇಕೆನ್ನುವ  ನಿರ್ಬಂಧವಿದ್ದರೂ ಗುತ್ತಿಗೆದಾರರು ಪಾಲಿಸುವುದಿಲ್ಲ. ಕೃಷಿ ಭೂಮಿಯಿರುವ ಸ್ಥಳದಲ್ಲಿ ದನಕರು, ಶಾಲಾ ಮಕ್ಕಳು ಸಂಚರಿಸುವ ಜಾಗದಲ್ಲಿ ತಡೆಗೋಡೆಯನ್ನು ನಿರ್ಮಿಸಬೇಕಾಗುತ್ತದೆ. ನೀರು ನೋಡಿದಾಕ್ಷಣ ಮಕ್ಕಳು ಈಜುವುದಕ್ಕೆ ತೆರಳುವ ಸಾದ್ಯತೆಯಿರುವುದರಿಂದ ಜಮೀನು ಹಾಗೂ ಕೋರೆ ಮಾಲಕರು ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕು. ಅನೇಕ ವರ್ಷಗಳ  ಹಿಂದೆ ಬೆಳುವಾಯಿಯ ಖಾಸಗಿ ಭೂಮಿಯಲ್ಲಿದ್ದ ಕಲ್ಲುಕೋರೆಯಲ್ಲಿ ಇಬ್ಬರು ಬಾಲಕರು ಈಜಲು ತೆರಳಿ ಸಾವನ್ನಪ್ಪಿದ್ದಾರೆ. ಅದರ ನೆನಪು ಮಾಸುವಾಗಲೇ ಇತ್ತೀಚಿಗೆ ಕುಂದಾಪುರ ಸಮೀಪ ಇಟ್ಟಿಗೆ ತಯಾರಿಕೆಗೆ ಬಳಸಿದ ಭೂಮಿಯಲ್ಲಿ ನೀರು ತುಂಬಿಕೊಂಡಿದ್ದು ರಜಾದಿನದಲ್ಲಿ ಈಜಲು ತೆರಳಿದ ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿರುವುದು ಬೇಸರ ಹುಟ್ಟಿಸುತ್ತದೆ. ಅಲ್ಲದೇ ಕ್ರಷರ್‌ಗಳಲ್ಲಿ ಶಿಲೆಕಲ್ಲನ್ನು ಸಿಡಿಸುವಾಗ ಜಾಗೃತೆ ವಹಿಸುವುದರೊಂದಿಗೆ ಧೂಳಿನ ವಿಪರೀತತೆಯನ್ನು ಕಡಿಮೆ ಮಾಡುವ ಮಾರ್ಗವನ್ನು ಅನುಸರಿಸಬೇಕು. ಮಾಲಕರು ರೆವೆನ್ಯೂ ನಕ್ಷೆಯಲ್ಲಿರುವಂತೆ ಕೋರೆಗೆ ಸ್ಥಳ ನಿಗದಿಮಾಡಬೇಕೆ ಹೊರತು ಅದನ್ನು  ನಿರ್ಲಕ್ಷಿಸಿ ಕಾರ್ಯವೆಸಗುವುದು ಅಕ್ರಮವಾಗುತ್ತದೆ.
ಶಿಲೆ ಕೋರೆಯಲ್ಲಿ ಅಕ್ರಮಗಳು ಕಡಿಮೆಯಾಗಿರುತ್ತದೆ. ಈ ಕೋರೆಯಲ್ಲಿ ಕ್ರಷರ್ ಹಾಕಿಸುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದ್ದು ಗುತ್ತಿಗೆದಾರರು ಬ್ಯಾಂಕ್ ಲೋನ್‌ನ್ನು  ಅವಲಂಬಿಸುತ್ತಾರೆ. ಅಲ್ಲದೇ ಸ್ಪೋಟಕಗಳನ್ನು ಬಳಸಲು ಇರುವುದರಿಂದ ಹಲವಾರು ಒಪ್ಪಂದಗಳಿಗೆ ಸಹಿ ಮಾಡಬೇಕಾಗುತ್ತದೆ. ಆದ್ದರಿಂದ ಮಾಲಕರು ಅಕ್ರಮ ಕಾರ್ಯಗಳಿಗೆ ಮುಂದಾಗುವುದಿಲ್ಲ. ಕೆಂಪು ಕಲ್ಲು ಕೋರೆಯಲ್ಲಿ ಖರ್ಚುಗಳು ಕಡಿಮೆಯಾದ್ದರಿಂದ ಅಕ್ರಮ ವಿಪರೀತವಾಗಿ ನಡೆಯುತ್ತದೆ.
ಅವಿಭಜಿತ ದ.ಕ. ಮತ್ತು ಉಡುಪಿಯಲ್ಲಿರುವ ಸಕ್ರಮ ಕೋರೆಗಳ ೨೦೧೦-೧೧ರ ವರದಿ:
ದ.ಕ ಜಿಲ್ಲೆಯಲ್ಲಿ ಅಲಂಕಾರಿಕ ಶಿಲೆ ೫ ಗುತ್ತಿಗೆ ನೀಡಲಾಗಿದ್ದು ೩೦೩ ಕ್ಯೂಬಿಕ್ ಉತ್ಪಾದನೆಯಾಗಿದೆ. ಶಿಲೆಕಲ್ಲು ಕೋರೆ ೨೭೩ ಗುತ್ತಿಗೆ ದಾರರಿಂದ ೫,೩೪,೬೨೮ ಮೇ.ಟನ್ (೦.೫ ಮಿಲಿ ಟನ್),೧೧೩- ಕೆಂಪು ಕೋರೆ ಗುತ್ತಿಗೆ ದಾರರಿಂದ ೪೨,೯೬೪ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ.(ಸಕ್ರಮ ಕೋರೆಗಳಿಂದ). ದ.ಕ ಜಿಲ್ಲೆಯಲ್ಲಿ ೨೦೧೧-೧೨ರಲ್ಲಿ ೧೦೨ ಅಕ್ರಮ ಕಲ್ಲುಕೋರೆಯನ್ನು ಪತ್ತೆಹಚ್ಚಿ ರೂ. ೯.೨೭ ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.
ಉಡುಪಿ ಜಿಲ್ಲೆ:
ಉಡುಪಿ ಜಿಲ್ಲೆಯಲ್ಲಿ ೬ ಅಲಂಕಾರಿಕ ಕೋರೆಗಳಿಂದ ೬೭೫ ಕ್ಯೂಬಿಕ್ ಉತ್ಪಾದನೆಯಾಗಿದ್ದು, ೪೦೫ ಕೆಂಪು ಕೋರೆ ಹಾಗೂ ಶಿಲೆಕೋರೆಗಳಿಂದ ೬,೮೩,೧೮೯ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ೨೦೧೧-೧೨ರಲ್ಲಿ ೧೬೯ ಅನಧಿಕೃತ ಕಲ್ಲುಕೋರೆಯನ್ನು ಪತ್ತೆಹಚ್ಚಿ ೩೦೫ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮವಾಗಿ ಕೋರೆ ನಡೆಸುತ್ತಿರುವ ಮಾಲಕರಿಗೆ ದಂಡ ವಿಧಿಸಲಾಗಿದ್ದು ೨೦೧೧-೧೨ರಲ್ಲಿ ರೂ.೨೭,೨೧,೧೦೦ ಸಂಗ್ರಹಿಸಲಾಗಿದೆ. ಕೆಲವೊಂದು ಪ್ರಕರಣಗಳು ಕೋರ್ಟ್‌ನಲ್ಲಿವೆ.
ಕಲ್ಲುಗಳು ಮನೆ ಕಟ್ಟುವುದಕ್ಕೆ ಅವಶ್ಯಕವಾಗಿದ್ದರೂ, ಕೃಷಿ ಭೂಮಿ ಮನುಷ್ಯ ಸಂತೋಷವಾಗಿ ಜೀವನ ನಡೆಸಲು ಅವಶ್ಯಕ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಕಲ್ಲುಕೋರೆಗಳಿಂದ ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶಗಳಿಗೆ ಹಾನಿಯಾಗದೇ ಇಲಾಖೆಯು ಸೂಚಿಸಿದ ನಕ್ಷೆಯಂತೆ ಕಾರ್ಯ ನಿರ್ವಹಿಸಿದ್ದೇ ಆದರೆ ಅಕ್ರಮವನ್ನು ತಡೆಯಬಹುದು. ಆದರೆ ಹಳ್ಳಿಯಲ್ಲಿ ಕಲ್ಲುಕೋರೆಗಳ ಸಮೀಪದಲ್ಲಿ ಮಕ್ಕಳು ಶಾಲೆಗೆ ಹೋಗುವುದರಿಂದ ಈಜುವುದಕ್ಕೆ ತೆರಳುವ ಸಾಧ್ಯತೆಯಿದೆ. ದನಕರುಗಳು ತಿರುಗಾಡುವುದರಿಂದ ಅವುಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ ಕಲ್ಲು ಕೋರೆ ಮಾಲಕರು ಈ ಕುರಿತು ಎಚ್ಚರಿಕೆ ವಹಿಸಿದರೆ ಅನೇಕ ಜೀವಗಳನ್ನು ರಕ್ಷಣೆ ಮಾಡಬಹುದಾಗಿದೆ.

ಎಫ್‌ಎಂಬಿಯಲ್ಲಿರುವ ನಕ್ಷೆಯನ್ನು ಹೊರತಾಗಿ ಕೋರೆ ವಿಸ್ತರಿಸಿದರೆ ಅಥವಾ ಇಲಾಖೆಯಿಂದ ಅನುಮತಿಯನ್ನು ಪಡೆಯದಿದ್ದರೆ ಆ ಕೋರೆಯನ್ನು ಅಕ್ರಮವೆಂದು ಪರಿಗಣಿಸಲಾಗುತ್ತದೆ.  ಅಲ್ಲದೇ ದೇಶದಲ್ಲಿರುವ ಭೂಮಿಯನ್ನು ಕೃಷಿ, ಅರಣ್ಯ, ನೈಸರ್ಗಿಕ ಸಂಪತ್ತಿನ ಭೂಮಿಯನ್ನಾಗಿ ವಿಭಾಗಿಸಬೇಕು. ಇದರಿಂದ ಅರಣ್ಯ ಪ್ರದೇಶವನ್ನು ಅಕ್ರಮ ಕಲ್ಲು ಕೋರೆಗೆ ಬಳಸಿಕೊಳ್ಳುವುದನ್ನು ತಪ್ಪಿಸಬಹುದು. ಅಕ್ರಮವಾಗಿ ಸಿಕ್ಕಿಬಿದ್ದವರು ಪ್ರಾಮಾಣಿಕತೆಯಿಂದ ತಪ್ಪನ್ನು ಒಪ್ಪಿಕೊಂಡು ಅಕ್ರಮ ಕಾರ್ಯ ನಿಲ್ಲಿಸಿದ್ದಾರೆ.
ಡಾ.ಬಿ.ಎಂ.ರವೀಂದ್ರ ಉಪನಿರ್ದೇಶಕ
ದ.ಕ.ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ

ಉಡುಪಿ ಜಿಲ್ಲೆಯಲ್ಲಿ ಮೂರು ತಾಲೂಕುಗಳು ಇರುವುದರಿಂದ ಎಲ್ಲಾ ಜವಾಬ್ದಾರಿಯನ್ನು ನಾವು ಇಬ್ಬರೇ ನೋಡಿಕೊಳ್ಳಬೇಕು. ಸಿಬ್ಬಂದಿಯ ಕೊರತೆಯಿದ್ದಾಗಲೂ ದಕ್ಷತೆಯಿಂದ ಕಾರ್ಯವೆಸಗಿದ್ದೇವೆ. ಅಕ್ರಮವಾಗಿ ಕಾರ್ಯವೆಸಗುತ್ತಿರುವ ಕುರಿತು ಗ್ರಾಮಸ್ಥರು ನೇರವಾಗಿ ದೂರುಗಳನ್ನು ನೀಡಿದರೆ ಅಥವಾ ಗ್ರಾಮ ಪಂಚಾಯತ್‌ನ ಮೂಲಕ ಮಾಹಿತಿಯನ್ನು ನೀಡಿದರೂ ಶೀಘ್ರವೇ ಕಾರ್ಯ ನಿರತರಾಗಿ ಅಕ್ರಮ ಕೋರೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಮೃತ್ಯುಂಜಯ- ಉಪನಿರ್ದೇಶಕ ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ






ಬಡವರ, ನಿರಕ್ಷರಿಗಳ ಪಾಲಿನ ನಂದಾದೀಪ: ಕೆ.ಕೆ.ಪೈ
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಯಾವುದಾದರೂ ಒಂದು ಸಂದರ್ಭದಲ್ಲಿ ಗುರುತಿಸುತ್ತೇವೆ. ಆತ ಸಮಾಜಮುಖಿ ಕಾರ್ಯ ಮಾಡುತ್ತಾ ಒಳ್ಳೆಯತನದಿಂದ ಜೀವನ ಸಾಗಿಸಿದರೆ ಅವರ ಸ್ಮರಣೆಯನ್ನು ದಿನನಿತ್ಯ ಮಾಡುತ್ತಾರೆ. ಸಮಾಜದ ಗಣ್ಯರು ಸೇರಿ ಆಚರಿಸುತ್ತಾರೆ. ಈ ರೀತಿಯಾಗಿ ಸ್ಮರಣೆ ಮಾಡುವುದಕ್ಕೂ ಆತ ಜೀವಿತದಲ್ಲಿ ಮಾಡಿದ ಕಾರ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಒಂದು ಕಾರ್ಯಕ್ರಮ ದಿ.ಕೆ.ಕೆ.ಪೈ ಅವರ ೯೨ನೇ ಜನ್ಮದಿನಚರಣೆ ನಡೆದಿರುವುದು ಸಾಕ್ಷಿಯಾಗಿದೆ. ಅವರು ನಮ್ಮನ್ನಗಲಿ ಮೂರುವರೆ ವರ್ಷಗಳು ಕಳೆದಿವೆ.ಆದರೂ ಸಮಾಜದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ಜನರ ಆಹ್ವಾನದಂತೆ ಮದುವೆ, ಉಪನಯನ, ವಾರ್ಷಿಕೋತ್ಸವ ಸಮಾರಂಭ, ಸತ್ಯನಾರಾಯಣ ಪೂಜೆ, ಯಕ್ಷಗಾನ ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರನ್ನೂ ಮಾತನಾಡಿಸುವ ಪರಿ ಹಾಗೂ ಜನರೊಂದಿಗೆ ಬೆರೆತು ಬದುಕುತ್ತಿದ್ದ ಕೆ.ಕೆ.ಪೈ ಅವರ ವ್ಯಕ್ತಿತ್ವವನ್ನು ಎಂದು ಮರೆಯಲು ಸಾಧ್ಯವಿಲ್ಲ. ಕೆ.ಕೆ.ಪೈ ಅವರ ಜೀವನ ಜನರ ವ್ಯಕ್ತಿಯಾಗಿ ಜನರ ನಡುವೆ ಬದುಕಿರುವ ಜನಪ್ರೇಮಿಯಾಗಿ ಗುರುತಿಸಬಹುದು.
೧೯೨೧ರ ಜೂನ್ ೨೬ ರಂದು ಜನಿಸಿದ ಅವರು ತಾನು ಕೊನೆಯುಸಿರೆಳೆದ ದಿನವಾದ ಜ.೧೪ರವರೆಗೂ ಸದಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಮತ್ತು ದುಡಿಮೆಗಳಲ್ಲಿ ಉನ್ನತ ಸ್ಥಾನ ಪಡೆದ ದೊಡ್ಡ ವ್ಯಕ್ತಿಗಳಲ್ಲಿ ಅವರೊಬ್ಬರಾಗಿದ್ದರು. ೧೯೯೮ರಲ್ಲಿ ಉಡುಪಿಯಲ್ಲಿ ನಡೆದ ಅವರ ೭೮ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸೇರಿದ ಬೃಹತ್ ಜನಸಮೂಹ ಮತ್ತು ೨೦೦೯ರ ಜ.೧೫ರಂದು ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಜನಸಮೂಹ ಅವರು ಜನರ ಹೃದಯಗಳಲ್ಲಿ ಪಡೆದಿದ್ದ ಉನ್ನತ ಸ್ಥಾನಕ್ಕೆ ಸಾಕ್ಷಿಯಾಗಿತ್ತು.
ಕೆ.ಕೆ.ಪೈ ನಿರ್ವಹಿಸಿದ ಜವಾಬ್ದಾರಿಯುತ ಹುದ್ದೆಗಳು ಹಲವಾರು. ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿ ಎಂಟು ವರ್ಷ ಸೇವೆ ಸಲ್ಲಿಸಿದ್ದ ಅವರು ಬ್ಯಾಂಕಿನಲ್ಲಿಯೂ ಜನರ ವ್ಯಕ್ತಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಯಾರು ಪತ್ರ ಬರೆದರೂ ಅದಕ್ಕೆ ಉತ್ತರಿಸಿದ್ದರು. ಜನಸಾಮಾನ್ಯರಿಗೆ ಬ್ಯಾಂಕ್ ಸಾಲ ನೀಡುವುದರ ಮೂಲಕ ಮತ್ತು ಬಡ ಕುಟುಂಬಗಳ ಹುಡುಗ-ಹುಡುಗಿಯರಿಗೆ ಬ್ಯಾಂಕಿನಲ್ಲಿ ಉದ್ಯೋಗ ನೀಡುವ ಮೂಲಕ ಅವರು ಜನರ ವ್ಯಕ್ತಿಯಾಗಿ ಮೆರೆದರು. ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಗೆ ಹೆಚ್ಚು ಹೆಚ್ಚು ಒತ್ತು ನೀಡುವ ಮೂಲಕ ಅವರು ಜನರ ವ್ಯಕ್ತಿಯಾಗಿ ಮೆರೆದರು. ವಿವಿಧ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿ ಕಾಲೇಜುಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಅಕಾಡೆಮಿ ರಿಜಿಸ್ಟ್ರಾರ್‌ರಾಗಿ ಡಾ.ಟಿ.ಎಂ.ಎ.ಪೈ ಫೌಂಡೇಶನ್ ಅಧ್ಯಕ್ಷರಾಗಿ ಮತ್ತು ಟಿ.ಎ.ಪೈ. ಮ್ಯಾನೇಜ್ ಮೆಂಟ್ ಸಂಸ್ಥೆಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ವೇಳೆ ಕೂಡ ಕೆ.ಕೆ.ಪೈ ಮಾತ್ರ ತಂದೆ ತಾಯಿಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಪತ್ರ ಬರೆದು ಸಂತಾಪ ಸೂಚಿಸಿ ಧೈರ್ಯ ನೀಡುವುದು, ಒಳ್ಳೆಯ ಕಾರ್ಯ ಮಾಡಿದವರನ್ನು ಅಭಿನಂಧಿಸಿ ಪ್ರೋತ್ಸಾಹಿಸುವುದು ಇತ್ಯಾದಿ ಕೆಲಸಗಳನ್ನು ಜೀವನ ಪರ್ಯಂತ ಮಾಡಿದರು.
ಪ್ರತಿಫಲವನ್ನು ಬಯಸದೇ ಕಾರ್ಯವನ್ನು ಮಾಡಬೇಕು. ಇದರಿಂದ ಆತ್ಮತೃಪ್ತಿಯುಂಟಾಗುತ್ತದೆ. ಈ ರೀತಿಯಾಗಿ ಕೆ.ಕೆ. ಪೈ ಅವರ ಕೆಲಸಗಳಿಗೆ ಯಾವ ಪ್ರತಿಫಲವನ್ನು ಬಯಸದೇ ಕೆಲಸ ಮಾಡಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳದೆ ಉಡುಪಿಯ ಜನತೆ ೧೯೯೮ರಲ್ಲಿ ಪೈ ಅವರ ೭೮ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಬಡವರ ಅನ್ನದಾತರೆಂದೆ ಪರಿಗಣಿಸಲ್ಪಟ್ಟಿದ್ದ ಕೆ.ಕೆ.ಪೈ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸ್ಮರಣಿಕೆಯ ರೂಪದಲ್ಲಿ ಚಿನ್ನದ ಬಟ್ಟಲನ್ನು ಸಮರ್ಪಿಸಲಾಯಿತು. ವಿದೇಶದಲ್ಲಿ ಉದ್ಯಮಿಯಾಗಿರುವ ಬಿ.ಆರ್.ಶೆಟ್ಟಿ ಅವರಿಗೆ ಬ್ಯಾಂಕಿನಿಂದ ಸಾಲವನ್ನು ಒದಗಿಸಿಕೊಟ್ಟು ಸಮಾಜದಲ್ಲಿ ಈ ರೀತಿಯಾಗಿ ಉದ್ಯಮಿಯಾಗಿ ಬೆಳೆಯಲು ಸಹಾಯವಾಗಿದೆ ಎಂದು ಸ್ವತಃ ಶೆಟ್ಟರು ಸ್ಮರಿಸಿಕೊಳ್ಳುತ್ತಾರೆ. ಈ ಸಮಾರಂಭ ನಿಜವಾಗಿಯೂ ಅರ್ಥಪೂರ್ಣವಾಗಿದ್ದು ಅಲ್ಲದೇ ಮಹತ್ವದ ಸ್ಮರಣಿಕೆಯಾಗಿತ್ತು.
ಕೆ.ಕೆ.ಪೈ ಅವರು ಬದುಕಿರುವಾಗಲೇ ಉಡುಪಿಯ ಜನತೆ ಸತೀಶ್ಚಂದ್ರ ಹೆಗ್ಡೆ ಅವರ ನಾಯಕತ್ವದಲ್ಲಿ ಕೆ.ಕೆ.ಪೈ ಟ್ರಸ್ಟನ್ನು ಸ್ಥಾಪಿಸಿದ್ದು ಅವರ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಗಿದೆ. ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಮಾತ್ರವಲ್ಲದೇ ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಟ್ರಸ್ಟ್ ಹಣವನ್ನು ನೀಡುತ್ತಿದೆ. ೩.೬೦ ಲಕ್ಷದಷ್ಟು ಹಣವನ್ನು ಇದಕ್ಕಾಗಿ ಬಳಸಲಾಗಿದೆ. ಜನರ ವ್ಯಕ್ತಿಯಾಗಿದ್ದ ಕೆ.ಕೆ.ಪೈ ಅವರ ಹೆಸರಿನಲ್ಲಿ ನಿರಂತರವಾಗಿ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮ ನಿಜವಾಗಿಯೂ ಜನಹಿತ ಸಾಧಿಸುವ ಕಾರ್ಯಕ್ರಮವಾಗಿದೆ.
ಕೆ.ಕೆ.ಪೈ ಅವರ ಹೆಸರಿನಲ್ಲಿ ಕೆ.ಕೆ.ಪೈ ಟ್ರಸ್ಟ್ ಬ್ಯಾಂಕಿಂಗ್ ಸೇವೆಯಲ್ಲಿ ಉನ್ನತ ಸಾಧನೆ ತೋರಿಸಿದ ಬ್ಯಾಂಕರುಗಳಿಗೆ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಟ್ರಸ್ಟ್ ಈವರೆಗೆ ಉನ್ನತ ಸಾಧನೆ ತೋರಿಸುವ ಏಳು ಬ್ಯಾಂಕರುಗಳಿಗೆ ಕೆ.ಕೆ.ಪೈ ಪ್ರಶಸ್ತಿ ನೀಡಿ ಗೌರವಿಸಿದೆ. ಈ ವರ್ಷದ ಪ್ರಶಸ್ತಿಯನ್ನು ಐಸಿಐಸಿಐ ಬ್ಯಾಂಕಿನ ಅಧ್ಯಕ್ಷ ಕೆ.ವಿ.ಕಾಮತ್‌ರಿಗೆ ನೀಡಲಾಗುವುದು. ಭಾರತದಲ್ಲಿ ಬ್ಯಾಂಕರುಗಳಿಗೆ ಪ್ರತ್ಯೇಕ ಪ್ರಶಸ್ತಿಗಳಿಲ್ಲ, ಪದ್ಮಭೂಷಣ, ಪದ್ಮವಿಭೂಷಣ ಇತ್ಯಾದಿ ಪ್ರಶಸ್ತಿಗಳು ಬ್ಯಾಂಕರುಗಳಿಗೆ ಸಿಗುವುದು ಅಪರೂಪ. ಕೆ.ಕೆ.ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ ಫಲವಾಗಿ ಈ ಕೊರತೆ ನಿವಾರಣೆಯಾಗಿದೆ.
ಜನರ ವ್ಯಕ್ತಿಯಾಗಿ ತಮ್ಮ ಜೀವಮಾನವನ್ನು ಕಳೆದ ಕೆ.ಕೆ.ಪೈ ೧೪ ವರ್ಷ ಕಾಲ ಜನರ ಪ್ರತಿನಿಧಿಯಾಗಿ ಉಡುಪಿ ನಗರಸಭೆಯಲ್ಲಿ ಸೇವೆ ಸಲ್ಲಿಸಿದ್ದರು. ೧೯೪೭ರಲ್ಲಿ ಉಡುಪಿ ನಗರಸಭೆಗೆ ಆಯ್ಕೆಯಾದರು. ೫ ವರ್ಷ ಅಧ್ಯಕ್ಷರಾಗಿದ್ದ ಅವರು ಜನರಿಗಾಗಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದರು. ಎರಡು ವಾರ್ಡ್‌ಗಳಿಂದ ಏಕಕಾಲದಲ್ಲಿ ನಗರ ಸಭೆಗೆ ಆಯ್ಕೆಯಾದುದು ಅವರ ಜನಪ್ರಿಯತೆಗೆ ದ್ಯೋತಕವಾಗಿತ್ತು. ಜನರ ಹಬ್ಬ ಉಡುಪಿ ಪರ್ಯಾಯದಲ್ಲೂ ಕೆ.ಕೆ.ಪೈ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ವಿವಿಧ ದೇವಸ್ಥಾನಗಳ ಜೀರ್ಣೋದ್ದಾರ ಸಮಿತಿ ಅಧಕ್ಷರಾಗಿ ಹಲವಾರು ಸಾಧಕರುಗಳ ಸಮಿತಿಯ ಅಧ್ಯಕ್ಷರಾಗಿ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಜನರ ಬಯಕೆಯಂತೆ ಕೆ.ಕೆ.ಪೈ ಸೇವೆ ಸಲ್ಲಿಸಿದ್ದರು.
ಕೆ.ಕೆ.ಪೈ ಅತೀ ಬಡವರು, ಸಮಾಜದ ವಂಚಿತ ವರ್ಗಗಳ ಜನರು ಸೇರಿದಂತೆ ಎಲ್ಲರನ್ನೂ ಪ್ರೀತಿಸಿದರು. ಎಲ್ಲರಿಗೂ ಅವರ ಮನೆಯ ಬಾಗಿಲು ಸದಾ ತೆರೆದಿರುತ್ತಿತ್ತು. ಯಾರು ಬೇಕಾದರೂ ಅವರ ಮನೆಗೆ ಹೋಗಿ ಅವರನ್ನು ಬೇಟಿಯಾಗಿ ಕಷ್ಟ ಸುಖ ಹೇಳಿಕೊಂಡು ತಮ್ಮ ಸಮಸ್ಯೆಗಳ ನಿವಾರಣೆಗೆ  ನೆರವು ಕೋರುವ ಅವಕಾಶವಿತ್ತು. ಯಾವುದೇ ವ್ಯಕ್ತಿ ಮದುವೆ, ಉಪನಯನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅದರಲ್ಲಿ ಕೆ.ಕೆ.ಪೈ ಭಾಗವಹಿಸಿದ್ದರು.
ಜನರ ವ್ಯಕ್ತಿಯಾಗಿ ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಬೆರೆತು ಜೀವಿಸುತ್ತಿದ್ದ ಉಡುಪಿಯಲ್ಲಿ ನಡೆಯುತ್ತಿದ್ದ ಎಲ್ಲಾ ಸಭೆ-ಸಮಾರಂಭ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸಿ ಎಲ್ಲರಲ್ಲಿ ಮಾತನಾಡಿ ಅವರ ಮನೆಯವರ ಯೋಗಕ್ಷೇಮ ವಿಚಾರಿಸಿಸುತ್ತಿದ್ದ ಕೆ.ಕೆ.ಪೈ ಭೌತಿಕವಾಗಿ ಬದುಕಿಲ್ಲ. ಜನಹೃದಯಗಳಲ್ಲಿ ಈಗಲೂ ಜೀವಂತವಾಗಿದ್ದಾರೆ. ಅವರು ಬಿಟ್ಟು ಹೋದ ಅವರ ಚಿಂತನೆಗಳು ವಿಚಾರಧಾರೆಗಳು ಆದರ್ಶಗಳು ಈಗಿನ ಜನರಿಗೆ ಮತ್ತು ಮುಂದಿನ ತಲೆಮಾರಿಗೆ ದಾರಿದೀಪಗಳಾಗಿವೆ. ಇಂತಹ ಸಮಾಜ ಸುಧಾರಕರ ಹಾಗೂ ಯುವಜನತೆಗೆ ಮಾರ್ಗದರ್ಶಕರಾಗಿರುವ ಸಂತತಿ ಸಾವಿರವಾಗಲಿ. ಆಗಲೇ ಭವಿತವ್ಯದ ನಾಡಿನ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲಾ.







ನಾನೆಂಬ ಅಹಂ ಬಿಟ್ಟು ಬಾ ನನ್ನ ಬಳಿಗೆ ಎಂಬ ಸಂದೇಶ ನೀಡುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ: 
ಅಯಗಿರಿ  ನಂದಿನಿ ನಂದಿತ ಮೇದಿನಿ, ವಿಶ್ವ ವಿನೋದಿನಿ ನಂದನುತೇ
ಗಿರಿವರ ವಿಂಧ್ಯಶಿರೋಧಿ ನಿವಾಸಿನಿ, ವಿಷ್ಣು ವಿಲಾಸಿನಿ ಜಿಷ್ಣುನುತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ,ರಮ್ಯ ಕಪರ್ದಿನಿ ಶೈಲ ಸುತೇ
ತ್ರಿಲೋಕಗಳ ಶಾಂತಿಗಾಗಿ ಮಹಿಷಮರ್ದಿನಿಯಾದ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರದಲ್ಲಿ ಕಳೆದ ಮೀನ ಸಂಕ್ರಮಣದಂದು ವರ್ಷಾವಧಿ ಜಾತ್ರೆಯ ಧ್ವಜಾರೋಹಣವಾಗುತ್ತದೆ. ತಿಂಗಳಾವಧಿಯ  ಜಾತ್ರೆಯ ನಿರ್ಣಾಯಕ ಘಟ್ಟವೆ `ಪುರಾಲ್ದ ಚೆಂಡ್'. ಪೊಳಲಿ ಉತ್ಸವಕ್ಕೇ  `ಪೊಳಲಿಚೆಂಡು 'ಎಂಬ ಪರ್ಯಾಯ ಹೆಸರು ಬರುವಷ್ಟರ ಮಟ್ಟಿಗೆ  ಪ್ರಸಿದ್ಧ ಇಲ್ಲಿನ ಚೆಂಡಾಟ. ಇದಕ್ಕೆ ಮುಖ್ಯ ಕಾರಣ ಶ್ರೀ ಕ್ಷೇತ್ರದ  ಚರ್ಮದ ಚೆಂಡಿನ ಭಾರೀ ಗಾತ್ರ ಹಾಗೂ ಇದನ್ನು ಆಡಲು-ನೋಡಲು ಜಮಾಯಿಸುವ ಅಪಾರ ಜನಸ್ತೋಮ.
ಉತ್ಸಾಹಿ ಯುವಕರಿಗೆ ಐದು ದಿನಗಳ ಚೆಂಡಾಟ ಶಕ್ತಿಯ ಪ್ರದರ್ಶನದ ಜೊತೆಗೆ ಭಕ್ತಿಯ ಸೇವೆಯಾದರೆ, ನೋಡುಗರಿಗೆ ಇದೊಂದು ರೋಮಾಂಚನಕಾರಿಯಾದ ಅಪೂರ್ವ ಕೌತುಕದ ಆಟ. ತುಳುನಾಡಿನ ಹಲವು ದೇವಾಲಯ- ದೈವಸ್ಥಾನಗಳಲ್ಲೂ ಚೆಂಡಾಟವಿದೆ. ಆದರೆ ಅಲ್ಲೆಲ್ಲೂ ಚೆಂಡು ಇಷ್ಟೊಂದು ಭಾರೀ ಗಾತ್ರವಿಲ್ಲ  ಮತ್ತು ಚೆಂಡಾಟದ ದಿನ ಕೂಡ ಮೂರು ದಿನ ಮೀರುವುದಿಲ್ಲ. ಪೊಳಲಿಯಲ್ಲಿ ಮಾತ್ರ ಚೆಂಡಾಟ ೫ದಿನಗಳ ಕಾಲ.ಇದೇ ಇಲ್ಲಿನ ವಿಶೇಷ. ದೂರದೂರುಗಳಲ್ಲಿ ಉದ್ಯೋಗದಲ್ಲಿರುವ ಊರವರು  ಕಡೆಚೆಂಡಿನ ದಿನ ಪೊಳಲಿಗೆ ತಲುಪಿಯೇ ತಲುಪುತ್ತಾರೆ.
`ಕಣ್ಣು ಎರಡು ಸಾಲದು ,ತಾಯಿ ನಿನ್ನ ನೋಡಲು'
ಮಸ್ತ್ ತೇಜಸ್ವಿನಿ ತೋಜ್ವೆರ್, ಇನಿತ ದಿನತ ಅಲಂಕಾರೊಡು
ಶ್ರೀ ಕ್ಷೇತ್ರದ ಎಡಬದಿಯಲ್ಲಿರುವ ,ಅಮ್ಮ ಲಲಿತಾಂಬಿಕೆಯು ಭುವನೇಶ್ವರಿಯಾಗಿ ವ್ಯಾಘ್ರ ವಾಹಿನಿಯಾಗಿ ಮಹಿಷ, ಚಂಡ ಮುಂಡ, ರಕ್ತಬೀಜಾಸುರ, ಶುಂಭ ನಿಶುಂಭಾದಿ ರಕ್ಕಸರ ರುಂಡಗಳನ್ನು  ಕತ್ತರಿಸಿ ಕೆಡವಿ ಚೆಂಡಾಡಿದ್ದ ವಿಶಾಲ ಗದ್ದೆಯಲ್ಲೇ ವರ್ಷವೂ ಚೆಂಡಾಟ ನಡೆಯುತ್ತದೆ. ದೇವಿ ಮಹಾಲಕ್ಷ್ಮಿ, ಸರಸ್ವತೀ ಅಭಿದಾನ ಪಡೆದು ಮಹಾಕಾಳಿಯ ಅವತಾರದಲ್ಲಿ ರಕ್ಕಸ ಪಡೆಯನ್ನು ಆಮೂಲಾಗ್ರ ನಿಗ್ರಹಿಸಿ ವಿಜಯಿಯಾದ ದಿನದಂದು ಆದಿಮಾಯೆಯ ಅಲಂಕಾರ ಅಪೂರ್ವ, ಮಹಾತೇಜಸ್ಸಿನಿಂದ ಕೂಡಿರುವುದು. ಆದಿಪರಾಶಕ್ತಿಯು ಸಾಕ್ಷಾತ್ ಮಹಾರಾಜ್ಞಿಯೇ ಆಗಿ ಮೆರೆಯುವರು. ಸಾವಿರ ಸೀಮೆಗಳ ಪೊಳಲಿ ಕ್ಷೇತ್ರದ ಯುವಕರು, ಮಕ್ಕಳು, ವೃದ್ಧರಲ್ಲದೆ ,ಹರಕೆ ಹೇಳಿಕೊಂಡ ಸಾರ್ವಜನಿಕರೂ  ಚೆಂಡಾಟದಲ್ಲಿ ಪಾಲ್ಗೊಂಡು, ಚೆಂಡನ್ನು ಗುರಿಯತ್ತ ದೂಡಲು  ಪಡುವ ಪರದಾಟ,ಪರಿಶ್ರಮವನ್ನ್ನು ಕಣ್ಣಾರೆ ಕಾಣಬೇಕು, ಕಂಡು ಆನಂದಾನುಭವಿಸಬೇಕು.
ಸಕಲೋಪಚಾರದಿ ಭಕ್ತರು ಸ್ತುತಿಪರು...ಸ್ವರ್ಣ ಕವಚವಿತ್ತು ಅಮ್ಮನಿಗೆ...
ಪರ್ಸಿಯಾದ ಅರಸ ಕಕ್ಕಲಿಯನ್‌ನ ರಾಯಭಾರಿ ಅಬ್ದುಲ್ ರಝಾಕ್ ಕ್ರಿ.ಶ.೧೪೪೨ರಲ್ಲಿ  ಸಮುದ್ರ ಮಾರ್ಗವಾಗಿ ಮಂಗಳೂರಿಗೆ ಬಂದಿದ್ದ. ೧೪೪೩ರಲ್ಲಿ ಪೊಳಲಿಗೆ ಬಂದು ದೇವಾಲಯ ಕಂಡ ಆತ ನಿಬ್ಬೆರಗಾಗಿದ್ದ.. ಪ್ರಪಂಚದಲ್ಲಿ ಎಲ್ಲೂ ಇಲ್ಲದ ವಿಗ್ರಹಗಳನ್ನು ತಾನೀ ದೇವಾಲಯದಲ್ಲಿ ಕಂಡೆ ಎಂದು ತನ್ನ ಪ್ರವಾಸೀ ಕಥನದಲ್ಲಿ  ಉದ್ಗರಿಸಿದ್ದಾನೆ. ಹತ್ತು ಗಜ ಉದ್ದ, ಹತ್ತು ಗಜ ಅಗಲವಾಗಿ ಚಚ್ಚೌಕಾರದ ಈ ದೇಗುಲ ಆಗ ೫ಗಜ ಎತ್ತರವಿತ್ತಂತೆ.
ಕಂಚಿನ ಎರಕವೂ ಮಾಯ....
ಇಡೀ ದೇಗುಲ ಎರಕ ಹೊಯ್ದ  ಕಂಚಿನಿಂದ ನಿರ್ಮಾಣವಾಗಿತ್ತು. ದೇಗುಲದೊಳಗೆ ನಾಲ್ಕು ವೇದಿಕೆಗಳಿದ್ದುವು. ಮುಂದಿದ್ದ ವೇದಿಕೆ ಮೇಲೆ ಚಿನ್ನದಿಂದ ನಿರ್ಮಿತ ಮನುಷ್ಯಾಕಾರದ ದೊಡ್ಡ ವಿಗ್ರಹವಿದೆ. ಇದರ ಎರಡು ಕಣ್ಣುಗಳ ದೃಷ್ಟಿಗೆ ಕೆಂಪು ರತ್ನಗಳನ್ನು ಅಳವಡಿಸಲಾಗಿದೆ. ಎಲ್ಲಿ ನಿಂತು ನೋಡಿದರೂ ನಮ್ಮನ್ನೆ ನೋಡುವ ಕಲಾಕೌಶಲದ ವಿಗ್ರಹ ಇದೆಂದು ಆ ರಾಯಭಾರಿ ವರ್ಣಿಸಿದ್ದ.  ಕ್ರಿ.ಶ. ೧೫ನೇ ಶತಮಾನದಲ್ಲಿ  ಪೊಳಲಿ ದೇಗುಲಕ್ಕೆ ಅಪಾರ ಸಂಪತ್ತಿತ್ತು. ಹಲವು ಶತಮಾನಗಳಿಂದ ರಾಜಾಶ್ರಯ ಹೊಂದಿ, ಭಕ್ತರಿಂದ ಆರಾಧಿತ ಪೊಳಲಿ ಶ್ರೀ ರಾಜರಾಜೇಶ್ವರಿ ಅಪಾರ ಸಂಪತ್ತಿನ ಒಡತಿಯಾಗಿದ್ದಳು. ಆಗ ದೇವಾಲಯವು ಚೌಟರಸರ ಆಳ್ವಿಕೆಯಲ್ಲಿತ್ತು. ಆದರೆ ಈ ಸಂಪತ್ತುಗಳೆಲ್ಲ ಎಲ್ಲಿ ಹೋಯಿತು? ಹೇಗೆ ಮಾಯವಾಯಿತೆಂಬುದು ಎನ್ನುವುದು ನಿಗೂಡ?
ಅಮ್ಮನವರ ಮೂರ್ತಿ ಚಿನ್ನದಿಂದ ನಿರ್ಮಿತ ಎಂದು ರಾಯಭಾರಿ ವರ್ಣಿಸಿದ್ದ. ಅಂದರೆ ತಾಯಿಗೆ ಸ್ವರ್ಣ ಕವಚ,  ಹವಳದ ಕಣ್ಣುಗಳಿದ್ದುದು ಸುಸ್ಪಷ್ಟ. ತ್ರಿಲೋಕೇಶ್ವರಿಯಾದ ಶ್ರೀ ರಾಜರಾಜೇಶ್ವರಿಯನ್ನು ನಿತ್ಯ ಈ ಚಿನ್ನಾಭರಣಗಳಿಂದ ಅಲಂಕರಿಸಿ ಅರ್ಚಿಸಲಾಗುತ್ತಿತ್ತು.ಕ್ರಿ.ಶ. ೧೪೪೬ರಲ್ಲಿ ಫಲ್ಗುಣಿ ನದಿಯುಕ್ಕಿ ಪ್ರವಾಹದ  ಸಂದರ್ಭ ದೇವಿಯ ಗರ್ಭಗುಡಿ ಹೊರತು ಮಿಕ್ಕೆಲ್ಲವೂ ಕೊಚ್ಚಿ ಹೋಗಿದ್ದವು. ಆ ಸಂದರ್ಭ ದೇಗುಲಕ್ಕೆ  ಬಂದಿದ್ದ ಪುತ್ತಿಗೆ ಚೌಟರು, ಅಮ್ಮನವರ ಆಭರಣಗಳನ್ನಿಡಲು ದೇವಾಲಯದೊಳಗೆ ಸುರಕ್ಷಿತ ಜಾಗವಿಲ್ಲವೆಂಬ ಕಾರಣ ಮುಂದಿಟ್ಟು, ಗುತ್ತಿನವರ ಅನುಮತಿ ಪಡೆದು ಎಲ್ಲಾ ಆಭರಣಗಳನ್ನು ಪುತ್ತಿಗೆ ಅರಮನೆಗೆ ಒಯ್ದಿದ್ದರಂತೆ. ಆನಂತರ ಈ ಬಂಗಾರ ಏನಾದುವು ಎಂಬುದು ಯಾರಿಗೂ ಅರಿಯದು. ದರೋಡೆಕೋರರು ಅಪಹರಿಸಿದ್ದರೂ ಇರಬಹುದೆಂಬ ಗುಮಾನಿಯೂ ಇದೆ. ದೇವಾಲಯದ ಅಂದಿನ ಕಂಚಿನ ಎರಕದ ಗಟ್ಟಿಮುಟ್ಟಾದ ಮಾಡು ಕೂಡಾ ಮಾಯವಾಗಿರುವುದು ವಿಪರ್‍ಯಾಸ.
ತನ್ನ ಪಟ್ಟೆ  ಸಹಿತ ಯಾವುದನ್ನೂ ಯಾರಿಗೂ ಬಿಟ್ಟುಕೊಡಲೊಲ್ಲದ ಕಟ್ಟಾ ಸಂಪ್ರದಾಯಸ್ಥೆಯಾದ ಶ್ರೀ ರಾಜರಾಜೇಶ್ವರಿಯು ತನ್ನ ಅಪಾರ ಬಂಗಾರಗಳನ್ನು ಕಳೆದುಕೊಂಡುದಾದರೂ ಹೇಗೆ ?  ನಿಗೂಢವಾಗಿ ಮಾಯವಾಗಿರುವ ಅಮ್ಮನ ಆಭರಣಗಳು ಇಂದಲ್ಲ ನಾಳೆ ಖಂಡಿತವಾಗಿಯೂ ಅಮ್ಮನ ಭಂಡಾರಕ್ಕೆ ಮರಳಿಯಾವು ಎಂಬುದು ಆಸ್ತಿಕರ ಬಲವಾದ ನಂಬುಗೆ.
ಪ್ರಧಾನ ದೈವವಿದ್ದರೂ ಹೊರಗಿನ ಎರಡು ದೈವಗಳಿಗೆ ನೇಮ ನಡೆಯುತ್ತಿತ್ತಿಲ್ಲಿ
ಉತ್ಸವದ ಕೊನೆಯ ದಿನ ಸೀಮೆಯ ಮತ್ತೆರಡು ಸ್ಥಾನಗಳಿಂದ ದೈವಗಳ ಭಂಡಾರ ಪೊಳಲಿಗೆ ಬಂದು ನೇಮ ಸ್ವೀಕರಿಸುವ ಸಂಪ್ರದಾಯವಿತ್ತು. ಈ ಪೈಕಿ ಒಂದು ಅರ್ಕುಳ ಬೀಡಿನಿಂದ ಮಗ್‌ರಂದಾಯ ಭಂಡಾರ, ಇನ್ನೊಂದು ಸುಜೀರುಗುತ್ತಿನಿಂದ ಮುಡದಾಯ ಭಂಡಾರ. ಉತ್ಸವದ ಸಂದರ್ಭ ಇವೆರೆಡು ಕಡೆಗಳಿಂದ ಬರುವ ದೈವಗಳು ಪೊಳಲಿಯಲ್ಲಿ  ನೇಮ ಮುಗಿಸಿಕೊಂಡು ಮರಳುತ್ತಿದ್ದವು. ಈ ವಿಶಿಷ್ಟ ಸಂಪ್ರದಾಯ ನಂತರದ ವರ್ಷಗಳಲ್ಲಿ ನಿಂತುಹೋಗಿದೆ. ಹಾಗೆಂದು ಪೊಳಲಿ ಕ್ಷೇತ್ರದಲ್ಲಿ ದೈವವಿಲ್ಲವೆ ಎಂಬ ಪ್ರಶ್ನೆ ಮೂಡಬಹುದಾದರೂ ಪೊಳಲಿಯ ಪ್ರಧಾನ ದೈವ ಕೊಡಮಣಿತ್ತಾಯ. ದೈವಕ್ಕೆ ಶ್ರೀ ದೇವಿಯ ಅವಭೃಥದ ಮರುದಿನ ಗೋಪುರದ ಬಾಗಿಲಲ್ಲೆ  ವಿಜೃಂಭಣೆಯ ನೇಮ ನಡೆಯುತ್ತದೆ. ಆದರೂ ಇನ್ನೆರಡು ಸ್ಥಾನಗಳಿಂದ ದೈವಗಳ ಭಂಡಾರ ಶ್ರೀ ಕ್ಷೇತ್ರಕ್ಕೆ ಬಂದು ನೇಮ ಸ್ವೀಕರಿಸಿ ಹಿಂತಿರುಗಿ ಹೋಗುವ ವಿಶೇಷ ಸಂಪ್ರದಾಯವಿದ್ದುದು ಪೊಳಲಿಯಲ್ಲಿ ಮಾತ್ರ ಎನ್ನುವುದು ಗಮನಿಸಬೇಕಾದ ಅಂಶ.
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ..ಮಣ್ಣಿನ ಪ್ರತಿಮೆ ಭಕ್ತರಿಗೆ ಶುಭದಾಯಕ:
ಪೊಳಲಿ ಕ್ಷೇತ್ರದ ಅಧಿದೇವಿ ಶ್ರೀ ರಾಜರಾಜೇಶ್ವರಿಯ ಪ್ರತಿಮೆ ಶಿಲೆಯಿಂದ ನಿರ್ಮಿತವಾದ್ದಲ್ಲ.  ಸರಿಸುಮಾರು ೯ಅಡಿ ಎತ್ತರದ ರಕ್ತವರ್ಣದ ,ಅಪೂರ್ವ ತೇಜೋರಾಶಿ ಮೈತಳೆದಂತಿರುವ ಮೃಣ್ಮಯ ಮೂರ್ತಿಯಿದು. ಕಳೆದು ಹೋದ ರಾಜ್ಯವನ್ನು ಮರಳಿ ಪಡೆಯಲು, ಶತ್ರು ಸಂಹಾರಕ್ಕಾಗಿ ಎರಡನೆ ಮನು ವಂಶಜನಾದ ರಾಜಾ ಸುರಥನು , ವೈಶ್ಯ ಸಮಾಧಿಯ ಜತೆ ಸೇರಿಕೊಂಡು ನಿರ್ಮಿಸಿದ ಇಷ್ಟೊಂದು ಎತ್ತರದ ಅಮ್ಮನವರ ಮೂರ್ತಿ ಪ್ರಾಯಶಃ ದಕ್ಷಿಣ ಭಾರತದಲ್ಲಿ ಎಲ್ಲೂ ಇಲ್ಲ. ಮಾರ್ಕಂಡೇಯ ಪುರಾಣ ಪ್ರಸಿದ್ಧವಾದ ಈ ಮೃಣ್ಮಯ ಅಥವಾ ಮಣ್ಣಿನ ಮೂರ್ತಿ ಭಕ್ತರ ಪಾಲಿಗೆ ಶುಭಪ್ರದ. ಮೂರ್ತಿಯ ದೃಷ್ಟಿ ಸಮದೃಷ್ಟಿಯಾದ್ದರಿಂದ ಆಗಮ ಶಾಸ್ತ್ರ ಪ್ರಕಾರ ಪೂಜೆಗೆ ಪ್ರಶಸ್ತವಾದುದು. ಮೂರ್ತಿಯ ಬೃಹದಾಕಾರವು ಪೂಜ್ಯವೆನಿಸಿದೆ. ಆಗಮ ಶಾಸ್ತ್ರ ಪ್ರಕಾರ ೩೨ಲಕ್ಷಣಗಳಿಂದ ಕೂಡಿರುವ ಈ ಭವ್ಯಮೂರ್ತಿಯು ಲೋಕಾತೀತವೂ, ಸರ್ವಾತೀತವೂ ಆಗಿದೆ.
ಭಗವತಿ ಹೇ ಶಿತಿಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೇ.....
ಮಾಯೆ ಇವಳು...ಇವಳೇ ಮೋಕ್ಷಪ್ರದಾಯಿನಿ ಮುಕ್ತಿ ಪ್ರದಾಯಕಳಾದ, ಜ್ಞಾನ ರೂಪಿಣಿ, ತ್ರಿಮೂರ್ತಿಗಳಿಗೂ ನಿಯಾಮಕಳಾಗಿರುವ ಶ್ರೀ ರಾಜರಾಜೇಶ್ವರಿಯು ಸಾಕ್ಷಾತ್ ಆದಿಮಾಯೆ. ಈಕೆ ಜನನ ಮರಣಾತೀತಳು. ಇಹ ಲೋಕದ ಭೋಗದ ಜತೆಗೆ ಸ್ವರ್ಗ ಮೋಕ್ಷಗಳನ್ನು ಕರುಣಿಸುವವಳೂ ಇವಳೇ ಆಗಿದ್ದಾಳೆ. ಮಹಾವಿಷ್ಣುವಿನ ನೇತ್ರಗಳಲ್ಲಿ ಯೋಗ ನಿದ್ರಾರೂಪದಲ್ಲಿ ಅವ್ಯಕ್ತವಾಗಿ ನೆಲೆಸಿದ್ದ ಆದಿಮಾಯೆ, ಜೀವಗಳನ್ನು ಲೌಕಿಕ ಸುಳಿಯಲ್ಲಿ ಸಿಲುಕಿಸುವವಳೂ, ಕೊನೆಗೆ ಮೋಕ್ಷದ ಹಾದಿಯನ್ನೂ ತೋರುವ ಭಕ್ತವತ್ಸಲೆ. ರಾಜ್ಯದಾಯಿನಿ ಶ್ರೀ ರಾಜರಾಜೇಶ್ವರಿಯು ಭೂಲೋಕದ ಸಾಮ್ರಾಜ್ಯ ಹಾಗೂ ಮೋಕ್ಷ  ಸಾಮ್ರಾಜ್ಯಗಳ ಹೆಮ್ಮೆಯ ಏಕೈಕ ಒಡತಿ. ಬ್ರಹ್ಮಾದಿಗಳಿಗೂ  ಈಕೆಯೇ ಮಹೇಶ್ವರಿ. ಲಲಿತಾ ಸಹಸ್ರನಾಮದಲ್ಲಿ ಹೇಳಿರುವಂತೆ `ಸರ್ವ ಮಂತ್ರಾತ್ಮಿಕಾ' ಅಂದರೆ ಎಲ್ಲ ಮಂತ್ರಗಳ ಸ್ವರೂಪವುಳ್ಳವಳು , ಸಪ್ತಕೋಟಿ ಮಹಾ ಮಂತ್ರಗಳ ಸ್ವರೂಪವುಳ್ಳವಳೂ ಈ ಲಲಿತಾಂಬಿಕೆ. ಮಹಾವಿಷ್ಣುವಿನ ಕರ್ಣದ ಮಲದಿಂದ ಜನಿಸಿದ ದಾನವರಾದ ಮಧು-ಕೈಟಭರನ್ನು ಸಂಹರಿಸುವಲ್ಲಿ ಲಕ್ಷ್ಮೀನಾರಾಯಣನಿಗೆ ನೆರವಾಗಿ ಮಹಾಕಾಳಿ ಎಂಬ ಅಭಿದಾನ ಪಡೆದ ಶ್ರೀದೇವಿಯು, ಮಹಿಷಾಸುರನನ್ನು ಮರ್ಧಿಸಿ ಮಹಾಲಕ್ಷ್ಮಿ ಎಂದು ಸ್ತುತಿಸಲ್ಪಟ್ಟವಳು. ಶುಂಭ ನಿಶುಂಭ, ಧೂಮ್ರಲೋಚನ,  ಚಂಡ ಮುಂಡ, ರಕ್ತಬೀಜಾದಿ ದಾನವರನ್ನು ಸಂಹರಿಸಿ ಮಹಾಸರಸ್ವತಿಯೆಂದು ಕೊಂಡಾಡಲ್ಪಟ್ಟ ಆದಿಪರಾಶಕ್ತಿ ಶ್ರೀ ರಾಜರಾಜೇಶ್ವರಿಯ ಪದಕಮಲಗಳಿಗೆ ಶರಣಾದಲ್ಲಿ ಜೀವರುಗಳಿಗೆ ಮೋಹದ ಮಾಯಾ ಪ್ರಪಂಚದ ಬಂಧನಗಳಿಂದ ಮೋಕ್ಷ ಖಂಡಿತ.
ಪುಳಿನದಿಂದ ಹೊಳಲ್...ಹೊಳಲ್ ಪುರಾಲ್ ಆಯಿತು
ಮಳಲಿ ಸಾವಿರ ಸೀಮೆಯ ದೇವಾಲಯ ಪೊಳಲಿ. ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಈ ಸಾನಿಧ್ಯ ಪೊಳಲಿ ಎಂದು ಅಭಿದಾನ ಪಡೆಯುವ ಮುನ್ನ ಈ ಊರಿಗೆ ಇನ್ನಷ್ಟು ಹೆಸರುಗಳಿದ್ದುವಂತೆ. ಮಾರ್ಕಂಡೇಯ ಪುರಾಣದಲ್ಲಿ ಈ ಕ್ಷೇತ್ರಕ್ಕೆ  `ಪುಳಿನ 'ವೆಂಬ ಹೆಸರಿತ್ತು. ಪುಳಿನವೆಂದರೆ ಮೊದಲು ನೀರು ತುಂಬಿದ್ದು,  ನಂತರ ನೀರು ಇಳಿದು ಹೋದ ಅಥವಾ ಹರಿದು ಹೋದ ಪ್ರದೇಶ. ಕರಿಯಂಗಳದಲ್ಲಿ ದೊರೆತ ಕ್ರಿ.ಶ.೮ನೇ ಶತಮಾನದ ೩೮೦ನೇ ಶಾಸನದಲ್ಲಿ ಈ ಕ್ಷೇತ್ರಕ್ಕೆ ` ಹೊಳಲ್' ಎಂಬ ಹೆಸರಿತ್ತು. ಹೊಳಲ್ ಅಂದರೆ ಪಟ್ಟಣ ಎಂದರ್ಥ. ಆ ಕಾಲದಲ್ಲಿ ಇದು ಪಟ್ಟಣವಾಗಿರಬೇಕು. ಈ ಹೊಳಲ್ ಎಂಬುದೇ ಕಾಲಕ್ರಮೇಣ ಪೊರಲ್, ಪುರಾಲ್ ಎಂದು ಜನ ಜನಿತವಾಗಿರಬೇಕು.
ಅಲೂಪೆರೇ ಇನಿತ ತುಳುವೆರ್ ತುಳುನಾಡಿನ ಮೂಲ ಹೆಸರು ಆಲುವ !
ಪೊಳಲಿ ಶ್ರೀರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಪ್ರಾಚೀನತೆ ಹಾಗೂ ಪ್ರತಿಷ್ಠೆ ಕುರಿತು ನಿಖರ ಮಾಹಿತಿ ಹೊಂದುವುದು ಬಹಳ ಕಷ್ಟ.  ಈ ದೇಗುಲದ ಸುತ್ತಮುತ್ತ ಹಲವು ಶಿಲಾಶಾಸನಗಳಿದ್ದುವು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇವು ಮೂಲೆಗುಂಪಾಗಿವೆ, ಕಾಣೆಯಾಗಿವೆ. ಆದಿಶಕ್ತಿಯ ಕಡುಭಕ್ತ  ಸುರಥ ಮಹಾರಾಜ ಕಲಿಯುಗದ ಆದಿಯಲ್ಲಿದ್ದವನು. ಈ ಹಿನ್ನೆಲೆಯ ಜೊತೆ ಜೊತೆಗೆ ಅಮ್ಮುಂಜೆ, ಕರಿಯಂಗಳ ಹಾಗೂ ಪೊಳಲಿ ದೇವಾಲಯಗಳಲ್ಲಿ  ಉಪಲಬ್ಧವಾಗಿ ಪ್ರಕೃತ ಮೈಸೂರು ಸರ್ಕಾರದ ಅಧೀನದಲ್ಲಿರುವ ಕೆಲವು ಶಾಸನಗಳ ಪ್ರಕಾರ, ಪೊಳಲಿ ಕ್ಷೇತ್ರವು ೫ಸಾವಿರ ವರ್ಷಗಳಿಗೂ ಹಿಂದಿನದು. ಈ ದೇವಾಲಯವು ಮುಖ್ಯವಾಗಿ ಅಲೂಪ ಅರಸರ ಅಧಿಕಾರಕ್ಕೆ ಒಳಪಟ್ಟಿತ್ತು. ನಂತರ ಮೂಡುಬಿದಿರೆಯ ಚೌಟರಸರು ದೇಗುಲದ ನಿರ್ವಹಣೆ ಹೊಂದಿದ್ದರು. ಜಿಲ್ಲೆಯ ಕದಂಬರು, ಚಾಲುಕ್ಯರು,  ಅಲೂಪರು, ರಾಷ್ಟ್ರಕೂಟರು,  ಹೊಯ್ಸಳರು, ವಿಜಯನಗರದವರು,ಇಕ್ಕೇರಿಯವರು ,ಮೈಸೂರರಸರ ಆಡಳಿತಕ್ಕೊಳಗಾಗಿದ್ದ ಬಂಗ, ಚೌಟ,  ಬಲ್ಲಾಳ  ಇತ್ಯಾದಿ ಪಾಳಯಗಾರರ ಸಂಸ್ಥಾನಗಳಾಗಿ, ಮಾಗಣೆಗಳಾಗಿ ವಿಭಾಗಿಸಲ್ಪಟ್ಟು ಅವರಿಂದ ಆಳಲ್ಪಟ್ಟಿತೆಂದು ಚರಿತ್ರೆ, ಶಾಸನಗಳು ನಿರೂಪಿಸಿವೆ.
ಪ್ರಪಂಚ ಹೃದಯವೆಂಬ ಸಂಸ್ಕೃತ ಗ್ರಂಥದಲ್ಲಿನ ಮಾಹಿತಿ ಪ್ರಕಾರ, ಪರಶುರಾಮ ಸೃಷ್ಟಿಗೆ `ಸಪ್ತ ಕೊಂಕಣ'ಯೆಂದು ಹೆಸರು. ಇದರಲ್ಲಿ ಏಳು ದೇಶಗಳು ಒಳಗೊಂಡಿರುವುದೇ ಈ ಹೆಸರು ಬರಲು ಕಾರಣ. ಕೂಪಕ,ಕೇರಳ, ಮೂಷಕ, ಆಲುವ,ವಶುಕ, ಕೊಂಕಣ, ವರಕೊಂಕಣ ಎಂಬುದು ಈ ಏಳು ದೇಶಗಳು. ಈ ಪೈಕಿ ಮೊದಲ ಮೂರು ದೇಶಗಳು ತಿರುವಾಂಕೋಡು, ಕೊಚ್ಚಿ ಹಾಗೂ ಮಲಯಾಳ ಎಂಬುದಾಗಿವೆ. ಕೊನೆಯ ಮೂರು ದೇಶಗಳು ಉ.ಕ., ದ.ಕೊಂಕಣ, ಉತ್ತರ ಕೊಂಕಣವಾದರೆ ನಡುವೆ ಬರುವ `ಆಲುವ  'ಇಂದಿನ ತುಳುನಾಡು. ಉತ್ತರಕನ್ನಡ-ಮಲೆಯಾಳಗಳ ನಡುವಣ ಪ್ರದೇಶವೇ ತುಳುನಾಡಾಯಿತು. ತುಳುನಾಡಿನ ಪ್ರಾಚೀನ ಹೆಸರು ಆಲುವ. ಕಡಲತೀರದ ಮಣ್ಣು ಸಹಜವಾಗೇ ಮೆತ್ತಗಿರುವುದು. ಅಂದರೆ ತುಳುನಾಡು ಮೆದುಮಣ್ಣಿನ ಪ್ರದೇಶ. ಈ ನಾಡನ್ನಾಳಿದ ಅರಸರು ಆಲುವ ಅಥವಾ ಅಲೂಪರೆಂದು ಕರೆಯಲ್ಪಟ್ಟಿರಬೇಕು.
ಫಲ್ಗುನಿಯು ಸುತ್ತಿ ಹರಿದಿರುವಳಿಲ್ಲಿ ಸ್ವಯಂ ಪವಿತ್ರ ಸಾನಿಧ್ಯವಿದು:
ಕುದುರೆಮುಖ ಘಟ್ಟದಿಂದ ಹರಿದು ಬರುತ್ತಿರುವ ಫಲ್ಗುನೀ ನದಿಯು ಶ್ರೀ ಕ್ಷೇತ್ರದ ಉತ್ತರ ಪಾರ್ಶ್ವದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿದು, ವಾಯವ್ಯ ದಿಕ್ಕಿನಲ್ಲಿ ತಿರುಗಿ ದಕ್ಷಿಣಾಭಿಮುಖವಾಗಿ ಹರಿದಿದೆ. ಹಾಗಾಗಿ ಶ್ರೀ ಕ್ಷೇತ್ರಕ್ಕೆ ಸ್ವತಃ ಪಾವಿತ್ರವು ಪ್ರಾಪ್ತಿಯಾಗಿದೆ. ಪೊಳಲಿ ಕ್ಷೇತ್ರದ ಪೂರ್ವದಲ್ಲಿ `ರೆಂಜೆಗಿರಿ 'ಬೆಟ್ಟ ಹಾಗೂ ಬಯಲು ಬೆಟ್ಟು ಗದ್ದೆಗಳಿದ್ದರೆ,  ದಕ್ಷಿಣದಲ್ಲಿ  ಮೊಗರು ಎಂಬ ಮಳಲು ಭೂಮಿ, ಬಯಲು ಗದ್ದೆಗಳು ಹಾಗೂ ೧೨ ಮಹಾ ವಟವೃಕ್ಷಗಳಿರುವುದು ಗಮನಾರ್ಹ.
ಶ್ರೀ ಮಾತಾ ಮತ್ಸಿಂಹಾಸನೇಶ್ವರೀ..`ರಾಜದೇವಾಲಯವಿದು':
ದೇಗುಲದ ದಕ್ಷಿಣದಲ್ಲಿ  `ಸಿಂಹಾಸನಕಟ್ಟೆ  'ಇದೆ. ೪ನೇ ಚೆಂಡಿನಂದು ದೇವರು ಈ ಕಟ್ಟೆಯಲ್ಲಿ  ಕುಳಿತು ಪೂಜೆ ಪಡೆಯುವ  ಪದ್ಧತಿ ಇದೆ. ಕಟ್ಟೆಯ ಹಿಂಬದಿ ಪುರಾತನದ ಒಂದು ಭಾರೀ ಕಟ್ಟಡದ ಬುನಾದಿಯಿತ್ತು. ಅಲ್ಲೀಗ ಅತಿಥಿ ಬಂಗಲೆಯೊಂದು ತಲೆಯೆತ್ತಿದೆ. ಸಿಂಹಾನಸಕಟ್ಟೆಯ ಆಸುಪಾಸು ಹೂತೋಟವಿದೆ. ದೇಗುಲದ ಪಶ್ಚಿಮದಲ್ಲಿ ೧೦೦ಗಜ ದೂರದಲ್ಲಿ ೭ಎಕರೆ ವಿಸ್ತೀರ್ಣದ ಉಪವನವಿದೆ.ದೇಗುಲದ ಪೂರ್ವದಲ್ಲಿ ೧೫೦ಗಜ ದೂರದಲ್ಲಿ  `ಅಗ್ರಸಾಲೆ ಕೆರೆ ಈಗ ಪಾಳುಬಿದ್ದಿದೆ. ದೇಗುಲದ ಪ.ದಿಕ್ಕಿನಲ್ಲಿ ದಕ್ಷಿಣಕ್ಕೆ ಹರಿವ ಫಲ್ಗುನೀ ನದಿಯ ಪಶ್ಚಿಮದಡದಲ್ಲಿ  ವೀರಮಾರುತಿ ದೇವಾಲಯವಿದೆ. ಇದಕ್ಕೆ ಅಗ್ರಹಾರದ ಮಾರುತಿಯೆಂದೇ ಹೆಸರು. ದೇಗುಲದ ಆಸುಪಾಸಿನಲ್ಲಿ ಹಳೆಕಾಲದ ಕಲ್ಲು ಕಟ್ಟಿದ  ಬಾವಿಗಳಿವೆ. ಇದರ ನಿರ್ಮಾತೃರ್‍ಯಾರೆಂಬ ಮಾಹಿತಿ ಇಲ್ಲ. ಪೊಳಲಿಯೆಂಬ ಸುಮಾರು ಒಂದು ಮೈಲು ಉದ್ದಗಲದ ಕ್ಷೇತ್ರದಲ್ಲಿ  ಎಲ್ಲಿ ಅಗೆದರೂ ಕಾಣಸಿಗುವ ಇಟ್ಟಿಗೆಗಳು, ಕೆತ್ತಿದ ಮುರಕಲ್ಲುಗಳು, ಬಿದ್ದುಹೋಗಿರುವ ಪೂರ್ವ ಕಟ್ಟಡಗಳ ನೆಲಗಟ್ಟನ್ನು ಸಾಂಕೇತಿಸುತ್ತಿವೆ. ದೇಗುಲದ ಪೂರ್ವದಲ್ಲಿ ೩೦೦ ಗಜ ದೂರದಲ್ಲಿನ ರೆಂಜೆಗಿರಿ ಬೆಟ್ಟವಿದ್ದು, ಇದು  ಹಿಂದೆ ಚಿಕ್ಕಕೋಟೆಯೋ, ಗಾಳಿಗೋಪುರವೋ ಆಗಿರಬೇಕು. ದೇವಾಲಯದ  ದಕ್ಷಿಣ ಭಾಗದ ಕಂಚೇಶ್ವರ ಎಂಬಲ್ಲಿ ದಿಣ್ಣೆಗಳನ್ನು ಕಿತ್ತು ಗದ್ದೆ ನಿರ್ಮಿಸುತ್ತಿದ್ದ  ಸಂದರ್ಭ ಗಾಜಿನ ಬಳೆಗಳ ಅವುಗೆಯ ಕುರುಹುಗಳು, ಬಳೆಗಳ ಮಲ್ಲಾರಗಳೂ ಗೋಚರಿಸಿದ್ದವು.
ದೇವಾಲಯದ ಅಷ್ಟ ದಿಕ್ಕುಗಳಲ್ಲಿ ಹಲವು ಚಿಕ್ಕಪುಟ್ಟ ದೇವಾಲಯಗಳಿದ್ದುವು. ಈ ಪೈಕಿ ಕೆಲವು ಬಿದ್ದುಹೋಗಿದ್ದರೂ,  ಹಲವು ಈಗಲೂ ಇವೆ. ಒಟ್ಟಿನಲ್ಲಿ ಪೊಳಲಿ ಕ್ಷೇತ್ರಕ್ಕೆ ಹಿಂದಿದ್ದ  ಪುಳಿನಪುರವೆಂಬ ಹೆಸರು, ದೇಗುಲ ಪರಿಸರದಲ್ಲಿ ಕಾಣಸಿಗುವ ಕುರುಹುಗಳು,ಅವಶೇಷಗಳು ಆಸುಪಾಸಿನ ಚಿಕ್ಕ ದೇವಾಲಯಗಳು,ಶಿಲಾಶಾಸನಗಳನ್ನು ಗಮನಿಸುವಾಗ ಇದೊಂದು ಚಿಕ್ಕ ರಾಜಧಾನಿಯಾಗಿತ್ತು, `ಪೊಳಲಿ ದೇವಾಲಯ ರಾಜ ದೇವಾಲಯ 'ವಾಗಿತ್ತೆಂಬುದು ಸ್ಪಷ್ಟ.
ಚೆಂಡಿನ ಗದ್ದೆಯಲ್ಲಿ `ದೇವಿಮಹಾತ್ಮ್ಯೆ'ಆಡುವಂತಿಲ್ಲ !
ಅದೆಷ್ಟೋ ವರ್ಷಗಳ ಹಿಂದೆ  ಶ್ರೀ ದೇವಿಯ ಚೆಂಡಾಟದ ಗದ್ದೆಯಲ್ಲಿ ದೇವಿ ಮಹಾತ್ಮ್ಯೆ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು.ಈ ಗದ್ದೆಯಲ್ಲಿ ದೇವೀ ಮಹಾತ್ಮ್ಯೆ ಯಕ್ಷಗಾನ ಆಡಿದರೆ ಸಾಕ್ಷಾತ್ ಆದಿಪರಾಶಕ್ತಿ ಅವತರಿಸಿ ಬರುವಳು, ರಕ್ಕಸರನ್ನು ಕೊಲ್ಲುವಳು ಎಂಬ ಸತ್ಯ ಸಂಘಟಕರಿಗೂ ಗೊತ್ತಿಲ್ಲ. ದೇವಿ  ಪಾತ್ರ ವಹಿಸಿದ್ದ ಕಲಾವಿದ  ಭಕ್ತಿ-ಶ್ರದ್ಧೆ,ಮಡಿಯಲ್ಲಿದ್ದ  ಬರೇ ಪಾತ್ರಧಾರಿಯಾಗಿರಲಿಲ್ಲ.ರಕ್ಕಸರ ವಧೆಗಾಗಿ ತ್ರಿಮೂರ್ತಿಗಳು, ದೇವತೆಗಳು ನೀಡಿದ ಆಯುಧಪಾಣಿಯಾಗಿ ಸಿಂಹವಾಹಿನಿಯಾಗುತ್ತಲೇ  ಸಾಕ್ಷಾತ್ ದುರ್ಗೆಯೇ ಅಲ್ಲಿ ಅವತರಿಸಿಬಿಟ್ಟಿದ್ದಳು. ಆಕ್ರೋಶದಿಂದ ಬೆಂಕಿಚೆಂಡಿನಂತೆ ಹೊಳೆಯುತ್ತಿದ್ದ ಆದಿ ಪರಾಶಕ್ತಿ  ಕ್ಷಣದಲ್ಲೇ ಚಂಡ ಮುಂಡ ವೇಷಧಾರಿಗಳ  ಶಿರಗಳನ್ನು ಕಡಿದೇ ಬಿಟ್ಟಿದ್ದಳು. ಅದೇ ಕೊನೆ. ಇಂದಿಗೂ ಈ ಚೆಂಡಾಟದ ಗದ್ದೆಯಲ್ಲಿ ಮಾತ್ರವಲ್ಲ , ಪೊಳಲಿ ಮಾಗಣೆಯ ಯಾವ ಗ್ರಾಮಗಳಲ್ಲೂ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಾಗುವುದಿಲ್ಲ . ಊರಿನ ಹಿರಿಯರು ಅಂದಿನ ಘಟನೆಯನ್ನು ನೆನಪಿಸಿಕೊಳ್ಳುವಾಗ ಈಗಲೂ ರೋಮಾಂಚನಗೊಳ್ಳುತ್ತಾರೆ. ಭಾವ ಪರವಶರಾಗುತ್ತಾರೆ.
ನಾಸ್ತಿಕನನ್ನೂ ಆಸ್ತಿಕನಾಗಿಸುವ ಅಪೂರ್ವ ಚೈತನ್ಯಶಕ್ತಿ
ನಾನೆಂಬ ಅಹಂ ಬಿಟ್ಟು ಬಾ ನನ್ನ ಬಳಿಗೆ ಎಂಬ ಸಂದೇಶ ನೀಡುತ್ತಿರುವಂತಿದೆ ಮಕ್ಕಳಿಗೆ. ಹಾಗಾಗೇ ಈ ಕ್ಷೇತ್ರಕ್ಕೆ ಭೇಟಿ ಕೊಡುವ ಭಕ್ತರಿಗೆ ವಿಶಿಷ್ಟ ನೆಮ್ಮದಿಯ ಅನುಭವವಾಗುವುದು ಮೊದಲಂಶವಾದರೆ, ಭಕ್ತರು ಆರಾಮ ನಿಂತುಕೊಂಡು ತಾಯಿಯನ್ನು ಕಾಣುವ ಹಾಗಿಲ್ಲ. ಸಂಪೂರ್ಣ ಬಗ್ಗಿದರೆ ಅಥವಾ ಪದ್ಮಾಸನ ಹಾಕಿ ಕುಳಿತರೆ ಮಾತ್ರ ಅಮ್ಮನನ್ನು ನೋಡಬಹುದು.ಸಂಪೂರ್ಣ ಶರಣಾಗತಿಯಿಂದಲೇ ಭಗವತ್‌ದರ್ಶನ ಸಾಧ್ಯ.

ವೀರಾಗ್ರಣಿ ಅಮ್ಮ ನ ಕದನ ಕ್ಷಣಗಳನ್ನು ನೆನಪಿಸುವ ದಂಡಮಾಲೆ
ಪೊಳಲಿಯ ಶ್ರೀ ರಾಜರಾಜೇಶ್ವರಿ ಕೇಪುಳಾಲಂಕಾರ ಪ್ರಿಯೆ. ಉತ್ಸವದ ಸಂದರ್ಭ ಅಮ್ಮನಿಗೆ ಸಲ್ಲುವ  ಪ್ರಮುಖ ಸೇವೆಗಳಲ್ಲಿ  ದಂಡಮಾಲೆ ಗಮನಾರ್ಹ. ಉತ್ಸವ ಬಲಿ ಪ್ರಭಾವಳಿಯ ಸುತ್ತ ಬಿಗಿಯುವ ಕೆಂಪನೆ ಕೇಪುಳಗಳ ದಪ್ಪನೆ ಹಾರವನ್ನು ಐದು ದಿನಗಳಿಗೊಮ್ಮೆ ಬದಲಾಯಿಸುವ ವಿಶಿಷ್ಟ ವಿಧಿಯನ್ನು  ದಂಡಮಾಲೆ ಎಂದು ಕರೆಯಲಾಗಿದೆ.ಆದರೂ ಈ ದಂಡಮಾಲೆ ಸೇವೆಯ ಹಿನ್ನೆಲೆ ಏನೆಂಬ  ಬಗ್ಗೆ  ಸ್ಪಷ್ಟ ಮಾಹಿತಿಯಿಲ್ಲ. ಆದಿ ಪರಾಶಕ್ತಿಯು ರಕ್ಕಸರ ವಿರುದ್ಧ  ಸಮರ ಸಾರಿದ್ದ  ಆ ದಿನಗಳಲ್ಲಿ, ನಿರ್ದಿಷ್ಟ ರಕ್ಕಸರ ಅವಸಾನದ ದ್ಯೋತಕವಾಗಿ ಕೇಪುಳ ಹಾರಗಳನ್ನು ಧರಿಸಿದ್ದಳೇ ಅಥವಾ ಯುದ್ಧಕ್ಕೆ ಹೊರಡುವಾಗ ವೀರಾಗ್ರಣಿಯ ಸಂಕೇತವಾಗಿ ಕೇಪುಳ ಹಾರ ಸ್ವೀಕರಿಸಿದಳೇ ಎಂಬ ಜಿಜ್ಞಾಸೆಯೂ ಇದೆ.
ಲೇಪಾಷ್ಟಗಂಧ ತಯಾರಿ ವಿಧಾನ ಇಂದಿಗೂ ರಹಸ್ಯ
ಶ್ರೀ ಕ್ಷೇತ್ರದ ಗರ್ಭಗೃಹದೊಳಗೆ ಒಂದೆಡೆ ಹಲವು ಶತ ಶತಮಾನಗಳಿಗೂ ಬಳಕೆಯಾಗಿ ಉಳಿಯಬಲ್ಲ ಲೇಪಾಷ್ಟಗಂಧ ದಾಸ್ತಾನಿದೆ. ಪೂರ್ವಜರ ವೈಜ್ಞಾನಿಕ ಪರಿಣತಿಗೆ ಉತ್ತಮ ಸಾಕ್ಷಿ ಈ ಲೇಪಾಷ್ಟಗಂಧ. ಹಾಗೆಂದು ಇದನ್ನು ತಯಾರಿಸುವ ವಿಧಾನ ಮಾತ್ರ ಇಂದಿನ ಪೀಳಿಗೆಯ ಯಾರಿಗೂ ಗೊತ್ತಿಲ್ಲ. ಶ್ರೀಕ್ಷೇತ್ರದ ಪ್ರಧಾನ ದೇವಿಯಾದ ಶ್ರೀ ರಾಜರಾಜೇಶ್ವರಿ ಒಳಗೊಂಡಂತೆ ಎಲ್ಲಾ ಪರಿವಾರ ದೇವರುಗಳದೂ ಮಣ್ಣಿನ ಪ್ರತಿಮೆ. ಸುಮಾರು ೧೨ವರುಷಗಳಿಗೊಮ್ಮೆ ಈ ಮೂರ್ತಿಗಳಿಗೆ ಲೇಪಾಷ್ಟಗಂಧ ಲೇಪನ ಪ್ರಕ್ರಿಯೆ ನಡೆಯುತ್ತದೆ. ಸಂಬಂಧಪಟ್ಟ ತಂತ್ರಿಗಳೇ ಈ ಕಾರ್ಯ ನೆರವೇರಿಸುತ್ತಾರೆ. ವಿವಿಧ  ಮರಗಳ ವಿಶಿಷ್ಟ ರಸ  ಬಳಸಿ, ಅವನ್ನು ಪಾಕ ಮಾಡಿ ತಯಾರಿಸಲಾಗಿದೆ ಲೇಪಾಷ್ಟಗಂಧವನ್ನು . ಮಣ್ಣಿಗೂ ಕಲ್ಲಿನ  ಬಲ ಕೊಡುವ ಶಕ್ತಿಯಿದೆ ಇದಕ್ಕೆ. ವಿಶಿಷ್ಟವಾಗಿ ಪರಿಪಾಕಗೊಂಡ ಈ ಮಣ್ಣಿನ ತಯಾರಿ ಹೇಗೆಂಬ ಬಗ್ಗೆ  ಸದ್ಯ ಯಾರಿಗೂ ಏನೇನೂ ಮಾಹಿತಿ ಇಲ್ಲದಿರುವುದು ಮಾತ್ರ ಋಣಾತ್ಮಕ ಅಂಶ.
ಉತ್ಸವ ತಾಯಿ ಹೆಸರಲ್ಲಿ...ಜಾತ್ರೆ ಪುತ್ರ ಕಾರ್ತಿಕೇಯನಿಗೆ
ಶ್ರೀ ದೇವಿ ರಾಜರಾಜೇಶ್ವರಿಯು ಶ್ರೀ ಕ್ಷೇತ್ರದ ಪ್ರಧಾನ ದೇವಿಯಾದರೂ ಇಲ್ಲಿ ನಡೆಯುವ ನಿತ್ಯಬಲಿ, ಉತ್ಸವ ಬಲಿ,ರಥಾರೋಹಣವಾಗುವುದು ಕುಮಾರಸ್ವಾಮಿಗೆ. ಅಮ್ಮನವರು ನಿರ್ಲಿಪ್ತೆಯಾಗಿ ಕುಳಿತು ಮಗನ ವೈಭವದ -ಆನಂದೋಲ್ಲಾಸದ ಜಾತ್ರೆ ಕಂಡು ಸಂಭ್ರಮಿಸುವ ಮಹಾಮಾತೆ. ಉತ್ಸವವೆಲ್ಲ  ತಾಯಿ ರಾಜರಾಜೇಶ್ವರಿ ಹೆಸರಲ್ಲಿ. ವೈಭವದ ,ಸಂಭ್ರಮದ ಮೆರವಣಿಗೆಯೆಲ್ಲಾ ಕಾರ್ತಿಕೇಯನಿಗೆ. ಜನಸಾಗರದ ಮುಂದೆ ಮೆರೆಯುವ ಮಗನ ವೈಭವ ಕಂಡೇ ಸಂತೃಪ್ತಳಾಗುವ ಅಪೂರ್ವ ಮಾತೆಯಿವಳು.
ದಕ್ಷ ಆಡಳಿತ ಮಂಡಳಿ
ಉಳಿಪಾಡಿ ಗುತ್ತು ತಾರಾನಾಥ  ಆಳ್ವರು  ಆಡಳಿತ ಮೊಕ್ತೇಸರರಾಗಿರುವ ಆಡಳಿತ ಮಂಡಳಿಯು ಶ್ರೀ ಕ್ಷೇತ್ರದಲ್ಲಿ ಈಗಾಗಲೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಜಾರಿಗೆ ಅಹರ್ನಿಶಿ ಶ್ರಮಿಸುತ್ತಿದೆ. ಸೇವಾ ಕೌಂಟರ್‌ಗಳ ಕಂಪ್ಯೂಟರೀಕರಣ, ರಸ್ತೆ ಡಾಮರೀಕರಣ, ಸೂಕ್ತ ನೀರಿನ ವ್ಯವಸ್ಥೆ ಹೀಗೆ ಹಲವು ಮೂಲಭೂತ ಸೌಕರ್ಯಗಳನ್ನು ಸರ್ಕಾರ -ದಾನಿಗಳ ನೆರವಿನಿಂದ ಆಡಳಿತ ಮಂಡಳಿ ನಿರ್ವಹಿಸಿದೆ. ಭಕ್ತರ ಅನುಕೂಲಕ್ಕಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಆಶಯವಿದೆ.
ಅಮ್ಮುಂಜೆ ಗುತ್ತು ಡಾ.ಮಂಜಯ್ಯ ಶೆಟ್ಟಿ, ಅಡಿಗಳಾದ ಮಾಧವ ಭಟ್ (ಪವಿತ್ರ ಪಾಣಿ),  ಚೇರ ಸೂರ್ಯನಾರಾಯಣ ರಾವ್ ಇವರು ಮೊಕ್ತೇಸರರಾಗಿದ್ದುಕೊಂಡು ಆಳ್ವರ ಪ್ರಯತ್ನಗಳಲ್ಲಿ ಸಂಪೂರ್ಣ ಕೈಜೋಡಿಸುತ್ತಿದ್ದಾರೆ.ಜತೆಗೆ ಕಾರ್ಯನಿರ್ವಹಣಾಧಿಕಾರಿಯಾಗಿ ಹರಿಶ್ಚಂದ್ರ ಇದ್ದಾರೆ.                                                                                                                                                    (ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ರಚಿಸಿ, ಇವರ ಪುತ್ರ ಪೊಳಲಿ ನಿತ್ಯಾನಂದ ಕಾರಂತರು ಪ್ರಕಟಿಸಿರುವ `ಶ್ರೀ ಕ್ಷೇತ್ರ ಪೊಳಲಿ' ಕೃತಿಯೇ ಈ ಲೇಖನದ ಪ್ರೇರಣೆ. ಈ ಹಿರಿಯರಿಗೆ ನಾನು ಅಭಾರಿ .)
















Wednesday 11 July 2012


ಬಿಸಿಯೂಟ  ಸಾಮಗ್ರಿಗೆ ಮುಂಗಡ ಪಾವತಿ ಆದೇಶ
ಅಕ್ಷರ ದಾಸೋಹಕ್ಕೆ ತೊಡಕಾಗದಿರಲಿ


ಮಂಗಳೂರು: ಸರಕಾರ ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ಸರಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಬಿಸಿಯೂಟದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.  ೧ರಿಂದ ೧೦ ನೇ ತರಗತಿಯ ಎಲ್ಲಾ ಮಕ್ಕಳಿಗೂ ಬಿಸಿಯೂಟದ ವ್ಯವಸ್ಥೆಯಾಗಿದ್ದು, ಈ ವರೆಗೆ ಸಣ್ಣಪುಟ್ಟ ಲೋಪಗಳ ಹೊರತಾಗಿಯೂ  ಈ ಯೋಜನೆ  ಸಾಕಷ್ಟು ಉತ್ತಮವಾಗಿಯೇ ನಡೆಯುತ್ತಿದೆ. ಆದರೆ ಸರಕಾರಿ ಶಾಲೆಗಳಿಗೆ  ಬೇಳೆ, ಎಣ್ಣೆ, ಉದ್ದು ಕಳುಹಿಸಬೇಕಾದ ಕೆಎಫ್‌ಸಿಎಸ್‌ಸಿ ಗೆ  ಈ ವರ್ಷದಿಂದ  ಮುಂಗಡ ಹಣ ಪಾವತಿ ಮಾಡಬೇಕು ಎನ್ನುವ ಸುತ್ತೋಲೆಯೊಂದು ಈಗ ಅಧಿಕಾರಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.ಒಂದು ವೇಳೆ ಸಕಾಲದಲ್ಲಿ ಹಣ ಬಿಡುಗಡೆಯಾಗದೆ ಹೋದರೆ ಅದು ಮಕ್ಕಳ ಬಿಸಿಯೂಟಕ್ಕೆ ತೊಡಕುಂಟು ಮಾಡಬಹುದೆಂಬ ಆತಂಕ ವ್ಯಕ್ತಗೊಳ್ಳುತ್ತಿದೆ.
ದ.ಕ.ಜಿಲ್ಲೆಯಲ್ಲಿ 
ರಾಜ್ಯದಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿರುವುದರಲ್ಲಿ ಕೇಂದ್ರದ ಶೇ.೭೫ ಹಾಗೂ ರಾಜ್ಯ ಸರಕಾರದ ಶೇ.೨೫ರ ಅನುದಾನವಿದೆ. ೨೦೧೧-೧೨ ರಲ್ಲಿ ದಕ್ಷಿಣ ಕನ್ನಡದಲ್ಲಿ ೨,೧೧,೯೮೦ ಮಕ್ಕಳು ಬಿಸಿಯೂಟದ ಪ್ರಯೋಜನ ಪಡೆದಿದ್ದಾರೆ. ಕೇಂದ್ರ ಸರಕಾರದಿಂದ ೧೬.೬೯ ಕೋ.ರೂ. ನಾಲ್ಕು ಕಂತುಗಳಲ್ಲಿ ಬಿಡುಗಡೆಯಾಗಿದ್ದು, ೧೬.೪೮ ಕೋ.ರೂ. ವ್ಯಯವಾಗಿದೆ. ೨೦೧೨-೧೩ ನೇ ಸಾಲಿನಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ೨,೧೨,೩೭೦ ಮಕ್ಕಳನ್ನು ಗುರುತಿಸಲಾಗಿದ್ದು ಕೇಂದ್ರದಿಂದ ರೂ.೩.೮೮ ಕೋ.ಪ್ರಥಮ ಕಂತು ಬಿಡುಗಡೆಯಾಗಿದೆ.
ಅಕ್ರಮ ತಪ್ಪಿಸಲು ಎನ್‌ಸಿಡಿಇಎಕ್ಸ್ 
  ರಾಜ್ಯದಲ್ಲಿ ಈ ಯೋಜನೆಗೆ ರಾಜ್ಯಆಹಾರ ಮತ್ತು ನಾಗರಿಕ ಸೇವಾ ಇಲಾಖೆ (ಕೆಎಫ್‌ಸಿಎಸ್‌ಸಿ) ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹರಾಜು ನಡೆಸುತ್ತಿದ್ದು ಅಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿತ್ತು.೨೦೧೧-೧೨ರಿಂದ ಅಕ್ರಮ  ತಡೆಯಲು ಕೆಎಫ್‌ಸಿಎಸ್‌ಸಿ ಹರಾಜು ಪ್ರಕ್ರಿಯೆಯನ್ನು ಕೇಂದ್ರೀಯ ಸಂಸ್ಥೆಯಾದ ಎನ್‌ಸಿಡಿಇಎಕ್ಸ್‌ಗೆ  ವಹಿಸಿತ್ತು. ಇಲ್ಲಿ ನೋಂದಾವಣೆ ಮಾಡಿದ ಗುತ್ತಿಗೆದಾರರು ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಪಾಲ್ಗೊಂಡು ಆಯ್ಕೆಯಾದವರು ಆಹಾರ ಸಾಮಗ್ರಿಯನ್ನು ಪೂರೈಕೆ ಮಾಡುತ್ತಾರೆ. ಈ ಸಂದರ್ಭ ಗುತ್ತಿಗೆದಾರರ ಸಾಮಗ್ರಿ ಗುಣಮಟ್ಟ ಪರೀಕ್ಷಕ, ಕೆಎಫ್‌ಸಿಎಸ್‌ಸಿ.ಯ ಇನ್‌ಸ್ಪೆಕ್ಟರ್, ಜಿ.ಪಂ.ನ ಅಧಿಕಾರಿಯೊರ್ವರೂ ಆ ಸಂದರ್ಭದಲ್ಲಿದ್ದು  ಪೂರೈಕೆಯಾದ ವಸ್ತುವಿನ ಗುಣಮಟ್ಟವನ್ನು ಪರಿಶೀಲಿಸಿ ವಿವಿಧ ಶಾಲೆಗಳಿಗೆ ಪೂರೈಕೆಯಾಗುತ್ತದೆ. ೨೦೧೧-೧೨ ರವರೆಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡಿದ ನಂತರದಲ್ಲಿ ಹಣವನ್ನು ಪಾವತಿ ಮಾಡಲಾಗುತ್ತಿತ್ತು. ಕಳೆದ ಬಾರಿ ನಡೆದ ಗೊಂದಲದಿಂದಾಗಿ ಈ ಬಾರಿ ಒಂದು ತಿಂಗಳ ಮುಂಚಿತವಾಗಿ ಹಣವನ್ನು ಪಾವತಿಸಬೇಕು ಎನ್ನುವ ಸದುದ್ದೇಶದ ಆದೇಶವನ್ನು ಸರಕಾರ ಪ್ರತಿ ಜಿಲ್ಲೆಗೂ ನೀಡಿತ್ತು.
ಸಾಮಗ್ರಿ ಪೂರೈಕೆ ಹೇಗೆ?
ದ.ಕ.ಜಿಲ್ಲೆಯೊಂದರಲ್ಲಿ ತಿಂಗಳಿಗೆ  ರೂ. ೯೦ಲಕ್ಷ ಬಿಸಿಯೂಟಕ್ಕಾಗಿ ವ್ಯಯಿಸಲಾಗುತ್ತಿದೆ. ಸರಕಾರದ ಆದೇಶದಂತೆ ಒಂದು ತಿಂಗಳ ಮುಂಚಿತವಾಗಿ ಕೆಎಫ್‌ಸಿಎಸ್‌ಸಿಗೆ ಹಣ ಹಾಗೂ ತಿಂಗಳಿಗೆ ಬೇಕಾದ ಆಹಾರದ ಪಟ್ಟಿಯನ್ನು  ಪ್ರತಿ ತಿಂಗಳ ೧೦ ರೊಳಗೆ ನೀಡಬೇಕು. ಇದೊಂದು ಆರ್ಥಿಕ ಶಿಸ್ತು -ದಕ್ಷತೆ ಸಾಧಿಸುವ ಕ್ರಮವೇ ಆಗಿದೆ. ಜಿ.ಪಂ.ನಿಂದ ಬಿಡುಗಡೆಯಾದ ಹಣ ಹಾಗೂ ತಾಲೂಕಿಗೆ ಬೇಕಾದ ಆಹಾರ ಪಟ್ಟಿಯನ್ನು ಕೆಎಫ್‌ಸಿಎಸ್‌ಸಿಗೆ ಕಳುಹಿಸಬೇಕು.ಅವರು ಅದನ್ನು ಎನ್‌ಸಿಡಿಇಎಕ್ಸ್‌ಗೆ ನೀಡಿದ ನಂತರ ಅದರ ಪರಿಶೀಲನೆಯಾಗಿ ಅನಂತರ ಹರಾಜು ಪ್ರಕ್ರಿಯೆ . ಮುಂಬೈಯಲ್ಲಿರುವ ಎನ್‌ಸಿಡಿಇಎಕ್ಸ್‌ನಲ್ಲಿ ನೋಂದಾವಣೆ ಮಾಡಿದ ಗುತ್ತಿಗೆದಾರರು ಹರಾಜಿನಲ್ಲಿ ಭಾಗವಹಿಸಿ ಆಯ್ಕೆಯಾದವರು ಜಿಲ್ಲೆಗೆ ಆಹಾರವನ್ನು ಪೂರೈಕೆ ಮಾಡುತ್ತಾರೆ.
ಆದರೆ ಇಲ್ಲೊಂದು ತಾಂತ್ರಿಕ ತೊಡಕುಂಟಾಗುವ ಆತಂಕ ಇದೆ ಎನ್ನಲಾಗುತ್ತದೆ.ಎನ್‌ಸಿಡಿಇಎಕ್ಸ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಉತ್ತರ ಕರ್ನಾಟಕದವರು. ಇವರು ಮುಂಬೈಯಿಂದ ಬಹಳ ದೂರದಲ್ಲಿರುತ್ತಾರೆ. ಹರಾಜು ಪ್ರಕ್ರಿಯೆ ಮುಗಿದು ಆಹಾರ ಪೂರೈಕೆಗೆ ಕನಿಷ್ಠ೨೦ ದಿನಗಳು ಬೇಕು. ಸರಕಾರದಿಂದ ೩ ತಿಂಗಳಿಗೆ ಬೇಕಾಗುವ ಹಣವನ್ನು ಆಯಾ ಜಿ.ಪಂ.ಗೆ ನೀಡಿದ್ದರೂ ಕೆಲವೊಮ್ಮೆ ಅಧಿಕಾರಿ ನಿರ್ಲಕ್ಷ್ಯ ಹಾಗೂ ತಾಂತ್ರಿಕ ತೊಂದರೆಯಿಂದ ಕೆಎಫ್‌ಸಿಎಸ್‌ಸಿಗೆ ಹಣ ಹಾಗೂ ಆಹಾರದ ಪಟ್ಟಿ ತಲುಪುವುದು ವಿಳಂಬವಾದರೆ ಬಿಸಿಯೂಟ ವ್ಯವಸ್ಥೆಗೆ ತೊಡಕಾಗಬಹುದು.ಅಕ್ಷರ ದಾಸೋಹದಲ್ಲಿ ಅಕ್ಕಿಯಿಂದ ಯಾವುದೇ ಸಮಸ್ಯೆ ಇಲ್ಲದಿದ್ದರೂ ಉದ್ದು , ಬೇಳೆ ಹಾಗೂ ಎಣ್ಣೆಯಿಂದ ತೊಂದರೆಯಾಗಬಹುದು ಎನ್ನುವ ಆತಂಕ ಅಕ್ಷರದಾಸೋಹದ ಅಧಿಕಾರಿಗಳಾದಾಗಿದೆ. ಇದು ಕೇವಲ ದಕ್ಷಿಣ ಕನ್ನಡದ ಸ್ಥಿತಿ ಮಾತ್ರವಲ್ಲ. ಈ ಸ್ಥಿತಿ ರಾಜ್ಯದ ಇತರ ಕಡೆಗಳಲ್ಲೂ ಕಂಡುಬರುವ ಸಾಧ್ಯತೆ ಇದೆ.
ಬಿಸಿಯೂಟದ ಯೋಜನೆಯಿಂದ  ಸಾವಿರಾರು ಮಕ್ಕಳು ಪ್ರಯೋಜನ ಪಡೆದಿದ್ದು, ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಿದೆ. ಸಂಬಂಧಿಸಿದ ಅಧಿಕಾರಿಗಳು ಆರ್ಥಿಕ ಶಿಸ್ತಿಗೆ ಪೂರಕವಾಗಬಹುದಾದ ಈ ವ್ಯವಸ್ಥೆಯಲ್ಲಿ ಸಕಾಲದಲ್ಲಿ ಮುಂಗಡ ಪಾವತಿಯಾಗುವಂತೆ ನೋಡಿಕೊಂಡು  ಬಿಸಿಯೂಟ ಯಾವುದೇ ವಿಘ್ನವಿಲ್ಲದೆ ನಡೆಯುವುದನ್ನು ಖಾತ್ರಿ ಪಡಿಸಿದಲ್ಲಿ ಬಿಸಿಯೂಟ ಯೋಜನೆ ಇನ್ನಷ್ಟು ದಕ್ಷ ರೀತಿಯಲ್ಲಿ ನಡೆಯಲು ಸಾಧ್ಯವಿದೆ.







ಸರ್ವ ಶಿಕ್ಷಣ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಂದೋಲನ ``ಶಾಲೆಗಾಗಿ ನಾವು-ನೀವು"



ಮಂಗಳೂರು: ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಇತರ ರಾಜ್ಯಗಳಿಗಿಂತ ವಿಶಿಷ್ಟ ಸ್ಥಾನದಲ್ಲಿರುವ ಕರ್ನಾಟಕವು ಶಿಕ್ಷಣದಲ್ಲಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ-೨೦೦೯ನ್ನು ರಾಜ್ಯದಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು ೨೦೧೨ರ ಅಡಿಯಲ್ಲಿ ಜಾರಿಗೆ ತಂದಿರುವುದು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೊಂದು ಹೆಮ್ಮೆಯ ಗರಿ. ಈ ಕಾಯಿದೆಯಲ್ಲಿ ಮಕ್ಕಳಿಗೆ ನೀಡಿರುವ ಹಕ್ಕುಗಳಲ್ಲಿ ಲೋಪವಾದರೆ ಹಕ್ಕಿನ ರಕ್ಷಣೆಗೆ ಮಕ್ಕಳು ನ್ಯಾಯಾಲಯದ ಮೊರೆ ಹೋಗ ಬಹುದಾಗಿದೆ. ಆದರೆ ಮಕ್ಕಳ ಸಂವಿಧಾನದತ್ತವಾದ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಬಾರದು ಎನ್ನುವ ನೆಲೆಯಲ್ಲಿ ರಾಜ್ಯ ಸರಕಾರದ ಈ ಕಾರ್ಯ ಶ್ಲಾಘನೀಯ.
ಕಳೆದ ಬಾರಿಯಂತೆ ಶೈಕ್ಷಣಿಕ ವಲಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿ ಸರಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ ಕಾಣುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜು.೪ರಿಂದ ಜು.೩೧ರವರೆಗೆ ರಾಜ್ಯಾದಾದ್ಯಂತ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಂದೋಲನ ರೂಪವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಮುಖ್ಯಮಂತ್ರಿಗಳು ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರವರೆಗಿನ ಜನಪ್ರತಿನಿಧಿಗಳು, ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳು ಮತ್ತು ವಾರ್ತಾ ಇಲಾಖೆಯ ಆಯುಕ್ತರಿಂದ ಹಿಡಿದು ಸಮೂಹ ಸಂಪನ್ಮೂಲ ವ್ಯಕ್ತಿವರೆಗಿನ ಎಲ್ಲಾಹಂತದ ಅಧಿಕಾರಿಗಳು ಆಯಾ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ.
ಕಾರ್ಯಕ್ರಮದ ಉದ್ದೇಶ:
ಮಕ್ಕಳ ಶಿಕ್ಷಣದ ಹಕ್ಕು ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ  ಸರಕಾರ ಶೈಕ್ಷಣಿಕ ವಲಯಕ್ಕೆ ನೀಡುವ ಉತ್ತೇಜಕಗಳು ಫಲಾನುಭವಿಗಳಿಗೆ ತಲುಪಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಅನುಕೂಲವಾಗಿದೆ. ೨ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಸ್ಥೂಲವಾಗಿ ಗುರುತಿಸಿ ದಾಖಲಿಸುವುದು. ಫಲಿತಾಂಶ ಆಧರಿಸಿ ಕಾರ್ಯಾನುಸರಣೆ ಮಾಡಲು ಸಹಕಾರಿಯಾಗಿದೆ. ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ವಿಶಿಷ್ಟ ಚಟುವಟಿಕೆ ಗುಣಮಟ್ಟದ ಉಸ್ತುವಾರಿ ಮಾಡುವುದು. ಸಮುದಾಯ ಮತ್ತು ದಾನಿಗಳನ್ನು ಪ್ರೇರೆಪಿಸಿ ಅವರ ನೆರವಿನಿಂದ ಶಾಲೆಯ ಭೌತಿಕ, ಶೈಕ್ಷಣಿಕ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುಲಾಗುವುದು. ವಿಶೇಷವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ತರುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳು ಸಕ್ರೀಯವಾಗಿ ತೊಡಗುವಂತೆ ಮಾಡುವುದಾಗಿದೆ.
ಕಾರ್ಯಕ್ರಮದ ಸ್ವರೂಪ:
ಜು.೫ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮದ ಅನುಷ್ಠಾನವಾಗಲಿದೆ. ವಿವಿಧ ಹಂತದ ಅಧಿಕಾರಿಗಳು ಜು.೭ರಿಂದ ೩೧ರವರೆಗೆ ಶಾಲೆಗಳ ಸಂಕ್ಷಿಪ್ತ ಮೌಲ್ಯಮಾಪನ ನಡೆಸುವರು. ಆಗಸ್ಟ್೧೬ರಿಂದ ಜ.೧೫ರವರೆಗೆ ನಿರಂತರ ಕಾರ್ಯಾನುಸರಣೆ, ಸ್ಥಳೀಯವಾಗಿ ಜ.೧೬ರಿಂದ ೩೧ರವರೆಗೆ ಎಸ್.ಡಿ.ಎಂ.ಸಿ, ಸಮುದಾಯ, ಅಧ್ಯಾಪಕರ ಸಮಾವೇಶ  ಆಯಾ ಶಾಲೆಯಲ್ಲಿ ಆಯೋಜಿಸಲಾಗಿದೆ.
ಶಾಲೆಗೆ ಹೋಗೊಣ:
ಜು.೫ರಂದು ಚುನಾಯಿತ ಪ್ರತಿನಿಧಿಗಳು, ಸಚಿವರು, ಸಾಂಸದರು, ಶಾಸಕರು, ಜಿಲ್ಲಾ ತಾಲೂಕು-ಗ್ರಾಮ ಪಂಚಾಯತ್‌ಗಳ ಸದಸ್ಯರು ತಮ್ಮ ಕ್ಷೇತ್ರದ ಒಂದು ಸರಕಾರಿ ಶಾಲೆಗೆ ತೆರಳಿ ಪುಟ್ಟ ಮಕ್ಕಳಿಗೆ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣದ ಹೊಣೆಗಾರಿಕೆ ಹಿರಿಯರಾದ ನಮ್ಮದು ಎನ್ನುವ ಭರವಸೆ ನೀಡುವ ಮೂಲಕ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ ೨೦೦೯ರ ಅನುಷ್ಠಾನಕ್ಕೆ ಅತ್ಯುತ್ತಮ ಅಡಿಪಾಯ ಹಾಕುವರು. ಈ ರೀತಿಯಾಗಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊರ್ವರ ಮೂಲ ಜವಾಬ್ದಾರಿಯನ್ನು ಮನವರಿಕೆ ಮಾಡಲಾಗುತ್ತದೆ.
ಯೋಜನೆಯಲ್ಲಿ ಸೂಚಿತ ಚಟುವಟಿಕೆಗಳು:
ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಾಲೆಗೆ ದಾಖಲಾಗದೆ ಉಳಿಯುವ ಹಾಗೂ ಅರ್ಧದಲ್ಲಿಯೇ ಶಾಲಾ ಜೀವನ ಮೊಟಕುಗೊಳಿಸುವ ಮಕ್ಕಳು ವಿಪರೀತವಾಗಿರುವುದರಿಂದ ಈ ಪ್ರದೇಶದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಶಿಕ್ಷಕರು ಸೇರಿ, ಜನರೊಂದಿಗೆ ಮುಖಾಮುಖಿಯಾಗಿ ಅವರೊಡನೆ ಶಾಲೆಗೆ ಜಾಥಾ ಬರುತ್ತಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ, ಗ್ರಾಮ ಪಂಚಾಯತ್‌ನ ವತಿಯಿಂದ ಶ್ವೇತ ಪತ್ರ ಹೊರಡಿಸುವಿಕೆ, ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು ೨೦೧೨ರ ಸರಳವಾದ ಕೈಪಿಡಿ ಪ್ರಕಟನೆ, ಶಿಕ್ಷಣದ ಹಕ್ಕುಗಳ ಮಾಹಿತಿಯನ್ನು ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯ ಗೋಡೆಯ ಮೇಲೆ ನಮೂದಿಸಿ ಅನಾವರಣಗೊಳಿಸುವುದು, ಹಿರಿಯರು ಪ್ರತಿಜ್ಞಾ ಸ್ವೀಕಾರ, ಎಸ್.ಡಿ.ಎಂ.ಸಿ ಹೊಣೆಗಾರಿಕೆ, ಶಾಲೆಯಲ್ಲಿ ನಡೆಯಬೇಕಾದ ಕಡ್ಡಾಯ ಚಟುವಟಿಕೆಗಳ ಪರಿಶೀಲನೆ, ಮೇಲ್ವಿಚಾರಕರ ಭೇಟಿ, ಎಂ.ಎಚ್.ಆರ್.ಡಿ ನಮೂನೆಯಂತೆ ಗುಣಾತ್ಮಕ ಶಿಕ್ಷಣಕ್ಕಾಗಿ ಕೈಗೊಂಡಿರುವ ಕ್ರಮ ತಿಳಿದುಕೊಳ್ಳಲು ಸ್ವಯಂ ಸೇವಕರ ಭೇಟಿ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿರುತ್ತದೆ. ಪ್ರತಿ ಪ್ರೌಢಶಾಲಾ ತಂಡದಲ್ಲಿ ೬ ಜನ ವಿಷಯ ಶಿಕ್ಷಕರು, ಬ್ಲಾಕ್ ಹಂತದಲ್ಲಿ ಬಿ.ಇ.ಒ, ಬಿ.ಆರ್.ಪಿ, ಇ.ಸಿ.ಒ, ಸಿ.ಆರ್.ಪಿ, ಐ.ಇ.ಆರ್.ಟಿ, ಹಾಗೂ ಮುಖ್ಯ ಶಿಕ್ಷಕರು ಭಾಗಿಯಾಗುತ್ತಾರೆ.

ಅವಿಭಜಿತ ದ.ಕ ಮತ್ತು ಉಡುಪಿಯಲ್ಲಿ ಯೋಜನೆ:
ದ.ಕ.ಜಿಲ್ಲೆಯಲ್ಲಿ ೯೩೨ ಸರಕಾರಿ ಪ್ರಾಥಮಿಕ ಹಾಗೂ ೧೬೦ ಪ್ರೌಢಶಾಲೆಗಳಿದ್ದು ೪೭ ಬ್ಲಾಕ್ ತಂಡಗಳು, ೮ ಜಿಲ್ಲಾ ತಂಡಗಳನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ೬ ಜನರ ೩೭ ತಂಡಗಳನ್ನು ರಚಿಸಿದ್ದು ೨೦ ದಿನದಲ್ಲಿ ೬೧೭ ಪ್ರಾಥಮಿಕ ಹಾಗೂ ೧೦೬ ಪ್ರೌಢಶಾಲೆಗೆ ಭೇಟಿ ನೀಡಲಾಗುತ್ತದೆ.


ಸರಕಾರಿ ಶಾಲೆಯ ಕುರಿತು ಜನರಿಗೆ ಕಡಿಮೆ ದರ್ಜೆಯದು ಎನ್ನುವ ತಾತ್ಸಾರ ಮನೋಭಾವನೆಯಿದೆ. ಅದನ್ನು ಹೋಗಲಾಡಿಸಿ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಿಸಬೇಕು. ಸರಕಾರಿ ಶಾಲೆಯಲ್ಲಿ ವಿಶೇಷ ಫಲಿತಾಂಶ ಕಾಣಲು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸಹಾಯವಾಗಲಿದೆ. ಈ ಯೋಜನೆ ಕಾರ್ಯಚಟುವಟಿಕೆಯಿಂದ ೨೦೧೧-೧೨ರ ಸಾಲಿನಲ್ಲಿ ಸರಕಾರಿ ಶಾಲೆ ಫಲಿತಾಂಶದಲ್ಲಿ ಉತ್ತಮ ಪ್ರಗತಿ ಕಂಡಿದೆ. ಪ್ರತಿವರ್ಷ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಮಾಡುವ ಉದ್ದೇಶವಿದೆ. 
ವಿಶ್ವೇಶ್ವರ ಹೆಗಡೆ ಕಾಗೇರಿ- ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ 







Monday 2 July 2012

ವಿಶೇಷ ಮಕ್ಕಳಿಗಾಗಿ ಶಾಲಾ ಸಿದ್ದತಾ ಕೇಂದ್ರ:

ಉಡುಪಿ ಜಿಲ್ಲೆಯ ೩೭ ಕೇಂದ್ರಗಳಲ್ಲಿ ಜುಲೈ ೨ರಿಂದ ಕಾರ್ಯಾರಂಭ

ಮಂಗಳೂರು: ಹುಟ್ಟುವ ಪ್ರತಿಯೊಂದು ಮಗು ಶಿಕ್ಷಿತರಾಗುವುದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎನ್ನುವುದು ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ. ಸಾಮಾನ್ಯ ಮಕ್ಕಳಿಗಿಂತ ನೋಡುವುದಕ್ಕೆ ಭಿನ್ನವಾಗಿರುವ ವಿಕಲಚೇತನ ಮಕ್ಕಳಿಗೂ ಅವಕಾಶ ಕಲ್ಪಿಸಬೇಕು ಅವರಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಸಮಾಜ ಮುಖಿಯಾಗಿಸಬೇಕು. ಆ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಉದ್ದೇಶದಿಂದ ಈ ಬಾರಿ ರಾಜ್ಯ ಸರಕಾರವು ಶಾಲಾ ಸಿದ್ದತಾ ಕೇಂದ್ರ ಪ್ರಾರಂಬಿಸಿದೆ. ಸಾಮಾನ್ಯ ಮಕ್ಕಳಂತೆ ಅವರು ಕಲಿಯುತ್ತಿರುವ ಶಾಲೆಯಲ್ಲಿಯೇ ವಿಶೇಷ ಮಕ್ಕಳಿಗೆ ಈ ಬಾರಿ ಶಿಕ್ಷಣ ಕಲಿಯುವ ಅವಕಾಶ ಲಭ್ಯವಾಗಿದೆ. ೭ ವರ್ಷದ ಹಿಂದೆ ಪ್ರಾರಂಭವಾದ ವಿಶೇಷ ಮಕ್ಕಳ ಗೃಹಧಾರಿತ ಶಿಕ್ಷಣದ ಮುಂದಿನ ರೂಪವೇ ಶಾಲಾ ಸಿದ್ದತಾ ಕೇಂದ್ರ.
ಎಸ್‌ಆರ್‌ಪಿ ಜಾರಿಗೆ ಬರಲು ಕಾರಣ:
ಗೃಹಾಧಾರಿತ ಶಿಕ್ಷಣದ ಕಾರಣಕ್ಕಾಗಿ ಶೈಕ್ಷಣಿಕ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದ ವಿಕಲಚೇತನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆನ್ನುವ ಉದ್ದೇಶದಿಂದ ಶಾಲಾ ಸಿದ್ದತಾ ಕೇಂದ್ರವನ್ನು ಪ್ರಾರಂಬಿಸಿಲಾಗಿದೆ. ರಾಜ್ಯದಲ್ಲಿ ೨೦೧೨-೧೩ ನೇ ಸಾಲಿನಲ್ಲಿ ೨೦೬೦ ಶಾಲಾ ಸಿದ್ದತಾ ಕೇಂದ್ರ(ಎಸ್‌ಆರ್‌ಪಿ) ತೆರೆದು, ನಿರ್ವಹಣೆಗೆ ಸೂಕ್ತ ಶೈಕ್ಷಣಿಕ ಅರ್ಹತೆಯಿರುವ ವಿಶೇಷ ಸಂಪನ್ಮೂಲ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಐ.ಇ.ಆರ್.ಟಿ ಹಾಗೂ ವಿಶೇಷ ಸಂಪನ್ಮೂಲ ಶಿಕ್ಷಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರ ತೆರೆಯಲು ನಿರ್ಧರಿಸಿದ ಕ್ಲಸ್ಟರ್ ಅಥವಾ ಶಾಲೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಕೊಠಡಿ ಅಥವಾ ಒಂದು ವಿಶೇಷ ಕೊಠಡಿ ವ್ಯವಸ್ಥೆಗೊಳಿಸಿ ಕೇಂದ್ರವನ್ನು ಪ್ರಾರಂಬಿಸಲಾಗುವುದು.
ಎಸ್‌ಆರ್‌ಪಿ ವಿಶೇಷತೆ:
ವಿಶೇಷ ಬಿ.ಇಡಿ ತರಬೇತಿ ಪಡೆದಿರುವ ಅಥವಾ ಬ್ಲಾಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐ.ಇ.ಆರ್.ಟಿ/ವಿಶೇಷ ಶಿಕ್ಷಕರ ಮೂಲಕ ಗುರುತಿಸಲಾಗಿರುವ ಕೇಂದ್ರಗಳನ್ನು ಪ್ರಾರಂಭ ಮಾಡಲಾಗುತ್ತದೆ. ಕೇಂದ್ರಕ್ಕೆ ಬರುವ ಮಕ್ಕಳಿಗೆ ಮಾಸಿಕ ರೂ.೩೦೦ ಸಾರಿಗೆ ಭತ್ಯೆ ಜೂನ್‌ನಿಂದಲೇ ಪ್ರಾರಂಭವಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಗೃಹಾಧಾರಿತ ಶಿಕ್ಷಣಕ್ಕಾಗಿ ಮಕ್ಕಳಿಗೆ ನೀಡಲಾದ ರೂ.೨೦೦೦ ಮೌಲ್ಯದ ಕಿಟ್‌ನ್ನು ಈ ಬಾರಿ ಶಾಲೆಯಲ್ಲಿ ಕಲಿಕೋಪಕರಣವಾಗಿ ಬಳಸಿಕೊಳ್ಳಲಾಗುತ್ತದೆ.
ಸ್ವಯಂ ಸೇವಕರಿಗೆ ನೀಡುವ ಗೌರವ ಧನ:
೨೦೧೨-೧೩ನೇ ಸಾಲಿನಲ್ಲಿ ಎಸ್‌ಆರ್‌ಪಿ ಯಲ್ಲಿ ಸ್ವಯಂ ಸೇವಕರಿಗೆ ಮಾಸಿಕ ರೂ.೧೦೦೦ವನ್ನು ಪ್ರತಿಯೊಂದು ಮಗುವಿಗೆ ನೀಡಲಾಗುವುದು. ಇದನ್ನು ೧೦ ತಿಂಗಳ ಅವಧಿಗೆ ನೀಡಲಾಗುತ್ತದೆ. ಒಬ್ಬ ಸ್ವಯಂ ಸೇವಕರು ಗರಿಷ್ಟ ೩ ಮಕ್ಕಳ ಜವಾಬ್ದಾರಿಯನ್ನು ನೋಡಿಕೊಳ್ಳಬಹುದು. ಎಸ್‌ಆರ್‌ಪಿಯಂತೆ ಗೃಹಾಧಾರಿತ ಶಿಕ್ಷಣವು ಮುಂದುವರಿಯಲಿದ್ದು ಇದರಲ್ಲಿ ಶಿಕ್ಷಕರಿಗೆ ಮಾಸಿಕ ರೂ.೩೦೦೦ಗೌರವಧನ ನಿಡಲಾಗುವುದು. ೮ ಕಿ.ಮೀ. ವ್ಯಾಪ್ತಿಯಲ್ಲಿ ಗರಿಷ್ಟ  ೩ ಗೃಹಾಧಾರಿತ ಕೇಂದ್ರದಲ್ಲಿರುವ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶವಿದೆ. ಶಿಕ್ಷಕರನ್ನು ನೇಮಕ ಮಾಡುವಾಗ ಎಂ.ಸಿ.ಟಿ.ಟಿ ತರಬೇತಿ ಪಡೆದಿರುವ ಆಧ್ಯತೆಯಲ್ಲಿ ಸ್ವಯಂ ಸೇವಕರನ್ನು  ನೇಮಿಸಿಕೊಳ್ಳಬಹುದು. ವಿಶೇಷ ಶಿಕ್ಷಣದಲ್ಲಿ ೯೦ ದಿನಗಳ ಬುನಾದಿ ತರಬೇತಿ ಪಡೆದಿರುವ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗುವುದು. ೧೦ ನೇ ತರಗತಿಯಲ್ಲಿ ಅನುತ್ತಿರ್ಣರಾದವರನ್ನು ನೇಮಿಸಿಕೊಳ್ಳುವ ಅವಕಾಶವಿಲ್ಲ.
ದಕ್ಷಿಣ ಕನ್ನಡದಲ್ಲಿ ಶಾಲಾ ಸಿದ್ದತಾ ಕೇಂದ್ರ:
೨೦೧೨-೧೩ರ ಸಪ್ಟ್ಟೆಂಬರ್‌ನಲ್ಲಿ ಜಿಲ್ಲೆಯ ೧೧೪ ಕ್ಲಸ್ಟರ್‌ಗಳಲ್ಲಿ ೯೪ ಸ್ಥಳದಲ್ಲಿ ಎಸ್‌ಆರ್‌ಪಿ ಆರಂಭವಾಗುತ್ತದೆ. ಕಳೆದ ಬಾರಿಯ ೬೦೨ ಗೃಹಾಧಾರಿತ ಮಕ್ಕಳಲ್ಲಿ ೯೨ ಮಕ್ಕಳು ಆ ಶಿಕ್ಷಣದಲ್ಲಿಯೇ ಮುಂದುವರಿಯುತ್ತಾರೆ. ಉಳಿದ ಎಲ್ಲಾ ಮಕ್ಕಳು ಶಾಲಾ ಸಿದ್ದತಾ ಕೇಂದ್ರಕ್ಕೆ ಆಗಮಿಸುತ್ತಾರೆ. ಬ್ಲಾಕ್‌ಗಳಲ್ಲಿ ೫ ಶಿಕ್ಷಕರನ್ನು ನೇಮಿಸಲಾಗುವುದು ಅದರಲ್ಲಿ ೩ ಖಾಯಂ ಶಿಕ್ಷಕರು ಹಾಗೂ ೨ ಎನ್‌ಜಿಒಗಳ ನೇಮಕ ಮಾಡಲಾಗುತ್ತದೆ. ಜಿಲ್ಲೆಯ ೭ ಕಡೆ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಈ ಕುರಿತು ಮಾಹಿತಿ ನೀಡಲಾಗುವುದು.
ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಎಸ್‌ಆರ್‌ಪಿ ಪ್ರಾರಂಭ:
ಉಡುಪಿ ಜಿಲ್ಲೆಯ ೫ ಶೈಕ್ಷಣಿಕ ವಲಯಗಳಾದ ಬ್ರಹ್ಮಾವರ, ಬೈಂದೂರು, ಕಾರ್ಕಳ, ಕುಂದಾಪುರ, ಉಡುಪಿಯಲ್ಲಿ ೭೯ ಕ್ಲಸ್ಟರ್‌ಗಳಲ್ಲಿ ೨೪೬ ಮಕ್ಕಳು ಈ ಪ್ರಯೋಜನ ಪಡೆಯಲಿದ್ದಾರೆ. ೩೭ ಕೇಂದ್ರಗಳಲ್ಲಿ ಎಸ್‌ಆರ್‌ಪಿ ಇಂದಿನಿಂದ ಪ್ರಾರಂಭಗೊಂಡು ವಾರದಲ್ಲಿ ೨ ದಿನಗಳು ಕಾರ್ಯ ನಿರ್ವಹಿಸುತ್ತದೆ. ಜಿಲ್ಲಾ ಶಿಕ್ಷಣ ಕೇಂದ್ರದ ಮೂಲಕ ಸರಕಾರಿ ಶಾಲೆಗಳಲ್ಲಿರುವ ಹೆಚ್ಚುವರಿ ಕೊಠಡಿಯ ಅನುಮತಿ ಪಡೆದು ಎಸ್‌ಆರ್‌ಪಿ ಕೇಂದ್ರದ ಮೂಲಕ ವಿಶೇಷ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತದೆ. ಸಾಮಾನ್ಯ ಮಕ್ಕಳಂತೆ ಇವರಿಗೂ ಬಿಸಿಯೂಟ, ಸಮವಸ್ತ್ರ ಇತ್ಯಾದಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಬಾಕ್ಸ್:
ಉಡುಪಿ ಜಿಲ್ಲೆ
ಶೈಕ್ಷಣಿಕ ವಲಯ    ಬ್ರಹ್ಮಾವರ    ಬೈಂದೂರು    ಕಾರ್ಕಳ    ಕುಂದಾಪುರ    ಉಡುಪಿ    ಒಟ್ಟು   
ಗೃಹಧಾರಿತ     ೧೨    ೧೩    ೦೭    ೦೫    ೧೫    ೫೨   
ಶಿಕ್ಷಕರು    ೪    ೪    ೩    ೨    ೫    ೧೮   
ಎಸ್‌ಆರ್‌ಪಿ ಕೇಂದ್ರ     ೭    ೯    ೭    ೭    ೭    ೩೭   
ಎಸ್‌ಆರ್‌ಪಿ ಮಕ್ಕಳು    ೫೩    ೫೨    ೫೧    ೫೫    ೩೫    ೨೪೬    

೫ ಕಿ.ಮೀ. ವ್ಯಾಪ್ತಿಗೆ ಶಾಲೆಯಲ್ಲಿ ವಿಶೇಷ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸಾಮಾನ್ಯ ಮಕ್ಕಳಂತೆ  ಇವರು ಸಮಾಜದ ಮುಖ್ಯವಾಹಿನಿಗೆ ಬರಬೇಕೆನ್ನುವ ನಿಟ್ಟಿನಲ್ಲಿ ಎಸ್‌ಆರ್‌ಪಿ ಕೇಂದ್ರಗಳನ್ನು ಆರಂಬಿಸಲಾಗಿದೆ.ಕೇಂದ್ರದಲ್ಲಿ ಶ್ರವಣ ಸಾಧನ, ಬ್ರೈಲ್ ಲಿಫಿ, ಪಿಸಿಯೋಥೆರಪಿಯಂತಹ ಸೌಲಭ್ಯಗಳನ್ನು ಒದಗಿಸಲಾಗುವುದು.
ನಾಗರಾಜ-ಉಡುಪಿ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ
ವಿಕಲಾಂಗತೆಯಿಂದ ಬಳಲುತ್ತಿರುವ ಮಗು ಇತರ ಮಕ್ಕಳಂತೆ ಶಾಲಾ ಜೀವನವನ್ನು ಅನುಭವಿಸಿ ಅವರೊಂದಿಗೆ ಬೆರೆಯಬೇಕು ಎನ್ನುವ ಉದ್ದೇಶದಿಂದ ರಾಜ್ಯಾದಾದ್ಯಂತ ಕೇಂದ್ರಗಳನ್ನು ಆರಂಬಿಸಲಾಗಿದೆ. ೮ರಿಂದ ೧೪ ವರ್ಷದ ವಿಶೇಷ ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಪೋಷಕರು ಹಾಗೂ ನಾಗರಿಕರು ಸಹಕರಿಸಬೇಕು.
ಪೀತಾಂಬರ ಕೆ. -ಸಹಾಯಕ ಯೋಜನಾ ಸಮನ್ವಯಾಧಿಕಾರಿ ದ.ಕ.ಜಿಲ್ಲೆ.