Monday 31 December 2012

ಯುವಜಾಗೃತಿ ಸಮ್ಮೇಳನದಲ್ಲಿ ಗಣ್ಯ ವ್ಯಕ್ತಿಗಳಿಂದ ಯುವಜನತೆಗೆ ಕರೆ..
ದೇಶದ ಉಳಿವಿಗೆ ವಿವೇಕಾನಂದರ ಆದರ್ಶ ಪಾಲನೆ ಅಗತ್ಯ:
ಮಂಗಳೂರಿನ ಸಂಘನಿಕೇತನದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಹಾಗೂ ಬೇಲೂರು ಮಠದ ಆಶ್ರಯದಲ್ಲಿ ಎರಡು ದಿನಗಳು ನಡೆದ ಅಖಿಲ ಕರ್ನಾಟಕ ಯುವ ಜಾಗೃತಿ ಸಮ್ಮೇಳನಕ್ಕೆ ರಾಜ್ಯದ ಅನೇಕ ಕಾಲೇಜುಗಳಿಂದ ಯುವ ಸಮೂಹವೇ ಹರಿದುಬಂದಿತ್ತು. ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆಯ ಅಂಗವಾಗಿ ಆಚರಿಸುತ್ತಿದ್ದ ಈ ಕಾರ್ಯಕ್ರಮದಲ್ಲಿ ವಿವೇಕಾನಂದರ ಆದರ್ಶಗಳಿಂದ ಪ್ರೇರಿತರಾದ ಯುವಸಮೂಹ ಎನ್ನುವುದು ಸ್ಪಷ್ಟವಾಗಿದೆ. ವಿವೇಕಾನಂದರು ಭೌತಿಕವಾಗಿ ನಮ್ಮೊಂದಿಗೆ ಇರದಿದ್ದರೂ ಅವರ ನುಡಿಗಳನ್ನು ಹಿರಿಯರ ಬಾಯಿಯಿಂದ ಕೇಳಿ ಅನುಭವಿಸಲು ಯುವಸಮೂಹ ಬಂದಿರುವಾಗ ಅವರ ಜೀವಿತದಲ್ಲಿ ದೇಶದಲ್ಲಿ-ಅಮೇರಿಕಾದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ  ಜನಸಾಗರವೇ ನೆರೆದಿರಬೇಕು ಎನ್ನುವುದು ನನ್ನ ಭಾವನೆ.
ಸುಂದರ ಕಾರ್ಯಕ್ರಮವನ್ನು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಭ್ರಷ್ಟಾಚಾರ ಮತ್ತು ದುರ್ವ್ಯಸನ ಈ ದೇಶಕ್ಕಂಟಿದ ದೊಡ್ಡ ಪಿಡುಗು. ಅದನ್ನು ತೊಡೆದು ಹಾಕುವಲ್ಲಿ ಯುವಜನತೆ ಕಟಿಬದ್ಧವಾಗಬೇಕು. ಆಧ್ಯಾತ್ಮಿಕತೆ ಮತ್ತು ರಾಷ್ಟ್ರ ನಿಷ್ಠೆ ಬೆಳೆಸಿಕೊಂಡಾಗ ಮಾತ್ರ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ದೇಶದಲ್ಲಿ ವ್ಯಾಪಿಸುತ್ತಿರುವ ಭ್ರಷ್ಟಾಚಾರ ಒಂದೆಡೆಯಾದರೆ ಚಾರಿತ್ರ್ಯಪತನ ಇನ್ನೊಂದು ರೀತಿಯಲ್ಲಿ ಆಗುತ್ತಿದೆ. ಇದರ ತಡೆ ಯುವ ಶಕ್ತಿಯಿಂದ ಮಾತ್ರ ಸಾಧ್ಯವಾಗಿದ್ದರೂ ದೇಶದಲ್ಲಿ ಯುವಜನತೆ ನಿದ್ರಿಸಿದ ಸ್ಥಿತಿಯಲ್ಲಿದ್ದಾರೆ. ವಿವೇಕಾನಂದರ ಸಂದೇಶ ಸಾರುವುದರೊಂದಿಗೆ ಯುವಕರನ್ನು ಬಡಿದೆಬ್ಬಿಸುವ ಕೆಲಸವಾಗಬೇಕು. ಸ್ವಚ್ಛ ನೀರಿದ್ದರೂ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಬೇಸಿಗೆಯ ನದಿಯಂತೆ ಯುವಕರ ಮನಸ್ಸು. ಆ ಸುಪ್ತ ಮನಸ್ಸನ್ನು ಜಾಗೃತಗೊಳಿಸಿ ದೇಶದ ಶಕ್ತಿಯನ್ನಾಗಿ ಪರಿವರ್ತಿಸುವ ಕೆಲಸವಾಗಬೇಕು. ರಾಷ್ಟ್ರ ನಿಷ್ಠೆ ಚಾರಿತ್ರ್ಯಶುದ್ಧಿಗೆ ವಿವೇಕಾನಂದರು ನಮಗೆ ಆದರ್ಶ. ಯುವಜನತೆಯ ಮೇಲೆ ನಂಬಿಕೆಯಿದೆ. ಮನಸ್ಸು ಮಾಡಿದರೆ ಯುವ ಪಡೆ ದೇಶದ ಚಿತ್ರಣ ಬದಲಿಸಬಲ್ಲುದು. ಪ್ರತಿಯೊಬ್ಬ ಯುವಕರಲ್ಲೂ ವಿವೇಕಾನಂದ, ನ್ಯೂಟನ್, ಗಾಂಧೀಜಿಯವರಂತಹ ಶ್ರೇಷ್ಠರ ಅಂತಃಶಕ್ತಿ ಅಡಗಿದೆ. ಪುರಾಣದಲ್ಲಿ ಜಾಂಬವಂತ ಹನುಮಂತನ ಶಕ್ತಿ ಎಚ್ಚರಿಸಿದಂತೆ ಯುವಕರನ್ನು ಜಾಗೃತಗೊಳಿಸಬೇಕು. ಕೆಲವೇ ದಿನ ಬದುಕಿದರೂ ಸಾರ್ಥಕ ಬದುಕು ನಮ್ಮದಾಗಬೇಕು. ಸಮಾಜದ ದುಃಖಿತರ ಕಣ್ಣೀರೊರೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದರು.  (ಸ್ವಾಮೀಜಿ ಹೇಳಿದ್ದರೂ ಯುವಜನತೆ ಕೆಟ್ಟ ಸಂಸ್ಕೃತಿಗಳ ವಿರುದ್ದ ಕಿಡಿಕಾರಿ ಎಚ್ಚೆತ್ತುಕೊಂಡು ಪ್ರತಿಭಟನೆಯಲ್ಲಿ ತೊಡಗಿದರೆ ರಾಜಕೀಯ ಶಕ್ತಿಗಳು ಅವರನ್ನು ತಡೆಯುವ ಕಾರ್ಯದಲ್ಲಿ ನಿಗೂಢವಾಗಿ ಕಾರ್ಯ ನಿರ್ವಹಿಸುತ್ತವೆ. ಉದಾ: ಸೌಜನ್ಯ ಪ್ರಕರಣ, ದೆಹಲಿಯ ಬಲತ್ಕಾರ ಒಂದೆ ಎರಡೆ...ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಅಲ್ಲವೇ?)
ನಂಬಿಕೆ ಇಲ್ಲದಿದ್ದರೆ ಸಮಾಜ ಉಳಿಯಲ್ಲ : ನ್ಯಾ.ಎನ್.ಸಂತೋಷ್ ಹೆಗ್ಡೆ.
ಮೊದಲು ಮಾನವರಾಗಿ ಬದುಕುವುದನ್ನು ಕಲಿಯಬೇಕು. ನಂಬಿಕೆ, ಮಾನವೀಯತೆಯೇ ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ. ಈ ಸಮಾಜವೂ ಉಳಿಯಲ್ಲ. ದುರಾಸೆಯಿಂದ ಸಂಪತ್ತಿನ ಕ್ರೋಢೀಕರಣ ಮಾಡುವುದು, ಮೋಸ, ವಂಚನೆ ಇತ್ಯಾದಿಗಳಿಂದ ಈ ಸಮಾಜ ಮುಕ್ತವಾಗಬೇಕು. ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಕೆಲಸ ಅಗತ್ಯವಾಗಿ ಆಗಬೇಕು. ನೈತಿಕ ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಯಾಗಬೇಕು. ತಾನು ಕಳೆದ ೬ ವರ್ಷಗಳಲ್ಲಿ ೫೨೦ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡಿದ್ದೇನೆ. ಯುವ ಜನಾಂಗ ಎಚ್ಚೆತ್ತುಕೊಂಡಲ್ಲಿ ಮಾತ್ರ ಭ್ರಷ್ಟಾಚಾರದಂತಹ ಅನಿಷ್ಠಗಳನ್ನು ದೂರ ಮಾಡಲು ಸಾಧ್ಯ.
`ಜನ ಸೇವೆಗಾಗಿ ಜನರಿಂದ ಆಯ್ಕೆಯಾಗುತ್ತಿದ್ದೇವೆ. ಗೆದ್ದ ನಂತರ ನಾವು ಅವರ ಸೇವಕರು, ಮಾಲೀಕರಲ್ಲ' ಇಂತಹ ಮನಸ್ಥಿತಿ ಉಳ್ಳವರನ್ನು ಚುನಾವಣೆಗಳಲ್ಲಿ ಪ್ರತಿನಿಧಿಗಳಾಗಿ ಆರಿಸೋಣ. ಗೆದ್ದ ನಂತರ ಕಾಲು ಕಸದಂತೆ ಕಾಣುವವರನ್ನಲ್ಲ....ಇದು ಹೆಗ್ಡೆಯವರು ಯುವಜನತೆಗೆ ನೀಡಿದ ಕರೆ. ಭ್ರಷ್ಟಾಚಾರವಲ್ಲದೆ ರಾಜಕೀಯ, ಅಭಿವೃದ್ಧಿ, ಹಗರಣಗಳು, ನ್ಯಾಯಾಂಗ ವ್ಯವಸ್ಥೆ ಬಲಗೊಳಿಸುವಿಕೆ, ಸಾಮಾನ್ಯ ನಾಗರಿಕರ ಹತಾಶೆ, ಯುವಕರ ಹೊಣೆಗಾರಿಕೆ, ಪ್ರಜಾಪ್ರಭುತ್ವದ ನೈಜ ಅರ್ಥ ಕುರಿತು ಯುವಕರ ಪ್ರಶ್ನೆಗಳಿದ್ದದ್ದು ವಿಶೇಷ. ನ್ಯಾಯದಾನ ಪದ್ಧತಿಯಲ್ಲಿ ವಿಳಂಬ ಹಾಗೂ ಗಂಭೀರ ಅಪರಾಧಗಳಿದ್ದಾಗ್ಯೂ ಸಾಮಾನ್ಯ ಶಿಕ್ಷೆಗೆ ಆರೋಪಿಗಳು ಗುರಿಯಾಗುತ್ತಿರುವ ಆತಂಕಕ್ಕೆ ಸಂತೋಷ್ ಹೆಗ್ಡೆಯವರೂ ದನಿಗೂಡಿಸಿ ದೇಶದಲ್ಲಿ ನ್ಯಾಯಾಲಯಗಳ ಸಂಖ್ಯೆ ಹೆಚ್ಚಿಸಬೇಕು, ಕಾನೂನುಗಳನ್ನು ಬಲಗೊಳಿಸಬೇಕು, ಕಾನೂನು ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಹಣ ವೆಚ್ಚ ಮಾಡುವುದರೊಂದಿಗೆ, ಅಗತ್ಯ ಕಾನೂನು ತಿದ್ದುಪಡಿಗಳನ್ನು ತರಲು ಸರ್ಕಾರ ಮುಂದಾಗಬೇಕೆನ್ನುವುದು ಅವರ ಆಗ್ರಹವಾಗಿತ್ತು. ವಿವಿಧ ಭ್ರಷ್ಟಾಚಾರ, ಹಗರಣಗಳಲ್ಲಿ ವರ್ಷಾನುಗಟ್ಟಲೆ ವಿಚಾರಣೆ ನಡೆದರೂ ಶಿಕ್ಷೆಯಾಗದ, ಶಿಕ್ಷೆಯನ್ನು ತಗ್ಗಿಸಿಕೊಂಡ, ತಪ್ಪು ಮಾಡಿಯೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡಿದ್ದಾರೆ. ನ್ಯಾಯಾಂಗದ ಕುರಿತಾಗಿರುವ ಜನರಲ್ಲಿನ ಅಪನಂಬಿಕೆಯನ್ನು ಹೋಗಲಾಡಿಸಲು ಈ ತುರ್ತು ಕ್ರಮಗಳು ಅನಿವಾರ್ಯವಾಗಿದೆ. ಪ್ರತಿ ರಾಜಕೀಯ ಪಕ್ಷಕ್ಕೂ ಅನ್ವಯವಾಗುವಂತೆ ಅವುಗಳ ನಡವಳಿಕೆಗಳ ಮೇಲೆ ಕಾವಲು ನಾಯಿಯಂತೆ ನಿಗಾ ಇರಿಸುವ ಶಾಶ್ವತ ಸಮಿತಿಯ ಅಗತ್ಯವಿದೆ. ಅಣ್ಣಾ ಟೀಂನ ಪ್ರಾಥಮಿಕ ಆಶಯವೂ ಇದೇ ಆಗಿತ್ತು. ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಲು ಪ್ರಬಲ ಲೋಕಪಾಲ್ ಮಸೂದೆ ಜಾರಿಗೊಳಿಸುವ ಉದ್ದೇಶದಿಂದ ಕಾರ್ಯಾರಂಭಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ಮಸೂದೆ ಅನುಷ್ಠಾನದಲ್ಲಿ ತಳೆದ ಅಸಡ್ಡೆ ಕ್ರಮೇಣ ಅರವಿಂದ ಕೇಜ್ರಿವಾಲ್ ಅವರು ಸಂಸತ್ತಿನಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸದೆ ಈ ಕಾರ್ಯ ಅಸಾಧ್ಯವೆಂದು ಪಕ್ಷ ಕಟ್ಟುವ ನಿರ್ಧಾರ ಕೈಗೊಳ್ಳುವಂತಾಯಿತು. ಆದರೆ ಪಕ್ಷ ಸ್ಥಾಪನೆಯ ಮೂಲಕ ಹೋರಾಟದಲ್ಲಿ ತನಗೆ ನಂಬಿಕೆ ಇಲ್ಲ. ಚುನಾವಣಾ ವೆಚ್ಚ ತಗ್ಗಿಸುವ, ಪೊಲೀಸ್ ವ್ಯವಸ್ಥೆ ಸುಧಾರಿಸುವ, ಪ್ರತಿ ಕ್ಷೇತ್ರದ ಸುಧಾರಣೆಯ ಅಗತ್ಯವಿದೆ. ಆದರೆ ಇದು ರಾಜಕೀಯೇತರ ಸಮಿತಿಯಿಂದ ಮಾತ್ರ ಸಾಧ್ಯ.
ಭ್ರಷ್ಟಾಚಾರ ನಿಯಂತ್ರಣ ಹೇಗೆ?
ದೇಶದಲ್ಲೆಡೆ ಭ್ರಷ್ಟಾಚಾರವೇ ತುಂಬಿ ತುಳುಕುತ್ತಿದೆ. ನಾವು ಹೇಗೆ ಅದನ್ನು ನಿಯಂತ್ರಿಸಬಹುದು ಎಂದಾಗ ಹೆಗ್ಡೆ, ೧೦೦೦ಮೈಲುಗಳ ಪಯಣವೂ ಕೂಡ ಮೊದಲ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಅದೇ ರೀತಿ ಯುವಜನತೆ ನಾನೆಂದೂ ಲಂಚ ಸ್ವೀಕರಿಸಲ್ಲ, ಯಾರಿಗೂ ಲಂಚ ಕೊಡುವುದಿಲ್ಲ ಎಂದು ಪ್ರತಿe ಮಾಡಿ, ಅದರಂತೆ ನಡೆದಾಗ ಭ್ರಷ್ಟಾಚಾರ ಹತೋಟಿಗೆ ತರಬಹುದು. ಪೂರ್ಣ ನಿರ್ಮೂಲನೆ ಅಸಾಧ್ಯ. ಇದು ನಾಗರಿಕತೆಯ ಉಗಮದಿಂದಲೇ ಪ್ರಾರಂಭಗೊಂಡಿದೆ. ದೇಶದಲ್ಲಿ ಈವರೆಗೆ ನಡೆದ ಸಾಲು ಸಾಲು ಲಕ್ಷ, ಕೋಟಿಗಳ ಹಗರಣಗಳೆಲ್ಲ ಯುವಜನತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸ್ವಾಮಿ ವಿವೇಕಾನಂದರು ಯುವಕರು ಏಳಿ ಎದ್ದೇಳಿ ಎಂದ ಮಾತಿನಂತೆ ಎಚ್ಚೆತ್ತುಕೊಳ್ಳಬೇಕು. ಬದ್ಧತೆ, ತ್ಯಾಗ, ಮಾನವೀಯತೆ ನಮ್ಮ ಗುಣಗಳಾಗಬೇಕು.
ಜ್ವಲಂತ ಆದರ್ಶಮಯ  ಜೀವನ- ಇಂದಿನ ಅವಶ್ಯಕತೆ: ಮಾತಾಜಿ ವಿವೇಕಮಯಿ
ಸ್ವಾಮಿ ವಿವೇಕಾನಂದರು ಬಹುಮುಖ ವ್ಯಕ್ತಿಯಾದರೂ ಪರಿಪೂರ್ಣರು. ಮಹಿಮಾನ್ವಿತ ವ್ಯಕ್ತಿಯಾಗಿದ್ದರೂ ಸರಳತೆ ಪ್ರತಿಪಾದಿಸಿದವರು. ಭವ್ಯ ಜೀವನವೆಂದರೆ ಗಗನಚುಂಬಿ ಕಟ್ಟಡಗಳು, ರಸ್ತೆ, ಐಶಾರಾಮಿ ವಸ್ತುಗಳಲ್ಲ. eನಪೂರ್ಣ, ಅಂತರಂಗದ ಸೌಂದರ್ಯ ಜೀವನದ ಭವ್ಯತೆ ಎಂದು ಭಾರತೀಯರು ಸಾರಿದ್ದಾರೆ. ಭಾರತದಲ್ಲಿ ಆದರ್ಶಗಳಿಗೆ ಕೊರತೆಯಿಲ್ಲ. ಆದರ್ಶಗಳು ಬದುಕನ್ನು ಔನ್ನತ್ಯಕ್ಕೆ ಕೊಂಡೊಯ್ಯುತ್ತವೆ. ದೌರ್ಬಲ್ಯಗಳನ್ನು ಬದಿಗೊತ್ತಿ ಧೀರರಾಗಬೇಕೆಂದರು. ವಿವೇಕರದು ತ್ರಿಕರಣ ವ್ಯಕ್ತಿತ್ವ. ಮಾತು, ಕೃತಿ, ಪಾಂಡಿತ್ಯ , ವೈಚಾರಿಕ ಪ್ರಬುದ್ಧತೆ ಅಪಾರ. ಗುರು ರಾಮಕೃಷ್ಣರೇ ಅವರಿಗೆ ಮನಸೋತಿದ್ದರು. ಯಾವುದೇ ದೃಷ್ಟಿಕೋನದಿಂದ ಅಳೆದರೂ ಅವರು ಪರಿಪೂರ್ಣರು. ಇಂತಹ ಜ್ವಲಂತ ಆದರ್ಶ ವ್ಯಕ್ತಿ. ಅವರ ಆದರ್ಶ ಪಾಲನೆಯಿಂದ ನಮ್ಮ ಜೀವನ ಔನ್ನತ್ಯಕ್ಕೇರಲು ಸಹಕಾರಿ. ಆ ಮೂಲಕ ನಮ್ಮಲ್ಲಡಗಿರುವ ಪರಿಪೂರ್ಣ ವ್ಯಕ್ತಿತ್ವ ಅಭಿವ್ಯಕ್ತಿಗೊಳ್ಳುತ್ತದೆ. ಜಗತ್ತು ಭಾರತಡೆಗೆ ನೋಡುವಾಗ ಪ್ರಸ್ತುತ ವಿವೇಕಾನಂದರ ಆದರ್ಶ ಜೀವನ ಬೇಕಾಗಿದೆ. ಭಾರತದಲ್ಲಿ ಆದರ್ಶಗಳಿಗೆ ಕೊರತೆ ಇಲ್ಲದಿದ್ದರೂ ಪಾಲಿಸುವವರು ವಿರಳವಾಗಿದ್ದಾರೆ. ವಿವೇಕಾನಂದರ ಋಷಿಪರಂಪರೆಯ ಜೀವನ ಜಾಗೃತಗೊಳ್ಳಬೇಕು. ಆಗ ಮಾತ್ರ ಭಾರತೀಯರ ಆದರ್ಶ ಜೀವನ ಸಾಕಾರಗೊಳ್ಳುವುದು.
ದೇಹಪ್ರೇಮ ಬೇಡ; ದೇಶಪ್ರೇಮವಿರಲಿ: ಸೂಲಿಬೆಲೆ
ವೈಯುಕ್ತಿಕ ಜೀವನ, ಕುಟುಂಬ ಮತ್ತು ಸಮಾಜ ಹಾಗೂ ರಾಷ್ಟ್ರದ ಸಮಸ್ಯೆಗಳಿಂದ ನಾವಿಂದು ಬಲಳುತ್ತಿದ್ದೇವೆ. ನೈತಿಕ ಅಧಃಪತನದತ್ತ ಭಾರತ ಸಾಗುತ್ತಿದೆ. ಈ ಎಲ್ಲಾ ಸಮಸ್ಯೆಗೆ ನಾವೇ ಕಾರಣರಾಗಿದ್ದೇವೆ. ಪರಿಹಾರವು ನಮ್ಮಿಂದಲೇ ಆಗಬೇಕಿದೆ. ಪರಿವರ್ತನಶೀಲ ಸಮಾಜದಲ್ಲಿ ಯುವಜನರ ಜವಾಬ್ದಾರಿ' ಮುಖ್ಯವಾಗಿದೆ. ಯೌವನದಲ್ಲಿ ಬೇಕಾಗಿರುವುದು ದೇಹಪ್ರೇಮವಲ್ಲ ,ದೇಶಪ್ರೇಮ. ಆಕರ್ಷಣೆ ದೇಹ ಸೌಂದರ್ಯಕ್ಕಲ್ಲ , ಆಂತರಿಕ ಸೌಂದರ್ಯದಲ್ಲಿದೆ. ಜ್ಞಾನಾರ್ಜನೆಯ ಹಂತದಲ್ಲಿ  ಖರ್ಚು, ಮೋಜು ಸಲ್ಲದು. ಅದು ಜ್ಞಾನಾರ್ಜನೆಯ ಬಳಿಕವೇ. ಯುವಜನತೆ ದೇಶದ ಬಹುದೊಡ್ಡ ಆಸ್ತಿ. ಅವರೇ ಭವಿಷ್ಯದ ನಿರ್ಣಾಯಕರಾಗಿದ್ದಾರೆ. ಆದರೆ ದೇಶದಲ್ಲಿ ಜಾತೀಯತೆ ಬಹುದೊಡ್ಡ ಸಮಸ್ಯೆಯಾಗಿದೆ. ವಿದೇಶಿಗರು ಕೂಡಾ ಜಾತೀಯತೆಯಲ್ಲಿ ನರಳಾಡುವ ಭಾರತವನ್ನು ಬೊಟ್ಟು ಮಾಡುತ್ತಿದ್ದಾರೆ. ಇದರಿಂದ ಸಮಾಜ ಹಾಗೂ ರಾಷ್ಟ್ರದ ಭದ್ರತೆಗೆ ಭಾರೀ ಅಪಾಯವಿದೆ ಎನ್ನುವುದನ್ನು ಮನಗಾಣಬೇಕಿದೆ. ವಿವೇಕಾನಂದರು ಭಾರತದ ಬಡಜನರ ಪ್ರತಿನಿಧಿಯಾಗಿ ವಿದೇಶದಲ್ಲಿ ಸಂಚರಿಸಿದರು. ಪಶ್ಚಿಮದ ಸುಖದ ಸುಪ್ಪತ್ತಿಗೆಗೆ, ಭೋಗದ ಜೀವನಕ್ಕೆ ಒಂದಿಷ್ಟು ಮೈಯೊಡ್ಡಲಿಲ್ಲ.
ಜಗತ್ತು ಸಂಕಟದಲ್ಲಿ ತೊಳಲಾಡುತ್ತಿದೆ. ಭಾರತ ಅದಕ್ಕೆ ಮಾರ್ಗದರ್ಶಿಯಾಗಬೇಕಿದೆ. ಅದಕ್ಕಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕು. ಭಾರತಕ್ಕೀಗ ಪರ್ವಕಾಲ, ಈಗಲೇ ಜಾಗೃತಿಯ ಕಹಳೆ ಊದಬೇಕು. ತಮ್ಮೆಲ್ಲಾ ಶಕ್ತಿಗಳನ್ನು ಏಕಮುಖವಾಗಿ ಪ್ರವಹಿಸಿ ಸಮಾಜ, ರಾಷ್ಟ್ರಜೀವನದಲ್ಲಿ ಮುನ್ನಡೆದಾಗ ಪರಿವರ್ತನೆಯಾಗುತ್ತದೆ. ಸಮಾಜದ ಕೆಲಸದಲ್ಲಿ ಅಡೆತಡೆಯುಂಟಾಗುವ ದುಃಖವನ್ನು ಮರೆತುಬಿಡಬೇಕು. ಅದಕ್ಕೆ ಸ್ವಾಮಿ ವಿವೇಕಾನಂದರು ಸ್ಪೂರ್ತಿ.
ಮಾತೃಭಾವದ ಜಾಗೃತಿ ಮೂಡಬೇಕು: ಪ್ರಕಾಶ್ ಮಲ್ಪೆ
ಜಗತ್ತಿನಲ್ಲಿ ಎಲ್ಲಾ ಮತ ಧರ್ಮದವರಿಗೂ ಶಾಂತಿ ದೊರೆಯುವ ಏಕೈಕ ರಾಷ್ಟ್ರ ಭಾರತ. ಭಾರತ ನೆಲದ ಪಾವಿತ್ರ್ಯತೆಗೂ ವಿದೇಶದಲ್ಲಿನ ಪಾವಿತ್ರ್ಯತೆಗೂ ವ್ಯತ್ಯಾಸವಿದೆ. ಆದ್ದರಿಂದಲೇ ಇಲ್ಲಿ ಎಲ್ಲಾ ಸುಖಶಾಂತಿ ಸಮೃದ್ಧಿಗಳೆಲ್ಲವೂ ಸಾಧ್ಯ. ಪ್ರತಿಯೊರ್ವರ ಹೃದಯದಲ್ಲೂ ಮಾತೃಭಾವದ ಜಾಗೃತಿಯಿದೆ. ಭಾರತ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳಿಗೆ ಭೂಮಿ ಜಡವಸ್ತು ಮಾತ್ರ, ಆದರೆ ಭಾರತದಲ್ಲಿ ಪವಿತ್ರಭೂಮಿ, ಪುಣ್ಯಭೂಮಿ. ಉಳಿದ ರಾಷ್ಟ್ರಗಳಲ್ಲಿ ದೇವದೂತರ ಆಗಮನವಾದರೆ ಭಾರತ ಮಾತ್ರ ಸಾಕ್ಷಾತ್ ಭಗವಂತನ ಲೀಲೆಯಿಂದಲೇ ಪುಣ್ಯಪ್ರದವಾಗಿದೆ. ಆದ್ದರಿಂದ ಇಲ್ಲಿನ ಪ್ರತಿಯೊಂದು ವಸ್ತುಗಳಲ್ಲಿ ಜೀವ ಚೈತನ್ಯವಿದೆ. ಭಾರತದಲ್ಲಿ ಹೆತ್ತ ತಾಯಿ, ಹೊತ್ತ ನೆಲ, ನದಿ, ವೃಕ್ಷ, ಗೋವು ಎಲ್ಲವೂ  ಪೂಜ್ಯನೀಯ. ಇದುವೇ ಸ್ವಾಮಿ ವಿವೇಕಾನಂದರು ಕಂಡ ಭಾರತ. ಜಗತ್ತಿನೆದುರು ಇದೇ ಭಾರತವನ್ನು ಅವರು ಪ್ರತಿಪಾದಿಸಿದರು. ಅಮೇರಿಕಾದವರಿಗೆ ನೀರು ಕೇವಲ ವೈಜ್ಞಾನಿಕ ಪರಿಭಾಷೆಗಷ್ಟೆ ಸೀಮಿತವಾಗಿದೆ. ಆದರೆ ಇಲ್ಲಿನ ಪ್ರತಿಯೊಬ್ಬರಲ್ಲೂ ಸಂಸ್ಕಾರ ಪವಿತ್ರತೆ ಇದೆ. ಆದುದರಿಂದಲೇ ಅದು ಪೂಜ್ಯನೀಯ, ಜೀವಜಲ. ಉಳಿದೆಲ್ಲಾ ನಾಗರಿಕತೆಗಳಲ್ಲಿ ಒಂದೋ ಎರಡು ನದಿಗಳಿಗೆ ಸೀಮಿತವಾದರೆ ಹಿಂದೂ ನಾಗರೀಕತೆ ಒಡಲಲ್ಲಿ ನೂರಾರು ನದಿಗಳಿವೆ. ಗಂಗಾ, ಸಿಂಧು, ಯುಮುನಾ, ಸರಸ್ವತಿ, ಗಂಡಕೀ, ಬೇಡ್ತಿ,ಕಾಳಿ, ಶರಾವತಿ, ತಪತಿ .... ಹೀಗೆ ನೂರಾರು ಹೆಸರನ್ನು ಪಟಪಟನೇ ಉದಾಹರಿಸುತ್ತಾ ಕೊನೆಗೆ ಕಾವೇರಿ ಎಂದಾಗ ನಿಶ್ಯಬ್ಧವಾಗಿ ಆಲಿಸುತ್ತಿದ್ದ ಸಾವಿರಾರು ಯುವಸಮೂಹ ಕೇಳುವಿಕೆಯ ಎಚ್ಚರದೊಂದಿಗೆ ಚಪ್ಪಾಳೆಯ ಧ್ವನಿಗೂಡಿಸಿದರು. ಇಲ್ಲಿನ ಮಾತೃಸಂಸ್ಕೃತಿಯ ಜೀವನ ಎಳೆಯ ಮಗುವಿನಿಂದಲೇ ಸಂಸ್ಕಾರ ತುಂಬಿಕೊಟ್ಟಿದೆ. ಸಾಮಾನ್ಯ ವ್ಯಕ್ತಿಯೋರ್ವನಿಂದ ಹಿಡಿದು ಹುತಾತ್ಮ ಆದರ್ಶ ಪುರುಷಗಳೆಲ್ಲರಲ್ಲೂ ರಾಷ್ಟ್ರಭಾವದ ಜಾಗೃತಿಯಿದೆ. ಸ್ವಾತಂತ್ರ್ಯಹೋರಾಟಕ್ಕೆ ಹುತಾತ್ಮದ ಕಿಚ್ಚನ್ನು ಹಚ್ಚಿದ  ಮದನಲಾಲ್ ದೀಂಗ್ರ, ಭಗತ್‌ಸಿಂಗ್, ಬಿಸ್ಮಿಲ್‌ಖಾನ್‌ನಿಂದ ಹಿಡಿದು ಕಾರ್ಗಿಲ್ ಕದನದ ಕಲಿಗಳಾದ ಹುತಾತ್ಮ ಪದ್ಮಾಪಾಣಿ ಆಚಾರ್ಯ, ರಾಜೇಶ್ ಅಧಿಕಾರಿ ಮೊದಲಾದವರು ಮಾತೃಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಇಂತಹ ಆದರ್ಶಗಳ ನಡುವೆಯೇ ರಾಷ್ಟ್ರಜೀವನದ ದುರಂತ, ವಿಭಜನೆಯ ದುರಂತಗಳನ್ನು ಮೆಲುಕು ಹಾಕಿದರು. ಮತೀಯ ವಿಷಭೀಜದೊಂದಿಗೆ ರಾಷ್ಟ್ರಗೀತೆ ವಂದೇಮಾತರಂನ ಕನಸಿಗೆ ವಿರೋಧ -ವಿಭಜನೆ, ರಾಷ್ಟ್ರ-ರಾಷ್ಟ್ರಧ್ವಜದ ವಿಭಜನೆಗಳು ಮಹಾನ್ ನಾಯಕರ ಕಣ್ಮುಂದೆಯೇ ಘಟಿಸಿ ಹೋಯಿತು. ಸಮಾಜದಲ್ಲಿಂದು ಆದರ್ಶಗಳು ಮರೆಯಾಗುತ್ತಿವೆ.  ಭಾರತಮಾತೆ ದುರ್ಗೆಯಾಗಿ ಅವತರಿಸುವ ಮೂಲಕ ಇವೆಲ್ಲಾ ಅಪಸವ್ಯ,ಅಪಶುತಿಗಳು  ನಾಶವಾಗಬೇಕಿದೆ. ಸರಸ್ವತಿಯಾಗುವ ಮೂಲಕ ಅಜ್ಞಾನದ ಅಂದಕಾರ ತೊಲಗಿಸಬೇಕು.
ಸ್ವಶಿಸ್ತು ಅಳವಡಿಸಿಕೊಳ್ಳಬೇಕು: ರಘೋತ್ತಮರಾವ್
ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದೆಡೆಗೆ ಮುಖ ಮಾಡುತ್ತಿರುವಾಗ ಭಾರತ ಮಾತ್ರ ಪಾಶ್ಚಿಮಾತ್ಯಕರಣದೆಡೆಗೆ ಜಾರುತ್ತಿದೆ. ಭಾರತದ ಮಹಿಳೆಯೋರ್ವಳಿಗೆ ಅಮೇರಿಕಾ ಶ್ರೀಮಂತನೋರ್ವನ ಮದುವೆಯಾಗಿ ಬದುಕು ಕಟ್ಟಿಕೊಳ್ಳುವ ಆಸೆ. ಕೊನೆಗೂ ಧನಿಕನೋರ್ವನೊಂದಿಗೆ ಮದುವೆ. ದಂಪತಿಗಳಿಗೆ ಭಾರತವನ್ನೊಮ್ಮೆ ಸುತ್ತಾಡುವ ಆಸೆ. ಆದರೆ ಪತ್ನಿಗೆ ಭಾರತದ ಬಗ್ಗೆ ಕೀಳರಿಮೆ, ಮಾತು ಮಾತಿಗೂ ಪತಿಯೊಂದಿಗೆ `ಡರ್ಟಿ ಇಂಡಿಯಾ'ಎಂದೇ ಮೂದಲಿಕೆ. ಒಮ್ಮೆ ಸುತ್ತಾಡುವಾಗ ಅದೇನೋ ವೃದ್ಧನೋರ್ವ ಈತನಿಗೆ ಸಹಾಯ ಮಾಡಿದಾಗ ಪ್ರತಿಯಾಗಿ ನೋಟಿನ ಕಂತೆಗಳನ್ನು ಕೈಗಿತ್ತಾಗ ಭಾರತದಲ್ಲಿ ಪರೋಪಕಾರ, ನೆರವಿನ ಬಗ್ಗೆ ತಿಳಿಸಿ ನಯವಾಗಿ ತಿರಸ್ಕರಿಸಿದ ಹಿರಿಜೀವದ  ಕುರಿತು ಅಮೇರಿಕಾದ ಪತಿ ಆಕೆಗೆ ಭಾರತದ ಕುರಿತಂತೆ ನನಗೆ ಗೌರವ ಹೆಚ್ಚುತ್ತಿದೆ ಎಂದಾಗ ಮಹಿಳೆ ಪೆಚ್ಚುಮೋರೆ ಹಾಕಿದ್ದಳು. ಭಾರತದಲ್ಲಿ ಶ್ರೀಮಂತಿಕೆ, ಬುದ್ಧಿವಂತಿಕೆ, ಸಂಸ್ಕಾರಗಳಿಗೇನೂ ಕೊರತೆ ಇಲ್ಲ. ವಿದೇಶಿಯರಿಗೂ ಕೂಡಾ ಭಾರತೀಯರ ಬಗ್ಗೆ ಗೌರವವಿದೆ. ಆದರೆ ಭಾರತೀಯರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುವ ಬದಲು ನಿರ್ಲಕ್ಷ್ಯ, ಸೋಮಾರಿತನದಿಂದ ಹಾದಿ ತಪ್ಪುತಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳು ಅಭಿವೃದ್ಧಿಯೆಡೆಗೆ ಸಾಗುತ್ತಿರುವಾಗ ನಾವು ಯೋಗ್ಯಮಾರ್ಗದಲ್ಲಿ ಅವರೊಂದಿಗೆ ಹೆಜ್ಜೆಯಿಡಬೇಕು. ಜೊತೆಗೆ ಮುನ್ನಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬುದ್ಧಿವಂತಿಕೆಯ ಸದುಪಯೋಗವಾಗಬೇಕು. ಆಗಲೇ ಭಾರತದ ಪುನರುತ್ಥಾನ ಸಾಧ್ಯ. ಜೀವನದಲ್ಲಿ ಸ್ವಯಂಶಿಸ್ತು, ಹಿರಿಯರ ಬಗ್ಗೆ ಗೌರವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪಾಶ್ಚಿಮಾತ್ಯ ಜೀವನಶೈಲಿಯ ಅನುಕರಣೆ ದೂರಮಾಡಿ ನಮ್ಮ ಜೀವನ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳಬೇಕು.
ಬಾಕ್ಸ್:
 ದೇಶದ ನುಂಗಣ್ಣರು...ಅಧೋಗತಿಯೂ...
*೬೦ ವರ್ಷಗಳಿಂದ ದೇಶದಲ್ಲಿ ೯ ಸಾವಿರ ಕೋ, ಕೋಟಿ ರೂ. ಖರ್ಚಾಗಿದೆ. ಆದರೆ ಇದು ಎಲ್ಲಿ ಖರ್ಚಾಗಿದೆ ಎಂಬುದನ್ನು ಹುಡುಕಬೇಕಷ್ಟೆ. ಅಧಿಕಾರದಲ್ಲಿರುವವರು, ಅವರನ್ನು ಅಧಿಕಾರಕ್ಕೆ ತಂದವರು ಹಣ ನುಂಗುತ್ತಿದ್ದಾರೆ.
*ನಮ್ಮ ಜನಪ್ರತಿನಿಧಿಗಳು ನಮ್ಮ ಸೇವಕರು, ಸವಾರಿ ಮಾಡುವವರಲ್ಲ. ಗೆದ್ದ ನಂತರ ಅವರೇನು ಮಾಡುತ್ತಾರೆಂಬ ಮಾಹಿತಿ ಇಲ್ಲ
* ಸಂಸತ್ತಿನಲ್ಲಿ ೫೪೬ ಸದಸ್ಯರ ಪೈಕಿ ೧೭೦ ಮಂದಿ ೫ ವರ್ಷದಲ್ಲಿ ಚರ್ಚೆಯಲ್ಲಿ ಭಾಗವಹಿಸಿದರು. ಉಳಿದವರೇನು ಮಾಡ್ತಿದಾರೆ ಎಂಬ ಮಾಹಿತಿ ಬೇಕು.
*೫ ಕೋ.ರೂ.ಗಿಂತಲೂ ಹೆಚ್ಚು ಹಣ ದಿನದ ಅಧಿವೇಶನಕ್ಕೆ ಖರ್ಚಾಗುತ್ತಿದೆ. ಆದರೆ  ಮಸೂದೆಗಳು ಅಂಗೀಕಾರಗೊಳ್ಳುತ್ತಿಲ್ಲ. ಬಹಿಷ್ಕಾರ ಮಾತ್ರ ನಡೆಯುತ್ತಿದೆ. ಪ್ರತಿನಿಧಿಗಳ ಸಂಭಾವನೆ ಸಿಕ್ಕೇ ಸಿಗುತ್ತದೆ.

ಬಾಕ್ಸ್:
೨೩ ಜಿಲ್ಲೆಗಳಿಂದ ೧,೮೦೦ ವಿದ್ಯಾರ್ಥಿಗಳು



Saturday 1 December 2012

ಪುರಾಣದ ಸತ್ವ ಸಾರುತ್ತಾ ಯಕ್ಷರಸಿಕರ ಮನಸ್ಸು ಸೂರೆಗೊಳ್ಳಲು ತಿರುಗಾಟಕ್ಕೆ ಸಿದ್ದಗೊಂಡಿವೆ-ಯಕ್ಷಗಾನ ಮೇಳಗಳು.
ಪತ್ತನಾಜೆ ಸಂದರ್ಭ ತಮ್ಮ ಬೆಚ್ಚನೆಯ ಗೂಡಿನೊಳಗೆ ಸೇರಿದ ಸಾಗರ ತೀರದ ಸಮೃದ್ದ ಕಲೆಯಾದ ಯಕ್ಷಗಾನ ಮೇಳಗಳಿಂದು ಗೂಡುಬಿಟ್ಟು ಹೊರಡುವ ಹಕ್ಕಿಯಂತೆ ನವೆಂಬರ್ ತಿಂಗಳಿಂದ ಮೊದಲ್ಗೊಂಡು ಕರಾವಳಿ, ಮಲೆನಾಡಿನಾದ್ಯಂತ ಸಂಚರಿಸಿ ಕಲಾರಸಿಕರ ಮನ ತಣಿಸಲು ಸಿದ್ದಗೊಂಡಿವೆ. ಕನ್ನಡದ ಕಂಪು, ಸಂಸ್ಕೃತದ ಇಂಪು, ಹಳೆಗನ್ನಡದ ಮಹಿಮೆಯನ್ನು ಬಿತ್ತರಿಸುವ ಯಕ್ಷಗಾನ ಡೇರೆ ಮತ್ತು ಹರಕೆ ಮೇಳಗಳು ಹೊಸ ಕಲಾವಿದರೊಂದಿಗೆ, ವಿವಿದ ರಂಗಸಜ್ಜಿಕೆಯೊಂದಿಗೆ ನಮ್ಮನ್ನು ಇದಿರುಗೊಳ್ಳುಲು ಕ್ಷಣಗಣನೆಯಲ್ಲಿವೆ.
ಯಕ್ಷಗಾನದ ಸೊಬಗೆ ಅಂಥದ್ದು..ನಿರರ್ಗಳ ಭಾಷೆಯಿಂದ ಪುರಾಣದ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳ ಅವಿರತ ಸಾಧನೆ ರಂಗದಲ್ಲಿ ಮೇಳೈಸುತ್ತದೆ. ಹಿಂದೆ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಸಾಗರ ತೀರದ ಗಂಡುಕಲೆಯನ್ನು ಮಕ್ಕಳು, ಹೆಂಗಸರು ನಮ್ಮಲ್ಲಿಯೂ ಕೂಡ ಸಾಮರ್ಥ್ಯವಿದೆ ಎಂದು ಸಾಧಿಸಿ ತೋರಿಸಿದ್ದಾರೆ. ಯಕ್ಷಗಾನವೆನ್ನುವುದು ಹಿಂದೂ ಸಂಸ್ಕೃತಿಯ ಸಂಜೀವಿನಿ. ಇದು ಕರಾವಳಿಗೆ ಮಾತ್ರ ಸೀಮಿತವಾಗಿರದೆ, ಕನ್ನಡ ಸಂಸ್ಕೃತಿಯನ್ನು ದೇಶದ ಮೂಲೆಗಳಿಗೂ ಪಸರಿಸಿದ್ದು ಮಾತ್ರವಲ್ಲದೆ, ಅಮೇರಿಕಾದಲ್ಲಿ ೨೦೧೨ರಲ್ಲಿ ನಡೆದ ಅಕ್ಕಾ ಕನ್ನಡ ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ. ಆದರೆ ಹವ್ಯಾಸಿಗಳಾಗಿ ಮಹಿಳೆಯರು ಯಕ್ಷಗಾನ ಕಲಿಯಬಹುದಾದರೂ ವೃತ್ತಿ ಯಕ್ಷಗಾನ ಮೇಳಗಳು ಮಾತ್ರ ಪುರುಷರಿಗೆ ಸೀಮಿತವಾಗಿದೆ.
ಯಕ್ಷಗಾನ ಮೇಳಕ್ಕೊಂದು ಹೆಸರು:
ತೆಂಕುತಿಟ್ಟು ಅಥವಾ ಬಡಗುತಿಟ್ಟು ಯಾವುದೆ ಮೇಳವಾದರೂ, ತಿರುಗಾಟ ಹೊರಡುವುದು ಮಾತ್ರ ದೇವರ ಹೆಸರಿನಲ್ಲಿಯೇ? ಕಲೆ ಕಾಸಿಗಾಗಿ, ಕಾಲಯಾಪನೆಗಾಗಿ ಎನ್ನುವ ಜನರಿಗೆ ಮುದ ನೀಡುವುದಕ್ಕಾಗಿ ಮುಂದಾದ ಡೇರೆ ಹಾಗೂ ಕಾಲಮಿತಿ ಮೇಳಗಳು ತಿರುಗಾಟ ನಡೆಸುವುದು ದೇವರ ಹೆಸರಿನಿಂದ ಮತ್ತು ದೇವಸ್ಥಾನದ ನಾಮಮುದ್ರೆಯಿಂದ. ಪ್ರತಿ ಮೇಳಗಳು ದೇವರ ಗುಡಿಯಿಂದಲೇ ಹೊರಟು, ಕೊನೆಗೆ ಬಂದು ಸೇರುವುದು ಅದೇ ಸುಂದರ ಭೂರಮೆಯ ಮಡಿಲಿಗೆ ಅಂದರೆ ಶ್ರೀ ಕ್ಷೇತ್ರಗಳಿಗೆ.
ಯಕ್ಷಗಾನದ ಮಹಿಮೆ:
ಎಷ್ಟೇ ಹಠಮಾರಿ ಗಂಡನಾದರೂ, ಹೆಂಡತಿಯ ಮಮತೆಯ ಮುಂದೆ ಮುಗುಳುನಗುವಿನ ಮುಗ್ದ  ಮಗುವಿನಂತಾಗುತ್ತಾನೆ. ಯಕ್ಷಗಾನದ ಅಭಿರುಚಿಯೇ ಅಂತದ್ದು, ಮನಸ್ಸಿನಲ್ಲಿ ಎಂತಹ ದುಗುಡ, ದುಮ್ಮಾನಗಳಿದ್ದರೂ ಕ್ಷಣಮಾತ್ರದಲ್ಲಿ ಪರಿಹರಿಸುವ ಸಾಧನ. ಯಕ್ಷಗಾನದ ಯಾವುದೇ ಮೇಳವಿದ್ದರೂ ಅವುಗಳು ಪ್ರಪಂಚದ ಅನುಭವದೊಂದಿಗೆ ಹಿಂದು ಸಂಸ್ಕೃತಿಯ ಸಾರವನ್ನು ಲೋಕಮುಖಕ್ಕೆ ಬಿತ್ತರಿಸುತ್ತಾ ಚಲಿಸುವ ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತದೆ. ಈಗಿನ ಯಾವುದೇ ಮಾದ್ಯಮಗಳಿಗಿಂತ ಮಿಗಿಲಾದ ಸಾಧನವೇ ಯಕ್ಷಗಾನ.
ಕಲಾವಿದರ ಬದುಕು:
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯನ್ನು ನಿರರ್ಗಳವಾದ ಮಾತುಗಳಿಂದ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳು ತಮ್ಮ ತಿರುಗಾಟ ಮಾಡಿ, ಜಗತ್ತು ಮಲಗಿರುವಾಗ ಇವರ ಕಾಯಕ ಪ್ರಾರಂಭವಾಗುತ್ತದೆ. ಜನರೊಂದಿಗೆ ಬೆರೆಯುವ ಹಗಲಿನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಪವಡಿಸುತ್ತಾರೆ. ಕಲಾಮಾತೆಯ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು, ಅದರಲ್ಲೇ ತಮ್ಮ ಜೀವನದ ಗೋಪುರವನ್ನು ಕಟ್ಟುವಲ್ಲಿ ಯಶಸ್ಸು ಕಂಡ ಕಲಾವಿದರು ಅನೇಕ. ತಮ್ಮ ಜೀವನದಲ್ಲಿ ನೋವುಗಳನ್ನು ತುಂಬಿಕೊಂಡಿದ್ದರೂ ಅದನ್ನು ರಂಗದಲ್ಲಿ ತೋರಗೊಡದೆ, ಜೀವನಮೌಲ್ಯ, ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೆ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುತ್ತಾನೆ.
ತೆಂಕು ತಿಟ್ಟಿನಲ್ಲಿ ಮರೆಯಾದ ಡೇರೆ ಮೇಳಗಳು:
ಧರ್ಮಸ್ಥಳ ಡೇರೆ ಮೇಳ ಮರೆಯಾಗಿ ಹರಕೆ ಮೇಳವಾಗಿದ್ದು, ಕೂಡ್ಲು, ಮೂಲ್ಕಿ, ಬಪ್ಪನಾಡು, ಪುತ್ತೂರು,  ಕದ್ರಿ, ಕುಂಬಳೆ, ಬೆಳ್ಮಣ್ಣ, ಅರುವ, ಕರ್ನಾಟಕ, ಇರಾ, ಸುರತ್ಕಲ್, ಮಂಗಳಾದೇವಿ ತೆಂಕುತಿಟ್ಟಿನ ಡೇರೆ ಮೇಳಗಳು ಕಾಲನ ಮರೆಗೆ ಸಂದಿವೆ. ಬಡಗು ತಿಟ್ಟಿನಲ್ಲಿ ಸಾಲಿಗ್ರಾಮ, ಪೆರ್ಡೂರು ಮೇಳವನ್ನು ಹೊರತು ಪಡಿಸಿ ಉಳಿದ ಮೇಳಗಳು ಹರಕೆ ಮೇಳವಾಗಿ ತಿರುಗಾಟಕ್ಕೆ ಸಜ್ಜಾಗಿವೆ. ಎಡನೀರು, ಹೊಸನಗರ ಕಾಲಮಿತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಬಡಗು ತಿಟ್ಟಿನಲ್ಲಿ ಉಮೇಶ ಸುವರ್ಣ ನೇತೃತ್ವದ ಅತಿಥಿ ಕಲಾವಿದರನ್ನೊಳಗೊಂಡ ಯಕ್ಷಶ್ರೀ ಪ್ರವಾಸಿ ಮೇಳ ಹಂಗ್ಲೂರು ಎನ್ನುವ ನಾಮಾಂಕಿತದೊಂದಿಗೆ ೩ ಗಂಟೆಗಳ ಪ್ರದರ್ಶನ ನೀಡಲು ತಂಡವೊಂದು ಸಿದ್ದಗೊಂಡಿದೆ. ಪೆರ್ಡೂರು ಮೇಳದ ಪ್ರಖ್ಯಾತ ಭಾಗವತರಾದ ಸುಬ್ರಹ್ಮಣ್ಯ ದಾರೇಶ್ವರ ತಿರುಗಾಟಕ್ಕೆ ವಿದಾಯ ಹೇಳಿದ್ದು ಅತಿಥಿ ಭಾಗವತರಾಗಿ ಭಾಗವಹಿಸುವ ನಿರೀಕ್ಷೆಯಿದೆ. ತೆಂಕುತಿಟ್ಟಿನ ಪ್ರಖ್ಯಾತ ಪುಂಡುವೇಷಧಾರಿ ಪುತ್ತೂರು ಶ್ರೀಧರ ಭಂಡಾರಿ ಮಂಡಿನೋವಿನ ನಡುವೆಯು ತಿರುಗಾಟಕ್ಕೆ ಸಿದ್ದರಾಗಿದ್ದಾರೆ. ಬಡಗಿನ ಚೆಂಡೆವಾದಕ ರಾಮಭಂಡಾರಿ ಕರ್ಕಿ ಸೇರಿದಂತೆ ಅನೇಕ ಸಣ್ಣ ಕಲಾವಿದರು ಯಕ್ಷಗಾನ ತಿರುಗಾಟಕ್ಕೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಬೇರೆ-ಬೇರೆ ಮೇಳದಲ್ಲಿ ಸಂಚಾರ ಮಾಡಿದ್ದ ಕಲಾವಿದರುಗಳು ನೂತನ ಮೇಳದಲ್ಲಿ ತಮ್ಮ ವೃತ್ತಿಜೀವನಕ್ಕೆ ಅಣಿಯಾಗಿದ್ದಾರೆ.
ಯಕ್ಷಗಾನದ ಸಾರ ಉಳಿಸುವಲ್ಲಿ ಯಜಮಾನರು ಹಾಗೂ ಪ್ರಸಂಗಕರ್ತರ ಕರ್ತವ್ಯ:
ಯಾವುದೇ ಹರಕೆ ಮೇಳ ಅಥವಾ ಡೇರೆ ಮೇಳಗಳಾದರೂ, ತಾವು ಮಾಡುತ್ತಿರುವುದು ಕಲಾಮಾತೆಯ ಸೇವೆ ಎನ್ನುವುದನ್ನು ಮನಗಾಣಬೇಕು. ಕಾಲಕ್ಕೆ ತಕ್ಕ ಬದಲಾವಣೆ ಸಹಜವಾಗಿರಬೇಕು. ಬದಲಾವಣೆಯೊಂದಿಗೆ ಆಧುನಿಕ ಜೀವನ ಮೌಲ್ಯಗಳು ಪ್ರಸಂಗದಲ್ಲಿ ಬಂದಾಗ ಸಾರ್ಥಕತೆ ಪಡೆಯುತ್ತದೆ. ಅಲ್ಲಿಯೂ ಕೂಡ ಎಚ್ಚರಿಕೆಯ ಅಗತ್ಯತೆಯಿದೆ. ಯಕ್ಷಗಾನಕ್ಕೆ ಅದರದೇ ಆದ ವೇಷಭೂಷಣ, ಸಂಪ್ರದಾಯದ ಕಟ್ಟುಪಾಡುಗಳಿವೆ. ಅದನ್ನು ಬಿಟ್ಟು ಆಧುನಿಕತೆಯಂತೆ ವೇಷಭೂಷಣಗಳನ್ನು ತಂದರೆ ಅಪಹಾಸ್ಯವಾಗುವುದರೊಂದಿಗೆ ವಾತಾವರಣವನ್ನು ಕೆಡಿಸುವ ಮತ್ತು ಪ್ರೇಕ್ಷಕನನ್ನು ತಪ್ಪು ದಾರಿಗೆಳೆಯುವ ಸಾದ್ಯತೆಗಳೆ ಹೆಚ್ಚು. ಕಾಲಕ್ಕೆ ತಕ್ಕಂತೆ ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ. ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಬೇಕು ಎನ್ನುವ ಅಂಶವನ್ನು ಮನಗಾಣಬೇಕು. ಸಂಗತವಲ್ಲದ ಮೌಲ್ಯ ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವಂತಾಗಲಿ ಈ ತಿರುಗಾಟ.
ಯಕ್ಷಗಾನದತ್ತ ಮಕ್ಕಳ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವ ಚಿಂತೆ ಒಂದೆಡೆಯಾದರೆ ಯಕ್ಷಗಾನದ ಕುರಿತು ಆಸಕ್ತಿ ತಳೆದು ಹಲವಾರು ಮಕ್ಕಳು ಯಕ್ಷಗಾನದ  ಆಸಕ್ತಿ ತಳೆದು ಹೆಜ್ಜೆಯನ್ನು ಕಲಿಯುತ್ತಿದ್ದಾರೆ. ಅಲ್ಲದೇ ಯಕ್ಷಗಾನ ಅಕಾಡೆಮಿ ವತಿಯಿಂದ ಶಾಸ್ತ್ರೀಯ ಪಠ್ಯಕ್ರಮದ ಪುಸ್ತಕ ತಯಾರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಯಕ್ಷಗಾನಂ ಗೆಲ್ಗೆ
ಬಾಕ್ಸ್:
೨೦೧೨-೧೩ರಲ್ಲಿ ತಿರುಗಾಟಕ್ಕೆ ಸಿದ್ದಗೊಂಡ ವೃತ್ತಿ-ಮೇಳಗಳು:
ಬಡಗು ತಿಟ್ಟು:
ಮಂದಾರ್ತಿ ೫ಮೇಳ, ಮಾರಣಕಟ್ಟೆ (೨), ಮಡಾಮಕ್ಕಿ, ಹಾಲಾಡಿ, ಸೌಕೂರು, ಗೋಳಿಗರಡಿ, ಕಮಲಶಿಲೆ, ನೀಲಾವರ, ಆಜ್ರಿ ಚೋನಮನೆ, ಸಿಗಂದೂರು, ಅಮೃತೇಶ್ವರಿ, ಹಿರಿಯಡ್ಕ, ಗುತ್ಯಮ್ಮ ಬಯಲಾಟ ಮೇಳಗಳು. ಪೆರ್ಡೂರು, ಸಾಲಿಗ್ರಾಮ  (ಡೇರೆ ಮೇಳಗಳು).
ತೆಂಕುತಿಟ್ಟು:
ಧರ್ಮಸ್ಥಳ, ಕಟೀಲು (೫), ಹೊಸನಗರ, ಎಡನೀರು, ಬಪ್ಪನಾಡು, ಉಳ್ಳಾಲ, ತಳಕಲ, ಸುಂಕದಕಟ್ಟೆ, ಸಸಿಹಿತ್ಲು, ಕಾಸರಗೋಡಿನಲ್ಲಿರುವ ಮಲ್ಲ  ಮತ್ತು ಕೊಲ್ಲಂಗಾನ ಮೇಳ (ಬಯಲಾಟದ್ದು)





ಅಲ್ಲಿ ಮಕ್ಕಳ ದಿನಾಚರಣೆ ಅಬ್ಬರ
ಇಲ್ಲಿ ಮಕ್ಕಳ ಭವಿಷ್ಯ ಅರಳುತ್ತಿದೆ ಹೀಗೆ...

ಪ್ರಥಮ ಪ್ರಧಾನಿ ನೆಹರೂ ಅವರ ಬದುಕಿನಲ್ಲಿ ಮಕ್ಕಳ ಕುರಿತ ವಿಶೇಷ ಕಾಳಜಿ ವಹಿಸಿದ್ದಾರೆಂದು ಈ ದಿನವನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅವರ ಬದುಕಿನ ಸತ್ಯದ ಬೆಳಕಿನಲ್ಲಿ ಈ ದಿನಾಚರಣೆಯ ಬಗೆಗೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಿದೆ. ಏನೇ ಆದರೂ ಮಕ್ಕಳ ದಿನಾಚರಣೆಯನ್ನು ನಾವು ಕ್ರಮವಾಗಿ ಆಚರಿಸುತ್ತಲೇ ಬಂದಿದ್ದೇವೆ.ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಆಚರಿಸುವ  ಇಂತಹ ದಿನಗಳು ಮಕ್ಕಳ ಬಗ್ಗೆ ನಮ್ಮಲ್ಲಿ ಭಾವ ಸಂವೇದನೆ ಮೂಡಿಸಿದ್ದೇ ಆದರೆ ಅಂತಹ ದಿನಾಚರಣೆ ಪ್ರಸ್ತುತವೇ . ಈ ಹಿನ್ನೆಲೆಯಲ್ಲಿ ಮಕ್ಕಳ ಬಗೆಗೆ ಅವಲೋಕನ ನಡೆಸಲು ಇದು ಸಕಾಲವೇನೋ.
ಮಕ್ಕಳ ದಿನಾಚರಣೆಯಂದು ಎಲ್ಲಾ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪುಟಾಣಿ ಮಕ್ಕಳ ವೇಷದ ಸ್ಪರ್ಧೆ, ಚಿತ್ರ ಬಿಡಿಸುವುದು, ಹಾಡು, ನೃತ್ಯ, ಭಾಷಣ ಒಂದೆ ಎರಡೇ ಅನೇಕ ಸ್ಫರ್ಧೆಯನ್ನು ವಿವಿಧ ಸಂಸ್ಥೆಗಳು ಆಯೋಜಿಸಿ ಜಾಹಿರಾತುಗಳನ್ನು ನೀಡುತ್ತವೆ. ಸ್ಪರ್ಧೆ ಆಯೋಜಿಸಿದ ಸಂಸ್ಥೆ ಹೆಸರು ಗಳಿಸಬೇಕೆನ್ನುವ ಉದ್ದೇಶ ಇದರಲ್ಲಿ ಎದ್ದು ಕಂಡರೂ, ಮಕ್ಕಳ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆ ಎಂಬುದೂ ಸರಿಯೇ.
 ಆದರೆ ನಮ್ಮ ದೇಶದಲ್ಲಿ ಇಂದು ಮಕ್ಕಳ ಬದುಕಿನತ್ತ ಒಂದು ನೋಟ ಹರಿಸಿದ್ದೇ ಆದರೆ , ಒಂದೆಡೆ ಆಧುನಿಕ ಶಿಕ್ಷಣದ ಭರಾಟೆಯಲ್ಲಿ ಮಕ್ಕಳಿಗ ಬಾಲ್ಯವೇ ಕಳೆದುಹೋಗುತ್ತಿದೆಯೇನೋ ಎನಿಸುತ್ತಿದೆ. ಮಕ್ಕಳಿಗೆ ಹೋಮ್‌ವರ್ಕ್(ಭವಿಷ್ಯ ಜೀವನದಲ್ಲಿ ಕಷ್ಟಸಹಿಷ್ಣುತೆಯನ್ನು ಕಲಿಸುವ  ಮನೆಗೆಲಸ ಮಾಡಿಸಿದ್ದೇ ಆದರೆ ಅಪರಾಧ !)ನ ಒತ್ತಡ.ಓದುವ , ಇಂಜಿನಿಯರ್ ಆಗುವ , ಡಾಕ್ಟರ್, ಐಟಿ, ಬಿಟಿ ಆಗಿ ಕೈ ತುಂಬ ಸಂಬಳ ಪಡೆಯುವ , ಫಾರೀನ್‌ಗೆ ಹಾರುವ ಭ್ರಮಾ ಲೋಕದಲ್ಲಿ ಬಾಲ್ಯದ ಖುಷಿ , ಬದುಕಿನ ತಳಪಾಯ ಕಳೆದುಹೋಗುತ್ತಿದೆ  ಎಂಬ ಆತಂಕ ಇಂದು ಅನೇಕರಲ್ಲಿ ಮೂಡುತ್ತಿದ್ದರೆ ಅದರಲ್ಲಿ ತಥ್ಯವಿದೆ.
ಇನ್ನೊಂದೆಡೆ ,ದೇಶದ ಅನೇಕ ನಗರಗಳ ಸೇವಾಬಸ್ತಿಗಳು ಸೇರಿದಂತೆ ಸಮಾಜದಲ್ಲಿ ಎಷ್ಟೋ ಮಕ್ಕಳಿಗೆ ಓದಲು ಅವಕಾಶವಿಲ್ಲ.ಬದುಕಿನ ಕೂಳಿಗೂ ಬಡಿದಾಡಬೇಕಾದ ಅಧ್ವಾನ. ಇವರ ಬದುಕಿಗೇನು?
  ಬಡತನದ ಬೇಗೆಯಲ್ಲಿ ದಿನಕಳೆಯುತ್ತಿರುವ ಸ್ಲಮ್‌ಗಳಲ್ಲಿರುವ ಮಕ್ಕಳನ್ನು ಬಹಳ ಸುಲಭವಾಗಿ ದುಷ್ಟಕೃತ್ಯಗಳಿಗೆ ತಮ್ಮ ದಾಳವನ್ನಾಗಿ ಬಳಸಿಕೊಳ್ಳುತ್ತಿವೆ ದುಷ್ಟಶಕ್ತಿಗಳು. ಇಂತಹ  ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.ಇಂತಹ ಆಮಿಷಕ್ಕೆ ಬಲಿಯಾಗಿ ಮಕ್ಕಳ ಸುಂದರ ಭವಿಷ್ಯ ಹಾಳುಗೆಡಹುವುದು ಒಂದೆಡೆಯಾದರೆ ಅವರ ಪೋಷಕರು ಕುಡಿತದ ದಾಸರಾಗಿರುವುದರಿಂದ ಅವರನ್ನು ಸುಲಭವಾಗಿ ವಂಚಿಸಲು ಇನ್ನಷ್ಟು ಅವಕಾಶ. ಇಂದು ಸ್ಲಮ್‌ಗಳಲ್ಲಿ ಬಳಪ-ಲೇಖನಿ ಹಿಡಿಯಬೇಕಾದ ಸಣ್ಣ ಮಕ್ಕಳು ಗಾಂಜಾ, ಅಫಿಮು, ಚರಸ್‌ನಂಥ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಚಕ್ರವ್ಯೂಹದಲ್ಲಿ ಸಿಕ್ಕಿ ಹೊರಬರಲಾರದೆ ವಿಲವಿಲ ಒದ್ದಾಡುತ್ತಿದ್ದಾರೆ. ಮೊದಲಿಗೆ ಸಣ್ಣ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುವ ಮಕ್ಕಳು, ಬೆಳೆದು ದೊಡ್ಡವರಾದಾಗ, ಜೀವನದಲ್ಲಿ ಗುರಿಯಿಲ್ಲದೆ, ಬೇರೆ ದಾರಿ ಕಾಣದೆ ಇಂತಹ ನರಕದಲ್ಲಿಯೆ ಬದುಕನ್ನು ಅಂತ್ಯಗೊಳಿಸುವ ದಾರುಣ ಸ್ಥಿತಿ.
ಮುಗ್ಧಮನಸುಗಳಿಗೆ ತಮ್ಮ ಜೀವನ ಮೃತ್ಯುಕೂಪದಲ್ಲಿ ಬೀಳುತ್ತವೆ ಎಂದು ತಿಳಿಯುವುವಾಗ ಕಾಲ ಕೈ ಮೀರಿ ಹೋಗಿರುತ್ತದೆ. ಆದರೂ ಕೆಲವೊಂದು ಕಾಯಿಲೆಗೆ ಪ್ರಾರಂಭದಲ್ಲಿಯೇ ಔಷದಿ ಮಾಡಿದರೆ ನಿವಾರಿಸಬಹುದು ಅಥವಾ ರೋಗದ ಪ್ರಖರತೆ ಹತೋಟಿಗೆ ತರಬಹುದು. ಸ್ಲಮ್‌ನಲ್ಲಿರುವ ಮಕ್ಕಳ -ಜನರ ಬದುಕನ್ನೇ   ಬಂಡವಾಳವಾಗಿಸಿಕೊಂಡ ಮತೀಯವಾದಿ ಗುಂಪುಗಳು  ಈ ಕುಟುಂಬಗಳನ್ನು ಮತಾಂತರ ಮಾಡಿದ ಘಟನೆಗಳೂ ಸಾಕಷ್ಟಿವೆ.
ಮನೆಯ ಬಡತನ, ತಂದೆ ತಾಯಿಯ ಕಿರುಕುಳ, ಮಾನಸಿಕ ಬೆಳವಣಿಗೆಯ ಕೊರತೆ, ಅನಕ್ಷರತೆ, ಅತಿಯಾಸೆ ಹೀಗೆ ಅನೇಕ ಸಮಸ್ಯೆಗಳಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ.  ಗಂಡು ಮಕ್ಕಳು ಈ ರೀತಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದರೆ ಪಾಪ ಹೆಣ್ಣು ಮಕ್ಕಳ ಸ್ಥಿತಿ ಇನ್ನಷ್ಟೂ ಶೋಚನೀಯ. ಅಪ್ರಾಪ್ತ ಬಾಲೆಯರು ಕಾಮಾಂಧರ ಭೋಗದ ವಸ್ತುಗಳಾಗುತ್ತಿದ್ದಾರೆ. ಮೈಕಲ್ ಜಾಕ್ಸನ್ ಕಾಮತೃಷೆ ತೀರಿಸಿಕೊಳ್ಳಲು ಅಪ್ರಾಪ್ತೆಯರನ್ನೆ ಬಳಸುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಮಧ್ಯಮ ವರ್ಗದ ಹೆಣ್ಣಿನ ಮೇಲಾದ ಲೈಂಗಿಕ ದೌರ್ಜನ್ಯ,  ಸೌಜನ್ಯಳಂತಹ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದನ್ನು   ಕಂಡಾಗ, ನಮ್ಮ ದೇಶದಲ್ಲಿಯೂ ಕೂಡ ಇಂತಹ ಪಾಪಿಗಳಿರುವುದು ವ್ಯಕ್ತ.
 ವಾಮಾಚಾರವೆಂಬ ಮಾಯೆಗೆ ಬಲಿಯಾಗಿ ಪುಟಾಣಿಗಳನ್ನೆ ಬಲಿಕೊಡುವಂಥ ಕಟುಕರೂ ಸಮಾಜದಲ್ಲಿದ್ದಾರೆ. ಎನ್‌ಸಿಆರ್‌ಬಿಯು ೨೦೧೧ರಲ್ಲಿ ನಮ್ಮ ದೇಶದಲ್ಲಿನ ಮಕ್ಕಳ ಸಮಾಜ ವಿರೋಧಿ ಚಟುವಟಿಕೆಯನ್ನು ವರದಿ ಮಾಡಿದೆ. ಜೈಪುರದಲ್ಲಿ ೩೬೯ ಕ್ರೈಮ್ ಮತ್ತು ಬಲಾತ್ಕಾರದ ದೂರು ದಾಖಲಾಗಿದೆ. ರಾಜಸ್ಥಾನ-೧,೩೧೮, ಮಧ್ಯಪ್ರದೇಶ-೪,೯೧೨, ಮಹಾರಾಷ್ಟ್ರ-೩,೬೨೪, ಉತ್ತರ ಪ್ರದೇಶ-೨,೩೩೨ ದೂರು ದಾಖಲಾಗಿದೆ. ೧೫-೨೯ ವರ್ಷದೊಳಗಿನ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ೬೫೭ ಪ್ರಕರಣಗಳಲ್ಲಿ ೩೨೯ ಮಹಿಳೆಯರು, ದೆಹಲಿ-೬೫೧, ಮುಂಬೈ-೫೮೨, ಚೆನೈ-೪೭೨ ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸ್ಲಮ್‌ಗಳಲ್ಲಿರುವ ಮಕ್ಕಳಿಗೆ ಹಾಗೂ ಬಡತನದಲ್ಲಿರುವ ಮಕ್ಕಳಿಗೆ ವಿದ್ಯೆ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸೇವಾಸಂಸ್ಥೆಗಳು ಶ್ರಮಿಸುತ್ತಿವೆ. ೧೯೮೦ರ ದಶಕದಲ್ಲಿ ಒರಿಸ್ಸಾದಲ್ಲಿ ಫ್ಲಾಟ್‌ಫಾರಂ ಶಾಲೆಗಳು ಪ್ರಾರಂಭಗೊಂಡವು. ನಿವೃತ್ತ ಸೇನಾಧಿಕಾರಿಯ ಪತ್ನಿ ಇಂದರ್‌ಜಿತ್ ಖುರಾನ ರುಚಿಕಾ ಸೋಷಿಯಲ್ ಸರ್ವಿಸ್ ಆರ್ಗನೈಜೇಷನ್ ಪ್ರಾರಂಭ ಮಾಡಿ, ಈಗ ಆ ಸಂಸ್ಥೆ ೮೨೦ ಫ್ಲಾಟ್‌ಫಾರಂ ಶಾಲೆ, ೭೫ ಸೇವಾ ಬಸ್ತಿ ಶಾಲೆ, ೨೫ ನರ್ಸರಿ ಶಾಲೆಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದೆ. ಸರ್ಕಾರ ಮಕ್ಕಳ ವಿಕಾಸಕ್ಕೆಂದು ಹಲವಾರು ಯೋಜನೆಗಳನ್ನು, ಸ್ವಯಂಸೇವಾ ಸಂಸ್ಥೆಗಳು, ಅಂಗನವಾಡಿಗಳು, ಶಾಲಾಪೂರ್ವ ಚಟುವಟಿಕೆಗಳು ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡುತ್ತಿವೆ. ೧೯೫೨ರಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆಯಡಿಯಲ್ಲಿ ಬಾಲವಿಕಾಸ ಕೇಂದ್ರ ಹಾಗೂ ೧೯೫೫ ಮಕ್ಕಳ ಕಲ್ಯಾಣವನ್ನೇ ಗುರಿಯಾಗಿಸಿ ರಾಷ್ಟ್ರೀಯ ಮಕ್ಕಳ ಮಂಡಳಿಯನ್ನು ಪ್ರಾರಂಭ ಮಾಡಿದೆ.
ಸಂಘ ಪರಿವಾರದ ಸಾರ್ಥಕ ಕಾರ್ಯ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿ  ೩ ಗಂಡು ಮಕ್ಕಳಿಗಾಗಿ ನಡೆಯುವ ನರೇಂದ್ರ ನೆಲೆ(೬೫ಮಕ್ಕಳು), ನಮ್ಮ ಮನೆ(೨೨ಮಕ್ಕಳು), ಚಂದನ ನೆಲೆ(೩೩ಮಕ್ಕಳು) ಮತ್ತು ಹೆಣ್ಣು ಮಕ್ಕಳಿಗಾಗಿ ನಿವೇದಿತಾ (೨೮), ಆಶಾಕಿರಣ (೨೫), ವಸುಧಾ ನೆಲೆ (೨೫), ಶಿವಮೊಗ್ಗದಲ್ಲಿ (೨೫), ಮೈಸೂರು(೧೨)ತುಮಕೂರು(೧೬),ಬಾಗಲಕೋಟೆಯಲ್ಲಿ ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ. ನೆಲೆಯಲ್ಲಿ ಚಿಂದಿ ಆಯುವ, ಅನಾಥರು, ಸಿಂಗಲ್ ಪೇರೆಂಟ್ ಹೀಗೆ ಹಲವಾರು ನಿರ್ವಸಿತ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟು ಉಚಿತ ಶಿಕ್ಷಣ ವ್ಯವಸ್ಥೆ ಮಾಡುತ್ತಿದೆ.
ಸೇವಾ ಕಿರಣದ ವತಿಯಿಂದ ೭೦ ಟ್ಯೂಶನ್ ಕೇಂದ್ರಗಳಲ್ಲಿ ೧,೨೦೦ ಮಕ್ಕಳಿಗೆ ೭೦ ಶಿಕ್ಷಕರು ಉಚಿತ ಮನೆಪಾಠ ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ ಮನೋನಂದನ, ಅರುಣ ನಂದನ ಅಂಗವಿಕಲ ಮಕ್ಕಳ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಯೂತ್ ಫಾರ್ ಸೇವಾದ ವತಿಯಿಂದ ಬಡ ಮಕ್ಕಳಿಗೆ ಶಿಕ್ಷಣದ ವೆಚ್ಚದೊಂದಿಗೆ ಉಚಿತವಾಗಿ ಶಿಕ್ಷಣಕ್ಕೆ ಅಗತ್ಯ ಸಲಕರಣೆಗಳನ್ನು ಒದಗಿಸುತ್ತಿವೆ. ಆಪ್ತ ಸಲಹಾ ಕೇಂದ್ರದಿಂದ ಮಕ್ಕಳಿಗೆ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತಿದೆ.
ರಾಷ್ಟ್ರೋತ್ಥಾನ ಪರಿಷತ್‌ನ ವತಿಯಿಂದ ದಿನದಲ್ಲಿ ೨ ಗಂಟೆಗಳ ತರಬೇತಿಯನ್ನು ೨೨೭ ಕೇಂದ್ರಗಳಲ್ಲಿ ೨೨೭ ಶಿಕ್ಷಕರು ೫ಸಾವಿರಕ್ಕೂ ಅಧಿಕ ಮಕ್ಕಳಿಗೆ ಗಣಿತ, ಆಂಗ್ಲ, ವಿಜ್ಞಾನ ಪಠ್ಯವನ್ನು ಬೋಧಿಸುತ್ತಿದ್ದಾರೆ. ಕೇಶವ ಸೇವಾ ಸಮಿತಿಯಿಂದ ೩೦೦೦ ವಿದ್ಯಾರ್ಥಿಗಳಿಗೆ ಮನೆಪಾಠ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬಡಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿದ್ದು ೬೦ ಮಕ್ಕಳಿಗೆ ಈರೀತಿಯ ಸೌಲಭ್ಯ ದೊರಕಿದೆ. ಸ್ನೇಹ ಸೇವಾ ಟ್ರಸ್ಟ್‌ನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ೭ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ``ವಿದ್ಯಾವಾಹಿನಿ" ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ವಿದ್ಯಾವಾಹಿನಿಯಲ್ಲಿ ೮೬ ಮಕ್ಕಳು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಸ್ಲಮ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ೧೧ಕೇಂದ್ರಗಳಲ್ಲಿ ೨೧೬ ಮಕ್ಕಳಿಗೆ ಉಚಿತ ಮನೆಪಾಠ ಕಲಿಸಲಾಗುತ್ತಿದೆ. ಸಂಸ್ಕಾರ ಕೇಂದ್ರದಿಂದ ಮಕ್ಕಳಿಗೆ ಸಂಸ್ಕಾರವನ್ನು ಕಲ್ಪಿಸಲಾಗಿದೆ. ವಿಶ್ವಹಿಂದೂ ಪರಿಷತ್ತಿನ ವನಿತಾಶ್ರಮ ಹಾಗೂ ಕುತ್ತಾರು ಆಶ್ರಮದಲ್ಲಿ ಅನೇಕ ನಿರಾಶ್ರಿತ ಮಕ್ಕಳು ತಮ್ಮ ಜೀವನ ಸಾರ್ಥಕ್ಯ ಮಾಡಿ ಕೊಳ್ಳುತ್ತಿರುವುದನ್ನು ಗಮನಿಸಬೇಕಾದ ಅಂಶ. ಯಾವುದೆ ಸ್ವಾರ್ಥ ಬಯಸದೆ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ಅನೇಕ ಸ್ವಯಂಸೇವಕರು  ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಮತಾಂತರದ ಗುರಿಯಿರಿಸಿ, ಸ್ವಾರ್ಥಸಾಧಿಸುವ ಮತೀಯವಾದಿ ಶಕ್ತಿಗಳಿಗೆ  ಸೆಕ್ಯುಲರ್  ಸಿಗುತ್ತಿದೆ. ಯಾವುದೇ ಸ್ವಾರ್ಥಾಪೇಕ್ಷೆಯಿಲ್ಲದೆ ಸೇವೆ ಕರ್ತವ್ಯ ಎಂಬ ನೆಲೆಯಲ್ಲಿ ೮೬ ವರ್ಷಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಸೇವಾ ಪ್ರಕಲ್ಪಗಳನ್ನು  ನಡೆಸುತ್ತಿರುವ   ಸಂಘಪರಿವಾರಗಳಿಗೆ ಕೋಮುಸಂಘಟನೆ ಎನ್ನುವ ಪಟ್ಟ !
 ಹಿಂದು ಸಮಾಜದ ಎಲ್ಲ ಬಂಧುಗಳಿಗೆ ನೆಲೆಯನ್ನು ಕಲ್ಪಿಸಬೇಕು ಹಾಗೂ ಭವ್ಯಭಾರತದ ನಿರ್ಮಾಣ ಮಾಡಬೇಕೆನ್ನುವ ಮನೋಭಿಲಾಷೆಯು  ಎಲ್ಲಿಯಾದರೂ ಕೋಮುವಾದಕ್ಕೆ ಆಸ್ಪದ ಕೊಡುತ್ತದೆಯೇ? ಸ್ವಾರ್ಥ, ಕೀರ್ತಿ ಬಯಸದೆ ಸೇವಾ ಬಸ್ತಿಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ, ಸಂಸ್ಕಾರವನ್ನು ಬೆಳೆಸುತ್ತಾ ಸಮಾಜದ ಮುಖ್ಯವಾಹಿನಿಗೆ ತಂದು ಸತ್ಪ್ರಜೆಗಳನ್ನಾಗಿ ಮಾಡಬೇಕೆನ್ನುವುದು ಸಂಘಪರಿವಾರದಂತಹ ಅನೇಕ ಸಂಘ ಸಂಸ್ಥೆಗಳು ಮಕ್ಕಳ ಬದುಕಿಗೆ ಬೆಳಕಾಗುತ್ತಿರುವುದು ಅರ್ಥಪೂರ್ಣವೆಂದೆನಿಸದೇ?


ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್...ಶಿಕ್ಷಕಿಯರ ಅಳಲು
ಕೇಂದ್ರದ ಗ್ಯಾಸ್ ನೀತಿ..ಅಂಗನವಾಡಿಗೂ ತಟ್ಟಿದ ಬಿಸಿ

ಕನ್ನಡ ಉಳಿಸಬೇಕೆಂದು ಕನ್ನಡ ಪರ ಸಂಘಟನೆಗಳು, ರಾಜ್ಯ ಸರಕಾರ ವಿಪರೀತ ಹೋರಾಟ ನಡೆಸುತ್ತಿದ್ದರೂ, ಕನ್ನಡವನ್ನೆ ಮೂಲವಾಗಿಸಿಕೊಂಡು ರಾಜ್ಯದಲ್ಲಿ ಕಾರ್ಯಚರಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಮೇಲಿನ ಬೆಲೆ ಏರಿಕೆ ಮಾಡಿರುವುದರ ಬಿಸಿ ತಟ್ಟಿದೆ. ಶಿಕ್ಷಣ ಕಲಿಕೆಯ ಮೊದಲ ಮೆಟ್ಟಿಲು ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳಿಗೆ ನೀಡುತ್ತಿದ್ದ ಬೆಳಗ್ಗಿನ ತಿಂಡಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರಕಾರವು ಅಂಗನವಾಡಿ ಕೇಂದ್ರಗಳಿಗೆ ಉರುವಲು ವೆಚ್ಚವಾಗಿ ತಿಂಗಳಿಗೆ ರೂ.೧೦೦ ರಂತೆ ವರ್ಷಕ್ಕೆ ೧,೨೦೦ ನೀಡುತ್ತಿತ್ತು. ನಂತರ ಸತತ ಹೋರಾಟದ ಫಲವಾಗಿ ರೂ.೮೦೦ಜಾಸ್ತಿ ಮಾಡಿದೆ. ಈ ಸಂದರ್ಭ ಅಂಗನವಾಡಿ ಕೇಂದ್ರಗಳಲ್ಲಿ ಒಂದು ಹೊತ್ತು ಮಕ್ಕಳಿಗೆ ಬೇಯಿಸಿದ ಆಹಾರ ನೀಡುತ್ತಿದ್ದರಿಂದ ಗ್ಯಾಸ್ ಸಿಲಿಂಡರ್ ೩ರಿಂದ ಮೂರುವರೆ ತಿಂಗಳವರೆಗೆ ಬರುತ್ತಿದ್ದು ವರ್ಷಕ್ಕೆ ೪ ಗ್ಯಾಸ್ ಸಿಲಿಂಡರ್ ಸಾಲುತ್ತಿತ್ತು. ಇದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಾಮರ್ಥ್ಯವನ್ನಾಧರಿಸಿ ಗ್ಯಾಸ್ ಸಿಲಿಂಡರ್ ಸಾಗಾಟ-ವೆಚ್ಚ ಹೆಚ್ಚಿದಾಗ ಅಲ್ಪಸ್ವಲ್ಪ ಹಣವನ್ನು ಶಿಕ್ಷಕಿಯರೇ ಭರಿಸುತ್ತಿದ್ದರು. ಈಗ ಕೇಂದ್ರ ಸರಕಾರ ಏಕಾಏಕಿ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಬೆಲೆ ಏರಿಸಿದ್ದರಿಂದ ಶಿಕ್ಷಕರಿಯರಿಗೆ ದಿಕ್ಕು ತೋಚದಂತಾಗಿದೆ.
ಬದಲಾದ ಅಂಗನವಾಡಿ ಆಹಾರ ಪಟ್ಟಿ:
ಎಪ್ರಿಲ್ ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಬೆಳಿಗ್ಗೆ ಮತ್ತು ಮದ್ಯಾಹ್ನ ಗಂಜಿ ಹಾಗೂ ಚಟ್ನಿ ನೀಡಬೇಕು ಎನ್ನುವ ಆದೇಶವಿದೆ. ಚಟ್ನಿಗೆ ಸರಕಾರದ ವತಿಯಿಂದ ಹುರುಳಿ, ಮೆಣಸು, ಉಪ್ಪುಗಳನ್ನು ಮಾತ್ರ ಬಳಸಬೇಕಿದ್ದು ಅಷ್ಟು ಸಾಮಾಗ್ರಿ ಮಾತ್ರ ನೀಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಆಹಾರ ವ್ಯವಸ್ಥೆಗೊಳಿಸಬೇಕು ಎನ್ನುವ ಸಂಪೂರ್ಣ ಜವಾಬ್ದಾರಿ ವಹಿಸಿದ್ದರಿಂದ ಕರಾವಳಿ ಬಾಗದಲ್ಲಿ ಎರಡು ಹೊತ್ತು ಗಂಜಿ ನೀಡುವುದನ್ನು ಕಡಿತಗೊಳಿಸಿ ವಾರದಲ್ಲಿ ೨ ದಿನ ಗಂಜಿಯೂಟ ಸೇರಿದಂತೆ ಉಳಿದ ದಿನದಲ್ಲಿ ಬೇಯಿಸಿದ ಕಡ್ಲೆಕಾಳು ನೀಡುವಂತೆ ಸೂಚಿಸಲಾಗಿದೆ. ಬೆಳಿಗ್ಗೆ ಹೆಸರುಕಾಳು, ಗಂಜಿ-ಚಟ್ನಿ, ಮದ್ಯಾಹ್ನ ಅನ್ನಸಾಂಬಾರು (ಕುಚ್ಚಲು ಅಕ್ಕಿ)ನೀಡಬೇಕು.
ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್‌ಕೊರತೆ:
ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೆಳಗ್ಗಿನ ತಿಂಡಿಗೆ ಕಡ್ಲೆಕಾಳನ್ನು ಬೇಯಿಸಿ ನೀಡಬೇಕು. ಅಲ್ಲದೇ ತೊಗರಿಬೇಳೆ, ಕುಚ್ಚಲು ಅಕ್ಕಿ ಅನ್ನ, ಕಡ್ಲೆ, ಮಕ್ಕಳಿಗೆ ಕುದಿಸಿದ ನೀರು ಎಲ್ಲವು ಕೂಡ ಗ್ಯಾಸ್‌ನಲ್ಲಿ ಆಗಬೇಕಿರುವುದರಿಂದ ಮಕ್ಕಳ ಸಂಖ್ಯೆ ಆದರಿಸಿ ಗ್ಯಾಸ್ ೨ತಿಂಗಳು ಬರುವುದು ಕಷ್ಟಕರ. ಜಿಲ್ಲೆಯ ೩೦ಕ್ಕಿಂತಲೂ ಕಡಿಮೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರೆಶರ್ ಕುಕ್ಕರ್ ಸೌಲಭ್ಯವಿದ್ದರಿಂದ ಗ್ಯಾಸ್ ಸ್ವಲ್ವ ದಿನ ಹೆಚ್ಚು ಬಳಕೆ ಮಾಡಬಹುದಾಗಿದೆ. ಶಿಕ್ಷಕಿಯರ ಸತತ ಹೋರಾಟದ ಬಳಿಕ ಆಗಸ್ಟ್ ತಿಂಗಳಿನಿಂದ ೩ ತಿಂಗಳಿಗೆ ರೂ.೨೦೦ ಜಾಸ್ತಿ ಮಾಡಿದ್ದು, ವರ್ಷಕ್ಕೆ ರೂ.೮೦೦ ಹೆಚ್ಚಳವಾಗಿ ಉರುವಲು ವೆಚ್ಚ ವರ್ಷಕ್ಕೆ ರೂ. ೨೦೦೦ ಸಿಗುತ್ತಿದೆ. ಇದರಿಂದ ಸ್ವಲ್ಪ ಸುಧಾರಿಸಿ ಕೊಳ್ಳುವುದರಲ್ಲಿ ಕೇಂದ್ರದ ಬೇಲೆಯೇರಿಕೆಯಿಂದಾಗಿ ಪ್ರತಿ ಗ್ಯಾಸ್‌ಗೆ ರೂ.೧,೧೫೦ ನೀಡಿ ಖರೀದಿಸುವುದು ಮಾತ್ರವಲ್ಲ, ಸಿಲಿಂಡರ್‌ನ ಸಾಗಾಟ ವೆಚ್ಚ ಭರಿಸಬೇಕಿದೆ. ನಗರ ಪ್ರದೇಶದಲ್ಲಿ ಸಾಗಾಟ ವೆಚ್ಚ ಸ್ವಲ್ಪ ಕಡಿಮೆಯಾಗಿದ್ದು, ಗ್ರಾಮೀಣ ಪರಿಸರದಲ್ಲಿ ವೆಚ್ಚ ವಿಪರೀತವಾಗಿದೆ. ಸರಕಾರದಿಂದ ಉರುವಲು ವೆಚ್ಚವಾಗಿ ರೂ. ೨,೦೦೦ ಮಾತ್ರ ಸಿಗುತ್ತಿದ್ದು, ಒಂದು ಅಂಗನವಾಡಿಯಲ್ಲಿ ೩೦ ರಂತೆ ಮಕ್ಕಳ ಸಂಖ್ಯೆಯನ್ನಾದರಿಸಿ ಕನಿಷ್ಟ ೫ ಸಿಲಿಂಡರ್‌ನ ಅವಶ್ಯಕತೆಯಿದೆ. ಗ್ಯಾಸ್ ಸಿಲಿಂಡರ್‌ಗೆ ರೂ.೧,೧೫೦ರಂತೆ ೫ ಸಿಲಿಂಡರ್‌ಗೆ ರೂ.೫,೭೫೦ ಆಗುತ್ತಿದ್ದು ಸರಕಾರದಿಂದ ಸಿಗುವ ಉರುವಲು ವೆಚ್ಚ ಕೇವಲ ರೂ.೨೦೦೦ವಾಗಿದೆ. ಉಳಿದಂತೆ ೩,೭೫೦ನ್ನು ಶಿಕ್ಷಕಿಯರು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾವುದೇ ಅಧಿಕಾರಿಗಳು ಕೇಳುತ್ತಿಲ್ಲ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾರ್ಚ್ ತಿಂಗಳಿನಿಂದ ಅಂಗನವಾಡಿ ಶಿಕ್ಷಕಿಯರ ಅಹವಾಲು ಸ್ವೀಕರಿಸದಿರುವುದು ಮಕ್ಕಳ ಹಾಗೂ ಅಂಗನವಾಡಿಯ ಕುರಿತಾಗಿರುವ ಕಾಳಜಿ ಸೂಚಿಸುತ್ತದೆ.
ಅಂಗನವಾಡಿ ಕೇಂದ್ರಗಳ ಅನ್ಯವೆಚ್ಚ:
ಜಿಲ್ಲೆಯಲ್ಲಿರುವ ಕೆಲವೊಂದು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೇ ಕ್ಲಬ್, ಸಂಘಸಂಸ್ಥೆಗಳಲ್ಲಿ ನಡೆಸಲಾಗುತ್ತಿದೆ. ಕ್ಲಬ್‌ಗಳಲ್ಲಿ ನಡೆಸುವ ಅಂಗನವಾಡಿ ಕೇಂದ್ರದ ಕರೆಂಟ್ ಬಿಲ್‌ಗಳನ್ನು ಅವರು ತುಂಬಿಸಿಕೊಂಡು ಹೋಗುತ್ತಿದ್ದು, ಇತರೆಡೆಯಲ್ಲಿ ಶಿಕ್ಷಕಿಯರು ಭರಿಸಬೇಕಾದ ದುಸ್ಥಿತಿಯಿದೆ. ಅಲ್ಲದೆ ಸಿಲಿಂಡರ್ ಸಾಗಾಟದ ವೆಚ್ಚವನ್ನು ನೀಡಬೇಕಿದೆ. ಸರಕಾರ ಗಂಜಿ-ಚಟ್ನಿ ವ್ಯವಸ್ಥೆ ಮಾಡಿದ್ದರೂ ತೆಂಗಿನ ಕಾಯಿ ನೀಡುವುದಿಲ್ಲ. ಅದನ್ನು ಕೆಲವೊಮ್ಮೆ ನಿಭಾಯಿಸಬೇಕು. ಚಟ್ನಿ ರುಬ್ಬಲು ಸರಿಯಾದ ವ್ಯವಸ್ಥೆಯಿಲ್ಲ. ಕೇಂದ್ರ ಸರಕಾರದಿಂದ ರೂ. ೩೦೦೦ಹಾಗೂ ರಾಜ್ಯ ಸರಕಾರದಿಂದ ರೂ.೧೫೦೦ ಗೌರವಧನ ಪಡೆಯುವ ನಾವು ರೂ.೩೭೫೦ ಮತ್ತು ಇತರ ವೆಚ್ಚವನ್ನು ಭರಿಸಿದರೆ ನಮ್ಮ ಸಂಸಾರ ಗತಿಯೇನು? ಎನ್ನುವ ಪ್ರಶ್ನೆ ರಾಜ್ಯದ ಎಲ್ಲಾ ಅಂಗನವಾಡಿ ಶಿಕ್ಷಕಿಯರದಾಗಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಸರಕಾರ ಉತ್ತರ ನೀಡಬೇಕಿದೆ. ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸಿದರೆ ಮಾತ್ರ ಅಂಗನವಾಡಿಗಳಲ್ಲಿ ಚಿಕ್ಕ-ಚಿಕ್ಕ ಮಕ್ಕಳ ತೊದಲು ನುಡಿಗಳು ಪುನಃ ಕೇಳುವಂತಾಗುತ್ತದೆ.
ಬಾಕ್ಸ್:
ಗ್ಯಾಸ್ ಬೆಲೆಯೇರಿಕೆಯಿಂದ ರಾಜ್ಯದ ಎಲ್ಲಾ ಅಂಗನವಾಡಿಯಲ್ಲೂ ಕೊರತೆ ಕಾಣಿಸಿದೆ. ಕಡ್ಲೆಕಾಳನ್ನು ಬೇಯಿಸದೆ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಸರಕಾರವು ಸಂಜೆಯವರೆಗೆ ಅಂಗನವಾಡಿಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದರೂ ಯಾವುದೇ ಸೌಕರ್ಯ ಒದಗಿಸಿಲ್ಲ. ಕೆಲವು ಕಡೆ ದಾನಿಗಳ ಸಹಕಾರದಿಂದ ಮಕ್ಕಳು ಮಲಗಲು ಚಾಪೆಯ ವ್ಯವಸ್ಥೆ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸಬೇಕು. 
ವಿಶಾಲಾಕ್ಷಿ-ಜಿಲ್ಲಾ ಕಾರ್ಯದರ್ಶಿ ಅಂಗನವಾಡಿ ಕಾರ್ಯಕರ್ತೆಯರ ಸಂಘ.

ಬಾಕ್ಸ್:
ದ.ಕ.ಜಿಲ್ಲೆಯಲ್ಲಿರುವ ಅಂಗನವಾಡಿಗಳು:
*ಮಂಗಳೂರು ನಗರ-೨೨೮
*ಗ್ರಾಮಾಂತರ -೪೮೦
*ಬೆಳ್ತಂಗಡಿ-೩೩೦
*ಪುತ್ತೂರು-೩೮೪
*ಸುಳ್ಯ-೧೬೫
* ಬಂಟ್ವಾಳ-೫೦೦ಕ್ಕೂ ಅಧಿಕ


ಗೋ ಮಾತೆ ರಕ್ಷಣೆಯ ಅಳಿಲು ಸೇವೆ ನಮ್ಮದಾಗಲಿ
 ಹಿಂದುಗಳ ಹಬ್ಬ ದೀಪಾವಳಿಯಲ್ಲಿ ಹಣತೆಯ ಬೆಳಕಿನೊಂದಿಗೆ ಪಟಾಕಿಗಳ ಸದ್ದು ಕಳೆದ ಮರುದಿನವೇ ತಾಯಿಯ ಸ್ಥಾನದಲ್ಲಿರುವ ಗೋಮಾತೆಯನ್ನು ಪೂಜಿಸುವ ದಿನವೇ ಗೋಪೂಜೆ. ಗೋವನ್ನು ಸ್ವಚ್ಛಗೊಳಿಸಿ ಹೂವು-ಹಾರಗಳಿಂದ ಶೃಂಗರಿಸಿ, ಶ್ರದ್ಧೆ-ಭಕ್ತಿಯಿಂದ ಆರಾಧಿಸಿ ಸಂತಸಪಡುವ ದಿನ.
ಕೃಷಿ ಭೂಮಿಯಿರುವ ಮನೆಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಮಾಡುವುದರೊಂದಿಗೆ ಅವುಗಳಿಗೆ ಅರಶಿನ ಎಲೆಯಲ್ಲಿ ಮಾಡಿದ ಕಡಬು ನೀಡುವುದು ಕ್ರಮ. ಅಲ್ಲದೇ ಗದ್ದೆಯಿಂದ ತೆಗೆದ ಫಸಲನ್ನು ಗೋವುಗಳಿಗೆ ನೀಡುವ ಪುಣ್ಯದಿನ. ಗೋವು ಅದನ್ನು ತಿಂದು ಸಂತೋಷದಿಂದ ಅಂಬಾ ಎಂದು ಕೂಗಿದಾಗಲೇ ಕುಟುಂಬದ ಸದಸ್ಯರೆಲ್ಲರ ಮನಸ್ಸಿಗೆ ನೆಮ್ಮದಿಯ ಭಾವ.
ನಮ್ಮ ಜೀವನದಲ್ಲಿ ಬೇರೆ ಬೇರೆ ರೂಪದಲ್ಲಿ ನಮಗೆ ಸಹಕಾರಿಯಾಗುವ ಗೋವು ಅಳಿವಿನಂಚಿನಲ್ಲಿರುವುದು ದುಃಖಕರ. ಇದೇ ರೀತಿ ಕೃಷಿ ಭೂಮಿ-ಗೋವುಗಳು ಕ್ಷೀಣಿಸುತ್ತಿದ್ದರೆ ಮುಂದೊಂದು ದಿನ ಗೋವನ್ನು ಮೃಗಾಲಯದಲ್ಲಿ ನೋಡಲು ಮಾತ್ರ ಸಾಧ್ಯ!
ಪುರಾಣದಲ್ಲಿ ಗೋವು
ಗೋವುಗಳನ್ನು ರಕ್ಷಣೆ ಮಾಡಿದ ಶ್ರೀಕೃಷ್ಣ ಗೋ-ಸಂರಕ್ಷಕ ಎನ್ನುವ ಬಿರುದು ಪಡೆದಿದ್ದಾನೆ. ನಮ್ಮ ಸಂಸ್ಕೃತಿಯಲ್ಲಿ ಗಾ,ಗೀ,ಗೋ (ಗಾ-ಗಾಯತ್ರಿ ಮಂತ್ರ, ಗೀ-ಗೀತೆ, ಗೋ-ಗೋವು) ಎನ್ನುವ ಮೂರು ಅಕ್ಷರಕ್ಕೆ ಮಹತ್ವವಿದೆ. ಸವಿತ್ರನಾರಾಯಣನನ್ನು ಸ್ಮರಿಸುವ ಗಾಯತ್ರಿ ಮಂತ್ರ, ಜೀವನದ ಏರು-ಪೇರುಗಳನ್ನು ಸಮತೋಲನಕ್ಕೆ ತರಬಲ್ಲ ಭಗವಂತನ ನುಡಿಯಾದಾರಿತ ಭಗವದ್ಗೀತೆ ಮತ್ತು ಮನಸ್ಸು ಹಾಗೂ ಶರೀರಕ್ಕೆ ಬೇಕಾದ ಆಹಾರ ನೀಡುವ ಗೋಮಾತೆಗೆ ಗೌರವವಿದೆ. ಕ್ಯಾನ್ಸರ್‌ನಂತ ಮಹಾಮಾರಿಯನ್ನು ಗೋಮೂತ್ರ ದೂರಿಕರಿಸುತ್ತದೆ. ಗೋವಿನ ಉತ್ಪನ್ನಗಳಿಂದ ಜೀವಕೋಶಗಳು ಹೊಸ ಹುಮ್ಮಸ್ಸು ಪಡೆಯಲು ಸಹಕಾರಿ. ಆಯುರ್ವೇದದಲ್ಲಿ ಪಂಚಗವ್ಯ ಘೃತವು ಮಾನಸಿಕ ಔಷಧವೆಂದು ತಿಳಿಸಲಾಗಿದೆ. ದೇವಸ್ಥಾನದ ಶಿಖರ ಚಲನೆಯಲ್ಲಿ ಗೋವೃಷಭ ಬಳಸುತ್ತಾರೆ. ಬಿಂಬ ಚಲನೆಯಲ್ಲಿ ಗೋಮಾತೆಯನ್ನು ಬಳಸಲಾಗುತ್ತದೆ. ನೇರವಾಗಿ ದೇವರ ಮೂರ್ತಿ ಹೊರತರುವ ಸಾಮರ್ಥ್ಯ ಮನುಷ್ಯರಿಗಿಲ್ಲಾ. ಗೋವಿಗೆ ಮಾತ್ರ ಎಲ್ಲಾ ದೋಷ ತಡೆದುಕೊಳ್ಳುವ ಶಕ್ತಿ ಇರುವುದರಿಂದಲೇ ಅವುಗಳನ್ನು ಬಳಸುತ್ತಾರೆ. ಗೋವಿನ ಪರೋಪಕಾರ ಗುಣವೇ ಅವುಗಳಿಗೆ ದೋಷಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನೀಡಿದೆ. ಆದ್ದರಿಂದಲೇ ಗೋವಿನ ಕಾರ್ಯ ನೋಡಿ ಪರೋಪಕಾರಾರ್ಥಾಯ ಇದಂ ಶರೀರಂ ಎನ್ನುವ ಮಾತು ಸಮಂಜಸ ಎನ್ನುವುದು ನನ್ನ ಭಾವನೆ. 
ಹಿಂದು ಸಂಸ್ಕೃತಿಯಲ್ಲಿ ಗೋವಿನ ಮಹತ್ವ:
ಹಿಂದೆ ಗೋವಿಲ್ಲದ ಮನೆಯಿರಲಿಲ್ಲಎಂದು ಹೆಮ್ಮೆಯಿಂದ ಹೇಳುವ ನಾವಿಂದು ಗೋವಿರುವ ಮನೆ ವಿರಳ ಎನ್ನುವ ವಿಷಾದದ ನುಡಿಯಾಡಬೇಕಿದೆ. ಗೋವು ಮೂರು ಮುಖ್ಯ ಅಂಶಗಳಿಂದ ಹಿಂದು ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ದೇವಸ್ಥಾನದ ಆಗಮ ಕಾರ್ಯ, ಮಾನುಷ ಕಾರ್ಯ ಮತ್ತು ಗೃಹಗಳ ಚಲನೆಯಿಂದ ಜೀವನದಲ್ಲಾಗುವ ಬದಲಾವಣೆಗಳಲ್ಲಿ ಇವುಗಳ ಪಾತ್ರ ಮುಖ್ಯವಾಗಿದೆ. ಗೋವು ಸಹಜವಾಗಿ ವಾಸಿಸುವ, ಫಲಪುಷ್ಪಗಳಿಂದ ಆವೃತವಾದ ಜಾಗದಲ್ಲಿ ದೇವಸ್ಥಾನ ಕಟ್ಟಬಹುದು ಎನ್ನುವ ಶಾಸ್ತ್ರೋಕ್ತಿಯಿದೆ. ಇವುಗಳ ಸಂಚರಿಸಿದ ಸ್ಥಳದಲ್ಲಿ ವಿಷಯುಕ್ತ ಅಂಶಗಳು ನಾಶವಾಗಿರುತ್ತವೆ. ಸ್ಥಳ ಶುದ್ಧಿ ಹಾಗೂ ಸಪ್ತಶುದ್ಧಿಯಲ್ಲಿ ಮತ್ತು ಮನೆಕಟ್ಟಿದ ಸಂದರ್ಭ ಗೋಮಾತೆಯ ಪ್ರವೇಶದ ನಂತರ ಮಾನವನಿಗೆ ಅವಕಾಶ ನೀಡುವಾಗಲೇ ಗೋವಿನ ಮಹತ್ವ ತಿಳಿಯಬಹುದು. ಹಿಂದೆ ಅಮವಾಸ್ಯೆ ಹಾಗೂ ಮುನ್ನಾದಿನ, ಗೃಹಣ, ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಗೋಪ್ರಸವ ಶಾಂತಿ ಮಾಡಿದ ಜಾತಕದಿಂದ ಜನ್ಮಾಂತರದ ಕರ್ಮಫಲವನ್ನು ತಡೆಯುವ ಶಕ್ತಿ ಗೋಮಾತೆಗೆ ಇದ್ದುದರಿಂದ ಅವುಗಳನ್ನು ಸಾಕುತ್ತಿದ್ದರು. ಇಂದು ಒತ್ತಡದ ಪ್ರಪಂಚದಲ್ಲಿ ಗೋವುಗಳಿಲ್ಲದಿದ್ದರೂ ಅವುಗಳ ಸೇವೆಗೆ ಒಂದಷ್ಟು ನಿಧಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.
ಬದಲಾದ ಪ್ರಪಂಚದಲ್ಲಿ ಮಾನವನ ಮಾನಸಿಕತೆ:
ಗೋವಿನ ಧೂಳು ಆವರಿಸಿರುವ ಗೋಧೂಳಿ ಮೂಹೂರ್ತದಲ್ಲಿ ಎಲ್ಲಾ ಅನಿಷ್ಟ ದೂರವಾಗುವುದರಿಂದ ಆ ಸಂದರ್ಭ ಉತ್ತಮ ಕಾರ್ಯಗಳಿಗೆ ಸೂಕ್ತ ಕಾಲ ಎನ್ನುವ ನಂಬಿಕೆ. ಪರಿಸ್ಥಿತಿ ಬದಲಾಗಿದ್ದು ಇಂದು ಗೋವಿನ ದೂಳುಗಳಿಲ್ಲದೆ ರಸ್ತೆಗಳೆಲ್ಲಾ ಕಾಂಕ್ರೀಟಿಕರಣಗೊಂಡು ವಾಹನದ ಧೂಳು ಹೆಚ್ಚಾಗಿವೆ. ಹಿಂದೆ ಧಾರ್ಮಿಕ ಕಾರ್ಯದಲ್ಲಿ ಗೋದಾನ ಮಾಡುವ ಸಂಪ್ರದಾಯವಿತ್ತು ಆದರೆ ಅದು ಇಂದು ವಿರಳವಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಗೋವುಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವ ನಂಬಿಕೆಯ ಒಸರು ಬತ್ತಿಹೋಗಿದೆ. ದಿನದಿಂದ ದಿನಕ್ಕೆ ಹಲವಾರು ದನ-ಕರುಗಳು ಕಸಾಯಿಖಾನೆ ಪ್ರವೇಶ ಮಾಡುತ್ತಿವೆ.  ಮನೆಯ ವಾಸ್ತುದೋಷ ನಿವಾರಣೆಗೆ ನಿತ್ಯ ತುಪ್ಪದ ದೀಪ ಹಚ್ಚುವುದು, ದೇವತೆಗಳ ಆಹಾರ ತುಪ್ಪವಾದ್ದರಿಂದ ಎಲ್ಲಾ ಧಾರ್ಮಿಕ ಕಾರ್ಯ ತುಪ್ಪದಿಂದಲೇ ನಡೆಯುತ್ತಿತ್ತು. ಅದನ್ನು ಮನೆಯಲ್ಲಿ ತಯಾರಿಸುತ್ತಿದ್ದರು. ಮನೆಯಲ್ಲಿ ಹೇರಳವಾಗಿ ದೊರೆಯುತ್ತಿದ್ದ ಗೋ-ಉತ್ಪನ್ನಗಳು ಇಂದು ಮರೆಯಾಗಿ ಪೊಟ್ಟಣಗಳಲ್ಲಿ ಸಿಗುವ ವಸ್ತುಗಳಿಗೆ ಅವಲಂಬಿತರಾಗಿದ್ದೇವೆ.
ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಾವಿದ್ದೇವೆ. ದೃಶ್ಯಮಾಧ್ಯಮ, ಅಂತರ್ಜಾಲ, ಮೊಬೈಲ್,ಕಂಪ್ಯೂಟರ್‌ಗಳಲ್ಲಿ ಕಾರ್ಯಮಗ್ನರಾಗಿ ಗೋಸಂರಕ್ಷಣೆಯಲ್ಲಿ ನಿರಾಸಕ್ತಿ ತಳೆದಿದ್ದೇವೆ. ಸಮಾಜದಲ್ಲಿ ಜೀವ ತಳೆದಾಗ ತಾಯಿಯ ಎದೆಹಾಲು ಅವಲಂಬಿಸುವ ನಾವು ಬೆಳೆದು ದೊಡ್ಡವರಾಗುತ್ತಾ ಗೋ-ಮಾತೆ ನೀಡುವ ಹಾಲನ್ನು ಅವಲಂಬಿಸುತ್ತೇವೆ. ಆದರೆ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಕಸಾಯಿಖಾನೆ ಸೇರುವ ಗೋಮಾತೆಯ ರಕ್ಷಣೆ ನಮ್ಮಿಂದಾಗಬೇಕಿದೆ. ೨೦೧೨ರಲ್ಲಿ ದೇಶವ್ಯಾಪಿ ರಾಷ್ಟ್ರೀಯ ಜಾನುವಾರು ಗಣತಿಗೆ ಚಾಲನೆ ನೀಡಲಾಗಿದ್ದು ಈ ನಿಟ್ಟಿನಲ್ಲಿ ಕಸಾಯಿಖಾನೆಗೆ ಸೇರುತ್ತಿರುವ ಗೋವುಗಳ ರಕ್ಷಣೆಗೆ ನಮ್ಮ ಅಳಿಲಿನ ಸೇವೆ ಮುಖ್ಯವಾಗಿದೆ. ಗೋವುಗಳ ಮಹತ್ವ ತಿಳಿದುಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.