Sunday 28 October 2012



ಭಾರತ ಪರಿಕ್ರಮ ಯಾತ್ರೆಯ ರೂವಾರಿ ಸೀತಾರಾಮ ಕೆದಿಲಾಯರೊಂದಿಗೆ ಒಂದು ಕ್ಷಣ.

ಮಂಗಳೂರು: ಕಾಲ ಕೆಲವೊಂದು ಸಂದರ್ಭದಲ್ಲಿ ವಿಚಿತ್ರವಾಗಿದೆ ಅನಿಸುತ್ತದೆ? ಮಳೆಗಾಲದಲ್ಲಿ ಮಳೆ ಕಡಿಮೆಯಾಗಿದ್ದರೂ, ಚಳಿಗಾಲದಲ್ಲಿ ಮಾತ್ರ ಬೇಸಗೆಯಂಥ ಬಿಸಿಲು. ಆದರೂ ಕಳೆದೆರಡು ದಿನದಲ್ಲಿ ರಾಜ್ಯದ ಕೆಲವೊಂದು ಭಾಗದಲ್ಲಿ ವರುಣನ ಆಗಮನವಾಗಿದೆ. ಇದೇ ಸಂದರ್ಭದಲ್ಲಿ ಅಖಂಡ ಭಾರತದ ಕಲ್ಪನೆ ಹೊತ್ತ ದೇಶಭಕ್ತ ಸಂತನ ಆಗಮನ ರಾಜ್ಯ ಗಡಿಭಾಗದ ಕೇರಳದ ಕಾಸರಗೋಡಿನಲ್ಲಾಗಿದೆ. ೧೯೭೦ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಸೀತಾರಾಮ ಕೆದಿಲಾಯರು ಮೂಲತಃ ಪುತ್ತೂರಿನವರು. ದೇಹದ ಪ್ರತಿಯೊಂದು ಕಣದಲ್ಲಿಯೂ ದೇಶದ ಆಗುಹೋಗುಗಳ ಕುರಿತು ಚಿಂತಿಸುವ ಇವರು ಸ್ವಂತ ಕುಟುಂಬ, ಸ್ವ-ಪರಿಚಯ ಹೇಳಲೊಲ್ಲರು?
ಕನ್ಯಾಕುಮಾರಿಯಿಂದ ಆ.೯ರಂದು ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಕೆದಿಲಾಯರು ಸತತ ೭೫ ದಿನಗಳನ್ನು ಪೂರೈಸಿದ್ದಾರೆ. ಬರಿಗಾಲಲ್ಲಿ ದೇಶ ಪರ್ಯಟನೆ ಹೊರಟು ದೇಶೀಯ ಜನರಲ್ಲಿ ಜಾಗೃತಿ ಭಾವ ಬಿತ್ತುತ್ತಿದ್ದಾರೆ. ವೈಜ್ಞಾನಿಕವಾಗಿ ಹಾಗೂ ವಾಹನಗಳ ಭರಾಟೆಯ ನಡುವೆಯೂ ಬರಿಗಾಲಲ್ಲಿ ಕನಿಷ್ಟ ೫ ವರ್ಷಗಳವರೆಗೆ ಪರಿಕ್ರಮ ಯಾತ್ರೆ ಕೈಗೊಳ್ಳುವುದು ಸಾಮಾನ್ಯ ಮಾತಲ್ಲ. ಈ ನಿಟ್ಟಿನಲ್ಲಿ ಕೆದಿಲಾಯರು ಅಸಾಧಾರಣ ವ್ಯಕ್ತಿಯಾಗಿ ಕಂಡು ಬರುತ್ತಾರೆ. ಅವರನ್ನು ಬಹಳ ಹತ್ತಿರದಿಂದ ಮಾತನಾಡಿಸಿದಾಗ ನನಗರಿವಾದದ್ದು...ಕೆದಿಲಾಯರು ಚಲಿಸುವ ಕೋಶ, ಶ್ರೇಷ್ಟ ರಾಜಕಾರಣಿ, ಉತ್ತಮ ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ವಾಗ್ಮಿ ಮತ್ತು ದೇಶಭಕ್ತ ಸಂತ. ಇದು ಅತಿಶಯೋಕ್ತಿಯಲ್ಲ. ಅವರೊಂದಿಗೆ ಮಾತಿಗಿಳಿದಾಗ ಜೀವಮಾನದ ಅನುಭವವನ್ನು ಎಳೆಎಳೆಯಾಗಿ ಬಿತ್ತರಿಸಿದ್ದು ಹೀಗೆ..ಇದು ದೇಶದಲ್ಲಿರುವ ಪ್ರತಿಯೋರ್ವ ಪ್ರಜೆಗೂ ಮಾರ್ಗದರ್ಶನವಾದೀತು ಎನ್ನುವ ಭಾವನೆಯೊಂದಿಗೆ....
ಪ್ರ: ಪರಿಕ್ರಮ ಯಾತ್ರೆಯ ಉದ್ದೇಶ
ಉ: ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಮಾತಿನಂತೆ ನಗರ ಜೀವನಕ್ಕೆ ಮಾರು ಹೋದ ಯುವ ಮನಸ್ಸುಗಳು ಗ್ರಾಮ ತ್ಯಜಿಸಿ, ನಗರವಾಸಿಗಳಾಗುತ್ತಿದ್ದಾರೆ. ಒತ್ತಡದ ಜೀವನದ ಜಂಜಾಟದಲ್ಲಿ ಕಾಲಕಳೆಯುತ್ತಿರುವ ಯುವಮನಸ್ಸುಗಳು ಕೃಷಿಯೆಡೆಗೆ ತೆರಳುವಂತಾಗಬೇಕು. ಪ್ರಕೃತಿ ಸಹಜವಾದ ಬದುಕನ್ನು ಬಿಟ್ಟು ವಿಕೃತ ಸಹಜವಾದ ಜೀವನಕ್ಕೆ ಮಾರುಹೋಗುತ್ತಿದ್ದು, ಅದರಲ್ಲಿ ಆನಂದವಿದೆಯೆನ್ನುವ ಭ್ರಮೆಯಲ್ಲಿದ್ದಾರೆ. ನಾನೊಬ್ಬನೇ ಎನ್ನುವ ಅಂಶ ತ್ಯಜಿಸಿ, ಹಿಂದು ಧರ್ಮದ ಪರಿಕಲ್ಪನೆಯಾದ ವಿಶಾಲ ಕುಟುಂಬದ ದೃಷ್ಟಿ ಬೆಳೆಸಿಕೊಳ್ಳಬೇಕು. ವಿದೇಶಿ ಮಾನಸಿಕತೆಯ ಪರಿಭಾವವನ್ನು ತ್ಯಜಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕೃಷಿ ಪ್ರಧಾನವಾದ ದೇಶಿಯ ಸಂಸ್ಕೃತಿಯನ್ನು ಯುವಮನಸ್ಸುಗಳಲ್ಲಿ ಬಿತ್ತರಿಸುವ ಉದ್ದೇಶ ಯಾತ್ರೆಯದಾಗಿದೆ.
ಪ್ರ: ವೈಜ್ಞಾನಿಕ ಉಪಕರಣಗಳ ಧಾವಂತದಲ್ಲಿ ಇದು ಸಫಲವಾಗುವುದೇ?
ಉ: ವೈಜ್ಞಾನಿಕವಾಗಿ ಮುಂದುವರಿದಿಲ್ಲ. ಇಂದು ವಿನಾಶವನ್ನು ಅನುಕರಿಸುವ ಅಜ್ಞಾನದಲ್ಲಿದ್ದೇವೆ. ಉಪಭೋಗ ಮತ್ತು ಉಪಯೋಗ ಎನ್ನುವ ಎರಡು ಅಂಶಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ. ವೈಜ್ಞಾನಿಕ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ. ಉಪಭೋಗದ ಸಂಸ್ಕೃತಿಯಲ್ಲಿರುವುದು ವೈಜ್ಞಾನಿಕ ಬೆಳವಣಿಗೆಯೆ? ವಸ್ತುವನ್ನು ಬಳಸಿ, ಬಿಸಾಡುವ ಸಂಸ್ಕೃತಿ ವೈಜ್ಞಾನಿಕ ಪ್ರಗತಿಯಲ್ಲ. ಪೂರ್ವಜರು ೪೦ ವರ್ಷಗಳ ಕಾಲ ಬಳಸಿದ ಲೇಖನಿಯನ್ನು ಈಗಲೂ ಬಳಸುತ್ತಾರೆ. ಆದರೆ ನಾವು ಕೇವಲ ಅರ್ಧಗಂಟೆಗಳ ಕಾಲ ವಸ್ತುವನ್ನು ಬಳಸಿ ಅದನ್ನು ಬಿಸಾಡುತ್ತೇವೆ. ಇದು ಉಪಭೋಗದ ಸಂಸ್ಕೃತಿ. ಬದಲಾಗುತ್ತಿರುವ ಮನುಷ್ಯನ ಜೀವನ ಶೈಲಿ ಲಾಲಸೆಗಳನ್ನು ಬೆಳೆಸುತ್ತಾ ಹೋಗುತ್ತದೆ. ಇದರಿಂದ ವ್ಯಾಪಾರಿಗಳು ಅದರ ಲಾಭವನ್ನು ಪಡೆಯುತ್ತಾರೆ. ಮಾರುಕಟ್ಟೆಗೆ ಹೊಸ ವಸ್ತುಗಳು ಬಂದಾಗ ಹಳೆಯ ವಸ್ತುಗಳು ಬೇಡವೆನಿಸುತ್ತದೆ.(ಟಿವಿ ಬಂದ ಮೇಲೆ ಕ್ಯಾಸೆಟ್, ಟೇಪ್, ರೇಡಿಯೋ ಮಾಯವಾಗಿದೆ). ಇದು ಪ್ರಗತಿಯಲ್ಲ. ಕುಟುಂಬದ ಸದಸ್ಯರೆಲ್ಲರಲ್ಲೂ ಬಳಸುವ ದೃಷ್ಟಿಕೋನ ಬದಲಾಗಬೇಕಿದೆ. ಮನುಷ್ಯನ ಬೇಕು ಎನ್ನುವ ಧಾವಂತದ ನಾಗಾಲೋಟಕ್ಕೆ ಹಾಕಬೇಕು ಬಲವಂತದ ಬ್ರೇಕು. ಅದುವೇ ದೇಶದ ಪ್ರಗತಿಯ ಸಂಕೇತ.
ಪ್ರ: ಮನುಷ್ಯ ಬೆಳೆಯುತ್ತಿದ್ದಂತೆ ಸ್ವಾರ್ಥ ಹೆಚ್ಚಾಗುತ್ತಿದೆ ಇದು ನಿಜವೇ?
ಉ: ಮನುಷ್ಯನಿಗೆ ಆಸೆಯೆನ್ನುವುದು ಸಹಜ. ಅದು ಅತಿಯಾದರೆ ಸ್ವಾರ್ಥವಾಗುತ್ತದೆ. ಬೆಂಕಿಗೆ ತುಪ್ಪವನ್ನು ಸುರಿದಾಗ ಅದರ ಪ್ರಖರತೆ ಜಾಸ್ತಿಯಾಗುತ್ತದೆ. ತುಪ್ಪ ಸುರಿಯುವುದು ಕಡಿಮೆಯಾದಾಗ  ಬೆಂಕಿಯ ತೀವ್ರತೆ ಕಡಿಮೆಯಾಗುತ್ತದೆ. ಜೀವನ ಸಾಗರದಲ್ಲಿ ಆಸೆಯನ್ನು ತಡೆದಾಗ ಸ್ವಾರ್ಥ ಕಡಿಮೆಯಾಗುತ್ತದೆ.
ಪ್ರ: ಧರ್ಮದ ಮೇಲೆ ಆಕ್ರಮಣವಾಗಿದೆ ಎನ್ನುತ್ತಾರಲ್ಲ ಇದು ನಿಜವೇ?
ಉ: ಹಿಂದು ಧರ್ಮ ಸಬಲವಾಗಿದ್ದು, ಅದರ ಮೇಲೆ ಆಕ್ರಮಣವಾಗಿಲ್ಲ. ಹಿಂದು ಧರ್ಮದಲ್ಲಿರುವ ಜೀವನ ಕ್ರಮದ ಮೇಲೆ ಆಕ್ರಮಣವಾಗಿದೆ. ರೋಗಾಣುಗಳು ದೇಹದ ಮೇಲೆ ಆಕ್ರಮಣ ಮಾಡುವುದು ಅದರ ಸಹಜ ಸ್ವಭಾವ. ಜನಜೀವನ ದುರ್ಬಲವಾಗಿದ್ದಾಗ ರೋಗದ ಅಣುಗಳು ಜಾಸ್ತಿಯಾಗಿ ಅವು ತಮ್ಮ ಪ್ರಭಾವ ತೋರುತ್ತವೆ. ಹಿಂದು ಸಮಾಜ ದುರ್ಬಲವಾಗಿದ್ದಾಗ ರೋಗಾಣುಗಳಂತೆ ಅನ್ಯ ಮತಗಳು ಆಕ್ರಮಣಮಾಡಿರಬಹುದು. ಹಿಂದು ಧರ್ಮ ಶಕ್ತಿಯುತವಾದುದು. ಶಕ್ತಿ ಹಿಡಿದುಕೊಂಡರೆ ಸಬಲವಾಗಬಹುದು. ಆ ನಿಟ್ಟಿನಲ್ಲಿ ಹಿಂದು ಸಮಾಜ ಸಬಲವಾಗಬಹುದೇ ಎನ್ನುವ ಚಿಂತನೆ ಮಾಡಬೇಕಿದೆ.
ಪ್ರ: ದೇಶದ ಜನತೆಯ ಜೀವನಕ್ರಮದ ಬದಲಾವಣೆಗೆ ಆಂಗ್ಲಭಾಷೆಯ ಬಿಸಿ ತಟ್ಟಿದೆಯೇ?
ಉ: ದೇಶದಲ್ಲಿ ಯಾವುದೇ ಭಾಷೆಗೆ ವಿರೋಧವಿಲ್ಲ. ತಾಯಿ, ಮಾತೃಭಾಷೆಯ ಬಗ್ಗೆ ಅಭಿಮಾನವಿದ್ದಾಗ ಇತರ ಭಾಷೆಗಳು ಸೋದರ ಭಾಷೆಗಳಾಗುತ್ತದೆ. ಅನ್ಯ ಭಾಷೆಯ ಮೇಲೆ ಸೋದರ ಭಾವನೆ ಮೂಡಿದಾಗ ಅದು ಸುಸಂಸ್ಕೃತ ಸಮಾಜದ ಲಕ್ಷಣವಾಗುತ್ತದೆ. ಪ್ರತಿಯೊಂದು ಭಾಷೆಯ ಹಿಂದೆ ಸಂಸ್ಕೃತಿಯಿರುತ್ತದೆ. ಅದು ನಮ್ಮ ಜೀವನಕ್ಕೆ ಅಂಟಿಕೊಳ್ಳದೇ ಇರಬೇಕಾದ್ರೆ ತಾಯಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಹಲಸಿನ ಮೇಣ ಅಂಟುವುದು ಅದರ ಸ್ವಭಾವ..ಅದು ದೇಹಕ್ಕೆ ಅಂಟದೆ ಇರಬೇಕಾದ್ರೆ ಎಣ್ಣೆ ಹಚ್ಚಿಕೊಳ್ಳುವ ವಿವೇಕವಿರಬೇಕು.
ಪ್ರ: ಯಾತ್ರೆಯ ಸಂದರ್ಭ ಹಿಂದುಗಳು ಮಾತ್ರ ಬೆಂಬಲಿಸಿದ್ದಾರೋ? 
ಉ: ಅನ್ಯನ್ಯ ಮತಗಳು ಎನ್ನುವ ಶಬ್ದವನ್ನು ಬಳಸುತ್ತೇನೆ. ಬುದ್ದಿಯಿರುವವನಿಗೆ ಅಭಿಪ್ರಾಯವಿರುತ್ತದೆ. ಎಲ್ಲರ ಅಭಿಪ್ರಾಯವನ್ನು ಗೌರವಿಸುವ ಮನೋಧರ್ಮವಿದೆಯೋ ಅದುವೇ ಹಿಂದುತ್ವ. ಅಭಿಪ್ರಾಯದಲ್ಲಿ ತಿರಸ್ಕಾರವಿಲ್ಲ. ಗೌರವ ಭಾವನೆಯಿದೆ. ಇದನ್ನು ಎಲ್ಲರೂ ಆಲಂಗಿಸಿದ್ದಾರೆ. ಕನ್ಯಾಕುಮಾರಿಯಿಂದ ವಿವಿಧ ಅಭಿಪ್ರಾಯದ ಜನರು ಬಂದಿದ್ದು, ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಯಾತ್ರೆಯನ್ನು ಗೌರವಿಸಿ, ಮನ್ನಿಸಿ, ಆಶೀರ್ವದಿಸಿ, ಸ್ವಾಗತಿಸಿದ್ದಾರೆ.
ಪ್ರ: ಪ್ರಜಾಪ್ರಭುತ್ವದಲ್ಲಿ ಜಾತಿ-ತಾರತಮ್ಯ ತರವೇ?
ಉ: ಜಾತಿ ಎನ್ನುವುದು ಅಜ್ಞಾನ.. ಸೂರ್ಯ ಬೆಳಕು ನೀಡುವಾಗ, ಮರ ಹಣ್ಣನ್ನು ಬಿಡುವಾಗ, ನದಿ ಹರಿಯುವಾಗ ಎಲ್ಲಾ ಜೀವಿಗಳಿಗೂ ಉಪಯೋಗವಾಗಲಿ ಎನ್ನುವ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಹಿಂದು ಜೀವನ ಎಲ್ಲರ ಹಿತವನ್ನು ಬಯಸಿ ಕೆಲಸ ಮಾಡುತ್ತದೆ. ಇದನ್ನು ಅರ್ಥ ಮಾಡಿಕೊಂಡವರು ವಿರೋಧ ಮಾಡುವುದಿಲ್ಲಾ. ಸಮಾಜದಲ್ಲಿ ಜಾತಿ ಎನ್ನುವ ಅಜ್ಞಾನದ ಪರದೆ ತೆಗೆಯುವ ಕಾರ್ಯವಾಗಬೇಕಿದೆ.
ಪ್ರ: ಮನುಷ್ಯ ವಿದ್ಯಾವಂತನಾಗುತ್ತಿದ್ದಂತೆ ಹಿಂಸಾಪ್ರವೃತ್ತಿ ಜಾಸ್ತಿಯಾಗುತ್ತಿದೆ ಎನ್ನುವುದು ನನ್ನ ಭಾವನೆ?
ಉ: ಹಿಂಸಾ ಮನೋಧರ್ಮವೆನ್ನುವುದು ಜನಸಂಖ್ಯಾತ್ಮಕವಾಗಿ ಎಲ್ಲಿ ಹೆಚ್ಚಿದೆಯೋ ಅಲ್ಲಿ ಹಿಂಸೆ ಜಾಸ್ತಿಯಾಗಿದೆ. ಅಸ್ಸಾಂ, ಕಾಶ್ಮೀರ, ಕೇರಳ, ಮಣಿಪುರ, ಪಾಕಿಸ್ತಾನ, ಬಾಂಗ್ಲಾ, ಇರಾಕ್, ಇರಾನ್ ದೇಶದಲ್ಲಿಯೂ ಹಿಂಸಾಪ್ರವೃತ್ತಿ ವಿಪರೀತವಾಗಿದೆ. ಕೇರಳದಲ್ಲಿ ಅನೇಕರು ಭಾರತವನ್ನು ನಿಜವಾದ ಸ್ವರ್ಗವೆಂದಿದ್ದಾರೆ. ಸಮತ್ವ ಇದ್ದಾಗ ಹಿಂಸೆಯನ್ನು ದೂರಿಕರಿಸಬಹುದು.  Inactive majority ಯಿದ್ದಲ್ಲಿ active minorityಯು  ಸಮಾಜದಲ್ಲಿ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿರುತ್ತದೆ.   Inactive majority ಯು active ಆಗಿ ಕಾರ್ಯಚರಿಸಿದಾಗ ಹಿಂಸಾ ಪ್ರವೃತ್ತಿಯನ್ನು ಖಂಡಿಸಬಹುದಾಗಿದೆ.
(ಬಾಯಾರು ರಜಾಕ್ ಯಾತ್ರೆಯ ಸಂದರ್ಭ ಖುರಾನ್‌ನಲ್ಲಿ ಗಲಾಟೆ, ಗದ್ದಲ, ಹಿಂಸೆಗೆ ಸಮ್ಮತಿಯಿಲ್ಲ. ಇಸ್ಲಾಂನ ಹೆಸರಿನಲ್ಲಿ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ )
ಪ್ರ: ಪ್ರಸ್ತುತ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆಯಲ್ಲವೇ?
ಉ: ರಾಜಕೀಯ ವ್ಯವಸ್ಥೆಯಲ್ಲಿ ಅವ್ಯವಸ್ಥೆಯಾಗಿದೆ. ಇಂತಹ ರಾಜಕೀಯ ವ್ಯವಸ್ಥೆಗೆ ನಿಷ್ಠಾವಂತರು ಹೋದರೂ ಅವ್ಯವಸ್ಥಿತ ರಾಜಕೀಯ ವ್ಯವಸ್ಥೆಯಲ್ಲಿ ಅವರಂತೆಯೆ ಆಗುತ್ತಾರೆ. ರಾಜಕೀಯದ ಬೇರನ್ನು ಸರಿ ಮಾಡಬೇಕಿದೆ. ಗಾಂಧೀಜಿ ಗೋಖಲೆಯವರನ್ನು ಬೇಟಿ ಮಾಡಿ ಮಾರ್ಗದರ್ಶನ ನೀಡಬೇಕು. ನಾನು ರಾಜಕೀಯಕ್ಕೆ ಹೊಸಬ ಎಂದಾಗ ಗೋಖಲೆ ರಾಜಕೀಯಕ್ಕೆ ಹೊಸಬರಾಗಿದ್ದರೂ, ಆಧ್ಯಾತ್ಮಿಕವಾಗಿ ಹಳಬರಿದ್ದಿರಾ. ರಾಜಕೀಯ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕತೆ ಬೆಳೆಸಿ ಎಂದು ಹೇಳಿದ್ದರು. ಇದು ಇಂದಿನ ರಾಜಕೀಯ ನಾಯಕರಿಗೆ ಅನ್ವಯವಾಗಬೇಕಿದೆ.
stop politilism, criminalism, meterialism, comercialism and all political leaders ll start the spiritualism in the field. ರಾಜಕೀಯ ರಂಗ ಆಧ್ಯಾತ್ಮ ನಿಷ್ಠವಾದಾಗ ರಾಜಕೀಯ ಗೊಂದಲ ಪರಿಶುದ್ದವಾಗುತ್ತದೆ.
ರಾಮಾಯಣದಲ್ಲಿ ರಾಮ ಆಧ್ಯಾತ್ಮ ನಿಷ್ಟನಾಗಿ, ಸಮಚಿತ್ತತೆಯಿಂದ ವ್ಯವಹರಿಸಿದ್ದರಿಂದ ಕಿಂಚಿತ್ ವಿಕಾರ  ಉತ್ಪತ್ತಿಯಾಗಲಿಲ್ಲ. ಭರತನ ಪಟ್ಟಾಭಿಷೇಕವಾಗಬೇಕು ಎಂದಾಗ ಆತ ಆಧ್ಯಾತ್ಮ ಚಿಂತನೆಗೆ ವಿರೋಧ ಮಾಡಲಿಲ್ಲ. ಕುಟುಂಬದಲ್ಲಿ ರಾಜಕೀಯ ಗೊಂದಲವಿದ್ದರೂ ರಾಮ ಮತ್ತು ಭರತ ವ್ಯವಹಾರದಿಂದ ರಾಜಕೀಯದ ಆಧ್ಯಾತ್ಮಿಕತೆಯನ್ನು ಬಿತ್ತರಿಸಿದ್ದರು. ಚಿಂತನೆಗೆ ತಾತ್ವಿಕ ನೆಲೆಯನ್ನು ಕಲ್ಪಿಸಿದ್ದರಿಂದ ಗೊಂದಲ ಪರಿಹಾರವಾಗಿದೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಾನು ಹೋಗಿ ನಮ್ಮಲ್ಲಿ ಯಾರು ಆಗಬಹುದು ಎನ್ನುವ ಭಾವನೆ ಮೂಡಬೇಕು. ಪಾದುಕೆ ಹೊತ್ತು ಕೆಲಸ ಮಾಡುತ್ತೇನೆ ಎನ್ನುವ ಭರತನ ಚಿಂತನೆಗೆ ಪ್ರತಿಯೊರ್ವ ರಾಜಕಾರಣಿಯು ಒತ್ತು ನೀಡಿದರೆ ರಾಜವ್ಯವಸ್ಥೆ ಶುದ್ದಿಯಾಗುತ್ತದೆ. ನಾಯಕರು ಶುದ್ದಜೀವನ ನಡೆಸಿದಾಗ ಪ್ರಜೆಗಳು ಅದನ್ನು ಅನುಸರಿಸುತ್ತಾರೆ. ದೇಶದ ಅಭಿವೃದ್ದಿಯನ್ನು ಬಯಸಿ ಕಾರ್ಯ ನಿರ್ವಹಿಸಿದ್ದೆ ಆದರೆ ಅದರ ಫಲವನ್ನು ಕಾಣಬಹುದಾಗಿದೆ.
ಯಾತ್ರೆಯ ಸಂದರ್ಭ ಕೇರಳದಲ್ಲಿ ನೋಡಿದ ಧನಾತ್ಮಕ ಅಂಶಗಳು:
*ರಸ್ತೆಯಲ್ಲಿ ಬಿಕ್ಷುಕರಿಲ್ಲ. ಬಿಕ್ಷುಕರನ್ನು ನೋಡಿದರೆ ಅವರನ್ನು ಬಂಧಿಸಿ ಜೀವನಕ್ಕೊಂದು ವ್ಯವಸ್ಥೆ ಮಾಡುವ ಕಾನೂನು ಜಾರಿಯಲ್ಲಿದೆ.
*ಜೋಪಡಿ ಪಟ್ಟಿ (ಸ್ಲಮ್) ಇಲ್ಲದ ರಾಜ್ಯ(ಅಪವಾದಕ್ಕೆ ಒಂದೆರಡು ಹೊರತು ಪಡಿಸಿ).
*ವಿನಾಶದ ನಡುವೆಯೂ ಗ್ರಾಮ ಮತ್ತು ನಗರದಲ್ಲಿ ಹಸಿರು ಕೇರಳದ ಸೃಷ್ಟಿ.
*ದುರಭ್ಯಾಸದಿಂದ ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವುದಿಲ್ಲ.
*ರಾಜ್ಯದಲ್ಲಿ ವಿದೇಶಿ ಹೆಸರುಗಳನ್ನು ತೆಗೆದು ಸ್ವದೇಶಿ ಹೆಸರನ್ನು ರಚಿಸಿದ್ದಾರೆ.
*ದಾರಿಯುದ್ದಕ್ಕೂ ದೇವಸ್ಥಾನ, ಪ್ರಾರ್ಥನಾ ಮಂದಿರಗಳ ನಿರ್ಮಾಣ.
*ಭವನಗಳ ನಿರ್ಮಾಣದಲ್ಲಿಯೂ ಸ್ವದೇಶಿತನ.
ಋಣಾತ್ಮಕ ಅಂಶಗಳು:
*ವ್ಯಕ್ತಿಗತವಾಗಿ ವಿಪರೀತ ದುರ್ವ್ಯವಹಾರ, ಮನೆ-ರೋಗಯುಕ್ತವಾಗಿ ನಾಟಿ ವೈದ್ಯರು ಮಾಯವಾಗಿದ್ದಾರೆ.(ಯೋಗ ಮತ್ತು ಆರೋಗ್ಯ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕು)
*ಕೃಷಿ ಭೂಮಿಯ ವಿನಾಶವಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು, ನೀರು, ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ( ೪ ಜಿಲ್ಲೆಯನ್ನು ಹೊರತು ಪಡಿಸಿ)
*ಅನ್ನದ ಕೃಷಿ ಕಡಿಮೆಯಾಗಿ ಹಣದ ಕೃಷಿ ಹೆಚ್ಚಾಗಿದೆ.
*ವಿದೇಶಿ ವಸ್ತುಗಳ ಬಳಕೆ ವಿಪರೀತ.


ದೇಶದಲ್ಲಿ ಅನ್ನದ ಕೃಷಿ ಜಾಸ್ತಿಯಾಗಬೇಕು. ಹಣವಿದ್ದರೆ ಅದನ್ನು ಹಂಚುವ ಮನಸ್ಸು ಬರುವುದಿಲ್ಲ. ಅನ್ನವನ್ನು ಹಂಚುವ ಮನಸ್ಸಾಗುತ್ತದೆ. ನಗರ ವಾಸದ ವ್ಯಾಮೋಹ ತ್ಯಜಿಸಿ ಗೋವು ಆದಾರಿತ ಕೃಷಿಯ ಗ್ರಾಮೀಣ ಬದುಕನ್ನು ರೂಪಿಸಿಕೊಳ್ಳಬೇಕು. ಕೇರಳದಲ್ಲಿರುವ ಧನಾತ್ಮಕ ಅಂಶಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರಬೇಕು. ಭ್ರಾತೃತ್ವವನ್ನು ಬೆಸೆಯುವ ಜೀವನಶೈಲಿ ನಮ್ಮದಾಗಬೇಕು.
ಸೀತಾರಾಮ ಕೆದಿಲಾಯ-ಭಾರತ ಪರಿಕ್ರಮ ಯಾತ್ರೆಯ ರೂವಾರಿ.


Saturday 27 October 2012

ಅಂಗವೈಕಲ್ಯತೆ ಮರೆತು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.

ಮಂಗಳೂರು: ಸಮಾಜದಲ್ಲಿ ದೈಹಿಕವಾಗಿ ಸುದೃಡವಾಗಿರುವವರು ಅಬ್ಬೆಪಾರಿಗಳಾಗಿ ತಿರುಗಾಡುವುದು ಸಾಮಾನ್ಯವೆನ್ನುವ ನಂಬಿಕೆ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ದೈಹಿಕವಾಗಿ ನ್ಯೂನ್ಯತೆ ಇದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ತನ್ನದೆ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.
ತಾಯಿಯ ಗರ್ಭದಿಂದ ಜನಿಸುವಾಗ ನಮ್ಮಂತೆ ಇದ್ದ ಸುಭಾಶಿನಿ ೬ ತಿಂಗಳು ಸಮೀಪಿಸುತ್ತಿದ್ದಾಗ ಕಾಣಿಸಿಕೊಂಡ ಮಿದುಳು-ಜ್ವರದಿಂದಾಗಿ ೧೩ ನೇ ವಯಸ್ಸಿನವರೆಗೆ ನಡೆದಾಡುವ ಸ್ಥಿತಿಯಿಲ್ಲದೆ ಹಾಸಿಗೆಯಲ್ಲಿಯೆ ಕಾಲ ಕಳೆಯಬೇಕಾಯಿತು. ನಂತರದ ದಿನದಲ್ಲಿ ನಿಧಾನವಾಗಿ ಕುಳಿತುಕೊಳ್ಳುವ ಮಾನಸಿಕ ಹಾಗೂ ದೈಹಿಕ ಶಕ್ತಿ ದೊರಕಿದಾಗ ತಾಯಿ ಚಂದ್ರಕಲಾ ಮಗಳನ್ನು ಎತ್ತಿಕೊಂಡು ಹೋಗಿ ಶಾಲೆಗೆ ಸೇರಿಸಿದರು. ದೈಹಿಕ ಸುದೃಢವಾಗಿರುವ ಇತರ ಮಕ್ಕಳು ಹೋಗುವ ಸರಕಾರಿ ಶಾಲೆಗೆ ೫ ತರಗತಿಯವರೆಗೆ ತಾಯಿಯೊಂದಿಗೆ ಹೋಗಿದ್ದರೂ, ಆ ಹೊತ್ತಿನಲ್ಲಿ ಸುಭಾಶಿನಿಗೆ ಬಲಗಾಲು ಹಾಗೂ ಬಲಗೈಯ ಸ್ವಾಧೀನವಿಲ್ಲದೆ ಹೇಳಿಕೊಟ್ಟ ಅಕ್ಷರ ಬರೆಯಲು ಹಾಗೂ ನಡೆದಾಡಲು ಕೂಡ ಆಗದ ಪರಿಸ್ಥಿತಿ. ದೇವರು ದೇಹದ ಎಲ್ಲಾ ಅಂಗ ಕೊಟ್ಟಿದ್ದರೂ ಬಲಗಾಲಿನ ಬಲವನ್ನೇ ಕಿತ್ತುಕೊಂಡಿದ್ದ. ಅಲ್ಲದೇ ಬಲಗೈ ಕೊಟ್ಟಿದ್ದರೂ ಪೆನ್ನು ಹಿಡಿಯುವಷ್ಟು ಶಕ್ತಿ ನೀಡದೆ ವಂಚಿಸಿದ್ದ.
ಸಮಾಜದಲ್ಲಿ ಇತರರು ಮಾತನಾಡುವುದನ್ನು ನೋಡಿ ತಾನೂ ಕೂಡ ಮಾತನಾಡಬೇಕು ಎನ್ನುವ ಆಸೆ ಚಿಗುರೊಡೆದು ಅಲ್ಪಸ್ವಲ್ಪ ಮಾತನಾಡುವಂತೆ ಮಾಡಿದೆ. ಹಿರಿಯರ ಪ್ರೋತ್ಸಾಹ, ಗುರುಗಳ ಸಹಕಾರ, ಚೇತನಾ ಸಂಸ್ಥೆಯ ಬೆಂಬಲ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ನಿರಂತರ ನೆರವಿನಿಂದಾಗಿ ಸುಭಾಶಿನಿ ಇಂದು ಸಮಾಜದಲ್ಲಿ ವಿಶಿಷ್ಟ  ವ್ಯಕ್ತಿಯಾಗಿ ರೂಪುಗೊಂಡಿದ್ದಾಳೆ. ಜೀವನದಲ್ಲಿ ಬಂದ ಸವಾಲುಗಳಿಗೆ ತನ್ನಿಂದಾದ ಉತ್ತರ ನೀಡುತ್ತಿದ್ದಾಳೆ ಎಂದರೂ ತಪ್ಪಿಲ್ಲ.
೫ ನೇ ತರಗತಿಯವರೆಗೆ ಸರಕಾರಿ ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದ ತಾಯಿ ಚಂದ್ರಕಲಾಗೆ ಉಡುಪಿಯ ಆಶಾ ನಿಲಯ ಆಸರೆಯಾಯಿತು. ಮಗಳನ್ನು ೭ವರ್ಷಗಳ ಕಾಲ ಆಶಾ ನಿಲಯದಲ್ಲಿ ಬಿಟ್ಟು ನಂತರ ಮಂಗಳೂರಿನ ಸಂತ ಆಗ್ನೇಸ್ ವಿಶೇಷ ಶಾಲೆಯಲ್ಲಿ ೧೦ ವರ್ಷಗಳವರೆಗೆ ಶಿಕ್ಷಣ ಕೊಡಿಸಿದರು. ಕಳೆದ ೬ ವರ್ಷದಿಂದ ಸೇವಾಭಾರತಿಯ ವತಿಯಿಂದ ನಡೆಯುತ್ತಿರುವ ಚೇತನಾ ವಿಶೇಷ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.
ಸುಭಾಶಿನಿಯ ವಿಶೇಷ:
೪೦ ವರ್ಷ ಪ್ರಾಯದ ಸುಭಾಶಿನಿ ವಿಧಿಯಾಟಕ್ಕೆ ಬಲಿಯಾಗಿ ಅಂಗವೈಕಲ್ಯ ಹೊಂದಿದ್ದು, ದೇಹದ ಆಕೃತಿಯಲ್ಲಿ ಸಾಮಾನ್ಯರಂತೆ ಇಲ್ಲದಿದ್ದರೂ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಇಂದಿನ ಸಮಾಜದಲ್ಲಿ ಎರಡಕ್ಷರ ಕಲಿತು ಅಬ್ಬೆಪಾರಿಗಳಾಗಿ ತಿರುಗಾಡುತ್ತಿರುವ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ. ಚಂದ್ರಕಲಾ ಅವರ ೩ ಮಕ್ಕಳಲ್ಲಿ ಕೊನೆಯವರಾದ ಸುಭಾಶಿನಿ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಉಲ್ಲಾನ್ ವಸ್ತುವಿನಿಂದ ಮಾಡಿರುವ ಮ್ಯಾಟ್, ಫಿನಾಯಿಲ್, ಸೋಪ್ ವಾಟರ್‌ತಯಾರಿ ಮತ್ತು ಬಟ್ಟೆಯ ಬ್ಯಾಗ್‌ಗಳಿಗೆ ನೂಲ್ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಮೆಡಿಕಲ್‌ಗಳಲ್ಲಿ ಮಾತ್ರೆಗಳನ್ನು ಹಾಕಲು ಬಳಸುವ ಪೇಪರ್ ಕವರ್‌ಗಳನ್ನು ಮಾಡುತ್ತಿರುವುದು ವಿಶೇಷವಾಗಿದೆ. ಧರ್ಮಸ್ಥಳ ಸ್ವ-ಸಹಾಯ ಸಂಘದ ಸದಸ್ಯೆಯಾಗಿರುವ ಇವರಿಗೆ ಇತರ ಸದಸ್ಯರು ಪೂರ್ಣ ಸಹಕಾರ ನೀಡುತ್ತಿದ್ದಾರೆ.
ದಿನಕ್ಕೆ ೫೦ಲೀಟರ್‌ಗಳವರೆಗೆ ಫಿನಾಯಿಲ್, ಸೋಪ್ ಆಯಿಲ್ ತಯಾರಿಸುವ ಮನಸ್ಸು ಇದ್ದರೂ, ಇದಕ್ಕೆ ಪೂರಕವಾಗುವ ಮಾರುಕಟ್ಟೆ ದೊರಕಿಲ್ಲ. ಮನೆಯ ಬಳಕೆಗೆ ಬೇಕಾಗುವಷ್ಟನ್ನು ಮಾತ್ರ ತಯಾರಿಸುತ್ತಿದ್ದಾರೆ. ದೈಹಿಕ ವೈಕಲ್ಯ ಲೋಕಮುಖಕ್ಕೆ ತೋರಗೊಡದೆ ತಾನು ನಿರ್ಮಾಣ ಮಾಡಿದ ವಸ್ತುವನ್ನು ಇತರ ಜನರಿಗೂ ತೋರ್ಪಡಿಸಬೇಕು ಎನ್ನುವ ಇಚ್ಚೆಯಿಂದ ಇತ್ತೀಚಿಗೆ ನಗರದ ಫಿಶರೀಸ್ ಕಾಲೇಜ್‌ನಲ್ಲಿ ನಡೆದ ರೈತ ಮಾಹಿತಿ ಶಿಬಿರದಲ್ಲಿ ಧರ್ಮಸ್ಥಳ ಸ್ವ-ಸಹಾಯ ಮಳಿಗೆಯಲ್ಲಿ ಫಿನಾಯಿಲ್, ಸೋಪ್ ಆಯಿಲ್ ಬಾಟಲ್‌ಗಳನ್ನು ಸ್ವತಃ ಕುಳಿತು ಮಾರಾಟಕ್ಕೆ ಇಟ್ಟಿದ್ದರೂ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ದೊರಕಿದೆ ಎನ್ನುವ ಅಳಲು ಸುಭಾಶಿನಿಯದಾಗಿದೆ.
ವಿಶೇಷ ಮಕ್ಕಳಿಗಾಗಿ ಸರಕಾರದಿಂದ ನೀಡುವ ರೂ.೧೦೦೦ದಿಂದ ಅವರ ಜೀವನ ಸಾಗುತ್ತಿದೆ. ಯಾವುದೇ ಸಂಘ ಸಂಸ್ಥೆಗಳಿಂದ ಅನುದಾನ ಇಲ್ಲಿಯವರೆಗೆ ದೊರಕಿಲ್ಲ. ಆದರೂ ಕೂಡ ಸಮಾಜದಲ್ಲಿ ಚೆನ್ನಾಗಿ ಬದುಕ ಬೇಕೆನ್ನುವ ಇಚ್ಚೆ ಇದೆ. ಅದಕ್ಕೆ ಸಾರ್ವಜನಿಕರ ಪ್ರೋತ್ಸಾಹದ ಅಗತ್ಯವಿದೆ. ಸುಭಾಶಿನಿಯ ಸಂಪರ್ಕ ಸಂಖ್ಯೆ-೯೪೪೯೧೩೧೪೮೬

ಬಾಕ್ಸ್:
೬ ತಿಂಗಳ ಮಗುವಾಗಿದ್ದಾಗ ಮೆದುಳು ಜ್ವರಕ್ಕೆ ತುತ್ತಾದ ಮಗಳಿಂದು ಅಂಗವೈಕಲ್ಯದಿಂದ ಬಳಲುವಂತಾಯಿತು. ಸಮಾಜದಲ್ಲಿ ಇತರ ಮಕ್ಕಳಂತೆ ಬದುಕಬೇಕೆನ್ನುವ ಛಲದಿಂದ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಸಮಾಜದ ಬಂಧುಗಳಿಂದ ಅವಳ ಚಟುವಟಿಕೆಗಳಿಗೆ ಪ್ರೋತ್ಸಾಹ ಅವಶ್ಯಕತೆಯಿದೆ. ಮಾತನಾಡುತ್ತಿದ್ದರೂ ಮೊದಲ ಬಾರಿಗೆ ಕೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ. ದಿನನಿತ್ಯ ಕೇಳುತ್ತಿದ್ದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಚಂದ್ರಕಲಾ-ಸುಭಾಶಿನಿ ತಾಯಿ.

ರಾಜ್ಯದಲ್ಲಿಯೇ ಪ್ರಥಮ ಮಂಗಳೂರು ಪಶುಇಲಾಖೆ
ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ ಜಾನುವಾರು ಗಣತಿಗೆ ಚಾಲನೆ

ಮಂಗಳೂರು: ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ರಾಜ್ಯದಲ್ಲಿರುವ ಪಶು ವೈದ್ಯಾಧಿಕಾರಿಗಳು ಮುಷ್ಕರ ಹಮ್ಮಿಕೊಂಡು ೫ ವರ್ಷಗಳಿಗೊಮ್ಮೆ ನಡೆಸಬೇಕಿರುವ ಜಾನುವಾರು ಗಣತಿ ವಿಳಂಭಗೊಂಡಿದೆ. ಆದರೂ ರಾಜ್ಯದಲ್ಲಿ ಪ್ರಥಮವಾಗಿ ಸೆ. ೬ರಂದು ಮೂಡಬಿದ್ರೆ ಮತ್ತು ೧೦ರಂದು ನಗರದಲ್ಲಿ ಗಣತಿದಾರರಿಗೆ ತರಬೇತಿ ನೀಡಿರುವುದು ಮಂಗಳೂರಿನ ಪಶು ಇಲಾಖೆಗೆ ಸಂದ ಗೌರವ. ಸರಕಾರದಿಂದ ಮುಷ್ಕರಕ್ಕೆ ಯಾವುದೇ ಪ್ರತಿಕ್ರಿಯೆ ಬಾರದೆ ಅನಿರ್ದಿಷ್ಟಾವಧಿಯವರೆಗೆ ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದರೂ, ರಾಷ್ಟ್ರೀಯ ಕಾರ್ಯಕ್ರಮ ಹಾಗೂ ಪಶು ಇಲಾಖೆಯ ನೈತಿಕ ಜವಾಬ್ದಾರಿಯೆನ್ನುವ ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಪಶುಇಲಾಖೆ ಗಣತಿ ಕಾರ್ಯಕ್ಕೆ ಚಾಲನೆ ನೀಡಿದೆ.
ಜಿಲ್ಲೆಯಲ್ಲಿರುವ ಪಶುವೈದ್ಯಾಧಿಕಾರಿಗಳು ರಾಜ್ಯದ ಇತರ ವೈದ್ಯರಂತೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಇಲಾಖೆಯ ಪುನರ್ರಚನೆ, ಮಂಗಳೂರು ಹಾಗೂ ಪುತ್ತೂರನ್ನು ಗಮನದಲ್ಲಿರಿಸಿ ಪಶುಗಳ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಪಾಲಿಕ್ಲಿನಿಕ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿರಿಸಿದೆ. ಸರಕಾರ ಕೊಲದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ  ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬೇಡಿಕೆಯನ್ನಿಡಲಾಗಿದೆ. ಆದರೂ ಮಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡು ಜಾನುವಾರು ಗಣತಿ ಕಾರ್ಯದಲ್ಲಿ ತೊಡಗಿ ಕೊಳ್ಳಲಿದ್ದಾರೆ. ಮಂಡ್ಯದಲ್ಲಿ ಇತ್ತೀಚಿಗೆ ೧೫ ದಿನಗಳ ಅಂತರದಲ್ಲಿ ಒಂದು ಕಡೆ ತರಬೇತಿ ನಡೆದಿರುವುದು ಹೊರತು ಪಡಿಸಿ ಬೇರೆ ಯಾವ ಜಿಲ್ಲೆಯಲ್ಲಿ ಪ್ರಾರಂಭವಾದ ಮಾಹಿತಿ ಇಲ್ಲಾ.
ದ.ಕ.ಜಿಲ್ಲೆಯಲ್ಲಿ ನಗರಭಾಗದಲ್ಲಿರುವ ೨,೦೪,೬೭೭ ಮನೆಗಳು ಹಾಗೂ ಗ್ರಾಮೀಣ ಭಾಗದಲ್ಲಿರುವ ೩೬೮ ಗ್ರಾಮಗಳ ೨,೨೨,೬೨೮ ಮನೆಗಳಲ್ಲಿರುವ ಜಾನುವಾರು, ಕುದುರೆ, ಕತ್ತೆ, ನಾಯಿ, ಮೊಲ, ಕುಕ್ಕುಟ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಪಶುಸಂಗೋಪನಾ ವಲಯದಲ್ಲಿ ಉಪಯೋಗಿಸುವ ಉಪಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ೧೯೧೯-೨೦ರಲ್ಲಿ ಪ್ರಾರಂಭವಾದ ಜಾನುವಾರು ಗಣತಿಯು ೫ ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದು ೧೯ ನೇ ಜಾನುವಾರು ಗಣತಿಯಾಗಿದೆ. ೧೮ ನೇ ಗಣತಿಯಲ್ಲಿ ಶೇ.೫೪ರಷ್ಟು ಕುಟುಂಬಗಳು ಪಶುಪಾಲನೆಯಲ್ಲಿ ತೊಡಗಿರುವುದು ಕಂಡುಬಂದಿದೆ. ೨೦೧೨ ರ ಸೆ.೧೫ರಂದು ಪ್ರಾರಂಭಗೊಂಡು ಅ.೧೫ರೊಳಗೆ ಪೂರ್ಣಗೊಳಿಸಿ, ಈ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಗಳ ಪರಿಶೀಲನೆ ಮತ್ತು ವ್ಯತ್ಯಾಸಗಳನ್ನು ಸರಿಪಡಿಸಬೇಕಿತ್ತು. ಆದರೆ ಪಶುವೈದ್ಯಾಧಿಕಾರಿಗಳ ಮುಷ್ಕರದಿಂದಾಗಿ ಗಣತಿ ಕಾರ್ಯ ವಿಳಂಭಗೊಂಡಿದೆ.
ಜಾನುವಾರು ಗಣತಿಯಲ್ಲಿ ಯಾರಿರುತ್ತಾರೆ?
ದ.ಕ.ಜಿಲ್ಲೆಯಲ್ಲಿ ೬೯ ಅಧಿಕಾರಿಗಳು ಹಾಗೂ ೫೫೭ ಎಣಿಕೆದಾರರು ಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು, ಪುರಸಭೆ ಅಥವಾ ಪಟ್ಟಣ ಪಂಚಾಯಿತಿಗಳು, ಪಶುಪಾಲನಾ , ಕೃಷಿ, ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ, ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಎಸ್‌ಕೆಡಿಆರ್‌ಡಿಪಿ ಸೇವಾ ನಿರತರು ಹಾಗೂ ನುರಿತ ವಿದ್ಯಾವಂತ ಯುವಕ-ಯುವತಿಯರು ಜಾನುವಾರು ಗಣತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದ.ಕ.ಜಿಲ್ಲೆಯಲ್ಲಿ ತರಬೇತಿಯೊಂದಿಗೆ ಗಣತಿ ಕಾರ್ಯಕ್ಕೆ ಚಾಲನೆ:
೧೯ ನೇ ಅಖಿಲ ಭಾರತ ಜಾನುವಾರು ಗಣತಿ ಕಾರ್ಯಕ್ಕೆ ನೇಮಕಗೊಂಡ ಜಿಲ್ಲೆಯ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ವಿವಿಧ ತಾಲೂಕಿನಲ್ಲಿ ತರಬೇತಿ ನಡೆಯಲಿದೆ. ಮಂಗಳೂರು ಗ್ರಾಮಾಂತರ ಉಳ್ಳಾಲ ವಲಯದಲ್ಲಿ ಅ.೨೭ ರಂದು, ಬಂಟ್ವಾಳ ಹಾಗೂ ಸುಳ್ಯದಲ್ಲಿ ಅ.೩೦ ಮತ್ತು ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಅ.೩೧ರಂದು ತರಬೇತಿ  ಆಯೋಜಿಸಲಾಗಿದೆ. ತರಬೇತಿ ನಡೆದ ಮಾರನೇಯ ದಿನವೇ ಆಯಾ ತಾಲೂಕಿನಲ್ಲಿ ಗಣತಿ ಕಾರ್ಯ ಪ್ರಾರಂಭವಾಗಲಿದೆ.

ಬಾಕ್ಸ್:
*೬೯ ಅಧಿಕಾರಿಗಳು, ೫೫೭ ಗಣತಿದಾರರು.
* ಗ್ರಾಮೀಣ ಪ್ರದೇಶದಲ್ಲಿ ೨,೨೨,೬೨೮ ಹಾಗೂ ನಗರದಲ್ಲಿ ೨,೦೪,೬೭೭ ಮನೆಗಳ ಜಾನುವಾರು ಗಣತಿ(೨೦೧೧ಜನಗಣತಿ)
*ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಉಪಕರಣಗಳು.
*ರಾಜ್ಯದಲ್ಲಿಯೇ ಪ್ರಥಮ ತರಬೇತಿ ಸೆ.೬ ಮತ್ತು ಸೆ.೧೦ (ಮಂಗಳೂರು ಪಶುಸಂಗೋಪನಾ ಇಲಾಖೆ

ಬಾಕ್ಸ್:
ಅಖಿಲ ಭಾರತ ಜಾನುವಾರು ಗಣತಿಗೆ ಜಿಲ್ಲೆಯಲ್ಲಿ ವೈದ್ಯರು ಮೂಲಭೂತ ಸೌಕರ್ಯಗಳಿಗಾಗಿ ಹಮ್ಮಿಕೊಂಡ ಮುಷ್ಕರದಿಂದ ವಿಳಂಭವಾಗಿದೆ. ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ, ಜಿಲ್ಲೆಯ ವೈದರನ್ನು ಕರೆದು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ನೈತಿಕ ಜವಾಬ್ದಾರಿಯನ್ನು ಅರಿತು ಗಣತಿ ಕಾರ್ಯದಲ್ಲಿ ಭಾಗಿಯಾಗಲು ಸೂಚಿಸಲಾಗಿದೆ. ಎಲ್ಲಾ ವೈದಾಧಿಕಾರಿಗಳು ಸಹಕರಿಸಲಿದ್ದು, ತರಬೇತಿಯನ್ನು ಹಮ್ಮಿಕೊಂಡು ಗಣತಿ ಕಾರ್ಯ ಪ್ರಾರಂಭಿಸಲಾಗುವುದು. 
ಡಾ.ಕೆ.ವಿ.ಹಲಗಪ್ಪ.-ಉಪನಿರ್ದೇಶಕರು ಪಶು ವೈದ್ಯಕೀಯ ಇಲಾಖೆ.


                                                                                   ಕೊಳಚೆ ನೀರಿನಿಂದಾವೃತವಾದ ಗುಜ್ಜರಕೆರೆ: ಮಳೆಗಾಲದಲ್ಲಿ ಜರಿದ ನಿರ್ಲಕ್ಷ್ಯದ ಕಾಮಗಾರಿ
ಮಂಗಳೂರು: ೧೮೦೦ ವರ್ಷದ ಇತಿಹಾಸವಿರುವ ಧಾರ್ಮಿಕ ಹಾಗೂ ಸಾಮಾಜಿಕ ಭಾವನೆಗೆ ಕಾರಣವಾಗಿರುವ ಪವಿತ್ರ ಗುಜ್ಜರಕೆರೆಯನ್ನು ಮುಂದಿನ ಜನಾಂಗಕ್ಕೆ ಉಳಿಸಬೇಕಾದ ಅವಶ್ಯಕತೆಯಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ೩.೪೩ಎಕ್ರೆ ವಿಸ್ತೀರ್ಣದಲ್ಲಿರುವ ಗುಜ್ಜರಕೆರೆ ಶಿಥಿಲಾವಸ್ಥೆಯಲ್ಲಿದೆ. ೨ ಕೋ.ರೂ ವೆಚ್ಚದಲ್ಲಿ ನವೀಕರಣಗೊಂಡ ಗುಜ್ಜರಕೆರೆಯ ಆವರಣ ಕುಸಿದಿದೆ.
ಮಂಗಳಾದೇವಿ ಸಮೀಪದಲ್ಲಿರುವ ಗುಜ್ಜರಕೆರೆಯು ಈಗ ಕಸಕಡ್ಡಿ, ಕೊಳಚೆನೀರು, ಹುಲ್ಲುಗಳಿಂದ ಕೂಡಿದೆ. ಮಾರ್ಗನ್ಸ್‌ಗೇಟ್, ಜಪ್ಪು ಮಾರ್ಕೆಟ್ ಹಾಗೂ ಇತರ ಪ್ರದೇಶಗಳಿಂದ ಹರಿದು ಬರುವ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೆ ಈ ಕೆರೆಯ ಆವರಣ ಗೋಡೆಯತ್ತ ನುಗ್ಗಿದ ಪರಿಣಾಮ ಒತ್ತಡ ತಾಳಲಾರದೆ ಗೋಡೆ ಕುಸಿದಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಸಭೆ, ಸಮಾರಂಭ ಎಂದು ಇದೇ ದಾರಿಯಲ್ಲಿ ತಿರುಗಾಡುತ್ತಿದ್ದರೂ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ಕೆರೆಯ ಅಭಿವೃದ್ದಿ:
ಕೆರೆಯ ಅಭಿವೃದ್ಧಿಗೆಂದು ೨೦೦೮-೦೯ರಲ್ಲಿ ರೂ.೯೯.೫೦ ಲಕ್ಷ ಪ್ರಥಮ ಹಂತದ ಕಾಮಗಾರಿ ಮತ್ತು ೨೦೦೯-೧೦ರಲ್ಲಿ ೨ ನೇ ಹಂತದ ಕಾಮಗಾರಿಗಾಗಿ ರೂ. ೯೯.೫೦ ಲಕ್ಷ ಅನುದಾನ ದೊರಕಿತ್ತು. ಸ್ಥಳೀಯ ಶಾಸಕ ಎನ್.ಯೋಗೀಶ್ ಭಟ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಜೆ.ಪಾಲೆಮಾರ್ ಮುತುವರ್ಜಿ ವಹಿಸಿದ್ದರ ಪರಿಣಾಮ ಪಾಲಿಕೆ ವತಿಯಿಂದ ಕಾಮಗಾರಿ ಪ್ರಾರಂಭಗೊಂಡು, ಕೆರೆಯ ಸುತ್ತ ಆವರಣ ಗೋಡೆ ನಿರ್ಮಿಸಲಾಯಿತು. ಇಲ್ಲಿಯವರೆಗೆ ಕೆರೆಯ ಹೂಳೆತ್ತುವ ಕಾರ್ಯವಾಗಲಿಲ್ಲ.
ಕೆರೆಯ ನೀರು ಅಶುದ್ದ:
ಕೆರೆಯ ಪಕ್ಕದಲ್ಲಿ ಸುಮಾರು ೨೦೦ಕ್ಕೂ ಅಧಿಕ ಮನೆಗಳಿದ್ದು, ಕೆರೆಯ ಬದಿಯಲ್ಲಿ ಒಳಚರಂಡಿ ಹಾದು ಹೋಗಿದೆ. ಈ ಚರಂಡಿ ಬ್ಲಾಕ್ ಆದ ಸಮಯದಲ್ಲಿ ಒಳಚರಂಡಿಯನ್ನು ತೂತು ಮಾಡಿ ಈ ಕೆರೆಗೆ ಆ ಕೊಳಚೆ ನೀರನ್ನು ಬಿಟ್ಟಿದ್ದರು. ಅಲ್ಲದೆ ಇನ್ನೊಂದು ಮಾರ್ಗದಿಂದ ಚರಂಡಿಯ ಕೊಳಚೆ ನೀರು ಈ ದಿಕ್ಕಿನಲ್ಲಿಯೇ ಹರಿಯುತ್ತಿದ್ದು ಅದನ್ನು ಮೊದಲಿನ ಮಾರ್ಗಕ್ಕೆ ಜೋಡಿಸಲಾಗಿದೆ. ಮಳೆಗಾಲದ ನೀರು ಹಾದು ಹೋಗಲು ಪರ್‍ಯಾಯ ಚರಂಡಿಗಳು ಇಲ್ಲದಿರುವುದರಿಂದ ಹಾಗೂ ಸುತ್ತಲಿನ ಮನೆಯವರು ಮನೆಬಳಕೆಗೆ ಬಳಸಿದ ಕೊಳಚೆ ನೀರು ಈ ಕೆರೆಗೆ ಬಂದು ಬೀಳುವುದರಿಂದ ವೈಭವದಿಂದ ಮೆರೆಯುವ ಪವಿತ್ರವಾದ ಈ ಸ್ಥಳ ಅಶುದ್ದವಾಗಿದ್ದು ಮಾತ್ರವಲ್ಲದೆ ಇಂದು ಸೊಳ್ಳೆಗಳ ಉತ್ಫತ್ತಿಯ ತಾಣವಾಗಿದೆ.
ಹೂಳು ತೆಗೆಯದೆ, ಪಾಚಿ ಮತ್ತಿತರ ತ್ಯಾಜ್ಯ ವಸ್ತುಗಳು, ಗಲೀಜು ನೀರು ಈ ಪವಿತ್ರ ಕೆರೆಯಲ್ಲಿ ತುಂಬಿಕೊಂಡ ಪರಿಣಾಮ ದೇವಿಯ ಸ್ನಾನದ ಕೆರೆ ಈಗ ಅಶುದ್ದವಾಗಿದೆ. ಪಾಲಿಕೆಯ ವತಿಯಿಂದ ವರ್ಷಂಪ್ರತಿ ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದು, ಗುಜ್ಜರಕೆರೆಯಲ್ಲಿ ಈ ರೋಗ ಹರಡುವ ಅನೇಕ ಸೊಳ್ಳೆಗಳ ಆವಾಸ ಸ್ಥಾನವಾಗುತ್ತಿದೆ.
ಅಂತರ್ಜಲ ವೃದ್ಧಿಗೆ ಕೆರೆಗಳು ಪೂರಕ:
ನಗರದ ಸುತ್ತಲೂ ಇರುವ ಪುರಾತನ ಕೆರೆಗಳಾದ ಗುಜ್ಜರಕೆರೆ, ಎಮ್ಮೆಕೆರೆ, ಅರೆಕೆರೆ, ಓಣಿಕೆರೆ, ತಾವರೆಕೆರೆ, ಮೊಯ್ಲಿಕೆರೆ, ಕಾವೂರು ಕೆರೆ, ಪಡೀಲಿನ ಬೈರಾಡಿ ಎಲ್ಲಾ ಕೆರೆಗಳು ಮಂಗಳೂರಿನ ಕುಡಿಯುವ ಹಾಗೂ ಇತರೆ ದೈನಂದಿನ ಬಳಕೆಯ ನೀರಿನ ಕೊರತೆಯನ್ನು ನೀಗಿಸುತ್ತಿದ್ದು, ಇಂದು ಕೆಲವು ಕೆರೆಗಳು ಸಂಪೂರ್ಣ ಮುಚ್ಚಿದ್ದು, ಕೆಲವೊಂದು ತ್ಯಾಜ್ಯಗುಂಡಿಗಳಾಗಿ ಬದಲಾವಣೆಗೊಂಡಿದೆ. ಕೆರೆಗಳು ನೀರಿನ ಮೂಲ ಮಾತ್ರವಾಗಿರದೆ, ಮಾನವನ ಬದುಕಿನ ಮೂಲ ಸೆಲೆಯಾಗಿದ್ದವು. ಹೈಕೋರ್ಟ್ ರಾಜ್ಯದಲ್ಲಿರುವ ಜೀವಂತ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎನ್ನುವ ಆದೇಶ ನೀಡಿದ್ದರೂ ಅದರ ಸಂರಕ್ಷಣೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಅಂಶ ತಿಳಿದುಕೊಳ್ಳಬಹುದಾಗಿದೆ. ಅಂತರ್ಜಲ ವೃದ್ಧಿಗೆ ಕೆರೆಗಳು ಪೂರಕವಾಗಿದ್ದು ಕೆರೆಗಳಿಲ್ಲದೆ ಇಂಗುಗುಂಡಿಗಳ ನಿರ್ಮಾಣ ಮಾಡಲಾಗುತ್ತಿದೆ.
ಕೆರೆಗಳ ವೃದ್ಧಿಗೆ ಹೈಕೋರ್ಟ್‌ನ ಆದೇಶ:
ರಾಜ್ಯದಲ್ಲಿರುವ ಕೆರೆಗಳನ್ನು ಕಂದಾಯ ಇಲಾಖೆಯ ಮೂಲಕ ಸರ್ವೇ ಮಾಡಿಸಿ, ಕೆರೆಗಳ ಸುತ್ತ ತಂತಿ ಬೇಲಿ ಹಾಕಿಸಬೇಕು. ಕೆರೆ ಕಟ್ಟೆಗಳಿಗೆ ಕಲುಷಿತ ನೀರು ತ್ಯಾಜ್ಯ ವಸ್ತುಗಳು ಮಿಶ್ರಣವಾಗದಂತೆ ನೋಡಿಕೊಳ್ಳಬೇಕು ಎನ್ನುವ ಆದೇಶ ನೀಡಿದೆ. ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಸಮನ್ವಯ ಕಾಯ್ದು ಕೊಳ್ಳುವ ಉಸ್ತುವಾರಿಯನ್ನು ನ್ಯಾಯಾಂಗ ಪ್ರಾಧಿಕಾರಕ್ಕೆ ವಹಿಸಿದೆ.
ಪವಿತ್ರ ಗುಜ್ಜರಕೆರೆ:
ದ.ಕ.ಜಿಲ್ಲೆಯಲ್ಲಿ ಕೃಷಿಗೆ ಪ್ರಾದಾನ್ಯತೆ ಇದ್ದು, ಕೃಷಿಯಲ್ಲಿ ನೀರಿನ ಮಹತ್ವ ಎಲ್ಲರಿಗೂ ತಿಳಿದಿದ್ದು, ಅದಕ್ಕೆ ಹಿರಿಯರು ಕೆರೆಗಳನ್ನು ನಿರ್ಮಿಸಿಕೊಂಡಿದ್ದರು. ಜೆಪ್ಪು ಮಾರ್ಕೆಟ್ ಸಮೀಪವಿರುವ ಗುಜ್ಜರಕೆರೆ ೩.೪೩ ಎಕ್ರೆ ವಿಸ್ತೀರ್ಣವಿದ್ದು ೪೦ ಅಡಿಗಳಷ್ಟು ಆಳವಾಗಿದೆ. ಈ ಕೆರೆಯ ನೀರು ೩೦೦ ಮನೆಗಳ ಕೃಷಿ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ನವರಾತ್ರಿ ಸಂದರ್ಭದಲ್ಲಿ ಗುಜ್ಜರಕೆರೆಯಲ್ಲಿ ಮಂಗಳಾದೇವಿ ಮತ್ತು ಹಳೆಕೋಟೆ ಮಾರಿಯಮ್ಮ ದೇವರನ್ನು ಶುದ್ಧಿಕರಿಸಲಾಗುತ್ತಿತ್ತು. ಹಳೆಕೋಟೆ ಮಾರಿಯಮ್ಮ ದೇವಿಯನ್ನು ಕೆರೆಯ ಪಕ್ಕದಲ್ಲಿರುವ ಮಾರಿಯಮ್ಮ ಕಟ್ಟೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ಕುಳ್ಳಿರಿಸಿ, ಶೃಂಗರಿಸಿದ ಆಭರಣಗಳನ್ನೆಲ್ಲಾ ತೆಗೆದು ಈ ಕೆರೆಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಆದರೆ ಈಗ ಕೆರೆ ಕೊಳಚೆ ನೀರಿನಿಂದ ಆವೃತವಾಗಿದ್ದರಿಂದ ದೇವಿಯನ್ನು ನೇತ್ರಾವತಿ ಹೊಳೆಯಲ್ಲಿ ಸ್ನಾನ ಮಾಡಿಸಲಾಗುತ್ತಿದೆ.
ಸರಕಾರವು ಅಂತರ್ಜಲ ವೃದ್ದಿಗೆ ಇಂಗುಗುಂಡಿಗಳನ್ನು ನಿರ್ಮಾಣ ಮಾಡುತ್ತಿದೆ. ಹಿಂದೆ ನಗರದಲ್ಲಿ ಸಾಮಾನ್ಯ ಚಟುವಟಿಕೆಗಳಿಗೆ ಉಪಯೋಗಿಸಲು ಯೋಗ್ಯವಾದ ಕೆರೆಯ ನೀರು ಕಲುಷಿತಗೊಂಡಿರುವುದು ಮಾತ್ರವಲ್ಲ. ಈಗ ಸರಕಾರದ ಅನುದಾನ ಕಡೆಗಣಿಸಲಾಗುತ್ತಿದೆ. ಇದನ್ನು ರಕ್ಷಿಸಲು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯು ಅಭಿಯಾನವನ್ನು  ಹಮ್ಮಿಕೊಂಡಿದೆ. ಜನಪ್ರತಿನಿಧಿಗಳು ಪವಿತ್ರ ಕ್ಷೇತ್ರದ ರಕ್ಷಣೆಗೆ ಕಂಕಣಬದ್ದರಾಗಬೇಕಿದೆ.

ಬಾಕ್ಸ್:
ಸ್ಥಳೀಯ ಜನಪ್ರತಿನಿಧಿಯೊಂದಿಗೆ ಸಂದರ್ಶನಕ್ಕೆ ಸಮಯವನ್ನು ಅವರೆ ನಿಗದಿ ಮಾಡಿದ್ದರೂ ಪತ್ರಕರ್ತರೊಂದಿಗೆ ಈವಿಷಯದ ಚರ್ಚೆಗೆ ಅವಕಾಶ ನೀಡದಿರುವುದು ಅವರಿಗೆ ಈ ಕುರಿತು ಇರುವ ಜನಪರ ಕಾಳಜಿಯನ್ನು ತೋರಿಸುತ್ತದೆ. ಅಲ್ಲದೇ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರರು ಕಳೆದ ಮೂರ್‍ನಾಲ್ಕು ದಿನಗಳಿಂದ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಗುಜ್ಜರಕೆರೆಯ ಪಕ್ಕದಲ್ಲಿ ವಾಸವಾಗಿರುವ ಜನತೆಯ ಆಸೆ ಯಾವಾಗ ಫಲಿಸುವುದೋ ಕಾದು ನೋಡಬೇಕಿದೆ.

ಗುಜ್ಜರಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದರೆ ಮಂಗಳೂರಿನ ಕೆಲವೊಂದು ಪ್ರದೇಶಕ್ಕೆ ನೀರು ಸರಬರಾಜು ಮಾಡಬಹುದು. ಕಾಮಗಾರಿ ಶಿಥಿಲವಾಗಿ ಜರಿದ ಪರಿಣಾಮ ಕೊಳಚೆ ಹಾಗೂ ಮಳೆಯ ನೀರು ಗುಜ್ಜರಕೆರೆ ಸೇರಿ ಅಪವಿತ್ರವಾಗಿದೆ. ಜನಪ್ರತಿನಿಧಿಗಳು ಈ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಇಲ್ಲಿ ವಾಸವಿರುವ ಪ್ರತಿಯೊರ್ವರಿಗೂ ನವರಾತ್ರಿಯ ಸಂದರ್ಭದಲ್ಲಿ ಗುಜ್ಜರಕೆರೆಯಲ್ಲಿ ನಡೆಯುತ್ತಿದ್ದ ಹಿಂದಿನ ಸವಿನೆನಪುಗಳು ಮರುಕಳಿಸುತ್ತದೆ.
ಪಿ.ನೇಮು ಕೊಟ್ಟಾರಿ-ಕಾರ್ಯದರ್ಶಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

೮ ವರ್ಷಗಳಿಂದ ಹಾಸಿಗೆ ಹಿಡಿದ ಸದಾಶಿವ್
ಸಮಾಜದಿಂದ ಬೇಕು ನೆರವಿನ ಹಸ್ತ

ಮಂಗಳೂರು: ಮನುಷ್ಯನಿಗೆ ಕಷ್ಟ ಬರುವುದು ಸಹಜ. ಕಷ್ಟಗಳ ಸರಮಾಲೆ ಎದುರಾದಾಗ ಪಡುವ ನೋವಿನಿಂದ ಸುಧಾರಿಸಿಕೊಳ್ಳುವುದೆ ಕಷ್ಟಕರವಾಗಿರುವಾಗ ರಸ್ತೆ ಅಪಘಾತಕ್ಕೆ ಸಿಲುಕಿ ೮ ವರ್ಷಗಳಿಂದ ಸೊಂಟದ ಸ್ವಾಧೀನವನ್ನೆ ಕಳೆದುಕೊಂಡು ನಡೆದಾಡಲು ಸಾಧ್ಯವಿಲ್ಲದೆ ವೀಲ್‌ಚೇರ್‌ನ್ನು ಅವಲಂಬಿಸಿ ಕತ್ತಲೆಯಲ್ಲಿಯೇ, ಎದುರಾದ ನೋವುಗಳ ಸರಮಾಲೆಗೆ ಉತ್ತರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ  ಉರ್ವ ಮಾರಿಗುಡಿಯ ನಿವಾಸಿ ಕೆ. ಸದಾಶಿವ ಶೆಟ್ಟಿ. ಬೆಳೆಯುತ್ತಿರುವ ನಗರಿಯಲ್ಲಿ ದೈನಂದಿನ ಜೀವನ ನಿರ್ವಹಣೆ ಹಾಗೂ ಹೊಟ್ಟೆಪಾಡಿಗೆ ಹೆಣಗಾಡುವ ಜೊತೆಗೆ  ಸಾವಿರಾರು ರೂಪಾಯನ್ನು ಮಾತ್ರೆಗಾಗಿ ಖರ್ಚು ಮಾಡುತ್ತಿದ್ದಾರೆ. ಜೀವನದಲ್ಲಿ ನೋವು ತುಂಬಿಕೊಂಡೇ ನಗುವನ್ನು ಬೀರುತ್ತಿದ್ದಾರೆ.
ಹುಟ್ಟೂರು ಬಿಟ್ಟು ನಗರ ಸೇರಿದ ಶೆಟ್ರು:
ಬೆಳ್ತಂಗಡಿ ಕನ್ನಡಿಕಟ್ಟೆಯವರಾದ ಸದಾಶಿವ್ ಐದೂವರೆ ವರ್ಷದಲ್ಲಿರುವಾಗಲೇ ತಂದೆ  ಅಲ್ಲಿನ ಜಾಗ ಮಾರಿದ ಕಾರಣದಿಂದ ಕುಟುಂಬದವರೊಂದಿಗೆ ಉರ್ವ ಮಾರಿಗುಡಿ ಸಮೀಪದಲ್ಲಿ ಬಂದು ವಾಸವಾಗಿದ್ದಾರೆ. ಹೇಳಿಕೊಳ್ಳುವುದಕ್ಕೆ ಸ್ವಂತ ಮನೆ ಬಿಟ್ಟರೆ ಬೇರೆ ಯಾವ ಆಸ್ತಿಯೂ ಇವರಲ್ಲಿಲ್ಲ. ಕುಟುಂಬದ ಕಣ್ಮಣಿಯಾಗಿ ಇಳಿ ವಯಸ್ಸಿನಲ್ಲಿ ತಂದೆ ತಾಯಿಗೆ ರಕ್ಷಣೆಯಾಗಿರಬೇಕಿದ್ದ ಒಬ್ಬನೆ ಮಗ ತಂದೆಯ ಅಪಘಾತಕ್ಕಿಂತ ೬ ತಿಂಗಳು ಮೊದಲು ಲೇಡಿಹಿಲ್‌ನ ಕರಾವಳಿ ಉತ್ಸವ ಮೈದಾನ ಸಮೀಪ ನಡೆದ ಬೈಕ್ ಅಪಘಾತದಲ್ಲಿ ತೀರಿಕೊಂಡಿದ್ದನು. ಹೆಂಡತಿ ನಗರದಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ  ಕೂಲಿ ಕೆಲಸ ಮಾಡುತ್ತಾ, ಸದಾಶಿವರನ್ನು ಜತನದಿಂದ  ನೋಡಿಕೊಳ್ಳುತ್ತಿದ್ದಾರೆ.
೫ ವರ್ಷ ಹಂಪನಕಟ್ಟೆಯಲ್ಲಿರುವ ಟೈಲರಿಂಗ್ ಶಾಫ್‌ನಲ್ಲಿ ದರ್ಜಿಯಾಗಿ ಕೆಲಸ ಮಾಡಿದ ಇವರು ಡ್ರೈವಿಂಗ್ ಕಲಿತು ಟೆಂಪೊ ರಿಕ್ಷಾ ಓಡಿಸುತ್ತಾ ಹೆಂಡತಿ ಮಗನೊಂದಿಗೆ ಸುಖಿಜೀವನ ನಡೆಸುತ್ತಿದ್ದರು. ಈ ಸಂತೋಷ ಹೆಚ್ಚು ಕಾಲವಿರಲಿಲ್ಲ. ೨೦೦೪ರ ಕರಾವಳಿ ಉತ್ಸವದ ಸಂದರ್ಭ ಸ್ನೇಹಿತನೊಂದಿಗೆ ಉತ್ಸವ ನೋಡಿ ಬರುತ್ತಿದ್ದಾಗ ಇವರ ಏಕಮಾತ್ರ ಪುತ್ರ ಬೈಕ್ ಅಪಘಾತದಲ್ಲಿ ಮೃತನಾಗಿದ್ದ. ಮಗ ಸತ್ತ ದುಃಖ ಮರೆಯದಿದ್ದರೂ ಜೀವನ ನಿರ್ವಹಣೆಗೆ ಚಾಲಕ ವೃತ್ತಿ ಮಾಡಲೇಬೇಕಾಗಿತ್ತು. ವಿಧಿಯಾಟವೇ ಬೇರೆಯಾಗಿದ್ದು ಜುಲೈ ೨೦೦೪ರ ಆ ದಿನದಂದು ವಿಧಿ ಇನ್ನೊಂದು ಹೊಡೆತ ನೀಡಿತ್ತು. ಉರ್ವ ಮಾರಿಗುಡಿಯ ದ್ವಾರದ ಬಳಿ ಟೆಂಪೋದ ಬ್ರೇಕ್‌ಫೇಲ್ ಆಗಿ ದುರಂತಕ್ಕೀಡಾಗಿ ಸೊಂಟದ ಕೆಳಭಾಗದ ಅಸ್ತಿತ್ವವನ್ನೇ ಕಳೆದುಕೊಂಡು ಗಾಲಿ ಕುರ್ಚಿಯನ್ನು ಅವಲಂಬಿಸಬೇಕಾಯಿತು. ರಿಕ್ಷಾ ಬಿದ್ದ ಪರಿಣಾಮದಿಂದ ಕಿಡ್ನಿ ವೈಫಲ್ಯ, ಸೊಂಟದ ಮೂಳೆ ಮುರಿದದ್ದರಿಂದ ದೇಹ ಭಾದೆಯನ್ನು ಪೈಪ್ ಮೂಲಕವೇ ಮಾಡಬೇಕಿದೆ. ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿರುವ ಇವರು ಹೆಂಡತಿಯ ಆದಾಯದಿಂದ ದಿನದೂಡುತ್ತಿದ್ದಾರೆ.
ಸಂಘಪರಿವಾರ ಸಹಕಾರ: 
ತಿಂಗಳಿಗೆ ಆಸ್ಪತ್ರೆಯ ಖರ್ಚು ಹಾಗೂ ಮಾತ್ರೆಗಾಗಿಯೇ ೪ ರಿಂದ ೫ಸಾವಿರದವರೆಗೆ ವ್ಯಯವಾಗುತ್ತಿದ್ದು ಸರಕಾರದಿಂದ ದೊರಕುವ ಸಾವಿರ ರೂಪಾಯಿ ಯಾವುದಕ್ಕೂ ಸಾಲುತ್ತಿಲ್ಲ. ವಿಕಾಸ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಇವರ ಮನೆಗೆ ಬಂದು ವೈದ್ಯಕೀಯ ಚಿಕಿತ್ಸೆ ಹಾಗೂ ಸಲಹೆ ನೀಡುತ್ತಿದ್ದರು. ಉರ್ವ ಬಜರಂಗದಳ, ವಿಶ್ವಹಿಂದು ಪರಿಷತ್‌ನ ವತಿಯಿಂದ ತಿಂಗಳಿಗೆ ಸ್ವಲ್ಪ ಧನಸಹಾಯ ನೀಡುತ್ತಿದ್ದಾರೆ. ಮಾತಾ ಅಮೃತಾನಂದಮಯಿ ಟ್ರಸ್ಟ್‌ನಿಂದ ೩ ತಿಂಗಳಿಗೆ ೩೦೦ ರೂಗಳಂತೆ ವರ್ಷಕ್ಕೆ ೧೨೦೦ರೂಗಳನ್ನು ಪಡೆಯುತ್ತಿದ್ದಾರೆ. ಒಡಿಯೂರು ಸಂಸ್ಥೆಯಿಂದ ರೂ.೩೦೦೦ ಸಿಕ್ಕಿದ್ದು ಇವರ ಸಂಕಷ್ಟಕ್ಕೆ ಒಯಸಿಸ್ ಆದರೂ , ಜೀವನ ನಿರ್ವಹಣೆಯನ್ನು ಸಾಕಷ್ಟು ಕಷ್ಟದಲ್ಲಿಯೇ ಸಾಗಿಸಬೇಕಾಗಿದೆ.
ಗಂಡನ ಕಷ್ಟದಲ್ಲಿ ಭಾಗಿಯಾದ ದಿಟ್ಟ ಮಹಿಳೆ ಗೀತಕ್ಕ:
ಗೀತಾ ಶೆಟ್ಟಿ ಲೇಡಿಹಿಲ್‌ನಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ಸಣ್ಣಪುಟ್ಟ ಕಾರ್ಯ ನಿರ್ವಹಿಸುತ್ತಾ ತಿಂಗಳಿಗೆ ೧,೫೦೦ ಸಂಪಾದನೆ ಮಾಡಿ, ಸೊಂಟದ ಸ್ವಾಧೀನತೆ ಕಳೆದುಕೊಂಡ ಗಂಡನ ಸೇವೆಯಲ್ಲಿ ನಿರತರಾಗಿದ್ದಾರೆ. ವೈದ್ಯರು ಮನೆಗೆ ಬಂದು ತಿಂಗಳಿಗೊಮ್ಮೆ ಪೈಪ್ ಬದಲಿಸಿ ಹೋದರೆ ಅವರಿಗೆ ರೂ.೨೦೦ ಕೊಡುವುದಲ್ಲದೆ, ಟಿಟಿ ಇಂಜೆಕ್ಷನ್‌ಗೆ ೭೦ ರೂ.ನೀಡಬೇಕು. ಪುತ್ರನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಸೊಂಟದ ಸ್ವಾಧೀನತೆ ಕಳೆದುಕೊಂಡು ಹಾಸಿಗೆ ಹಿಡಿದಿರುವ ಗಂಡ ಇನ್ನೊಂದೆಡೆ. ಈ ರೀತಿ ಸಂಸಾರ ನಿರ್ವಹಣೆಗೆ ಪಡುತ್ತಿರುವ ಕಷ್ಟದಲ್ಲೂ ಎಲ್ಲರನ್ನೂ ನಗುಮುಖದಿಂದಲೇ ಸ್ವಾಗತಿಸುವವರು ಗೀತಕ್ಕ. ಸಮಾಜದಲ್ಲಿ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ಆಶ್ರಮಗಳಿಗೆ ಸೇರಿಸುವ ನಗರಜೀವನದ ಜಂಜಾಟದಲ್ಲಿ ತನಗೆ ನೆರಳಾಗಬೇಕಿದ್ದ ಗಂಡನಿಗೆ ನೆರಳಾದ ದಿಟ್ಟ ಮಹಿಳೆ ಗೀತಕ್ಕ ಎಂದರೂ ತಪ್ಪಿಲ್ಲ.
ವೈದ್ಯರ ಖರ್ಚು ಹಾಗೂ ಮಾತ್ರೆಗಾಗಿ ಸಾವಿರಾರು ರೂಪಾಯಿ ವ್ಯಯಿಸುತ್ತಿರುವ ಇವರ ಕುಟುಂಬಕ್ಕೆ ಆರ್ಥಿಕ ಬೆಂಬಲ ಬೇಕಾಗಿರುವುದು ಸತ್ಯ. ಸಹೃದಯಿಗಳು ಉರ್ವ ಮಾರಿಗುಡಿ ಸಮೀಪ ಹೋಗಿ ಕೇಳಿದರೆ ಯಾರಾದರೂ ಅವರ ಮನೆ ತೋರಿಸುತ್ತಾರೆ.

ಹಿಂದೂ ಸಂಘಟನೆ ನಮ್ಮ ಕುಟುಂಬಕ್ಕೆ ಆಧಾರವಾಗಿದ್ದು ಹೊರತು ಪಡಿಸಿದರೆ ನಮ್ಮದೆ ಸಮುದಾಯ ಸಂಘಟನೆಯಿಂದ   ಸಹಾಯ ದೊರಕಿದ್ದರೆ ಆಗುತ್ತಿತ್ತು ಎಂಬ ನಿರೀಕ್ಷೆಯಿತ್ತು. ಸರಕಾರದಿಂದ ಸಿಗುವ ಸಾವಿರ ರೂಪಾಯಿ ತಿಂಗಳ ಔಷಧಿಗೂ ಸಾಲುವುದಿಲ್ಲ. ಹೆಂಡತಿಗೆ ಆಸರೆಯಾಗಬೇಕಿದ್ದ ನಾನು ಅವಳ ಅನುಚರಣೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಮಗನನ್ನು ಕಳೆದುಕೊಂಡ ದುಃಖ ಮಾಸುವಾಗಲೆ ಈ ದುರ್ಘಟನೆಗೆ ಒಳಗಾಗಿ ಹಾಸಿಗೆ ಹಿಡಿದು ೮ ವರ್ಷ ೨ತಿಂಗಳು ಕಳೆದಿದೆ. ಸುಖಿಯಾಗಿರಬೇಕಿದ್ದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಕೆ.ಸದಾಶಿವ ಶೆಟ್ಟಿ -
ಇವರಿಗೆ ನೀವು ನೆರವಾಗಲು ಬಯಸುವಿರಾ?ಸಂಪರ್ಕಿಸಬಹುದಾದ ಮೊಬೈಲ್‌ದೂರವಾಣಿ ಸಂಖ್ಯೆ ೯೯೮೦೪೬೨೨೬೩




ಗ್ಯಾಸ್ ಟ್ರಬಲ್‌ನಿಂದ ವಸತಿ ನಿಲಯದ ಸಂಜೆಯ ಉಪಾಹಾರಕ್ಕೆ ಬೀಳುವುದೇ ಕತ್ತರಿ?

ಮಂಗಳೂರು: ಕೇಂದ್ರ ಯುಪಿಎ ಸರಕಾರ ಪೆಟ್ರೋಲಿಯಂ ತೈಲೋತ್ಪನ್ನ ಹಾಗೂ ಜೀವನ ನಿರ್ವಹಣೆಗೆ ಅಗತ್ಯವಾದ ಮೂಲಭೂತ ವಸ್ತುಗಳ ಬೆಲೆಯೇರಿಕೆ ಮಾಡಿದ್ದು ಮದ್ಯಮ ವರ್ಗದ ಜನತೆಯ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರಿಂದ ಚೇತರಿಸಿಕೊಳ್ಳುವ ಮುಂಚೆಯೆ ಸರಕಾರದ ವತಿಯಿಂದ ಸಬ್ಸಿಡಿಯಲ್ಲಿ ವರ್ಷಕ್ಕೆ ಕೇವಲ ೬ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎನ್ನುವ ಆದೇಶ ಹೊರಡಿಸಿದೆ. ಕೇಂದ್ರ ಸರಕಾರದ ಈ ನೀತಿಯಿಂದಾಗಿ ಸರ್ವಶಿಕ್ಷಾ ಅಭಿಯಾನದ ಅಕ್ಷರ ದಾಸೋಹದಲ್ಲಿ ಹಾಗೂ ಸರಕಾರದಿಂದ ನಡೆಸಲ್ಪಡುವ ವಸತಿ ನಿಲಯಕ್ಕೆ ಮುಳುವಾಗಿ ಪರಿಣಮಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಮತ್ತು ಇತರ ವಸತಿ ನಿಲಯದಲ್ಲಿ ಈಗಾಗಲೆ ನೀಡುತ್ತಿರುವ ಮದ್ಯಾಹ್ನದ ಉಪಹಾರ ನಿಲ್ಲಿಸುವ ಕುರಿತು ಚರ್ಚಿಸಲಾಗುತ್ತಿದೆ. ಕೇಂದ್ರ ಸರಕಾರದ ವರ್ಷಕ್ಕೆ ಕೇವಲ ೬ ಸಿಲಿಂಡರ್ ಎನ್ನುವ ನೀತಿ ಹಾಸ್ಟೆಲ್ ವಿದ್ಯಾರ್ಥಿಗಳ ಪಾಲಿಗೆ ಒಂದು ಹೊತ್ತಿನ ಉಪಾಹಾರಕ್ಕೆ ಕುತ್ತು ತಂದಿದೆ.
ದ.ಕ.ಜಿಲ್ಲೆಯಲ್ಲಿ ೫೬ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಪ್ರಿ-ಮೆಟ್ರಿಕ್ ಹಾಗೂ ಕಾಲೇಜು ವಸತಿನಿಲಯದಲ್ಲಿ ೪,೩೭೫ ವಿದ್ಯಾರ್ಥಿಗಳು ಸೌಲಭ್ಯ ಪಡೆದಿದ್ದಾರೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದಲೂ ಜಿಲ್ಲೆಯಲ್ಲಿ ವಸತಿ ನಿಲಯಗಳು ಕಾರ್ಯಚರಿಸುತ್ತಿವೆ. ೪ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ೧೦೦೦ ವಿದ್ಯಾರ್ಥಿಗಳು, ೧ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ೫೬೦ ವಿದ್ಯಾರ್ಥಿಗಳು ಹಾಗೂ ಅಲ್ಪಸಂಖ್ಯಾತ ೩ ವಸತಿ ನಿಲಯದಲ್ಲಿ ಸುಮಾರು ೨೦೦ವಿದ್ಯಾರ್ಥಿಗಳು ವಸತಿ ನಿಲಯದ ಸೌಲಭ್ಯ ಪಡೆಯುತ್ತಿದ್ದಾರೆ.
ಸರಕಾರದ ವತಿಯಿಂದ ವಸತಿ ನಿಲಯದಲ್ಲಿ ಉಳಿಯುವ ವಿದ್ಯಾರ್ಥಿಗೆ ೫ ರಿಂದ ೧೦ ನೇ ತರಗತಿಯವರೆಗೆ ರೂ.೭೫೦ ಹಾಗೂ ನಂತರದ ವಿದ್ಯಾರ್ಥಿಗಳಿಗೆ ರೂ.೮೫೦ರವರೆಗೆ ವೆಚ್ಚ ಮಾಡುತ್ತಿದೆ. ಈ ಮೊತ್ತದಲ್ಲಿಯೆ ಆಹಾರ, ವಸತಿ, ಗ್ಯಾಸ್ ಸೌಲಭ್ಯ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಬೇಕಿದೆ. ರಾಜ್ಯದ  ವಸತಿ ನಿಲಯದಲ್ಲಿ ನೀಡುತ್ತಿರುವ ಆಹಾರ ಸೌಲಭ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವಾದ ಮೀನು, ಮೊಟ್ಟೆ, ಕೋಳಿ ಇತ್ಯಾದಿ ಆಹಾರ ನೀಡಲಾಗುತ್ತಿದೆ. ಬೆಳಗ್ಗಿನ ಉಪಾಹಾರ, ಮದ್ಯಾಹ್ನದ ಊಟ, ಸಂಜೆಯ ಉಪಾಹಾರ ಮತ್ತು ರಾತ್ರಿ ಊಟ ನೀಡುತ್ತಿದೆ. ಕೇಂದ್ರ ಸರಕಾರ ವರ್ಷಕ್ಕೆ ನೀಡುತ್ತಿರುವ ೬ ಸಿಲಿಂಡರ್‌ನ ಬಿಸಿಯಲ್ಲಿಯೇ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೇಲ್ವಿಚಾರಕರು ಇನ್ನು ಮುಂದೆ ಸಂಜೆಯ ಉಪಾಹಾರ ಕಡಿತಗೊಳಿಸಲಿದ್ದೇವೆ ಎನ್ನುವ ಆಘಾತಕಾರಿ ಅಂಶವನ್ನು ಗಮನಕ್ಕೆ ತಂದಿದ್ದಾರೆ.
ಸರಕಾರದಿಂದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಈಗಿರುವ ಮೊತ್ತದಂತೆ ಹಣ ವ್ಯಯ ಮಾಡಿದರೆ ಮುಂದಿನ ದಿನದಲ್ಲಿ ಗ್ಯಾಸ್ ಸಿಲಿಂಡರ್‌ನ ಕೊರತೆ ಕಂಡುಬರುತ್ತದೆ. ಕೇಂದ್ರದಿಂದ ಹೆಚ್ಚುವರಿ ಸಿಲಿಂಡರ್ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಆದರೂ ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ಕರಾವಳಿಯಲ್ಲಿ ಗ್ಯಾಸ್‌ನ ಕೊರತೆ ಕಂಡುಬರುವುದು ಸಹಜ. ಇಲ್ಲಿರುವ ಹಾಸ್ಟೆಲ್‌ಗಳಲ್ಲಿ ಕುಚ್ಚಲು ಅಕ್ಕಿಯನ್ನು ಬಳಸುವುದರಿಂದ ಗ್ಯಾಸ್‌ನ ಅವಶ್ಯಕತೆ ಹೆಚ್ಚಾಗಿದೆ. ಅಕ್ಟೋಬರ್ ರಜಾ ಅವಧಿಯಾಗಿರುವುದರಿಂದ ವಸತಿ ನಿಲಯದಲ್ಲಿ ಈ ತಿಂಗಳು ಗ್ಯಾಸ್‌ನ ತೊಂದರೆ ಕಾಣಿಸಿಕೊಳ್ಳದಿದ್ದರೂ ಇದಕ್ಕೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ತಿಂಗಳು ಇದರ ಪರಿಣಾಮ ಕಾಣಿಸಿಕೊಳ್ಳುತ್ತದೆ ಎನ್ನುವ ಭೀತಿ ಇಲಾಖಾ ವಲಯದಲ್ಲಿದೆ. ವಿದ್ಯಾರ್ಥಿಗಳಲ್ಲಿ ಚರ್ಚಿಸಿರುವ ಅಂಶವನ್ನು ಅಧಿಕಾರಿಗಳಲ್ಲಿ ಕೇಳಿದರೆ ಸಂಜೆಯ ಉಪಾಹಾರವನ್ನು ಕಡಿತಗೊಳಿಸುವುದಿಲ್ಲ ಎನ್ನುವ ಉತ್ತರ ಬಂದಿದೆ.
ಕೇಂದ್ರ ಸರಕಾರದ ಗ್ಯಾಸ್‌ನ ನೀತಿಯಿಂದ ಎಲ್ಲಾ ವಲಯದ ಮೇಲೂ ಅದರ ಬಿಸಿ ತಟ್ಟಿದೆ ಎನ್ನುವುದರಲ್ಲಿ ಸಂಶಯವಿಲ್ಲಾ...ಇದಕ್ಕೆ ಶೀಘ್ರದಲ್ಲಿ ಪರಿಹಾರ ಕಾಣಬೇಕಾದ ಅಗತ್ಯವಿದೆ.

ಬಾಕ್ಸ್:
ಹಾಸ್ಟೆಲ್‌ಗಳಲ್ಲಿ ಈಗಿರುವ ಆಹಾರ ಪದ್ದತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸಂಜೆ ಉಪಹಾರವನ್ನು ನಿಲ್ಲಿಸದೆ ಇದಕ್ಕೆ ಇಲಾಖಾ ವಲಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಅರುಣ್ ಪುರ್ಟಾಡೋ-ಸಮಾಜ ಕಲ್ಯಾಣ ಅಧಿಕಾರಿ ಮಂಗಳೂರು

Thursday 25 October 2012

ಕಾನೂನು ಉಲ್ಲಂಘನೆ: ಖಾಸಗಿ ಆಟೋಗಳಲ್ಲಿ
ಪ್ರಯಾಣಿಕರ ಸಾಗಾಟಕ್ಕೆ ಬೇಕಿದೆ ಕಡಿವಾಣ

*ಸಂದೇಶ ಶೆಟ್ಟಿ  ಆರ್ಡಿ
ಮಂಗಳೂರು: ಮನುಷ್ಯನ ದೈನಂದಿನ ಓಡಾಟಕ್ಕೆ ಆಟೋರಿಕ್ಷಾ ಅಗತ್ಯವಾಗಿದ್ದು, ಹಳದಿ ಪಟ್ಟಿಯ ಆಟೋಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ನಗರದಲ್ಲಿ ಪ್ರೈವೇಟ್ ಆಟೋಗಳ ಸಂಖ್ಯೆ ವಿಪರೀತವಾಗಿದೆ. ಸ್ವಂತ ಬಳಕೆಗೆಂದು ಸಾರಿಗೆ ಇಲಾಖೆಗೆ ವಿಶೇಷ ಅಫಿದಾವಿತ್ ನೀಡಿ ಲೈಸನ್ಸ್ ಪಡೆದುಕೊಂಡು ಇಂದು ಕಾನೂನಿನ ಕಣ್ಣಿಗೆ ಮಣ್ಣೆರಚಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾರೆ. ಖಾಸಗಿ ಆಟೋ ಚಾಲಕರು ಹೊಟ್ಟೆಪಾಡಿಗೆ ಈ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಕೊಂಡು ಸುಮ್ನಿದ್ದರೂ, ಖಾಸಗಿ ಆಟೋ ಪ್ರಯಾಣಿಕರಿಗೆ ಮಾತ್ರ ಯಾವ ಸುರಕ್ಷತೆ ಇಲ್ಲದಿರುವುದರ ಬಗ್ಗೆ ನಾಗರಿಕರು ಹಾಗೂ ಸಾರಿಗೆ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.
ಮಂಗಳೂರು ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿರುವ ಬಂಟ್ವಾಳ, ವಿಟ್ಲ, ಮೂಡಬಿದ್ರೆ, ಉಳ್ಳಾಲ, ಸುರತ್ಕಲ್, ಮೂಲ್ಕಿ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ೨೦೦ರಿಂದ ೩೦೦ ಖಾಸಗಿ ಆಟೋಗಳಾಗಿ ಪರಿವರ್ತನೆ ಆಗಿವೆ. ಅಫಿದಾವಿತ್ ನೀಡುವಾಗ ಮಾಲಕರಿಗೆ ಸೂಚನೆ ನೀಡಿದ್ದರೂ ಸ್ವ-ಉದ್ಯೋಗಕ್ಕೆ (ಬಾಡಿಗೆಗೆ) ಉಪಯೋಗಿಸದೆ ಸ್ವಂತ ಬಳಕೆಗೆ ಖಾಸಗಿ ಆಟೋ ಬಳಸಬೇಕು ಎಂದು ತಿಳಿಸಲಾಗಿದೆ. ಸ್ವ-ಉದ್ಯೋಗಕ್ಕಾಗಿಯೆ ಹಳದಿ ಪಟ್ಟಿ ಹೊಂದಿರುವ ಆಟೋರಿಕ್ಷಾ ಕಾರ್ಯ ನಿರ್ವಹಿಸುತ್ತಿವೆ. ಇಲಾಖೆ ವ್ಯಾಪ್ತಿಯಲ್ಲಿ ೧೯,೫೦೦ ಹಾಗೂ  ಮಂಗಳೂರು ತಾಲೂಕಿನಲ್ಲಿ ೫,೬೮೩ ಹಳದಿ ಪಟ್ಟಿಯ ಆಟೋಗಳಿವೆ. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ನಗರ ಭಾಗಕ್ಕೆ ವಲಯ-೧ಎಂದು ಗುರುತಿಸಿ ಇದು ನೀಲಿ ಪಟ್ಟಿ, ಬಿಳಿ ಸಂಖ್ಯೆ ಹೊಂದಿದ್ದು ಈಗ ೫,೬೩೩ ಆಟೋರಿಕ್ಷಾಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಮಾಂತರದಲ್ಲಿ ವಲಯ-೨ ಎಂದು ಗುರುತಿಸಲಾಗಿದ್ದು ಹಳದಿ ಪಟ್ಟಿ , ಕಪ್ಪು ಸಂಖ್ಯೆಯನ್ನು ಒಳಗೊಂಡಿದೆ. ಖಾಸಗಿ ರಿಕ್ಷಾಗಳು ಬಿಳಿಪಟ್ಟಿ ಹೊಂದಿದ್ದು ಅವುಗಳನ್ನು ಗುರುತಿಸಬಹುದಾಗಿದೆ.
ಖಾಸಗಿ ಆಟೋರಿಕ್ಷಾದಲ್ಲಿ ಪ್ರಯಾಣಿಸುವುದು ಕಾನೂನು ವಿರೋಧಿ:
ಹಳದಿ ಪಟ್ಟಿಯ ಆಟೋದ ಲೈಸನ್ಸ್ ಪಡೆದ ಮಾಲಕರು ಸ್ವಂತ ಉಪಯೋಗಕ್ಕೆ ವಿಶೇಷ ಅಫಿದಾವಿತ್ ಸಲ್ಲಿಸಿ (ಹೊಸ ಆಟೋ ಹೊರತು ಪಡಿಸಿ) ಖಾಸಗಿಯಾಗಿ ಮಾರ್ಪಾಟು ಮಾಡಿಕೊಂಡಿರುತ್ತಾರೆ. ಖಾಸಗಿ ಆಟೋದಲ್ಲಿ ಎಫ್‌ಸಿ, ಪರ್ಮಿಟ್, ಮೆಡಿಕ್ಲೈಮ್ ಯಾವುದು ಇರುವುದಿಲ್ಲ. ಕುಟುಂಬಿಕರನ್ನು ಹೊರತು ಪಡಿಸಿ ಇತರ ಪ್ರಯಾಣಿಕರು ಖಾಸಗಿ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಪಘಾತವಾದರೆ ಸರಕಾರದಿಂದ ಯಾವುದೆ ಪರಿಹಾರ ದೊರಕುವುದಿಲ್ಲ. ಖಾಸಗಿ ವಾಹನದಲ್ಲಿ ಕೊಂಡೊಯ್ಯುವ ಸಾಹಸಕ್ಕೆ ಮನಮಾಡುವ ಮಾಲಕನಿಗೆ ರೂ.೨೦೦೦ ದಂಡ ನಿಗದಿ ಮಾಡಿದ್ದರೂ, ಕೇಸು ದಾಖಲಿಸಿ ಕೋರ್ಟ್‌ಗೆ ಹಾಕಲಾಗುತ್ತದೆ. ಆದರೂ ಕೂಡ ನಗರದ ಹೊರಭಾಗದಲ್ಲಿ ಕಾನೂನಿಗೆ ಮಣ್ಣೆರಚಿ (ಕಸಬ ಬೇಂಗ್ರೆ)ಪ್ರಯಾಣಿಕರನ್ನು ಸಾಗಿಸುವ ಅಂಶ ತಿಳಿದುಬಂದಿದೆ.
ಸರಕಾರದಿಂದ ಸಬ್ಸಿಡಿ:
೩೧ ಮಾರ್ಚ್ ೨೦೦೦ದೊಳಗೆ ನೋಂದಾವಣೆಗೊಂಡ ೨ಸ್ಟ್ರೋಕ್‌ನ ಆಟೋರಿಕ್ಷಾದ ಆರ್‌ಸಿ ಕ್ಯಾನ್ಸಲ್ ಮಾಡಿ ಅಥವಾ ಮಾರಾಟ ಮಾಡಿ ಹೊಸದಾಗಿ ಬಂದಿರುವ ೪ ಸ್ಟ್ರೋಕ್‌ನ ಎಲ್‌ಪಿಜಿಯುಕ್ತ ಆಟೋ ಖರೀದಿಸಿದಾಗ ಆ ಮಾಲಕರಿಗೆ ರೂ.೧೫,೦೦೦ ಸಬ್ಸಿಡಿ ನೀಡಲಾಗುತ್ತದೆ. ಪ್ರಾರಂಭದಲ್ಲಿ ಸಬ್ಸಿಡಿ ರೂ.೨೦೦೦ಇದ್ದು ೨೦೦೮-೦೯ರಿಂದ ರೂ.೧೫,೦೦೦ ಆಗಿದೆ. ಮಂಗಳೂರು ಇಲಾಖಾ ವ್ಯಾಪ್ತಿಯಲ್ಲಿ ೫೦೦ಕ್ಕೂ ಹೆಚ್ಚು ಹಳೆ ರಹದಾರಿ ಅಳವಡಿಸಿದ ಹೊಸ ಆಟೋರಿಕ್ಷಾಗಳು ಚಲಿಸುತ್ತಿವೆ. ಅಲ್ಲದೆ ೧೫ ವರ್ಷಕ್ಕೂ ಮೇಲ್ಪಟ್ಟ ಹಳೆ ಆಟೋವನ್ನು ಬದಲಾಯಿಸಬೇಕು ಎನ್ನುವ ನಿಯಮವಿರುವುದರಿಂದ ಹಳೆ ಆಟೋವನ್ನು ಖಾಸಗಿಯಾಗಿ ಬಳಸುತ್ತೇವೆ ಎನ್ನುವ ವಾದ ಮಾಡುವ ಮಾಲಕರು ಇದ್ದಾರೆ ಎನ್ನುವ ಮಾತು ಇಲಾಖಾ ವಲಯದಲ್ಲಿ ಕೇಳಿ ಬರುತ್ತಿದೆ. ಅದುವೆ ಈಗ ಕಾನೂನಿಗೆ ಮಾರಕವಾಗಿದೆ.
ಆಟೋಗಳಲ್ಲಿ ವಿಪರೀತ ಮಕ್ಕಳ ಸಾಗಾಟ:
ಶಾಲಾ ಮಕ್ಕಳನ್ನು ಕೊಂಡೊಯ್ಯುವ ಆಟೋ ಹಾಗೂ ಓಮ್ನಿಗಳಲ್ಲಿ ಅವುಗಳಲ್ಲಿರುವ ಸೀಟುಗಳ ವ್ಯವಸ್ಥೆಗೆ ತಕ್ಕಂತೆ ಮಕ್ಕಳನ್ನು ತುಂಬಿಸಿಕೊಳ್ಳಬೇಕು ಎನ್ನುವ ಕಾನೂನು ಇಲಾಖೆ ವತಿಯಿಂದ ನೀಡಲಾಗಿತ್ತು. ಆಟೋದಲ್ಲಿ ೬ ಹಾಗೂ ಓಮ್ನಿಯಲ್ಲಿ ಸೀಟುಗಳಿಗೆ ತಕ್ಕಂತೆ ಮಕ್ಕಳನ್ನು ಸಾಗಿಸಬೇಕು. ಮೊಬೈಲ್‌ನಲ್ಲಿ ಮಾತನಾಡುವುದು, ಕೆಟ್ಟ ಹಾಡುಗಳನ್ನು ಜೋರಾಗಿ ಪ್ರಸಾರಮಾಡುವುದರಿಂದ ಮುಗ್ದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಅಂಶವನ್ನು ತಿಳಿಸಿದ್ದರೂ, ಇತ್ತೀಚಿನ ದಿನದಲ್ಲಿ ಕಾನೂನು ಉಲ್ಲಂಘಿಸಿ ಅತಿ ಹೆಚ್ಚಿನ ಮಕ್ಕಳನ್ನು ಕೊಂಡೊಯ್ಯುವುದು ಅಪಾಯಕ್ಕೆ ಕರೆ ನೀಡಿದಂತೆ ಅಲ್ಲವೆ ಎನ್ನುವ ಮಾತಿಗೆ ಸಾರಿಗೆ ಅಧಿಕಾರಿ ಈ ಕುರಿತಂತೆ ಜಿಲ್ಲೆಯ ೮ ಶಾಲೆಗಳಲ್ಲಿ ಮಕ್ಕಳ ಪೋಷಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಣ, ಪೊಲೀಸ್, ಸಾರಿಗೆ ಇಲಾಖೆಗಳು ಮತ್ತು ವಾಹನ ಚಾಲಕ ಹಾಗೂ ಮಾಲಕರನ್ನು ಕರೆದು ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರೂ ಕಾನೂನು ಉಲ್ಲಂಘಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಶೀಘ್ರದಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
ಹೊಸ ರೂಪದಲ್ಲಿ ನಗರಕ್ಕೆ ಬರುತ್ತಿದೆ ಪ್ರೀಪೇಡ್ ಆಟೋ ಸರ್ವಿಸ್:
ಸೆಂಟ್ರಲ್ ರೈಲ್ವೆ ಸ್ಟೇಷನ್, ಕಂಕನಾಡಿ, ಕೆಎಸ್‌ಆರ್‌ಟಿಸಿಯಲ್ಲಿ ಪ್ರೀಪೇಡ್ ಆಟೋ ಸರ್ವಿಸ್ ಬರುತ್ತಿದ್ದು, ಎರಡು ಕಡೆಯಿರುವ ಹಳೆ ಕೇಂದ್ರ ತೆಗೆದು ಹೊಸದಾಗಿ ರಚಿಸಲಾಗುವುದು. ಕಂಕನಾಡಿಯಲ್ಲಿ ಹೊಸದಾಗಿ ಪ್ರಾರಂಭಿಸಲಾಗುವುದು. ಈ ಕೇಂದ್ರದಲ್ಲಿ ಹ್ಯಾಂಡ್ ಕಂಪ್ಯೂಟರ್ ನೀಡಿ ವ್ಯವಸ್ಥಿತವಾಗಿ ನಿರ್ವಹಿಸುವುದರಿಂದ ಎಲ್ಲಾ ಮಾಹಿತಿ ದೊರಕಿ ಕಾನೂನಿನ ರಕ್ಷಣೆ ಸುಲಭವಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶೆಲ್ಟರ್‌ನ್ನು ಈ ಕೇಂದ್ರದಲ್ಲಿ  ನಿರ್ಮಿಸಲಾಗುತ್ತದೆ.


ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಆಟೋದಲ್ಲಿ ಹೆಚ್ಚಿನ ಪ್ರಯಾಣಿಕರು ಹಾಗೂ ಗೂಡ್ಸ್ ರಿಕ್ಷಾಗಳಲ್ಲಿ ಕಾರ್ಮಿಕರನ್ನು ಸಾಗಿಸುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಂಪೆನಿಯ ಮಾಲಕರೊಂದಿಗೆ ಈ ಕುರಿತು ಚರ್ಚಿಸಲಾಗುವುದು. ಖಾಸಗಿ ಆಟೋದಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನಿಗೆ ವಿರುದ್ಧ. ಇದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತೆಯಿರುವುದಿಲ್ಲ.
ಸಿ. ಮಲ್ಲಿಕಾರ್ಜುನ,
ಸಾರಿಗೆ ಅಧಿಕಾರಿ ಮಂಗಳೂರು ವಿಭಾಗ