Friday 14 September 2012


೪೧ ವರ್ಷಗಳ ಕಾಲ ಸರಕಾರಿ ಸಂಸ್ಥೆಯಲ್ಲಿ ದುಡಿದರೂ ಅವರಿಗೆ ಸಿಗುತ್ತಿದ್ದ ಸಂಬಳ ತಿಂಗಳಿಗೆ ೧೫ರೂಪಾಯಿ...ಇದು ಉಡುಪಿಯ ಅಕ್ಕು,ಲೀಲಾರ ಸ್ಥಿತಿ
AKKU
LEELA
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಪುರಂದರದಾಸರು ಹೇಳಿರುವುದು ನಿಜ. ಪ್ರಪಂಚ ನೋಡಿದ ಮೇಲೆ ಇದು ಯಾವ ಮಟ್ಟದಲ್ಲಿ ನಿಜವೆನ್ನುವುದು ಅರ್ಥವಾಗದೆ ಇರುವ ಸ್ಥಿತಿ ವಿಶಾಲ ಹೃದಯವಂತಿಕೆಯುಳ್ಳವರದಾಗಿದೆ. ದಿನದಿಂದ ದಿನಕ್ಕೆ ಅವ್ಯವಹಾರಗಳು ವಿಪರೀತವಾಗುತ್ತಿವೆ. ಶ್ರೀಮಂತರು ಸಿರಿವಂತರಾಗುತ್ತಲೆ ಇದ್ದಾರೆ. ಬಡವರು ದಿನದಿಂದ ದಿನಕ್ಕೆ ಬಡವರಾಗುತ್ತಲೆ ಇದ್ದಾರೆ. ಓದುಗ ಮಿತ್ರರೇ ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಜೀವನದ ಜಂಜಾಟಗಳನ್ನು ಬದಿಗಿರಿಸಿ ದೀರ್ಘ ಉಸಿರಿನೊಂದಿಗೆ ಶಾಂತಚಿತ್ತರಾಗಿ ಆಲೋಚನೆ ಮಾಡಿ...ನಾವು ಯಾರನ್ನು ಬಡವರೆಂದು ಕರೆಯುತ್ತೇವೆ. ಸಂತೋಷದಿಂದ ಜೀವನ ನಿರ್ವಹಿಸಲು ಕಷ್ಟಪಡುವಂತ ಅಂದರೆ ಸುತ್ತಲು ಬಟ್ಟೆ, ಹೊಟ್ಟೆ ತುಂಬ ಊಟ ಮಾಡಲು ಆಹಾರ ಸಿಗದಿರುವವರನ್ನು ಬಡವರೆಂದು ಕರೆಯುತ್ತೇವೆ ಅಲ್ಲವೇ? ನೀವು ಆಲೋಚನೆ ಮಾಡಬೇಕಿರುವುದು ಇಷ್ಟೇ..
ಬಡವರು ಬಡವರಾಗುತ್ತಲೇ ಇದ್ದಾರೆ ಎನ್ನುವ ಮಾತಿನಲ್ಲಿ ಆತ ಅದೇ ರೀತಿ ಮುಂದುವರಿದರೆ ಬಡತನದಲ್ಲಿಯೇ ಆತನ ಸ್ಥಿತಿ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಕಲ್ಪಿಸಿಕೊಂಡಾಗ ಎದೆ ಜುಂ ಎನ್ನುತ್ತದೆ. ಒಬ್ಬನ ಜೀವನ ನಿರ್ವಹಣೆಯಾದರೆ ಹೇಗೊ ಸಾಗುತ್ತದೆ ಎಂದು ತಿಳಿಯಬಹುದಾದರೂ ಆತನನ್ನು ನಂಬಿಕೊಂಡು ಒಂದು ಕುಟುಂಬವಿದೆಯೆಂದಾದರೆ ಬೆಲೆ ಏರಿಕೆಯ ಕಾಲಘಟ್ಟದಲ್ಲಿ ಯಾವ ರೀತಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಅಬ್ಬಾ...!ಕಲ್ಪನೆಗೂ ನಿಲುಕದ ಸ್ಥಿತಿ ತಾನೇ?
ಆಶ್ಚರ್ಯ ಪಡಲೇಬೇಕು... ಆದರೂ ನಮ್ಮ ಕಲ್ಪನೆಗೂ ಮೀರಿದ ವ್ಯಕ್ತಿಗಳಿಬ್ಬರೂ ಕಳೆದ ೪೧ ವರ್ಷಗಳಿಂದ ತಿಂಗಳ ಮೂಲವೇತನ ರೂ.೧೫ಕ್ಕೆ ಕೆಲಸ ಮಾಡಿ ಸಂಸಾರ ಸಾಗಿಸುತ್ತಿದ್ದಾರೆ ಎಂದಾಗ ಇದು ಯಾವುದೋ ಸಿನಿಮೀಯ ಕಥೆ ಅನ್ನಿಸಬಹುದು? ೧೯೭೧ರಿಂದ ಸರಕಾರಿ ಸಂಸ್ಥೆಯಲ್ಲಿ ಸ್ವೀಪರ್ ಮತ್ತು ಸ್ಕ್ಯಾವೆಂಜರ್(ಜಾಡಮಾಲಿ) ಆಗಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿಯ ಅಕ್ಕು ಮತ್ತು ಲೀಲಾ ಅವರು ವೇತನದ ದುಃಖದ ಕಣ್ಣೀರ ಕಥೆಯಾಗಿದೆ. ಕೆಲಸ ಕಾಯಂಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಇವರಿಗೆ ಇತರ ಕಾರ್ಮಿಕರಿಗೆ ನೀಡುತ್ತಿದ್ದ ವೇತನ ನೀಡಬೇಕೆಂದು ೨೦೧೦ರ  ಜನವರಿಯಲ್ಲಿ ಆದೇಶ ನೀಡಿದ್ದರೂ, ನ್ಯಾಯಯುತವಾಗಿ ಸಿಗಬೇಕಾಗಿದ್ದ ವೇತನ ಸಿಗದೆ ಅದೇ ದುಃಖದಲ್ಲಿಂದು ಕಾಲ ಕಳೆಯುತ್ತಿದ್ದಾರೆ.
ಉಡುಪಿಯ ಸರಕಾರಿ ಮಕ್ಕಳ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಅಕ್ಕು ಸ್ವೀಪರ್ ಆಗಿಯೂ ಹಾಗೂ ಲೀಲಾ ಸ್ಕ್ಯಾವೆಂಜರ್ ಆಗಿ ೧೯೭೧ರ ಜುಲೈ ತಿಂಗಳಲ್ಲಿ ೧೫ ದಿನಗಳ ಅಂತರದಲ್ಲಿ ಸೇರ್ಪಡೆಗೊಂಡಿದ್ದರು. ತಾತ್ಕಾಲಿಕ ನೆಲೆಯಲ್ಲಿ ಸೇವೆಗೆ ನಿಯುಕ್ತರಾದ ಇವರಿಗೆ ದೊರೆಯುತ್ತಿದ್ದ ಮೂಲವೇತನ ತಿಂಗಳಿಗೆ ರೂ. ೧೫ ಮಾತ್ರ. ಸರಕಾರಿ ಸಂಸ್ಥೆಯಲ್ಲಿ ಸಾವಿರಾರು ರೂಪಾಯಿ ಸಂಬಳವೆಣಿಸುವ ಅಧಿಕಾರಿಗಳ ಮದ್ಯದಲ್ಲಿ ಇವರಿಗೆ ಸಿಗುವುದು ತಿಂಗಳಿಗೆ ೧೫ ರೂಪಾಯಿ ಎಂದಾಗ ನಾವು ಯಾವ ಕಾಲದಲ್ಲಿವೆ ಇದು ನಿಜವೇ ಎನ್ನುವ ಸಂಶಯ ಮೂಡುತ್ತದೆ. ಮಾನವನಿಗೆ ಸಂಶಯ ಬರುವುದು ಸಹಜವಾದರೂ ಇದು ಸತ್ಯ.
೨೭ ವರ್ಷಗಳ ಕಾಲ ಈ ಸಂಬಳದಲ್ಲಿ ಕಾರ್ಯ ನಿರ್ವಹಿಸಿದ್ದರೂ ಇವರನ್ನು ಖಾಯಂ ಗೊಳಿಸದೆ ಇಂದಲ್ಲ ನಾಳೆ ಕೆಲಸ ಖಾಯಂ ಆಗುತ್ತದೆ ಎನ್ನುವ ಅಧಿಕಾರಿಗಳ ಉತ್ತರ ಕೇಳಿದ ಬಡಪಾಯಿ ಜೀವಗಳು ಆ ಮಾತುಗಳನ್ನು ನಂಬಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಅವರ ಕೆಲಸ ಖಾಯಂ ಆಗುವುದಿರಲಿ ಕೆಲವು ವರ್ಷಗಳಿಂದಿಚೆಗೆ ತಿಂಗಳಿಗೆ ನೀಡುತ್ತಿದ್ದ ವೇತನವನ್ನು ಕೂಡ ನಿಲ್ಲಿಸಿದ್ದಾರೆ ಎಂದಾಗ ಸರಕಾರದ ಕಾಳಜಿ ಯಾವ ಮಟ್ಟದ್ದಾಗಿದೆ ಎನ್ನುವುದು ತಿಳಿಯುವುದಕ್ಕೆ ಸಾಧ್ಯ? ಇದು ೧೯೭೧ರಿಂದ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಆಡಳಿತ ಪಕ್ಷದ ವೈಫಲ್ಯವನ್ನು ತೋರಿಸುತ್ತದೆ. ಅಧಿಕಾರ ವಹಿಸಿಕೊಂಡವರು ಇವರ ಮನವಿಗೆ ಸ್ಪಂದಿಸಿದ್ದರೆ ಇವರು ಸರಕಾರದ ಅಧಿಕಾರಿಗಳಾಗಿ ಅಕ್ಕು ಇಂದು ನಿವೃತ್ತಿ ಪಡೆಯುತ್ತಿದ್ದರು.ಲೀಲಾ ಮುಂದಿನ ವರ್ಷ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿದ್ದರು.
ಶಿಕ್ಷಣ ಕ್ಷೇತ್ರವೆನ್ನುವುದು ದೇಗುಲಕ್ಕೆ ಸಮಾನ ಎಂದು ತಿಳಿದುಕೊಂಡಿದ್ದೇವೆ. ಆ ದೇಗುಲಕ್ಕೆ ಬರುವ ಭಕ್ತಾಧಿಗಳಿಗೆ ಸುಂದರ ವಾತಾವರಣದ ಸೃಷ್ಟಿ ಮಾಡುವ ಇಬ್ಬರು ವ್ಯಕ್ತಿಗಳ ಮೇಲೆ ಭಗವಂತ ಮಾತ್ರ ನಿಷ್ಠುರಿಯಾಗಿದ್ದಾನೆ. ಕೆಲಸ ಕಾಯಂಗೊಳಿಸಲು ಇವರು ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದಾಗಲೂ ಅವರಿಂದ ಒಂದೆ ಉತ್ತರ. ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇವೆ. ಜನಪ್ರತಿನಿಧಿಗಳಿಂದ ಯಾವುದೇ ನ್ಯಾಯ ಸಿಗದ ಕಾರಣ ಇವರು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು. ಯಾವಾಗ ಇವರು ನ್ಯಾಯಾಲಯದ ಮೊರೆ ಹೊದರೋ ಅಂದಿನಿಂದ ಇವರಿಗೆ ಪಂಕ್ತಿಯಲ್ಲಿ ಪರಿಭೇದವೆನ್ನುವಂತೆ ಪ್ರತ್ಯೇಕ ಪುಸ್ತಕದಲ್ಲಿ ಇವರಿಬ್ಬರ ಸಹಿ ಹಾಕಿಸಲಾಗುತ್ತಿತ್ತು. ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ತೀರ್ಪಿನಂತೆ ಅವರನ್ನು ೨೦೦೩ರಲ್ಲಿಯೇ ಖಾಯಂ ಆಗಿ ನೇಮಕಾತಿ ಮಾಡಬೇಕಾಗಿತ್ತು. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಸುಪ್ರಿಂ ಕೋರ್ಟ್‌ಗೆ ಮೊರೆಹೋಗಬೇಕಾದ ಅನಿವಾರ್ಯತೆ.
ಕರ್ನಾಟಕ ರಾಜ್ಯದ ದುರ್ದೈವವೆಂದರೆ ಇದೇ ತಾನೇ? ರಾಜ್ಯದ ಉಚ್ಚನ್ಯಾಯಾಲಯಕ್ಕೆ ಮಾನ್ಯತೆ ನೀಡದ ಸರಕಾರದ ವಿರುದ್ದ ಕೇವಲ ೧೫ ರೂ.ಸಂಬಳಕ್ಕಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ಕೆಲಸ ಕಾಯಂಗಾಗಿ ಬೆಂಗಳೂರಿನ ವಕೀಲರನ್ನು ದಿನನಿತ್ಯ ವಾದಕ್ಕಾಗಿ ಸುಪ್ರಿಂ ಕೋರ್ಟ್‌ಗೆ ವಿಮಾನದಲ್ಲಿ ಕಳುಹಿಸುವ ವ್ಯವಸ್ಥೆ  ಮಾಡಲಾಯಿತು. ವಿಮಾನದ ವೆಚ್ಚವನ್ನು ಸಂಘ ಸಂಸ್ಥೆ ವಹಿಸಿಕೊಂಡವು. ೨೦೧೦ರಲ್ಲಿ ಕೋರ್ಟ್ ಇವರ ಪರವಾಗಿಯೇ ತೀರ್ಪು ನೀಡಿದ್ದು ಮಾತ್ರವಲ್ಲ ಸರಕಾರಿ ಕಾರ್ಮಿಕರಿಗೆ ಕೊಡುವಷ್ಟೆ ಸಂಬಳ ನೀಡಬೇಕು. ಬಾಕಿಯಿರುವ ಸಂಬಳವನ್ನು  ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶ ನೀಡಿ ವರ್ಷ ಎರಡಾದರೂ ಇಲ್ಲಿಯವರೆಗೆ ಬಿಡಿಗಾಸು ಅವರ ಕೈ ಸೇರಿಲ್ಲ ಎಂದಾಗ ನಮ್ಮ ರಾಜ್ಯದ ನ್ಯಾಯದ ಸ್ಥಿತಿ ಯಾವ ರೀತಿಯಾಗಿದೆ. ಸುಪ್ರಿಂ ಕೋರ್ಟ್‌ನ ಆದೇಶಕ್ಕೂ ಮಾನ್ಯತೆ ನೀಡದ ರಾಜ್ಯ ಸರಕಾರ ಸಾಮಾನ್ಯ ಜನತೆಗೆ ನ್ಯಾಯ ಒದಗಿಸುವಲ್ಲಿ ಇರುವ ಕಾಳಜಿಯನ್ನು ತೋರ್ಪಡಿಸುತ್ತದೆ ಅಲ್ಲವೇ?
ಸಾಮಾನ್ಯ ಅಂದಾಜಿನ ಪ್ರಕಾರ ಅವರಿಬ್ಬರಿಗೂ ರೂ.೨೭ ಲಕ್ಷ ವೇತನ ಸಿಗಬೇಕಿದೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರಿಗೆ ತಿಂಗಳ ವೇತನ ಹೇಗೆ ನೀಡುತ್ತಿರಿ ಎಂದು ಪ್ರಶ್ನಿಸಿದಾಗ ಕಂಟೆಂಜೆನ್ಸಿ ಫಂಡ್‌ನಲ್ಲಿ ನೀಡಲಾಗುತ್ತದೆ. ಆ ಪಟ್ಟಿಯಲ್ಲಿ ಚಾಕ್‌ಪಿಸ್, ಡಸ್ಟರ್, ಅಕ್ಕು, ಲೀಲಾ ಹೀಗೆ ಸಾಗುತ್ತದೆ. ಖಾಸಗಿ ಕಂಪೆನಿ ಹಾಗೂ ಹೋಟೆಲು ನೌಕರರಿಗೆ ಕನಿಷ್ಟ ಕೂಲಿ ನಿರ್ಧರಿಸುವ ಸರಕಾರ ಅವರದೇ ಭಾಗವಾಗಿರುವ ವಿದ್ಯಾಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ಇವರಿಗೆ  ಮಾತ್ರ ತಿಂಗಳಿಗೆ ರೂ. ೧೫ ನೀಡುತ್ತಿರುವುದು ನ್ಯಾಯೋಚಿತವೇ? ಮಹಿಳಾ ಹಕ್ಕು, ಮಹಿಳಾ ದೌರ್ಜನ್ಯಗಳಾಗುತ್ತಿವೆ ಎಂದು ಸಾರುವ ರಾಜ್ಯ ಹಾಗೂ ಕೇಂದ್ರ ಮಹಿಳಾ ಆಯೋಗಕ್ಕೆ ಅಕ್ಕು ಮತ್ತು ಲೀಲಾರ ಕಣ್ಣೀರ ಮರ್ಮ ಅರ್ಥವಾಗದೇ ಹೋಯಿತೆ?
ಪ್ರಾರಂಭದಲ್ಲಿ ಇತರ ನೌಕರರಂತೆ ಹಾಜರಾತಿ ಪುಸ್ತಕದಲ್ಲಿಯೆ ಸಹಿ ಹಾಕುತ್ತಿದ್ದು ನ್ಯಾಯಕ್ಕಾಗಿ ಹೋರಾಟ ಮಾಡಿದ ದಿನದಿಂದ ಪ್ರತ್ಯೇಕ ಪುಸ್ತಕದಲ್ಲಿ ಸಹಿ ಹಾಕಿಸುತ್ತಿದ್ದರು. ಭಾನುವಾರವೂ ಸೇರಿ ವರ್ಷದ ಎಲ್ಲಾ ದಿನವೂ ದಿನಕ್ಕೆ ೩ ಬಾರಿ ಸ್ವಚ್ಚತೆ ಮಾಡುತ್ತಿದ್ದೇವು. ಸಂಸಾರ ನಿರ್ವಹಣೆಗೆ ಶಿಕ್ಷಕಿಯರ ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದು ಅವರು ತಿಂಗಳಿಗೆ ನೀಡುತ್ತಿದ್ದ ಹಣದಿಂದ ಬದುಕುತ್ತಿದ್ದೆವು. ಕುಟುಂಬದಲ್ಲಿ ಅಸ್ತಮಾ ಪೀಡಿತ ಗಂಡ ಹಾಗೂ ೩ ಹೆಣ್ಣು ಮತ್ತು ೨ ಗಂಡು ಮಕ್ಕಳಿದ್ದಾರೆ ಎನ್ನುವುದು ಸ್ವೀಪರ್ ಆಗಿ ಕಾರ್ಯ ನಿರ್ವಹಿಸಿದ ಅಕ್ಕು ಅವರ ಮನದಾಳದ ಮಾತು.
ಸ್ಕ್ಯಾವೆಂಜರ್(ಜಾಡಮಾಲಿ) ಲೀಲಾ ಅವರು ಉಡುಪಿಗೆ ಬರುವ ಜನಪ್ರತಿನಿಧಿಗಳಿಗೆ  ಮನವಿ ನೀಡಿದರೂ ಪರಿಹಾರ ಕಾಣಲಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಗೆ ಬಂದಾಗ ಮನವಿ ನೀಡಿದಾಗ ನಿಮ್ಮಂತೆ ಕೆಲಸ ಮಾಡುವವರು ರಾಜ್ಯದಲ್ಲಿ ಸುಮಾರು ೭೫ಸಾವಿರ ಮಂದಿಯಿದ್ದಾರೆ. ನಿಮ್ಮನ್ನು ಖಾಯಂ ಮಾಡಿದರೆ ಅವರನ್ನೆಲ್ಲಾ ಖಾಯಂಗೊಳಿಸಬೇಕಾದೀತು ಎಂದಾಗ ಅವರ ಸ್ವರ ಗದ್ಗದಿತವಾಯಿತು.
ಕರಾವಳಿಯಲ್ಲಿ ಇವರ ಕೇಸ್ ಹೈಕೋರ್ಟ್‌ನಲ್ಲಿದ್ದ ಸಂದರ್ಭ ಪೇಪರ್‌ನಲ್ಲಿ ಪ್ರಕಟವಾದ ಲೇಖನ  ನೋಡಿದ ಬಲ್ಮಠ ಕಾಲೇಜಿನ ಎಲಿಜಾ ಡಿಸೋಜಾ, ಮಲ್ಪೆ ಜೂನಿಯರ್ ಕಾಲೇಜಿನ ಪದ್ಮ ಅವರುಗಳು ನಾವೂ ಕೂಡ ತಿಂಗಳಿಗೆ ೧೫ ರೂಪಾಯಿಯಂತೆ ಕೆಲಸ ಮಾಡುತ್ತಿದ್ದೇವೆ. ನಮಗೂ ಕೂಡ ನ್ಯಾಯ ಒದಗಿಸಿಕೊಡಿ ಎಂದು ಸಾಮಾಜಿಕ ಕಾರ್ಯಕರ್ತ ಡಾ.ರವೀಂದ್ರನಾಥ್ ಶಾನುಬೋಗ್ ಅವರನ್ನು ಕೇಳಿಕೊಂಡಿರುವುದನ್ನು ನೆನಪಿಸಿಕೊಳ್ಳುತ್ತಾರೆ. ೪೧ ವರ್ಷಗಳ ಕಾಲ ಶಿಕ್ಷಕರನ್ನು ತಯಾರಿಸುವ ಶಿಕ್ಷಣ ಸಂಸ್ಥೆಯ ಕಸ ಗುಡಿಸಿದ ಹಾಗೂ  ಪಾಯಿಖಾನೆ ತೊಳೆದ ಈ ನತದೃಷ್ಟರಿಗೆ ಮಾತ್ರ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ನ್ಯಾಯ ಒದಗಿಸಲೇ ಇಲ್ಲಾ.....
ಅದೇ ರೀತಿ ನ್ಯಾಯಾಲಯದಲ್ಲಿ ಅದೆಷ್ಟೋ ಕಡತಗಳು ದೂಳು ಹಿಡಿದು ಬಿದ್ದಿವೆ. ಕರಾವಳಿಯ ಹೆಮ್ಮೆಯ ಕ್ರೀಡಾ ಪಟುವಾಗಿದ್ದ ಅಂಪಾರಿನ ಪ್ರಥ್ವಿಯ ಕುರಿತು ನಮ್ಮ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದೆವು. ಸೆ.೨೭ಕ್ಕೆ ಪ್ರಥ್ವಿಯ ಕೊಲೆಯಾಗಿ ಒಂದು ವರ್ಷ ವಾಗುತ್ತಿದೆ. ಆದರೆ ಆ ಆತ್ಮಕ್ಕೆ ಹಾಗೂ ಅವರ ಮನೆಯವರಿಗೆ  ನ್ಯಾಯ ಸಿಗಲೇ ಇಲ್ಲಾ? ಅದೆಷ್ಟೊ ಜನರು ಸಮಾಜದಲ್ಲಿ ನ್ಯಾಯ ಸಿಗದೆ ಒದ್ದಾಡುತ್ತಿದ್ದಾರೆ.



Wednesday 5 September 2012


ಬೇದಭಾವ ತಾಂಡವವಾಡುತ್ತಿದ್ದ ಸಮಾಜದಲ್ಲಿ ಸಮಾನತೆಯ ತತ್ವ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು
ಬ್ರಿಟಿಷರ್ ಆಳ್ವಿಕೆಯಲ್ಲಿ ಬೇಸತ್ತ ಜನರು ಬದುಕುವುದು ಕಷ್ಟಕರವಾಗಿದ್ದರೂ ದೇಶಿಯ ಜನರಲ್ಲಿ ಸಾಮಾನ್ಯವಾಗಿ ಕಂಡು ಬಂದ ಮೇಲು-ಕೀಳು ಎನ್ನುವ ತಾರತಮ್ಯದಿಂದ ಮಾನಸಿಕ ಆಘಾತವಾಗಿ ಸುಧಾರಿಸುವುದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿನ ಅಸಮಾನತೆ  ಹೋಗಲಾಡಿಸಲು ಆಗಸ್ಟ್ ೨೦, ೧೮೫೫ರಲ್ಲಿ  ಕೇರಳದ ತಿರುವನಂತಪುರದ ಅತ್ಯಂತ ಹಿಂದುಳಿದ ವರ್ಗದಲ್ಲಿ ಜನಿಸಿದ ನಾರಾಯಣ ಗುರುಗಳು ಕ್ರಾಂತಿಯನ್ನೆ ಮಾಡಿದರು. ಹಿಂದುಳಿದ ವರ್ಗದಲ್ಲಿ ಜನಿಸಿದ ಇವರಿಗೆ ಸಮಾಜದಲ್ಲಿ ಮೇಲ್ವರ್ಗದವರಿಂದ ಆದ ಅವಮಾನಕ್ಕೆ ತಮಗೂ ಕೂಡ ಸಮಾಜದಲ್ಲಿ ಬದುಕುವ ಹಕ್ಕಿದೆ. ಅದನ್ನು ಅವರು ಕಸಿದುಕೊಳ್ಳುತ್ತಿದ್ದಾರೆ ಎನ್ನುವ ವಿಷಯ ಮನಗಂಡು ನಡೆಸಿದ ಕ್ರಾಂತಿಯಿಂದ ಸಮಾಜದಲ್ಲಿ ಗುರುತಿಸಿಕೊಂಡು ದೀನರಿಗೆ ಸಿಗಬೇಕಾದ ಮಾನ್ಯತೆ ದೊರಕಿಸಿಕೊಟ್ಟಿದ್ದಾರೆ.
ತನ್ನ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸದಾ ಪ್ರಾತಃಸ್ಮರಣೀಯರು. ಮನುಕುಲದ ಉದ್ಧಾರಕ್ಕಾಗಿ ಅವಿರತ ಶ್ರಮಿಸಿದ ಅವರ ಆದರ್ಶ ಸದಾ ಪ್ರಸ್ತುತವಾಗಿದೆ. ವರ್ಗ ಸಂಘರ್ಷ ಅತಿಯಾಗಿದ್ದ ಕಾಲದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದ ನಾರಾಯಣ ಗುರುಗಳು ಸಮಾನತೆಗಾಗಿ ಧ್ವನಿ ಎತ್ತಿದವರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಕೂಡ ದೇವರನ್ನು ಪೂಜಿಸಬಹುದು. ಪ್ರತಿಯೊಬ್ಬರ ಹೃದಯ ಮಂದಿರದಲ್ಲಿ ದೇವರಿದ್ದಾನೆ ಎನ್ನುವ ಅಂಶ ಜನತೆಗೆ ಸಾರಿ ಹೇಳಿದ ಮಹಾನ್ ಗುರುಗಳಾಗಿದ್ದರು. ಸಾಮಾಜಿಕ ಸಮಾನತೆ, ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಯಲ್ಲಿ ತನ್ನ ಜೀವನವನ್ನು ಅರ್ಪಿಸಿಕೊಂಡಿದ್ದರು.
ದೇಶದಲ್ಲಿ ೧೫೦೦ ವರ್ಷಗಳಿಂದಲೂ ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಯುತ್ತಿದ್ದು ಅದು ಈಗಲೂ ಮುಂದುವರಿದಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮವೇ ಇಂದು ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ.
ಪ್ರತಿಯೊಬ್ಬರ ಜೀವನ ಸಾಗರದಲ್ಲಿ ಸಂಘಟನೆ ಅತ್ಯಗತ್ಯ. ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ತೊಲಗಿಸಲು ಉತ್ತಮ ಸಂಘಟನೆ ಕ್ರಾಂತಿಕಾರಿ ಶಕ್ತಿಯಾಗಲಿದೆ. ಸಮಾಜದಲ್ಲಿನ ಅಸಮಾನತೆ ಹೊಡೆದೊಡಿಸಿ ಹಿಂದುಳಿದ ವರ್ಗಕ್ಕೂ ಮಾನವೀಯ ನೆಲೆಯಲ್ಲಿ ಉತ್ತಮ ಸ್ಥಾನಮಾನ ಕಲ್ಪಿಸಿದ್ದಾರೆ. ಜಾತಿ, ಗಡಿ, ಭಾಷೆ, ಸಾಂವಿಧಾನಿಕ ವಿಷಯಗಳು ಪ್ರಸ್ತಾಪವಾದಾಗ ನಾರಾಯಣ ಗುರುಗಳ ಸಂದೇಶ ಮನುಕುಲಕ್ಕೆ ಅವಶ್ಯಕವಾಗಿದೆ. ಪ್ರತಿಯೊರ್ವರಲ್ಲೂ ಪ್ರೀತಿ, ವಿಶ್ವಾಸದಿಂದ ವ್ಯವಹರಿಸಿದಾಗ ಸಮಾಜದಲ್ಲಿ ನಿರ್ಮಾಣವಾಗುವ ಗೊಂದಲಗಳಿಗೆ ಸೂಕ್ತ ಪರಿಹಾರ ಸಿಗುತ್ತದೆ. ಶಿಕ್ಷಣದ ಮೂಲಕ ಜಾಗೃತಿ ಹೊಂದಿ, ಸಮಾನತೆಯ ತತ್ವವನ್ನು ಪ್ರತಿಯೊರ್ವರ ಮನದಲ್ಲಿ ಮೂಡಿಸಿದಾಗ ಗುರುಗಳು ಸಾರಿದ ತತ್ವ ಪ್ರಸ್ತುತ ಸಮಾಜದಲ್ಲಿ ಮಹತ್ವ ಪಡೆಯುತ್ತದೆ.
ಸಾಮಾಜಿಕ ನ್ಯಾಯ ಸಂವಿಧಾನದ ಮೂಲಕ ನಮ್ಮ ಪಾಲಿಗೆ ಒದಗಿದ್ದರೂ ಹಿಂದಿನ ಕಾಲದಲ್ಲಿ ಅದು ಭಾಷೆ, ಪ್ರಕಟನೆಯ ಮೂಲಕ ಪ್ರಕಟವಾಗದೆ ಅನೇಕರು ಕಾಲನ ಗರ್ಭದಲ್ಲಿ ಲೀನವಾಗಿರುವುದು ಕಂಡುಬರುತ್ತದೆ. ನಾರಾಯಣ ಗುರುಗಳು ಎಂಟು ವರ್ಷದ ಬಾಲಕನಾಗಿದ್ದಾಗ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಸಮಾಜದಲ್ಲಿ ಬೆರೆಯಲು ಅವಕಾಶವಿಲ್ಲದಿರುವ ಕಾಲಘಟ್ಟದಲ್ಲಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಸಮಾನತೆಯಿಂದ ಬದುಕಲು ಪ್ರಯತ್ನಿಸಿದ್ದರು. ಮೇಲು-ಕೀಳು ಎನ್ನುವ ವರ್ಗ ಸಂಘರ್ಷದಲ್ಲಿ ಕೆಳವರ್ಗದ ಜನತೆಯ ನೆರಳು ಕೂಡ ಸುಳಿಯಬಾರದು ಎನ್ನುವ ಮೇಲ್ವರ್ಗದ ದರ್ಪಕ್ಕೆ ಅದು ಮಾನವ ಸೃಷ್ಟಿಸಿದ ಅಂಶ ಎನ್ನುವುದನ್ನು ಪ್ರತಿಯೊರ್ವರ ಮನಸ್ಸಿನಲ್ಲಿ ನಾಟುವಂತೆ ಮಾಡಿದ ಕೀರ್ತಿ ಗುರುಗಳಾದಾಗಿದೆ.
ಗಾಂಧೀಜಿಯವರು ನಾರಾಯಣ ಗುರುಗಳ ಆಶ್ರಮ ದರ್ಶನ ಮಾಡಿದ ನಂತರದಲ್ಲಿ ಅವರು ಆಧುನಿಕ ಬ್ರಹ್ಮ ಎಂದು ಉಲ್ಲೇಖ ಮಾಡಿದ್ದರು. ಗುರುಗಳು ಸೃಷ್ಟಿಸಿದ ಜೀವಿಗಳಲ್ಲಿ ಸಮಾನತೆಯ ಸಂದೇಶ ಬಿತ್ತಿ ಜನರಲ್ಲಿ ಬಾಂಧವ್ಯ ಬೆಸೆಯಲು ಸಹಾಯಕವಾಗುವ ಅಂಶಗಳನ್ನು ಬಿತ್ತರಿಸಿದ್ದಾರೆ. ಫಲವತ್ತಾದ ಭೂಮಿಯಲ್ಲಿ ಬಿತ್ತುವ ಬೀಜದ ಮೇಲೆ ಅದರ ಫಲವನ್ನು ನಾವು ನಿರೀಕ್ಷೆ ಮಾಡಬಹುದು. ಅಂತೆಯೇ ನಿಷ್ಕಲ್ಮಶ ಮನದಲ್ಲಿ ಯಾವ ಅಂಶವನ್ನು ಬಿತ್ತರಿಸುತ್ತೇವೆಯೋ ಅದು ಶಾಶ್ವತವಾಗಿರುವುದರೊಂದಿಗೆ ಬೆಳೆಯುತ್ತಿರುವ ಮೊಗ್ಗುಗಳಿಗೆ ಆದರ್ಶವಾಗುತ್ತದೆ. ಉತ್ತಮ ಅಂಶಗಳನ್ನು ಬಿತ್ತರಿಸಲು ಗುರುಗಳಲ್ಲಿರುವ ಅಚಲ ನಿರ್ಧಾರ, ಬದ್ದತೆಯ ಮೂಲಗುಣ ಇಂದು ಮನುಕುಲ ಮೆಲುಕು ಹಾಕುತ್ತಿದೆ. ನಾರಾಯಣ ಗುರುಗಳಲ್ಲಿ ತುಂಟ ಹುಡುಗನೊರ್ವ ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸಿದಾಗ ನಿನ್ನಲ್ಲಿಯೂ ದೇವರಿದ್ದಾನೆ. ಹಾಗಾದರೆ ಅವನನ್ನು ತೋರಿಸಿಕೊಡಿ ಎಂದಾಗ ನಾಳೆ ನಿನಗೆ ದೇವರ ದರ್ಶನ ಮಾಡಿಸುತ್ತೇನೆ ಎನ್ನುವ ಗುರುಗಳ ಮಾತುಗಳನ್ನು ಕೇಳಿದ ಹುಡುಗನಿಗೆ ರಾತ್ರಿಯೆಲ್ಲಾ ನಿದ್ರೆಯೇ ಹತ್ತದೆ ಬೆಳಗಾದ ಕೂಡಲೇ ದೇವರನ್ನು ಕಾಣಲು ಗುರುಗಳಲ್ಲಿಗೆ ಓಡಿ ಬರುತ್ತಾನೆ. ಬಂದ ಹುಡುಗನಿಗೆ ಒಂದು ರೂಮ್‌ನ್ನು ತೋರಿಸಿ ಅಲ್ಲಿ ಹೋಗಿ ನೋಡು ದೇವರ ದರ್ಶನವಾಗುತ್ತದೆ ಎಂದಾಗ ಹುಡುಗ ಹೋಗಿ ನೋಡಿಕೊಂಡು ಪುನಃ ಬಂದು ದೇವರನ್ನು ನೋಡಿದ ಸಂತೋಷದಲ್ಲಿರುತ್ತಾನೆ. ಆದರೆ ನಾರಾಯಣ ಗುರುಗಳ ಆ ರೂಂನಲ್ಲಿ ದೊಡ್ಡ ಕನ್ನಡಿಯನ್ನು ಅಂಟಿಸಿದ್ದು ಅದರಲ್ಲಿ ತನ್ನ ಪ್ರತಿಬಿಂಬ ನೋಡಿದ ಹುಡುಗ ತನ್ನಲ್ಲಿಯೂ ದೇವರಿದ್ದಾನೆ ಎನ್ನುವ ಅಂಶವನ್ನು ಅರ್ಥೈಸಿಕೊಂಡಿದ್ದನು. ಈ ರೀತಿಯಾಗಿ ತುಂಟ ಹುಡುಗನಿಗೆ ದರ್ಪಣದ ಮೂಲಕ ಪ್ರತಿಯೊರ್ವರ ಹೃದಯದಲ್ಲಿಯೂ ದೇವರಿದ್ದಾನೆ ಎನ್ನುವ ಅಂಶ ಬೋಧಿಸಿದ್ದರು. ಪ್ರತಿಯೊರ್ವರು ತನ್ನ ಅಂತರಾತ್ಮವನ್ನು ಪ್ರಶ್ನಿಸಿಕೊಂಡಾಗ ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸಬಹುದು. ಇದಕ್ಕೆ ಏನಂತಿರಾ....?
ಬಾಕ್ಸ್:
ಸಂಘಟನೆಯ ಮೂಲಕ ಕ್ರಾಂತಿ ಹಾಗೂ ಶಿಕ್ಷಣದ ಮೂಲಕ ಜಾಗೃತಿ ಎನ್ನುವ ಅಂಶ ಸಾರಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕ ಶಕ್ತಿಯಿದ್ದವರು ಪ್ರತಿಭೆ ಇರುವ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉತ್ತಮ ಶಿಕ್ಷಣವನ್ನು ನೀಡಿದಾಗ ಕ್ರಾಂತಿಕಾರಿ ಬದಲಾವಣೆ ಸಾಧ್ಯ.
ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ, ಬಂದರು, ಒಳನಾಡು ಜಲಸಾರಿಗೆ ಸಚಿವ.

Monday 3 September 2012


ಕಮಲದಂತೆ ಮೃದು, ಶಿಲೆಯಂತೆ ಕಠೋರ ಕಮಲಶಿಲೆಯಾಗಿ ಭಕ್ತರ ಮನದಲ್ಲಿ ನೆಲೆನಿಂತು ಇಷ್ಟಾರ್ಥವ ನೆರವೆರಿಸುವ ಬ್ರಾಹ್ಮೀ ದುರ್ಗಾಪರಮೇಶ್ವರಿ: 
 ಸಕಲರನ್ನು ಪಾಲಿಸುವ ಜಗನ್ಮಾತೆ ಶ್ರೀ ಬ್ರಾಹ್ಮೀ ದುರ್ಗೇಯ ಮಹಿಮೆ-ವಿಲಾಸಗಳನ್ನು ಸದ್ಬಕ್ತರಿಗೆ ತಲುಪಿಸುವ ಈ ಲೇಖನಕ್ಕೆ ಶ್ರೀ ದೇವಿಯ ಕೃಪೆ ಹಾಗೂ ಪ್ರೇರಣೆ ಕೂಡಿಕೊಂಡಾಗ ಪ್ರತಿಯೊರ್ವರಲ್ಲೂ ಸತ್ಯದ ಸಂಗತಿಯ ಅರಿವಾಗುತ್ತದೆ. ಹಾಗೆಯೇ ದೇವಿಯ ಬಗ್ಗೆ ಭಯ-ಭಕ್ತಿ ಭಾವಗಳು ಮೈಗೊಡಿಕೊಳ್ಳುತ್ತದೆ.
ಶ್ರೀ ಬ್ರಾಹ್ಮೀ ದುರ್ಗೆಯು ಕಮಲಶಿಲೆಯಲ್ಲಿ ಉದಿಸಿ ಶ್ರೀ ಬ್ರಾಹ್ಮೀ ದುರ್ಗೆಯಾಗಿ ಕುಬ್ಜಾ ನದಿ ತೀರದಲ್ಲಿ ನೆಲೆಸಿ ಆಶ್ರಯವನ್ನು ಬೇಡಿ ಬರುವ ಭಕ್ತರ ಪಾಲಿಗೆ ಭಗವತಿಯಾಗಿ, ಸರ್ವರನ್ನು ಪೊರೆಯುವ ಭಾಗ್ಯದಾಯಿನಿ ಆಗಿ ಇಲ್ಲಿನ ಜನರ ತನು-ಮನದಲ್ಲಿ ನೆಲೆಯಾಗಿ ನಿಂತಿದ್ದಾಳೆ.
ಶ್ರೀ ದೇವಿ ಬ್ರಾಹ್ಮೀ ದುರ್ಗೆಯು ಈ ಭಾಗದ ಜನರ ಮನೆದೇವತೆಯಾಗಿದ್ದಾಳೆ ಎಂದರೆ ತಪ್ಪಿಲ್ಲ. ಮಾತೆಯು ಈ ಸ್ಥಳದ ಜನರನ್ನು ಹೆತ್ತ-ತಾಯಿಯಂತೆ ಪೊರೆಯುತ್ತಾ ನೆಲೆಯಾಗಿದ್ದಾಳೆ. ದೇವಿಯು ಕೇವಲ ಪೊರೆಯುವ ಕಾರ್ಯವನ್ನಲ್ಲದೆ ಕಾರಣೀಕವಾಗಿಯೂ ಅನ್ನಪೂರ್ಣೇಶ್ವರಿ ಹಾಗೂ ಶಾಂತಿದಾಯಿನಿ ಆಗಿ ನಿಂತಿದ್ದಾಳೆ. ಜಗನ್ಮಾತೆ ಬ್ರಾಹ್ಮಿದುರ್ಗೆ ಇಲ್ಲಿನ ವನದುರ್ಗೆಯಾಗಿದ್ದಾಳೆ. ವನದ ಹಸಿರಿನಲ್ಲಿ ನೆಲೆಸಿದ ದೇವಿಯ ಕ್ಷೇತ್ರ ಸಂದರ್ಶಿಸುವ ಭಕ್ತರಿಗೆ ರುದ್ರ-ರಮಣೀಯ ಪ್ರಕೃತಿಯ ಸೊಬಗು ಕಣ್ಣಿಗೆ ಬಿದ್ದಾಗ ಮೈ ರೋಮಾಂಚನವಾಗುತ್ತದೆ. ಶ್ರೀ ದೇವಿಯನ್ನು, ಅವಳ ಅಲಂಕಾರ ಮತ್ತು ಮಹಾದೇವಿಯ ಮುಗ್ದ ಮಂದಸ್ಮಿತವಾದ ಮುದ್ದು ಮೊಗ ಎಷ್ಟು ಕಂಡರೂ ತೃಪ್ತಿಯೆ ಆಗಲಾರದಷ್ಟು ಅಮ್ಮನ ಮುಖಾರವಿಂದದಲ್ಲಿ ಅಷ್ಟೊಂದು ವರ್ಚಸ್ಸು ಹೊರ ಹೊಮ್ಮುತ್ತಿರುತ್ತದೆ.
ಕಮಲಶಿಲೆಯು ಉಡುಪಿ ಜಿಲ್ಲೆಯ ಕುಂದಾಪುರದಿಂದ ೩೫ ಕಿ.ಮೀ ದೂರದಲ್ಲಿದೆ. ಮಲೆನಾಡಿನ ಬೆಟ್ಟ ಗುಡ್ಡಗಳಿಂದ ಕೂಡಿದ ಹಸಿರು ಬನದ ಮಧ್ಯದಲ್ಲಿ ಸುಂದರ ದೇಗುಲವಿದೆ. ದೇವಳದ ಪಕ್ಕದಲ್ಲಿಯೇ ಕುಬ್ಜಾ  ನದಿಯು ಹರಿಯುತ್ತಿರುವುದರಿಂದ ವರ್ಷಕ್ಕೊಮ್ಮೆ  ನದಿ ಉಕ್ಕಿ ಹರಿದು ದೇಗುಲದ ಒಳಗೆ ಪ್ರವೇಶಿಸಿ ಅಮ್ಮನ ಮೂರ್ತಿಯನ್ನು ಪಾವನೆಯನ್ನಾಗಿಸುತ್ತಾಳೆ. ಕಮಲಶಿಲೆ ಪ್ರಸಿದ್ದವಾದ ಶ್ರೀ ಬ್ರಾಹ್ಮಿ ದುರ್ಗಾಪರೇಶ್ವರೀ ಎನ್ನುವ ನಾಮಾಂಕಿತದೊಂದಿಗೆ  ದೇವಿಯು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ರೂಪವನ್ನೊಳಗೊಂಡ ಲಿಂಗರೂಪಿಣಿಯಾಗಿದ್ದು ಪಾತಾಳದಿಂದ ಸ್ವಯಂ ಭೂಲಿಂಗವಾಗಿ ಉದ್ಭವಿಸಿದ್ದಾಳೆ.
ದೇವಳದ ಕುರಿತು:
೧೯೬೮ ರಲ್ಲಿ ಕುಬ್ಜಾ ನದಿಯಲ್ಲಿ ಪ್ರವಾಹವುಂಟಾಗಿ ದೇವಸ್ಥಾನದ ಗೋಡೆ ಕುಸಿದು ದೇವಸ್ಥಾನ ೨೦ ಅಡಿಯಷ್ಟು ನೀರಿನಲ್ಲಿ ಮುಳುಗಿತ್ತು. ೧೯೯೦ರಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲಾಗಿ, ಹಲಸು ಮತ್ತು ಬೋಗಿ ಮರವನ್ನು ಉಪಯೋಗಿಸಲಾಗಿದೆ. ಮುಸಲ್ಮಾನ ರಾಜನಾದ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಇವರ ಕಾಲದಿಂದಲೂ ಸಲಾಮ್ ಪೂಜೆ ಎನ್ನುವ ವಿಶೇಷ ಪೂಜೆ ನಡೆಯುತ್ತಿದ್ದು ಅದು ಇಂದಿಗೂ ಸಹ ಸಾಯಂಕಾಲದ ವೇಳೆ ನಡೆಯುತ್ತಿದೆ. ವರದಾಪುರದ ಶ್ರೀ ಶ್ರೀಧರ ಸ್ವಾಮೀ ಮಹಾರಾಜ್ ೧೯೫೨ ರಲ್ಲಿ ನೀಡಿದ ಸೂಚನೆಯ ಮೇರೆಗೆ ಭಕ್ತಾದಿಗಳು (ಗಂಡಸರು) ಶರ್ಟು ಮತ್ತು ಬನಿಯನ್ ತೆಗೆದು ದೇವಸ್ಥಾನದ ಒಳಗಿನ ಆವರಣ ಪ್ರವೇಶಿಸಬೇಕು. ಹೆಂಗಸರು ಸೀರೆ ಅಥವಾ ಚೂಡಿದಾರ್ ಧರಿಸಿಯೇ ದೇವಸ್ಥಾನ ಪ್ರವೇಶಿಸಬೇಕು.
ಪುರಾಣ ಪರಿಚಯ:
ಶ್ರೀ ದೇವಿಯು ಕಮಲಶಿಲೆಯ ಕುಬ್ಜಾ ನದಿತೀರದಲ್ಲಿ ಬಂದು ನೆಲೆಸಿ ಬ್ರಾಹ್ಮಿ ದುರ್ಗೆಯಾದಳು ಎನ್ನುವುದನ್ನು ನಾವು ಪುರಾಣದಿಂದ ತಿಳಿಯಬಹುದು. ಶ್ರೀ ದೇವಿಯ ಉದ್ಬವ ಲಿಂಗವು ಕಮಲವನ್ನು ಹೋಲುವ ಹಾಗೂ ಅಷ್ಟೇ ನುಣುಪಾದ ಶಿಲೆಯಾದ್ದರಿಂದ ಕಮಲಶಿಲೆ ಎನ್ನುವ ನಾಮದಿಂದ ಖ್ಯಾತಿ ಪಡೆದಿದೆ. ಹೆಸರೆ ಸೂಚಿಸುವಂತೆ ಕಮಲವು ಮೃದುತ್ವವನ್ನು ಹಾಗೂ ಶಿಲೆಯು ಕಠಿಣತ್ವ ಪ್ರತೀಕ ಎಂದು ಅರ್ಥೈಸಿದರೂ ಇಲ್ಲಿ ಕಠಿಣ ಹಾಗೂ ಮೃದುತ್ವಗಳ ಐಕ್ಯತೆಯಿಂದಾಗಿ ಏಕತೆ ಮತ್ತು ಸಮಾನತೆಯನ್ನು ಬಿಂಬಿಸುತ್ತದೆ. ಕಮಲದಂತೆ ಮೃದುಭಾಷಿನಿಯಾಗಿ ಶಿಷ್ಟಪಾಲನೆಯಾಗಿಯೂ, ಶಿಲೆಯಂತೆ ಕಠೋರವಾಗಿ ದುಷ್ಟರ ನಿಗ್ರಹ ಕಾರ್ಯ ಮಾಡುವ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ಭಕ್ತರ ಮನದಲ್ಲಿ ನೆಲೆಯಾಗಿದ್ದಾಳೆ.
ಪ್ರಾಕೃತಿಕವಾಗಿ ವಿಶಿಷ್ಟ  ಸ್ಥಾನ ಪಡೆದು ಶ್ರೀ ದೇವಿಯು ಪೃಕೃತಿ ಪ್ರಿಯಳಾಗಿ ಈ ಸ್ಥಳದಲ್ಲಿ ಹುಟ್ಟಿ ಬಂದಿದ್ದಾಳೆ. ಸುತ್ತಲೂ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಜಾನದಿ ಮತ್ತು ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಲ್ಲಿ ಲಿಂಗರೂಪಿಯಾಗಿ ಹುಟ್ಟಿದ್ದಾಳೆ. ತಾಯಿ ಹುಟ್ಟಿದ್ದು ನೀರಿನಲ್ಲಿ,, ರೂಪ ಕಲ್ಲು, ಆಭರಣ ಮಣ್ಣು(ಮೃತ್ತಿಕೆ) ಅದ್ಭುತ ಶಕ್ತಿವಂತೆಯಾಗೆ ಲೋಕಮಾನ್ಯಳಾಗಿದ್ದಾಳೆ.
ಕಮಲಶಿಲೆಯ ವಿಶೇಷತೆ:
೧೫ ದಿನಗಳಿಗೊಮ್ಮೆ ಏಕಾದಶಿಯ ರಾತ್ರಿ ಹದಗೊಳಿಸಿದ ಕೆಂಪುಮಣ್ಣನ್ನು ಲಿಂಗಕ್ಕೆ ಲೇಪಿಸಲಾಗುತ್ತದೆ. ಇದೇ ಮೃತ್ತಿಕಾಷ್ಟಬಂದ. ಬೇರಾವುದೇ ರೀತಿಯ ಅಷ್ಟಬಂದ ಇರುವುದಿಲ್ಲ. ಏಕಾದಶಿಯಂದು ಆ ಮಣ್ಣನ್ನು ತೆಗೆದು ಚಿಕ್ಕ ಉಂಡೆಯಾಗಿ ಮಾಡಿ ಮೃತ್ತಿಕಾ ಪ್ರಸಾದ(ಮೂಲ) ವಾಗಿ ಕೊಡಲಾಗುತ್ತದೆ. ೧೫ ದಿನಗಳಿಂದ ಅಭಿಷೇಕ, ಅರ್ಚನೆ, ಪೂಜಾದಿಗಳು ನಡೆದು ನೀಡುವ ಈ ಪ್ರಸಾದವನ್ನು ತಮ್ಮ ಮನೆಗಳಲ್ಲಿ ತೀರ್ಥವಾಗಿ, ಗಂಧವಾಗಿ(ನೀರಿನಲ್ಲಿ ಕರಗಿಸಿ) ಉಪಯೋಗಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.
ಬ್ರಾಹ್ಮೀ ಶಕ್ತಿಯ ಸಂಕೇತ, ಭಕ್ತಿಯ ಉಗಮ ಪರಮೇಶ್ವರನ ಮಡದಿ ಆದಿಶಕ್ತಿ ಪರಮೇಶ್ವರೀಯಾಗಿ ಜಗತ್ತಿಗೆ ಬಂದ ದುರ್ಗೆ, ಕಷ್ಟಗಳನ್ನು ಪರಿಹರಿಸಿ ದುರ್ಗೆಯಾಗಿ, ಕ್ರೂರಾಕ್ಷನನ್ನು ವಧಿಸಿದ ಬ್ರಾಹ್ಮೀಣಿಯು ಇದೇ ಲಿಂಗದಲ್ಲಿ ಐಕ್ಯವಾಗಿ ಬ್ರಾಹ್ಮಿಯಾಗಿ, ಹೀಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀಯಾಗಿ ಕಮಲಶಿಲೆಯಲ್ಲಿ ನೆಲೆನಿಂತು, ಮುಂದೆ ಇದುವೇ ಜಗತ್ತಿನ ಏಕೈಕ ಬ್ರಾಹ್ಮೀ ಕ್ಷೇತ್ರವಾಗಿ ಮೂಡಿಬಂದಿದೆ.
ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಕಮಲಶಿಲೆಯ ಮಹಿಮೆ ವರ್ಣಿಸಲಾಗಿದೆ. ಕುಬ್ಜಾ ತೀರದಲ್ಲಿ ಈಗ ದೇವಾಲಯವಿರುವ ಸ್ಥಳವು ಮಹಾ ತಪಸ್ವಿಗಳಾದ ರೈಕ್ವಮುನಿಗಳ ಆಶ್ರಮವಾಗಿತ್ತು. ಗೌರಿ ಶಕ್ತಿಯಿಂದ ಕೂಡಿದ ಬ್ರಾಹ್ಮೀಯು ಖರಾಸುರ, ರಟ್ಟಾಸುರರನ್ನು ವಧಿಸಿ ಕಮಲಶಿಲೆಗೆ ಬಂದ ರೈಕ್ವ ಮಹಾಮುನಿಗೆ ವರಪ್ರಸಾದ ನೀಡಿ ಶಿವನಾಜ್ಞೆಯಂತೆ ಅದೇ ಲಿಂಗದಲ್ಲಿ ಐಕ್ಯಳಾಗಿ ಬ್ರಾಹ್ಮಿ ದುರ್ಗಾಪರಮೇಶ್ವರೀ ಎನ್ನುವ ಅಭಿನಾಮದೇಯದಿಂದ ಭಕ್ತರ ಭಕ್ತಿಗೆ ಫಲಪ್ರದೆಯಾಗಿದ್ದಾಳೆ.
ಪುರಾಣದಲ್ಲಿ ಕೈಲಾಸದ ಶಿವ ಸಾನಿಧ್ಯದಲ್ಲಿ ಪಿಂಗಳೆ ಎಂಬ ನರ್ತಕಿಯು ಪ್ರತಿದಿನ ನರ್ತನ ಸೇವೆ ಮಾಡುತ್ತಿದ್ದಳು, ಒಂದು ದಿನ ಸಂಜೆ ಶಿವ-ಪಾರ್ವತಿಯರ ಸಮ್ಮುಖದಲ್ಲಿ ತನ್ನ ರೂಪ, ಮದದಿಂದ ಗರ್ಭಿತಳಾಗಿ ನರ್ತನ ಮಾಡುವುದಿಲ್ಲ ಎಂದಳು. ಆಗ ಕೋಪಗೊಂಡ ಪಾರ್ವತಿಯು ಆಕೆಗೆ ಅಂಕು-ಡೊಂಕಿನ ಗೂನುಬೆನ್ನಿನ ಕುಬ್ಜೆಯಾಗು ಎಂದು ಶಾಪ ನೀಡುತ್ತಾಳೆ. ಆದಿಶಕ್ತಿಯ ಶಾಪದಿಂದಾಗಿ ಪಿಂಗಳೆಯು ತತ್ ಕ್ಷಣವೆ ಕುಬ್ಜೆಯಾಗುತ್ತಾಳೆ. ತನ್ನ ತಪ್ಪಿನ ಅರಿವಾಗಿ ಆದಿಶಕ್ತಿಯಲ್ಲಿ ಪರಿ-ಪರಿಯಾಗಿ ವಿನಂತಿ ಮಾಡಿದಾಗ ಶಾಂತಳಾದ ಪಾರ್ವತಿಯು ಪಿಂಗಳಾ ನಾನು ಖರರಟ್ಟಾಸುರರ ವಧಾರ್ಥವಾಗಿ ಶ್ರಾವಣ ಕೃಷ್ಣನವಮಿ ಶುಕ್ರವಾರದಂದು ಮಹಾ ಪುಣ್ಯಕರವಾದ ರೈಕ್ವಶ್ರಾಮದಲ್ಲಿ ಪಾತಾಳದಿಂದ ಲಿಂಗರೂಪದಲ್ಲಿ ಶೋಭಿಸುತ್ತೇನೆ. ಅದು ಮುಂದೆ ದೊಡ್ಡ ಕ್ಷೇತ್ರ ಕಮಲಶಿಲೆಯಾಗಿ ಪ್ರಸಿದ್ಧಿಗೊಳ್ಳುತ್ತದೆ. ನೀನು ಆ ಸ್ಥಳಕ್ಕೆ ಹೋಗಿ ಸುಪಾರ್ಶ್ವ ಗುಹಾದ್ವಾರದಿಂದ ಹೊರಡುವ ನಾಗತೀರ್ಥದ ಬಳಿ ಆಶ್ರಯ ರಚಿಸಿಕೊಂಡು ತನ್ನ ಅನುಗ್ರಹಕ್ಕಾಗಿ ತಪಸ್ಸನ್ನು ಮಾಡುತ್ತಿರು ಎಂದು ಅಭಯವನ್ನಿಡುತ್ತಾಳೆ.
ಪಾವನ ಪುನೀತೆ ಕುಬ್ಜೆ:
ಭಕ್ತಾಧಿಗಳು ಈ ಪುಣ್ಯ ನದಿಯಲ್ಲಿ ಸ್ನಾನಮಾಡಿ ಶ್ರೀ ಬ್ರಾಹ್ಮಿದೇವಿಯನ್ನು ಆರಾಧಿಸಿ ಧನ್ಯರಾಗುತ್ತಾರೆ. ಕುಬ್ಜೆಯು ಪ್ರತಿ ಮಳೆಗಾಲದಲ್ಲಿ ಮಹಾದ್ವಾರದ ಮೂಲಕ ಒಳಪ್ರವೇಶಿಸಿ ಶ್ರೀ ದೇವಿಯ ಲಿಂಗಕ್ಕೆ ಸ್ವಯಂ ಸ್ನಾನ ಮಾಡಿಸುತ್ತಾಳೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಬಂದು ಅತ್ಯಂತ ಪುಣ್ಯಕರವಾದ ದೇವಿಗೆ ಸ್ನಾನ ಮಾಡಿಸಿದ ನೀರಿನಲ್ಲಿ ಮಿಂದು ಭಾವ ಪರವಶರಾಗುತ್ತದೆ.
ಗರುಡನ ಭಯದಿಂದ ಆದಿಶೇಷನು ಕಮಲಶಿಲೆಗೆ ಬಂದು ಸುಪಾರ್ಶ್ವ ಗುಹೆಯಲ್ಲಿ ಬ್ರಾಹ್ಮೀಯನ್ನು ಕುರಿತು ಕಠಿಣ ತಪಸ್ಸನ್ನು ಮಾಡುತ್ತಾನೆ. ತಪಕ್ಕೊಲಿದ ದೇವಿಯು ನೀನು ವಿಷ್ಣುವಿಗೆ ಹಾಸಿಗೆಯಾಗು ಉಳಿದ ಸರ್ಪಗಳು ನನ್ನ ಆಶ್ರಮದ ಗುಹೆಯಲ್ಲಿರಲಿ. ಗರುಡನಿಂದ ಭಯವಿಲ್ಲ ಎಂದು ಅಪ್ಪಣೆ ನೀಡುತ್ತಾಳೆ. ನಾಗರಾಜನ ತಪಸ್ಸಿನ ಫಲದಿಂದ ಹೊರಟ ತೀರ್ಥವು ನಾಗತೀರ್ಥವಾಗಿದ್ದು, ಅದರಲ್ಲಿ ಮಿಂದವರಿಗೆ ಸರ್ಪಬಾದೆ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿಯಿದೆ. ಇದಕ್ಕೆ ಸಾಕ್ಷಿಯಾಗಿ ದೇವಾಲಯದಲ್ಲಿ ಬೃಹತ್ ಹುತ್ತ ವೀಕ್ಷಿಸಬಹುದಾಗಿದೆ.
ಸುಪಾರ್ಶ್ವ ಗುಹೆ:
ಶ್ರೀ ದೇವಿಯ ವಾಹನ ವ್ಯಾಘ್ರ ಇಲ್ಲಿ ತಪ್ಪು-ಒಪ್ಪುಗಳಾದಲ್ಲಿ ತಾನೂ ತಾಯಿಯ ಆಜ್ಞಾಪಾಲಕನಂತೆ ಇಲ್ಲಿನ ಜನರಲ್ಲಿ ಅರಿವನ್ನು ಮೂಡಿಸುತ್ತದೆ ಎನ್ನುವುದನ್ನು ಇಲ್ಲಿನ ಜನರಿಂದ ತಿಳಿದು ಬರುತ್ತದೆ. ಹಿಂದೆ ಈ ಹುಲಿಯೆ ಮನೆ-ಮನೆಯ ಮುಂದೆ ಬಂದು ಕೂಗುವ ಮೂಲಕ ಶ್ರೀ ದೇವಿಯ ಉತ್ಸವ ಹಾಗೂ ಇನ್ನಿತರ ಕಾರ್ಯಗಳಿಗೆ ಆಮಂತ್ರಣ ನೀಡುತ್ತಿತ್ತು. ಸುಪಾರ್ಶ್ವ ಗುಹೆಯಲ್ಲಿ ಶ್ರೀ ದೇವಿಯ ಕಾಳಿ, ಲಕ್ಷ್ಮೀ ಮತ್ತು ಸರಸ್ವತಿಯರ ಲಿಂಗಗಳಿವೆ. ದೇವಿಯ ವಾಹನವಾದ ಹುಲಿಯು ಇಲ್ಲಿಯೇ ವಾಸವಾಗಿದೆ. ಈ ಗುಹೆಯು ಶ್ರೀ ಕ್ಷೇತ್ರದಿಂದ ೨ ಕಿ.ಮೀ ದೂರದ ಹಳ್ಳಿಹೊಳೆ ಮಾರ್ಗದಲ್ಲಿ ದುರ್ಗಮ ಅರಣ್ಯದ ಮಧ್ಯದಲ್ಲಿ ತಪಸ್ಸಿಗೆ, ಧ್ಯಾನಕ್ಕೆ ಯೋಗ್ಯವಾದ ಪ್ರಶಾಂತ ಸ್ಥಳದಲ್ಲಿ ಕಂಡು ಬರುತ್ತದೆ. ದೇವತೆಗಳಿಂದ ನಿರ್ಮಿಸಲ್ವಟ್ಟ ಗುಹೆಯನ್ನು ಹಿಂದೆ ಕೃತಯುಗದಲ್ಲಿ ಸುಪಾರ್ಶ್ವನೆಂಬ ರಾಜನು ರಾಜಕೀಯದಲ್ಲಿ ಜಿಗುಪ್ಸೆ ಹೊಂದಿ ತಪಸ್ಸಿಗೆ ಯೋಗ್ಯ ಸ್ಥಳ ಹುಡುಕುತ್ತಾ ಹೋಗಲು ಶಿವನ ಪ್ರೇರಣೆಯಂತೆ ಇಲ್ಲಿಗೆ ಬಂದು ಈ ಗುಹೆಯಲ್ಲಿ ತಪಸ್ಸಾಸಕ್ತನಾದ. ಆತನ ತಪಕ್ಕೆ ವಿಘ್ನ ಬಾರದಂತೆ ಶಿವನು ಭೈರವನಿಗೆ ಗುಹೆಯ ದ್ವಾರದಲ್ಲಿ ನಿಲ್ಲುವಂತೆ ಸೂಚಿಸುತ್ತಾನೆ. ಹೀಗೆ ರಾಜನು ಅಲ್ಲಿ ತಪಗೈದು ಮೋಕ್ಷ ಹೊಂದುತ್ತಾನೆ. ಮುಂದೆ ಆ ಗುಹೆಗೆ ಅವನ ಹೆಸರು ಅನ್ವರ್ಥವಾಗುತ್ತದೆ. ಗುಹೆಯ ದ್ವಾರದಲ್ಲಿ ಭೈರವನ ಮೂರ್ತಿಯನ್ನು ಈಗಲೂ ಕಾಣಬಹುದಾಗಿದೆ. ಮೆಟ್ಟಿಲಿಳಿದ ಕೂಡಲೆ ಅಕ್ಕ-ತಂಗಿಯರ ಜೋಡು ಕೆರೆ ಮತ್ತು ಮುಂದೆ ನಾಗಾಲಯ ಹಾಗೂ ನಾಗತೀರ್ಥ ಗೋಚರಿಸುತ್ತದೆ. ಈ ಕ್ಷೇತ್ರದಲ್ಲಿ ಜಾನುವಾರುಗಳಿಗೆ ರೋಗ-ರುಜಿನ ಬಂದಾಗ, ಬಂಜೆಯಾದಾಗ, ಇತರ ಕೌಟುಂಬಿಕ ತಾಪತ್ರಯಗಳಿಗೆ ಹರಕೆ ರೂಪದಲ್ಲಿ ಗೋವುಗಳನ್ನು ಶ್ರೀ ದೇವಿಗೆ ಬಿಡುತ್ತಾರೆ. ಇಂತಹ ಲಕ್ಷಾಂತರ ಗೋವುಗಳು ಭಕ್ತರ ಮನೆಯಲ್ಲಿದ್ದು ಹಾಲು, ತುಪ್ಪವನ್ನು ದೇವಿಗೆ ತಂದೊಪ್ಪಿಸುತ್ತಿರುವುದು ಶ್ರೀಕ್ಷೇತ್ರದ ವಿಶೇಷತೆಯಾಗಿದೆ. ಅದೇ ರೀತಿ ಶ್ರೀಕ್ಷೇತ್ರದಿಂದ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದಶವತಾರ ಯಕ್ಷಗಾನ ಮಂಡಳಿ ಕೂಡಾ ಇದ್ದು ತನ್ನ ಭಕ್ತರಿಂದ ಬೆಳಕಿನ ಸೇವೆಯನ್ನು ಪಡೆಯುತ್ತಿದ್ದಾಳೆ.
ಶ್ರೀ ವೇವಿಯ ಪರಿವಾರ ದೇವರಾಗಿ ಶ್ರೀ ವೀರಭದ್ರ, ಮಹಾಗಣಪತಿ, ಸುಬ್ರಹ್ಮಣ್ಯ, ಶಿವ, ವಿಷ್ಣು, ಆಂಜನೇಯ, ನವಗ್ರಹಗಳು ಇವೆ. ಹಿಂದೆ ವೀರಭದ್ರನ ತೀಕ್ಷ್ಣ ದೃಷ್ಟಿಯಿಂದ ವಾಯುವ್ಯ ಭಾಗದ ಮರದ ಬಾಗಿಲು ಉರಿದು ಹೋಗಿದ್ದು, ಆ ಕಾರಣದಿಂದ ಅಲ್ಲಿ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಯುತ್ತಿದೆ. ಶ್ರೀ ಕ್ಷೇತ್ರದಲ್ಲಿ ವಿಜಯಾಗಮ ಪದ್ದತಿಯಂತೆ ಪೂಜೆ-ಬಲಿಗಳು ನಡೆಯುತ್ತದೆ. ಪ್ರತಿ ದಿನ ಉಷಾಕಾಲ, ಪ್ರಾತಃಕಾಲ, ಮದ್ಯಾಹ್ನ, ಸಂಧ್ಯಾಕಾಲ, ರಾತ್ರಿ ಹೀಗೆ ಐದು ಪೂಜೆಗಳು ತ್ರಿಕಾಲ ಬಲಿಗಳು ನಡೆಯುತ್ತದೆ. ಬ್ರಾಹ್ಮೀ ಶಕ್ತಿ ಸ್ವರೂಪಿಣಿಯಾದ ತ್ರೀಮೂರ್ತಿಸ್ವರೂಪಿಣಿ ಶಕ್ತಿಯೂ ಆದ ದೇವಿಯನ್ನು ಕಂಡು ಪ್ರತಿಯೊರ್ವರೂ ಕೃತಾರ್ಥರಾಗಬೇಕು.
ದಾರಿಯ ವಿವರ : ಕುಂದಾಪುರದಿಂದ ೩೫ಕಿ.ಮೀ ದೂರದಲ್ಲಿರುವ ಶ್ರೀ ಕ್ಷೇತ್ರ ಕಮಲಶಿಲೆ ದೇವಾಲಯವಿದೆ. ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಿದ್ದಾಪುರದಿಂದ ೬ ಕಿ.ಮೀ ದೂರದಲ್ಲಿ ಅಮ್ಮನವರ ಸಾನ್ನಿಧ್ಯವಿದೆ.