Monday 31 December 2012

ಯುವಜಾಗೃತಿ ಸಮ್ಮೇಳನದಲ್ಲಿ ಗಣ್ಯ ವ್ಯಕ್ತಿಗಳಿಂದ ಯುವಜನತೆಗೆ ಕರೆ..
ದೇಶದ ಉಳಿವಿಗೆ ವಿವೇಕಾನಂದರ ಆದರ್ಶ ಪಾಲನೆ ಅಗತ್ಯ:
ಮಂಗಳೂರಿನ ಸಂಘನಿಕೇತನದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಹಾಗೂ ಬೇಲೂರು ಮಠದ ಆಶ್ರಯದಲ್ಲಿ ಎರಡು ದಿನಗಳು ನಡೆದ ಅಖಿಲ ಕರ್ನಾಟಕ ಯುವ ಜಾಗೃತಿ ಸಮ್ಮೇಳನಕ್ಕೆ ರಾಜ್ಯದ ಅನೇಕ ಕಾಲೇಜುಗಳಿಂದ ಯುವ ಸಮೂಹವೇ ಹರಿದುಬಂದಿತ್ತು. ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆಯ ಅಂಗವಾಗಿ ಆಚರಿಸುತ್ತಿದ್ದ ಈ ಕಾರ್ಯಕ್ರಮದಲ್ಲಿ ವಿವೇಕಾನಂದರ ಆದರ್ಶಗಳಿಂದ ಪ್ರೇರಿತರಾದ ಯುವಸಮೂಹ ಎನ್ನುವುದು ಸ್ಪಷ್ಟವಾಗಿದೆ. ವಿವೇಕಾನಂದರು ಭೌತಿಕವಾಗಿ ನಮ್ಮೊಂದಿಗೆ ಇರದಿದ್ದರೂ ಅವರ ನುಡಿಗಳನ್ನು ಹಿರಿಯರ ಬಾಯಿಯಿಂದ ಕೇಳಿ ಅನುಭವಿಸಲು ಯುವಸಮೂಹ ಬಂದಿರುವಾಗ ಅವರ ಜೀವಿತದಲ್ಲಿ ದೇಶದಲ್ಲಿ-ಅಮೇರಿಕಾದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ  ಜನಸಾಗರವೇ ನೆರೆದಿರಬೇಕು ಎನ್ನುವುದು ನನ್ನ ಭಾವನೆ.
ಸುಂದರ ಕಾರ್ಯಕ್ರಮವನ್ನು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಭ್ರಷ್ಟಾಚಾರ ಮತ್ತು ದುರ್ವ್ಯಸನ ಈ ದೇಶಕ್ಕಂಟಿದ ದೊಡ್ಡ ಪಿಡುಗು. ಅದನ್ನು ತೊಡೆದು ಹಾಕುವಲ್ಲಿ ಯುವಜನತೆ ಕಟಿಬದ್ಧವಾಗಬೇಕು. ಆಧ್ಯಾತ್ಮಿಕತೆ ಮತ್ತು ರಾಷ್ಟ್ರ ನಿಷ್ಠೆ ಬೆಳೆಸಿಕೊಂಡಾಗ ಮಾತ್ರ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ದೇಶದಲ್ಲಿ ವ್ಯಾಪಿಸುತ್ತಿರುವ ಭ್ರಷ್ಟಾಚಾರ ಒಂದೆಡೆಯಾದರೆ ಚಾರಿತ್ರ್ಯಪತನ ಇನ್ನೊಂದು ರೀತಿಯಲ್ಲಿ ಆಗುತ್ತಿದೆ. ಇದರ ತಡೆ ಯುವ ಶಕ್ತಿಯಿಂದ ಮಾತ್ರ ಸಾಧ್ಯವಾಗಿದ್ದರೂ ದೇಶದಲ್ಲಿ ಯುವಜನತೆ ನಿದ್ರಿಸಿದ ಸ್ಥಿತಿಯಲ್ಲಿದ್ದಾರೆ. ವಿವೇಕಾನಂದರ ಸಂದೇಶ ಸಾರುವುದರೊಂದಿಗೆ ಯುವಕರನ್ನು ಬಡಿದೆಬ್ಬಿಸುವ ಕೆಲಸವಾಗಬೇಕು. ಸ್ವಚ್ಛ ನೀರಿದ್ದರೂ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಬೇಸಿಗೆಯ ನದಿಯಂತೆ ಯುವಕರ ಮನಸ್ಸು. ಆ ಸುಪ್ತ ಮನಸ್ಸನ್ನು ಜಾಗೃತಗೊಳಿಸಿ ದೇಶದ ಶಕ್ತಿಯನ್ನಾಗಿ ಪರಿವರ್ತಿಸುವ ಕೆಲಸವಾಗಬೇಕು. ರಾಷ್ಟ್ರ ನಿಷ್ಠೆ ಚಾರಿತ್ರ್ಯಶುದ್ಧಿಗೆ ವಿವೇಕಾನಂದರು ನಮಗೆ ಆದರ್ಶ. ಯುವಜನತೆಯ ಮೇಲೆ ನಂಬಿಕೆಯಿದೆ. ಮನಸ್ಸು ಮಾಡಿದರೆ ಯುವ ಪಡೆ ದೇಶದ ಚಿತ್ರಣ ಬದಲಿಸಬಲ್ಲುದು. ಪ್ರತಿಯೊಬ್ಬ ಯುವಕರಲ್ಲೂ ವಿವೇಕಾನಂದ, ನ್ಯೂಟನ್, ಗಾಂಧೀಜಿಯವರಂತಹ ಶ್ರೇಷ್ಠರ ಅಂತಃಶಕ್ತಿ ಅಡಗಿದೆ. ಪುರಾಣದಲ್ಲಿ ಜಾಂಬವಂತ ಹನುಮಂತನ ಶಕ್ತಿ ಎಚ್ಚರಿಸಿದಂತೆ ಯುವಕರನ್ನು ಜಾಗೃತಗೊಳಿಸಬೇಕು. ಕೆಲವೇ ದಿನ ಬದುಕಿದರೂ ಸಾರ್ಥಕ ಬದುಕು ನಮ್ಮದಾಗಬೇಕು. ಸಮಾಜದ ದುಃಖಿತರ ಕಣ್ಣೀರೊರೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದರು.  (ಸ್ವಾಮೀಜಿ ಹೇಳಿದ್ದರೂ ಯುವಜನತೆ ಕೆಟ್ಟ ಸಂಸ್ಕೃತಿಗಳ ವಿರುದ್ದ ಕಿಡಿಕಾರಿ ಎಚ್ಚೆತ್ತುಕೊಂಡು ಪ್ರತಿಭಟನೆಯಲ್ಲಿ ತೊಡಗಿದರೆ ರಾಜಕೀಯ ಶಕ್ತಿಗಳು ಅವರನ್ನು ತಡೆಯುವ ಕಾರ್ಯದಲ್ಲಿ ನಿಗೂಢವಾಗಿ ಕಾರ್ಯ ನಿರ್ವಹಿಸುತ್ತವೆ. ಉದಾ: ಸೌಜನ್ಯ ಪ್ರಕರಣ, ದೆಹಲಿಯ ಬಲತ್ಕಾರ ಒಂದೆ ಎರಡೆ...ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಅಲ್ಲವೇ?)
ನಂಬಿಕೆ ಇಲ್ಲದಿದ್ದರೆ ಸಮಾಜ ಉಳಿಯಲ್ಲ : ನ್ಯಾ.ಎನ್.ಸಂತೋಷ್ ಹೆಗ್ಡೆ.
ಮೊದಲು ಮಾನವರಾಗಿ ಬದುಕುವುದನ್ನು ಕಲಿಯಬೇಕು. ನಂಬಿಕೆ, ಮಾನವೀಯತೆಯೇ ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ. ಈ ಸಮಾಜವೂ ಉಳಿಯಲ್ಲ. ದುರಾಸೆಯಿಂದ ಸಂಪತ್ತಿನ ಕ್ರೋಢೀಕರಣ ಮಾಡುವುದು, ಮೋಸ, ವಂಚನೆ ಇತ್ಯಾದಿಗಳಿಂದ ಈ ಸಮಾಜ ಮುಕ್ತವಾಗಬೇಕು. ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಕೆಲಸ ಅಗತ್ಯವಾಗಿ ಆಗಬೇಕು. ನೈತಿಕ ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಯಾಗಬೇಕು. ತಾನು ಕಳೆದ ೬ ವರ್ಷಗಳಲ್ಲಿ ೫೨೦ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡಿದ್ದೇನೆ. ಯುವ ಜನಾಂಗ ಎಚ್ಚೆತ್ತುಕೊಂಡಲ್ಲಿ ಮಾತ್ರ ಭ್ರಷ್ಟಾಚಾರದಂತಹ ಅನಿಷ್ಠಗಳನ್ನು ದೂರ ಮಾಡಲು ಸಾಧ್ಯ.
`ಜನ ಸೇವೆಗಾಗಿ ಜನರಿಂದ ಆಯ್ಕೆಯಾಗುತ್ತಿದ್ದೇವೆ. ಗೆದ್ದ ನಂತರ ನಾವು ಅವರ ಸೇವಕರು, ಮಾಲೀಕರಲ್ಲ' ಇಂತಹ ಮನಸ್ಥಿತಿ ಉಳ್ಳವರನ್ನು ಚುನಾವಣೆಗಳಲ್ಲಿ ಪ್ರತಿನಿಧಿಗಳಾಗಿ ಆರಿಸೋಣ. ಗೆದ್ದ ನಂತರ ಕಾಲು ಕಸದಂತೆ ಕಾಣುವವರನ್ನಲ್ಲ....ಇದು ಹೆಗ್ಡೆಯವರು ಯುವಜನತೆಗೆ ನೀಡಿದ ಕರೆ. ಭ್ರಷ್ಟಾಚಾರವಲ್ಲದೆ ರಾಜಕೀಯ, ಅಭಿವೃದ್ಧಿ, ಹಗರಣಗಳು, ನ್ಯಾಯಾಂಗ ವ್ಯವಸ್ಥೆ ಬಲಗೊಳಿಸುವಿಕೆ, ಸಾಮಾನ್ಯ ನಾಗರಿಕರ ಹತಾಶೆ, ಯುವಕರ ಹೊಣೆಗಾರಿಕೆ, ಪ್ರಜಾಪ್ರಭುತ್ವದ ನೈಜ ಅರ್ಥ ಕುರಿತು ಯುವಕರ ಪ್ರಶ್ನೆಗಳಿದ್ದದ್ದು ವಿಶೇಷ. ನ್ಯಾಯದಾನ ಪದ್ಧತಿಯಲ್ಲಿ ವಿಳಂಬ ಹಾಗೂ ಗಂಭೀರ ಅಪರಾಧಗಳಿದ್ದಾಗ್ಯೂ ಸಾಮಾನ್ಯ ಶಿಕ್ಷೆಗೆ ಆರೋಪಿಗಳು ಗುರಿಯಾಗುತ್ತಿರುವ ಆತಂಕಕ್ಕೆ ಸಂತೋಷ್ ಹೆಗ್ಡೆಯವರೂ ದನಿಗೂಡಿಸಿ ದೇಶದಲ್ಲಿ ನ್ಯಾಯಾಲಯಗಳ ಸಂಖ್ಯೆ ಹೆಚ್ಚಿಸಬೇಕು, ಕಾನೂನುಗಳನ್ನು ಬಲಗೊಳಿಸಬೇಕು, ಕಾನೂನು ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಹಣ ವೆಚ್ಚ ಮಾಡುವುದರೊಂದಿಗೆ, ಅಗತ್ಯ ಕಾನೂನು ತಿದ್ದುಪಡಿಗಳನ್ನು ತರಲು ಸರ್ಕಾರ ಮುಂದಾಗಬೇಕೆನ್ನುವುದು ಅವರ ಆಗ್ರಹವಾಗಿತ್ತು. ವಿವಿಧ ಭ್ರಷ್ಟಾಚಾರ, ಹಗರಣಗಳಲ್ಲಿ ವರ್ಷಾನುಗಟ್ಟಲೆ ವಿಚಾರಣೆ ನಡೆದರೂ ಶಿಕ್ಷೆಯಾಗದ, ಶಿಕ್ಷೆಯನ್ನು ತಗ್ಗಿಸಿಕೊಂಡ, ತಪ್ಪು ಮಾಡಿಯೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡಿದ್ದಾರೆ. ನ್ಯಾಯಾಂಗದ ಕುರಿತಾಗಿರುವ ಜನರಲ್ಲಿನ ಅಪನಂಬಿಕೆಯನ್ನು ಹೋಗಲಾಡಿಸಲು ಈ ತುರ್ತು ಕ್ರಮಗಳು ಅನಿವಾರ್ಯವಾಗಿದೆ. ಪ್ರತಿ ರಾಜಕೀಯ ಪಕ್ಷಕ್ಕೂ ಅನ್ವಯವಾಗುವಂತೆ ಅವುಗಳ ನಡವಳಿಕೆಗಳ ಮೇಲೆ ಕಾವಲು ನಾಯಿಯಂತೆ ನಿಗಾ ಇರಿಸುವ ಶಾಶ್ವತ ಸಮಿತಿಯ ಅಗತ್ಯವಿದೆ. ಅಣ್ಣಾ ಟೀಂನ ಪ್ರಾಥಮಿಕ ಆಶಯವೂ ಇದೇ ಆಗಿತ್ತು. ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಲು ಪ್ರಬಲ ಲೋಕಪಾಲ್ ಮಸೂದೆ ಜಾರಿಗೊಳಿಸುವ ಉದ್ದೇಶದಿಂದ ಕಾರ್ಯಾರಂಭಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ಮಸೂದೆ ಅನುಷ್ಠಾನದಲ್ಲಿ ತಳೆದ ಅಸಡ್ಡೆ ಕ್ರಮೇಣ ಅರವಿಂದ ಕೇಜ್ರಿವಾಲ್ ಅವರು ಸಂಸತ್ತಿನಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸದೆ ಈ ಕಾರ್ಯ ಅಸಾಧ್ಯವೆಂದು ಪಕ್ಷ ಕಟ್ಟುವ ನಿರ್ಧಾರ ಕೈಗೊಳ್ಳುವಂತಾಯಿತು. ಆದರೆ ಪಕ್ಷ ಸ್ಥಾಪನೆಯ ಮೂಲಕ ಹೋರಾಟದಲ್ಲಿ ತನಗೆ ನಂಬಿಕೆ ಇಲ್ಲ. ಚುನಾವಣಾ ವೆಚ್ಚ ತಗ್ಗಿಸುವ, ಪೊಲೀಸ್ ವ್ಯವಸ್ಥೆ ಸುಧಾರಿಸುವ, ಪ್ರತಿ ಕ್ಷೇತ್ರದ ಸುಧಾರಣೆಯ ಅಗತ್ಯವಿದೆ. ಆದರೆ ಇದು ರಾಜಕೀಯೇತರ ಸಮಿತಿಯಿಂದ ಮಾತ್ರ ಸಾಧ್ಯ.
ಭ್ರಷ್ಟಾಚಾರ ನಿಯಂತ್ರಣ ಹೇಗೆ?
ದೇಶದಲ್ಲೆಡೆ ಭ್ರಷ್ಟಾಚಾರವೇ ತುಂಬಿ ತುಳುಕುತ್ತಿದೆ. ನಾವು ಹೇಗೆ ಅದನ್ನು ನಿಯಂತ್ರಿಸಬಹುದು ಎಂದಾಗ ಹೆಗ್ಡೆ, ೧೦೦೦ಮೈಲುಗಳ ಪಯಣವೂ ಕೂಡ ಮೊದಲ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಅದೇ ರೀತಿ ಯುವಜನತೆ ನಾನೆಂದೂ ಲಂಚ ಸ್ವೀಕರಿಸಲ್ಲ, ಯಾರಿಗೂ ಲಂಚ ಕೊಡುವುದಿಲ್ಲ ಎಂದು ಪ್ರತಿe ಮಾಡಿ, ಅದರಂತೆ ನಡೆದಾಗ ಭ್ರಷ್ಟಾಚಾರ ಹತೋಟಿಗೆ ತರಬಹುದು. ಪೂರ್ಣ ನಿರ್ಮೂಲನೆ ಅಸಾಧ್ಯ. ಇದು ನಾಗರಿಕತೆಯ ಉಗಮದಿಂದಲೇ ಪ್ರಾರಂಭಗೊಂಡಿದೆ. ದೇಶದಲ್ಲಿ ಈವರೆಗೆ ನಡೆದ ಸಾಲು ಸಾಲು ಲಕ್ಷ, ಕೋಟಿಗಳ ಹಗರಣಗಳೆಲ್ಲ ಯುವಜನತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸ್ವಾಮಿ ವಿವೇಕಾನಂದರು ಯುವಕರು ಏಳಿ ಎದ್ದೇಳಿ ಎಂದ ಮಾತಿನಂತೆ ಎಚ್ಚೆತ್ತುಕೊಳ್ಳಬೇಕು. ಬದ್ಧತೆ, ತ್ಯಾಗ, ಮಾನವೀಯತೆ ನಮ್ಮ ಗುಣಗಳಾಗಬೇಕು.
ಜ್ವಲಂತ ಆದರ್ಶಮಯ  ಜೀವನ- ಇಂದಿನ ಅವಶ್ಯಕತೆ: ಮಾತಾಜಿ ವಿವೇಕಮಯಿ
ಸ್ವಾಮಿ ವಿವೇಕಾನಂದರು ಬಹುಮುಖ ವ್ಯಕ್ತಿಯಾದರೂ ಪರಿಪೂರ್ಣರು. ಮಹಿಮಾನ್ವಿತ ವ್ಯಕ್ತಿಯಾಗಿದ್ದರೂ ಸರಳತೆ ಪ್ರತಿಪಾದಿಸಿದವರು. ಭವ್ಯ ಜೀವನವೆಂದರೆ ಗಗನಚುಂಬಿ ಕಟ್ಟಡಗಳು, ರಸ್ತೆ, ಐಶಾರಾಮಿ ವಸ್ತುಗಳಲ್ಲ. eನಪೂರ್ಣ, ಅಂತರಂಗದ ಸೌಂದರ್ಯ ಜೀವನದ ಭವ್ಯತೆ ಎಂದು ಭಾರತೀಯರು ಸಾರಿದ್ದಾರೆ. ಭಾರತದಲ್ಲಿ ಆದರ್ಶಗಳಿಗೆ ಕೊರತೆಯಿಲ್ಲ. ಆದರ್ಶಗಳು ಬದುಕನ್ನು ಔನ್ನತ್ಯಕ್ಕೆ ಕೊಂಡೊಯ್ಯುತ್ತವೆ. ದೌರ್ಬಲ್ಯಗಳನ್ನು ಬದಿಗೊತ್ತಿ ಧೀರರಾಗಬೇಕೆಂದರು. ವಿವೇಕರದು ತ್ರಿಕರಣ ವ್ಯಕ್ತಿತ್ವ. ಮಾತು, ಕೃತಿ, ಪಾಂಡಿತ್ಯ , ವೈಚಾರಿಕ ಪ್ರಬುದ್ಧತೆ ಅಪಾರ. ಗುರು ರಾಮಕೃಷ್ಣರೇ ಅವರಿಗೆ ಮನಸೋತಿದ್ದರು. ಯಾವುದೇ ದೃಷ್ಟಿಕೋನದಿಂದ ಅಳೆದರೂ ಅವರು ಪರಿಪೂರ್ಣರು. ಇಂತಹ ಜ್ವಲಂತ ಆದರ್ಶ ವ್ಯಕ್ತಿ. ಅವರ ಆದರ್ಶ ಪಾಲನೆಯಿಂದ ನಮ್ಮ ಜೀವನ ಔನ್ನತ್ಯಕ್ಕೇರಲು ಸಹಕಾರಿ. ಆ ಮೂಲಕ ನಮ್ಮಲ್ಲಡಗಿರುವ ಪರಿಪೂರ್ಣ ವ್ಯಕ್ತಿತ್ವ ಅಭಿವ್ಯಕ್ತಿಗೊಳ್ಳುತ್ತದೆ. ಜಗತ್ತು ಭಾರತಡೆಗೆ ನೋಡುವಾಗ ಪ್ರಸ್ತುತ ವಿವೇಕಾನಂದರ ಆದರ್ಶ ಜೀವನ ಬೇಕಾಗಿದೆ. ಭಾರತದಲ್ಲಿ ಆದರ್ಶಗಳಿಗೆ ಕೊರತೆ ಇಲ್ಲದಿದ್ದರೂ ಪಾಲಿಸುವವರು ವಿರಳವಾಗಿದ್ದಾರೆ. ವಿವೇಕಾನಂದರ ಋಷಿಪರಂಪರೆಯ ಜೀವನ ಜಾಗೃತಗೊಳ್ಳಬೇಕು. ಆಗ ಮಾತ್ರ ಭಾರತೀಯರ ಆದರ್ಶ ಜೀವನ ಸಾಕಾರಗೊಳ್ಳುವುದು.
ದೇಹಪ್ರೇಮ ಬೇಡ; ದೇಶಪ್ರೇಮವಿರಲಿ: ಸೂಲಿಬೆಲೆ
ವೈಯುಕ್ತಿಕ ಜೀವನ, ಕುಟುಂಬ ಮತ್ತು ಸಮಾಜ ಹಾಗೂ ರಾಷ್ಟ್ರದ ಸಮಸ್ಯೆಗಳಿಂದ ನಾವಿಂದು ಬಲಳುತ್ತಿದ್ದೇವೆ. ನೈತಿಕ ಅಧಃಪತನದತ್ತ ಭಾರತ ಸಾಗುತ್ತಿದೆ. ಈ ಎಲ್ಲಾ ಸಮಸ್ಯೆಗೆ ನಾವೇ ಕಾರಣರಾಗಿದ್ದೇವೆ. ಪರಿಹಾರವು ನಮ್ಮಿಂದಲೇ ಆಗಬೇಕಿದೆ. ಪರಿವರ್ತನಶೀಲ ಸಮಾಜದಲ್ಲಿ ಯುವಜನರ ಜವಾಬ್ದಾರಿ' ಮುಖ್ಯವಾಗಿದೆ. ಯೌವನದಲ್ಲಿ ಬೇಕಾಗಿರುವುದು ದೇಹಪ್ರೇಮವಲ್ಲ ,ದೇಶಪ್ರೇಮ. ಆಕರ್ಷಣೆ ದೇಹ ಸೌಂದರ್ಯಕ್ಕಲ್ಲ , ಆಂತರಿಕ ಸೌಂದರ್ಯದಲ್ಲಿದೆ. ಜ್ಞಾನಾರ್ಜನೆಯ ಹಂತದಲ್ಲಿ  ಖರ್ಚು, ಮೋಜು ಸಲ್ಲದು. ಅದು ಜ್ಞಾನಾರ್ಜನೆಯ ಬಳಿಕವೇ. ಯುವಜನತೆ ದೇಶದ ಬಹುದೊಡ್ಡ ಆಸ್ತಿ. ಅವರೇ ಭವಿಷ್ಯದ ನಿರ್ಣಾಯಕರಾಗಿದ್ದಾರೆ. ಆದರೆ ದೇಶದಲ್ಲಿ ಜಾತೀಯತೆ ಬಹುದೊಡ್ಡ ಸಮಸ್ಯೆಯಾಗಿದೆ. ವಿದೇಶಿಗರು ಕೂಡಾ ಜಾತೀಯತೆಯಲ್ಲಿ ನರಳಾಡುವ ಭಾರತವನ್ನು ಬೊಟ್ಟು ಮಾಡುತ್ತಿದ್ದಾರೆ. ಇದರಿಂದ ಸಮಾಜ ಹಾಗೂ ರಾಷ್ಟ್ರದ ಭದ್ರತೆಗೆ ಭಾರೀ ಅಪಾಯವಿದೆ ಎನ್ನುವುದನ್ನು ಮನಗಾಣಬೇಕಿದೆ. ವಿವೇಕಾನಂದರು ಭಾರತದ ಬಡಜನರ ಪ್ರತಿನಿಧಿಯಾಗಿ ವಿದೇಶದಲ್ಲಿ ಸಂಚರಿಸಿದರು. ಪಶ್ಚಿಮದ ಸುಖದ ಸುಪ್ಪತ್ತಿಗೆಗೆ, ಭೋಗದ ಜೀವನಕ್ಕೆ ಒಂದಿಷ್ಟು ಮೈಯೊಡ್ಡಲಿಲ್ಲ.
ಜಗತ್ತು ಸಂಕಟದಲ್ಲಿ ತೊಳಲಾಡುತ್ತಿದೆ. ಭಾರತ ಅದಕ್ಕೆ ಮಾರ್ಗದರ್ಶಿಯಾಗಬೇಕಿದೆ. ಅದಕ್ಕಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕು. ಭಾರತಕ್ಕೀಗ ಪರ್ವಕಾಲ, ಈಗಲೇ ಜಾಗೃತಿಯ ಕಹಳೆ ಊದಬೇಕು. ತಮ್ಮೆಲ್ಲಾ ಶಕ್ತಿಗಳನ್ನು ಏಕಮುಖವಾಗಿ ಪ್ರವಹಿಸಿ ಸಮಾಜ, ರಾಷ್ಟ್ರಜೀವನದಲ್ಲಿ ಮುನ್ನಡೆದಾಗ ಪರಿವರ್ತನೆಯಾಗುತ್ತದೆ. ಸಮಾಜದ ಕೆಲಸದಲ್ಲಿ ಅಡೆತಡೆಯುಂಟಾಗುವ ದುಃಖವನ್ನು ಮರೆತುಬಿಡಬೇಕು. ಅದಕ್ಕೆ ಸ್ವಾಮಿ ವಿವೇಕಾನಂದರು ಸ್ಪೂರ್ತಿ.
ಮಾತೃಭಾವದ ಜಾಗೃತಿ ಮೂಡಬೇಕು: ಪ್ರಕಾಶ್ ಮಲ್ಪೆ
ಜಗತ್ತಿನಲ್ಲಿ ಎಲ್ಲಾ ಮತ ಧರ್ಮದವರಿಗೂ ಶಾಂತಿ ದೊರೆಯುವ ಏಕೈಕ ರಾಷ್ಟ್ರ ಭಾರತ. ಭಾರತ ನೆಲದ ಪಾವಿತ್ರ್ಯತೆಗೂ ವಿದೇಶದಲ್ಲಿನ ಪಾವಿತ್ರ್ಯತೆಗೂ ವ್ಯತ್ಯಾಸವಿದೆ. ಆದ್ದರಿಂದಲೇ ಇಲ್ಲಿ ಎಲ್ಲಾ ಸುಖಶಾಂತಿ ಸಮೃದ್ಧಿಗಳೆಲ್ಲವೂ ಸಾಧ್ಯ. ಪ್ರತಿಯೊರ್ವರ ಹೃದಯದಲ್ಲೂ ಮಾತೃಭಾವದ ಜಾಗೃತಿಯಿದೆ. ಭಾರತ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳಿಗೆ ಭೂಮಿ ಜಡವಸ್ತು ಮಾತ್ರ, ಆದರೆ ಭಾರತದಲ್ಲಿ ಪವಿತ್ರಭೂಮಿ, ಪುಣ್ಯಭೂಮಿ. ಉಳಿದ ರಾಷ್ಟ್ರಗಳಲ್ಲಿ ದೇವದೂತರ ಆಗಮನವಾದರೆ ಭಾರತ ಮಾತ್ರ ಸಾಕ್ಷಾತ್ ಭಗವಂತನ ಲೀಲೆಯಿಂದಲೇ ಪುಣ್ಯಪ್ರದವಾಗಿದೆ. ಆದ್ದರಿಂದ ಇಲ್ಲಿನ ಪ್ರತಿಯೊಂದು ವಸ್ತುಗಳಲ್ಲಿ ಜೀವ ಚೈತನ್ಯವಿದೆ. ಭಾರತದಲ್ಲಿ ಹೆತ್ತ ತಾಯಿ, ಹೊತ್ತ ನೆಲ, ನದಿ, ವೃಕ್ಷ, ಗೋವು ಎಲ್ಲವೂ  ಪೂಜ್ಯನೀಯ. ಇದುವೇ ಸ್ವಾಮಿ ವಿವೇಕಾನಂದರು ಕಂಡ ಭಾರತ. ಜಗತ್ತಿನೆದುರು ಇದೇ ಭಾರತವನ್ನು ಅವರು ಪ್ರತಿಪಾದಿಸಿದರು. ಅಮೇರಿಕಾದವರಿಗೆ ನೀರು ಕೇವಲ ವೈಜ್ಞಾನಿಕ ಪರಿಭಾಷೆಗಷ್ಟೆ ಸೀಮಿತವಾಗಿದೆ. ಆದರೆ ಇಲ್ಲಿನ ಪ್ರತಿಯೊಬ್ಬರಲ್ಲೂ ಸಂಸ್ಕಾರ ಪವಿತ್ರತೆ ಇದೆ. ಆದುದರಿಂದಲೇ ಅದು ಪೂಜ್ಯನೀಯ, ಜೀವಜಲ. ಉಳಿದೆಲ್ಲಾ ನಾಗರಿಕತೆಗಳಲ್ಲಿ ಒಂದೋ ಎರಡು ನದಿಗಳಿಗೆ ಸೀಮಿತವಾದರೆ ಹಿಂದೂ ನಾಗರೀಕತೆ ಒಡಲಲ್ಲಿ ನೂರಾರು ನದಿಗಳಿವೆ. ಗಂಗಾ, ಸಿಂಧು, ಯುಮುನಾ, ಸರಸ್ವತಿ, ಗಂಡಕೀ, ಬೇಡ್ತಿ,ಕಾಳಿ, ಶರಾವತಿ, ತಪತಿ .... ಹೀಗೆ ನೂರಾರು ಹೆಸರನ್ನು ಪಟಪಟನೇ ಉದಾಹರಿಸುತ್ತಾ ಕೊನೆಗೆ ಕಾವೇರಿ ಎಂದಾಗ ನಿಶ್ಯಬ್ಧವಾಗಿ ಆಲಿಸುತ್ತಿದ್ದ ಸಾವಿರಾರು ಯುವಸಮೂಹ ಕೇಳುವಿಕೆಯ ಎಚ್ಚರದೊಂದಿಗೆ ಚಪ್ಪಾಳೆಯ ಧ್ವನಿಗೂಡಿಸಿದರು. ಇಲ್ಲಿನ ಮಾತೃಸಂಸ್ಕೃತಿಯ ಜೀವನ ಎಳೆಯ ಮಗುವಿನಿಂದಲೇ ಸಂಸ್ಕಾರ ತುಂಬಿಕೊಟ್ಟಿದೆ. ಸಾಮಾನ್ಯ ವ್ಯಕ್ತಿಯೋರ್ವನಿಂದ ಹಿಡಿದು ಹುತಾತ್ಮ ಆದರ್ಶ ಪುರುಷಗಳೆಲ್ಲರಲ್ಲೂ ರಾಷ್ಟ್ರಭಾವದ ಜಾಗೃತಿಯಿದೆ. ಸ್ವಾತಂತ್ರ್ಯಹೋರಾಟಕ್ಕೆ ಹುತಾತ್ಮದ ಕಿಚ್ಚನ್ನು ಹಚ್ಚಿದ  ಮದನಲಾಲ್ ದೀಂಗ್ರ, ಭಗತ್‌ಸಿಂಗ್, ಬಿಸ್ಮಿಲ್‌ಖಾನ್‌ನಿಂದ ಹಿಡಿದು ಕಾರ್ಗಿಲ್ ಕದನದ ಕಲಿಗಳಾದ ಹುತಾತ್ಮ ಪದ್ಮಾಪಾಣಿ ಆಚಾರ್ಯ, ರಾಜೇಶ್ ಅಧಿಕಾರಿ ಮೊದಲಾದವರು ಮಾತೃಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಇಂತಹ ಆದರ್ಶಗಳ ನಡುವೆಯೇ ರಾಷ್ಟ್ರಜೀವನದ ದುರಂತ, ವಿಭಜನೆಯ ದುರಂತಗಳನ್ನು ಮೆಲುಕು ಹಾಕಿದರು. ಮತೀಯ ವಿಷಭೀಜದೊಂದಿಗೆ ರಾಷ್ಟ್ರಗೀತೆ ವಂದೇಮಾತರಂನ ಕನಸಿಗೆ ವಿರೋಧ -ವಿಭಜನೆ, ರಾಷ್ಟ್ರ-ರಾಷ್ಟ್ರಧ್ವಜದ ವಿಭಜನೆಗಳು ಮಹಾನ್ ನಾಯಕರ ಕಣ್ಮುಂದೆಯೇ ಘಟಿಸಿ ಹೋಯಿತು. ಸಮಾಜದಲ್ಲಿಂದು ಆದರ್ಶಗಳು ಮರೆಯಾಗುತ್ತಿವೆ.  ಭಾರತಮಾತೆ ದುರ್ಗೆಯಾಗಿ ಅವತರಿಸುವ ಮೂಲಕ ಇವೆಲ್ಲಾ ಅಪಸವ್ಯ,ಅಪಶುತಿಗಳು  ನಾಶವಾಗಬೇಕಿದೆ. ಸರಸ್ವತಿಯಾಗುವ ಮೂಲಕ ಅಜ್ಞಾನದ ಅಂದಕಾರ ತೊಲಗಿಸಬೇಕು.
ಸ್ವಶಿಸ್ತು ಅಳವಡಿಸಿಕೊಳ್ಳಬೇಕು: ರಘೋತ್ತಮರಾವ್
ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದೆಡೆಗೆ ಮುಖ ಮಾಡುತ್ತಿರುವಾಗ ಭಾರತ ಮಾತ್ರ ಪಾಶ್ಚಿಮಾತ್ಯಕರಣದೆಡೆಗೆ ಜಾರುತ್ತಿದೆ. ಭಾರತದ ಮಹಿಳೆಯೋರ್ವಳಿಗೆ ಅಮೇರಿಕಾ ಶ್ರೀಮಂತನೋರ್ವನ ಮದುವೆಯಾಗಿ ಬದುಕು ಕಟ್ಟಿಕೊಳ್ಳುವ ಆಸೆ. ಕೊನೆಗೂ ಧನಿಕನೋರ್ವನೊಂದಿಗೆ ಮದುವೆ. ದಂಪತಿಗಳಿಗೆ ಭಾರತವನ್ನೊಮ್ಮೆ ಸುತ್ತಾಡುವ ಆಸೆ. ಆದರೆ ಪತ್ನಿಗೆ ಭಾರತದ ಬಗ್ಗೆ ಕೀಳರಿಮೆ, ಮಾತು ಮಾತಿಗೂ ಪತಿಯೊಂದಿಗೆ `ಡರ್ಟಿ ಇಂಡಿಯಾ'ಎಂದೇ ಮೂದಲಿಕೆ. ಒಮ್ಮೆ ಸುತ್ತಾಡುವಾಗ ಅದೇನೋ ವೃದ್ಧನೋರ್ವ ಈತನಿಗೆ ಸಹಾಯ ಮಾಡಿದಾಗ ಪ್ರತಿಯಾಗಿ ನೋಟಿನ ಕಂತೆಗಳನ್ನು ಕೈಗಿತ್ತಾಗ ಭಾರತದಲ್ಲಿ ಪರೋಪಕಾರ, ನೆರವಿನ ಬಗ್ಗೆ ತಿಳಿಸಿ ನಯವಾಗಿ ತಿರಸ್ಕರಿಸಿದ ಹಿರಿಜೀವದ  ಕುರಿತು ಅಮೇರಿಕಾದ ಪತಿ ಆಕೆಗೆ ಭಾರತದ ಕುರಿತಂತೆ ನನಗೆ ಗೌರವ ಹೆಚ್ಚುತ್ತಿದೆ ಎಂದಾಗ ಮಹಿಳೆ ಪೆಚ್ಚುಮೋರೆ ಹಾಕಿದ್ದಳು. ಭಾರತದಲ್ಲಿ ಶ್ರೀಮಂತಿಕೆ, ಬುದ್ಧಿವಂತಿಕೆ, ಸಂಸ್ಕಾರಗಳಿಗೇನೂ ಕೊರತೆ ಇಲ್ಲ. ವಿದೇಶಿಯರಿಗೂ ಕೂಡಾ ಭಾರತೀಯರ ಬಗ್ಗೆ ಗೌರವವಿದೆ. ಆದರೆ ಭಾರತೀಯರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುವ ಬದಲು ನಿರ್ಲಕ್ಷ್ಯ, ಸೋಮಾರಿತನದಿಂದ ಹಾದಿ ತಪ್ಪುತಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳು ಅಭಿವೃದ್ಧಿಯೆಡೆಗೆ ಸಾಗುತ್ತಿರುವಾಗ ನಾವು ಯೋಗ್ಯಮಾರ್ಗದಲ್ಲಿ ಅವರೊಂದಿಗೆ ಹೆಜ್ಜೆಯಿಡಬೇಕು. ಜೊತೆಗೆ ಮುನ್ನಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬುದ್ಧಿವಂತಿಕೆಯ ಸದುಪಯೋಗವಾಗಬೇಕು. ಆಗಲೇ ಭಾರತದ ಪುನರುತ್ಥಾನ ಸಾಧ್ಯ. ಜೀವನದಲ್ಲಿ ಸ್ವಯಂಶಿಸ್ತು, ಹಿರಿಯರ ಬಗ್ಗೆ ಗೌರವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪಾಶ್ಚಿಮಾತ್ಯ ಜೀವನಶೈಲಿಯ ಅನುಕರಣೆ ದೂರಮಾಡಿ ನಮ್ಮ ಜೀವನ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳಬೇಕು.
ಬಾಕ್ಸ್:
 ದೇಶದ ನುಂಗಣ್ಣರು...ಅಧೋಗತಿಯೂ...
*೬೦ ವರ್ಷಗಳಿಂದ ದೇಶದಲ್ಲಿ ೯ ಸಾವಿರ ಕೋ, ಕೋಟಿ ರೂ. ಖರ್ಚಾಗಿದೆ. ಆದರೆ ಇದು ಎಲ್ಲಿ ಖರ್ಚಾಗಿದೆ ಎಂಬುದನ್ನು ಹುಡುಕಬೇಕಷ್ಟೆ. ಅಧಿಕಾರದಲ್ಲಿರುವವರು, ಅವರನ್ನು ಅಧಿಕಾರಕ್ಕೆ ತಂದವರು ಹಣ ನುಂಗುತ್ತಿದ್ದಾರೆ.
*ನಮ್ಮ ಜನಪ್ರತಿನಿಧಿಗಳು ನಮ್ಮ ಸೇವಕರು, ಸವಾರಿ ಮಾಡುವವರಲ್ಲ. ಗೆದ್ದ ನಂತರ ಅವರೇನು ಮಾಡುತ್ತಾರೆಂಬ ಮಾಹಿತಿ ಇಲ್ಲ
* ಸಂಸತ್ತಿನಲ್ಲಿ ೫೪೬ ಸದಸ್ಯರ ಪೈಕಿ ೧೭೦ ಮಂದಿ ೫ ವರ್ಷದಲ್ಲಿ ಚರ್ಚೆಯಲ್ಲಿ ಭಾಗವಹಿಸಿದರು. ಉಳಿದವರೇನು ಮಾಡ್ತಿದಾರೆ ಎಂಬ ಮಾಹಿತಿ ಬೇಕು.
*೫ ಕೋ.ರೂ.ಗಿಂತಲೂ ಹೆಚ್ಚು ಹಣ ದಿನದ ಅಧಿವೇಶನಕ್ಕೆ ಖರ್ಚಾಗುತ್ತಿದೆ. ಆದರೆ  ಮಸೂದೆಗಳು ಅಂಗೀಕಾರಗೊಳ್ಳುತ್ತಿಲ್ಲ. ಬಹಿಷ್ಕಾರ ಮಾತ್ರ ನಡೆಯುತ್ತಿದೆ. ಪ್ರತಿನಿಧಿಗಳ ಸಂಭಾವನೆ ಸಿಕ್ಕೇ ಸಿಗುತ್ತದೆ.

ಬಾಕ್ಸ್:
೨೩ ಜಿಲ್ಲೆಗಳಿಂದ ೧,೮೦೦ ವಿದ್ಯಾರ್ಥಿಗಳು



Saturday 1 December 2012

ಪುರಾಣದ ಸತ್ವ ಸಾರುತ್ತಾ ಯಕ್ಷರಸಿಕರ ಮನಸ್ಸು ಸೂರೆಗೊಳ್ಳಲು ತಿರುಗಾಟಕ್ಕೆ ಸಿದ್ದಗೊಂಡಿವೆ-ಯಕ್ಷಗಾನ ಮೇಳಗಳು.
ಪತ್ತನಾಜೆ ಸಂದರ್ಭ ತಮ್ಮ ಬೆಚ್ಚನೆಯ ಗೂಡಿನೊಳಗೆ ಸೇರಿದ ಸಾಗರ ತೀರದ ಸಮೃದ್ದ ಕಲೆಯಾದ ಯಕ್ಷಗಾನ ಮೇಳಗಳಿಂದು ಗೂಡುಬಿಟ್ಟು ಹೊರಡುವ ಹಕ್ಕಿಯಂತೆ ನವೆಂಬರ್ ತಿಂಗಳಿಂದ ಮೊದಲ್ಗೊಂಡು ಕರಾವಳಿ, ಮಲೆನಾಡಿನಾದ್ಯಂತ ಸಂಚರಿಸಿ ಕಲಾರಸಿಕರ ಮನ ತಣಿಸಲು ಸಿದ್ದಗೊಂಡಿವೆ. ಕನ್ನಡದ ಕಂಪು, ಸಂಸ್ಕೃತದ ಇಂಪು, ಹಳೆಗನ್ನಡದ ಮಹಿಮೆಯನ್ನು ಬಿತ್ತರಿಸುವ ಯಕ್ಷಗಾನ ಡೇರೆ ಮತ್ತು ಹರಕೆ ಮೇಳಗಳು ಹೊಸ ಕಲಾವಿದರೊಂದಿಗೆ, ವಿವಿದ ರಂಗಸಜ್ಜಿಕೆಯೊಂದಿಗೆ ನಮ್ಮನ್ನು ಇದಿರುಗೊಳ್ಳುಲು ಕ್ಷಣಗಣನೆಯಲ್ಲಿವೆ.
ಯಕ್ಷಗಾನದ ಸೊಬಗೆ ಅಂಥದ್ದು..ನಿರರ್ಗಳ ಭಾಷೆಯಿಂದ ಪುರಾಣದ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳ ಅವಿರತ ಸಾಧನೆ ರಂಗದಲ್ಲಿ ಮೇಳೈಸುತ್ತದೆ. ಹಿಂದೆ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಸಾಗರ ತೀರದ ಗಂಡುಕಲೆಯನ್ನು ಮಕ್ಕಳು, ಹೆಂಗಸರು ನಮ್ಮಲ್ಲಿಯೂ ಕೂಡ ಸಾಮರ್ಥ್ಯವಿದೆ ಎಂದು ಸಾಧಿಸಿ ತೋರಿಸಿದ್ದಾರೆ. ಯಕ್ಷಗಾನವೆನ್ನುವುದು ಹಿಂದೂ ಸಂಸ್ಕೃತಿಯ ಸಂಜೀವಿನಿ. ಇದು ಕರಾವಳಿಗೆ ಮಾತ್ರ ಸೀಮಿತವಾಗಿರದೆ, ಕನ್ನಡ ಸಂಸ್ಕೃತಿಯನ್ನು ದೇಶದ ಮೂಲೆಗಳಿಗೂ ಪಸರಿಸಿದ್ದು ಮಾತ್ರವಲ್ಲದೆ, ಅಮೇರಿಕಾದಲ್ಲಿ ೨೦೧೨ರಲ್ಲಿ ನಡೆದ ಅಕ್ಕಾ ಕನ್ನಡ ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ. ಆದರೆ ಹವ್ಯಾಸಿಗಳಾಗಿ ಮಹಿಳೆಯರು ಯಕ್ಷಗಾನ ಕಲಿಯಬಹುದಾದರೂ ವೃತ್ತಿ ಯಕ್ಷಗಾನ ಮೇಳಗಳು ಮಾತ್ರ ಪುರುಷರಿಗೆ ಸೀಮಿತವಾಗಿದೆ.
ಯಕ್ಷಗಾನ ಮೇಳಕ್ಕೊಂದು ಹೆಸರು:
ತೆಂಕುತಿಟ್ಟು ಅಥವಾ ಬಡಗುತಿಟ್ಟು ಯಾವುದೆ ಮೇಳವಾದರೂ, ತಿರುಗಾಟ ಹೊರಡುವುದು ಮಾತ್ರ ದೇವರ ಹೆಸರಿನಲ್ಲಿಯೇ? ಕಲೆ ಕಾಸಿಗಾಗಿ, ಕಾಲಯಾಪನೆಗಾಗಿ ಎನ್ನುವ ಜನರಿಗೆ ಮುದ ನೀಡುವುದಕ್ಕಾಗಿ ಮುಂದಾದ ಡೇರೆ ಹಾಗೂ ಕಾಲಮಿತಿ ಮೇಳಗಳು ತಿರುಗಾಟ ನಡೆಸುವುದು ದೇವರ ಹೆಸರಿನಿಂದ ಮತ್ತು ದೇವಸ್ಥಾನದ ನಾಮಮುದ್ರೆಯಿಂದ. ಪ್ರತಿ ಮೇಳಗಳು ದೇವರ ಗುಡಿಯಿಂದಲೇ ಹೊರಟು, ಕೊನೆಗೆ ಬಂದು ಸೇರುವುದು ಅದೇ ಸುಂದರ ಭೂರಮೆಯ ಮಡಿಲಿಗೆ ಅಂದರೆ ಶ್ರೀ ಕ್ಷೇತ್ರಗಳಿಗೆ.
ಯಕ್ಷಗಾನದ ಮಹಿಮೆ:
ಎಷ್ಟೇ ಹಠಮಾರಿ ಗಂಡನಾದರೂ, ಹೆಂಡತಿಯ ಮಮತೆಯ ಮುಂದೆ ಮುಗುಳುನಗುವಿನ ಮುಗ್ದ  ಮಗುವಿನಂತಾಗುತ್ತಾನೆ. ಯಕ್ಷಗಾನದ ಅಭಿರುಚಿಯೇ ಅಂತದ್ದು, ಮನಸ್ಸಿನಲ್ಲಿ ಎಂತಹ ದುಗುಡ, ದುಮ್ಮಾನಗಳಿದ್ದರೂ ಕ್ಷಣಮಾತ್ರದಲ್ಲಿ ಪರಿಹರಿಸುವ ಸಾಧನ. ಯಕ್ಷಗಾನದ ಯಾವುದೇ ಮೇಳವಿದ್ದರೂ ಅವುಗಳು ಪ್ರಪಂಚದ ಅನುಭವದೊಂದಿಗೆ ಹಿಂದು ಸಂಸ್ಕೃತಿಯ ಸಾರವನ್ನು ಲೋಕಮುಖಕ್ಕೆ ಬಿತ್ತರಿಸುತ್ತಾ ಚಲಿಸುವ ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತದೆ. ಈಗಿನ ಯಾವುದೇ ಮಾದ್ಯಮಗಳಿಗಿಂತ ಮಿಗಿಲಾದ ಸಾಧನವೇ ಯಕ್ಷಗಾನ.
ಕಲಾವಿದರ ಬದುಕು:
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯನ್ನು ನಿರರ್ಗಳವಾದ ಮಾತುಗಳಿಂದ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳು ತಮ್ಮ ತಿರುಗಾಟ ಮಾಡಿ, ಜಗತ್ತು ಮಲಗಿರುವಾಗ ಇವರ ಕಾಯಕ ಪ್ರಾರಂಭವಾಗುತ್ತದೆ. ಜನರೊಂದಿಗೆ ಬೆರೆಯುವ ಹಗಲಿನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಪವಡಿಸುತ್ತಾರೆ. ಕಲಾಮಾತೆಯ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು, ಅದರಲ್ಲೇ ತಮ್ಮ ಜೀವನದ ಗೋಪುರವನ್ನು ಕಟ್ಟುವಲ್ಲಿ ಯಶಸ್ಸು ಕಂಡ ಕಲಾವಿದರು ಅನೇಕ. ತಮ್ಮ ಜೀವನದಲ್ಲಿ ನೋವುಗಳನ್ನು ತುಂಬಿಕೊಂಡಿದ್ದರೂ ಅದನ್ನು ರಂಗದಲ್ಲಿ ತೋರಗೊಡದೆ, ಜೀವನಮೌಲ್ಯ, ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೆ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುತ್ತಾನೆ.
ತೆಂಕು ತಿಟ್ಟಿನಲ್ಲಿ ಮರೆಯಾದ ಡೇರೆ ಮೇಳಗಳು:
ಧರ್ಮಸ್ಥಳ ಡೇರೆ ಮೇಳ ಮರೆಯಾಗಿ ಹರಕೆ ಮೇಳವಾಗಿದ್ದು, ಕೂಡ್ಲು, ಮೂಲ್ಕಿ, ಬಪ್ಪನಾಡು, ಪುತ್ತೂರು,  ಕದ್ರಿ, ಕುಂಬಳೆ, ಬೆಳ್ಮಣ್ಣ, ಅರುವ, ಕರ್ನಾಟಕ, ಇರಾ, ಸುರತ್ಕಲ್, ಮಂಗಳಾದೇವಿ ತೆಂಕುತಿಟ್ಟಿನ ಡೇರೆ ಮೇಳಗಳು ಕಾಲನ ಮರೆಗೆ ಸಂದಿವೆ. ಬಡಗು ತಿಟ್ಟಿನಲ್ಲಿ ಸಾಲಿಗ್ರಾಮ, ಪೆರ್ಡೂರು ಮೇಳವನ್ನು ಹೊರತು ಪಡಿಸಿ ಉಳಿದ ಮೇಳಗಳು ಹರಕೆ ಮೇಳವಾಗಿ ತಿರುಗಾಟಕ್ಕೆ ಸಜ್ಜಾಗಿವೆ. ಎಡನೀರು, ಹೊಸನಗರ ಕಾಲಮಿತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಬಡಗು ತಿಟ್ಟಿನಲ್ಲಿ ಉಮೇಶ ಸುವರ್ಣ ನೇತೃತ್ವದ ಅತಿಥಿ ಕಲಾವಿದರನ್ನೊಳಗೊಂಡ ಯಕ್ಷಶ್ರೀ ಪ್ರವಾಸಿ ಮೇಳ ಹಂಗ್ಲೂರು ಎನ್ನುವ ನಾಮಾಂಕಿತದೊಂದಿಗೆ ೩ ಗಂಟೆಗಳ ಪ್ರದರ್ಶನ ನೀಡಲು ತಂಡವೊಂದು ಸಿದ್ದಗೊಂಡಿದೆ. ಪೆರ್ಡೂರು ಮೇಳದ ಪ್ರಖ್ಯಾತ ಭಾಗವತರಾದ ಸುಬ್ರಹ್ಮಣ್ಯ ದಾರೇಶ್ವರ ತಿರುಗಾಟಕ್ಕೆ ವಿದಾಯ ಹೇಳಿದ್ದು ಅತಿಥಿ ಭಾಗವತರಾಗಿ ಭಾಗವಹಿಸುವ ನಿರೀಕ್ಷೆಯಿದೆ. ತೆಂಕುತಿಟ್ಟಿನ ಪ್ರಖ್ಯಾತ ಪುಂಡುವೇಷಧಾರಿ ಪುತ್ತೂರು ಶ್ರೀಧರ ಭಂಡಾರಿ ಮಂಡಿನೋವಿನ ನಡುವೆಯು ತಿರುಗಾಟಕ್ಕೆ ಸಿದ್ದರಾಗಿದ್ದಾರೆ. ಬಡಗಿನ ಚೆಂಡೆವಾದಕ ರಾಮಭಂಡಾರಿ ಕರ್ಕಿ ಸೇರಿದಂತೆ ಅನೇಕ ಸಣ್ಣ ಕಲಾವಿದರು ಯಕ್ಷಗಾನ ತಿರುಗಾಟಕ್ಕೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಬೇರೆ-ಬೇರೆ ಮೇಳದಲ್ಲಿ ಸಂಚಾರ ಮಾಡಿದ್ದ ಕಲಾವಿದರುಗಳು ನೂತನ ಮೇಳದಲ್ಲಿ ತಮ್ಮ ವೃತ್ತಿಜೀವನಕ್ಕೆ ಅಣಿಯಾಗಿದ್ದಾರೆ.
ಯಕ್ಷಗಾನದ ಸಾರ ಉಳಿಸುವಲ್ಲಿ ಯಜಮಾನರು ಹಾಗೂ ಪ್ರಸಂಗಕರ್ತರ ಕರ್ತವ್ಯ:
ಯಾವುದೇ ಹರಕೆ ಮೇಳ ಅಥವಾ ಡೇರೆ ಮೇಳಗಳಾದರೂ, ತಾವು ಮಾಡುತ್ತಿರುವುದು ಕಲಾಮಾತೆಯ ಸೇವೆ ಎನ್ನುವುದನ್ನು ಮನಗಾಣಬೇಕು. ಕಾಲಕ್ಕೆ ತಕ್ಕ ಬದಲಾವಣೆ ಸಹಜವಾಗಿರಬೇಕು. ಬದಲಾವಣೆಯೊಂದಿಗೆ ಆಧುನಿಕ ಜೀವನ ಮೌಲ್ಯಗಳು ಪ್ರಸಂಗದಲ್ಲಿ ಬಂದಾಗ ಸಾರ್ಥಕತೆ ಪಡೆಯುತ್ತದೆ. ಅಲ್ಲಿಯೂ ಕೂಡ ಎಚ್ಚರಿಕೆಯ ಅಗತ್ಯತೆಯಿದೆ. ಯಕ್ಷಗಾನಕ್ಕೆ ಅದರದೇ ಆದ ವೇಷಭೂಷಣ, ಸಂಪ್ರದಾಯದ ಕಟ್ಟುಪಾಡುಗಳಿವೆ. ಅದನ್ನು ಬಿಟ್ಟು ಆಧುನಿಕತೆಯಂತೆ ವೇಷಭೂಷಣಗಳನ್ನು ತಂದರೆ ಅಪಹಾಸ್ಯವಾಗುವುದರೊಂದಿಗೆ ವಾತಾವರಣವನ್ನು ಕೆಡಿಸುವ ಮತ್ತು ಪ್ರೇಕ್ಷಕನನ್ನು ತಪ್ಪು ದಾರಿಗೆಳೆಯುವ ಸಾದ್ಯತೆಗಳೆ ಹೆಚ್ಚು. ಕಾಲಕ್ಕೆ ತಕ್ಕಂತೆ ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ. ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಬೇಕು ಎನ್ನುವ ಅಂಶವನ್ನು ಮನಗಾಣಬೇಕು. ಸಂಗತವಲ್ಲದ ಮೌಲ್ಯ ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವಂತಾಗಲಿ ಈ ತಿರುಗಾಟ.
ಯಕ್ಷಗಾನದತ್ತ ಮಕ್ಕಳ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವ ಚಿಂತೆ ಒಂದೆಡೆಯಾದರೆ ಯಕ್ಷಗಾನದ ಕುರಿತು ಆಸಕ್ತಿ ತಳೆದು ಹಲವಾರು ಮಕ್ಕಳು ಯಕ್ಷಗಾನದ  ಆಸಕ್ತಿ ತಳೆದು ಹೆಜ್ಜೆಯನ್ನು ಕಲಿಯುತ್ತಿದ್ದಾರೆ. ಅಲ್ಲದೇ ಯಕ್ಷಗಾನ ಅಕಾಡೆಮಿ ವತಿಯಿಂದ ಶಾಸ್ತ್ರೀಯ ಪಠ್ಯಕ್ರಮದ ಪುಸ್ತಕ ತಯಾರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಯಕ್ಷಗಾನಂ ಗೆಲ್ಗೆ
ಬಾಕ್ಸ್:
೨೦೧೨-೧೩ರಲ್ಲಿ ತಿರುಗಾಟಕ್ಕೆ ಸಿದ್ದಗೊಂಡ ವೃತ್ತಿ-ಮೇಳಗಳು:
ಬಡಗು ತಿಟ್ಟು:
ಮಂದಾರ್ತಿ ೫ಮೇಳ, ಮಾರಣಕಟ್ಟೆ (೨), ಮಡಾಮಕ್ಕಿ, ಹಾಲಾಡಿ, ಸೌಕೂರು, ಗೋಳಿಗರಡಿ, ಕಮಲಶಿಲೆ, ನೀಲಾವರ, ಆಜ್ರಿ ಚೋನಮನೆ, ಸಿಗಂದೂರು, ಅಮೃತೇಶ್ವರಿ, ಹಿರಿಯಡ್ಕ, ಗುತ್ಯಮ್ಮ ಬಯಲಾಟ ಮೇಳಗಳು. ಪೆರ್ಡೂರು, ಸಾಲಿಗ್ರಾಮ  (ಡೇರೆ ಮೇಳಗಳು).
ತೆಂಕುತಿಟ್ಟು:
ಧರ್ಮಸ್ಥಳ, ಕಟೀಲು (೫), ಹೊಸನಗರ, ಎಡನೀರು, ಬಪ್ಪನಾಡು, ಉಳ್ಳಾಲ, ತಳಕಲ, ಸುಂಕದಕಟ್ಟೆ, ಸಸಿಹಿತ್ಲು, ಕಾಸರಗೋಡಿನಲ್ಲಿರುವ ಮಲ್ಲ  ಮತ್ತು ಕೊಲ್ಲಂಗಾನ ಮೇಳ (ಬಯಲಾಟದ್ದು)





ಅಲ್ಲಿ ಮಕ್ಕಳ ದಿನಾಚರಣೆ ಅಬ್ಬರ
ಇಲ್ಲಿ ಮಕ್ಕಳ ಭವಿಷ್ಯ ಅರಳುತ್ತಿದೆ ಹೀಗೆ...

ಪ್ರಥಮ ಪ್ರಧಾನಿ ನೆಹರೂ ಅವರ ಬದುಕಿನಲ್ಲಿ ಮಕ್ಕಳ ಕುರಿತ ವಿಶೇಷ ಕಾಳಜಿ ವಹಿಸಿದ್ದಾರೆಂದು ಈ ದಿನವನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅವರ ಬದುಕಿನ ಸತ್ಯದ ಬೆಳಕಿನಲ್ಲಿ ಈ ದಿನಾಚರಣೆಯ ಬಗೆಗೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಿದೆ. ಏನೇ ಆದರೂ ಮಕ್ಕಳ ದಿನಾಚರಣೆಯನ್ನು ನಾವು ಕ್ರಮವಾಗಿ ಆಚರಿಸುತ್ತಲೇ ಬಂದಿದ್ದೇವೆ.ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಆಚರಿಸುವ  ಇಂತಹ ದಿನಗಳು ಮಕ್ಕಳ ಬಗ್ಗೆ ನಮ್ಮಲ್ಲಿ ಭಾವ ಸಂವೇದನೆ ಮೂಡಿಸಿದ್ದೇ ಆದರೆ ಅಂತಹ ದಿನಾಚರಣೆ ಪ್ರಸ್ತುತವೇ . ಈ ಹಿನ್ನೆಲೆಯಲ್ಲಿ ಮಕ್ಕಳ ಬಗೆಗೆ ಅವಲೋಕನ ನಡೆಸಲು ಇದು ಸಕಾಲವೇನೋ.
ಮಕ್ಕಳ ದಿನಾಚರಣೆಯಂದು ಎಲ್ಲಾ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪುಟಾಣಿ ಮಕ್ಕಳ ವೇಷದ ಸ್ಪರ್ಧೆ, ಚಿತ್ರ ಬಿಡಿಸುವುದು, ಹಾಡು, ನೃತ್ಯ, ಭಾಷಣ ಒಂದೆ ಎರಡೇ ಅನೇಕ ಸ್ಫರ್ಧೆಯನ್ನು ವಿವಿಧ ಸಂಸ್ಥೆಗಳು ಆಯೋಜಿಸಿ ಜಾಹಿರಾತುಗಳನ್ನು ನೀಡುತ್ತವೆ. ಸ್ಪರ್ಧೆ ಆಯೋಜಿಸಿದ ಸಂಸ್ಥೆ ಹೆಸರು ಗಳಿಸಬೇಕೆನ್ನುವ ಉದ್ದೇಶ ಇದರಲ್ಲಿ ಎದ್ದು ಕಂಡರೂ, ಮಕ್ಕಳ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆ ಎಂಬುದೂ ಸರಿಯೇ.
 ಆದರೆ ನಮ್ಮ ದೇಶದಲ್ಲಿ ಇಂದು ಮಕ್ಕಳ ಬದುಕಿನತ್ತ ಒಂದು ನೋಟ ಹರಿಸಿದ್ದೇ ಆದರೆ , ಒಂದೆಡೆ ಆಧುನಿಕ ಶಿಕ್ಷಣದ ಭರಾಟೆಯಲ್ಲಿ ಮಕ್ಕಳಿಗ ಬಾಲ್ಯವೇ ಕಳೆದುಹೋಗುತ್ತಿದೆಯೇನೋ ಎನಿಸುತ್ತಿದೆ. ಮಕ್ಕಳಿಗೆ ಹೋಮ್‌ವರ್ಕ್(ಭವಿಷ್ಯ ಜೀವನದಲ್ಲಿ ಕಷ್ಟಸಹಿಷ್ಣುತೆಯನ್ನು ಕಲಿಸುವ  ಮನೆಗೆಲಸ ಮಾಡಿಸಿದ್ದೇ ಆದರೆ ಅಪರಾಧ !)ನ ಒತ್ತಡ.ಓದುವ , ಇಂಜಿನಿಯರ್ ಆಗುವ , ಡಾಕ್ಟರ್, ಐಟಿ, ಬಿಟಿ ಆಗಿ ಕೈ ತುಂಬ ಸಂಬಳ ಪಡೆಯುವ , ಫಾರೀನ್‌ಗೆ ಹಾರುವ ಭ್ರಮಾ ಲೋಕದಲ್ಲಿ ಬಾಲ್ಯದ ಖುಷಿ , ಬದುಕಿನ ತಳಪಾಯ ಕಳೆದುಹೋಗುತ್ತಿದೆ  ಎಂಬ ಆತಂಕ ಇಂದು ಅನೇಕರಲ್ಲಿ ಮೂಡುತ್ತಿದ್ದರೆ ಅದರಲ್ಲಿ ತಥ್ಯವಿದೆ.
ಇನ್ನೊಂದೆಡೆ ,ದೇಶದ ಅನೇಕ ನಗರಗಳ ಸೇವಾಬಸ್ತಿಗಳು ಸೇರಿದಂತೆ ಸಮಾಜದಲ್ಲಿ ಎಷ್ಟೋ ಮಕ್ಕಳಿಗೆ ಓದಲು ಅವಕಾಶವಿಲ್ಲ.ಬದುಕಿನ ಕೂಳಿಗೂ ಬಡಿದಾಡಬೇಕಾದ ಅಧ್ವಾನ. ಇವರ ಬದುಕಿಗೇನು?
  ಬಡತನದ ಬೇಗೆಯಲ್ಲಿ ದಿನಕಳೆಯುತ್ತಿರುವ ಸ್ಲಮ್‌ಗಳಲ್ಲಿರುವ ಮಕ್ಕಳನ್ನು ಬಹಳ ಸುಲಭವಾಗಿ ದುಷ್ಟಕೃತ್ಯಗಳಿಗೆ ತಮ್ಮ ದಾಳವನ್ನಾಗಿ ಬಳಸಿಕೊಳ್ಳುತ್ತಿವೆ ದುಷ್ಟಶಕ್ತಿಗಳು. ಇಂತಹ  ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.ಇಂತಹ ಆಮಿಷಕ್ಕೆ ಬಲಿಯಾಗಿ ಮಕ್ಕಳ ಸುಂದರ ಭವಿಷ್ಯ ಹಾಳುಗೆಡಹುವುದು ಒಂದೆಡೆಯಾದರೆ ಅವರ ಪೋಷಕರು ಕುಡಿತದ ದಾಸರಾಗಿರುವುದರಿಂದ ಅವರನ್ನು ಸುಲಭವಾಗಿ ವಂಚಿಸಲು ಇನ್ನಷ್ಟು ಅವಕಾಶ. ಇಂದು ಸ್ಲಮ್‌ಗಳಲ್ಲಿ ಬಳಪ-ಲೇಖನಿ ಹಿಡಿಯಬೇಕಾದ ಸಣ್ಣ ಮಕ್ಕಳು ಗಾಂಜಾ, ಅಫಿಮು, ಚರಸ್‌ನಂಥ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಚಕ್ರವ್ಯೂಹದಲ್ಲಿ ಸಿಕ್ಕಿ ಹೊರಬರಲಾರದೆ ವಿಲವಿಲ ಒದ್ದಾಡುತ್ತಿದ್ದಾರೆ. ಮೊದಲಿಗೆ ಸಣ್ಣ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುವ ಮಕ್ಕಳು, ಬೆಳೆದು ದೊಡ್ಡವರಾದಾಗ, ಜೀವನದಲ್ಲಿ ಗುರಿಯಿಲ್ಲದೆ, ಬೇರೆ ದಾರಿ ಕಾಣದೆ ಇಂತಹ ನರಕದಲ್ಲಿಯೆ ಬದುಕನ್ನು ಅಂತ್ಯಗೊಳಿಸುವ ದಾರುಣ ಸ್ಥಿತಿ.
ಮುಗ್ಧಮನಸುಗಳಿಗೆ ತಮ್ಮ ಜೀವನ ಮೃತ್ಯುಕೂಪದಲ್ಲಿ ಬೀಳುತ್ತವೆ ಎಂದು ತಿಳಿಯುವುವಾಗ ಕಾಲ ಕೈ ಮೀರಿ ಹೋಗಿರುತ್ತದೆ. ಆದರೂ ಕೆಲವೊಂದು ಕಾಯಿಲೆಗೆ ಪ್ರಾರಂಭದಲ್ಲಿಯೇ ಔಷದಿ ಮಾಡಿದರೆ ನಿವಾರಿಸಬಹುದು ಅಥವಾ ರೋಗದ ಪ್ರಖರತೆ ಹತೋಟಿಗೆ ತರಬಹುದು. ಸ್ಲಮ್‌ನಲ್ಲಿರುವ ಮಕ್ಕಳ -ಜನರ ಬದುಕನ್ನೇ   ಬಂಡವಾಳವಾಗಿಸಿಕೊಂಡ ಮತೀಯವಾದಿ ಗುಂಪುಗಳು  ಈ ಕುಟುಂಬಗಳನ್ನು ಮತಾಂತರ ಮಾಡಿದ ಘಟನೆಗಳೂ ಸಾಕಷ್ಟಿವೆ.
ಮನೆಯ ಬಡತನ, ತಂದೆ ತಾಯಿಯ ಕಿರುಕುಳ, ಮಾನಸಿಕ ಬೆಳವಣಿಗೆಯ ಕೊರತೆ, ಅನಕ್ಷರತೆ, ಅತಿಯಾಸೆ ಹೀಗೆ ಅನೇಕ ಸಮಸ್ಯೆಗಳಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ.  ಗಂಡು ಮಕ್ಕಳು ಈ ರೀತಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದರೆ ಪಾಪ ಹೆಣ್ಣು ಮಕ್ಕಳ ಸ್ಥಿತಿ ಇನ್ನಷ್ಟೂ ಶೋಚನೀಯ. ಅಪ್ರಾಪ್ತ ಬಾಲೆಯರು ಕಾಮಾಂಧರ ಭೋಗದ ವಸ್ತುಗಳಾಗುತ್ತಿದ್ದಾರೆ. ಮೈಕಲ್ ಜಾಕ್ಸನ್ ಕಾಮತೃಷೆ ತೀರಿಸಿಕೊಳ್ಳಲು ಅಪ್ರಾಪ್ತೆಯರನ್ನೆ ಬಳಸುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಮಧ್ಯಮ ವರ್ಗದ ಹೆಣ್ಣಿನ ಮೇಲಾದ ಲೈಂಗಿಕ ದೌರ್ಜನ್ಯ,  ಸೌಜನ್ಯಳಂತಹ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದನ್ನು   ಕಂಡಾಗ, ನಮ್ಮ ದೇಶದಲ್ಲಿಯೂ ಕೂಡ ಇಂತಹ ಪಾಪಿಗಳಿರುವುದು ವ್ಯಕ್ತ.
 ವಾಮಾಚಾರವೆಂಬ ಮಾಯೆಗೆ ಬಲಿಯಾಗಿ ಪುಟಾಣಿಗಳನ್ನೆ ಬಲಿಕೊಡುವಂಥ ಕಟುಕರೂ ಸಮಾಜದಲ್ಲಿದ್ದಾರೆ. ಎನ್‌ಸಿಆರ್‌ಬಿಯು ೨೦೧೧ರಲ್ಲಿ ನಮ್ಮ ದೇಶದಲ್ಲಿನ ಮಕ್ಕಳ ಸಮಾಜ ವಿರೋಧಿ ಚಟುವಟಿಕೆಯನ್ನು ವರದಿ ಮಾಡಿದೆ. ಜೈಪುರದಲ್ಲಿ ೩೬೯ ಕ್ರೈಮ್ ಮತ್ತು ಬಲಾತ್ಕಾರದ ದೂರು ದಾಖಲಾಗಿದೆ. ರಾಜಸ್ಥಾನ-೧,೩೧೮, ಮಧ್ಯಪ್ರದೇಶ-೪,೯೧೨, ಮಹಾರಾಷ್ಟ್ರ-೩,೬೨೪, ಉತ್ತರ ಪ್ರದೇಶ-೨,೩೩೨ ದೂರು ದಾಖಲಾಗಿದೆ. ೧೫-೨೯ ವರ್ಷದೊಳಗಿನ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ೬೫೭ ಪ್ರಕರಣಗಳಲ್ಲಿ ೩೨೯ ಮಹಿಳೆಯರು, ದೆಹಲಿ-೬೫೧, ಮುಂಬೈ-೫೮೨, ಚೆನೈ-೪೭೨ ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸ್ಲಮ್‌ಗಳಲ್ಲಿರುವ ಮಕ್ಕಳಿಗೆ ಹಾಗೂ ಬಡತನದಲ್ಲಿರುವ ಮಕ್ಕಳಿಗೆ ವಿದ್ಯೆ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸೇವಾಸಂಸ್ಥೆಗಳು ಶ್ರಮಿಸುತ್ತಿವೆ. ೧೯೮೦ರ ದಶಕದಲ್ಲಿ ಒರಿಸ್ಸಾದಲ್ಲಿ ಫ್ಲಾಟ್‌ಫಾರಂ ಶಾಲೆಗಳು ಪ್ರಾರಂಭಗೊಂಡವು. ನಿವೃತ್ತ ಸೇನಾಧಿಕಾರಿಯ ಪತ್ನಿ ಇಂದರ್‌ಜಿತ್ ಖುರಾನ ರುಚಿಕಾ ಸೋಷಿಯಲ್ ಸರ್ವಿಸ್ ಆರ್ಗನೈಜೇಷನ್ ಪ್ರಾರಂಭ ಮಾಡಿ, ಈಗ ಆ ಸಂಸ್ಥೆ ೮೨೦ ಫ್ಲಾಟ್‌ಫಾರಂ ಶಾಲೆ, ೭೫ ಸೇವಾ ಬಸ್ತಿ ಶಾಲೆ, ೨೫ ನರ್ಸರಿ ಶಾಲೆಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದೆ. ಸರ್ಕಾರ ಮಕ್ಕಳ ವಿಕಾಸಕ್ಕೆಂದು ಹಲವಾರು ಯೋಜನೆಗಳನ್ನು, ಸ್ವಯಂಸೇವಾ ಸಂಸ್ಥೆಗಳು, ಅಂಗನವಾಡಿಗಳು, ಶಾಲಾಪೂರ್ವ ಚಟುವಟಿಕೆಗಳು ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡುತ್ತಿವೆ. ೧೯೫೨ರಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆಯಡಿಯಲ್ಲಿ ಬಾಲವಿಕಾಸ ಕೇಂದ್ರ ಹಾಗೂ ೧೯೫೫ ಮಕ್ಕಳ ಕಲ್ಯಾಣವನ್ನೇ ಗುರಿಯಾಗಿಸಿ ರಾಷ್ಟ್ರೀಯ ಮಕ್ಕಳ ಮಂಡಳಿಯನ್ನು ಪ್ರಾರಂಭ ಮಾಡಿದೆ.
ಸಂಘ ಪರಿವಾರದ ಸಾರ್ಥಕ ಕಾರ್ಯ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿ  ೩ ಗಂಡು ಮಕ್ಕಳಿಗಾಗಿ ನಡೆಯುವ ನರೇಂದ್ರ ನೆಲೆ(೬೫ಮಕ್ಕಳು), ನಮ್ಮ ಮನೆ(೨೨ಮಕ್ಕಳು), ಚಂದನ ನೆಲೆ(೩೩ಮಕ್ಕಳು) ಮತ್ತು ಹೆಣ್ಣು ಮಕ್ಕಳಿಗಾಗಿ ನಿವೇದಿತಾ (೨೮), ಆಶಾಕಿರಣ (೨೫), ವಸುಧಾ ನೆಲೆ (೨೫), ಶಿವಮೊಗ್ಗದಲ್ಲಿ (೨೫), ಮೈಸೂರು(೧೨)ತುಮಕೂರು(೧೬),ಬಾಗಲಕೋಟೆಯಲ್ಲಿ ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ. ನೆಲೆಯಲ್ಲಿ ಚಿಂದಿ ಆಯುವ, ಅನಾಥರು, ಸಿಂಗಲ್ ಪೇರೆಂಟ್ ಹೀಗೆ ಹಲವಾರು ನಿರ್ವಸಿತ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟು ಉಚಿತ ಶಿಕ್ಷಣ ವ್ಯವಸ್ಥೆ ಮಾಡುತ್ತಿದೆ.
ಸೇವಾ ಕಿರಣದ ವತಿಯಿಂದ ೭೦ ಟ್ಯೂಶನ್ ಕೇಂದ್ರಗಳಲ್ಲಿ ೧,೨೦೦ ಮಕ್ಕಳಿಗೆ ೭೦ ಶಿಕ್ಷಕರು ಉಚಿತ ಮನೆಪಾಠ ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ ಮನೋನಂದನ, ಅರುಣ ನಂದನ ಅಂಗವಿಕಲ ಮಕ್ಕಳ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಯೂತ್ ಫಾರ್ ಸೇವಾದ ವತಿಯಿಂದ ಬಡ ಮಕ್ಕಳಿಗೆ ಶಿಕ್ಷಣದ ವೆಚ್ಚದೊಂದಿಗೆ ಉಚಿತವಾಗಿ ಶಿಕ್ಷಣಕ್ಕೆ ಅಗತ್ಯ ಸಲಕರಣೆಗಳನ್ನು ಒದಗಿಸುತ್ತಿವೆ. ಆಪ್ತ ಸಲಹಾ ಕೇಂದ್ರದಿಂದ ಮಕ್ಕಳಿಗೆ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತಿದೆ.
ರಾಷ್ಟ್ರೋತ್ಥಾನ ಪರಿಷತ್‌ನ ವತಿಯಿಂದ ದಿನದಲ್ಲಿ ೨ ಗಂಟೆಗಳ ತರಬೇತಿಯನ್ನು ೨೨೭ ಕೇಂದ್ರಗಳಲ್ಲಿ ೨೨೭ ಶಿಕ್ಷಕರು ೫ಸಾವಿರಕ್ಕೂ ಅಧಿಕ ಮಕ್ಕಳಿಗೆ ಗಣಿತ, ಆಂಗ್ಲ, ವಿಜ್ಞಾನ ಪಠ್ಯವನ್ನು ಬೋಧಿಸುತ್ತಿದ್ದಾರೆ. ಕೇಶವ ಸೇವಾ ಸಮಿತಿಯಿಂದ ೩೦೦೦ ವಿದ್ಯಾರ್ಥಿಗಳಿಗೆ ಮನೆಪಾಠ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬಡಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿದ್ದು ೬೦ ಮಕ್ಕಳಿಗೆ ಈರೀತಿಯ ಸೌಲಭ್ಯ ದೊರಕಿದೆ. ಸ್ನೇಹ ಸೇವಾ ಟ್ರಸ್ಟ್‌ನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ೭ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ``ವಿದ್ಯಾವಾಹಿನಿ" ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ವಿದ್ಯಾವಾಹಿನಿಯಲ್ಲಿ ೮೬ ಮಕ್ಕಳು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಸ್ಲಮ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ೧೧ಕೇಂದ್ರಗಳಲ್ಲಿ ೨೧೬ ಮಕ್ಕಳಿಗೆ ಉಚಿತ ಮನೆಪಾಠ ಕಲಿಸಲಾಗುತ್ತಿದೆ. ಸಂಸ್ಕಾರ ಕೇಂದ್ರದಿಂದ ಮಕ್ಕಳಿಗೆ ಸಂಸ್ಕಾರವನ್ನು ಕಲ್ಪಿಸಲಾಗಿದೆ. ವಿಶ್ವಹಿಂದೂ ಪರಿಷತ್ತಿನ ವನಿತಾಶ್ರಮ ಹಾಗೂ ಕುತ್ತಾರು ಆಶ್ರಮದಲ್ಲಿ ಅನೇಕ ನಿರಾಶ್ರಿತ ಮಕ್ಕಳು ತಮ್ಮ ಜೀವನ ಸಾರ್ಥಕ್ಯ ಮಾಡಿ ಕೊಳ್ಳುತ್ತಿರುವುದನ್ನು ಗಮನಿಸಬೇಕಾದ ಅಂಶ. ಯಾವುದೆ ಸ್ವಾರ್ಥ ಬಯಸದೆ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ಅನೇಕ ಸ್ವಯಂಸೇವಕರು  ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಮತಾಂತರದ ಗುರಿಯಿರಿಸಿ, ಸ್ವಾರ್ಥಸಾಧಿಸುವ ಮತೀಯವಾದಿ ಶಕ್ತಿಗಳಿಗೆ  ಸೆಕ್ಯುಲರ್  ಸಿಗುತ್ತಿದೆ. ಯಾವುದೇ ಸ್ವಾರ್ಥಾಪೇಕ್ಷೆಯಿಲ್ಲದೆ ಸೇವೆ ಕರ್ತವ್ಯ ಎಂಬ ನೆಲೆಯಲ್ಲಿ ೮೬ ವರ್ಷಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಸೇವಾ ಪ್ರಕಲ್ಪಗಳನ್ನು  ನಡೆಸುತ್ತಿರುವ   ಸಂಘಪರಿವಾರಗಳಿಗೆ ಕೋಮುಸಂಘಟನೆ ಎನ್ನುವ ಪಟ್ಟ !
 ಹಿಂದು ಸಮಾಜದ ಎಲ್ಲ ಬಂಧುಗಳಿಗೆ ನೆಲೆಯನ್ನು ಕಲ್ಪಿಸಬೇಕು ಹಾಗೂ ಭವ್ಯಭಾರತದ ನಿರ್ಮಾಣ ಮಾಡಬೇಕೆನ್ನುವ ಮನೋಭಿಲಾಷೆಯು  ಎಲ್ಲಿಯಾದರೂ ಕೋಮುವಾದಕ್ಕೆ ಆಸ್ಪದ ಕೊಡುತ್ತದೆಯೇ? ಸ್ವಾರ್ಥ, ಕೀರ್ತಿ ಬಯಸದೆ ಸೇವಾ ಬಸ್ತಿಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ, ಸಂಸ್ಕಾರವನ್ನು ಬೆಳೆಸುತ್ತಾ ಸಮಾಜದ ಮುಖ್ಯವಾಹಿನಿಗೆ ತಂದು ಸತ್ಪ್ರಜೆಗಳನ್ನಾಗಿ ಮಾಡಬೇಕೆನ್ನುವುದು ಸಂಘಪರಿವಾರದಂತಹ ಅನೇಕ ಸಂಘ ಸಂಸ್ಥೆಗಳು ಮಕ್ಕಳ ಬದುಕಿಗೆ ಬೆಳಕಾಗುತ್ತಿರುವುದು ಅರ್ಥಪೂರ್ಣವೆಂದೆನಿಸದೇ?


ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್...ಶಿಕ್ಷಕಿಯರ ಅಳಲು
ಕೇಂದ್ರದ ಗ್ಯಾಸ್ ನೀತಿ..ಅಂಗನವಾಡಿಗೂ ತಟ್ಟಿದ ಬಿಸಿ

ಕನ್ನಡ ಉಳಿಸಬೇಕೆಂದು ಕನ್ನಡ ಪರ ಸಂಘಟನೆಗಳು, ರಾಜ್ಯ ಸರಕಾರ ವಿಪರೀತ ಹೋರಾಟ ನಡೆಸುತ್ತಿದ್ದರೂ, ಕನ್ನಡವನ್ನೆ ಮೂಲವಾಗಿಸಿಕೊಂಡು ರಾಜ್ಯದಲ್ಲಿ ಕಾರ್ಯಚರಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಮೇಲಿನ ಬೆಲೆ ಏರಿಕೆ ಮಾಡಿರುವುದರ ಬಿಸಿ ತಟ್ಟಿದೆ. ಶಿಕ್ಷಣ ಕಲಿಕೆಯ ಮೊದಲ ಮೆಟ್ಟಿಲು ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳಿಗೆ ನೀಡುತ್ತಿದ್ದ ಬೆಳಗ್ಗಿನ ತಿಂಡಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರಕಾರವು ಅಂಗನವಾಡಿ ಕೇಂದ್ರಗಳಿಗೆ ಉರುವಲು ವೆಚ್ಚವಾಗಿ ತಿಂಗಳಿಗೆ ರೂ.೧೦೦ ರಂತೆ ವರ್ಷಕ್ಕೆ ೧,೨೦೦ ನೀಡುತ್ತಿತ್ತು. ನಂತರ ಸತತ ಹೋರಾಟದ ಫಲವಾಗಿ ರೂ.೮೦೦ಜಾಸ್ತಿ ಮಾಡಿದೆ. ಈ ಸಂದರ್ಭ ಅಂಗನವಾಡಿ ಕೇಂದ್ರಗಳಲ್ಲಿ ಒಂದು ಹೊತ್ತು ಮಕ್ಕಳಿಗೆ ಬೇಯಿಸಿದ ಆಹಾರ ನೀಡುತ್ತಿದ್ದರಿಂದ ಗ್ಯಾಸ್ ಸಿಲಿಂಡರ್ ೩ರಿಂದ ಮೂರುವರೆ ತಿಂಗಳವರೆಗೆ ಬರುತ್ತಿದ್ದು ವರ್ಷಕ್ಕೆ ೪ ಗ್ಯಾಸ್ ಸಿಲಿಂಡರ್ ಸಾಲುತ್ತಿತ್ತು. ಇದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಾಮರ್ಥ್ಯವನ್ನಾಧರಿಸಿ ಗ್ಯಾಸ್ ಸಿಲಿಂಡರ್ ಸಾಗಾಟ-ವೆಚ್ಚ ಹೆಚ್ಚಿದಾಗ ಅಲ್ಪಸ್ವಲ್ಪ ಹಣವನ್ನು ಶಿಕ್ಷಕಿಯರೇ ಭರಿಸುತ್ತಿದ್ದರು. ಈಗ ಕೇಂದ್ರ ಸರಕಾರ ಏಕಾಏಕಿ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಬೆಲೆ ಏರಿಸಿದ್ದರಿಂದ ಶಿಕ್ಷಕರಿಯರಿಗೆ ದಿಕ್ಕು ತೋಚದಂತಾಗಿದೆ.
ಬದಲಾದ ಅಂಗನವಾಡಿ ಆಹಾರ ಪಟ್ಟಿ:
ಎಪ್ರಿಲ್ ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಬೆಳಿಗ್ಗೆ ಮತ್ತು ಮದ್ಯಾಹ್ನ ಗಂಜಿ ಹಾಗೂ ಚಟ್ನಿ ನೀಡಬೇಕು ಎನ್ನುವ ಆದೇಶವಿದೆ. ಚಟ್ನಿಗೆ ಸರಕಾರದ ವತಿಯಿಂದ ಹುರುಳಿ, ಮೆಣಸು, ಉಪ್ಪುಗಳನ್ನು ಮಾತ್ರ ಬಳಸಬೇಕಿದ್ದು ಅಷ್ಟು ಸಾಮಾಗ್ರಿ ಮಾತ್ರ ನೀಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಆಹಾರ ವ್ಯವಸ್ಥೆಗೊಳಿಸಬೇಕು ಎನ್ನುವ ಸಂಪೂರ್ಣ ಜವಾಬ್ದಾರಿ ವಹಿಸಿದ್ದರಿಂದ ಕರಾವಳಿ ಬಾಗದಲ್ಲಿ ಎರಡು ಹೊತ್ತು ಗಂಜಿ ನೀಡುವುದನ್ನು ಕಡಿತಗೊಳಿಸಿ ವಾರದಲ್ಲಿ ೨ ದಿನ ಗಂಜಿಯೂಟ ಸೇರಿದಂತೆ ಉಳಿದ ದಿನದಲ್ಲಿ ಬೇಯಿಸಿದ ಕಡ್ಲೆಕಾಳು ನೀಡುವಂತೆ ಸೂಚಿಸಲಾಗಿದೆ. ಬೆಳಿಗ್ಗೆ ಹೆಸರುಕಾಳು, ಗಂಜಿ-ಚಟ್ನಿ, ಮದ್ಯಾಹ್ನ ಅನ್ನಸಾಂಬಾರು (ಕುಚ್ಚಲು ಅಕ್ಕಿ)ನೀಡಬೇಕು.
ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್‌ಕೊರತೆ:
ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೆಳಗ್ಗಿನ ತಿಂಡಿಗೆ ಕಡ್ಲೆಕಾಳನ್ನು ಬೇಯಿಸಿ ನೀಡಬೇಕು. ಅಲ್ಲದೇ ತೊಗರಿಬೇಳೆ, ಕುಚ್ಚಲು ಅಕ್ಕಿ ಅನ್ನ, ಕಡ್ಲೆ, ಮಕ್ಕಳಿಗೆ ಕುದಿಸಿದ ನೀರು ಎಲ್ಲವು ಕೂಡ ಗ್ಯಾಸ್‌ನಲ್ಲಿ ಆಗಬೇಕಿರುವುದರಿಂದ ಮಕ್ಕಳ ಸಂಖ್ಯೆ ಆದರಿಸಿ ಗ್ಯಾಸ್ ೨ತಿಂಗಳು ಬರುವುದು ಕಷ್ಟಕರ. ಜಿಲ್ಲೆಯ ೩೦ಕ್ಕಿಂತಲೂ ಕಡಿಮೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರೆಶರ್ ಕುಕ್ಕರ್ ಸೌಲಭ್ಯವಿದ್ದರಿಂದ ಗ್ಯಾಸ್ ಸ್ವಲ್ವ ದಿನ ಹೆಚ್ಚು ಬಳಕೆ ಮಾಡಬಹುದಾಗಿದೆ. ಶಿಕ್ಷಕಿಯರ ಸತತ ಹೋರಾಟದ ಬಳಿಕ ಆಗಸ್ಟ್ ತಿಂಗಳಿನಿಂದ ೩ ತಿಂಗಳಿಗೆ ರೂ.೨೦೦ ಜಾಸ್ತಿ ಮಾಡಿದ್ದು, ವರ್ಷಕ್ಕೆ ರೂ.೮೦೦ ಹೆಚ್ಚಳವಾಗಿ ಉರುವಲು ವೆಚ್ಚ ವರ್ಷಕ್ಕೆ ರೂ. ೨೦೦೦ ಸಿಗುತ್ತಿದೆ. ಇದರಿಂದ ಸ್ವಲ್ಪ ಸುಧಾರಿಸಿ ಕೊಳ್ಳುವುದರಲ್ಲಿ ಕೇಂದ್ರದ ಬೇಲೆಯೇರಿಕೆಯಿಂದಾಗಿ ಪ್ರತಿ ಗ್ಯಾಸ್‌ಗೆ ರೂ.೧,೧೫೦ ನೀಡಿ ಖರೀದಿಸುವುದು ಮಾತ್ರವಲ್ಲ, ಸಿಲಿಂಡರ್‌ನ ಸಾಗಾಟ ವೆಚ್ಚ ಭರಿಸಬೇಕಿದೆ. ನಗರ ಪ್ರದೇಶದಲ್ಲಿ ಸಾಗಾಟ ವೆಚ್ಚ ಸ್ವಲ್ಪ ಕಡಿಮೆಯಾಗಿದ್ದು, ಗ್ರಾಮೀಣ ಪರಿಸರದಲ್ಲಿ ವೆಚ್ಚ ವಿಪರೀತವಾಗಿದೆ. ಸರಕಾರದಿಂದ ಉರುವಲು ವೆಚ್ಚವಾಗಿ ರೂ. ೨,೦೦೦ ಮಾತ್ರ ಸಿಗುತ್ತಿದ್ದು, ಒಂದು ಅಂಗನವಾಡಿಯಲ್ಲಿ ೩೦ ರಂತೆ ಮಕ್ಕಳ ಸಂಖ್ಯೆಯನ್ನಾದರಿಸಿ ಕನಿಷ್ಟ ೫ ಸಿಲಿಂಡರ್‌ನ ಅವಶ್ಯಕತೆಯಿದೆ. ಗ್ಯಾಸ್ ಸಿಲಿಂಡರ್‌ಗೆ ರೂ.೧,೧೫೦ರಂತೆ ೫ ಸಿಲಿಂಡರ್‌ಗೆ ರೂ.೫,೭೫೦ ಆಗುತ್ತಿದ್ದು ಸರಕಾರದಿಂದ ಸಿಗುವ ಉರುವಲು ವೆಚ್ಚ ಕೇವಲ ರೂ.೨೦೦೦ವಾಗಿದೆ. ಉಳಿದಂತೆ ೩,೭೫೦ನ್ನು ಶಿಕ್ಷಕಿಯರು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾವುದೇ ಅಧಿಕಾರಿಗಳು ಕೇಳುತ್ತಿಲ್ಲ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾರ್ಚ್ ತಿಂಗಳಿನಿಂದ ಅಂಗನವಾಡಿ ಶಿಕ್ಷಕಿಯರ ಅಹವಾಲು ಸ್ವೀಕರಿಸದಿರುವುದು ಮಕ್ಕಳ ಹಾಗೂ ಅಂಗನವಾಡಿಯ ಕುರಿತಾಗಿರುವ ಕಾಳಜಿ ಸೂಚಿಸುತ್ತದೆ.
ಅಂಗನವಾಡಿ ಕೇಂದ್ರಗಳ ಅನ್ಯವೆಚ್ಚ:
ಜಿಲ್ಲೆಯಲ್ಲಿರುವ ಕೆಲವೊಂದು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೇ ಕ್ಲಬ್, ಸಂಘಸಂಸ್ಥೆಗಳಲ್ಲಿ ನಡೆಸಲಾಗುತ್ತಿದೆ. ಕ್ಲಬ್‌ಗಳಲ್ಲಿ ನಡೆಸುವ ಅಂಗನವಾಡಿ ಕೇಂದ್ರದ ಕರೆಂಟ್ ಬಿಲ್‌ಗಳನ್ನು ಅವರು ತುಂಬಿಸಿಕೊಂಡು ಹೋಗುತ್ತಿದ್ದು, ಇತರೆಡೆಯಲ್ಲಿ ಶಿಕ್ಷಕಿಯರು ಭರಿಸಬೇಕಾದ ದುಸ್ಥಿತಿಯಿದೆ. ಅಲ್ಲದೆ ಸಿಲಿಂಡರ್ ಸಾಗಾಟದ ವೆಚ್ಚವನ್ನು ನೀಡಬೇಕಿದೆ. ಸರಕಾರ ಗಂಜಿ-ಚಟ್ನಿ ವ್ಯವಸ್ಥೆ ಮಾಡಿದ್ದರೂ ತೆಂಗಿನ ಕಾಯಿ ನೀಡುವುದಿಲ್ಲ. ಅದನ್ನು ಕೆಲವೊಮ್ಮೆ ನಿಭಾಯಿಸಬೇಕು. ಚಟ್ನಿ ರುಬ್ಬಲು ಸರಿಯಾದ ವ್ಯವಸ್ಥೆಯಿಲ್ಲ. ಕೇಂದ್ರ ಸರಕಾರದಿಂದ ರೂ. ೩೦೦೦ಹಾಗೂ ರಾಜ್ಯ ಸರಕಾರದಿಂದ ರೂ.೧೫೦೦ ಗೌರವಧನ ಪಡೆಯುವ ನಾವು ರೂ.೩೭೫೦ ಮತ್ತು ಇತರ ವೆಚ್ಚವನ್ನು ಭರಿಸಿದರೆ ನಮ್ಮ ಸಂಸಾರ ಗತಿಯೇನು? ಎನ್ನುವ ಪ್ರಶ್ನೆ ರಾಜ್ಯದ ಎಲ್ಲಾ ಅಂಗನವಾಡಿ ಶಿಕ್ಷಕಿಯರದಾಗಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಸರಕಾರ ಉತ್ತರ ನೀಡಬೇಕಿದೆ. ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸಿದರೆ ಮಾತ್ರ ಅಂಗನವಾಡಿಗಳಲ್ಲಿ ಚಿಕ್ಕ-ಚಿಕ್ಕ ಮಕ್ಕಳ ತೊದಲು ನುಡಿಗಳು ಪುನಃ ಕೇಳುವಂತಾಗುತ್ತದೆ.
ಬಾಕ್ಸ್:
ಗ್ಯಾಸ್ ಬೆಲೆಯೇರಿಕೆಯಿಂದ ರಾಜ್ಯದ ಎಲ್ಲಾ ಅಂಗನವಾಡಿಯಲ್ಲೂ ಕೊರತೆ ಕಾಣಿಸಿದೆ. ಕಡ್ಲೆಕಾಳನ್ನು ಬೇಯಿಸದೆ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಸರಕಾರವು ಸಂಜೆಯವರೆಗೆ ಅಂಗನವಾಡಿಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದರೂ ಯಾವುದೇ ಸೌಕರ್ಯ ಒದಗಿಸಿಲ್ಲ. ಕೆಲವು ಕಡೆ ದಾನಿಗಳ ಸಹಕಾರದಿಂದ ಮಕ್ಕಳು ಮಲಗಲು ಚಾಪೆಯ ವ್ಯವಸ್ಥೆ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸಬೇಕು. 
ವಿಶಾಲಾಕ್ಷಿ-ಜಿಲ್ಲಾ ಕಾರ್ಯದರ್ಶಿ ಅಂಗನವಾಡಿ ಕಾರ್ಯಕರ್ತೆಯರ ಸಂಘ.

ಬಾಕ್ಸ್:
ದ.ಕ.ಜಿಲ್ಲೆಯಲ್ಲಿರುವ ಅಂಗನವಾಡಿಗಳು:
*ಮಂಗಳೂರು ನಗರ-೨೨೮
*ಗ್ರಾಮಾಂತರ -೪೮೦
*ಬೆಳ್ತಂಗಡಿ-೩೩೦
*ಪುತ್ತೂರು-೩೮೪
*ಸುಳ್ಯ-೧೬೫
* ಬಂಟ್ವಾಳ-೫೦೦ಕ್ಕೂ ಅಧಿಕ


ಗೋ ಮಾತೆ ರಕ್ಷಣೆಯ ಅಳಿಲು ಸೇವೆ ನಮ್ಮದಾಗಲಿ
 ಹಿಂದುಗಳ ಹಬ್ಬ ದೀಪಾವಳಿಯಲ್ಲಿ ಹಣತೆಯ ಬೆಳಕಿನೊಂದಿಗೆ ಪಟಾಕಿಗಳ ಸದ್ದು ಕಳೆದ ಮರುದಿನವೇ ತಾಯಿಯ ಸ್ಥಾನದಲ್ಲಿರುವ ಗೋಮಾತೆಯನ್ನು ಪೂಜಿಸುವ ದಿನವೇ ಗೋಪೂಜೆ. ಗೋವನ್ನು ಸ್ವಚ್ಛಗೊಳಿಸಿ ಹೂವು-ಹಾರಗಳಿಂದ ಶೃಂಗರಿಸಿ, ಶ್ರದ್ಧೆ-ಭಕ್ತಿಯಿಂದ ಆರಾಧಿಸಿ ಸಂತಸಪಡುವ ದಿನ.
ಕೃಷಿ ಭೂಮಿಯಿರುವ ಮನೆಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಮಾಡುವುದರೊಂದಿಗೆ ಅವುಗಳಿಗೆ ಅರಶಿನ ಎಲೆಯಲ್ಲಿ ಮಾಡಿದ ಕಡಬು ನೀಡುವುದು ಕ್ರಮ. ಅಲ್ಲದೇ ಗದ್ದೆಯಿಂದ ತೆಗೆದ ಫಸಲನ್ನು ಗೋವುಗಳಿಗೆ ನೀಡುವ ಪುಣ್ಯದಿನ. ಗೋವು ಅದನ್ನು ತಿಂದು ಸಂತೋಷದಿಂದ ಅಂಬಾ ಎಂದು ಕೂಗಿದಾಗಲೇ ಕುಟುಂಬದ ಸದಸ್ಯರೆಲ್ಲರ ಮನಸ್ಸಿಗೆ ನೆಮ್ಮದಿಯ ಭಾವ.
ನಮ್ಮ ಜೀವನದಲ್ಲಿ ಬೇರೆ ಬೇರೆ ರೂಪದಲ್ಲಿ ನಮಗೆ ಸಹಕಾರಿಯಾಗುವ ಗೋವು ಅಳಿವಿನಂಚಿನಲ್ಲಿರುವುದು ದುಃಖಕರ. ಇದೇ ರೀತಿ ಕೃಷಿ ಭೂಮಿ-ಗೋವುಗಳು ಕ್ಷೀಣಿಸುತ್ತಿದ್ದರೆ ಮುಂದೊಂದು ದಿನ ಗೋವನ್ನು ಮೃಗಾಲಯದಲ್ಲಿ ನೋಡಲು ಮಾತ್ರ ಸಾಧ್ಯ!
ಪುರಾಣದಲ್ಲಿ ಗೋವು
ಗೋವುಗಳನ್ನು ರಕ್ಷಣೆ ಮಾಡಿದ ಶ್ರೀಕೃಷ್ಣ ಗೋ-ಸಂರಕ್ಷಕ ಎನ್ನುವ ಬಿರುದು ಪಡೆದಿದ್ದಾನೆ. ನಮ್ಮ ಸಂಸ್ಕೃತಿಯಲ್ಲಿ ಗಾ,ಗೀ,ಗೋ (ಗಾ-ಗಾಯತ್ರಿ ಮಂತ್ರ, ಗೀ-ಗೀತೆ, ಗೋ-ಗೋವು) ಎನ್ನುವ ಮೂರು ಅಕ್ಷರಕ್ಕೆ ಮಹತ್ವವಿದೆ. ಸವಿತ್ರನಾರಾಯಣನನ್ನು ಸ್ಮರಿಸುವ ಗಾಯತ್ರಿ ಮಂತ್ರ, ಜೀವನದ ಏರು-ಪೇರುಗಳನ್ನು ಸಮತೋಲನಕ್ಕೆ ತರಬಲ್ಲ ಭಗವಂತನ ನುಡಿಯಾದಾರಿತ ಭಗವದ್ಗೀತೆ ಮತ್ತು ಮನಸ್ಸು ಹಾಗೂ ಶರೀರಕ್ಕೆ ಬೇಕಾದ ಆಹಾರ ನೀಡುವ ಗೋಮಾತೆಗೆ ಗೌರವವಿದೆ. ಕ್ಯಾನ್ಸರ್‌ನಂತ ಮಹಾಮಾರಿಯನ್ನು ಗೋಮೂತ್ರ ದೂರಿಕರಿಸುತ್ತದೆ. ಗೋವಿನ ಉತ್ಪನ್ನಗಳಿಂದ ಜೀವಕೋಶಗಳು ಹೊಸ ಹುಮ್ಮಸ್ಸು ಪಡೆಯಲು ಸಹಕಾರಿ. ಆಯುರ್ವೇದದಲ್ಲಿ ಪಂಚಗವ್ಯ ಘೃತವು ಮಾನಸಿಕ ಔಷಧವೆಂದು ತಿಳಿಸಲಾಗಿದೆ. ದೇವಸ್ಥಾನದ ಶಿಖರ ಚಲನೆಯಲ್ಲಿ ಗೋವೃಷಭ ಬಳಸುತ್ತಾರೆ. ಬಿಂಬ ಚಲನೆಯಲ್ಲಿ ಗೋಮಾತೆಯನ್ನು ಬಳಸಲಾಗುತ್ತದೆ. ನೇರವಾಗಿ ದೇವರ ಮೂರ್ತಿ ಹೊರತರುವ ಸಾಮರ್ಥ್ಯ ಮನುಷ್ಯರಿಗಿಲ್ಲಾ. ಗೋವಿಗೆ ಮಾತ್ರ ಎಲ್ಲಾ ದೋಷ ತಡೆದುಕೊಳ್ಳುವ ಶಕ್ತಿ ಇರುವುದರಿಂದಲೇ ಅವುಗಳನ್ನು ಬಳಸುತ್ತಾರೆ. ಗೋವಿನ ಪರೋಪಕಾರ ಗುಣವೇ ಅವುಗಳಿಗೆ ದೋಷಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನೀಡಿದೆ. ಆದ್ದರಿಂದಲೇ ಗೋವಿನ ಕಾರ್ಯ ನೋಡಿ ಪರೋಪಕಾರಾರ್ಥಾಯ ಇದಂ ಶರೀರಂ ಎನ್ನುವ ಮಾತು ಸಮಂಜಸ ಎನ್ನುವುದು ನನ್ನ ಭಾವನೆ. 
ಹಿಂದು ಸಂಸ್ಕೃತಿಯಲ್ಲಿ ಗೋವಿನ ಮಹತ್ವ:
ಹಿಂದೆ ಗೋವಿಲ್ಲದ ಮನೆಯಿರಲಿಲ್ಲಎಂದು ಹೆಮ್ಮೆಯಿಂದ ಹೇಳುವ ನಾವಿಂದು ಗೋವಿರುವ ಮನೆ ವಿರಳ ಎನ್ನುವ ವಿಷಾದದ ನುಡಿಯಾಡಬೇಕಿದೆ. ಗೋವು ಮೂರು ಮುಖ್ಯ ಅಂಶಗಳಿಂದ ಹಿಂದು ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ದೇವಸ್ಥಾನದ ಆಗಮ ಕಾರ್ಯ, ಮಾನುಷ ಕಾರ್ಯ ಮತ್ತು ಗೃಹಗಳ ಚಲನೆಯಿಂದ ಜೀವನದಲ್ಲಾಗುವ ಬದಲಾವಣೆಗಳಲ್ಲಿ ಇವುಗಳ ಪಾತ್ರ ಮುಖ್ಯವಾಗಿದೆ. ಗೋವು ಸಹಜವಾಗಿ ವಾಸಿಸುವ, ಫಲಪುಷ್ಪಗಳಿಂದ ಆವೃತವಾದ ಜಾಗದಲ್ಲಿ ದೇವಸ್ಥಾನ ಕಟ್ಟಬಹುದು ಎನ್ನುವ ಶಾಸ್ತ್ರೋಕ್ತಿಯಿದೆ. ಇವುಗಳ ಸಂಚರಿಸಿದ ಸ್ಥಳದಲ್ಲಿ ವಿಷಯುಕ್ತ ಅಂಶಗಳು ನಾಶವಾಗಿರುತ್ತವೆ. ಸ್ಥಳ ಶುದ್ಧಿ ಹಾಗೂ ಸಪ್ತಶುದ್ಧಿಯಲ್ಲಿ ಮತ್ತು ಮನೆಕಟ್ಟಿದ ಸಂದರ್ಭ ಗೋಮಾತೆಯ ಪ್ರವೇಶದ ನಂತರ ಮಾನವನಿಗೆ ಅವಕಾಶ ನೀಡುವಾಗಲೇ ಗೋವಿನ ಮಹತ್ವ ತಿಳಿಯಬಹುದು. ಹಿಂದೆ ಅಮವಾಸ್ಯೆ ಹಾಗೂ ಮುನ್ನಾದಿನ, ಗೃಹಣ, ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಗೋಪ್ರಸವ ಶಾಂತಿ ಮಾಡಿದ ಜಾತಕದಿಂದ ಜನ್ಮಾಂತರದ ಕರ್ಮಫಲವನ್ನು ತಡೆಯುವ ಶಕ್ತಿ ಗೋಮಾತೆಗೆ ಇದ್ದುದರಿಂದ ಅವುಗಳನ್ನು ಸಾಕುತ್ತಿದ್ದರು. ಇಂದು ಒತ್ತಡದ ಪ್ರಪಂಚದಲ್ಲಿ ಗೋವುಗಳಿಲ್ಲದಿದ್ದರೂ ಅವುಗಳ ಸೇವೆಗೆ ಒಂದಷ್ಟು ನಿಧಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.
ಬದಲಾದ ಪ್ರಪಂಚದಲ್ಲಿ ಮಾನವನ ಮಾನಸಿಕತೆ:
ಗೋವಿನ ಧೂಳು ಆವರಿಸಿರುವ ಗೋಧೂಳಿ ಮೂಹೂರ್ತದಲ್ಲಿ ಎಲ್ಲಾ ಅನಿಷ್ಟ ದೂರವಾಗುವುದರಿಂದ ಆ ಸಂದರ್ಭ ಉತ್ತಮ ಕಾರ್ಯಗಳಿಗೆ ಸೂಕ್ತ ಕಾಲ ಎನ್ನುವ ನಂಬಿಕೆ. ಪರಿಸ್ಥಿತಿ ಬದಲಾಗಿದ್ದು ಇಂದು ಗೋವಿನ ದೂಳುಗಳಿಲ್ಲದೆ ರಸ್ತೆಗಳೆಲ್ಲಾ ಕಾಂಕ್ರೀಟಿಕರಣಗೊಂಡು ವಾಹನದ ಧೂಳು ಹೆಚ್ಚಾಗಿವೆ. ಹಿಂದೆ ಧಾರ್ಮಿಕ ಕಾರ್ಯದಲ್ಲಿ ಗೋದಾನ ಮಾಡುವ ಸಂಪ್ರದಾಯವಿತ್ತು ಆದರೆ ಅದು ಇಂದು ವಿರಳವಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಗೋವುಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವ ನಂಬಿಕೆಯ ಒಸರು ಬತ್ತಿಹೋಗಿದೆ. ದಿನದಿಂದ ದಿನಕ್ಕೆ ಹಲವಾರು ದನ-ಕರುಗಳು ಕಸಾಯಿಖಾನೆ ಪ್ರವೇಶ ಮಾಡುತ್ತಿವೆ.  ಮನೆಯ ವಾಸ್ತುದೋಷ ನಿವಾರಣೆಗೆ ನಿತ್ಯ ತುಪ್ಪದ ದೀಪ ಹಚ್ಚುವುದು, ದೇವತೆಗಳ ಆಹಾರ ತುಪ್ಪವಾದ್ದರಿಂದ ಎಲ್ಲಾ ಧಾರ್ಮಿಕ ಕಾರ್ಯ ತುಪ್ಪದಿಂದಲೇ ನಡೆಯುತ್ತಿತ್ತು. ಅದನ್ನು ಮನೆಯಲ್ಲಿ ತಯಾರಿಸುತ್ತಿದ್ದರು. ಮನೆಯಲ್ಲಿ ಹೇರಳವಾಗಿ ದೊರೆಯುತ್ತಿದ್ದ ಗೋ-ಉತ್ಪನ್ನಗಳು ಇಂದು ಮರೆಯಾಗಿ ಪೊಟ್ಟಣಗಳಲ್ಲಿ ಸಿಗುವ ವಸ್ತುಗಳಿಗೆ ಅವಲಂಬಿತರಾಗಿದ್ದೇವೆ.
ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಾವಿದ್ದೇವೆ. ದೃಶ್ಯಮಾಧ್ಯಮ, ಅಂತರ್ಜಾಲ, ಮೊಬೈಲ್,ಕಂಪ್ಯೂಟರ್‌ಗಳಲ್ಲಿ ಕಾರ್ಯಮಗ್ನರಾಗಿ ಗೋಸಂರಕ್ಷಣೆಯಲ್ಲಿ ನಿರಾಸಕ್ತಿ ತಳೆದಿದ್ದೇವೆ. ಸಮಾಜದಲ್ಲಿ ಜೀವ ತಳೆದಾಗ ತಾಯಿಯ ಎದೆಹಾಲು ಅವಲಂಬಿಸುವ ನಾವು ಬೆಳೆದು ದೊಡ್ಡವರಾಗುತ್ತಾ ಗೋ-ಮಾತೆ ನೀಡುವ ಹಾಲನ್ನು ಅವಲಂಬಿಸುತ್ತೇವೆ. ಆದರೆ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಕಸಾಯಿಖಾನೆ ಸೇರುವ ಗೋಮಾತೆಯ ರಕ್ಷಣೆ ನಮ್ಮಿಂದಾಗಬೇಕಿದೆ. ೨೦೧೨ರಲ್ಲಿ ದೇಶವ್ಯಾಪಿ ರಾಷ್ಟ್ರೀಯ ಜಾನುವಾರು ಗಣತಿಗೆ ಚಾಲನೆ ನೀಡಲಾಗಿದ್ದು ಈ ನಿಟ್ಟಿನಲ್ಲಿ ಕಸಾಯಿಖಾನೆಗೆ ಸೇರುತ್ತಿರುವ ಗೋವುಗಳ ರಕ್ಷಣೆಗೆ ನಮ್ಮ ಅಳಿಲಿನ ಸೇವೆ ಮುಖ್ಯವಾಗಿದೆ. ಗೋವುಗಳ ಮಹತ್ವ ತಿಳಿದುಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.




Thursday 1 November 2012

ಮನೆ-ಮನೆಯಲ್ಲೂ ಪ್ರತಿಕ್ಷಣ ಕನ್ನಡದ ಕಂಪನ್ನು ಪಸರಿಸಿ...
ಮಾತೃಭಾಷೆಯ ಅಭಿಮಾನವೇ ನಮ್ಮ ನಾಡು, ನುಡಿಯ ರಕ್ಷಣೆಗೆ ಪ್ರೇರಕ ಶಕ್ತಿ:

೧೯೫೬ ನವೆಂಬರ್ ೧ರಂದು ಕರ್ನಾಟಕ ಏಕೀಕರಣವಾಯಿತು. ಕನ್ನಡ  ಮಾತನಾಡುವವರಿಗೆಂದೆ ಪ್ರತ್ಯೇಕ ರಾಜ್ಯ ರಚನೆಯಾಗಿ ಕರ್ನಾಟಕ ಎನ್ನುವ ಹೆಸರು ಇಟ್ಟಾಯಿತು. ಐದೂವರೆ ದಶಕಗಳೇ ಕಳೆದರೂ ಇಂದಿಗೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಎಂದು ಬೊಬ್ಬೆ ಇಡುತ್ತಿದ್ದೇವೆ. ಯಾಕೆ ಸಿಕ್ಕಿಲ್ಲ ಎನ್ನುವ ಕುರಿತಂತೆ ಯಾರು ಕೂಡ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸಂದರ್ಭ ಮಾತೃಭಾಷಾ ದಿನವನ್ನು ನೆನಪು ಮಾಡಿಕೊಳ್ಳುವುದಕ್ಕೂ ಕಾರಣವಿದೆ. ನವೆಂಬರ್‌ನ್ನು ಕನ್ನಡ ಮಾಸವೆಂದು ಆಚರಣೆ ಮಾಡಲಾಗುತ್ತದೆ. ಮಾತೃಭಾಷೆಗಾಗಿ ಹುತಾತ್ಮರಾದವರನ್ನು ಇದೇ ಸಂದರ್ಭದಲ್ಲಿ ನೆನಪಿಸಿ ಕೊಳ್ಳುತ್ತಿದ್ದೇವೆ. ಮಾತೃಭಾಷೆಗಾಗಿ ಹುತಾತ್ಮರಾದವರನ್ನು ನೆನಪಿಸಿಕೊಂಡು ನಮ್ಮ ಮಾತೃಭಾಷೆಯ ಉಳಿವಿಗಾಗಿ ನಾವೇನು ಮಾಡುತ್ತಿದ್ದೇವೆ ಎನ್ನುವ ಚಿಂತನೆಗೆ ಸಾರಣೆ ಹಚ್ಚುವುದಕ್ಕೆ ಇದು ಸಕಾಲವೆನ್ನುವುದು ನನ್ನ ಭಾವನೆ.
ಭಾಷೆ ಒಂದು ಸಂವಹನ ಮಾಧ್ಯಮವಾಗಿರದೆ ಭಾವಾಭಿವ್ಯಕ್ತಿಯ ಸಾಧನವು ಹೌದು. ಪ್ರತಿಯೊರ್ವರ ಬದುಕಿನಲ್ಲಿಯೂ ಭಾಷೆಯ ಪಾತ್ರ ಅಪಾರವಾಗಿದೆ. ಅದಿಲ್ಲವಾಗಿದ್ದರೆ ಒಂದು ಭಾಷೆಗಾಗಿ ಜೀವ ನೀಡುವ ಬಾಂಧವ್ಯ ಬೆಳೆಯುತ್ತಿರಲಿಲ್ಲ. ಕನ್ನಡ ಬಗ್ಗೆ ನಮ್ಮಲ್ಲಿ ಅಂಥ ಬಾಂಧವ್ಯ ಬೆಳೆಯುವುದು ಯಾವಾಗ? ಎನ್ನುವುದು ಪ್ರಶ್ನೆಯಾಗಿ ಉಳಿದಿದೆ ಅಲ್ಲವೇ?
ಅದು ಏನೆ ಇರಲಿ..ಈ ವರ್ಷ ನಿಘಂಟು ತಜ್ಞ ಹಿರಿಯ ಸಾಹಿತಿ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಜನ್ಮಶತಾಮಾನೋತ್ಸವ ಆಚರಿಸಿಕೊಂಡರು. ಶತಾಯುಷಿ ಸುಬ್ಬಯ್ಯ ಮಾತನಾಡುತ್ತಾ ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ನಿಷೇದಿಸಬೇಕು ಎನ್ನುವ ಹೇಳಿಕೆ ನೀಡಿದ್ದರು. ಯಾರೋ ತಥಾಕಥಿತ ಸಾಹಿತಿಗಳೋ, ಕನ್ನಡ ಪರ ಹೋರಾಟಗಾರರೋ ಹೇಳಿದ್ದರೆ ಅದೊಂದು ಗಂಭೀರ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ ಇಂಥ ಆತಂಕ ವ್ಯಕ್ತಪಡಿಸಿದ್ದು ಕನ್ನಡದ ಬಗ್ಗೆ ಪ್ರಾಮಾಣಿಕ ಕಳಕಳಿ ಇರುವ ಹಾಗೂ ಕನ್ನಡಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿರುವ ಶತಮಾನಗಳಿಂದ ಕನ್ನಡದ ಆಗು ಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಒಬ್ಬ ಪಕ್ಕಾ ಕನ್ನಡಿಗ ವೆಂಕಟಸುಬ್ಬಯ್ಯ.
ಇತ್ತೀಚಿಗೆ ರಾಜ್ಯ ಸಚಿವರಿಬ್ಬರು ಕನ್ನಡ ನಾಡಿನ ಕುರಿತು ಯಾರು ಕೂಡ ಅರಗಿಸಿಕೊಳ್ಳಲಾಗದ ಹೇಳಿಕೆ ನೀಡಿದ್ದಾರೆ. ಉಮೇಶ ಕತ್ತಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡಬೇಕು ಎನ್ನುವ ಉದಾರವಾದ ಹೇಳಿಕೆ ನೀಡಿದರೆ ಆನಂದ ಅಸ್ನೋಟಿಕರ್ ಕಾರವಾರವನ್ನು ಗೋವಾಕ್ಕೆ ಸೇರಿಸಬೇಕು ಎನ್ನುವುದಾಗಿ ಹೇಳಿದ್ದರು. ಮಂತ್ರಿಗಳಾದವರೆ ಈ ರೀತಿಯಾಗಿ ಕರ್ನಾಟಕವನ್ನು ಒಡೆಯುವ ರಾಜಕೀಯ ಮಾಡುತ್ತಿರುವುದನ್ನು ನೋಡಿದಾಗ ನಮ್ಮ ರಾಜಧಾನಿಯ ಪರಿಸ್ಥಿತಿ ಹೇಗಿರಬೇಕು ಅಲ್ಲವೇ? ಕರುನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನೇ ಆಡುಭಾಷೆಯನ್ನಾಗಿ ಮಾತನಾಡುವವರ ಸಂಖ್ಯೆ ಶೇ.೩೦ ಮಾತ್ರ ಎನ್ನುವುದನ್ನು ವೆಂಕಟಸುಬ್ಬಯ್ಯ ಹೇಳಿದ್ದರು. ಒಂದು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕೇಂದ್ರಸ್ಥಳವಾದ ರಾಜಧಾನಿಯಲ್ಲೆ ಮಾತೃಭಾಷೆ ಮೂಲೆಗುಂಪಾಗುತ್ತಿರುವುದು ತೀರಾ ಗಂಬೀರ ವಿಷಯ ಎನ್ನುವುದು ಅವರ ಆತಂಕವಾಗಿತ್ತು.
ಇಷ್ಟೆಲ್ಲಾ ಆತಂಕದ ನಡುವೆಯೂ ನ. ೧ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಸಂಭ್ರಮ. ಕನ್ನಡಾಂಬೆಯು ಕೂಡ ಶೃಂಗಾರ ಭರಿತಳಾಗಿದ್ದಾಳೆ. ಈ ತಿಂಗಳಲ್ಲಿ ಕನ್ನಡ ಪ್ರೇಮ ಚಿಗುರಿ, ಅಭಿವೃದ್ದಿಯ ಹೊಸತಾದ ಆಲೋಚನೆಗೆ ಎಡೆಮಾಡಿಕೊಟ್ಟು , ಅಡಿಪಾಯ ಹಾಕುವ ಸುವರ್ಣಾವಕಾಶವನ್ನು ನಾಡಿನ ಜನತೆಗೆ ಒದಗಿಸುತ್ತದೆ. ರಾಜ್ಯದ ಮೂಲೆಯಲ್ಲಿಯೂ ಕನ್ನಡ ನಾಡು, ನುಡಿಯ ಬಗ್ಗೆ ಜನತೆ ಆನಂದದಿಂದ ಹರ್ಷೋದ್ಗಾರ ಮಾಡುತ್ತಾರೆ. ಮೈಸೂರು ರಾಜ್ಯದ ಹೆಸರು ಕರ್ನಾಟಕ ಎಂದು ಮರು ನಾಮಕರಣವಾಗಿ ೫೬ ವರ್ಷಗಳು ಸಂದಿವೆ. ಹಳೆಯ ಕವಿಗಳಾದಿಯಾಗಿ ನವಕವಿಗಳೆಲ್ಲಾ ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ಹೊಂದಿದವರೆ ಆಗಿದ್ದಾರೆ. ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ತಮ್ಮ ದೇಹವನ್ನು ದಣಿಸಿ ಕನ್ನಡದ ಕಂಪನ್ನು ಸಾಗರದಾಚೆ ಪಸರಿಸುವುದಕ್ಕೆ ಪಟ್ಟ ಶ್ರಮ ಸಾಮಾನ್ಯವೇ?
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕಾ ಬಂಡಿ...ಎಂದು ಅಣ್ಣಾವ್ರು ಹಾಡಿದಾಗ ಕನ್ನಡ ಜನತೆ ನಾಡಿನಾದ್ಯಂತ ಕುಣಿದು ಕುಪ್ಪಳಿಸಿದ್ದಾರೆ. ಕನ್ನಡದ ಕಂಪನ್ನು ಪಸರಿಸುವಲ್ಲಿ ನಮ್ಮ ಪ್ರಯತ್ನ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಅದರ ಮಹತ್ವವೂ ನಮಗೆ ತಿಳಿಯುವುದಿಲ್ಲ. ಕನ್ನಡದ ಮೇಲೆ ಅಭಿಮಾನವಿದ್ದರೆ ಸಾಲದು. ಅದನ್ನು ನಾವು ಎಷ್ಟರಮಟ್ಟಿಗೆ ಜೀವನದಲ್ಲಿ ಅಳವಡಿಸಿ ಕೊಂಡಿದ್ದೇವೆ ಎನ್ನುವುದು ಮುಖ್ಯ. ಕನ್ನಡ ಪತ್ರಿಕಾ ಮಾದ್ಯಮದಿಂದ ಕನ್ನಡದ ಕಂಪನ್ನು ಮನೆಗಳಿಗೆ ತಲುಪಿಸಲು ಮಾತ್ರ ಸಾಧ್ಯ, ಅದರೆ ಅದು ಮನೆಯಲ್ಲಿರುವ ಮನಗಳಿಗೆ ತಲುಪಿಸಿದಾಗ ಕನ್ನಡದ ಗರಿಮೆ ಹೆಚ್ಚಿಸ ಬಹುದು. ಕನ್ನಡ ರಾಜ್ಯೋತ್ಸವ ಒಂದು ದಿನ ಆಚರಣೆ ಮಾಡಿದರೆ ಸಾಲದು, ಎಲ್ಲಾ ಕನ್ನಡ ಮನಸ್ಸುಗಳ ನಿತ್ಯ ಉತ್ಸವ ಆಗಬೇಕು.
ರಾಮಾಯಣದಲ್ಲಿ  ಶ್ರೀರಾಮನು ಲಂಕಾಧೀಶ ರಾವಣನನ್ನು ಕೊಂದು, ಹಿಂತಿರುಗುವ ಸಂದರ್ಭ ತಮ್ಮನಾದ ಲಕ್ಷ್ಮಣ ಅಲ್ಲಿಯ ಸಂಪತ್ತನ್ನು ನೋಡಿ, ಅಣ್ಣಾ ಸುವರ್ಣಮಯವಾದ ಲಂಕೆಯಲ್ಲಿ ನಾವಿರೋಣ ಎಂದು ಬಿನ್ನವಿಸಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ರಾಮ 
“ಹೇ ಲಕ್ಷ್ಮಣಾ, ಅಪೀ ಸ್ವರ್ಣಮಯಿ ಲಂಕಾ ನ ಮೇ ರೋಚತೇ |
                     ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸಿ || 
ಲಂಕೆ ಎಷ್ಟು ಸುವರ್ಣಮಯವಾಗಿದ್ದರೂ, ಹೆತ್ತ ತಾಯಿ, ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು. ಅದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ನವಮಾಸ ಪರ್ಯಂತ ಹೊತ್ತು, ಹತ್ತನೇ ತಿಂಗಳಿಗೆ ಭೂಮಿಯ ಬೆಳಕನ್ನು ತೋರಿಸಿದ ತಾಯಿ, ಆಶ್ರಯ ನೀಡಿ ಸಲಹುತ್ತಿರುವ ಮಮತಾಮಯಿ, ಸಹನಶೀಲೆ ಭೂಮಿದೇವಿ ಹಾಗೂ ಉತ್ತಮ ಸಂಸ್ಕಾರದ ಜೊತೆಗೆ, ಸಂಬಂಧವನ್ನು ಬೆಸೆದು ಸಮಾಜದಲ್ಲಿ ವ್ಯಕ್ತಿಯನ್ನಾಗಿ ನಿರ್ಮಿಸಲು ಸಹಕಾರಿಯಾಗುವ ಮಾತೃಭಾಷೆಯ ಮೇಲೆ ಅಭಿಮಾನವಿರಬೇಕಲ್ಲವೇ?
ಆದರೆ ಕನ್ನಡ ರಾಜ್ಯೋತ್ಸವದಲ್ಲಿ ರಾಜಕಾರಣಿಗಳು, ಯುವಜನತೆ ಸುಂದರ ಕನ್ನಡವನ್ನು ಬಿಟ್ಟು, ಕಂಗ್ಲಿಷ್‌ನಲ್ಲಿ ಮಾತನಾಡುತ್ತಾರಲ್ಲ.ಅವರಿಗೆ ಭಾಷೆಯ ಬಗ್ಗೆ ಅಭಿಮಾನ ಇಲ್ಲವೇ? ಇಲ್ಲದಿದ್ದರೆ ಯಾಕೆ ಅಷ್ಟು ಆಡಂಬರವಾಗಿ ರಾಜ್ಯೋತ್ಸವ ಆಚರಿಸುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಅದು ತಪ್ಪಲ್ಲ ಸಂತೋಷದ ಸಂಭ್ರಮ ಆ ರೀತಿ ವ್ಯಕ್ತಪಡಿಸುತ್ತಾರೆ ಎಂದು ಸಂತೋಷ ಪಟ್ಟುಕೊಳ್ಳಲೇ? ಹೇಗೆ ಸಾಧ್ಯ ಸ್ವಾಮೀ..ಸಾವಿರಾರು ಬಡನೌಕರರು ನಾನಾ ಕಡೆ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವ ಸ್ಥಿತಿಯನ್ನು ಕಲ್ಪಸಿಕೊಳ್ಳಲು ಸಾದ್ಯವಿಲ್ಲ. ದಿನನಿತ್ಯ ಹವಾನಿಯಂತ್ರಿತ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವ ನಾವು ಆ ಸ್ಥಿತಿಯಲ್ಲಿದ್ದರೆ ಅಬ್ಬಾ  ಕಲ್ಪನೆ ಮಾಡುವುದಕ್ಕೂ ಅಸಾಧ್ಯ? ಮನಸ್ಸಿನ ಭಾವನೆ ಅಭಿವ್ಯಕ್ತಗೊಳಿಸಲು ಕುಣಿದು ಕುಪ್ಪಳಿಸುತ್ತಾರೆ ಎಂದು ಭಾವಿಸಿದರೆ, ಅದು ನಮ್ಮ ತಪ್ಪು ಕಲ್ಪನೆ. ಇದು ಕೇವಲ ಆಡಂಬರಕ್ಕಾಗಿ ಎನ್ನುವುದು ಸ್ಪಷ್ಟ.
ನ.೧ರಂದು ನನ್ನ ಆಪ್ತಮಿತ್ರ ಬೆಂಗಳೂರಿನಿಂದ ಕರೆ ಮಾಡಿದ್ದ. ಅವನಲ್ಲಿ ಕ್ಷೇಮ ಸಮಚಾರದ ಬಗ್ಗೆ ವಿಚಾರಿಸಿ, ಹೇಗಿತ್ತಪ್ಪ ರಾಜ್ಯೋತ್ಸವ ಅಂತ ಕೇಳಿದರೆ.... ಹಗಲಿನಲ್ಲಿ ರಾಜ್ಯೋತ್ಸವ ಆಚರಿಸುತ್ತಾ, ಕುಣಿದು ಕುಪ್ಪಳಿಸುತ್ತಾರೆ. ಸಂಜೆ ನೋಡಿದರೆ ಅಮಲಾಸುರನ ಮನೆಯಲ್ಲಿ , ಕುಡಿದ ಮತ್ತಿನಲ್ಲಿ ತೇಲಾಡುತ್ತ ಆಂಗ್ಲಭಾಷೆಯ ಅಣಿಮುತ್ತುಗಳು ಅವರ ಬಾಯಿಂದ ಉದುರುತ್ತವೆ. ಕನ್ನಡ ಭಾಷೆ ಉಳಿಸಬೇಕು, ಅದಕ್ಕೆ ನಾವು ಹೋರಾಟ ಮಾಡುತ್ತೇವೆ ಎನ್ನುವ ಇವರು ಕೊನೆಯಲ್ಲಿ ನಾನು ಕನ್ನಡ ಲೈಕ್ ಮಾಡ್ತೆನೆ ಎನ್ನುವ ಕಂಗ್ಲೀಷ್‌ಕನ್ನಡಿಗರು ಈಗ ಎಲ್ಲೆಡೆಯಿದ್ದಾರೆ. ರಾಜ್ಯೋತ್ಸವ ಸಂಭ್ರಮವನ್ನು ಕಣ್ಣಾರೆ ನೋಡಿದ ಹಳ್ಳಿಯಿಂದ ಹೊಟ್ಟೆಪಾಡಿಗಾಗಿ ಪಟ್ಟಣ ಸೇರಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿರುವ ಸಣ್ಣ ಪ್ರಾಯದ ನನ್ನ ಮಿತ್ರನ ಅಂತರಾಳದ ಮಾತಿವು. 
ಜಾಗತೀಕರಣದ ಪ್ರಭಾವವಾದ್ದರಿಂದ ರಾಜಧಾನಿಯಲ್ಲಿ ಅನ್ಯಭಾಷಿಗರು ತಮ್ಮ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಅನೇಕ ಕಂಪೆನಿಗಳು ಕನ್ನಡ ನಾಡಿಗೆ ಲಗ್ಗೆ ಇಟ್ಟ ಪರಿಣಾಮ ಕನ್ನಡಿಗರಿಗೆ ಕನ್ನಡ ಭಾಷೆಯ ಕಂಪನ್ನು ಹೊರಸೂಸಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ಜೊತೆ ಉಪ್ಪಿನ ಕಾಯಿ ಇದ್ದರೆ, ಅದರ ರುಚಿಯೇ ಬೇರೆ ಆದರೆ ಉಪ್ಪಿನಕಾಯಿಯೇ ಪ್ರಧಾನವಾದರೆ ಊಟದ ರುಚಿಯೇ ಕೆಡುತ್ತದೆ. ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈಗ ಕನ್ನಡ ಮಾತನಾಡುವವರೆ ವಿರಳ ಎಂಬಂತಾಗಿದೆ. ಬೆಂಗಳೂರಿನಲ್ಲಿ ತಮಿಳು, ತೆಲುಗು, ಮಲೆಯಾಳಂ, ಇಂಗ್ಲೀಷ್, ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರನ್ನೊಮ್ಮೆ ಸುತ್ತು ಹೊಡೆದರೆ ಮಾತೃಭಾಷೆ ಯಾವುದೆಂದು ಕನ್ನಡಿಗರಿಗೆ ಗೊಂದಲವಾಗುತ್ತದೆ. ಅತ್ತ ಬೆಳಗಾವಿಗೆ ಹೋದರೆ ಮರಾಠಿ, ಕಾರವಾರಕ್ಕೆ ಹೋದರೆ ಕೊಂಕಣಿ, ಕಾಸರಗೋಡಿನಲ್ಲಂತೂ ಮಲೆಯಾಳಂ, ಗುಲ್ಬರ್ಗಾ ಕಡೆ ಹೋದರೆ ಉರ್ದು ಹಿಂದಿ...ಕರ್ನಾಟಕದಲ್ಲಿ ಬದುಕಬೇಕೆಂದರೆ ಕನ್ನಡವೇ ಬೇಕೆನ್ನುವ ಅಗತ್ಯವೇನಿಲ್ಲ. ಕನ್ನಡಿಗರು ಅಷ್ಟರ ಮಟ್ಟಿಗೆ ಉದಾರಿಗಳು.
ರಾಜ್ಯೋತ್ಸವದಂದು ನಡೆದ ಘಟನೆ ನಮ್ಮ ರಾಜ್ಯದಲ್ಲಿ ಕನ್ನಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ.
ಘಟನೆ-೧: ಮದ್ಯಾಹ್ನದ ಉರಿಬಿಸಿಲು, ಗಂಟಲು ಒಣಗಿದ್ದರಿಂದ ಏನಾದರೂ ತಂಪು ಪಾನೀಯ ಕುಡಿಯೋಣವೆಂದು ಅಂಗಡಿಗೆ ಹೋಗಿ ನನಗೆ ಬೇಕಾದ ಪಾನೀಯ ಕೇಳಿ ಪಡೆದುಕೊಂಡು ಕುಡಿಯುತ್ತಾ ಕುಳಿತುಕೊಂಡಿದ್ದೆ. ನನಗೆ ಪಾನೀಯ ತಂದುಕೊಟ್ಟ ಹುಡುಗನನ್ನು ನೋಡಿದರೆ ಬಡತನದ ಬೇಗೆಯಿಂದ ಬಳಲಿ ಬೆಂಡಾದ ತಂದೆ ತಾಯಿಯ ಜವಾಬ್ದಾರಿ ಹೊತ್ತು, ಕುಟುಂಬದ ಪರಿಸ್ಥಿತಿ ನಿಭಾಯಿಸಲು ಅನ್ಯಮಾರ್ಗವಿಲ್ಲದೇ ಆ ಕಾಯಕದಲ್ಲಿ ತೊಡಗಿದ್ದಾನೆ ಎನ್ನುವುದು ಆತನನ್ನು ನೋಡಿದಾಗಲೆ ತಿಳಿಯುತ್ತದೆ.
ಅದೇ ಸಮಯಕ್ಕೆ ಐದಾರು ವಿದ್ಯಾರ್ಥಿನಿಯರು ಮಾತೃಭಾಷೆ ತುಳು ಅಥವಾ ಕನ್ನಡವಾದರೂ ಆ ಬಾಷೆಯೇ ಬಾರದವರ ತೆರದಲ್ಲಿ ಆಂಗ್ಲಭಾಷೆಯಲ್ಲಿ ಐ ವಾಂಟ್ ಫಿಸ್ತಾ, ಕೋಲ್ಡ್ ಬಾದಾಮಿ, ಹಾರ್ಲೆಕ್ಸ್ ಹೀಗೆ ತಮಗೆ ಬೇಕಾದ ಪಟ್ಟಿಯನ್ನೆ ನೀಡುತ್ತಾರೆ. ಹುಡುಗ ಅನುಭವವಿರುವುದರಿಂದ ಅವರು ಹೇಳಿರುವ ವಸ್ತುವನ್ನು ನೀಡುತ್ತಾನೆ. ಇಲ್ಲಿ ನನ್ನ ಸಂದೇಹ ಬೇರೆನಲ್ಲ..ಆ ಹುಡುಗನಿಗೆ ಆಂಗ್ಲಭಾಷೆ ಬರುತ್ತಿದ್ದರೆ ಈ ಅಂಗಡಿಯಲ್ಲಿ ಯಾಕೆ ಕೆಲಸ ಮಾಡುತ್ತಿದ್ದ? ತುಳು ಮಾತೃಭಾಷೆಯವರೆ ತುಳು ಮಾತನಾಡದೆ ಪರಭಾಷೆಯ ವ್ಯಾಮೋಹದಿಂದ ಅದರ ದಾಸರಾಗುತ್ತಿದ್ದಾರೆ. ಆಂಗ್ಲಭಾಷೆಯೆ ನನ್ನ ಸರ್ವಸ್ವ ಎನ್ನುತ್ತಿರಬೇಕಾದರೆ ಕನ್ನಡ ಇಷ್ಟಾದರೂ ಉಳಿದಿದೆಯೆಂದು ಸಂತೋಷ ಪಡಬೇಕು.
ಘಟನೆ:೨-ಸ್ವಲ್ಪ ದಿನದ ಹಿಂದೆ ಕುಂದಾಪುರದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಇಬ್ಬರು ಯುವಕರು ಯಾವುದೋ ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವರಂತೆ ಕಂಡು ಬರುತ್ತಿದ್ದರು. ಪಕ್ಕದಲ್ಲಿಯೆ ನಿಂತು ಅವರ ಮಾತುಗಳನ್ನೆ ಆಲಿಸುತ್ತಿದ್ದೆ. ಸ್ವಚ್ಚ ಕನ್ನಡದಲ್ಲಿ ಯಾವುದೇ ಆಂಗ್ಲಪದಗಳ ಬಳಕೆಯಿಲ್ಲದೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅದೇ ಸಂದರ್ಭ ಅವರೊಲ್ಲಬ್ಬನ ಸ್ನೇಹಿತ ಬಂದಾಗ ಮಾತೃಭಾಷೆಯಲ್ಲಿ ಮಾತನಾಡಿದ್ದು ನೋಡಿ ಆಶ್ಚರ್ಯವಾಯಿತು. ಅಲ್ಲಿಯವರೆಗೆ ಕುಂದಾಪುರ ಕನ್ನಡ ಬಾರದ ಉತ್ತರ ಕರ್ನಾಟಕದ ಸ್ನೇಹಿತನಲ್ಲಿ ಶುದ್ದ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿ, ಊರಿನ ಮಿತ್ರ ಬಂದಾಗ ಮಾತೃಭಾಷೆಯ ಕಂಪನ್ನು ಹೊರ ಹಾಕಿದ್ದು, ಆಡಂಬರದ ರಾಜ್ಯೋತ್ಸವ ಆಚರಿಸಿ ಕುಣಿದು ಕುಪ್ಪಳಿಸುವ ಎಲ್ಲರಿಗೂ ಆದರ್ಶವಾಗುವಂತಿದೆ. ಅದನ್ನು ಕುಂದಗನ್ನಡದಲ್ಲಿಯೇ ಹೇಳಿದರೆ ಚೆನ್ನಾಗಿರುತ್ತದೆ. ನೀವೂ ಸ್ಪಲ್ಪ ಕೇಳಿ..“ಗಡೆ, ಎಲ್ಲ ಹೊಯಿದ್ಯಾ,ಉಂಡ ಆಯ್ತನಾ...ಇವತ್ ಹಾಲಾಡಿ ಹೊಲ್ಂಗ್ ಆಟ್ ಅಂಬ್ರಲ್ಲಾ...ಆಟಕ್ ಹೋಪ್ವಾ...ನಿ ಹೋಪುದಾರೆ ನಮ್ಮನಿಗ್ ಬಾ.. ಇಲ್ದಿದ್ರೆ ಅಪ್ಪಯ್ಯ ಬಿಡುದಿಲ್ಲ ಮರಯಾ..ಆಟ ಒಳ್ಳೆಯಿತ್ತಂಬ್ರ..ಇದು ನಿಜವಾದ ಭಾಷಾಭಿಮಾನ.
ಅಕ್ಬರನ ಆಸ್ಥಾನದಲ್ಲಿ ಪಂಡಿತನೊಬ್ಬ ಬಂದು ನನ್ನ ಮಾತೃಭಾಷೆ ಯಾವುದು? ಎಂದು ಸವಾಲು ಹಾಕಿದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಎಲ್ಲಾ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಅವನ ಮಾತೃಭಾಷೆಯನ್ನು ಕಂಡು ಹಿಡಿಯುವುದು ಕೊಂಚ ಕಷ್ಟವೇ? ಆದರೆ ಬೀರಬಲ್ ಮಾತ್ರ ಬುದ್ದಿವಂತಿಕೆಯಿಂದ ಅವನು ಮಲಗಿರುವ ಹೊತ್ತಿನಲ್ಲಿ ಮೈಮೇಲೆ ನೀರನ್ನು ಸುರಿದು ಅವನ ಮಾತೃಭಾಷೆ ಕಂಡುಹಿಡಿಯುತ್ತಾನೆ. ಯಾವ ವ್ಯಕ್ತಿಯೇ ಆಗಲಿ ತನ್ನ ಮಾತೃಭಾಷೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಂಡು, ಇತರ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸಿದಾಗಲೇ ಘನತೆ ಹೆಚ್ಚುತ್ತದೆ. ಮಾತೃಭಾಷೆ, ಮಾತೃಭೂಮಿಯ ಬಗ್ಗೆ ಅಭಿಮಾನ ಮೂಡಿದಾಗಲೇ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ತಮಿಳು ನಾಡಿಗೆ ಕಾಲಿಟ್ಟರೆ ಅಲ್ಲಿ ತಮಿಳಲ್ಲದೆ ಬೇರೆ ಭಾಷೆಯನ್ನು ಮಾತನಾಡುವ ವ್ಯಕ್ತಿ ಸಿಗಲಾರ. ಅಕಸ್ಮಾತ್ ಇದ್ದರೂ ಕೆಲವೆ ದಿನದಲ್ಲಿ ಆತ ತಮಿಳು ಕಲಿಯುತ್ತಾನೆ. ಅಲ್ಲಿ ಬದುಕಬೇಕೆಂದರೆ ತಮಿಳು ಅನಿವಾರ್ಯ ಎನ್ನುವ ಸ್ಥಿತಿಯನ್ನು ಅಲ್ಲಿಯ ಜನತೆ ನಿರ್ಮಾಣ ಮಾಡಿದ್ದಾರೆ. ಆದರೆ ನಮಗಿನ್ನೂ ಸಾಧ್ಯವಾಗಿಲ್ಲ. ನಮ್ಮಲ್ಲಿ ಅಂಥ ಒಗ್ಗಟ್ಟು ಇಲ್ಲ. ಮಾತೃಭಾಷೆಯ ಮಹತ್ವದ ಬಗ್ಗೆ ಅಂಥದೊಂದು ಗಂಭೀರತೆ ಮೂಡಿಯೂ ಇಲ್ಲ.
ಕನ್ನಡ ರಾಜ್ಯೋತ್ಸವದಂದು ಮಾತ್ರವಲ್ಲದೇ ದಿನನಿತ್ಯ ಕನ್ನಡ ಮಾತನಾಡುವವರೆ ಕನ್ನಡಾಭಿಮಾನಿಗಳು. ಕನ್ನಡ ಮಾತನಾಡಿದರೆ ಪ್ರಸ್ತುತ ಸಮಾಜದಲ್ಲಿ ವ್ಯವಹಾರ ಮಾಡುವುದು ಕಷ್ಟ. ಆಡಳಿತ ವ್ಯವಹಾರಕ್ಕೆ ಆಂಗ್ಲಭಾಷೆಯ ಮೊರೆಹೋದರೂ, ಸ್ಥಳ, ಸಮಯ ನೋಡಿ ಕನ್ನಡ ಮಾತನಾಡುವುದಕ್ಕೆ ಹಿಂಜರಿಕೆ ಯಾಕೆ? ನಮ್ಮ ಊರಿನಲ್ಲಿ ನಮ್ಮವರೊಂದಿಗೆ ನಮ್ಮ ಮಾತೃಭಾಷೆಯನ್ನು ಮಾತನಾಡುವುದಕ್ಕೆ ಸಂಕೋಚವೇಕೆ? ಹಿಂಜರಿಕೆ ಲಜ್ಜೆಯನ್ನು ಕಿತ್ತೊಗೆದು ಮಾತೃಭಾಷೆಯನ್ನು ಪ್ರೋತ್ಸಾಹಿಸಿದಾಗ ಕನ್ನಡ ಉಳಿಸಿ ಬೆಳೆಸಬಹುದು. ಗಗನದೆತ್ತರಕ್ಕೆ ಕನ್ನಡದ ಕಂಪನ್ನು ಪಸರಿಸಬಹುದು. ಮನಸ್ಸನ್ನು ಕನ್ನಡ ಭಾಷೆಗೆ ಸಂಕುಚಿತಗೊಳಿಸದೆ, ವಿಶಾಲ ದೃಷ್ಟಿಯಿಂದ ಯೋಚಿಸಿ, ನಮ್ಮ ಸಂಸ್ಕೃತಿ ಹಾಳುಮಾಡುವ ದುಷ್ಟಶಕ್ತಿಯನ್ನು ಹಿಮ್ಮೆಟ್ಟಿಸಬೇಕಿದೆ. ಮನೆ-ಮನೆಯಲ್ಲೂ ಕನ್ನಡ ವಾತಾವರಣ ಮೂಡಿಸುವ ಅಗತ್ಯವಿದೆ. ಮಗು ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಎನ್ನುವ ಮೊದಲು ಸಾಮಾನ್ಯ ಕನ್ನಡ ಹಾಡು “ಗುಂಡಾಡಿ ಗುಂಡ ಮನೆ ಮನೆಗೆ ಹೋದ....ಎನ್ನುವ ಸಾಮಾನ್ಯ ಹಾಡನ್ನು ಕಲಿಯುವಂತಾಗಬೇಕು. ಆಗಲೇ ಕನ್ನಡವನ್ನು ಉಳಿಸಿ ಬೆಳೆಸಬಹುದು...ಏನಂತಿರಾ.



Sunday 28 October 2012



ಭಾರತ ಪರಿಕ್ರಮ ಯಾತ್ರೆಯ ರೂವಾರಿ ಸೀತಾರಾಮ ಕೆದಿಲಾಯರೊಂದಿಗೆ ಒಂದು ಕ್ಷಣ.

ಮಂಗಳೂರು: ಕಾಲ ಕೆಲವೊಂದು ಸಂದರ್ಭದಲ್ಲಿ ವಿಚಿತ್ರವಾಗಿದೆ ಅನಿಸುತ್ತದೆ? ಮಳೆಗಾಲದಲ್ಲಿ ಮಳೆ ಕಡಿಮೆಯಾಗಿದ್ದರೂ, ಚಳಿಗಾಲದಲ್ಲಿ ಮಾತ್ರ ಬೇಸಗೆಯಂಥ ಬಿಸಿಲು. ಆದರೂ ಕಳೆದೆರಡು ದಿನದಲ್ಲಿ ರಾಜ್ಯದ ಕೆಲವೊಂದು ಭಾಗದಲ್ಲಿ ವರುಣನ ಆಗಮನವಾಗಿದೆ. ಇದೇ ಸಂದರ್ಭದಲ್ಲಿ ಅಖಂಡ ಭಾರತದ ಕಲ್ಪನೆ ಹೊತ್ತ ದೇಶಭಕ್ತ ಸಂತನ ಆಗಮನ ರಾಜ್ಯ ಗಡಿಭಾಗದ ಕೇರಳದ ಕಾಸರಗೋಡಿನಲ್ಲಾಗಿದೆ. ೧೯೭೦ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಸೀತಾರಾಮ ಕೆದಿಲಾಯರು ಮೂಲತಃ ಪುತ್ತೂರಿನವರು. ದೇಹದ ಪ್ರತಿಯೊಂದು ಕಣದಲ್ಲಿಯೂ ದೇಶದ ಆಗುಹೋಗುಗಳ ಕುರಿತು ಚಿಂತಿಸುವ ಇವರು ಸ್ವಂತ ಕುಟುಂಬ, ಸ್ವ-ಪರಿಚಯ ಹೇಳಲೊಲ್ಲರು?
ಕನ್ಯಾಕುಮಾರಿಯಿಂದ ಆ.೯ರಂದು ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಕೆದಿಲಾಯರು ಸತತ ೭೫ ದಿನಗಳನ್ನು ಪೂರೈಸಿದ್ದಾರೆ. ಬರಿಗಾಲಲ್ಲಿ ದೇಶ ಪರ್ಯಟನೆ ಹೊರಟು ದೇಶೀಯ ಜನರಲ್ಲಿ ಜಾಗೃತಿ ಭಾವ ಬಿತ್ತುತ್ತಿದ್ದಾರೆ. ವೈಜ್ಞಾನಿಕವಾಗಿ ಹಾಗೂ ವಾಹನಗಳ ಭರಾಟೆಯ ನಡುವೆಯೂ ಬರಿಗಾಲಲ್ಲಿ ಕನಿಷ್ಟ ೫ ವರ್ಷಗಳವರೆಗೆ ಪರಿಕ್ರಮ ಯಾತ್ರೆ ಕೈಗೊಳ್ಳುವುದು ಸಾಮಾನ್ಯ ಮಾತಲ್ಲ. ಈ ನಿಟ್ಟಿನಲ್ಲಿ ಕೆದಿಲಾಯರು ಅಸಾಧಾರಣ ವ್ಯಕ್ತಿಯಾಗಿ ಕಂಡು ಬರುತ್ತಾರೆ. ಅವರನ್ನು ಬಹಳ ಹತ್ತಿರದಿಂದ ಮಾತನಾಡಿಸಿದಾಗ ನನಗರಿವಾದದ್ದು...ಕೆದಿಲಾಯರು ಚಲಿಸುವ ಕೋಶ, ಶ್ರೇಷ್ಟ ರಾಜಕಾರಣಿ, ಉತ್ತಮ ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ವಾಗ್ಮಿ ಮತ್ತು ದೇಶಭಕ್ತ ಸಂತ. ಇದು ಅತಿಶಯೋಕ್ತಿಯಲ್ಲ. ಅವರೊಂದಿಗೆ ಮಾತಿಗಿಳಿದಾಗ ಜೀವಮಾನದ ಅನುಭವವನ್ನು ಎಳೆಎಳೆಯಾಗಿ ಬಿತ್ತರಿಸಿದ್ದು ಹೀಗೆ..ಇದು ದೇಶದಲ್ಲಿರುವ ಪ್ರತಿಯೋರ್ವ ಪ್ರಜೆಗೂ ಮಾರ್ಗದರ್ಶನವಾದೀತು ಎನ್ನುವ ಭಾವನೆಯೊಂದಿಗೆ....
ಪ್ರ: ಪರಿಕ್ರಮ ಯಾತ್ರೆಯ ಉದ್ದೇಶ
ಉ: ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಮಾತಿನಂತೆ ನಗರ ಜೀವನಕ್ಕೆ ಮಾರು ಹೋದ ಯುವ ಮನಸ್ಸುಗಳು ಗ್ರಾಮ ತ್ಯಜಿಸಿ, ನಗರವಾಸಿಗಳಾಗುತ್ತಿದ್ದಾರೆ. ಒತ್ತಡದ ಜೀವನದ ಜಂಜಾಟದಲ್ಲಿ ಕಾಲಕಳೆಯುತ್ತಿರುವ ಯುವಮನಸ್ಸುಗಳು ಕೃಷಿಯೆಡೆಗೆ ತೆರಳುವಂತಾಗಬೇಕು. ಪ್ರಕೃತಿ ಸಹಜವಾದ ಬದುಕನ್ನು ಬಿಟ್ಟು ವಿಕೃತ ಸಹಜವಾದ ಜೀವನಕ್ಕೆ ಮಾರುಹೋಗುತ್ತಿದ್ದು, ಅದರಲ್ಲಿ ಆನಂದವಿದೆಯೆನ್ನುವ ಭ್ರಮೆಯಲ್ಲಿದ್ದಾರೆ. ನಾನೊಬ್ಬನೇ ಎನ್ನುವ ಅಂಶ ತ್ಯಜಿಸಿ, ಹಿಂದು ಧರ್ಮದ ಪರಿಕಲ್ಪನೆಯಾದ ವಿಶಾಲ ಕುಟುಂಬದ ದೃಷ್ಟಿ ಬೆಳೆಸಿಕೊಳ್ಳಬೇಕು. ವಿದೇಶಿ ಮಾನಸಿಕತೆಯ ಪರಿಭಾವವನ್ನು ತ್ಯಜಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕೃಷಿ ಪ್ರಧಾನವಾದ ದೇಶಿಯ ಸಂಸ್ಕೃತಿಯನ್ನು ಯುವಮನಸ್ಸುಗಳಲ್ಲಿ ಬಿತ್ತರಿಸುವ ಉದ್ದೇಶ ಯಾತ್ರೆಯದಾಗಿದೆ.
ಪ್ರ: ವೈಜ್ಞಾನಿಕ ಉಪಕರಣಗಳ ಧಾವಂತದಲ್ಲಿ ಇದು ಸಫಲವಾಗುವುದೇ?
ಉ: ವೈಜ್ಞಾನಿಕವಾಗಿ ಮುಂದುವರಿದಿಲ್ಲ. ಇಂದು ವಿನಾಶವನ್ನು ಅನುಕರಿಸುವ ಅಜ್ಞಾನದಲ್ಲಿದ್ದೇವೆ. ಉಪಭೋಗ ಮತ್ತು ಉಪಯೋಗ ಎನ್ನುವ ಎರಡು ಅಂಶಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ. ವೈಜ್ಞಾನಿಕ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ. ಉಪಭೋಗದ ಸಂಸ್ಕೃತಿಯಲ್ಲಿರುವುದು ವೈಜ್ಞಾನಿಕ ಬೆಳವಣಿಗೆಯೆ? ವಸ್ತುವನ್ನು ಬಳಸಿ, ಬಿಸಾಡುವ ಸಂಸ್ಕೃತಿ ವೈಜ್ಞಾನಿಕ ಪ್ರಗತಿಯಲ್ಲ. ಪೂರ್ವಜರು ೪೦ ವರ್ಷಗಳ ಕಾಲ ಬಳಸಿದ ಲೇಖನಿಯನ್ನು ಈಗಲೂ ಬಳಸುತ್ತಾರೆ. ಆದರೆ ನಾವು ಕೇವಲ ಅರ್ಧಗಂಟೆಗಳ ಕಾಲ ವಸ್ತುವನ್ನು ಬಳಸಿ ಅದನ್ನು ಬಿಸಾಡುತ್ತೇವೆ. ಇದು ಉಪಭೋಗದ ಸಂಸ್ಕೃತಿ. ಬದಲಾಗುತ್ತಿರುವ ಮನುಷ್ಯನ ಜೀವನ ಶೈಲಿ ಲಾಲಸೆಗಳನ್ನು ಬೆಳೆಸುತ್ತಾ ಹೋಗುತ್ತದೆ. ಇದರಿಂದ ವ್ಯಾಪಾರಿಗಳು ಅದರ ಲಾಭವನ್ನು ಪಡೆಯುತ್ತಾರೆ. ಮಾರುಕಟ್ಟೆಗೆ ಹೊಸ ವಸ್ತುಗಳು ಬಂದಾಗ ಹಳೆಯ ವಸ್ತುಗಳು ಬೇಡವೆನಿಸುತ್ತದೆ.(ಟಿವಿ ಬಂದ ಮೇಲೆ ಕ್ಯಾಸೆಟ್, ಟೇಪ್, ರೇಡಿಯೋ ಮಾಯವಾಗಿದೆ). ಇದು ಪ್ರಗತಿಯಲ್ಲ. ಕುಟುಂಬದ ಸದಸ್ಯರೆಲ್ಲರಲ್ಲೂ ಬಳಸುವ ದೃಷ್ಟಿಕೋನ ಬದಲಾಗಬೇಕಿದೆ. ಮನುಷ್ಯನ ಬೇಕು ಎನ್ನುವ ಧಾವಂತದ ನಾಗಾಲೋಟಕ್ಕೆ ಹಾಕಬೇಕು ಬಲವಂತದ ಬ್ರೇಕು. ಅದುವೇ ದೇಶದ ಪ್ರಗತಿಯ ಸಂಕೇತ.
ಪ್ರ: ಮನುಷ್ಯ ಬೆಳೆಯುತ್ತಿದ್ದಂತೆ ಸ್ವಾರ್ಥ ಹೆಚ್ಚಾಗುತ್ತಿದೆ ಇದು ನಿಜವೇ?
ಉ: ಮನುಷ್ಯನಿಗೆ ಆಸೆಯೆನ್ನುವುದು ಸಹಜ. ಅದು ಅತಿಯಾದರೆ ಸ್ವಾರ್ಥವಾಗುತ್ತದೆ. ಬೆಂಕಿಗೆ ತುಪ್ಪವನ್ನು ಸುರಿದಾಗ ಅದರ ಪ್ರಖರತೆ ಜಾಸ್ತಿಯಾಗುತ್ತದೆ. ತುಪ್ಪ ಸುರಿಯುವುದು ಕಡಿಮೆಯಾದಾಗ  ಬೆಂಕಿಯ ತೀವ್ರತೆ ಕಡಿಮೆಯಾಗುತ್ತದೆ. ಜೀವನ ಸಾಗರದಲ್ಲಿ ಆಸೆಯನ್ನು ತಡೆದಾಗ ಸ್ವಾರ್ಥ ಕಡಿಮೆಯಾಗುತ್ತದೆ.
ಪ್ರ: ಧರ್ಮದ ಮೇಲೆ ಆಕ್ರಮಣವಾಗಿದೆ ಎನ್ನುತ್ತಾರಲ್ಲ ಇದು ನಿಜವೇ?
ಉ: ಹಿಂದು ಧರ್ಮ ಸಬಲವಾಗಿದ್ದು, ಅದರ ಮೇಲೆ ಆಕ್ರಮಣವಾಗಿಲ್ಲ. ಹಿಂದು ಧರ್ಮದಲ್ಲಿರುವ ಜೀವನ ಕ್ರಮದ ಮೇಲೆ ಆಕ್ರಮಣವಾಗಿದೆ. ರೋಗಾಣುಗಳು ದೇಹದ ಮೇಲೆ ಆಕ್ರಮಣ ಮಾಡುವುದು ಅದರ ಸಹಜ ಸ್ವಭಾವ. ಜನಜೀವನ ದುರ್ಬಲವಾಗಿದ್ದಾಗ ರೋಗದ ಅಣುಗಳು ಜಾಸ್ತಿಯಾಗಿ ಅವು ತಮ್ಮ ಪ್ರಭಾವ ತೋರುತ್ತವೆ. ಹಿಂದು ಸಮಾಜ ದುರ್ಬಲವಾಗಿದ್ದಾಗ ರೋಗಾಣುಗಳಂತೆ ಅನ್ಯ ಮತಗಳು ಆಕ್ರಮಣಮಾಡಿರಬಹುದು. ಹಿಂದು ಧರ್ಮ ಶಕ್ತಿಯುತವಾದುದು. ಶಕ್ತಿ ಹಿಡಿದುಕೊಂಡರೆ ಸಬಲವಾಗಬಹುದು. ಆ ನಿಟ್ಟಿನಲ್ಲಿ ಹಿಂದು ಸಮಾಜ ಸಬಲವಾಗಬಹುದೇ ಎನ್ನುವ ಚಿಂತನೆ ಮಾಡಬೇಕಿದೆ.
ಪ್ರ: ದೇಶದ ಜನತೆಯ ಜೀವನಕ್ರಮದ ಬದಲಾವಣೆಗೆ ಆಂಗ್ಲಭಾಷೆಯ ಬಿಸಿ ತಟ್ಟಿದೆಯೇ?
ಉ: ದೇಶದಲ್ಲಿ ಯಾವುದೇ ಭಾಷೆಗೆ ವಿರೋಧವಿಲ್ಲ. ತಾಯಿ, ಮಾತೃಭಾಷೆಯ ಬಗ್ಗೆ ಅಭಿಮಾನವಿದ್ದಾಗ ಇತರ ಭಾಷೆಗಳು ಸೋದರ ಭಾಷೆಗಳಾಗುತ್ತದೆ. ಅನ್ಯ ಭಾಷೆಯ ಮೇಲೆ ಸೋದರ ಭಾವನೆ ಮೂಡಿದಾಗ ಅದು ಸುಸಂಸ್ಕೃತ ಸಮಾಜದ ಲಕ್ಷಣವಾಗುತ್ತದೆ. ಪ್ರತಿಯೊಂದು ಭಾಷೆಯ ಹಿಂದೆ ಸಂಸ್ಕೃತಿಯಿರುತ್ತದೆ. ಅದು ನಮ್ಮ ಜೀವನಕ್ಕೆ ಅಂಟಿಕೊಳ್ಳದೇ ಇರಬೇಕಾದ್ರೆ ತಾಯಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಹಲಸಿನ ಮೇಣ ಅಂಟುವುದು ಅದರ ಸ್ವಭಾವ..ಅದು ದೇಹಕ್ಕೆ ಅಂಟದೆ ಇರಬೇಕಾದ್ರೆ ಎಣ್ಣೆ ಹಚ್ಚಿಕೊಳ್ಳುವ ವಿವೇಕವಿರಬೇಕು.
ಪ್ರ: ಯಾತ್ರೆಯ ಸಂದರ್ಭ ಹಿಂದುಗಳು ಮಾತ್ರ ಬೆಂಬಲಿಸಿದ್ದಾರೋ? 
ಉ: ಅನ್ಯನ್ಯ ಮತಗಳು ಎನ್ನುವ ಶಬ್ದವನ್ನು ಬಳಸುತ್ತೇನೆ. ಬುದ್ದಿಯಿರುವವನಿಗೆ ಅಭಿಪ್ರಾಯವಿರುತ್ತದೆ. ಎಲ್ಲರ ಅಭಿಪ್ರಾಯವನ್ನು ಗೌರವಿಸುವ ಮನೋಧರ್ಮವಿದೆಯೋ ಅದುವೇ ಹಿಂದುತ್ವ. ಅಭಿಪ್ರಾಯದಲ್ಲಿ ತಿರಸ್ಕಾರವಿಲ್ಲ. ಗೌರವ ಭಾವನೆಯಿದೆ. ಇದನ್ನು ಎಲ್ಲರೂ ಆಲಂಗಿಸಿದ್ದಾರೆ. ಕನ್ಯಾಕುಮಾರಿಯಿಂದ ವಿವಿಧ ಅಭಿಪ್ರಾಯದ ಜನರು ಬಂದಿದ್ದು, ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಯಾತ್ರೆಯನ್ನು ಗೌರವಿಸಿ, ಮನ್ನಿಸಿ, ಆಶೀರ್ವದಿಸಿ, ಸ್ವಾಗತಿಸಿದ್ದಾರೆ.
ಪ್ರ: ಪ್ರಜಾಪ್ರಭುತ್ವದಲ್ಲಿ ಜಾತಿ-ತಾರತಮ್ಯ ತರವೇ?
ಉ: ಜಾತಿ ಎನ್ನುವುದು ಅಜ್ಞಾನ.. ಸೂರ್ಯ ಬೆಳಕು ನೀಡುವಾಗ, ಮರ ಹಣ್ಣನ್ನು ಬಿಡುವಾಗ, ನದಿ ಹರಿಯುವಾಗ ಎಲ್ಲಾ ಜೀವಿಗಳಿಗೂ ಉಪಯೋಗವಾಗಲಿ ಎನ್ನುವ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಹಿಂದು ಜೀವನ ಎಲ್ಲರ ಹಿತವನ್ನು ಬಯಸಿ ಕೆಲಸ ಮಾಡುತ್ತದೆ. ಇದನ್ನು ಅರ್ಥ ಮಾಡಿಕೊಂಡವರು ವಿರೋಧ ಮಾಡುವುದಿಲ್ಲಾ. ಸಮಾಜದಲ್ಲಿ ಜಾತಿ ಎನ್ನುವ ಅಜ್ಞಾನದ ಪರದೆ ತೆಗೆಯುವ ಕಾರ್ಯವಾಗಬೇಕಿದೆ.
ಪ್ರ: ಮನುಷ್ಯ ವಿದ್ಯಾವಂತನಾಗುತ್ತಿದ್ದಂತೆ ಹಿಂಸಾಪ್ರವೃತ್ತಿ ಜಾಸ್ತಿಯಾಗುತ್ತಿದೆ ಎನ್ನುವುದು ನನ್ನ ಭಾವನೆ?
ಉ: ಹಿಂಸಾ ಮನೋಧರ್ಮವೆನ್ನುವುದು ಜನಸಂಖ್ಯಾತ್ಮಕವಾಗಿ ಎಲ್ಲಿ ಹೆಚ್ಚಿದೆಯೋ ಅಲ್ಲಿ ಹಿಂಸೆ ಜಾಸ್ತಿಯಾಗಿದೆ. ಅಸ್ಸಾಂ, ಕಾಶ್ಮೀರ, ಕೇರಳ, ಮಣಿಪುರ, ಪಾಕಿಸ್ತಾನ, ಬಾಂಗ್ಲಾ, ಇರಾಕ್, ಇರಾನ್ ದೇಶದಲ್ಲಿಯೂ ಹಿಂಸಾಪ್ರವೃತ್ತಿ ವಿಪರೀತವಾಗಿದೆ. ಕೇರಳದಲ್ಲಿ ಅನೇಕರು ಭಾರತವನ್ನು ನಿಜವಾದ ಸ್ವರ್ಗವೆಂದಿದ್ದಾರೆ. ಸಮತ್ವ ಇದ್ದಾಗ ಹಿಂಸೆಯನ್ನು ದೂರಿಕರಿಸಬಹುದು.  Inactive majority ಯಿದ್ದಲ್ಲಿ active minorityಯು  ಸಮಾಜದಲ್ಲಿ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿರುತ್ತದೆ.   Inactive majority ಯು active ಆಗಿ ಕಾರ್ಯಚರಿಸಿದಾಗ ಹಿಂಸಾ ಪ್ರವೃತ್ತಿಯನ್ನು ಖಂಡಿಸಬಹುದಾಗಿದೆ.
(ಬಾಯಾರು ರಜಾಕ್ ಯಾತ್ರೆಯ ಸಂದರ್ಭ ಖುರಾನ್‌ನಲ್ಲಿ ಗಲಾಟೆ, ಗದ್ದಲ, ಹಿಂಸೆಗೆ ಸಮ್ಮತಿಯಿಲ್ಲ. ಇಸ್ಲಾಂನ ಹೆಸರಿನಲ್ಲಿ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ )
ಪ್ರ: ಪ್ರಸ್ತುತ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆಯಲ್ಲವೇ?
ಉ: ರಾಜಕೀಯ ವ್ಯವಸ್ಥೆಯಲ್ಲಿ ಅವ್ಯವಸ್ಥೆಯಾಗಿದೆ. ಇಂತಹ ರಾಜಕೀಯ ವ್ಯವಸ್ಥೆಗೆ ನಿಷ್ಠಾವಂತರು ಹೋದರೂ ಅವ್ಯವಸ್ಥಿತ ರಾಜಕೀಯ ವ್ಯವಸ್ಥೆಯಲ್ಲಿ ಅವರಂತೆಯೆ ಆಗುತ್ತಾರೆ. ರಾಜಕೀಯದ ಬೇರನ್ನು ಸರಿ ಮಾಡಬೇಕಿದೆ. ಗಾಂಧೀಜಿ ಗೋಖಲೆಯವರನ್ನು ಬೇಟಿ ಮಾಡಿ ಮಾರ್ಗದರ್ಶನ ನೀಡಬೇಕು. ನಾನು ರಾಜಕೀಯಕ್ಕೆ ಹೊಸಬ ಎಂದಾಗ ಗೋಖಲೆ ರಾಜಕೀಯಕ್ಕೆ ಹೊಸಬರಾಗಿದ್ದರೂ, ಆಧ್ಯಾತ್ಮಿಕವಾಗಿ ಹಳಬರಿದ್ದಿರಾ. ರಾಜಕೀಯ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕತೆ ಬೆಳೆಸಿ ಎಂದು ಹೇಳಿದ್ದರು. ಇದು ಇಂದಿನ ರಾಜಕೀಯ ನಾಯಕರಿಗೆ ಅನ್ವಯವಾಗಬೇಕಿದೆ.
stop politilism, criminalism, meterialism, comercialism and all political leaders ll start the spiritualism in the field. ರಾಜಕೀಯ ರಂಗ ಆಧ್ಯಾತ್ಮ ನಿಷ್ಠವಾದಾಗ ರಾಜಕೀಯ ಗೊಂದಲ ಪರಿಶುದ್ದವಾಗುತ್ತದೆ.
ರಾಮಾಯಣದಲ್ಲಿ ರಾಮ ಆಧ್ಯಾತ್ಮ ನಿಷ್ಟನಾಗಿ, ಸಮಚಿತ್ತತೆಯಿಂದ ವ್ಯವಹರಿಸಿದ್ದರಿಂದ ಕಿಂಚಿತ್ ವಿಕಾರ  ಉತ್ಪತ್ತಿಯಾಗಲಿಲ್ಲ. ಭರತನ ಪಟ್ಟಾಭಿಷೇಕವಾಗಬೇಕು ಎಂದಾಗ ಆತ ಆಧ್ಯಾತ್ಮ ಚಿಂತನೆಗೆ ವಿರೋಧ ಮಾಡಲಿಲ್ಲ. ಕುಟುಂಬದಲ್ಲಿ ರಾಜಕೀಯ ಗೊಂದಲವಿದ್ದರೂ ರಾಮ ಮತ್ತು ಭರತ ವ್ಯವಹಾರದಿಂದ ರಾಜಕೀಯದ ಆಧ್ಯಾತ್ಮಿಕತೆಯನ್ನು ಬಿತ್ತರಿಸಿದ್ದರು. ಚಿಂತನೆಗೆ ತಾತ್ವಿಕ ನೆಲೆಯನ್ನು ಕಲ್ಪಿಸಿದ್ದರಿಂದ ಗೊಂದಲ ಪರಿಹಾರವಾಗಿದೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಾನು ಹೋಗಿ ನಮ್ಮಲ್ಲಿ ಯಾರು ಆಗಬಹುದು ಎನ್ನುವ ಭಾವನೆ ಮೂಡಬೇಕು. ಪಾದುಕೆ ಹೊತ್ತು ಕೆಲಸ ಮಾಡುತ್ತೇನೆ ಎನ್ನುವ ಭರತನ ಚಿಂತನೆಗೆ ಪ್ರತಿಯೊರ್ವ ರಾಜಕಾರಣಿಯು ಒತ್ತು ನೀಡಿದರೆ ರಾಜವ್ಯವಸ್ಥೆ ಶುದ್ದಿಯಾಗುತ್ತದೆ. ನಾಯಕರು ಶುದ್ದಜೀವನ ನಡೆಸಿದಾಗ ಪ್ರಜೆಗಳು ಅದನ್ನು ಅನುಸರಿಸುತ್ತಾರೆ. ದೇಶದ ಅಭಿವೃದ್ದಿಯನ್ನು ಬಯಸಿ ಕಾರ್ಯ ನಿರ್ವಹಿಸಿದ್ದೆ ಆದರೆ ಅದರ ಫಲವನ್ನು ಕಾಣಬಹುದಾಗಿದೆ.
ಯಾತ್ರೆಯ ಸಂದರ್ಭ ಕೇರಳದಲ್ಲಿ ನೋಡಿದ ಧನಾತ್ಮಕ ಅಂಶಗಳು:
*ರಸ್ತೆಯಲ್ಲಿ ಬಿಕ್ಷುಕರಿಲ್ಲ. ಬಿಕ್ಷುಕರನ್ನು ನೋಡಿದರೆ ಅವರನ್ನು ಬಂಧಿಸಿ ಜೀವನಕ್ಕೊಂದು ವ್ಯವಸ್ಥೆ ಮಾಡುವ ಕಾನೂನು ಜಾರಿಯಲ್ಲಿದೆ.
*ಜೋಪಡಿ ಪಟ್ಟಿ (ಸ್ಲಮ್) ಇಲ್ಲದ ರಾಜ್ಯ(ಅಪವಾದಕ್ಕೆ ಒಂದೆರಡು ಹೊರತು ಪಡಿಸಿ).
*ವಿನಾಶದ ನಡುವೆಯೂ ಗ್ರಾಮ ಮತ್ತು ನಗರದಲ್ಲಿ ಹಸಿರು ಕೇರಳದ ಸೃಷ್ಟಿ.
*ದುರಭ್ಯಾಸದಿಂದ ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವುದಿಲ್ಲ.
*ರಾಜ್ಯದಲ್ಲಿ ವಿದೇಶಿ ಹೆಸರುಗಳನ್ನು ತೆಗೆದು ಸ್ವದೇಶಿ ಹೆಸರನ್ನು ರಚಿಸಿದ್ದಾರೆ.
*ದಾರಿಯುದ್ದಕ್ಕೂ ದೇವಸ್ಥಾನ, ಪ್ರಾರ್ಥನಾ ಮಂದಿರಗಳ ನಿರ್ಮಾಣ.
*ಭವನಗಳ ನಿರ್ಮಾಣದಲ್ಲಿಯೂ ಸ್ವದೇಶಿತನ.
ಋಣಾತ್ಮಕ ಅಂಶಗಳು:
*ವ್ಯಕ್ತಿಗತವಾಗಿ ವಿಪರೀತ ದುರ್ವ್ಯವಹಾರ, ಮನೆ-ರೋಗಯುಕ್ತವಾಗಿ ನಾಟಿ ವೈದ್ಯರು ಮಾಯವಾಗಿದ್ದಾರೆ.(ಯೋಗ ಮತ್ತು ಆರೋಗ್ಯ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕು)
*ಕೃಷಿ ಭೂಮಿಯ ವಿನಾಶವಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು, ನೀರು, ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ( ೪ ಜಿಲ್ಲೆಯನ್ನು ಹೊರತು ಪಡಿಸಿ)
*ಅನ್ನದ ಕೃಷಿ ಕಡಿಮೆಯಾಗಿ ಹಣದ ಕೃಷಿ ಹೆಚ್ಚಾಗಿದೆ.
*ವಿದೇಶಿ ವಸ್ತುಗಳ ಬಳಕೆ ವಿಪರೀತ.


ದೇಶದಲ್ಲಿ ಅನ್ನದ ಕೃಷಿ ಜಾಸ್ತಿಯಾಗಬೇಕು. ಹಣವಿದ್ದರೆ ಅದನ್ನು ಹಂಚುವ ಮನಸ್ಸು ಬರುವುದಿಲ್ಲ. ಅನ್ನವನ್ನು ಹಂಚುವ ಮನಸ್ಸಾಗುತ್ತದೆ. ನಗರ ವಾಸದ ವ್ಯಾಮೋಹ ತ್ಯಜಿಸಿ ಗೋವು ಆದಾರಿತ ಕೃಷಿಯ ಗ್ರಾಮೀಣ ಬದುಕನ್ನು ರೂಪಿಸಿಕೊಳ್ಳಬೇಕು. ಕೇರಳದಲ್ಲಿರುವ ಧನಾತ್ಮಕ ಅಂಶಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರಬೇಕು. ಭ್ರಾತೃತ್ವವನ್ನು ಬೆಸೆಯುವ ಜೀವನಶೈಲಿ ನಮ್ಮದಾಗಬೇಕು.
ಸೀತಾರಾಮ ಕೆದಿಲಾಯ-ಭಾರತ ಪರಿಕ್ರಮ ಯಾತ್ರೆಯ ರೂವಾರಿ.


Saturday 27 October 2012

ಅಂಗವೈಕಲ್ಯತೆ ಮರೆತು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.

ಮಂಗಳೂರು: ಸಮಾಜದಲ್ಲಿ ದೈಹಿಕವಾಗಿ ಸುದೃಡವಾಗಿರುವವರು ಅಬ್ಬೆಪಾರಿಗಳಾಗಿ ತಿರುಗಾಡುವುದು ಸಾಮಾನ್ಯವೆನ್ನುವ ನಂಬಿಕೆ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ದೈಹಿಕವಾಗಿ ನ್ಯೂನ್ಯತೆ ಇದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ತನ್ನದೆ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.
ತಾಯಿಯ ಗರ್ಭದಿಂದ ಜನಿಸುವಾಗ ನಮ್ಮಂತೆ ಇದ್ದ ಸುಭಾಶಿನಿ ೬ ತಿಂಗಳು ಸಮೀಪಿಸುತ್ತಿದ್ದಾಗ ಕಾಣಿಸಿಕೊಂಡ ಮಿದುಳು-ಜ್ವರದಿಂದಾಗಿ ೧೩ ನೇ ವಯಸ್ಸಿನವರೆಗೆ ನಡೆದಾಡುವ ಸ್ಥಿತಿಯಿಲ್ಲದೆ ಹಾಸಿಗೆಯಲ್ಲಿಯೆ ಕಾಲ ಕಳೆಯಬೇಕಾಯಿತು. ನಂತರದ ದಿನದಲ್ಲಿ ನಿಧಾನವಾಗಿ ಕುಳಿತುಕೊಳ್ಳುವ ಮಾನಸಿಕ ಹಾಗೂ ದೈಹಿಕ ಶಕ್ತಿ ದೊರಕಿದಾಗ ತಾಯಿ ಚಂದ್ರಕಲಾ ಮಗಳನ್ನು ಎತ್ತಿಕೊಂಡು ಹೋಗಿ ಶಾಲೆಗೆ ಸೇರಿಸಿದರು. ದೈಹಿಕ ಸುದೃಢವಾಗಿರುವ ಇತರ ಮಕ್ಕಳು ಹೋಗುವ ಸರಕಾರಿ ಶಾಲೆಗೆ ೫ ತರಗತಿಯವರೆಗೆ ತಾಯಿಯೊಂದಿಗೆ ಹೋಗಿದ್ದರೂ, ಆ ಹೊತ್ತಿನಲ್ಲಿ ಸುಭಾಶಿನಿಗೆ ಬಲಗಾಲು ಹಾಗೂ ಬಲಗೈಯ ಸ್ವಾಧೀನವಿಲ್ಲದೆ ಹೇಳಿಕೊಟ್ಟ ಅಕ್ಷರ ಬರೆಯಲು ಹಾಗೂ ನಡೆದಾಡಲು ಕೂಡ ಆಗದ ಪರಿಸ್ಥಿತಿ. ದೇವರು ದೇಹದ ಎಲ್ಲಾ ಅಂಗ ಕೊಟ್ಟಿದ್ದರೂ ಬಲಗಾಲಿನ ಬಲವನ್ನೇ ಕಿತ್ತುಕೊಂಡಿದ್ದ. ಅಲ್ಲದೇ ಬಲಗೈ ಕೊಟ್ಟಿದ್ದರೂ ಪೆನ್ನು ಹಿಡಿಯುವಷ್ಟು ಶಕ್ತಿ ನೀಡದೆ ವಂಚಿಸಿದ್ದ.
ಸಮಾಜದಲ್ಲಿ ಇತರರು ಮಾತನಾಡುವುದನ್ನು ನೋಡಿ ತಾನೂ ಕೂಡ ಮಾತನಾಡಬೇಕು ಎನ್ನುವ ಆಸೆ ಚಿಗುರೊಡೆದು ಅಲ್ಪಸ್ವಲ್ಪ ಮಾತನಾಡುವಂತೆ ಮಾಡಿದೆ. ಹಿರಿಯರ ಪ್ರೋತ್ಸಾಹ, ಗುರುಗಳ ಸಹಕಾರ, ಚೇತನಾ ಸಂಸ್ಥೆಯ ಬೆಂಬಲ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ನಿರಂತರ ನೆರವಿನಿಂದಾಗಿ ಸುಭಾಶಿನಿ ಇಂದು ಸಮಾಜದಲ್ಲಿ ವಿಶಿಷ್ಟ  ವ್ಯಕ್ತಿಯಾಗಿ ರೂಪುಗೊಂಡಿದ್ದಾಳೆ. ಜೀವನದಲ್ಲಿ ಬಂದ ಸವಾಲುಗಳಿಗೆ ತನ್ನಿಂದಾದ ಉತ್ತರ ನೀಡುತ್ತಿದ್ದಾಳೆ ಎಂದರೂ ತಪ್ಪಿಲ್ಲ.
೫ ನೇ ತರಗತಿಯವರೆಗೆ ಸರಕಾರಿ ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದ ತಾಯಿ ಚಂದ್ರಕಲಾಗೆ ಉಡುಪಿಯ ಆಶಾ ನಿಲಯ ಆಸರೆಯಾಯಿತು. ಮಗಳನ್ನು ೭ವರ್ಷಗಳ ಕಾಲ ಆಶಾ ನಿಲಯದಲ್ಲಿ ಬಿಟ್ಟು ನಂತರ ಮಂಗಳೂರಿನ ಸಂತ ಆಗ್ನೇಸ್ ವಿಶೇಷ ಶಾಲೆಯಲ್ಲಿ ೧೦ ವರ್ಷಗಳವರೆಗೆ ಶಿಕ್ಷಣ ಕೊಡಿಸಿದರು. ಕಳೆದ ೬ ವರ್ಷದಿಂದ ಸೇವಾಭಾರತಿಯ ವತಿಯಿಂದ ನಡೆಯುತ್ತಿರುವ ಚೇತನಾ ವಿಶೇಷ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.
ಸುಭಾಶಿನಿಯ ವಿಶೇಷ:
೪೦ ವರ್ಷ ಪ್ರಾಯದ ಸುಭಾಶಿನಿ ವಿಧಿಯಾಟಕ್ಕೆ ಬಲಿಯಾಗಿ ಅಂಗವೈಕಲ್ಯ ಹೊಂದಿದ್ದು, ದೇಹದ ಆಕೃತಿಯಲ್ಲಿ ಸಾಮಾನ್ಯರಂತೆ ಇಲ್ಲದಿದ್ದರೂ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಇಂದಿನ ಸಮಾಜದಲ್ಲಿ ಎರಡಕ್ಷರ ಕಲಿತು ಅಬ್ಬೆಪಾರಿಗಳಾಗಿ ತಿರುಗಾಡುತ್ತಿರುವ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ. ಚಂದ್ರಕಲಾ ಅವರ ೩ ಮಕ್ಕಳಲ್ಲಿ ಕೊನೆಯವರಾದ ಸುಭಾಶಿನಿ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಉಲ್ಲಾನ್ ವಸ್ತುವಿನಿಂದ ಮಾಡಿರುವ ಮ್ಯಾಟ್, ಫಿನಾಯಿಲ್, ಸೋಪ್ ವಾಟರ್‌ತಯಾರಿ ಮತ್ತು ಬಟ್ಟೆಯ ಬ್ಯಾಗ್‌ಗಳಿಗೆ ನೂಲ್ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಮೆಡಿಕಲ್‌ಗಳಲ್ಲಿ ಮಾತ್ರೆಗಳನ್ನು ಹಾಕಲು ಬಳಸುವ ಪೇಪರ್ ಕವರ್‌ಗಳನ್ನು ಮಾಡುತ್ತಿರುವುದು ವಿಶೇಷವಾಗಿದೆ. ಧರ್ಮಸ್ಥಳ ಸ್ವ-ಸಹಾಯ ಸಂಘದ ಸದಸ್ಯೆಯಾಗಿರುವ ಇವರಿಗೆ ಇತರ ಸದಸ್ಯರು ಪೂರ್ಣ ಸಹಕಾರ ನೀಡುತ್ತಿದ್ದಾರೆ.
ದಿನಕ್ಕೆ ೫೦ಲೀಟರ್‌ಗಳವರೆಗೆ ಫಿನಾಯಿಲ್, ಸೋಪ್ ಆಯಿಲ್ ತಯಾರಿಸುವ ಮನಸ್ಸು ಇದ್ದರೂ, ಇದಕ್ಕೆ ಪೂರಕವಾಗುವ ಮಾರುಕಟ್ಟೆ ದೊರಕಿಲ್ಲ. ಮನೆಯ ಬಳಕೆಗೆ ಬೇಕಾಗುವಷ್ಟನ್ನು ಮಾತ್ರ ತಯಾರಿಸುತ್ತಿದ್ದಾರೆ. ದೈಹಿಕ ವೈಕಲ್ಯ ಲೋಕಮುಖಕ್ಕೆ ತೋರಗೊಡದೆ ತಾನು ನಿರ್ಮಾಣ ಮಾಡಿದ ವಸ್ತುವನ್ನು ಇತರ ಜನರಿಗೂ ತೋರ್ಪಡಿಸಬೇಕು ಎನ್ನುವ ಇಚ್ಚೆಯಿಂದ ಇತ್ತೀಚಿಗೆ ನಗರದ ಫಿಶರೀಸ್ ಕಾಲೇಜ್‌ನಲ್ಲಿ ನಡೆದ ರೈತ ಮಾಹಿತಿ ಶಿಬಿರದಲ್ಲಿ ಧರ್ಮಸ್ಥಳ ಸ್ವ-ಸಹಾಯ ಮಳಿಗೆಯಲ್ಲಿ ಫಿನಾಯಿಲ್, ಸೋಪ್ ಆಯಿಲ್ ಬಾಟಲ್‌ಗಳನ್ನು ಸ್ವತಃ ಕುಳಿತು ಮಾರಾಟಕ್ಕೆ ಇಟ್ಟಿದ್ದರೂ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ದೊರಕಿದೆ ಎನ್ನುವ ಅಳಲು ಸುಭಾಶಿನಿಯದಾಗಿದೆ.
ವಿಶೇಷ ಮಕ್ಕಳಿಗಾಗಿ ಸರಕಾರದಿಂದ ನೀಡುವ ರೂ.೧೦೦೦ದಿಂದ ಅವರ ಜೀವನ ಸಾಗುತ್ತಿದೆ. ಯಾವುದೇ ಸಂಘ ಸಂಸ್ಥೆಗಳಿಂದ ಅನುದಾನ ಇಲ್ಲಿಯವರೆಗೆ ದೊರಕಿಲ್ಲ. ಆದರೂ ಕೂಡ ಸಮಾಜದಲ್ಲಿ ಚೆನ್ನಾಗಿ ಬದುಕ ಬೇಕೆನ್ನುವ ಇಚ್ಚೆ ಇದೆ. ಅದಕ್ಕೆ ಸಾರ್ವಜನಿಕರ ಪ್ರೋತ್ಸಾಹದ ಅಗತ್ಯವಿದೆ. ಸುಭಾಶಿನಿಯ ಸಂಪರ್ಕ ಸಂಖ್ಯೆ-೯೪೪೯೧೩೧೪೮೬

ಬಾಕ್ಸ್:
೬ ತಿಂಗಳ ಮಗುವಾಗಿದ್ದಾಗ ಮೆದುಳು ಜ್ವರಕ್ಕೆ ತುತ್ತಾದ ಮಗಳಿಂದು ಅಂಗವೈಕಲ್ಯದಿಂದ ಬಳಲುವಂತಾಯಿತು. ಸಮಾಜದಲ್ಲಿ ಇತರ ಮಕ್ಕಳಂತೆ ಬದುಕಬೇಕೆನ್ನುವ ಛಲದಿಂದ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಸಮಾಜದ ಬಂಧುಗಳಿಂದ ಅವಳ ಚಟುವಟಿಕೆಗಳಿಗೆ ಪ್ರೋತ್ಸಾಹ ಅವಶ್ಯಕತೆಯಿದೆ. ಮಾತನಾಡುತ್ತಿದ್ದರೂ ಮೊದಲ ಬಾರಿಗೆ ಕೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ. ದಿನನಿತ್ಯ ಕೇಳುತ್ತಿದ್ದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಚಂದ್ರಕಲಾ-ಸುಭಾಶಿನಿ ತಾಯಿ.

ರಾಜ್ಯದಲ್ಲಿಯೇ ಪ್ರಥಮ ಮಂಗಳೂರು ಪಶುಇಲಾಖೆ
ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ ಜಾನುವಾರು ಗಣತಿಗೆ ಚಾಲನೆ

ಮಂಗಳೂರು: ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ರಾಜ್ಯದಲ್ಲಿರುವ ಪಶು ವೈದ್ಯಾಧಿಕಾರಿಗಳು ಮುಷ್ಕರ ಹಮ್ಮಿಕೊಂಡು ೫ ವರ್ಷಗಳಿಗೊಮ್ಮೆ ನಡೆಸಬೇಕಿರುವ ಜಾನುವಾರು ಗಣತಿ ವಿಳಂಭಗೊಂಡಿದೆ. ಆದರೂ ರಾಜ್ಯದಲ್ಲಿ ಪ್ರಥಮವಾಗಿ ಸೆ. ೬ರಂದು ಮೂಡಬಿದ್ರೆ ಮತ್ತು ೧೦ರಂದು ನಗರದಲ್ಲಿ ಗಣತಿದಾರರಿಗೆ ತರಬೇತಿ ನೀಡಿರುವುದು ಮಂಗಳೂರಿನ ಪಶು ಇಲಾಖೆಗೆ ಸಂದ ಗೌರವ. ಸರಕಾರದಿಂದ ಮುಷ್ಕರಕ್ಕೆ ಯಾವುದೇ ಪ್ರತಿಕ್ರಿಯೆ ಬಾರದೆ ಅನಿರ್ದಿಷ್ಟಾವಧಿಯವರೆಗೆ ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದರೂ, ರಾಷ್ಟ್ರೀಯ ಕಾರ್ಯಕ್ರಮ ಹಾಗೂ ಪಶು ಇಲಾಖೆಯ ನೈತಿಕ ಜವಾಬ್ದಾರಿಯೆನ್ನುವ ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಪಶುಇಲಾಖೆ ಗಣತಿ ಕಾರ್ಯಕ್ಕೆ ಚಾಲನೆ ನೀಡಿದೆ.
ಜಿಲ್ಲೆಯಲ್ಲಿರುವ ಪಶುವೈದ್ಯಾಧಿಕಾರಿಗಳು ರಾಜ್ಯದ ಇತರ ವೈದ್ಯರಂತೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಇಲಾಖೆಯ ಪುನರ್ರಚನೆ, ಮಂಗಳೂರು ಹಾಗೂ ಪುತ್ತೂರನ್ನು ಗಮನದಲ್ಲಿರಿಸಿ ಪಶುಗಳ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಪಾಲಿಕ್ಲಿನಿಕ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿರಿಸಿದೆ. ಸರಕಾರ ಕೊಲದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ  ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬೇಡಿಕೆಯನ್ನಿಡಲಾಗಿದೆ. ಆದರೂ ಮಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡು ಜಾನುವಾರು ಗಣತಿ ಕಾರ್ಯದಲ್ಲಿ ತೊಡಗಿ ಕೊಳ್ಳಲಿದ್ದಾರೆ. ಮಂಡ್ಯದಲ್ಲಿ ಇತ್ತೀಚಿಗೆ ೧೫ ದಿನಗಳ ಅಂತರದಲ್ಲಿ ಒಂದು ಕಡೆ ತರಬೇತಿ ನಡೆದಿರುವುದು ಹೊರತು ಪಡಿಸಿ ಬೇರೆ ಯಾವ ಜಿಲ್ಲೆಯಲ್ಲಿ ಪ್ರಾರಂಭವಾದ ಮಾಹಿತಿ ಇಲ್ಲಾ.
ದ.ಕ.ಜಿಲ್ಲೆಯಲ್ಲಿ ನಗರಭಾಗದಲ್ಲಿರುವ ೨,೦೪,೬೭೭ ಮನೆಗಳು ಹಾಗೂ ಗ್ರಾಮೀಣ ಭಾಗದಲ್ಲಿರುವ ೩೬೮ ಗ್ರಾಮಗಳ ೨,೨೨,೬೨೮ ಮನೆಗಳಲ್ಲಿರುವ ಜಾನುವಾರು, ಕುದುರೆ, ಕತ್ತೆ, ನಾಯಿ, ಮೊಲ, ಕುಕ್ಕುಟ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಪಶುಸಂಗೋಪನಾ ವಲಯದಲ್ಲಿ ಉಪಯೋಗಿಸುವ ಉಪಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ೧೯೧೯-೨೦ರಲ್ಲಿ ಪ್ರಾರಂಭವಾದ ಜಾನುವಾರು ಗಣತಿಯು ೫ ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದು ೧೯ ನೇ ಜಾನುವಾರು ಗಣತಿಯಾಗಿದೆ. ೧೮ ನೇ ಗಣತಿಯಲ್ಲಿ ಶೇ.೫೪ರಷ್ಟು ಕುಟುಂಬಗಳು ಪಶುಪಾಲನೆಯಲ್ಲಿ ತೊಡಗಿರುವುದು ಕಂಡುಬಂದಿದೆ. ೨೦೧೨ ರ ಸೆ.೧೫ರಂದು ಪ್ರಾರಂಭಗೊಂಡು ಅ.೧೫ರೊಳಗೆ ಪೂರ್ಣಗೊಳಿಸಿ, ಈ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಗಳ ಪರಿಶೀಲನೆ ಮತ್ತು ವ್ಯತ್ಯಾಸಗಳನ್ನು ಸರಿಪಡಿಸಬೇಕಿತ್ತು. ಆದರೆ ಪಶುವೈದ್ಯಾಧಿಕಾರಿಗಳ ಮುಷ್ಕರದಿಂದಾಗಿ ಗಣತಿ ಕಾರ್ಯ ವಿಳಂಭಗೊಂಡಿದೆ.
ಜಾನುವಾರು ಗಣತಿಯಲ್ಲಿ ಯಾರಿರುತ್ತಾರೆ?
ದ.ಕ.ಜಿಲ್ಲೆಯಲ್ಲಿ ೬೯ ಅಧಿಕಾರಿಗಳು ಹಾಗೂ ೫೫೭ ಎಣಿಕೆದಾರರು ಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು, ಪುರಸಭೆ ಅಥವಾ ಪಟ್ಟಣ ಪಂಚಾಯಿತಿಗಳು, ಪಶುಪಾಲನಾ , ಕೃಷಿ, ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ, ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಎಸ್‌ಕೆಡಿಆರ್‌ಡಿಪಿ ಸೇವಾ ನಿರತರು ಹಾಗೂ ನುರಿತ ವಿದ್ಯಾವಂತ ಯುವಕ-ಯುವತಿಯರು ಜಾನುವಾರು ಗಣತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದ.ಕ.ಜಿಲ್ಲೆಯಲ್ಲಿ ತರಬೇತಿಯೊಂದಿಗೆ ಗಣತಿ ಕಾರ್ಯಕ್ಕೆ ಚಾಲನೆ:
೧೯ ನೇ ಅಖಿಲ ಭಾರತ ಜಾನುವಾರು ಗಣತಿ ಕಾರ್ಯಕ್ಕೆ ನೇಮಕಗೊಂಡ ಜಿಲ್ಲೆಯ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ವಿವಿಧ ತಾಲೂಕಿನಲ್ಲಿ ತರಬೇತಿ ನಡೆಯಲಿದೆ. ಮಂಗಳೂರು ಗ್ರಾಮಾಂತರ ಉಳ್ಳಾಲ ವಲಯದಲ್ಲಿ ಅ.೨೭ ರಂದು, ಬಂಟ್ವಾಳ ಹಾಗೂ ಸುಳ್ಯದಲ್ಲಿ ಅ.೩೦ ಮತ್ತು ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಅ.೩೧ರಂದು ತರಬೇತಿ  ಆಯೋಜಿಸಲಾಗಿದೆ. ತರಬೇತಿ ನಡೆದ ಮಾರನೇಯ ದಿನವೇ ಆಯಾ ತಾಲೂಕಿನಲ್ಲಿ ಗಣತಿ ಕಾರ್ಯ ಪ್ರಾರಂಭವಾಗಲಿದೆ.

ಬಾಕ್ಸ್:
*೬೯ ಅಧಿಕಾರಿಗಳು, ೫೫೭ ಗಣತಿದಾರರು.
* ಗ್ರಾಮೀಣ ಪ್ರದೇಶದಲ್ಲಿ ೨,೨೨,೬೨೮ ಹಾಗೂ ನಗರದಲ್ಲಿ ೨,೦೪,೬೭೭ ಮನೆಗಳ ಜಾನುವಾರು ಗಣತಿ(೨೦೧೧ಜನಗಣತಿ)
*ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಉಪಕರಣಗಳು.
*ರಾಜ್ಯದಲ್ಲಿಯೇ ಪ್ರಥಮ ತರಬೇತಿ ಸೆ.೬ ಮತ್ತು ಸೆ.೧೦ (ಮಂಗಳೂರು ಪಶುಸಂಗೋಪನಾ ಇಲಾಖೆ

ಬಾಕ್ಸ್:
ಅಖಿಲ ಭಾರತ ಜಾನುವಾರು ಗಣತಿಗೆ ಜಿಲ್ಲೆಯಲ್ಲಿ ವೈದ್ಯರು ಮೂಲಭೂತ ಸೌಕರ್ಯಗಳಿಗಾಗಿ ಹಮ್ಮಿಕೊಂಡ ಮುಷ್ಕರದಿಂದ ವಿಳಂಭವಾಗಿದೆ. ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ, ಜಿಲ್ಲೆಯ ವೈದರನ್ನು ಕರೆದು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ನೈತಿಕ ಜವಾಬ್ದಾರಿಯನ್ನು ಅರಿತು ಗಣತಿ ಕಾರ್ಯದಲ್ಲಿ ಭಾಗಿಯಾಗಲು ಸೂಚಿಸಲಾಗಿದೆ. ಎಲ್ಲಾ ವೈದಾಧಿಕಾರಿಗಳು ಸಹಕರಿಸಲಿದ್ದು, ತರಬೇತಿಯನ್ನು ಹಮ್ಮಿಕೊಂಡು ಗಣತಿ ಕಾರ್ಯ ಪ್ರಾರಂಭಿಸಲಾಗುವುದು. 
ಡಾ.ಕೆ.ವಿ.ಹಲಗಪ್ಪ.-ಉಪನಿರ್ದೇಶಕರು ಪಶು ವೈದ್ಯಕೀಯ ಇಲಾಖೆ.


                                                                                   ಕೊಳಚೆ ನೀರಿನಿಂದಾವೃತವಾದ ಗುಜ್ಜರಕೆರೆ: ಮಳೆಗಾಲದಲ್ಲಿ ಜರಿದ ನಿರ್ಲಕ್ಷ್ಯದ ಕಾಮಗಾರಿ
ಮಂಗಳೂರು: ೧೮೦೦ ವರ್ಷದ ಇತಿಹಾಸವಿರುವ ಧಾರ್ಮಿಕ ಹಾಗೂ ಸಾಮಾಜಿಕ ಭಾವನೆಗೆ ಕಾರಣವಾಗಿರುವ ಪವಿತ್ರ ಗುಜ್ಜರಕೆರೆಯನ್ನು ಮುಂದಿನ ಜನಾಂಗಕ್ಕೆ ಉಳಿಸಬೇಕಾದ ಅವಶ್ಯಕತೆಯಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ೩.೪೩ಎಕ್ರೆ ವಿಸ್ತೀರ್ಣದಲ್ಲಿರುವ ಗುಜ್ಜರಕೆರೆ ಶಿಥಿಲಾವಸ್ಥೆಯಲ್ಲಿದೆ. ೨ ಕೋ.ರೂ ವೆಚ್ಚದಲ್ಲಿ ನವೀಕರಣಗೊಂಡ ಗುಜ್ಜರಕೆರೆಯ ಆವರಣ ಕುಸಿದಿದೆ.
ಮಂಗಳಾದೇವಿ ಸಮೀಪದಲ್ಲಿರುವ ಗುಜ್ಜರಕೆರೆಯು ಈಗ ಕಸಕಡ್ಡಿ, ಕೊಳಚೆನೀರು, ಹುಲ್ಲುಗಳಿಂದ ಕೂಡಿದೆ. ಮಾರ್ಗನ್ಸ್‌ಗೇಟ್, ಜಪ್ಪು ಮಾರ್ಕೆಟ್ ಹಾಗೂ ಇತರ ಪ್ರದೇಶಗಳಿಂದ ಹರಿದು ಬರುವ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೆ ಈ ಕೆರೆಯ ಆವರಣ ಗೋಡೆಯತ್ತ ನುಗ್ಗಿದ ಪರಿಣಾಮ ಒತ್ತಡ ತಾಳಲಾರದೆ ಗೋಡೆ ಕುಸಿದಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಸಭೆ, ಸಮಾರಂಭ ಎಂದು ಇದೇ ದಾರಿಯಲ್ಲಿ ತಿರುಗಾಡುತ್ತಿದ್ದರೂ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ಕೆರೆಯ ಅಭಿವೃದ್ದಿ:
ಕೆರೆಯ ಅಭಿವೃದ್ಧಿಗೆಂದು ೨೦೦೮-೦೯ರಲ್ಲಿ ರೂ.೯೯.೫೦ ಲಕ್ಷ ಪ್ರಥಮ ಹಂತದ ಕಾಮಗಾರಿ ಮತ್ತು ೨೦೦೯-೧೦ರಲ್ಲಿ ೨ ನೇ ಹಂತದ ಕಾಮಗಾರಿಗಾಗಿ ರೂ. ೯೯.೫೦ ಲಕ್ಷ ಅನುದಾನ ದೊರಕಿತ್ತು. ಸ್ಥಳೀಯ ಶಾಸಕ ಎನ್.ಯೋಗೀಶ್ ಭಟ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಜೆ.ಪಾಲೆಮಾರ್ ಮುತುವರ್ಜಿ ವಹಿಸಿದ್ದರ ಪರಿಣಾಮ ಪಾಲಿಕೆ ವತಿಯಿಂದ ಕಾಮಗಾರಿ ಪ್ರಾರಂಭಗೊಂಡು, ಕೆರೆಯ ಸುತ್ತ ಆವರಣ ಗೋಡೆ ನಿರ್ಮಿಸಲಾಯಿತು. ಇಲ್ಲಿಯವರೆಗೆ ಕೆರೆಯ ಹೂಳೆತ್ತುವ ಕಾರ್ಯವಾಗಲಿಲ್ಲ.
ಕೆರೆಯ ನೀರು ಅಶುದ್ದ:
ಕೆರೆಯ ಪಕ್ಕದಲ್ಲಿ ಸುಮಾರು ೨೦೦ಕ್ಕೂ ಅಧಿಕ ಮನೆಗಳಿದ್ದು, ಕೆರೆಯ ಬದಿಯಲ್ಲಿ ಒಳಚರಂಡಿ ಹಾದು ಹೋಗಿದೆ. ಈ ಚರಂಡಿ ಬ್ಲಾಕ್ ಆದ ಸಮಯದಲ್ಲಿ ಒಳಚರಂಡಿಯನ್ನು ತೂತು ಮಾಡಿ ಈ ಕೆರೆಗೆ ಆ ಕೊಳಚೆ ನೀರನ್ನು ಬಿಟ್ಟಿದ್ದರು. ಅಲ್ಲದೆ ಇನ್ನೊಂದು ಮಾರ್ಗದಿಂದ ಚರಂಡಿಯ ಕೊಳಚೆ ನೀರು ಈ ದಿಕ್ಕಿನಲ್ಲಿಯೇ ಹರಿಯುತ್ತಿದ್ದು ಅದನ್ನು ಮೊದಲಿನ ಮಾರ್ಗಕ್ಕೆ ಜೋಡಿಸಲಾಗಿದೆ. ಮಳೆಗಾಲದ ನೀರು ಹಾದು ಹೋಗಲು ಪರ್‍ಯಾಯ ಚರಂಡಿಗಳು ಇಲ್ಲದಿರುವುದರಿಂದ ಹಾಗೂ ಸುತ್ತಲಿನ ಮನೆಯವರು ಮನೆಬಳಕೆಗೆ ಬಳಸಿದ ಕೊಳಚೆ ನೀರು ಈ ಕೆರೆಗೆ ಬಂದು ಬೀಳುವುದರಿಂದ ವೈಭವದಿಂದ ಮೆರೆಯುವ ಪವಿತ್ರವಾದ ಈ ಸ್ಥಳ ಅಶುದ್ದವಾಗಿದ್ದು ಮಾತ್ರವಲ್ಲದೆ ಇಂದು ಸೊಳ್ಳೆಗಳ ಉತ್ಫತ್ತಿಯ ತಾಣವಾಗಿದೆ.
ಹೂಳು ತೆಗೆಯದೆ, ಪಾಚಿ ಮತ್ತಿತರ ತ್ಯಾಜ್ಯ ವಸ್ತುಗಳು, ಗಲೀಜು ನೀರು ಈ ಪವಿತ್ರ ಕೆರೆಯಲ್ಲಿ ತುಂಬಿಕೊಂಡ ಪರಿಣಾಮ ದೇವಿಯ ಸ್ನಾನದ ಕೆರೆ ಈಗ ಅಶುದ್ದವಾಗಿದೆ. ಪಾಲಿಕೆಯ ವತಿಯಿಂದ ವರ್ಷಂಪ್ರತಿ ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದು, ಗುಜ್ಜರಕೆರೆಯಲ್ಲಿ ಈ ರೋಗ ಹರಡುವ ಅನೇಕ ಸೊಳ್ಳೆಗಳ ಆವಾಸ ಸ್ಥಾನವಾಗುತ್ತಿದೆ.
ಅಂತರ್ಜಲ ವೃದ್ಧಿಗೆ ಕೆರೆಗಳು ಪೂರಕ:
ನಗರದ ಸುತ್ತಲೂ ಇರುವ ಪುರಾತನ ಕೆರೆಗಳಾದ ಗುಜ್ಜರಕೆರೆ, ಎಮ್ಮೆಕೆರೆ, ಅರೆಕೆರೆ, ಓಣಿಕೆರೆ, ತಾವರೆಕೆರೆ, ಮೊಯ್ಲಿಕೆರೆ, ಕಾವೂರು ಕೆರೆ, ಪಡೀಲಿನ ಬೈರಾಡಿ ಎಲ್ಲಾ ಕೆರೆಗಳು ಮಂಗಳೂರಿನ ಕುಡಿಯುವ ಹಾಗೂ ಇತರೆ ದೈನಂದಿನ ಬಳಕೆಯ ನೀರಿನ ಕೊರತೆಯನ್ನು ನೀಗಿಸುತ್ತಿದ್ದು, ಇಂದು ಕೆಲವು ಕೆರೆಗಳು ಸಂಪೂರ್ಣ ಮುಚ್ಚಿದ್ದು, ಕೆಲವೊಂದು ತ್ಯಾಜ್ಯಗುಂಡಿಗಳಾಗಿ ಬದಲಾವಣೆಗೊಂಡಿದೆ. ಕೆರೆಗಳು ನೀರಿನ ಮೂಲ ಮಾತ್ರವಾಗಿರದೆ, ಮಾನವನ ಬದುಕಿನ ಮೂಲ ಸೆಲೆಯಾಗಿದ್ದವು. ಹೈಕೋರ್ಟ್ ರಾಜ್ಯದಲ್ಲಿರುವ ಜೀವಂತ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎನ್ನುವ ಆದೇಶ ನೀಡಿದ್ದರೂ ಅದರ ಸಂರಕ್ಷಣೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಅಂಶ ತಿಳಿದುಕೊಳ್ಳಬಹುದಾಗಿದೆ. ಅಂತರ್ಜಲ ವೃದ್ಧಿಗೆ ಕೆರೆಗಳು ಪೂರಕವಾಗಿದ್ದು ಕೆರೆಗಳಿಲ್ಲದೆ ಇಂಗುಗುಂಡಿಗಳ ನಿರ್ಮಾಣ ಮಾಡಲಾಗುತ್ತಿದೆ.
ಕೆರೆಗಳ ವೃದ್ಧಿಗೆ ಹೈಕೋರ್ಟ್‌ನ ಆದೇಶ:
ರಾಜ್ಯದಲ್ಲಿರುವ ಕೆರೆಗಳನ್ನು ಕಂದಾಯ ಇಲಾಖೆಯ ಮೂಲಕ ಸರ್ವೇ ಮಾಡಿಸಿ, ಕೆರೆಗಳ ಸುತ್ತ ತಂತಿ ಬೇಲಿ ಹಾಕಿಸಬೇಕು. ಕೆರೆ ಕಟ್ಟೆಗಳಿಗೆ ಕಲುಷಿತ ನೀರು ತ್ಯಾಜ್ಯ ವಸ್ತುಗಳು ಮಿಶ್ರಣವಾಗದಂತೆ ನೋಡಿಕೊಳ್ಳಬೇಕು ಎನ್ನುವ ಆದೇಶ ನೀಡಿದೆ. ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಸಮನ್ವಯ ಕಾಯ್ದು ಕೊಳ್ಳುವ ಉಸ್ತುವಾರಿಯನ್ನು ನ್ಯಾಯಾಂಗ ಪ್ರಾಧಿಕಾರಕ್ಕೆ ವಹಿಸಿದೆ.
ಪವಿತ್ರ ಗುಜ್ಜರಕೆರೆ:
ದ.ಕ.ಜಿಲ್ಲೆಯಲ್ಲಿ ಕೃಷಿಗೆ ಪ್ರಾದಾನ್ಯತೆ ಇದ್ದು, ಕೃಷಿಯಲ್ಲಿ ನೀರಿನ ಮಹತ್ವ ಎಲ್ಲರಿಗೂ ತಿಳಿದಿದ್ದು, ಅದಕ್ಕೆ ಹಿರಿಯರು ಕೆರೆಗಳನ್ನು ನಿರ್ಮಿಸಿಕೊಂಡಿದ್ದರು. ಜೆಪ್ಪು ಮಾರ್ಕೆಟ್ ಸಮೀಪವಿರುವ ಗುಜ್ಜರಕೆರೆ ೩.೪೩ ಎಕ್ರೆ ವಿಸ್ತೀರ್ಣವಿದ್ದು ೪೦ ಅಡಿಗಳಷ್ಟು ಆಳವಾಗಿದೆ. ಈ ಕೆರೆಯ ನೀರು ೩೦೦ ಮನೆಗಳ ಕೃಷಿ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ನವರಾತ್ರಿ ಸಂದರ್ಭದಲ್ಲಿ ಗುಜ್ಜರಕೆರೆಯಲ್ಲಿ ಮಂಗಳಾದೇವಿ ಮತ್ತು ಹಳೆಕೋಟೆ ಮಾರಿಯಮ್ಮ ದೇವರನ್ನು ಶುದ್ಧಿಕರಿಸಲಾಗುತ್ತಿತ್ತು. ಹಳೆಕೋಟೆ ಮಾರಿಯಮ್ಮ ದೇವಿಯನ್ನು ಕೆರೆಯ ಪಕ್ಕದಲ್ಲಿರುವ ಮಾರಿಯಮ್ಮ ಕಟ್ಟೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ಕುಳ್ಳಿರಿಸಿ, ಶೃಂಗರಿಸಿದ ಆಭರಣಗಳನ್ನೆಲ್ಲಾ ತೆಗೆದು ಈ ಕೆರೆಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಆದರೆ ಈಗ ಕೆರೆ ಕೊಳಚೆ ನೀರಿನಿಂದ ಆವೃತವಾಗಿದ್ದರಿಂದ ದೇವಿಯನ್ನು ನೇತ್ರಾವತಿ ಹೊಳೆಯಲ್ಲಿ ಸ್ನಾನ ಮಾಡಿಸಲಾಗುತ್ತಿದೆ.
ಸರಕಾರವು ಅಂತರ್ಜಲ ವೃದ್ದಿಗೆ ಇಂಗುಗುಂಡಿಗಳನ್ನು ನಿರ್ಮಾಣ ಮಾಡುತ್ತಿದೆ. ಹಿಂದೆ ನಗರದಲ್ಲಿ ಸಾಮಾನ್ಯ ಚಟುವಟಿಕೆಗಳಿಗೆ ಉಪಯೋಗಿಸಲು ಯೋಗ್ಯವಾದ ಕೆರೆಯ ನೀರು ಕಲುಷಿತಗೊಂಡಿರುವುದು ಮಾತ್ರವಲ್ಲ. ಈಗ ಸರಕಾರದ ಅನುದಾನ ಕಡೆಗಣಿಸಲಾಗುತ್ತಿದೆ. ಇದನ್ನು ರಕ್ಷಿಸಲು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯು ಅಭಿಯಾನವನ್ನು  ಹಮ್ಮಿಕೊಂಡಿದೆ. ಜನಪ್ರತಿನಿಧಿಗಳು ಪವಿತ್ರ ಕ್ಷೇತ್ರದ ರಕ್ಷಣೆಗೆ ಕಂಕಣಬದ್ದರಾಗಬೇಕಿದೆ.

ಬಾಕ್ಸ್:
ಸ್ಥಳೀಯ ಜನಪ್ರತಿನಿಧಿಯೊಂದಿಗೆ ಸಂದರ್ಶನಕ್ಕೆ ಸಮಯವನ್ನು ಅವರೆ ನಿಗದಿ ಮಾಡಿದ್ದರೂ ಪತ್ರಕರ್ತರೊಂದಿಗೆ ಈವಿಷಯದ ಚರ್ಚೆಗೆ ಅವಕಾಶ ನೀಡದಿರುವುದು ಅವರಿಗೆ ಈ ಕುರಿತು ಇರುವ ಜನಪರ ಕಾಳಜಿಯನ್ನು ತೋರಿಸುತ್ತದೆ. ಅಲ್ಲದೇ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರರು ಕಳೆದ ಮೂರ್‍ನಾಲ್ಕು ದಿನಗಳಿಂದ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಗುಜ್ಜರಕೆರೆಯ ಪಕ್ಕದಲ್ಲಿ ವಾಸವಾಗಿರುವ ಜನತೆಯ ಆಸೆ ಯಾವಾಗ ಫಲಿಸುವುದೋ ಕಾದು ನೋಡಬೇಕಿದೆ.

ಗುಜ್ಜರಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದರೆ ಮಂಗಳೂರಿನ ಕೆಲವೊಂದು ಪ್ರದೇಶಕ್ಕೆ ನೀರು ಸರಬರಾಜು ಮಾಡಬಹುದು. ಕಾಮಗಾರಿ ಶಿಥಿಲವಾಗಿ ಜರಿದ ಪರಿಣಾಮ ಕೊಳಚೆ ಹಾಗೂ ಮಳೆಯ ನೀರು ಗುಜ್ಜರಕೆರೆ ಸೇರಿ ಅಪವಿತ್ರವಾಗಿದೆ. ಜನಪ್ರತಿನಿಧಿಗಳು ಈ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಇಲ್ಲಿ ವಾಸವಿರುವ ಪ್ರತಿಯೊರ್ವರಿಗೂ ನವರಾತ್ರಿಯ ಸಂದರ್ಭದಲ್ಲಿ ಗುಜ್ಜರಕೆರೆಯಲ್ಲಿ ನಡೆಯುತ್ತಿದ್ದ ಹಿಂದಿನ ಸವಿನೆನಪುಗಳು ಮರುಕಳಿಸುತ್ತದೆ.
ಪಿ.ನೇಮು ಕೊಟ್ಟಾರಿ-ಕಾರ್ಯದರ್ಶಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

೮ ವರ್ಷಗಳಿಂದ ಹಾಸಿಗೆ ಹಿಡಿದ ಸದಾಶಿವ್
ಸಮಾಜದಿಂದ ಬೇಕು ನೆರವಿನ ಹಸ್ತ

ಮಂಗಳೂರು: ಮನುಷ್ಯನಿಗೆ ಕಷ್ಟ ಬರುವುದು ಸಹಜ. ಕಷ್ಟಗಳ ಸರಮಾಲೆ ಎದುರಾದಾಗ ಪಡುವ ನೋವಿನಿಂದ ಸುಧಾರಿಸಿಕೊಳ್ಳುವುದೆ ಕಷ್ಟಕರವಾಗಿರುವಾಗ ರಸ್ತೆ ಅಪಘಾತಕ್ಕೆ ಸಿಲುಕಿ ೮ ವರ್ಷಗಳಿಂದ ಸೊಂಟದ ಸ್ವಾಧೀನವನ್ನೆ ಕಳೆದುಕೊಂಡು ನಡೆದಾಡಲು ಸಾಧ್ಯವಿಲ್ಲದೆ ವೀಲ್‌ಚೇರ್‌ನ್ನು ಅವಲಂಬಿಸಿ ಕತ್ತಲೆಯಲ್ಲಿಯೇ, ಎದುರಾದ ನೋವುಗಳ ಸರಮಾಲೆಗೆ ಉತ್ತರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ  ಉರ್ವ ಮಾರಿಗುಡಿಯ ನಿವಾಸಿ ಕೆ. ಸದಾಶಿವ ಶೆಟ್ಟಿ. ಬೆಳೆಯುತ್ತಿರುವ ನಗರಿಯಲ್ಲಿ ದೈನಂದಿನ ಜೀವನ ನಿರ್ವಹಣೆ ಹಾಗೂ ಹೊಟ್ಟೆಪಾಡಿಗೆ ಹೆಣಗಾಡುವ ಜೊತೆಗೆ  ಸಾವಿರಾರು ರೂಪಾಯನ್ನು ಮಾತ್ರೆಗಾಗಿ ಖರ್ಚು ಮಾಡುತ್ತಿದ್ದಾರೆ. ಜೀವನದಲ್ಲಿ ನೋವು ತುಂಬಿಕೊಂಡೇ ನಗುವನ್ನು ಬೀರುತ್ತಿದ್ದಾರೆ.
ಹುಟ್ಟೂರು ಬಿಟ್ಟು ನಗರ ಸೇರಿದ ಶೆಟ್ರು:
ಬೆಳ್ತಂಗಡಿ ಕನ್ನಡಿಕಟ್ಟೆಯವರಾದ ಸದಾಶಿವ್ ಐದೂವರೆ ವರ್ಷದಲ್ಲಿರುವಾಗಲೇ ತಂದೆ  ಅಲ್ಲಿನ ಜಾಗ ಮಾರಿದ ಕಾರಣದಿಂದ ಕುಟುಂಬದವರೊಂದಿಗೆ ಉರ್ವ ಮಾರಿಗುಡಿ ಸಮೀಪದಲ್ಲಿ ಬಂದು ವಾಸವಾಗಿದ್ದಾರೆ. ಹೇಳಿಕೊಳ್ಳುವುದಕ್ಕೆ ಸ್ವಂತ ಮನೆ ಬಿಟ್ಟರೆ ಬೇರೆ ಯಾವ ಆಸ್ತಿಯೂ ಇವರಲ್ಲಿಲ್ಲ. ಕುಟುಂಬದ ಕಣ್ಮಣಿಯಾಗಿ ಇಳಿ ವಯಸ್ಸಿನಲ್ಲಿ ತಂದೆ ತಾಯಿಗೆ ರಕ್ಷಣೆಯಾಗಿರಬೇಕಿದ್ದ ಒಬ್ಬನೆ ಮಗ ತಂದೆಯ ಅಪಘಾತಕ್ಕಿಂತ ೬ ತಿಂಗಳು ಮೊದಲು ಲೇಡಿಹಿಲ್‌ನ ಕರಾವಳಿ ಉತ್ಸವ ಮೈದಾನ ಸಮೀಪ ನಡೆದ ಬೈಕ್ ಅಪಘಾತದಲ್ಲಿ ತೀರಿಕೊಂಡಿದ್ದನು. ಹೆಂಡತಿ ನಗರದಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ  ಕೂಲಿ ಕೆಲಸ ಮಾಡುತ್ತಾ, ಸದಾಶಿವರನ್ನು ಜತನದಿಂದ  ನೋಡಿಕೊಳ್ಳುತ್ತಿದ್ದಾರೆ.
೫ ವರ್ಷ ಹಂಪನಕಟ್ಟೆಯಲ್ಲಿರುವ ಟೈಲರಿಂಗ್ ಶಾಫ್‌ನಲ್ಲಿ ದರ್ಜಿಯಾಗಿ ಕೆಲಸ ಮಾಡಿದ ಇವರು ಡ್ರೈವಿಂಗ್ ಕಲಿತು ಟೆಂಪೊ ರಿಕ್ಷಾ ಓಡಿಸುತ್ತಾ ಹೆಂಡತಿ ಮಗನೊಂದಿಗೆ ಸುಖಿಜೀವನ ನಡೆಸುತ್ತಿದ್ದರು. ಈ ಸಂತೋಷ ಹೆಚ್ಚು ಕಾಲವಿರಲಿಲ್ಲ. ೨೦೦೪ರ ಕರಾವಳಿ ಉತ್ಸವದ ಸಂದರ್ಭ ಸ್ನೇಹಿತನೊಂದಿಗೆ ಉತ್ಸವ ನೋಡಿ ಬರುತ್ತಿದ್ದಾಗ ಇವರ ಏಕಮಾತ್ರ ಪುತ್ರ ಬೈಕ್ ಅಪಘಾತದಲ್ಲಿ ಮೃತನಾಗಿದ್ದ. ಮಗ ಸತ್ತ ದುಃಖ ಮರೆಯದಿದ್ದರೂ ಜೀವನ ನಿರ್ವಹಣೆಗೆ ಚಾಲಕ ವೃತ್ತಿ ಮಾಡಲೇಬೇಕಾಗಿತ್ತು. ವಿಧಿಯಾಟವೇ ಬೇರೆಯಾಗಿದ್ದು ಜುಲೈ ೨೦೦೪ರ ಆ ದಿನದಂದು ವಿಧಿ ಇನ್ನೊಂದು ಹೊಡೆತ ನೀಡಿತ್ತು. ಉರ್ವ ಮಾರಿಗುಡಿಯ ದ್ವಾರದ ಬಳಿ ಟೆಂಪೋದ ಬ್ರೇಕ್‌ಫೇಲ್ ಆಗಿ ದುರಂತಕ್ಕೀಡಾಗಿ ಸೊಂಟದ ಕೆಳಭಾಗದ ಅಸ್ತಿತ್ವವನ್ನೇ ಕಳೆದುಕೊಂಡು ಗಾಲಿ ಕುರ್ಚಿಯನ್ನು ಅವಲಂಬಿಸಬೇಕಾಯಿತು. ರಿಕ್ಷಾ ಬಿದ್ದ ಪರಿಣಾಮದಿಂದ ಕಿಡ್ನಿ ವೈಫಲ್ಯ, ಸೊಂಟದ ಮೂಳೆ ಮುರಿದದ್ದರಿಂದ ದೇಹ ಭಾದೆಯನ್ನು ಪೈಪ್ ಮೂಲಕವೇ ಮಾಡಬೇಕಿದೆ. ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿರುವ ಇವರು ಹೆಂಡತಿಯ ಆದಾಯದಿಂದ ದಿನದೂಡುತ್ತಿದ್ದಾರೆ.
ಸಂಘಪರಿವಾರ ಸಹಕಾರ: 
ತಿಂಗಳಿಗೆ ಆಸ್ಪತ್ರೆಯ ಖರ್ಚು ಹಾಗೂ ಮಾತ್ರೆಗಾಗಿಯೇ ೪ ರಿಂದ ೫ಸಾವಿರದವರೆಗೆ ವ್ಯಯವಾಗುತ್ತಿದ್ದು ಸರಕಾರದಿಂದ ದೊರಕುವ ಸಾವಿರ ರೂಪಾಯಿ ಯಾವುದಕ್ಕೂ ಸಾಲುತ್ತಿಲ್ಲ. ವಿಕಾಸ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಇವರ ಮನೆಗೆ ಬಂದು ವೈದ್ಯಕೀಯ ಚಿಕಿತ್ಸೆ ಹಾಗೂ ಸಲಹೆ ನೀಡುತ್ತಿದ್ದರು. ಉರ್ವ ಬಜರಂಗದಳ, ವಿಶ್ವಹಿಂದು ಪರಿಷತ್‌ನ ವತಿಯಿಂದ ತಿಂಗಳಿಗೆ ಸ್ವಲ್ಪ ಧನಸಹಾಯ ನೀಡುತ್ತಿದ್ದಾರೆ. ಮಾತಾ ಅಮೃತಾನಂದಮಯಿ ಟ್ರಸ್ಟ್‌ನಿಂದ ೩ ತಿಂಗಳಿಗೆ ೩೦೦ ರೂಗಳಂತೆ ವರ್ಷಕ್ಕೆ ೧೨೦೦ರೂಗಳನ್ನು ಪಡೆಯುತ್ತಿದ್ದಾರೆ. ಒಡಿಯೂರು ಸಂಸ್ಥೆಯಿಂದ ರೂ.೩೦೦೦ ಸಿಕ್ಕಿದ್ದು ಇವರ ಸಂಕಷ್ಟಕ್ಕೆ ಒಯಸಿಸ್ ಆದರೂ , ಜೀವನ ನಿರ್ವಹಣೆಯನ್ನು ಸಾಕಷ್ಟು ಕಷ್ಟದಲ್ಲಿಯೇ ಸಾಗಿಸಬೇಕಾಗಿದೆ.
ಗಂಡನ ಕಷ್ಟದಲ್ಲಿ ಭಾಗಿಯಾದ ದಿಟ್ಟ ಮಹಿಳೆ ಗೀತಕ್ಕ:
ಗೀತಾ ಶೆಟ್ಟಿ ಲೇಡಿಹಿಲ್‌ನಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ಸಣ್ಣಪುಟ್ಟ ಕಾರ್ಯ ನಿರ್ವಹಿಸುತ್ತಾ ತಿಂಗಳಿಗೆ ೧,೫೦೦ ಸಂಪಾದನೆ ಮಾಡಿ, ಸೊಂಟದ ಸ್ವಾಧೀನತೆ ಕಳೆದುಕೊಂಡ ಗಂಡನ ಸೇವೆಯಲ್ಲಿ ನಿರತರಾಗಿದ್ದಾರೆ. ವೈದ್ಯರು ಮನೆಗೆ ಬಂದು ತಿಂಗಳಿಗೊಮ್ಮೆ ಪೈಪ್ ಬದಲಿಸಿ ಹೋದರೆ ಅವರಿಗೆ ರೂ.೨೦೦ ಕೊಡುವುದಲ್ಲದೆ, ಟಿಟಿ ಇಂಜೆಕ್ಷನ್‌ಗೆ ೭೦ ರೂ.ನೀಡಬೇಕು. ಪುತ್ರನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಸೊಂಟದ ಸ್ವಾಧೀನತೆ ಕಳೆದುಕೊಂಡು ಹಾಸಿಗೆ ಹಿಡಿದಿರುವ ಗಂಡ ಇನ್ನೊಂದೆಡೆ. ಈ ರೀತಿ ಸಂಸಾರ ನಿರ್ವಹಣೆಗೆ ಪಡುತ್ತಿರುವ ಕಷ್ಟದಲ್ಲೂ ಎಲ್ಲರನ್ನೂ ನಗುಮುಖದಿಂದಲೇ ಸ್ವಾಗತಿಸುವವರು ಗೀತಕ್ಕ. ಸಮಾಜದಲ್ಲಿ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ಆಶ್ರಮಗಳಿಗೆ ಸೇರಿಸುವ ನಗರಜೀವನದ ಜಂಜಾಟದಲ್ಲಿ ತನಗೆ ನೆರಳಾಗಬೇಕಿದ್ದ ಗಂಡನಿಗೆ ನೆರಳಾದ ದಿಟ್ಟ ಮಹಿಳೆ ಗೀತಕ್ಕ ಎಂದರೂ ತಪ್ಪಿಲ್ಲ.
ವೈದ್ಯರ ಖರ್ಚು ಹಾಗೂ ಮಾತ್ರೆಗಾಗಿ ಸಾವಿರಾರು ರೂಪಾಯಿ ವ್ಯಯಿಸುತ್ತಿರುವ ಇವರ ಕುಟುಂಬಕ್ಕೆ ಆರ್ಥಿಕ ಬೆಂಬಲ ಬೇಕಾಗಿರುವುದು ಸತ್ಯ. ಸಹೃದಯಿಗಳು ಉರ್ವ ಮಾರಿಗುಡಿ ಸಮೀಪ ಹೋಗಿ ಕೇಳಿದರೆ ಯಾರಾದರೂ ಅವರ ಮನೆ ತೋರಿಸುತ್ತಾರೆ.

ಹಿಂದೂ ಸಂಘಟನೆ ನಮ್ಮ ಕುಟುಂಬಕ್ಕೆ ಆಧಾರವಾಗಿದ್ದು ಹೊರತು ಪಡಿಸಿದರೆ ನಮ್ಮದೆ ಸಮುದಾಯ ಸಂಘಟನೆಯಿಂದ   ಸಹಾಯ ದೊರಕಿದ್ದರೆ ಆಗುತ್ತಿತ್ತು ಎಂಬ ನಿರೀಕ್ಷೆಯಿತ್ತು. ಸರಕಾರದಿಂದ ಸಿಗುವ ಸಾವಿರ ರೂಪಾಯಿ ತಿಂಗಳ ಔಷಧಿಗೂ ಸಾಲುವುದಿಲ್ಲ. ಹೆಂಡತಿಗೆ ಆಸರೆಯಾಗಬೇಕಿದ್ದ ನಾನು ಅವಳ ಅನುಚರಣೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಮಗನನ್ನು ಕಳೆದುಕೊಂಡ ದುಃಖ ಮಾಸುವಾಗಲೆ ಈ ದುರ್ಘಟನೆಗೆ ಒಳಗಾಗಿ ಹಾಸಿಗೆ ಹಿಡಿದು ೮ ವರ್ಷ ೨ತಿಂಗಳು ಕಳೆದಿದೆ. ಸುಖಿಯಾಗಿರಬೇಕಿದ್ದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಕೆ.ಸದಾಶಿವ ಶೆಟ್ಟಿ -
ಇವರಿಗೆ ನೀವು ನೆರವಾಗಲು ಬಯಸುವಿರಾ?ಸಂಪರ್ಕಿಸಬಹುದಾದ ಮೊಬೈಲ್‌ದೂರವಾಣಿ ಸಂಖ್ಯೆ ೯೯೮೦೪೬೨೨೬೩




ಗ್ಯಾಸ್ ಟ್ರಬಲ್‌ನಿಂದ ವಸತಿ ನಿಲಯದ ಸಂಜೆಯ ಉಪಾಹಾರಕ್ಕೆ ಬೀಳುವುದೇ ಕತ್ತರಿ?

ಮಂಗಳೂರು: ಕೇಂದ್ರ ಯುಪಿಎ ಸರಕಾರ ಪೆಟ್ರೋಲಿಯಂ ತೈಲೋತ್ಪನ್ನ ಹಾಗೂ ಜೀವನ ನಿರ್ವಹಣೆಗೆ ಅಗತ್ಯವಾದ ಮೂಲಭೂತ ವಸ್ತುಗಳ ಬೆಲೆಯೇರಿಕೆ ಮಾಡಿದ್ದು ಮದ್ಯಮ ವರ್ಗದ ಜನತೆಯ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರಿಂದ ಚೇತರಿಸಿಕೊಳ್ಳುವ ಮುಂಚೆಯೆ ಸರಕಾರದ ವತಿಯಿಂದ ಸಬ್ಸಿಡಿಯಲ್ಲಿ ವರ್ಷಕ್ಕೆ ಕೇವಲ ೬ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎನ್ನುವ ಆದೇಶ ಹೊರಡಿಸಿದೆ. ಕೇಂದ್ರ ಸರಕಾರದ ಈ ನೀತಿಯಿಂದಾಗಿ ಸರ್ವಶಿಕ್ಷಾ ಅಭಿಯಾನದ ಅಕ್ಷರ ದಾಸೋಹದಲ್ಲಿ ಹಾಗೂ ಸರಕಾರದಿಂದ ನಡೆಸಲ್ಪಡುವ ವಸತಿ ನಿಲಯಕ್ಕೆ ಮುಳುವಾಗಿ ಪರಿಣಮಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಮತ್ತು ಇತರ ವಸತಿ ನಿಲಯದಲ್ಲಿ ಈಗಾಗಲೆ ನೀಡುತ್ತಿರುವ ಮದ್ಯಾಹ್ನದ ಉಪಹಾರ ನಿಲ್ಲಿಸುವ ಕುರಿತು ಚರ್ಚಿಸಲಾಗುತ್ತಿದೆ. ಕೇಂದ್ರ ಸರಕಾರದ ವರ್ಷಕ್ಕೆ ಕೇವಲ ೬ ಸಿಲಿಂಡರ್ ಎನ್ನುವ ನೀತಿ ಹಾಸ್ಟೆಲ್ ವಿದ್ಯಾರ್ಥಿಗಳ ಪಾಲಿಗೆ ಒಂದು ಹೊತ್ತಿನ ಉಪಾಹಾರಕ್ಕೆ ಕುತ್ತು ತಂದಿದೆ.
ದ.ಕ.ಜಿಲ್ಲೆಯಲ್ಲಿ ೫೬ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಪ್ರಿ-ಮೆಟ್ರಿಕ್ ಹಾಗೂ ಕಾಲೇಜು ವಸತಿನಿಲಯದಲ್ಲಿ ೪,೩೭೫ ವಿದ್ಯಾರ್ಥಿಗಳು ಸೌಲಭ್ಯ ಪಡೆದಿದ್ದಾರೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದಲೂ ಜಿಲ್ಲೆಯಲ್ಲಿ ವಸತಿ ನಿಲಯಗಳು ಕಾರ್ಯಚರಿಸುತ್ತಿವೆ. ೪ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ೧೦೦೦ ವಿದ್ಯಾರ್ಥಿಗಳು, ೧ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ೫೬೦ ವಿದ್ಯಾರ್ಥಿಗಳು ಹಾಗೂ ಅಲ್ಪಸಂಖ್ಯಾತ ೩ ವಸತಿ ನಿಲಯದಲ್ಲಿ ಸುಮಾರು ೨೦೦ವಿದ್ಯಾರ್ಥಿಗಳು ವಸತಿ ನಿಲಯದ ಸೌಲಭ್ಯ ಪಡೆಯುತ್ತಿದ್ದಾರೆ.
ಸರಕಾರದ ವತಿಯಿಂದ ವಸತಿ ನಿಲಯದಲ್ಲಿ ಉಳಿಯುವ ವಿದ್ಯಾರ್ಥಿಗೆ ೫ ರಿಂದ ೧೦ ನೇ ತರಗತಿಯವರೆಗೆ ರೂ.೭೫೦ ಹಾಗೂ ನಂತರದ ವಿದ್ಯಾರ್ಥಿಗಳಿಗೆ ರೂ.೮೫೦ರವರೆಗೆ ವೆಚ್ಚ ಮಾಡುತ್ತಿದೆ. ಈ ಮೊತ್ತದಲ್ಲಿಯೆ ಆಹಾರ, ವಸತಿ, ಗ್ಯಾಸ್ ಸೌಲಭ್ಯ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಬೇಕಿದೆ. ರಾಜ್ಯದ  ವಸತಿ ನಿಲಯದಲ್ಲಿ ನೀಡುತ್ತಿರುವ ಆಹಾರ ಸೌಲಭ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವಾದ ಮೀನು, ಮೊಟ್ಟೆ, ಕೋಳಿ ಇತ್ಯಾದಿ ಆಹಾರ ನೀಡಲಾಗುತ್ತಿದೆ. ಬೆಳಗ್ಗಿನ ಉಪಾಹಾರ, ಮದ್ಯಾಹ್ನದ ಊಟ, ಸಂಜೆಯ ಉಪಾಹಾರ ಮತ್ತು ರಾತ್ರಿ ಊಟ ನೀಡುತ್ತಿದೆ. ಕೇಂದ್ರ ಸರಕಾರ ವರ್ಷಕ್ಕೆ ನೀಡುತ್ತಿರುವ ೬ ಸಿಲಿಂಡರ್‌ನ ಬಿಸಿಯಲ್ಲಿಯೇ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೇಲ್ವಿಚಾರಕರು ಇನ್ನು ಮುಂದೆ ಸಂಜೆಯ ಉಪಾಹಾರ ಕಡಿತಗೊಳಿಸಲಿದ್ದೇವೆ ಎನ್ನುವ ಆಘಾತಕಾರಿ ಅಂಶವನ್ನು ಗಮನಕ್ಕೆ ತಂದಿದ್ದಾರೆ.
ಸರಕಾರದಿಂದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಈಗಿರುವ ಮೊತ್ತದಂತೆ ಹಣ ವ್ಯಯ ಮಾಡಿದರೆ ಮುಂದಿನ ದಿನದಲ್ಲಿ ಗ್ಯಾಸ್ ಸಿಲಿಂಡರ್‌ನ ಕೊರತೆ ಕಂಡುಬರುತ್ತದೆ. ಕೇಂದ್ರದಿಂದ ಹೆಚ್ಚುವರಿ ಸಿಲಿಂಡರ್ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಆದರೂ ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ಕರಾವಳಿಯಲ್ಲಿ ಗ್ಯಾಸ್‌ನ ಕೊರತೆ ಕಂಡುಬರುವುದು ಸಹಜ. ಇಲ್ಲಿರುವ ಹಾಸ್ಟೆಲ್‌ಗಳಲ್ಲಿ ಕುಚ್ಚಲು ಅಕ್ಕಿಯನ್ನು ಬಳಸುವುದರಿಂದ ಗ್ಯಾಸ್‌ನ ಅವಶ್ಯಕತೆ ಹೆಚ್ಚಾಗಿದೆ. ಅಕ್ಟೋಬರ್ ರಜಾ ಅವಧಿಯಾಗಿರುವುದರಿಂದ ವಸತಿ ನಿಲಯದಲ್ಲಿ ಈ ತಿಂಗಳು ಗ್ಯಾಸ್‌ನ ತೊಂದರೆ ಕಾಣಿಸಿಕೊಳ್ಳದಿದ್ದರೂ ಇದಕ್ಕೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ತಿಂಗಳು ಇದರ ಪರಿಣಾಮ ಕಾಣಿಸಿಕೊಳ್ಳುತ್ತದೆ ಎನ್ನುವ ಭೀತಿ ಇಲಾಖಾ ವಲಯದಲ್ಲಿದೆ. ವಿದ್ಯಾರ್ಥಿಗಳಲ್ಲಿ ಚರ್ಚಿಸಿರುವ ಅಂಶವನ್ನು ಅಧಿಕಾರಿಗಳಲ್ಲಿ ಕೇಳಿದರೆ ಸಂಜೆಯ ಉಪಾಹಾರವನ್ನು ಕಡಿತಗೊಳಿಸುವುದಿಲ್ಲ ಎನ್ನುವ ಉತ್ತರ ಬಂದಿದೆ.
ಕೇಂದ್ರ ಸರಕಾರದ ಗ್ಯಾಸ್‌ನ ನೀತಿಯಿಂದ ಎಲ್ಲಾ ವಲಯದ ಮೇಲೂ ಅದರ ಬಿಸಿ ತಟ್ಟಿದೆ ಎನ್ನುವುದರಲ್ಲಿ ಸಂಶಯವಿಲ್ಲಾ...ಇದಕ್ಕೆ ಶೀಘ್ರದಲ್ಲಿ ಪರಿಹಾರ ಕಾಣಬೇಕಾದ ಅಗತ್ಯವಿದೆ.

ಬಾಕ್ಸ್:
ಹಾಸ್ಟೆಲ್‌ಗಳಲ್ಲಿ ಈಗಿರುವ ಆಹಾರ ಪದ್ದತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸಂಜೆ ಉಪಹಾರವನ್ನು ನಿಲ್ಲಿಸದೆ ಇದಕ್ಕೆ ಇಲಾಖಾ ವಲಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಅರುಣ್ ಪುರ್ಟಾಡೋ-ಸಮಾಜ ಕಲ್ಯಾಣ ಅಧಿಕಾರಿ ಮಂಗಳೂರು

Thursday 25 October 2012

ಕಾನೂನು ಉಲ್ಲಂಘನೆ: ಖಾಸಗಿ ಆಟೋಗಳಲ್ಲಿ
ಪ್ರಯಾಣಿಕರ ಸಾಗಾಟಕ್ಕೆ ಬೇಕಿದೆ ಕಡಿವಾಣ

*ಸಂದೇಶ ಶೆಟ್ಟಿ  ಆರ್ಡಿ
ಮಂಗಳೂರು: ಮನುಷ್ಯನ ದೈನಂದಿನ ಓಡಾಟಕ್ಕೆ ಆಟೋರಿಕ್ಷಾ ಅಗತ್ಯವಾಗಿದ್ದು, ಹಳದಿ ಪಟ್ಟಿಯ ಆಟೋಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ನಗರದಲ್ಲಿ ಪ್ರೈವೇಟ್ ಆಟೋಗಳ ಸಂಖ್ಯೆ ವಿಪರೀತವಾಗಿದೆ. ಸ್ವಂತ ಬಳಕೆಗೆಂದು ಸಾರಿಗೆ ಇಲಾಖೆಗೆ ವಿಶೇಷ ಅಫಿದಾವಿತ್ ನೀಡಿ ಲೈಸನ್ಸ್ ಪಡೆದುಕೊಂಡು ಇಂದು ಕಾನೂನಿನ ಕಣ್ಣಿಗೆ ಮಣ್ಣೆರಚಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾರೆ. ಖಾಸಗಿ ಆಟೋ ಚಾಲಕರು ಹೊಟ್ಟೆಪಾಡಿಗೆ ಈ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಕೊಂಡು ಸುಮ್ನಿದ್ದರೂ, ಖಾಸಗಿ ಆಟೋ ಪ್ರಯಾಣಿಕರಿಗೆ ಮಾತ್ರ ಯಾವ ಸುರಕ್ಷತೆ ಇಲ್ಲದಿರುವುದರ ಬಗ್ಗೆ ನಾಗರಿಕರು ಹಾಗೂ ಸಾರಿಗೆ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.
ಮಂಗಳೂರು ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿರುವ ಬಂಟ್ವಾಳ, ವಿಟ್ಲ, ಮೂಡಬಿದ್ರೆ, ಉಳ್ಳಾಲ, ಸುರತ್ಕಲ್, ಮೂಲ್ಕಿ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ೨೦೦ರಿಂದ ೩೦೦ ಖಾಸಗಿ ಆಟೋಗಳಾಗಿ ಪರಿವರ್ತನೆ ಆಗಿವೆ. ಅಫಿದಾವಿತ್ ನೀಡುವಾಗ ಮಾಲಕರಿಗೆ ಸೂಚನೆ ನೀಡಿದ್ದರೂ ಸ್ವ-ಉದ್ಯೋಗಕ್ಕೆ (ಬಾಡಿಗೆಗೆ) ಉಪಯೋಗಿಸದೆ ಸ್ವಂತ ಬಳಕೆಗೆ ಖಾಸಗಿ ಆಟೋ ಬಳಸಬೇಕು ಎಂದು ತಿಳಿಸಲಾಗಿದೆ. ಸ್ವ-ಉದ್ಯೋಗಕ್ಕಾಗಿಯೆ ಹಳದಿ ಪಟ್ಟಿ ಹೊಂದಿರುವ ಆಟೋರಿಕ್ಷಾ ಕಾರ್ಯ ನಿರ್ವಹಿಸುತ್ತಿವೆ. ಇಲಾಖೆ ವ್ಯಾಪ್ತಿಯಲ್ಲಿ ೧೯,೫೦೦ ಹಾಗೂ  ಮಂಗಳೂರು ತಾಲೂಕಿನಲ್ಲಿ ೫,೬೮೩ ಹಳದಿ ಪಟ್ಟಿಯ ಆಟೋಗಳಿವೆ. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ನಗರ ಭಾಗಕ್ಕೆ ವಲಯ-೧ಎಂದು ಗುರುತಿಸಿ ಇದು ನೀಲಿ ಪಟ್ಟಿ, ಬಿಳಿ ಸಂಖ್ಯೆ ಹೊಂದಿದ್ದು ಈಗ ೫,೬೩೩ ಆಟೋರಿಕ್ಷಾಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಮಾಂತರದಲ್ಲಿ ವಲಯ-೨ ಎಂದು ಗುರುತಿಸಲಾಗಿದ್ದು ಹಳದಿ ಪಟ್ಟಿ , ಕಪ್ಪು ಸಂಖ್ಯೆಯನ್ನು ಒಳಗೊಂಡಿದೆ. ಖಾಸಗಿ ರಿಕ್ಷಾಗಳು ಬಿಳಿಪಟ್ಟಿ ಹೊಂದಿದ್ದು ಅವುಗಳನ್ನು ಗುರುತಿಸಬಹುದಾಗಿದೆ.
ಖಾಸಗಿ ಆಟೋರಿಕ್ಷಾದಲ್ಲಿ ಪ್ರಯಾಣಿಸುವುದು ಕಾನೂನು ವಿರೋಧಿ:
ಹಳದಿ ಪಟ್ಟಿಯ ಆಟೋದ ಲೈಸನ್ಸ್ ಪಡೆದ ಮಾಲಕರು ಸ್ವಂತ ಉಪಯೋಗಕ್ಕೆ ವಿಶೇಷ ಅಫಿದಾವಿತ್ ಸಲ್ಲಿಸಿ (ಹೊಸ ಆಟೋ ಹೊರತು ಪಡಿಸಿ) ಖಾಸಗಿಯಾಗಿ ಮಾರ್ಪಾಟು ಮಾಡಿಕೊಂಡಿರುತ್ತಾರೆ. ಖಾಸಗಿ ಆಟೋದಲ್ಲಿ ಎಫ್‌ಸಿ, ಪರ್ಮಿಟ್, ಮೆಡಿಕ್ಲೈಮ್ ಯಾವುದು ಇರುವುದಿಲ್ಲ. ಕುಟುಂಬಿಕರನ್ನು ಹೊರತು ಪಡಿಸಿ ಇತರ ಪ್ರಯಾಣಿಕರು ಖಾಸಗಿ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಪಘಾತವಾದರೆ ಸರಕಾರದಿಂದ ಯಾವುದೆ ಪರಿಹಾರ ದೊರಕುವುದಿಲ್ಲ. ಖಾಸಗಿ ವಾಹನದಲ್ಲಿ ಕೊಂಡೊಯ್ಯುವ ಸಾಹಸಕ್ಕೆ ಮನಮಾಡುವ ಮಾಲಕನಿಗೆ ರೂ.೨೦೦೦ ದಂಡ ನಿಗದಿ ಮಾಡಿದ್ದರೂ, ಕೇಸು ದಾಖಲಿಸಿ ಕೋರ್ಟ್‌ಗೆ ಹಾಕಲಾಗುತ್ತದೆ. ಆದರೂ ಕೂಡ ನಗರದ ಹೊರಭಾಗದಲ್ಲಿ ಕಾನೂನಿಗೆ ಮಣ್ಣೆರಚಿ (ಕಸಬ ಬೇಂಗ್ರೆ)ಪ್ರಯಾಣಿಕರನ್ನು ಸಾಗಿಸುವ ಅಂಶ ತಿಳಿದುಬಂದಿದೆ.
ಸರಕಾರದಿಂದ ಸಬ್ಸಿಡಿ:
೩೧ ಮಾರ್ಚ್ ೨೦೦೦ದೊಳಗೆ ನೋಂದಾವಣೆಗೊಂಡ ೨ಸ್ಟ್ರೋಕ್‌ನ ಆಟೋರಿಕ್ಷಾದ ಆರ್‌ಸಿ ಕ್ಯಾನ್ಸಲ್ ಮಾಡಿ ಅಥವಾ ಮಾರಾಟ ಮಾಡಿ ಹೊಸದಾಗಿ ಬಂದಿರುವ ೪ ಸ್ಟ್ರೋಕ್‌ನ ಎಲ್‌ಪಿಜಿಯುಕ್ತ ಆಟೋ ಖರೀದಿಸಿದಾಗ ಆ ಮಾಲಕರಿಗೆ ರೂ.೧೫,೦೦೦ ಸಬ್ಸಿಡಿ ನೀಡಲಾಗುತ್ತದೆ. ಪ್ರಾರಂಭದಲ್ಲಿ ಸಬ್ಸಿಡಿ ರೂ.೨೦೦೦ಇದ್ದು ೨೦೦೮-೦೯ರಿಂದ ರೂ.೧೫,೦೦೦ ಆಗಿದೆ. ಮಂಗಳೂರು ಇಲಾಖಾ ವ್ಯಾಪ್ತಿಯಲ್ಲಿ ೫೦೦ಕ್ಕೂ ಹೆಚ್ಚು ಹಳೆ ರಹದಾರಿ ಅಳವಡಿಸಿದ ಹೊಸ ಆಟೋರಿಕ್ಷಾಗಳು ಚಲಿಸುತ್ತಿವೆ. ಅಲ್ಲದೆ ೧೫ ವರ್ಷಕ್ಕೂ ಮೇಲ್ಪಟ್ಟ ಹಳೆ ಆಟೋವನ್ನು ಬದಲಾಯಿಸಬೇಕು ಎನ್ನುವ ನಿಯಮವಿರುವುದರಿಂದ ಹಳೆ ಆಟೋವನ್ನು ಖಾಸಗಿಯಾಗಿ ಬಳಸುತ್ತೇವೆ ಎನ್ನುವ ವಾದ ಮಾಡುವ ಮಾಲಕರು ಇದ್ದಾರೆ ಎನ್ನುವ ಮಾತು ಇಲಾಖಾ ವಲಯದಲ್ಲಿ ಕೇಳಿ ಬರುತ್ತಿದೆ. ಅದುವೆ ಈಗ ಕಾನೂನಿಗೆ ಮಾರಕವಾಗಿದೆ.
ಆಟೋಗಳಲ್ಲಿ ವಿಪರೀತ ಮಕ್ಕಳ ಸಾಗಾಟ:
ಶಾಲಾ ಮಕ್ಕಳನ್ನು ಕೊಂಡೊಯ್ಯುವ ಆಟೋ ಹಾಗೂ ಓಮ್ನಿಗಳಲ್ಲಿ ಅವುಗಳಲ್ಲಿರುವ ಸೀಟುಗಳ ವ್ಯವಸ್ಥೆಗೆ ತಕ್ಕಂತೆ ಮಕ್ಕಳನ್ನು ತುಂಬಿಸಿಕೊಳ್ಳಬೇಕು ಎನ್ನುವ ಕಾನೂನು ಇಲಾಖೆ ವತಿಯಿಂದ ನೀಡಲಾಗಿತ್ತು. ಆಟೋದಲ್ಲಿ ೬ ಹಾಗೂ ಓಮ್ನಿಯಲ್ಲಿ ಸೀಟುಗಳಿಗೆ ತಕ್ಕಂತೆ ಮಕ್ಕಳನ್ನು ಸಾಗಿಸಬೇಕು. ಮೊಬೈಲ್‌ನಲ್ಲಿ ಮಾತನಾಡುವುದು, ಕೆಟ್ಟ ಹಾಡುಗಳನ್ನು ಜೋರಾಗಿ ಪ್ರಸಾರಮಾಡುವುದರಿಂದ ಮುಗ್ದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಅಂಶವನ್ನು ತಿಳಿಸಿದ್ದರೂ, ಇತ್ತೀಚಿನ ದಿನದಲ್ಲಿ ಕಾನೂನು ಉಲ್ಲಂಘಿಸಿ ಅತಿ ಹೆಚ್ಚಿನ ಮಕ್ಕಳನ್ನು ಕೊಂಡೊಯ್ಯುವುದು ಅಪಾಯಕ್ಕೆ ಕರೆ ನೀಡಿದಂತೆ ಅಲ್ಲವೆ ಎನ್ನುವ ಮಾತಿಗೆ ಸಾರಿಗೆ ಅಧಿಕಾರಿ ಈ ಕುರಿತಂತೆ ಜಿಲ್ಲೆಯ ೮ ಶಾಲೆಗಳಲ್ಲಿ ಮಕ್ಕಳ ಪೋಷಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಣ, ಪೊಲೀಸ್, ಸಾರಿಗೆ ಇಲಾಖೆಗಳು ಮತ್ತು ವಾಹನ ಚಾಲಕ ಹಾಗೂ ಮಾಲಕರನ್ನು ಕರೆದು ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರೂ ಕಾನೂನು ಉಲ್ಲಂಘಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಶೀಘ್ರದಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
ಹೊಸ ರೂಪದಲ್ಲಿ ನಗರಕ್ಕೆ ಬರುತ್ತಿದೆ ಪ್ರೀಪೇಡ್ ಆಟೋ ಸರ್ವಿಸ್:
ಸೆಂಟ್ರಲ್ ರೈಲ್ವೆ ಸ್ಟೇಷನ್, ಕಂಕನಾಡಿ, ಕೆಎಸ್‌ಆರ್‌ಟಿಸಿಯಲ್ಲಿ ಪ್ರೀಪೇಡ್ ಆಟೋ ಸರ್ವಿಸ್ ಬರುತ್ತಿದ್ದು, ಎರಡು ಕಡೆಯಿರುವ ಹಳೆ ಕೇಂದ್ರ ತೆಗೆದು ಹೊಸದಾಗಿ ರಚಿಸಲಾಗುವುದು. ಕಂಕನಾಡಿಯಲ್ಲಿ ಹೊಸದಾಗಿ ಪ್ರಾರಂಭಿಸಲಾಗುವುದು. ಈ ಕೇಂದ್ರದಲ್ಲಿ ಹ್ಯಾಂಡ್ ಕಂಪ್ಯೂಟರ್ ನೀಡಿ ವ್ಯವಸ್ಥಿತವಾಗಿ ನಿರ್ವಹಿಸುವುದರಿಂದ ಎಲ್ಲಾ ಮಾಹಿತಿ ದೊರಕಿ ಕಾನೂನಿನ ರಕ್ಷಣೆ ಸುಲಭವಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶೆಲ್ಟರ್‌ನ್ನು ಈ ಕೇಂದ್ರದಲ್ಲಿ  ನಿರ್ಮಿಸಲಾಗುತ್ತದೆ.


ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಆಟೋದಲ್ಲಿ ಹೆಚ್ಚಿನ ಪ್ರಯಾಣಿಕರು ಹಾಗೂ ಗೂಡ್ಸ್ ರಿಕ್ಷಾಗಳಲ್ಲಿ ಕಾರ್ಮಿಕರನ್ನು ಸಾಗಿಸುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಂಪೆನಿಯ ಮಾಲಕರೊಂದಿಗೆ ಈ ಕುರಿತು ಚರ್ಚಿಸಲಾಗುವುದು. ಖಾಸಗಿ ಆಟೋದಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನಿಗೆ ವಿರುದ್ಧ. ಇದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತೆಯಿರುವುದಿಲ್ಲ.
ಸಿ. ಮಲ್ಲಿಕಾರ್ಜುನ,
ಸಾರಿಗೆ ಅಧಿಕಾರಿ ಮಂಗಳೂರು ವಿಭಾಗ



Friday 14 September 2012


೪೧ ವರ್ಷಗಳ ಕಾಲ ಸರಕಾರಿ ಸಂಸ್ಥೆಯಲ್ಲಿ ದುಡಿದರೂ ಅವರಿಗೆ ಸಿಗುತ್ತಿದ್ದ ಸಂಬಳ ತಿಂಗಳಿಗೆ ೧೫ರೂಪಾಯಿ...ಇದು ಉಡುಪಿಯ ಅಕ್ಕು,ಲೀಲಾರ ಸ್ಥಿತಿ
AKKU
LEELA
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಪುರಂದರದಾಸರು ಹೇಳಿರುವುದು ನಿಜ. ಪ್ರಪಂಚ ನೋಡಿದ ಮೇಲೆ ಇದು ಯಾವ ಮಟ್ಟದಲ್ಲಿ ನಿಜವೆನ್ನುವುದು ಅರ್ಥವಾಗದೆ ಇರುವ ಸ್ಥಿತಿ ವಿಶಾಲ ಹೃದಯವಂತಿಕೆಯುಳ್ಳವರದಾಗಿದೆ. ದಿನದಿಂದ ದಿನಕ್ಕೆ ಅವ್ಯವಹಾರಗಳು ವಿಪರೀತವಾಗುತ್ತಿವೆ. ಶ್ರೀಮಂತರು ಸಿರಿವಂತರಾಗುತ್ತಲೆ ಇದ್ದಾರೆ. ಬಡವರು ದಿನದಿಂದ ದಿನಕ್ಕೆ ಬಡವರಾಗುತ್ತಲೆ ಇದ್ದಾರೆ. ಓದುಗ ಮಿತ್ರರೇ ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಜೀವನದ ಜಂಜಾಟಗಳನ್ನು ಬದಿಗಿರಿಸಿ ದೀರ್ಘ ಉಸಿರಿನೊಂದಿಗೆ ಶಾಂತಚಿತ್ತರಾಗಿ ಆಲೋಚನೆ ಮಾಡಿ...ನಾವು ಯಾರನ್ನು ಬಡವರೆಂದು ಕರೆಯುತ್ತೇವೆ. ಸಂತೋಷದಿಂದ ಜೀವನ ನಿರ್ವಹಿಸಲು ಕಷ್ಟಪಡುವಂತ ಅಂದರೆ ಸುತ್ತಲು ಬಟ್ಟೆ, ಹೊಟ್ಟೆ ತುಂಬ ಊಟ ಮಾಡಲು ಆಹಾರ ಸಿಗದಿರುವವರನ್ನು ಬಡವರೆಂದು ಕರೆಯುತ್ತೇವೆ ಅಲ್ಲವೇ? ನೀವು ಆಲೋಚನೆ ಮಾಡಬೇಕಿರುವುದು ಇಷ್ಟೇ..
ಬಡವರು ಬಡವರಾಗುತ್ತಲೇ ಇದ್ದಾರೆ ಎನ್ನುವ ಮಾತಿನಲ್ಲಿ ಆತ ಅದೇ ರೀತಿ ಮುಂದುವರಿದರೆ ಬಡತನದಲ್ಲಿಯೇ ಆತನ ಸ್ಥಿತಿ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಕಲ್ಪಿಸಿಕೊಂಡಾಗ ಎದೆ ಜುಂ ಎನ್ನುತ್ತದೆ. ಒಬ್ಬನ ಜೀವನ ನಿರ್ವಹಣೆಯಾದರೆ ಹೇಗೊ ಸಾಗುತ್ತದೆ ಎಂದು ತಿಳಿಯಬಹುದಾದರೂ ಆತನನ್ನು ನಂಬಿಕೊಂಡು ಒಂದು ಕುಟುಂಬವಿದೆಯೆಂದಾದರೆ ಬೆಲೆ ಏರಿಕೆಯ ಕಾಲಘಟ್ಟದಲ್ಲಿ ಯಾವ ರೀತಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಅಬ್ಬಾ...!ಕಲ್ಪನೆಗೂ ನಿಲುಕದ ಸ್ಥಿತಿ ತಾನೇ?
ಆಶ್ಚರ್ಯ ಪಡಲೇಬೇಕು... ಆದರೂ ನಮ್ಮ ಕಲ್ಪನೆಗೂ ಮೀರಿದ ವ್ಯಕ್ತಿಗಳಿಬ್ಬರೂ ಕಳೆದ ೪೧ ವರ್ಷಗಳಿಂದ ತಿಂಗಳ ಮೂಲವೇತನ ರೂ.೧೫ಕ್ಕೆ ಕೆಲಸ ಮಾಡಿ ಸಂಸಾರ ಸಾಗಿಸುತ್ತಿದ್ದಾರೆ ಎಂದಾಗ ಇದು ಯಾವುದೋ ಸಿನಿಮೀಯ ಕಥೆ ಅನ್ನಿಸಬಹುದು? ೧೯೭೧ರಿಂದ ಸರಕಾರಿ ಸಂಸ್ಥೆಯಲ್ಲಿ ಸ್ವೀಪರ್ ಮತ್ತು ಸ್ಕ್ಯಾವೆಂಜರ್(ಜಾಡಮಾಲಿ) ಆಗಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿಯ ಅಕ್ಕು ಮತ್ತು ಲೀಲಾ ಅವರು ವೇತನದ ದುಃಖದ ಕಣ್ಣೀರ ಕಥೆಯಾಗಿದೆ. ಕೆಲಸ ಕಾಯಂಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಇವರಿಗೆ ಇತರ ಕಾರ್ಮಿಕರಿಗೆ ನೀಡುತ್ತಿದ್ದ ವೇತನ ನೀಡಬೇಕೆಂದು ೨೦೧೦ರ  ಜನವರಿಯಲ್ಲಿ ಆದೇಶ ನೀಡಿದ್ದರೂ, ನ್ಯಾಯಯುತವಾಗಿ ಸಿಗಬೇಕಾಗಿದ್ದ ವೇತನ ಸಿಗದೆ ಅದೇ ದುಃಖದಲ್ಲಿಂದು ಕಾಲ ಕಳೆಯುತ್ತಿದ್ದಾರೆ.
ಉಡುಪಿಯ ಸರಕಾರಿ ಮಕ್ಕಳ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಅಕ್ಕು ಸ್ವೀಪರ್ ಆಗಿಯೂ ಹಾಗೂ ಲೀಲಾ ಸ್ಕ್ಯಾವೆಂಜರ್ ಆಗಿ ೧೯೭೧ರ ಜುಲೈ ತಿಂಗಳಲ್ಲಿ ೧೫ ದಿನಗಳ ಅಂತರದಲ್ಲಿ ಸೇರ್ಪಡೆಗೊಂಡಿದ್ದರು. ತಾತ್ಕಾಲಿಕ ನೆಲೆಯಲ್ಲಿ ಸೇವೆಗೆ ನಿಯುಕ್ತರಾದ ಇವರಿಗೆ ದೊರೆಯುತ್ತಿದ್ದ ಮೂಲವೇತನ ತಿಂಗಳಿಗೆ ರೂ. ೧೫ ಮಾತ್ರ. ಸರಕಾರಿ ಸಂಸ್ಥೆಯಲ್ಲಿ ಸಾವಿರಾರು ರೂಪಾಯಿ ಸಂಬಳವೆಣಿಸುವ ಅಧಿಕಾರಿಗಳ ಮದ್ಯದಲ್ಲಿ ಇವರಿಗೆ ಸಿಗುವುದು ತಿಂಗಳಿಗೆ ೧೫ ರೂಪಾಯಿ ಎಂದಾಗ ನಾವು ಯಾವ ಕಾಲದಲ್ಲಿವೆ ಇದು ನಿಜವೇ ಎನ್ನುವ ಸಂಶಯ ಮೂಡುತ್ತದೆ. ಮಾನವನಿಗೆ ಸಂಶಯ ಬರುವುದು ಸಹಜವಾದರೂ ಇದು ಸತ್ಯ.
೨೭ ವರ್ಷಗಳ ಕಾಲ ಈ ಸಂಬಳದಲ್ಲಿ ಕಾರ್ಯ ನಿರ್ವಹಿಸಿದ್ದರೂ ಇವರನ್ನು ಖಾಯಂ ಗೊಳಿಸದೆ ಇಂದಲ್ಲ ನಾಳೆ ಕೆಲಸ ಖಾಯಂ ಆಗುತ್ತದೆ ಎನ್ನುವ ಅಧಿಕಾರಿಗಳ ಉತ್ತರ ಕೇಳಿದ ಬಡಪಾಯಿ ಜೀವಗಳು ಆ ಮಾತುಗಳನ್ನು ನಂಬಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಅವರ ಕೆಲಸ ಖಾಯಂ ಆಗುವುದಿರಲಿ ಕೆಲವು ವರ್ಷಗಳಿಂದಿಚೆಗೆ ತಿಂಗಳಿಗೆ ನೀಡುತ್ತಿದ್ದ ವೇತನವನ್ನು ಕೂಡ ನಿಲ್ಲಿಸಿದ್ದಾರೆ ಎಂದಾಗ ಸರಕಾರದ ಕಾಳಜಿ ಯಾವ ಮಟ್ಟದ್ದಾಗಿದೆ ಎನ್ನುವುದು ತಿಳಿಯುವುದಕ್ಕೆ ಸಾಧ್ಯ? ಇದು ೧೯೭೧ರಿಂದ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಆಡಳಿತ ಪಕ್ಷದ ವೈಫಲ್ಯವನ್ನು ತೋರಿಸುತ್ತದೆ. ಅಧಿಕಾರ ವಹಿಸಿಕೊಂಡವರು ಇವರ ಮನವಿಗೆ ಸ್ಪಂದಿಸಿದ್ದರೆ ಇವರು ಸರಕಾರದ ಅಧಿಕಾರಿಗಳಾಗಿ ಅಕ್ಕು ಇಂದು ನಿವೃತ್ತಿ ಪಡೆಯುತ್ತಿದ್ದರು.ಲೀಲಾ ಮುಂದಿನ ವರ್ಷ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿದ್ದರು.
ಶಿಕ್ಷಣ ಕ್ಷೇತ್ರವೆನ್ನುವುದು ದೇಗುಲಕ್ಕೆ ಸಮಾನ ಎಂದು ತಿಳಿದುಕೊಂಡಿದ್ದೇವೆ. ಆ ದೇಗುಲಕ್ಕೆ ಬರುವ ಭಕ್ತಾಧಿಗಳಿಗೆ ಸುಂದರ ವಾತಾವರಣದ ಸೃಷ್ಟಿ ಮಾಡುವ ಇಬ್ಬರು ವ್ಯಕ್ತಿಗಳ ಮೇಲೆ ಭಗವಂತ ಮಾತ್ರ ನಿಷ್ಠುರಿಯಾಗಿದ್ದಾನೆ. ಕೆಲಸ ಕಾಯಂಗೊಳಿಸಲು ಇವರು ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದಾಗಲೂ ಅವರಿಂದ ಒಂದೆ ಉತ್ತರ. ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇವೆ. ಜನಪ್ರತಿನಿಧಿಗಳಿಂದ ಯಾವುದೇ ನ್ಯಾಯ ಸಿಗದ ಕಾರಣ ಇವರು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು. ಯಾವಾಗ ಇವರು ನ್ಯಾಯಾಲಯದ ಮೊರೆ ಹೊದರೋ ಅಂದಿನಿಂದ ಇವರಿಗೆ ಪಂಕ್ತಿಯಲ್ಲಿ ಪರಿಭೇದವೆನ್ನುವಂತೆ ಪ್ರತ್ಯೇಕ ಪುಸ್ತಕದಲ್ಲಿ ಇವರಿಬ್ಬರ ಸಹಿ ಹಾಕಿಸಲಾಗುತ್ತಿತ್ತು. ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ತೀರ್ಪಿನಂತೆ ಅವರನ್ನು ೨೦೦೩ರಲ್ಲಿಯೇ ಖಾಯಂ ಆಗಿ ನೇಮಕಾತಿ ಮಾಡಬೇಕಾಗಿತ್ತು. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಸುಪ್ರಿಂ ಕೋರ್ಟ್‌ಗೆ ಮೊರೆಹೋಗಬೇಕಾದ ಅನಿವಾರ್ಯತೆ.
ಕರ್ನಾಟಕ ರಾಜ್ಯದ ದುರ್ದೈವವೆಂದರೆ ಇದೇ ತಾನೇ? ರಾಜ್ಯದ ಉಚ್ಚನ್ಯಾಯಾಲಯಕ್ಕೆ ಮಾನ್ಯತೆ ನೀಡದ ಸರಕಾರದ ವಿರುದ್ದ ಕೇವಲ ೧೫ ರೂ.ಸಂಬಳಕ್ಕಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ಕೆಲಸ ಕಾಯಂಗಾಗಿ ಬೆಂಗಳೂರಿನ ವಕೀಲರನ್ನು ದಿನನಿತ್ಯ ವಾದಕ್ಕಾಗಿ ಸುಪ್ರಿಂ ಕೋರ್ಟ್‌ಗೆ ವಿಮಾನದಲ್ಲಿ ಕಳುಹಿಸುವ ವ್ಯವಸ್ಥೆ  ಮಾಡಲಾಯಿತು. ವಿಮಾನದ ವೆಚ್ಚವನ್ನು ಸಂಘ ಸಂಸ್ಥೆ ವಹಿಸಿಕೊಂಡವು. ೨೦೧೦ರಲ್ಲಿ ಕೋರ್ಟ್ ಇವರ ಪರವಾಗಿಯೇ ತೀರ್ಪು ನೀಡಿದ್ದು ಮಾತ್ರವಲ್ಲ ಸರಕಾರಿ ಕಾರ್ಮಿಕರಿಗೆ ಕೊಡುವಷ್ಟೆ ಸಂಬಳ ನೀಡಬೇಕು. ಬಾಕಿಯಿರುವ ಸಂಬಳವನ್ನು  ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶ ನೀಡಿ ವರ್ಷ ಎರಡಾದರೂ ಇಲ್ಲಿಯವರೆಗೆ ಬಿಡಿಗಾಸು ಅವರ ಕೈ ಸೇರಿಲ್ಲ ಎಂದಾಗ ನಮ್ಮ ರಾಜ್ಯದ ನ್ಯಾಯದ ಸ್ಥಿತಿ ಯಾವ ರೀತಿಯಾಗಿದೆ. ಸುಪ್ರಿಂ ಕೋರ್ಟ್‌ನ ಆದೇಶಕ್ಕೂ ಮಾನ್ಯತೆ ನೀಡದ ರಾಜ್ಯ ಸರಕಾರ ಸಾಮಾನ್ಯ ಜನತೆಗೆ ನ್ಯಾಯ ಒದಗಿಸುವಲ್ಲಿ ಇರುವ ಕಾಳಜಿಯನ್ನು ತೋರ್ಪಡಿಸುತ್ತದೆ ಅಲ್ಲವೇ?
ಸಾಮಾನ್ಯ ಅಂದಾಜಿನ ಪ್ರಕಾರ ಅವರಿಬ್ಬರಿಗೂ ರೂ.೨೭ ಲಕ್ಷ ವೇತನ ಸಿಗಬೇಕಿದೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರಿಗೆ ತಿಂಗಳ ವೇತನ ಹೇಗೆ ನೀಡುತ್ತಿರಿ ಎಂದು ಪ್ರಶ್ನಿಸಿದಾಗ ಕಂಟೆಂಜೆನ್ಸಿ ಫಂಡ್‌ನಲ್ಲಿ ನೀಡಲಾಗುತ್ತದೆ. ಆ ಪಟ್ಟಿಯಲ್ಲಿ ಚಾಕ್‌ಪಿಸ್, ಡಸ್ಟರ್, ಅಕ್ಕು, ಲೀಲಾ ಹೀಗೆ ಸಾಗುತ್ತದೆ. ಖಾಸಗಿ ಕಂಪೆನಿ ಹಾಗೂ ಹೋಟೆಲು ನೌಕರರಿಗೆ ಕನಿಷ್ಟ ಕೂಲಿ ನಿರ್ಧರಿಸುವ ಸರಕಾರ ಅವರದೇ ಭಾಗವಾಗಿರುವ ವಿದ್ಯಾಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ಇವರಿಗೆ  ಮಾತ್ರ ತಿಂಗಳಿಗೆ ರೂ. ೧೫ ನೀಡುತ್ತಿರುವುದು ನ್ಯಾಯೋಚಿತವೇ? ಮಹಿಳಾ ಹಕ್ಕು, ಮಹಿಳಾ ದೌರ್ಜನ್ಯಗಳಾಗುತ್ತಿವೆ ಎಂದು ಸಾರುವ ರಾಜ್ಯ ಹಾಗೂ ಕೇಂದ್ರ ಮಹಿಳಾ ಆಯೋಗಕ್ಕೆ ಅಕ್ಕು ಮತ್ತು ಲೀಲಾರ ಕಣ್ಣೀರ ಮರ್ಮ ಅರ್ಥವಾಗದೇ ಹೋಯಿತೆ?
ಪ್ರಾರಂಭದಲ್ಲಿ ಇತರ ನೌಕರರಂತೆ ಹಾಜರಾತಿ ಪುಸ್ತಕದಲ್ಲಿಯೆ ಸಹಿ ಹಾಕುತ್ತಿದ್ದು ನ್ಯಾಯಕ್ಕಾಗಿ ಹೋರಾಟ ಮಾಡಿದ ದಿನದಿಂದ ಪ್ರತ್ಯೇಕ ಪುಸ್ತಕದಲ್ಲಿ ಸಹಿ ಹಾಕಿಸುತ್ತಿದ್ದರು. ಭಾನುವಾರವೂ ಸೇರಿ ವರ್ಷದ ಎಲ್ಲಾ ದಿನವೂ ದಿನಕ್ಕೆ ೩ ಬಾರಿ ಸ್ವಚ್ಚತೆ ಮಾಡುತ್ತಿದ್ದೇವು. ಸಂಸಾರ ನಿರ್ವಹಣೆಗೆ ಶಿಕ್ಷಕಿಯರ ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದು ಅವರು ತಿಂಗಳಿಗೆ ನೀಡುತ್ತಿದ್ದ ಹಣದಿಂದ ಬದುಕುತ್ತಿದ್ದೆವು. ಕುಟುಂಬದಲ್ಲಿ ಅಸ್ತಮಾ ಪೀಡಿತ ಗಂಡ ಹಾಗೂ ೩ ಹೆಣ್ಣು ಮತ್ತು ೨ ಗಂಡು ಮಕ್ಕಳಿದ್ದಾರೆ ಎನ್ನುವುದು ಸ್ವೀಪರ್ ಆಗಿ ಕಾರ್ಯ ನಿರ್ವಹಿಸಿದ ಅಕ್ಕು ಅವರ ಮನದಾಳದ ಮಾತು.
ಸ್ಕ್ಯಾವೆಂಜರ್(ಜಾಡಮಾಲಿ) ಲೀಲಾ ಅವರು ಉಡುಪಿಗೆ ಬರುವ ಜನಪ್ರತಿನಿಧಿಗಳಿಗೆ  ಮನವಿ ನೀಡಿದರೂ ಪರಿಹಾರ ಕಾಣಲಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಗೆ ಬಂದಾಗ ಮನವಿ ನೀಡಿದಾಗ ನಿಮ್ಮಂತೆ ಕೆಲಸ ಮಾಡುವವರು ರಾಜ್ಯದಲ್ಲಿ ಸುಮಾರು ೭೫ಸಾವಿರ ಮಂದಿಯಿದ್ದಾರೆ. ನಿಮ್ಮನ್ನು ಖಾಯಂ ಮಾಡಿದರೆ ಅವರನ್ನೆಲ್ಲಾ ಖಾಯಂಗೊಳಿಸಬೇಕಾದೀತು ಎಂದಾಗ ಅವರ ಸ್ವರ ಗದ್ಗದಿತವಾಯಿತು.
ಕರಾವಳಿಯಲ್ಲಿ ಇವರ ಕೇಸ್ ಹೈಕೋರ್ಟ್‌ನಲ್ಲಿದ್ದ ಸಂದರ್ಭ ಪೇಪರ್‌ನಲ್ಲಿ ಪ್ರಕಟವಾದ ಲೇಖನ  ನೋಡಿದ ಬಲ್ಮಠ ಕಾಲೇಜಿನ ಎಲಿಜಾ ಡಿಸೋಜಾ, ಮಲ್ಪೆ ಜೂನಿಯರ್ ಕಾಲೇಜಿನ ಪದ್ಮ ಅವರುಗಳು ನಾವೂ ಕೂಡ ತಿಂಗಳಿಗೆ ೧೫ ರೂಪಾಯಿಯಂತೆ ಕೆಲಸ ಮಾಡುತ್ತಿದ್ದೇವೆ. ನಮಗೂ ಕೂಡ ನ್ಯಾಯ ಒದಗಿಸಿಕೊಡಿ ಎಂದು ಸಾಮಾಜಿಕ ಕಾರ್ಯಕರ್ತ ಡಾ.ರವೀಂದ್ರನಾಥ್ ಶಾನುಬೋಗ್ ಅವರನ್ನು ಕೇಳಿಕೊಂಡಿರುವುದನ್ನು ನೆನಪಿಸಿಕೊಳ್ಳುತ್ತಾರೆ. ೪೧ ವರ್ಷಗಳ ಕಾಲ ಶಿಕ್ಷಕರನ್ನು ತಯಾರಿಸುವ ಶಿಕ್ಷಣ ಸಂಸ್ಥೆಯ ಕಸ ಗುಡಿಸಿದ ಹಾಗೂ  ಪಾಯಿಖಾನೆ ತೊಳೆದ ಈ ನತದೃಷ್ಟರಿಗೆ ಮಾತ್ರ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ನ್ಯಾಯ ಒದಗಿಸಲೇ ಇಲ್ಲಾ.....
ಅದೇ ರೀತಿ ನ್ಯಾಯಾಲಯದಲ್ಲಿ ಅದೆಷ್ಟೋ ಕಡತಗಳು ದೂಳು ಹಿಡಿದು ಬಿದ್ದಿವೆ. ಕರಾವಳಿಯ ಹೆಮ್ಮೆಯ ಕ್ರೀಡಾ ಪಟುವಾಗಿದ್ದ ಅಂಪಾರಿನ ಪ್ರಥ್ವಿಯ ಕುರಿತು ನಮ್ಮ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದೆವು. ಸೆ.೨೭ಕ್ಕೆ ಪ್ರಥ್ವಿಯ ಕೊಲೆಯಾಗಿ ಒಂದು ವರ್ಷ ವಾಗುತ್ತಿದೆ. ಆದರೆ ಆ ಆತ್ಮಕ್ಕೆ ಹಾಗೂ ಅವರ ಮನೆಯವರಿಗೆ  ನ್ಯಾಯ ಸಿಗಲೇ ಇಲ್ಲಾ? ಅದೆಷ್ಟೊ ಜನರು ಸಮಾಜದಲ್ಲಿ ನ್ಯಾಯ ಸಿಗದೆ ಒದ್ದಾಡುತ್ತಿದ್ದಾರೆ.



Wednesday 5 September 2012


ಬೇದಭಾವ ತಾಂಡವವಾಡುತ್ತಿದ್ದ ಸಮಾಜದಲ್ಲಿ ಸಮಾನತೆಯ ತತ್ವ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು
ಬ್ರಿಟಿಷರ್ ಆಳ್ವಿಕೆಯಲ್ಲಿ ಬೇಸತ್ತ ಜನರು ಬದುಕುವುದು ಕಷ್ಟಕರವಾಗಿದ್ದರೂ ದೇಶಿಯ ಜನರಲ್ಲಿ ಸಾಮಾನ್ಯವಾಗಿ ಕಂಡು ಬಂದ ಮೇಲು-ಕೀಳು ಎನ್ನುವ ತಾರತಮ್ಯದಿಂದ ಮಾನಸಿಕ ಆಘಾತವಾಗಿ ಸುಧಾರಿಸುವುದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿನ ಅಸಮಾನತೆ  ಹೋಗಲಾಡಿಸಲು ಆಗಸ್ಟ್ ೨೦, ೧೮೫೫ರಲ್ಲಿ  ಕೇರಳದ ತಿರುವನಂತಪುರದ ಅತ್ಯಂತ ಹಿಂದುಳಿದ ವರ್ಗದಲ್ಲಿ ಜನಿಸಿದ ನಾರಾಯಣ ಗುರುಗಳು ಕ್ರಾಂತಿಯನ್ನೆ ಮಾಡಿದರು. ಹಿಂದುಳಿದ ವರ್ಗದಲ್ಲಿ ಜನಿಸಿದ ಇವರಿಗೆ ಸಮಾಜದಲ್ಲಿ ಮೇಲ್ವರ್ಗದವರಿಂದ ಆದ ಅವಮಾನಕ್ಕೆ ತಮಗೂ ಕೂಡ ಸಮಾಜದಲ್ಲಿ ಬದುಕುವ ಹಕ್ಕಿದೆ. ಅದನ್ನು ಅವರು ಕಸಿದುಕೊಳ್ಳುತ್ತಿದ್ದಾರೆ ಎನ್ನುವ ವಿಷಯ ಮನಗಂಡು ನಡೆಸಿದ ಕ್ರಾಂತಿಯಿಂದ ಸಮಾಜದಲ್ಲಿ ಗುರುತಿಸಿಕೊಂಡು ದೀನರಿಗೆ ಸಿಗಬೇಕಾದ ಮಾನ್ಯತೆ ದೊರಕಿಸಿಕೊಟ್ಟಿದ್ದಾರೆ.
ತನ್ನ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸದಾ ಪ್ರಾತಃಸ್ಮರಣೀಯರು. ಮನುಕುಲದ ಉದ್ಧಾರಕ್ಕಾಗಿ ಅವಿರತ ಶ್ರಮಿಸಿದ ಅವರ ಆದರ್ಶ ಸದಾ ಪ್ರಸ್ತುತವಾಗಿದೆ. ವರ್ಗ ಸಂಘರ್ಷ ಅತಿಯಾಗಿದ್ದ ಕಾಲದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದ ನಾರಾಯಣ ಗುರುಗಳು ಸಮಾನತೆಗಾಗಿ ಧ್ವನಿ ಎತ್ತಿದವರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಕೂಡ ದೇವರನ್ನು ಪೂಜಿಸಬಹುದು. ಪ್ರತಿಯೊಬ್ಬರ ಹೃದಯ ಮಂದಿರದಲ್ಲಿ ದೇವರಿದ್ದಾನೆ ಎನ್ನುವ ಅಂಶ ಜನತೆಗೆ ಸಾರಿ ಹೇಳಿದ ಮಹಾನ್ ಗುರುಗಳಾಗಿದ್ದರು. ಸಾಮಾಜಿಕ ಸಮಾನತೆ, ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಯಲ್ಲಿ ತನ್ನ ಜೀವನವನ್ನು ಅರ್ಪಿಸಿಕೊಂಡಿದ್ದರು.
ದೇಶದಲ್ಲಿ ೧೫೦೦ ವರ್ಷಗಳಿಂದಲೂ ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಯುತ್ತಿದ್ದು ಅದು ಈಗಲೂ ಮುಂದುವರಿದಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮವೇ ಇಂದು ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ.
ಪ್ರತಿಯೊಬ್ಬರ ಜೀವನ ಸಾಗರದಲ್ಲಿ ಸಂಘಟನೆ ಅತ್ಯಗತ್ಯ. ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ತೊಲಗಿಸಲು ಉತ್ತಮ ಸಂಘಟನೆ ಕ್ರಾಂತಿಕಾರಿ ಶಕ್ತಿಯಾಗಲಿದೆ. ಸಮಾಜದಲ್ಲಿನ ಅಸಮಾನತೆ ಹೊಡೆದೊಡಿಸಿ ಹಿಂದುಳಿದ ವರ್ಗಕ್ಕೂ ಮಾನವೀಯ ನೆಲೆಯಲ್ಲಿ ಉತ್ತಮ ಸ್ಥಾನಮಾನ ಕಲ್ಪಿಸಿದ್ದಾರೆ. ಜಾತಿ, ಗಡಿ, ಭಾಷೆ, ಸಾಂವಿಧಾನಿಕ ವಿಷಯಗಳು ಪ್ರಸ್ತಾಪವಾದಾಗ ನಾರಾಯಣ ಗುರುಗಳ ಸಂದೇಶ ಮನುಕುಲಕ್ಕೆ ಅವಶ್ಯಕವಾಗಿದೆ. ಪ್ರತಿಯೊರ್ವರಲ್ಲೂ ಪ್ರೀತಿ, ವಿಶ್ವಾಸದಿಂದ ವ್ಯವಹರಿಸಿದಾಗ ಸಮಾಜದಲ್ಲಿ ನಿರ್ಮಾಣವಾಗುವ ಗೊಂದಲಗಳಿಗೆ ಸೂಕ್ತ ಪರಿಹಾರ ಸಿಗುತ್ತದೆ. ಶಿಕ್ಷಣದ ಮೂಲಕ ಜಾಗೃತಿ ಹೊಂದಿ, ಸಮಾನತೆಯ ತತ್ವವನ್ನು ಪ್ರತಿಯೊರ್ವರ ಮನದಲ್ಲಿ ಮೂಡಿಸಿದಾಗ ಗುರುಗಳು ಸಾರಿದ ತತ್ವ ಪ್ರಸ್ತುತ ಸಮಾಜದಲ್ಲಿ ಮಹತ್ವ ಪಡೆಯುತ್ತದೆ.
ಸಾಮಾಜಿಕ ನ್ಯಾಯ ಸಂವಿಧಾನದ ಮೂಲಕ ನಮ್ಮ ಪಾಲಿಗೆ ಒದಗಿದ್ದರೂ ಹಿಂದಿನ ಕಾಲದಲ್ಲಿ ಅದು ಭಾಷೆ, ಪ್ರಕಟನೆಯ ಮೂಲಕ ಪ್ರಕಟವಾಗದೆ ಅನೇಕರು ಕಾಲನ ಗರ್ಭದಲ್ಲಿ ಲೀನವಾಗಿರುವುದು ಕಂಡುಬರುತ್ತದೆ. ನಾರಾಯಣ ಗುರುಗಳು ಎಂಟು ವರ್ಷದ ಬಾಲಕನಾಗಿದ್ದಾಗ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಸಮಾಜದಲ್ಲಿ ಬೆರೆಯಲು ಅವಕಾಶವಿಲ್ಲದಿರುವ ಕಾಲಘಟ್ಟದಲ್ಲಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಸಮಾನತೆಯಿಂದ ಬದುಕಲು ಪ್ರಯತ್ನಿಸಿದ್ದರು. ಮೇಲು-ಕೀಳು ಎನ್ನುವ ವರ್ಗ ಸಂಘರ್ಷದಲ್ಲಿ ಕೆಳವರ್ಗದ ಜನತೆಯ ನೆರಳು ಕೂಡ ಸುಳಿಯಬಾರದು ಎನ್ನುವ ಮೇಲ್ವರ್ಗದ ದರ್ಪಕ್ಕೆ ಅದು ಮಾನವ ಸೃಷ್ಟಿಸಿದ ಅಂಶ ಎನ್ನುವುದನ್ನು ಪ್ರತಿಯೊರ್ವರ ಮನಸ್ಸಿನಲ್ಲಿ ನಾಟುವಂತೆ ಮಾಡಿದ ಕೀರ್ತಿ ಗುರುಗಳಾದಾಗಿದೆ.
ಗಾಂಧೀಜಿಯವರು ನಾರಾಯಣ ಗುರುಗಳ ಆಶ್ರಮ ದರ್ಶನ ಮಾಡಿದ ನಂತರದಲ್ಲಿ ಅವರು ಆಧುನಿಕ ಬ್ರಹ್ಮ ಎಂದು ಉಲ್ಲೇಖ ಮಾಡಿದ್ದರು. ಗುರುಗಳು ಸೃಷ್ಟಿಸಿದ ಜೀವಿಗಳಲ್ಲಿ ಸಮಾನತೆಯ ಸಂದೇಶ ಬಿತ್ತಿ ಜನರಲ್ಲಿ ಬಾಂಧವ್ಯ ಬೆಸೆಯಲು ಸಹಾಯಕವಾಗುವ ಅಂಶಗಳನ್ನು ಬಿತ್ತರಿಸಿದ್ದಾರೆ. ಫಲವತ್ತಾದ ಭೂಮಿಯಲ್ಲಿ ಬಿತ್ತುವ ಬೀಜದ ಮೇಲೆ ಅದರ ಫಲವನ್ನು ನಾವು ನಿರೀಕ್ಷೆ ಮಾಡಬಹುದು. ಅಂತೆಯೇ ನಿಷ್ಕಲ್ಮಶ ಮನದಲ್ಲಿ ಯಾವ ಅಂಶವನ್ನು ಬಿತ್ತರಿಸುತ್ತೇವೆಯೋ ಅದು ಶಾಶ್ವತವಾಗಿರುವುದರೊಂದಿಗೆ ಬೆಳೆಯುತ್ತಿರುವ ಮೊಗ್ಗುಗಳಿಗೆ ಆದರ್ಶವಾಗುತ್ತದೆ. ಉತ್ತಮ ಅಂಶಗಳನ್ನು ಬಿತ್ತರಿಸಲು ಗುರುಗಳಲ್ಲಿರುವ ಅಚಲ ನಿರ್ಧಾರ, ಬದ್ದತೆಯ ಮೂಲಗುಣ ಇಂದು ಮನುಕುಲ ಮೆಲುಕು ಹಾಕುತ್ತಿದೆ. ನಾರಾಯಣ ಗುರುಗಳಲ್ಲಿ ತುಂಟ ಹುಡುಗನೊರ್ವ ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸಿದಾಗ ನಿನ್ನಲ್ಲಿಯೂ ದೇವರಿದ್ದಾನೆ. ಹಾಗಾದರೆ ಅವನನ್ನು ತೋರಿಸಿಕೊಡಿ ಎಂದಾಗ ನಾಳೆ ನಿನಗೆ ದೇವರ ದರ್ಶನ ಮಾಡಿಸುತ್ತೇನೆ ಎನ್ನುವ ಗುರುಗಳ ಮಾತುಗಳನ್ನು ಕೇಳಿದ ಹುಡುಗನಿಗೆ ರಾತ್ರಿಯೆಲ್ಲಾ ನಿದ್ರೆಯೇ ಹತ್ತದೆ ಬೆಳಗಾದ ಕೂಡಲೇ ದೇವರನ್ನು ಕಾಣಲು ಗುರುಗಳಲ್ಲಿಗೆ ಓಡಿ ಬರುತ್ತಾನೆ. ಬಂದ ಹುಡುಗನಿಗೆ ಒಂದು ರೂಮ್‌ನ್ನು ತೋರಿಸಿ ಅಲ್ಲಿ ಹೋಗಿ ನೋಡು ದೇವರ ದರ್ಶನವಾಗುತ್ತದೆ ಎಂದಾಗ ಹುಡುಗ ಹೋಗಿ ನೋಡಿಕೊಂಡು ಪುನಃ ಬಂದು ದೇವರನ್ನು ನೋಡಿದ ಸಂತೋಷದಲ್ಲಿರುತ್ತಾನೆ. ಆದರೆ ನಾರಾಯಣ ಗುರುಗಳ ಆ ರೂಂನಲ್ಲಿ ದೊಡ್ಡ ಕನ್ನಡಿಯನ್ನು ಅಂಟಿಸಿದ್ದು ಅದರಲ್ಲಿ ತನ್ನ ಪ್ರತಿಬಿಂಬ ನೋಡಿದ ಹುಡುಗ ತನ್ನಲ್ಲಿಯೂ ದೇವರಿದ್ದಾನೆ ಎನ್ನುವ ಅಂಶವನ್ನು ಅರ್ಥೈಸಿಕೊಂಡಿದ್ದನು. ಈ ರೀತಿಯಾಗಿ ತುಂಟ ಹುಡುಗನಿಗೆ ದರ್ಪಣದ ಮೂಲಕ ಪ್ರತಿಯೊರ್ವರ ಹೃದಯದಲ್ಲಿಯೂ ದೇವರಿದ್ದಾನೆ ಎನ್ನುವ ಅಂಶ ಬೋಧಿಸಿದ್ದರು. ಪ್ರತಿಯೊರ್ವರು ತನ್ನ ಅಂತರಾತ್ಮವನ್ನು ಪ್ರಶ್ನಿಸಿಕೊಂಡಾಗ ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸಬಹುದು. ಇದಕ್ಕೆ ಏನಂತಿರಾ....?
ಬಾಕ್ಸ್:
ಸಂಘಟನೆಯ ಮೂಲಕ ಕ್ರಾಂತಿ ಹಾಗೂ ಶಿಕ್ಷಣದ ಮೂಲಕ ಜಾಗೃತಿ ಎನ್ನುವ ಅಂಶ ಸಾರಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕ ಶಕ್ತಿಯಿದ್ದವರು ಪ್ರತಿಭೆ ಇರುವ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉತ್ತಮ ಶಿಕ್ಷಣವನ್ನು ನೀಡಿದಾಗ ಕ್ರಾಂತಿಕಾರಿ ಬದಲಾವಣೆ ಸಾಧ್ಯ.
ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ, ಬಂದರು, ಒಳನಾಡು ಜಲಸಾರಿಗೆ ಸಚಿವ.

Monday 3 September 2012


ಕಮಲದಂತೆ ಮೃದು, ಶಿಲೆಯಂತೆ ಕಠೋರ ಕಮಲಶಿಲೆಯಾಗಿ ಭಕ್ತರ ಮನದಲ್ಲಿ ನೆಲೆನಿಂತು ಇಷ್ಟಾರ್ಥವ ನೆರವೆರಿಸುವ ಬ್ರಾಹ್ಮೀ ದುರ್ಗಾಪರಮೇಶ್ವರಿ: 
 ಸಕಲರನ್ನು ಪಾಲಿಸುವ ಜಗನ್ಮಾತೆ ಶ್ರೀ ಬ್ರಾಹ್ಮೀ ದುರ್ಗೇಯ ಮಹಿಮೆ-ವಿಲಾಸಗಳನ್ನು ಸದ್ಬಕ್ತರಿಗೆ ತಲುಪಿಸುವ ಈ ಲೇಖನಕ್ಕೆ ಶ್ರೀ ದೇವಿಯ ಕೃಪೆ ಹಾಗೂ ಪ್ರೇರಣೆ ಕೂಡಿಕೊಂಡಾಗ ಪ್ರತಿಯೊರ್ವರಲ್ಲೂ ಸತ್ಯದ ಸಂಗತಿಯ ಅರಿವಾಗುತ್ತದೆ. ಹಾಗೆಯೇ ದೇವಿಯ ಬಗ್ಗೆ ಭಯ-ಭಕ್ತಿ ಭಾವಗಳು ಮೈಗೊಡಿಕೊಳ್ಳುತ್ತದೆ.
ಶ್ರೀ ಬ್ರಾಹ್ಮೀ ದುರ್ಗೆಯು ಕಮಲಶಿಲೆಯಲ್ಲಿ ಉದಿಸಿ ಶ್ರೀ ಬ್ರಾಹ್ಮೀ ದುರ್ಗೆಯಾಗಿ ಕುಬ್ಜಾ ನದಿ ತೀರದಲ್ಲಿ ನೆಲೆಸಿ ಆಶ್ರಯವನ್ನು ಬೇಡಿ ಬರುವ ಭಕ್ತರ ಪಾಲಿಗೆ ಭಗವತಿಯಾಗಿ, ಸರ್ವರನ್ನು ಪೊರೆಯುವ ಭಾಗ್ಯದಾಯಿನಿ ಆಗಿ ಇಲ್ಲಿನ ಜನರ ತನು-ಮನದಲ್ಲಿ ನೆಲೆಯಾಗಿ ನಿಂತಿದ್ದಾಳೆ.
ಶ್ರೀ ದೇವಿ ಬ್ರಾಹ್ಮೀ ದುರ್ಗೆಯು ಈ ಭಾಗದ ಜನರ ಮನೆದೇವತೆಯಾಗಿದ್ದಾಳೆ ಎಂದರೆ ತಪ್ಪಿಲ್ಲ. ಮಾತೆಯು ಈ ಸ್ಥಳದ ಜನರನ್ನು ಹೆತ್ತ-ತಾಯಿಯಂತೆ ಪೊರೆಯುತ್ತಾ ನೆಲೆಯಾಗಿದ್ದಾಳೆ. ದೇವಿಯು ಕೇವಲ ಪೊರೆಯುವ ಕಾರ್ಯವನ್ನಲ್ಲದೆ ಕಾರಣೀಕವಾಗಿಯೂ ಅನ್ನಪೂರ್ಣೇಶ್ವರಿ ಹಾಗೂ ಶಾಂತಿದಾಯಿನಿ ಆಗಿ ನಿಂತಿದ್ದಾಳೆ. ಜಗನ್ಮಾತೆ ಬ್ರಾಹ್ಮಿದುರ್ಗೆ ಇಲ್ಲಿನ ವನದುರ್ಗೆಯಾಗಿದ್ದಾಳೆ. ವನದ ಹಸಿರಿನಲ್ಲಿ ನೆಲೆಸಿದ ದೇವಿಯ ಕ್ಷೇತ್ರ ಸಂದರ್ಶಿಸುವ ಭಕ್ತರಿಗೆ ರುದ್ರ-ರಮಣೀಯ ಪ್ರಕೃತಿಯ ಸೊಬಗು ಕಣ್ಣಿಗೆ ಬಿದ್ದಾಗ ಮೈ ರೋಮಾಂಚನವಾಗುತ್ತದೆ. ಶ್ರೀ ದೇವಿಯನ್ನು, ಅವಳ ಅಲಂಕಾರ ಮತ್ತು ಮಹಾದೇವಿಯ ಮುಗ್ದ ಮಂದಸ್ಮಿತವಾದ ಮುದ್ದು ಮೊಗ ಎಷ್ಟು ಕಂಡರೂ ತೃಪ್ತಿಯೆ ಆಗಲಾರದಷ್ಟು ಅಮ್ಮನ ಮುಖಾರವಿಂದದಲ್ಲಿ ಅಷ್ಟೊಂದು ವರ್ಚಸ್ಸು ಹೊರ ಹೊಮ್ಮುತ್ತಿರುತ್ತದೆ.
ಕಮಲಶಿಲೆಯು ಉಡುಪಿ ಜಿಲ್ಲೆಯ ಕುಂದಾಪುರದಿಂದ ೩೫ ಕಿ.ಮೀ ದೂರದಲ್ಲಿದೆ. ಮಲೆನಾಡಿನ ಬೆಟ್ಟ ಗುಡ್ಡಗಳಿಂದ ಕೂಡಿದ ಹಸಿರು ಬನದ ಮಧ್ಯದಲ್ಲಿ ಸುಂದರ ದೇಗುಲವಿದೆ. ದೇವಳದ ಪಕ್ಕದಲ್ಲಿಯೇ ಕುಬ್ಜಾ  ನದಿಯು ಹರಿಯುತ್ತಿರುವುದರಿಂದ ವರ್ಷಕ್ಕೊಮ್ಮೆ  ನದಿ ಉಕ್ಕಿ ಹರಿದು ದೇಗುಲದ ಒಳಗೆ ಪ್ರವೇಶಿಸಿ ಅಮ್ಮನ ಮೂರ್ತಿಯನ್ನು ಪಾವನೆಯನ್ನಾಗಿಸುತ್ತಾಳೆ. ಕಮಲಶಿಲೆ ಪ್ರಸಿದ್ದವಾದ ಶ್ರೀ ಬ್ರಾಹ್ಮಿ ದುರ್ಗಾಪರೇಶ್ವರೀ ಎನ್ನುವ ನಾಮಾಂಕಿತದೊಂದಿಗೆ  ದೇವಿಯು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ರೂಪವನ್ನೊಳಗೊಂಡ ಲಿಂಗರೂಪಿಣಿಯಾಗಿದ್ದು ಪಾತಾಳದಿಂದ ಸ್ವಯಂ ಭೂಲಿಂಗವಾಗಿ ಉದ್ಭವಿಸಿದ್ದಾಳೆ.
ದೇವಳದ ಕುರಿತು:
೧೯೬೮ ರಲ್ಲಿ ಕುಬ್ಜಾ ನದಿಯಲ್ಲಿ ಪ್ರವಾಹವುಂಟಾಗಿ ದೇವಸ್ಥಾನದ ಗೋಡೆ ಕುಸಿದು ದೇವಸ್ಥಾನ ೨೦ ಅಡಿಯಷ್ಟು ನೀರಿನಲ್ಲಿ ಮುಳುಗಿತ್ತು. ೧೯೯೦ರಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲಾಗಿ, ಹಲಸು ಮತ್ತು ಬೋಗಿ ಮರವನ್ನು ಉಪಯೋಗಿಸಲಾಗಿದೆ. ಮುಸಲ್ಮಾನ ರಾಜನಾದ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಇವರ ಕಾಲದಿಂದಲೂ ಸಲಾಮ್ ಪೂಜೆ ಎನ್ನುವ ವಿಶೇಷ ಪೂಜೆ ನಡೆಯುತ್ತಿದ್ದು ಅದು ಇಂದಿಗೂ ಸಹ ಸಾಯಂಕಾಲದ ವೇಳೆ ನಡೆಯುತ್ತಿದೆ. ವರದಾಪುರದ ಶ್ರೀ ಶ್ರೀಧರ ಸ್ವಾಮೀ ಮಹಾರಾಜ್ ೧೯೫೨ ರಲ್ಲಿ ನೀಡಿದ ಸೂಚನೆಯ ಮೇರೆಗೆ ಭಕ್ತಾದಿಗಳು (ಗಂಡಸರು) ಶರ್ಟು ಮತ್ತು ಬನಿಯನ್ ತೆಗೆದು ದೇವಸ್ಥಾನದ ಒಳಗಿನ ಆವರಣ ಪ್ರವೇಶಿಸಬೇಕು. ಹೆಂಗಸರು ಸೀರೆ ಅಥವಾ ಚೂಡಿದಾರ್ ಧರಿಸಿಯೇ ದೇವಸ್ಥಾನ ಪ್ರವೇಶಿಸಬೇಕು.
ಪುರಾಣ ಪರಿಚಯ:
ಶ್ರೀ ದೇವಿಯು ಕಮಲಶಿಲೆಯ ಕುಬ್ಜಾ ನದಿತೀರದಲ್ಲಿ ಬಂದು ನೆಲೆಸಿ ಬ್ರಾಹ್ಮಿ ದುರ್ಗೆಯಾದಳು ಎನ್ನುವುದನ್ನು ನಾವು ಪುರಾಣದಿಂದ ತಿಳಿಯಬಹುದು. ಶ್ರೀ ದೇವಿಯ ಉದ್ಬವ ಲಿಂಗವು ಕಮಲವನ್ನು ಹೋಲುವ ಹಾಗೂ ಅಷ್ಟೇ ನುಣುಪಾದ ಶಿಲೆಯಾದ್ದರಿಂದ ಕಮಲಶಿಲೆ ಎನ್ನುವ ನಾಮದಿಂದ ಖ್ಯಾತಿ ಪಡೆದಿದೆ. ಹೆಸರೆ ಸೂಚಿಸುವಂತೆ ಕಮಲವು ಮೃದುತ್ವವನ್ನು ಹಾಗೂ ಶಿಲೆಯು ಕಠಿಣತ್ವ ಪ್ರತೀಕ ಎಂದು ಅರ್ಥೈಸಿದರೂ ಇಲ್ಲಿ ಕಠಿಣ ಹಾಗೂ ಮೃದುತ್ವಗಳ ಐಕ್ಯತೆಯಿಂದಾಗಿ ಏಕತೆ ಮತ್ತು ಸಮಾನತೆಯನ್ನು ಬಿಂಬಿಸುತ್ತದೆ. ಕಮಲದಂತೆ ಮೃದುಭಾಷಿನಿಯಾಗಿ ಶಿಷ್ಟಪಾಲನೆಯಾಗಿಯೂ, ಶಿಲೆಯಂತೆ ಕಠೋರವಾಗಿ ದುಷ್ಟರ ನಿಗ್ರಹ ಕಾರ್ಯ ಮಾಡುವ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ಭಕ್ತರ ಮನದಲ್ಲಿ ನೆಲೆಯಾಗಿದ್ದಾಳೆ.
ಪ್ರಾಕೃತಿಕವಾಗಿ ವಿಶಿಷ್ಟ  ಸ್ಥಾನ ಪಡೆದು ಶ್ರೀ ದೇವಿಯು ಪೃಕೃತಿ ಪ್ರಿಯಳಾಗಿ ಈ ಸ್ಥಳದಲ್ಲಿ ಹುಟ್ಟಿ ಬಂದಿದ್ದಾಳೆ. ಸುತ್ತಲೂ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಜಾನದಿ ಮತ್ತು ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಲ್ಲಿ ಲಿಂಗರೂಪಿಯಾಗಿ ಹುಟ್ಟಿದ್ದಾಳೆ. ತಾಯಿ ಹುಟ್ಟಿದ್ದು ನೀರಿನಲ್ಲಿ,, ರೂಪ ಕಲ್ಲು, ಆಭರಣ ಮಣ್ಣು(ಮೃತ್ತಿಕೆ) ಅದ್ಭುತ ಶಕ್ತಿವಂತೆಯಾಗೆ ಲೋಕಮಾನ್ಯಳಾಗಿದ್ದಾಳೆ.
ಕಮಲಶಿಲೆಯ ವಿಶೇಷತೆ:
೧೫ ದಿನಗಳಿಗೊಮ್ಮೆ ಏಕಾದಶಿಯ ರಾತ್ರಿ ಹದಗೊಳಿಸಿದ ಕೆಂಪುಮಣ್ಣನ್ನು ಲಿಂಗಕ್ಕೆ ಲೇಪಿಸಲಾಗುತ್ತದೆ. ಇದೇ ಮೃತ್ತಿಕಾಷ್ಟಬಂದ. ಬೇರಾವುದೇ ರೀತಿಯ ಅಷ್ಟಬಂದ ಇರುವುದಿಲ್ಲ. ಏಕಾದಶಿಯಂದು ಆ ಮಣ್ಣನ್ನು ತೆಗೆದು ಚಿಕ್ಕ ಉಂಡೆಯಾಗಿ ಮಾಡಿ ಮೃತ್ತಿಕಾ ಪ್ರಸಾದ(ಮೂಲ) ವಾಗಿ ಕೊಡಲಾಗುತ್ತದೆ. ೧೫ ದಿನಗಳಿಂದ ಅಭಿಷೇಕ, ಅರ್ಚನೆ, ಪೂಜಾದಿಗಳು ನಡೆದು ನೀಡುವ ಈ ಪ್ರಸಾದವನ್ನು ತಮ್ಮ ಮನೆಗಳಲ್ಲಿ ತೀರ್ಥವಾಗಿ, ಗಂಧವಾಗಿ(ನೀರಿನಲ್ಲಿ ಕರಗಿಸಿ) ಉಪಯೋಗಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.
ಬ್ರಾಹ್ಮೀ ಶಕ್ತಿಯ ಸಂಕೇತ, ಭಕ್ತಿಯ ಉಗಮ ಪರಮೇಶ್ವರನ ಮಡದಿ ಆದಿಶಕ್ತಿ ಪರಮೇಶ್ವರೀಯಾಗಿ ಜಗತ್ತಿಗೆ ಬಂದ ದುರ್ಗೆ, ಕಷ್ಟಗಳನ್ನು ಪರಿಹರಿಸಿ ದುರ್ಗೆಯಾಗಿ, ಕ್ರೂರಾಕ್ಷನನ್ನು ವಧಿಸಿದ ಬ್ರಾಹ್ಮೀಣಿಯು ಇದೇ ಲಿಂಗದಲ್ಲಿ ಐಕ್ಯವಾಗಿ ಬ್ರಾಹ್ಮಿಯಾಗಿ, ಹೀಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀಯಾಗಿ ಕಮಲಶಿಲೆಯಲ್ಲಿ ನೆಲೆನಿಂತು, ಮುಂದೆ ಇದುವೇ ಜಗತ್ತಿನ ಏಕೈಕ ಬ್ರಾಹ್ಮೀ ಕ್ಷೇತ್ರವಾಗಿ ಮೂಡಿಬಂದಿದೆ.
ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಕಮಲಶಿಲೆಯ ಮಹಿಮೆ ವರ್ಣಿಸಲಾಗಿದೆ. ಕುಬ್ಜಾ ತೀರದಲ್ಲಿ ಈಗ ದೇವಾಲಯವಿರುವ ಸ್ಥಳವು ಮಹಾ ತಪಸ್ವಿಗಳಾದ ರೈಕ್ವಮುನಿಗಳ ಆಶ್ರಮವಾಗಿತ್ತು. ಗೌರಿ ಶಕ್ತಿಯಿಂದ ಕೂಡಿದ ಬ್ರಾಹ್ಮೀಯು ಖರಾಸುರ, ರಟ್ಟಾಸುರರನ್ನು ವಧಿಸಿ ಕಮಲಶಿಲೆಗೆ ಬಂದ ರೈಕ್ವ ಮಹಾಮುನಿಗೆ ವರಪ್ರಸಾದ ನೀಡಿ ಶಿವನಾಜ್ಞೆಯಂತೆ ಅದೇ ಲಿಂಗದಲ್ಲಿ ಐಕ್ಯಳಾಗಿ ಬ್ರಾಹ್ಮಿ ದುರ್ಗಾಪರಮೇಶ್ವರೀ ಎನ್ನುವ ಅಭಿನಾಮದೇಯದಿಂದ ಭಕ್ತರ ಭಕ್ತಿಗೆ ಫಲಪ್ರದೆಯಾಗಿದ್ದಾಳೆ.
ಪುರಾಣದಲ್ಲಿ ಕೈಲಾಸದ ಶಿವ ಸಾನಿಧ್ಯದಲ್ಲಿ ಪಿಂಗಳೆ ಎಂಬ ನರ್ತಕಿಯು ಪ್ರತಿದಿನ ನರ್ತನ ಸೇವೆ ಮಾಡುತ್ತಿದ್ದಳು, ಒಂದು ದಿನ ಸಂಜೆ ಶಿವ-ಪಾರ್ವತಿಯರ ಸಮ್ಮುಖದಲ್ಲಿ ತನ್ನ ರೂಪ, ಮದದಿಂದ ಗರ್ಭಿತಳಾಗಿ ನರ್ತನ ಮಾಡುವುದಿಲ್ಲ ಎಂದಳು. ಆಗ ಕೋಪಗೊಂಡ ಪಾರ್ವತಿಯು ಆಕೆಗೆ ಅಂಕು-ಡೊಂಕಿನ ಗೂನುಬೆನ್ನಿನ ಕುಬ್ಜೆಯಾಗು ಎಂದು ಶಾಪ ನೀಡುತ್ತಾಳೆ. ಆದಿಶಕ್ತಿಯ ಶಾಪದಿಂದಾಗಿ ಪಿಂಗಳೆಯು ತತ್ ಕ್ಷಣವೆ ಕುಬ್ಜೆಯಾಗುತ್ತಾಳೆ. ತನ್ನ ತಪ್ಪಿನ ಅರಿವಾಗಿ ಆದಿಶಕ್ತಿಯಲ್ಲಿ ಪರಿ-ಪರಿಯಾಗಿ ವಿನಂತಿ ಮಾಡಿದಾಗ ಶಾಂತಳಾದ ಪಾರ್ವತಿಯು ಪಿಂಗಳಾ ನಾನು ಖರರಟ್ಟಾಸುರರ ವಧಾರ್ಥವಾಗಿ ಶ್ರಾವಣ ಕೃಷ್ಣನವಮಿ ಶುಕ್ರವಾರದಂದು ಮಹಾ ಪುಣ್ಯಕರವಾದ ರೈಕ್ವಶ್ರಾಮದಲ್ಲಿ ಪಾತಾಳದಿಂದ ಲಿಂಗರೂಪದಲ್ಲಿ ಶೋಭಿಸುತ್ತೇನೆ. ಅದು ಮುಂದೆ ದೊಡ್ಡ ಕ್ಷೇತ್ರ ಕಮಲಶಿಲೆಯಾಗಿ ಪ್ರಸಿದ್ಧಿಗೊಳ್ಳುತ್ತದೆ. ನೀನು ಆ ಸ್ಥಳಕ್ಕೆ ಹೋಗಿ ಸುಪಾರ್ಶ್ವ ಗುಹಾದ್ವಾರದಿಂದ ಹೊರಡುವ ನಾಗತೀರ್ಥದ ಬಳಿ ಆಶ್ರಯ ರಚಿಸಿಕೊಂಡು ತನ್ನ ಅನುಗ್ರಹಕ್ಕಾಗಿ ತಪಸ್ಸನ್ನು ಮಾಡುತ್ತಿರು ಎಂದು ಅಭಯವನ್ನಿಡುತ್ತಾಳೆ.
ಪಾವನ ಪುನೀತೆ ಕುಬ್ಜೆ:
ಭಕ್ತಾಧಿಗಳು ಈ ಪುಣ್ಯ ನದಿಯಲ್ಲಿ ಸ್ನಾನಮಾಡಿ ಶ್ರೀ ಬ್ರಾಹ್ಮಿದೇವಿಯನ್ನು ಆರಾಧಿಸಿ ಧನ್ಯರಾಗುತ್ತಾರೆ. ಕುಬ್ಜೆಯು ಪ್ರತಿ ಮಳೆಗಾಲದಲ್ಲಿ ಮಹಾದ್ವಾರದ ಮೂಲಕ ಒಳಪ್ರವೇಶಿಸಿ ಶ್ರೀ ದೇವಿಯ ಲಿಂಗಕ್ಕೆ ಸ್ವಯಂ ಸ್ನಾನ ಮಾಡಿಸುತ್ತಾಳೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಬಂದು ಅತ್ಯಂತ ಪುಣ್ಯಕರವಾದ ದೇವಿಗೆ ಸ್ನಾನ ಮಾಡಿಸಿದ ನೀರಿನಲ್ಲಿ ಮಿಂದು ಭಾವ ಪರವಶರಾಗುತ್ತದೆ.
ಗರುಡನ ಭಯದಿಂದ ಆದಿಶೇಷನು ಕಮಲಶಿಲೆಗೆ ಬಂದು ಸುಪಾರ್ಶ್ವ ಗುಹೆಯಲ್ಲಿ ಬ್ರಾಹ್ಮೀಯನ್ನು ಕುರಿತು ಕಠಿಣ ತಪಸ್ಸನ್ನು ಮಾಡುತ್ತಾನೆ. ತಪಕ್ಕೊಲಿದ ದೇವಿಯು ನೀನು ವಿಷ್ಣುವಿಗೆ ಹಾಸಿಗೆಯಾಗು ಉಳಿದ ಸರ್ಪಗಳು ನನ್ನ ಆಶ್ರಮದ ಗುಹೆಯಲ್ಲಿರಲಿ. ಗರುಡನಿಂದ ಭಯವಿಲ್ಲ ಎಂದು ಅಪ್ಪಣೆ ನೀಡುತ್ತಾಳೆ. ನಾಗರಾಜನ ತಪಸ್ಸಿನ ಫಲದಿಂದ ಹೊರಟ ತೀರ್ಥವು ನಾಗತೀರ್ಥವಾಗಿದ್ದು, ಅದರಲ್ಲಿ ಮಿಂದವರಿಗೆ ಸರ್ಪಬಾದೆ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿಯಿದೆ. ಇದಕ್ಕೆ ಸಾಕ್ಷಿಯಾಗಿ ದೇವಾಲಯದಲ್ಲಿ ಬೃಹತ್ ಹುತ್ತ ವೀಕ್ಷಿಸಬಹುದಾಗಿದೆ.
ಸುಪಾರ್ಶ್ವ ಗುಹೆ:
ಶ್ರೀ ದೇವಿಯ ವಾಹನ ವ್ಯಾಘ್ರ ಇಲ್ಲಿ ತಪ್ಪು-ಒಪ್ಪುಗಳಾದಲ್ಲಿ ತಾನೂ ತಾಯಿಯ ಆಜ್ಞಾಪಾಲಕನಂತೆ ಇಲ್ಲಿನ ಜನರಲ್ಲಿ ಅರಿವನ್ನು ಮೂಡಿಸುತ್ತದೆ ಎನ್ನುವುದನ್ನು ಇಲ್ಲಿನ ಜನರಿಂದ ತಿಳಿದು ಬರುತ್ತದೆ. ಹಿಂದೆ ಈ ಹುಲಿಯೆ ಮನೆ-ಮನೆಯ ಮುಂದೆ ಬಂದು ಕೂಗುವ ಮೂಲಕ ಶ್ರೀ ದೇವಿಯ ಉತ್ಸವ ಹಾಗೂ ಇನ್ನಿತರ ಕಾರ್ಯಗಳಿಗೆ ಆಮಂತ್ರಣ ನೀಡುತ್ತಿತ್ತು. ಸುಪಾರ್ಶ್ವ ಗುಹೆಯಲ್ಲಿ ಶ್ರೀ ದೇವಿಯ ಕಾಳಿ, ಲಕ್ಷ್ಮೀ ಮತ್ತು ಸರಸ್ವತಿಯರ ಲಿಂಗಗಳಿವೆ. ದೇವಿಯ ವಾಹನವಾದ ಹುಲಿಯು ಇಲ್ಲಿಯೇ ವಾಸವಾಗಿದೆ. ಈ ಗುಹೆಯು ಶ್ರೀ ಕ್ಷೇತ್ರದಿಂದ ೨ ಕಿ.ಮೀ ದೂರದ ಹಳ್ಳಿಹೊಳೆ ಮಾರ್ಗದಲ್ಲಿ ದುರ್ಗಮ ಅರಣ್ಯದ ಮಧ್ಯದಲ್ಲಿ ತಪಸ್ಸಿಗೆ, ಧ್ಯಾನಕ್ಕೆ ಯೋಗ್ಯವಾದ ಪ್ರಶಾಂತ ಸ್ಥಳದಲ್ಲಿ ಕಂಡು ಬರುತ್ತದೆ. ದೇವತೆಗಳಿಂದ ನಿರ್ಮಿಸಲ್ವಟ್ಟ ಗುಹೆಯನ್ನು ಹಿಂದೆ ಕೃತಯುಗದಲ್ಲಿ ಸುಪಾರ್ಶ್ವನೆಂಬ ರಾಜನು ರಾಜಕೀಯದಲ್ಲಿ ಜಿಗುಪ್ಸೆ ಹೊಂದಿ ತಪಸ್ಸಿಗೆ ಯೋಗ್ಯ ಸ್ಥಳ ಹುಡುಕುತ್ತಾ ಹೋಗಲು ಶಿವನ ಪ್ರೇರಣೆಯಂತೆ ಇಲ್ಲಿಗೆ ಬಂದು ಈ ಗುಹೆಯಲ್ಲಿ ತಪಸ್ಸಾಸಕ್ತನಾದ. ಆತನ ತಪಕ್ಕೆ ವಿಘ್ನ ಬಾರದಂತೆ ಶಿವನು ಭೈರವನಿಗೆ ಗುಹೆಯ ದ್ವಾರದಲ್ಲಿ ನಿಲ್ಲುವಂತೆ ಸೂಚಿಸುತ್ತಾನೆ. ಹೀಗೆ ರಾಜನು ಅಲ್ಲಿ ತಪಗೈದು ಮೋಕ್ಷ ಹೊಂದುತ್ತಾನೆ. ಮುಂದೆ ಆ ಗುಹೆಗೆ ಅವನ ಹೆಸರು ಅನ್ವರ್ಥವಾಗುತ್ತದೆ. ಗುಹೆಯ ದ್ವಾರದಲ್ಲಿ ಭೈರವನ ಮೂರ್ತಿಯನ್ನು ಈಗಲೂ ಕಾಣಬಹುದಾಗಿದೆ. ಮೆಟ್ಟಿಲಿಳಿದ ಕೂಡಲೆ ಅಕ್ಕ-ತಂಗಿಯರ ಜೋಡು ಕೆರೆ ಮತ್ತು ಮುಂದೆ ನಾಗಾಲಯ ಹಾಗೂ ನಾಗತೀರ್ಥ ಗೋಚರಿಸುತ್ತದೆ. ಈ ಕ್ಷೇತ್ರದಲ್ಲಿ ಜಾನುವಾರುಗಳಿಗೆ ರೋಗ-ರುಜಿನ ಬಂದಾಗ, ಬಂಜೆಯಾದಾಗ, ಇತರ ಕೌಟುಂಬಿಕ ತಾಪತ್ರಯಗಳಿಗೆ ಹರಕೆ ರೂಪದಲ್ಲಿ ಗೋವುಗಳನ್ನು ಶ್ರೀ ದೇವಿಗೆ ಬಿಡುತ್ತಾರೆ. ಇಂತಹ ಲಕ್ಷಾಂತರ ಗೋವುಗಳು ಭಕ್ತರ ಮನೆಯಲ್ಲಿದ್ದು ಹಾಲು, ತುಪ್ಪವನ್ನು ದೇವಿಗೆ ತಂದೊಪ್ಪಿಸುತ್ತಿರುವುದು ಶ್ರೀಕ್ಷೇತ್ರದ ವಿಶೇಷತೆಯಾಗಿದೆ. ಅದೇ ರೀತಿ ಶ್ರೀಕ್ಷೇತ್ರದಿಂದ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದಶವತಾರ ಯಕ್ಷಗಾನ ಮಂಡಳಿ ಕೂಡಾ ಇದ್ದು ತನ್ನ ಭಕ್ತರಿಂದ ಬೆಳಕಿನ ಸೇವೆಯನ್ನು ಪಡೆಯುತ್ತಿದ್ದಾಳೆ.
ಶ್ರೀ ವೇವಿಯ ಪರಿವಾರ ದೇವರಾಗಿ ಶ್ರೀ ವೀರಭದ್ರ, ಮಹಾಗಣಪತಿ, ಸುಬ್ರಹ್ಮಣ್ಯ, ಶಿವ, ವಿಷ್ಣು, ಆಂಜನೇಯ, ನವಗ್ರಹಗಳು ಇವೆ. ಹಿಂದೆ ವೀರಭದ್ರನ ತೀಕ್ಷ್ಣ ದೃಷ್ಟಿಯಿಂದ ವಾಯುವ್ಯ ಭಾಗದ ಮರದ ಬಾಗಿಲು ಉರಿದು ಹೋಗಿದ್ದು, ಆ ಕಾರಣದಿಂದ ಅಲ್ಲಿ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಯುತ್ತಿದೆ. ಶ್ರೀ ಕ್ಷೇತ್ರದಲ್ಲಿ ವಿಜಯಾಗಮ ಪದ್ದತಿಯಂತೆ ಪೂಜೆ-ಬಲಿಗಳು ನಡೆಯುತ್ತದೆ. ಪ್ರತಿ ದಿನ ಉಷಾಕಾಲ, ಪ್ರಾತಃಕಾಲ, ಮದ್ಯಾಹ್ನ, ಸಂಧ್ಯಾಕಾಲ, ರಾತ್ರಿ ಹೀಗೆ ಐದು ಪೂಜೆಗಳು ತ್ರಿಕಾಲ ಬಲಿಗಳು ನಡೆಯುತ್ತದೆ. ಬ್ರಾಹ್ಮೀ ಶಕ್ತಿ ಸ್ವರೂಪಿಣಿಯಾದ ತ್ರೀಮೂರ್ತಿಸ್ವರೂಪಿಣಿ ಶಕ್ತಿಯೂ ಆದ ದೇವಿಯನ್ನು ಕಂಡು ಪ್ರತಿಯೊರ್ವರೂ ಕೃತಾರ್ಥರಾಗಬೇಕು.
ದಾರಿಯ ವಿವರ : ಕುಂದಾಪುರದಿಂದ ೩೫ಕಿ.ಮೀ ದೂರದಲ್ಲಿರುವ ಶ್ರೀ ಕ್ಷೇತ್ರ ಕಮಲಶಿಲೆ ದೇವಾಲಯವಿದೆ. ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಿದ್ದಾಪುರದಿಂದ ೬ ಕಿ.ಮೀ ದೂರದಲ್ಲಿ ಅಮ್ಮನವರ ಸಾನ್ನಿಧ್ಯವಿದೆ.