Tuesday 15 May 2012












ಅಭಾವಿಪನ ವತಿಯಿಂದ ಸಾಕಾರಗೊಂಡ ಯುವವಿಜ್ಞಾನಿಗಳ ಪ್ರತಿಭಾ ಪ್ರದರ್ಶನ ಸೃಷ್ಟಿ-೨೦೧೨
-ಕೆ.ಎಸ್.ಶೆಟ್ಟಿ
 ಅತೀ ಕಡಿಮೆ ವೆಚ್ಚದಲ್ಲಿ ವಿನೂತನ ಮಾದರಿ, ರೈತಸ್ನೇಹಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಸೌರಶಕ್ತಿ ಮೂಲಕ ನವೀಕರಿಸಬಹುದಾದ ಇಂಧನ ಹಾಗೂ ಕೈಗಾರಿಕೆಗಳ ಅನುಪಯೋಗಿ ವಸ್ತುಗಳ ಪುನರ್ಬಳಕೆ ಮಾಡುವ ಸಾಧನಗಳನ್ನು ಪ್ರದರ್ಶಿಸುವ ಯುವವಿಜ್ಞಾನಿಗಳ  ಸೃಜನಶೀಲತೆ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವತಿಯಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿರುವ `ಸೃಷ್ಟಿ'ಯಲ್ಲಿ ಅನಾವರಣಗೊಂಡಿದೆ.
ಪ್ರಸಕ್ತ ವರ್ಷ ರಾಜ್ಯದ ವಿವಿಧ ತಾಂತ್ರಿಕ ಸಂಸ್ಥೆಗಳ ಒಟ್ಟು ೧೪೦೦ ವಿದ್ಯಾರ್ಥಿಗಳ ಪ್ರತಿಭೆಯಲ್ಲಿ ರೂಪುಗೊಂಡ ೨೬೦ ಮಾದರಿಗಳು ರೂಪುಗೊಂಡಿವೆ.  ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಯುದ್ದಭೂಮಿಗೆ ಸಾಧನವಾಗಬಲ್ಲ ಸಾಧನಗಳು ಪ್ರದರ್ಶನಲ್ಲಿವೆ. ಕರಾವಳಿ ಭಾಗದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ನಿರ್ಮಿಸಿದ ಪ್ರಾಜೆಕ್ಟ್‌ಗಳಾದರೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಸಹಾಯವಾಗಬಲ್ಲ ಅಪರೂಪದ ಸಾಧನಗಳನ್ನು ಆವಿಷ್ಕರಿಸಿದ್ದಾರೆ. ಬೆಂಗಳೂರಿನ ವಿದ್ಯಾರ್ಥಿಗಳು ವಾಹನ ತಂತ್ರಜ್ಞಾನಕ್ಕೆ ಸಹಾಯಕವಾಗಬಲ್ಲ ಆವಿಷ್ಕಾರದಲ್ಲಿ ಸಾಧನೆ ಮಾಡಿದ್ದಾರೆ. ಬಹುತೇಕ ಮಾದರಿಗಳು ಅತೀ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ರೂಪಿಸುವ ಪ್ರಾಜೆಕ್ಟ್‌ಗಳು, ಅಂತಿಮ ವರ್ಷವಲ್ಲದ ವಿದ್ಯಾರ್ಥಿಗಳು ಹವ್ಯಾಸಿಯಾಗಿ ನಿರ್ಮಿಸುವ ಪ್ರಾಜೆಕ್ಟ್‌ಗಳನ್ನು ಸೃಷ್ಟಿ-೨೦೧೨ರಲ್ಲಿ ಪ್ರದರ್ಶಿಸಿದ್ದಾರೆ. ೨೩ ಇಂಜಿನಿಯರಿಂಗ್ ಕಾಲೇಜ್‌ಗಳಿರುವ ಕರಾವಳಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಉತ್ತಮ ವೇದಿಕೆಯಾಗಿ ನಿರ್ಮಾಣವಾಗಿದೆ. ಕೇವಲ ಕರಾವಳಿಯ ವಿದ್ಯಾರ್ಥಿಗಳಲ್ಲದೆ ರಾಜ್ಯದ ವಿವಿದೆಡೆಯಿಂದ ಹಲವಾರು ವಿದ್ಯಾರ್ಥಿಗಳು ಮೂರು ದಿನಗಳ ಕಾಲ ತಮ್ಮ ಪ್ರತಿಭೆಯನ್ನು ಓರಣವಾಗಿ ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ಅದರ ಮಾಹಿತಿಯನ್ನು ನೀಡುತ್ತಾ ಸಾಧನೆ ಮಾಡಿದ ವಿಜಯದ ನಗೆ ಪ್ರತಿಯೊಬ್ಬರ ಮುಖದಲ್ಲಿ ಮೂಡಿದೆ.
ಬಾಗಲಕೋಟೆಯ ಬಿವಿಸಿ  ಸಂಸ್ಥೆಯ ವಿದ್ಯಾರ್ಥಿಗಳು ಅತೀ ಹೆಚ್ಚಿನ ಮಾದರಿ ನಿರ್ಮಿಸಿ ಕೌಶಲ್ಯ ಮೆರೆದಿದ್ದಾರೆ. `ರೋಬೋಸ್ಟ್ ಇ -ಅಗ್ರಿ, ಸೋಲಾರ್ ಚಾಲಿತ ಸುಗರ್‌ಕೇನ್ ಕಟ್ಟರ್, ಧಾನ್ಯಗಳ ಹುಡಿಮಾಡುವ `ಅಕ್ಷಯ ಪಾತ್ರೆ', ಕೈಗಾರಿಕಾ ಕ್ಷೇತ್ರಕ್ಕೆ ಉಪಯೋಗಿಸುವ `ಒಮ್ನಿ ವೈರಸ್ ವೆಹಿಕಲ್' ಗಳ ಸಹಿತ ೨೫ ಕ್ಕೂ ಅಧಿಕ ಮಾದರಿಗಳನ್ನು ನಿರ್ಮಿಸಿ ಸಾಧನೆಯಲ್ಲಿ ಮುಂದಿದ್ದಾರೆ. ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಈಗಾಗಲೇ ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದ್ದು ಇದೀಗ ತಮ್ಮ ಸಂಸ್ಥೆಯ ಹೆಸರನ್ನು `ಸೃಷ್ಟಿ'ಯೊಂದಿಗೆ ಗುರುತಿಸಿಕೊಂಡು ತಮ್ಮ ಸಂಸ್ಥೆಯ ಪರಿಚಯ ಮಾಡಿಕೊಳ್ಳುವಾಗ  `ಸೃಷ್ಟಿ'ಯನ್ನು ಬೊಟ್ಟು ಮಾಡುತ್ತಾರೆ ಎಂದು ಸಂಘಟಕರೊರ್ವರು ನೆನಪಿಸಿಕೊಳ್ಳುತ್ತಾರೆ.
ಬೆಂಗಳೂರಿನ ಬಿವಿಜಿ ಸಂಸ್ಥೆಯಿಂದ ಯಾವುದೇ ರಸ್ತೆಯಲ್ಲಿ ಚಲಿಸಬಲ್ಲ ವಾಹನ, ದಾವಣಗೆರೆಯ ಬಾಪೂಜಿ ಸಂಸ್ಥೆಯ ಕ್ಯಾನ್ಸರ್ ರೋಗಕ್ಕೆ ಔಷಧಿ ತಯಾರಿಸುವ ತಂತ್ರಜ್ಞಾನ, ಸಹ್ಯಾದ್ರಿ ಕಾಲೇಜಿನ ಸಿಂಗಲ್ ಆರ್ಮ್‌ಡ್ ವಾಲ್‌ಪೈಂಟಿಂಗ್ ರೋಬೋ, ದೇಶದ ಭದ್ರತೆಗೆ ಉಪಯೋಗಿಸುವ ನೀರಿನಲ್ಲಿ ಚಲಿಸಿ ರೇಡಿಯೇಷನ್ ಮೂಲಕ ಶತ್ರುಗಳ ನಾಶಗೊಳಿಸುವ ಸಾಧನ, ನಿಟ್ಟೆ ಎನ್‌ಎಂಎಎಂಐಟಿ ವಿದ್ಯಾರ್ಥಿಗಳಿಂದ ಸ್ಟೂಡೆಂಟ್ ಸ್ಯಾಟಲೈಟ್ ಪ್ರಾಜೆಕ್ಟ್ ನಿರ್ಮಿಸಿದ್ದು ಅದಕ್ಕೆ ಇಸ್ರೋ ಸಹಕಾರ ನೀಡಿದ್ದು ಇಂತಹ ನೂರಾರು ಪ್ರಾಜೆಕ್ಟ್‌ಗಳು ಪ್ರದರ್ಶನದಲ್ಲಿದ್ದವು.
ವಿದ್ಯಾರ್ಥಿಗಳು ರೇಷ್ಮೆ ನೂಲು ಬಿಚ್ಚಣಿಕೆಯಲ್ಲಿ ಸಾಯುವ ಹುಳುಗಳನ್ನು ಒಣಗಿಸಿ ಅವುಗಳಿಂದ ಬಯೋಡೀಸೆಲ್ ಕಂಡುಹಿಡಿಯುವ ಮೂಲಕ ರೇಷ್ಮೆ ಬೆಳೆಗಾರರಿಗೆ ಹೊಸ ದಿಶೆ ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಇವರ ಪ್ರಯತ್ನ ಸಫಲವಾಗಿ ಅಳವಡಿಸಿಕೊಂಡರೆ ರಾಜ್ಯಕ್ಕೆ ಸಾವಿರಾರು ಕೋಟಿ ರೂ. ಹರಿದುಬರಲಿದೆಯಂತೆ. ೪ ಕೆಜಿ ಸತ್ತ ಹುಳುವಿನಿಂದ ೧.೫ ಲೀ. ಇಂಧನ ತಯಾರಿಸುವ ತಂತ್ರಗಾರಿಕೆಯದು. ಮಾತ್ರವಲ್ಲ ಅದರ ಹುಡಿಯಿಂದ ನಾಯಿ ಬಿಸ್ಕತ್‌ನಂತಹ ಪ್ರಾಣಿಗಳ ಆಹಾರ ತಯಾರಿಸಲು ಸಹಕಾರಿ ಎಂಬುದು ಅವರ ಅಂಬೋಣ.
-ಬಾಗಲಕೋಟೆ ಬಸವೇಶ್ವರ ತಾಂತ್ರಿಕ ಕಾಲೇಜು ವಿದ್ಯಾರ್ಥಿ ರಾಜೇಶ್ ಗುರಾಣಿ ನಿರ್ಮಿಸಿದ `ಒಮ್ನಿ ವೈರಸ್ ವೆಹಿಕಲ್' ಕೈಗಾರಿಕೆಗಳಿಗೆ ಉಪಯೋಗವಾಗುವ ಯೋಜನೆಯಾಗಿದೆ. ಕೈಗಾರಿಕೆಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಸ್ತುಗಳನ್ನು ಬಹುಸರಳ, ಅತೀ ಕಡಿಮೆ ಅವದಿಯಲ್ಲಿ ಕೊಂಡೊಯ್ಯಲು ಬಹಳ ಜನರು ಹಾಗೂ ತುಂಬಾ ಸಮಯ ವ್ಯಯವಾಗುತ್ತದೆ. ಕೈಗಾರಿಕೆ ಕ್ಷೇತ್ರದಲ್ಲಿ ವಸ್ತುಗಳನ್ನು ಕೊಂಡೊಯ್ಯಲು ಅನುಕೂಲವಾಗುವಂಥ ಯೋಜನೆಯ ಮಾದರಿಯನ್ನು ಕೇವಲ ರೂ.೫ ಸಾವಿರಕ್ಕೆ ಮಾಡಿದ್ದಾರೆ. ಸಾಮಾನ್ಯವಾಗಿ ಈ ಮಾದರಿಯಲ್ಲಿ ೫ ರಿಂದ ೧೦ ಕೆ.ಜಿ.ಯಷ್ಟು ಭಾರದ ವಸ್ತುಗಳನ್ನು ಸುಲಭವಾಗಿ ಸಾಗಿಸಬಹುದು. ಇದು ಸಂಪೂರ್ಣವಾಗಿ ವಿದ್ಯುತ್‌ದ್ದಿಕರಣವಾಗಿದೆ. ಈ ಯೋಜನೆಯ ಅಭಿವೃದ್ಧಿ ಪಡಿಸಿದ್ದೆ ಆದರೆ ಕೈಗಾರಿಕೆಗಳಿಗೆ ಅನೂಕೂಲವಾಗಲಿದೆ. ತಂಡದಲ್ಲಿ ಮಹಾಂತೇಶ, ಜಹೀರ್, ಅಜಯ್‌ಕುಮಾರ್ ಸಹಕರಿಸಿದ್ದಾರೆ.
-ನಿಟ್ಟೆ ಎನ್‌ಎಂಎಎಂಐಟಿನ ವಿದ್ಯಾರ್ಥಿಗಳು ದೇಗುಲ ದರ್ಶನವೆನ್ನುವ ವೆಬ್‌ಸೈಟ್‌ನ್ನು ಮೇ  ತಿಂಗಳ ಅಂತ್ಯದಲ್ಲಿ ಚಾಲನೆಗೊಳಿಸಲಿದ್ದಾರೆ. ಸೃಷ್ಟಿ ೨೦೧೨ರಲ್ಲಿ ಇವರು ಡಮ್ಮಿ ವೆಬ್‌ಸೈಟ್ ತಯಾರಿಸಿ ಕರ್ನಾಟಕದಲ್ಲಿರುವ ಎಲ್ಲಾ ದೇವಸ್ಥಾನಗಳ ಮಾಹಿತಿ, ರೂಟ್ ಮ್ಯಾಪ್, ಆನ್‌ಲೈನ್ ಪಂಚಾಂಗ, ಭವಿಷ್ಯ, ಇ-ಕಾಣಿಕೆ, ದೇಗುಲ ಚಿತ್ರಗಳ ವೀಕ್ಷಣೆ ವಿವಿಧ ಸೇವೆಗಳ ಮಾಹಿತಿಯನ್ನು ಕಲೆಹಾಕಿದ್ದಾರೆ. ಮೊಬೈಲ್ ಎಸ್‌ಎಂಎಸ್ ಹಾಗೂ ಇಮೈಲ್‌ಗಳ  ಮಾಹಿತಿಯನ್ನು ನೀಡಲಾರುವುದು. bಛಿಜ್ಠ್ಝZbZoeZZ.Zಟ್ಝZbಛಿಠಿಛ್ಚಿeoಟ್ಝ್ಠಠಿಜಿಟ್ಞ.ಟಞ ಲಾಗ್‌ಇನ್ ಆದರೆ ರಾಜ್ಯದಲ್ಲಿರುವ ದೇಗುಲಗಳ ಪಟ್ಟಿ ದೊರೆಯುತ್ತದೆ. ಆವಿಷ್ಕಾರ ಮಾಡಿದ ವಿದ್ಯಾರ್ಥಿಗಳು ಅಕ್ಷಯ್, ಕಾರ್ತಿಕ್, ಹರ್ಷಿತಾ, ಅರ್ಚನಾ.
-ಎಸ್‌ಡಿಎಂಜೆಸಿಇಸಿಯ ವಿದ್ಯಾರ್ಥಿಗಳಾದ ಫಾರುಖ್ ಪಾಶಾ ತಂಡದವರು ರೈತರಿಗೆ ಅನುಕೂಲವಾಗುವಂಥ ಹೊಸ ಪ್ರಾಜೆಕ್ಟ್ ರೂಪುಗೊಳಿಸಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ರೈತರಿಗೆ ಬೆಳೆ ಬೆಳೆಯುವಾಗ ಮಣ್ಣಿಗೆ ಯಾವ ಗೊಬ್ಬರ ಎಷ್ಟು ಪ್ರಮಾಣದಲ್ಲಿ  ಬಳಸಬೇಕು ಎನ್ನುವ ಅಂಶ ತಿಳಿದಿರುವುದಿಲ್ಲ. ಅವರಿಗೆ ಬಳಸುವ ಪ್ರಮಾಣದ ಅರಿವಿಲ್ಲದೆ ಬಳಸುವುದರಿಂದ ಮಣ್ಣಿನ ಸಾರ ಕಡಿಮೆಯಾಗಿ ಬೆಳೆಯ ನಾಶವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಜೈನ್ ಕಾಲೇಜಿನ ವಿದ್ಯಾರ್ಥಿಗಳು ದೇಶದಲ್ಲಿರುವ ಕೃಷಿಕರ ಮಾಹಿತಿ ಸಂಗ್ರಹಿಸಿ ``ಸ್ಮಾರ್ಟ್ ಸೋಯಿಲ್ ಅನಾಲೈಜರ್" ತಂತ್ರಜ್ಞಾನ ಕಂಡುಹಿಡಿದಿದ್ದಾರೆ. ವಿವಿಧ ಬೆಳೆಗಳಿಗೆ ಬೇಕಾದ ರಸಗೊಬ್ಬರಗಳ ಬಳಕೆ ಯಾವ ಕಾಲಕ್ಕೆ ಯಾವ ರೀತಿ ಬಳಸಬೇಕು ಎನ್ನುವ ಅಂಶ ಸರ್ವೆ ಮಾಡಿ ಕ್ರೋಡಿಕರಿಸಲಾಗಿದೆ. ಉದಾ: ರಾಗಿ ಬೆಳೆಯಲು ಬೇಕಾದ ಅಂಶವನ್ನು ಎಷ್ಟು ಸಲ ಯಾವ ರೀತಿ ಕೊಡಬೇಕು ಎನ್ನುವುದನ್ನು ಸುಲಭವಾಗಿ ಮಾಹಿತಿ ನೀಡಲಾಗುವುದು. ಆಂಗ್ಲ ಭಾಷೆಯಲ್ಲಿರುವ ಈ ವ್ಯವಸ್ಥೆಯನ್ನು ಮುಂದಿನ ದಿನದಲ್ಲಿ ಸ್ಥಳೀಯ ರೈತರಿಗೆ ಅನೂಕೂಲವಾಗುವಂತೆ ಸ್ಥಳೀಯ ಭಾಷೆಯಲ್ಲಿ ಬಳಸಲಾಗುವುದು. ತಂಡದಲ್ಲಿ ಚೌರಾರೆಡ್ಡಿ ಪಿ.ಜಿ, ರಾಘವೇಂದ್ರ ಎಸ್.ಕೆಂಚಣ್ಣನವರ, ಸೋಮಶೇಖರಪ್ಪ ಆವಿಷ್ಕರಿಸಿದ್ದಾರೆ.
-ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಭ್ರಷ್ಟಾಚಾರ ಹಾಗೂ ಸಮಾಜದಲ್ಲಿ ತೋರುತ್ತಿರುವ ಅಸಮಾನತೆ ತೊಲಗಿಸಲು ಕಂಡುಹಿಡಿದ ಇ-ರೇಶನ್ ಮೆಜರ್‌ಮೆಂಟ್ ಸಿಸ್ಟಮ್ ಎಲ್ಲರ ಗಮನವನ್ನು ಅತ್ತ ಕಡೆ ಸೆಳೆಯುತ್ತಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಕಂಡುಬರುವ ದೌರ್ಜನ್ಯ ತಡೆಗಟ್ಟಲು ಈ ಯೋಜನೆ ಪ್ರಯೋಜನಕಾರಿಯಾಗಲಿದೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳಿಗೆ ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಗೋಧಿ, ಅಕ್ಕಿ ಹಾಗೂ ಎಣ್ಣೆಯ ತಾರತಮ್ಯ ನೋಡಿದ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಹೊಸದೊಂದು ಆವಿಷ್ಕಾರ ಸೃಷ್ಟಿಸಿದ್ದಾರೆ. ಕುಟುಂಬದ ಎಲ್ಲಾ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಕ್ರೋಡಿಕರಿಸಿ,ಎಟಿಎಂ ಕಾರ್ಡ್‌ನಂತಿರುವ ಕಾರ್ಡ್‌ನ್ನು ನೀಡಿ ಅದನ್ನು ಸ್ವೈಫ್ ಮಾಡುವುದರಿಂದ ಅಸಮಾನತೆಯ ತಡೆಗಟ್ಟಬಹುದು. ಪ್ರತಿಯೊಂದು ಕಾರ್ಡ್‌ಗೂ ಪ್ರತ್ಯೇಕವಾದ ಪಾಸ್‌ವರ್ಡ್ ನೀಡಲಾಗಿದ್ದು, ತಿಂಗಳಿಗೆ ಒಮ್ಮೆ ಮಾತ್ರ ಪಡೆಯಲಾಗುವ ಹಾಗೂ ಮೋಸದಿಂದ ತೆಗೆಯಲು ವರ್ತಿಸಿದಾಗ ಮಾಹಿತಿಯನ್ನು ನೀಡುವ ಹಾಗೂ ಪ್ರತಿಯೊಂದು ವಸ್ತುವನ್ನು ತೆಗೆದಾಗ ಎಸ್‌ಎಂಎಸ್ ಮೂಲಕ  ಮಾಹಿತಿ ನೀಡುವ ಯಂತ್ರ ಕೆಎಸ್‌ಸಿಎಸ್‌ಟಿಯೊಂದಿಗೆ ಸಹಕಾರವಿರಿಸಿದೆ. ೨೪*೭ ಮಾದರಿಯಲ್ಲಿ  ವಿಲೇವಾರಿ ಮಾಡುವ ಈ ಯಂತ್ರದಿಂದ ಭ್ರಷ್ಟಾಚಾರ ದೂರಮಾಡಬಹುದು. ತಂಡದಲ್ಲಿ ರಘುನಾಥ್, ಅಶೋಕ್‌ಕುಮಾರ್, ಪ್ರದೀಪ ಕುಮಾರ್, ದನ್ಯಕುಮಾರ್ ಶ್ರಮ ಎರಕವಾಗಿದೆ.
-ಯುಬಿಡಿಟಿ ದಾವಣಗೆರೆಯ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿದ ಆಪ್ಟಿಮಮ್ ಸ್ಪೀಡ್ ಡಿಸ್ಚಾರ್ಜ್ ಟಾಯ್ಲೇಟ್ ಸಿಸ್ಟಮ್‌ನ್ನು ರೈಲ್ವೆಯಲ್ಲಿ ಬಳಕೆ ಮಾಡಿದರೆ ರೈಲ್ವೆ ಕೇಂದ್ರದಲ್ಲಿರುವ ಈಗಿನ ಅವ್ಯವಸ್ಥೆ  ಸರಿಪಡಿಸಬಹುದಾಗಿದೆ. ಈ ಯಂತ್ರವನ್ನು ರೈಲ್ವೇಯಲ್ಲಿರುವ  ಟಾಯ್ಲೇಟ್‌ಗೆ ಫಿಕ್ಸ್ ಮಾಡಿಕೊಂಡು ರೈಲು ೪೦ ಕಿ.ಮೀ.ವೇಗದಲ್ಲಿ ಇಲ್ಲಿಯ ಕಂಟೈನರ್ ತನ್ನಷ್ಟಕ್ಕೆ ಬಂದ್ ಆಗುವುದರಿಂದ ಮಲವಿಸರ್ಜನೆಯು ರೈಲ್ವೆ ಟ್ರ್ಯಾಕ್‌ನಲ್ಲಿ ಬೀಳುವುದನ್ನು ತಡೆಗಟ್ಟಬಹುದು. ವೇಗ ೪೦ ಕಿ.ಮಿ.ಗಿಂತ ಜಾಸ್ತಿಯಾದಾಗ ಓಪನ್ ಆಗುತ್ತದೆ. ಸಾಮಾನ್ಯವಾಗಿ ರೈಲ್ವೆ ಸ್ಟೇಷನ್ ಹಾಗೂ ಹಳ್ಳಿಯ ಪ್ರದೇಶದಲ್ಲಿ ರೈಲಿನ ವೇಗವು ಕಡಿಮೆ ಇರುವುದರಿಂದ ಕಂಟೈನರ್ ಮುಚ್ಚುತ್ತದೆ. ಇದರಿಂದ ರೈಲ್ವೆ ಕೇಂದ್ರದಲ್ಲಿ ಮಲವಿಸರ್ಜನೆ ಮಾಡಿದರೂ ಟ್ರ್ಯಾಕ್‌ನ ಮೇಲೆ ಬೀಳುವುದನ್ನು ತಪ್ಪಿಸಬಹುದು.ಇದು  ಸುನೀಲ್, ಪ್ರಶಾಂತ ಪಿ, ಪ್ರಶಾಂತ ಕುಮಾರ್, ಸಂತೋಷ್ ತಯಾರಿಸಿದ ಯೋಜನೆಯಾಗಿದೆ.
ಸೃಷ್ಟಿಯಿಂದ ಲಿಮ್ಕಾ ದಾಖಲೆ:
ಬಾಗಲಕೋಟೆಯ ನಿವಾಸಿ ನವೀನ್ ರಾಘವೇಂದ್ರ ಶಿರೂರು ಸಂಶೋಧಿಸಿದ `ಸ್ಮಾಲೇಸ್ಟ್ ಆರ್‌ಎಫ್ ರಿಮೋಟ್ ಕಂಟ್ರೋಲ್ಡ್ ಸರ್ವೈವಲೆನ್ಸ್ ರೋಬೋಟ್' ೧೩ ಮಾರ್ಚ್ ೨೦೧೨ಗೆ ಲಿಮ್ಕಾ ದಾಖಲೆಯಾಗಿದೆ.  ಎಪ್ರಿಲ್ ೧೭ ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಗಿದೆ. ಇವರ ಈ ಪ್ರಾಜೆಕ್ಟ್ ೬೧*೫೪*೫೧ ಮಿ.ಮಿ ಗಾತ್ರವನ್ನು ಹೊಂದಿದೆ. ರೋಬೋಟ್ ಸರ್ವೇಕ್ಷಣೆ ಮತ್ತು ಆತ್ನಾಹುತಿಯಾಗಿದ್ದು ಮಿಲಿಟರಿಯಲ್ಲಿ ಉಪಯೋಗಿಸಲು ಸೂಕ್ತವಾಗಿದೆ.  ಕ್ಯಾಮರಾ, ಆಡಿಯೋ ಮತ್ತು ವೀಡಿಯೋ ಗಳನ್ನು ಒಳಗೊಂಡು ರಿಮೋಟ್‌ನಿಂದ ನಿಯಂತ್ರಣ ಮಾಡುವುದಾಗಿದೆ. ರೋಬೋಟ್ ನೆಲದ ಸಂಪರ್ಕದಿಂದ ಮೇಲೆ ಹೋದಾಗ ಗುರುತ್ವಾಕರ್ಷಣಾ ಶಕ್ತಿ ಕಡಿಮೆಯಾಗಿ ಸಿಡಿಯುತ್ತದೆ. ಇದು ಸೈನ್ಯದಲ್ಲಿ ಶತ್ರುಗಳ ಮೇಲೆ ಧಾಳಿ ನಡೆಸಲು ಬಹು ಅನೂಕೂಲವಾಗಿದೆ. ಭಾರತೀಯ ಸೈನ್ಯದ ಡಿಜಿಎಂ ರಮೇಶ್ ಹಲಗಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೈನ್ಯದಲ್ಲಿ ಬಳಸಲು ಯೋಗ್ಯವಾಗಿದೆ. ಇಂತಹ ಯೋಜನೆಗಳು ಸೈನ್ಯದಲ್ಲಿ ಅವಶ್ಯಕತೆಯಿದೆ ಎಂದಿದ್ದಾರೆ. ಭಾರತೀಯ ಸೈನ್ಯ ತಂತ್ರಜ್ಞಾನಧಾರಿತ ವ್ಯವಸ್ಥೆಯಲ್ಲಿ ಬಹಳ ಹಿಂದಿದ್ದು ಮುಂದಿನ ದಿನದಲ್ಲಿ ಇಂತಹ ಯೋಜನೆಗಳ ಆವಿಷ್ಕಾರದಿಂದ ಸುದೃಡ ಮಾಡುವ ಗುರಿಯನ್ನು ಹೊಂದಿದ್ದೇನೆ ಎನ್ನುವುದು ನವೀನ್ ಅವರ ಅಭಿಪ್ರಾಯವಾಗಿದೆ. ಇವರು ಬಾಗಲಕೋಟೆಯ ರಾಘವೇಂದ್ರ ಶಿರೂರು ಮತ್ತು ಅರ್ಚನಾ ಶಿರೂರವರ ಪುತ್ರರಾಗಿದ್ದಾರೆ.
ಸೃಷ್ಟಿ ಯ ಉದ್ದೇಶ ?
ಪ್ರತೀ ವರ್ಷ ವಿದ್ಯಾರ್ಥಿಗಳು ಪ್ರೊಜೆಕ್ಟ್, ರಿಪೋರ್ಟ್‌ಗಾಗಿ ಶ್ರಮಪಡುತ್ತಾರೆ. ಉಪನ್ಯಾಸಕರು ಶ್ರಮವಹಿಸುತ್ತಾರೆ. ಅದಕ್ಕಾಗಿ ಸಮಯ, ಕೌಶಲ್ಯ,ಪ್ರತಿಭೆಗಳನ್ನು ಸುರಿದು ತಯಾರಿಸಿದ ಮಾದರಿಗಳು ಮತ್ತೆ ಕಸದ ತೊಟ್ಟಿಯಾಗುತ್ತಿವೆ. ಆದರೆ ಅವು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಉಪಯೋಗಿಸುವಲ್ಲಿ ನಾವು ಎಡವುತ್ತಿದ್ದೆವು. ಅದಕ್ಕೊಂದು ಪರಿಹಾರ ಅಗತ್ಯವಿತ್ತು. ಅದಕ್ಕಾಗಿ ತಾಂತ್ರಿಕ ಕೌಶಲ್ಯಗಳ ಪ್ರದರ್ಶನದೊಂದಿಗೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಿರಿಯ, ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖರ ಅನುಭವ, ಮಾರ್ಗದರ್ಶನ ನೀಡುವ ಮೂಲಕ ಇನ್ನಷ್ಟು ಪ್ರೇರಣೆ ನೀಡುವುದು. ಪ್ರತಿವರ್ಷ ರೂಪುಗೊಳ್ಳುವ ಮಾದರಿಗಳನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ವೇದಿಕೆ ನಿರ್ಮಿಸಿ ಅಭಿವೃದ್ಧಿಯ ಬಗ್ಗೆ ಪರಿಕಲ್ಪನೆ ಮೂಡಿಸುವುದೇ ` ಸೃಷ್ಟಿ'ಯ ಗುಟ್ಟು. ಆ ಮೂಲಕ ಇಲ್ಲಿನ ಪ್ರತಿಭೆಗಳಿಗೆ ಇಲ್ಲಿಯೆ ಅವಕಾಶ ಒದಗಿಸಿ  ವಿದೇಶಗಳತ್ತ ಮುಖಮಾಡುವ ಯುವಸಮೂಹದ `ಪ್ರತಿಭಾ ಪಲಾಯನಕ್ಕೆ' ತಡೆಯೊಡ್ಡುವ ಗುರಿಯನ್ನಿಟ್ಟು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ `ಡಿಪೆಕ್ಸ್' ಆಯೋಜಿಸುತ್ತಿದ್ದು ಇದರಿಂದ ಪ್ರೇರಣೆ ಪಡೆದು ಅಭಾವಿಪ ಮೂಲಕ ಕರ್ನಾಟಕದಲ್ಲಿ `ಸೃಷ್ಟಿ' ಹುಟ್ಟು ಹಾಕಲಾಗಿದೆ. ಕರ್ನಾಟಕದಲ್ಲಿ ಯಶಸ್ಸನ್ನು ಕಂಡು ಇದೀಗ ಆಂದ್ರಪ್ರದೇಶದಲ್ಲಿ ತಾಂತ್ರಿಕ ಕೌಶಲ್ಯ ಪ್ರದರ್ಶನ `ಸೃಜನ್' ಆರಂಭಗೊಂಡಿದೆ. ಈಗಾಗಲೇ ೯ ವರ್ಷಗಳ ನಿರಂತರ `ಕೌಶಲ್ಯ ಪ್ರದರ್ಶನ' ಹಮ್ಮಿಕೊಳ್ಳುವ ಮೂಲಕ  ಗೆಲುವು ಸಾಧಿಸಿರುವ `ಸೃಷ್ಟಿ' ಯಶಸ್ಸಿನ ಎರಡನೇ ಹಂತದತ್ತ ಮುಖಮಾಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಪ್ರೆಸೆಂಟೆಶನ್ ಹಂತಕ್ಕೆ ತಲುಪಿದೆ. ಯಶಸ್ಸಿನ ಕೊನೆಯ ಮೆಟ್ಟಿಲಾಗಿ ಸಾಧನೆಯ ಬೆನ್ನೇರುವ ಛಲವಿಟ್ಟುಕೊಂಡಿರುವುದಾಗಿ `ಸೃಷ್ಟಿ'  ಆರಂಭಿಕ ಸಲಹೆಗಾರರಾಗಿರುವ ಐಟಿಐಇಯ ಸಂಜೀವ ಕುಲಕಡ್ಡಿ ಯಶಸ್ಸಿನ ಗುರಿಯನ್ನು ತೆರೆದಿಟ್ಟಿದ್ದಾರೆ.
ಸೃಷ್ಟಿ -೨೦೧೨ರ ವೈಶಿಷ್ಟ್ಯತೆ:
ಪ್ರತಿಷ್ಠಿತ ಕಾಲೇಜಿನ ಹಾಗೂ ಸಂಶೋಧನಾ ಕೇಂದ್ರದ ೭೦ ಜನ ತೀರ್ಪುಗಾರರು
 ೮ ಸೆಮಿನಾರ್‌ಗಳಲ್ಲಿ ೧ ಆವಿಷ್ಕಾರ ಹಾಗೂ ೭ ತಾಂತ್ರಿಕ ಸಂಶೋಧನಾ ಪ್ರಬಂಧ ಮಂಡನೆ
೨೧ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ, ೨೧ ತಾಂತ್ರಿಕ ಸಂಶೋಧನಾ ಪ್ರಬಂಧ ಮಂಡನೆಗೆ, ೨೧ ಆವಿಷ್ಕಾರ ಸಹಿತ ಒಟ್ಟು ೯೦ ಬಹುಮಾನಗಳ ಮೊತ್ತ ರೂ. ೩ ಲಕ್ಷ
ವಿವಿಧ ಪ್ರತಿಷ್ಠಿತ  ೭ ಕಂಪೆನಿಗಳು (ಟಿಸಿಐ, ಇನ್‌ಫೋ,ಐಟಿಐ, ಜ್ಯುಬಿಲಿಯೆಂಟ್, ಐಐಸಿ ಸಹಿತ)ಏಳು ಕಂಪೆನಿಗಳು ಭಾಗವಹಿಸಿದ್ದವು.
 (ಬಾಕ್ಸ್  ಮಾಡಿ:)
ಭಾವಿ ವಿಜ್ಞಾನಿಗಳ ತಯಾರಿ ಹಾಗೂ ಹೊಸ ಸಂಶೋಧನೆಗೆ ಪ್ರೇರಣೆ ನೀಡುವ ಕಾರ್ಯ ಸೃಷ್ಟಿಯಿಂದಾಗಿದೆ. ಅಂಕ ಹಾಗೂ ಪ್ರಾಜೆಕ್ಟ್‌ಗಳಿಗಾಗಿ ಮಾಡಿದ ಸಂಶೋಧನೆಗಳಾಗಿರದೆ ಅವುಗಳು ನಮ್ಮ ಮುಂದಿರುವ ಸಮಸ್ಯೆ ನಿವಾರಣೆ ಹಾಗೂ ಕೃಷಿ ಮತ್ತು ಸಾಂಪ್ರಾದಾಯಿಕ ಜನೋಪಯೋಗಿ ಸಂಶೋಧನೆಗಳಾಗಬೇಕಾಗಿದೆ. ಯುವಜನತೆ ವೃತ್ತಿ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಬಳುವಳಿಯಾಗಿ ಬಂದ ಜ್ಞಾನವನ್ನು ಜನತೆಗೆ ಲಾಭವಾಗುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿಸುವ ಅಗತ್ಯತೆ ಇದೆ. ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಮಾರ್ಗದರ್ಶನ ನೀಡುವ ವಿಭಾಗದೊಂದಿಗೆ ಸ್ವಾವಲಂಬನೆಯ  ಸಂಶೋಧನೆಗಳು ಸಾಮಾಜಿಕ ಸ್ಥರದಲ್ಲಿ ಲಾಭವಾಗುವಂತೆ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ.
-ಎನ್.ಯೋಗೀಶ್ ಭಟ್ ವಿಧಾನ ಸಭಾ ಉಪಾಧ್ಯಕ್ಷ

ನಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಜೊತೆಯಲ್ಲಿಯೆ ವ್ಯಕ್ತಿತ್ವ ವಿಕಸನ ಹಾಗೂ ಬೆಳವಣಿಗೆಯೊಂದಿಗೆ ತಾಂತ್ರಿಕ ಪ್ರತಿಭೆಗಳಿಗೆ ಅವಕಾಶ ನೀಡುವುದು. ಮನಸ್ಸಿನಲ್ಲಿ ವ್ಯಕ್ತವಾದ ಅಂಶಗಳನ್ನು ಪ್ರಾಜೆಕ್ಟ್‌ಗಳ ಮೂಲಕ ಸೃಷ್ಟಿಸಿದ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಎಬಿವಿಪಿಯ ಕಾರ್ಯಕ್ರಮ ಶ್ಲಾಘನೀಯ. ನಿರಂತರ ಕಾರ್ಯಕ್ರಮದ ಮೂಲಕ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಶೋದನಾ ಚಟುವಟಿಕೆಗಳು ಸೃಷ್ಟಿಸಿದೆ. ಪಠ್ಯಕ್ಕೆ ಸೀಮಿತವಾದ ಅದ್ಬುತ ಸಂಗತಿಯನ್ನು ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗುವ ಕಾರ್ಯಕ್ರಮ.
-ಕ್ಯಾ.ಗಣೇಶ್ ಕಾರ್ಣಿಕ್

No comments:

Post a Comment