Thursday 10 May 2012

ಕನ್ನಡದಲ್ಲಿ ವಾಹನಗಳ ನಾಮಫಲಕ ಬಳಸಿದರೆ ದಂಡ ವಿಧಿಸುವಂತಿಲ್ಲ..
ಸಂದೇಶ ಶೆಟ್ಟಿ ಆರ್ಡಿ
ಸಾಮಾನ್ಯ ಜನತೆಯ ಮನದಲ್ಲಿ ಮೂಡಿರುವ  ಪ್ರಶ್ನೆ? ಕನ್ನಡದಲ್ಲಿ ನಂಬರ್‌ಪ್ಲೇಟ್ ಬಳಸಿದರೆ ದಂಡ ವಿಧಿಸುತ್ತಾರೆ ಎನ್ನುವ ಸುದ್ದಿ ಕರಾವಳಿಯಲ್ಲಿ ಎಗ್ಗಿಲ್ಲದೇ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಕರ್ನಾಟಕದಲ್ಲಿ ಹುಟ್ಟಿದ ಜನರು ಮಾತೃಭಾಷೆಯ  ಮೇಲಿನ ಪ್ರೀತಿಯನ್ನು ಕನ್ನಡ ಅಕ್ಷರ ಬರೆಯಿಸುವುದರ  ಮೂಲಕ ಹಾಗೂ ಕನ್ನಡ ಫಲಕಗಳ ಬರೆದು ಅಭಿಮಾನವನ್ನು ತೋರ್ಪಡಿಸುತ್ತಾರೆ. ವಾಹನ ಸಂಖ್ಯೆಯನ್ನು ಕೂಡ ಕನ್ನಡ ಅಕ್ಷರಗಳ ಮೂಲಕ ಬರೆಯಿಸಿ ಕನ್ನಡದ ಮೇಲಿನ ಅಭಿಮಾನ ಹಂಚಿಕೊಳ್ಳುವವರಿದ್ದಾರೆ. ಆದರೆ ಕೇಂದ್ರ ವಾಹನ ಕಾಯಿದೆ ೧೯೮೯ರ ೫೦ (೨)ಡಿಯನ್ವಯ ವಾಹನಗಳ ನಂಬರ್ ಪ್ಲೇಟ್‌ನ್ನು  ಇಂಗ್ಲೀಷ್ ಅಥವಾ ಅರೆಬಿಕ್ ನ್ಯೂಮರಲ್ಸ್‌ನಲ್ಲಿ ಬರೆದಿರಲೇ ಬೇಕು ಎಂದು ಕಡ್ಡಾಯ ಮಾಡಲಾಗಿದೆ. ಇತ್ತೀಚಿಗೆ ಕನ್ನಡ ನಂಬರ್‌ಪ್ಲೇಟ್ ಇರುವಂಥ ವಾಹನವನ್ನು ಕಂಡರೆ ದಂಡ ವಿಧಿಸುತ್ತಾರೆ ಎನ್ನುವ ಅಂಜಿಕೆ ಜನಸಾಮಾನ್ಯರಲ್ಲಿದೆ.
ಆ ಸಮಸ್ಯೆಯ ಕುರಿತು ಮಾಹಿತಿ ಸಂಗ್ರಹಿಸಿದಾಗ ತಿಳಿದು ಬಂದಿರುವ ಅಂಶಗಳಿಷ್ಟು. ಗಡಿಭಾಗದಲ್ಲಿರುವ ವಾಹನ ಮಾಲಕರು ಎರಡು ಕಡೆ ಕನ್ನಡ ನಾಮಫಲಕವನ್ನು ಹಾಕಿಕೊಂಡರೆ ಬೇರೊಂದು ರಾಜ್ಯಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಅಲ್ಲಿಯವರೆಗೆ ವಾಹನದ ಸಂಖ್ಯೆಯನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಅಲ್ಲದೆ  ಇದರಿಂದ ತೊಂದರೆ  ಜಾಸ್ತಿಯಾಗಿರುತ್ತದೆ. ಹೆಚ್ಚಿನ ಅಪರಾಧಿಗಳು ದುಷ್ಟ ಕೃತ್ಯಗಳನ್ನು  ಮಾಡಲು ಈ ತಂತ್ರವನ್ನು ಬಳಸುತ್ತಾರೆ ಎನ್ನುವ ಅಂಶಗಳು ಜನಸಾಮಾನ್ಯರಲ್ಲಿದ್ದರೂ  ಮಂಗಳೂರಿನ ಆರ್‌ಟಿಓ ಅಧಿಕಾರಿ ಸಿ.ಮಲ್ಲಿಕಾರ್ಜುನ ಅಂತಹ ಪ್ರಮೇಯ ಇಲ್ಲಾ. ಅಪರಾಧವನ್ನು ಎಸಗುವವರು ಹೆಚ್ಚಿನ ಎಲ್ಲಾ ಮಾರ್ಗವನ್ನು ಉಪಯೋಗಿಸುತ್ತಾರೆ. ಅದರಲ್ಲಿ ಕನ್ನಡ ನಂಬರ್ ಪ್ಲೇಟ್‌ಬಳಸಿಯೂ ಮಾಡಬಹುದು ಎನ್ನುತ್ತಾರೆ.
ಕರ್ನಾಟಕ ರಾಜ್ಯದಲ್ಲಿ ಕನ್ನಡ ನಾಮಫಲಕ ಇರಲೇ ಬೇಕು ಎಂದು ಕಡ್ಡಾಯವಾಗಿಲ್ಲ. ಕನ್ನಡ ನಾಮಫಲಕವಿದ್ದರೆ ದಂಡ ವಿಧಿಸುವ ಕಾನೂನು ಇಲ್ಲಾ. ಸರಕಾರಿ ವಾಹನಗಳು ಮಾತ್ರ ಕಡ್ಡಾಯವಾಗಿ ಕನ್ನಡ ಸಂಖ್ಯಾಫಲಕವನ್ನು ಹಾಕಲೇ ಬೇಕಾಗುತ್ತದೆ. ದ್ವಿ-ಚಕ್ರ  ಹೊರತು ಪಡಿಸಿ ಹಳದಿ ಬೋರ್ಡ್‌ನ ವಾಹನಗಳಿಗೆ ನಾಲ್ಕು ಭಾಗದಲ್ಲಿ ಸಂಖ್ಯೆಯನ್ನು ಹಾಕಬಹುದು. ನಾಲ್ಕರಲ್ಲಿ ಯಾವುದಾದರೂ  ಒಂದು ಭಾಗದಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿರುತ್ತದೆ. ದ್ವಿ-ಚಕ್ರ ವಾಹನವುಳ್ಳವರು ಒಂದು ಕಡೆ ಕನ್ನಡ ನಾಮಫಲಕ ಬಳಸಬೇಕು.
ನಂಬರ್ ಪ್ಲೇಟ್ ತಯಾರಿಸುವ ಅಂಗಡಿಯವರು ಸುಳ್ಳು ಮಾಹಿತಿಯನ್ನು ಸಾಮಾನ್ಯ ಜನತೆಗೆ ಮುಟ್ಟಿಸುತ್ತಾರೆ. ಅವರಿಗೆ ಕಂಪ್ಯೂಟರ್‌ನಲ್ಲಿ ಕನ್ನಡ ಸಂಖ್ಯೆಯನ್ನು ಬರೆಯಲು ಕಷ್ಟ ವಾಗುವುದರಿಂದ ಹಾಗೂ ಅವರಿಗೆ ಹೆಚ್ಚಿನ ಕೆಲಸವಾಗುವುದರಿಂದ ಸುಲಭದಲ್ಲಿ ಆಗುವಂಥ ಕೆಲಸಕ್ಕಾಗಿ ಈ ರೀತಿಯಾಗಿ ತಪ್ಪು ಮಾಹಿತಿಯನ್ನು ನೀಡಿ ಗೊಂದಲವನ್ನು ಸೃಷ್ಠಿಸುತ್ತಾರೆ.
ಈ ರೀತಿಯಾಗಿ ತಪ್ಪು ಮಾಹಿತಿಯನ್ನು ನೀಡುವ ಮಂದಿ ಒಂದೆಡೆಯಾದರೆ ಕರ್ನಾಟಕದಲ್ಲಿ ನೋಂದಾವಣೆ ಮಾಡಿಸಿದ ವಾಹನಗಳ ಮಾಲಕರಿಗೆ ಕನ್ನಡದಲ್ಲಿ ನಂಬರ್ ಹಾಕಿಸುವ ಆಸೆಯಾದರೆ ಹಣವುಳ್ಳವರು  ಬೇರೆ ರಾಜ್ಯದಲ್ಲಿ ಐಶಾರಾಮಿ ವಾಹನ  ಖರೀದಿಸಿ ರಾಜ್ಯದಲ್ಲಿ ಓಡಿಸುವ ಆಸೆಯಿರುತ್ತದೆ. ಆದರೂ ಕೂಡ ಸಾಮಾನ್ಯ ಜನತೆಯ ಮನದಲ್ಲಿರುವ ಸಂಶಯವನ್ನು ಪರಿಹರಿಸುವ ಕಾನೂನು ಜಾರಿಯಾಗುವುದೇ ಎಂದು ಕಾಯಬೇಕಾದ ಪರಿಸ್ಥಿತಿಯಿದೆ.

ರಾಜ್ಯದಲ್ಲಿ ಹೆಚ್ಚಾಗಿ ರೋಮನ್ ಹಾಗೂ ಅರೇಬಿಕ್ ಸಂಖ್ಯೆಯಲ್ಲಿ ನಂಬರ್‌ಪ್ಲೇಟ್ ಬಳಸುತ್ತಿದಾರೆ. ಯುವಜನತೆಯು ಕನ್ನಡವನ್ನು ಬಳಸಿದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಇತರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ರಸ್ತೆಯ ಭದ್ರತಾ ಕಾನೂನು ಉಲ್ಲಂಘಿಸುವವರ ಶೀಘ್ರ ಕಾರ್ಯಾಚರಣೆಗಾಗಿ ಸಿಸಿ ಕ್ಯಾಮರಾವನ್ನು ಬಳಸುತ್ತಿದ್ದು ಅದರಲ್ಲಿ ಕನ್ನಡ ಹಾಗೂ ಇತರ ಭಾಷೆಯ ಅಕ್ಷರಗಳನ್ನು ಸೆರೆಹಿಡಿಯುತ್ತದೆ.
ಸಿ.ಮಲ್ಲಿಕಾರ್ಜುನ ಆರ್‌ಟಿಓ ಅಧಿಕಾರಿ ಮಂಗಳೂರು
 
೧೯೬೫-೭೦ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ನಮಗೆ ಕನ್ನಡ ಸಂಖ್ಯೆಗಳ ಪರಿಚಯ ವಿರುವಂತೆ ಈಗಿನ ಯುವಜನತೆಗೆ ಕನ್ನಡ ಸಂಖ್ಯೆಯನ್ನು ಶೀಘ್ರವಾಗಿ ಗುರುತಿಸುವ ಸಾಮರ್ಥ್ಯವಿರುವುದಿಲ್ಲ. ಸಾಮಾನ್ಯವಾಗಿ ಕನ್ನಡ ಸಂಖ್ಯಾಫಲಕ ಕನ್ನಡದಲ್ಲಿ ಬಳಕೆ ಮಾಡುವುದು ಕಡಿಮೆಯಾಗಿದೆ.
ಮಂಜುನಾಥ್ ಸರ್ಕಲ್ ಇನ್ಸ್‌ಸ್ಪೆಕ್ಟರ್ ಮಂಗಳೂರು

No comments:

Post a Comment