Thursday 3 January 2013

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಸಾಧ್ಯವೇ?
ಕರ್ನಾಟಕದಲ್ಲಿ ಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಈ ಹಿಂದೆ ಪ್ರಾದೇಶಿಕ ಪಕ್ಷ ಗೆಲುವು ಕಂಡಿಲ್ಲ, ಈಗಲೂ ಕಾಣುವುದಿಲ್ಲ ಹೀಗೆ ಧ್ವನಿಗಳು ಕರಾವಳಿಯಲ್ಲಿ ಕೇಳಿಬರುತ್ತಿದೆ. ಅದುವೇ ಚುನಾವಣೆ ಸಮೀಪಿಸುತ್ತಿದ್ದಂತೆ ಅದು ತಾರಕಕ್ಕೆರಲಿದೆ. ಯಾವುದೇ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡರೂ ಅವುಗಳ ಭವಿಷ್ಯವಿರುವುದು ಜನತಾ ನ್ಯಾಯಲಯದಲ್ಲಿಯೇ? ಅಲ್ಲಿಯ ತೀರ್ಪೇ ಅಂತಿಮವಾದುದು. ಆದರೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಸಿಗುವ ಸಾಧ್ಯತೆ ಜಾಸ್ತಿ.
ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ನೆನಪಿಸಿಕೊಂಡಾಗ ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದರೂ ಇದೆಲ್ಲದಕ್ಕಿಂತ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎನ್ನುವುದು ನಮ್ಮ ಪಾಲಿಗೆ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೆನಚು ತಂದ ಘಟಾನುಗಟಿ ನಾಯಕರಿದ್ದದ್ದು ಕಾಂಗ್ರೆಸ್ ಪಕ್ಷದಲ್ಲಿ ಎನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು ಎನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶದಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೆದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು ಎನ್ನುವುದು ಈ ಸಂದರ್ಭದಲ್ಲಿ ಪ್ರಸ್ತುತವೇ ಸರಿ.
ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ. ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟಿನ ಮಹಿಮೆ ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲು ಅಸಾಧ್ಯವಾದದ್ದು ಅನ್ನುವುದು ಜನರಿಗೆ ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದೆ ಅನ್ನುವುದನ್ನು ಗಮನಿಸಬೇಕಿದೆ.
೧೯೯೦ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿತು. ರಾಜ್ಯದಲ್ಲಾದ ಮೂರು ಹಂತದ ಬದಲಾವಣೆಗಳಾದವು. ಈ ಬದಲಾವಣೆ ಆಗುವ ಹೊತ್ತಲ್ಲಿ ಕರ್ನಾಟಕದನಾಯಿತು ಎಂದು ನಾವು ನೋಡಲು ಹೋದರೆ ಒಂದಿಷ್ಟು ವಿಷಯ ಗೋಚರಿಸುತ್ತವೆ. ಕಾಂಗ್ರೆಸ್ಸಿನ ಪ್ರಾಬಲ್ಯ ಮುಗಿದು ಸಮಾಜವಾದಿ ಹಿನ್ನೆಲೆಯ ಜನತಾ ಪರಿವಾರ ತನ್ನ ಬಲದ ಅಧಿಕಾರ ಹಿಡಿಯುವ ಮಟ್ಟಿಗಿನ ಬದಲಾವಣೆ ಕರ್ನಾಟಕದದ ಮೆದಲ ಹಂತದ ಬದಲಾವಣೆ ಅನ್ನಬಹುದು. ಮುಂದೆ ಜನತಾ ಪರಿವಾರ ಒಡೆದು ಹೋದಾಗ ಅಲ್ಲಿನ ನಾಯಕರನ್ನು, ಅದರ ಶಕ್ತಿಯನ್ನು ಬಳಸಿಕೊಂಡ ಬಿಜೆಪಿ ಯಡಿಯೂರಪ್ಪನವರಂತಹ ರಾಜ್ಯವ್ಯಾಪಿ ಪ್ರಭಾವ, ಸಮುದಾಯದ ಬೆಂಬಲ ಇರುವ ಹಾಗೂ ಪ್ರಾದೇಶಿಕವಾಗಿ ಬಲಗೊಂಡಿರುವ ನಾಯಕನ ನೇತೃತ್ವದಲ್ಲಿ  ಕರ್ನಾಟಕದಲ್ಲಿ ಒಂದು ಮಟ್ಟಿಗೆ ನೆಲೆ ಕಂಡುಕೊಂಡಿತು. ಇದನ್ನು ಎರಡನೆಯ ಹಂತವೆಂದು ಕರೆಯಬಹುದು. ಆದರೆ ಈ ಎರಡೂ ಹಂತದ ಬದಲಾವಣೆಗಳು ಕರ್ನಾಟಕದ ಮಟ್ಟಿಗೆ ಇಲ್ಲಿನ  ನದಿ, ನೆಲ, ನುಡಿ, ಬದುಕು ಬವಣೆಗಳ ಸವಾಲಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರೀಕ್ಷೆ ಇಟ್ಟುಕೊಂಡ ಮಟ್ಟಕ್ಕೆ ಯಶಸ್ವಿಯಾಗದೇ ಇರುವುದರಿಂದಲೇ ಇಂದು ಪ್ರಾದೇಶಿಕ ಪಕ್ಷಗಳು ಬೇಕು ಅನ್ನುವ ಮೂರನೇ ಹಂತದ ಬದಲಾವಣೆಯತ್ತ ಕರ್ನಾಟಕ ಹೆಜ್ಜೆಯಿಟ್ಟಿದೆ. ಯಡಿಯೂರಪ್ಪ, ಶ್ರೀರಾಮುಲು ಯಾರೇ ಆಗಿರಲಿ ಇನ್ನೊಂದು ಅಸ್ತಿತ್ವದಲ್ಲಿರುವ ಪಕ್ಷಕ್ಕೆ ಸೇರುವ ಬದಲು ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ ಅನ್ನುವ ಛಲವನ್ನು ಮೆಚ್ಚಬೇಕು. ಜತ್ಯಾತೀತ ಜನತಾದಳದ ಇತ್ತೀಚಿನ ನಿಲುವಿನಲ್ಲಿರುವ ಆತ್ಮವಿಶ್ವಾಸಕ್ಕೆ ಕರ್ನಾಟಕದಲ್ಲಿ ಬಲಗೊಳ್ಳುತ್ತಿರುವ ಪ್ರಾದೇಶಿಕ ಪಕ್ಷ ಬೇಕು ಅನ್ನುವ ಚಿಂತನೆಯ ಹಿನ್ನೆಲೆಯಲ್ಲಿ ನೋಡಿದಾಗಲೇ ಮೂರನೆಯ ಹಂತದ ಬದಲಾವಣೆ ಹೇಗೆ ರೂಪುಗೊಳ್ಳುತ್ತಿದೆ ಅನ್ನುವುದನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ.
ಪ್ರಾದೇಶಿಕ ಪಕ್ಷಗಳ ಒಡೆಯರು ಮಾತ್ರ ಭ್ರಷ್ಟರೇ?
ಎನ್ನುವ ಪ್ರಶ್ನೆ ಉದ್ಬವವಾಗುತ್ತದೆ. ಭಾರತ ಒಕ್ಕೂಟದಲ್ಲಿ ನಮ್ಮ ನೆಲ, ಜಲ, ನುಡಿ, ಬದುಕಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಬೇಕಿರುವ ಸಂಧಾನದ ಶಕ್ತಿ ಪಡೆಯಲು ಪ್ರಾದೇಶಿಕ ಪಕ್ಷಗಳೆನೋ ಬೇಕು, ಆದರೆ ಪ್ರಾದೇಶಿಕ ಪಕ್ಷಗಳು ಹೆಚ್ಚು ಭ್ರಷ್ಟವಲ್ಲವೇ ಅನ್ನುವ ವಾದವೂ ಕೇಳಿ ಬರುತ್ತಿವೆ. ಇಲ್ಲಿಯೂ ಕೂಡ ಜಿಜ್ಞಾಸೆ. ಅದು ಸರಿ ಎನ್ನುವವರು ಒಂದೆಡೆಯಾದರೆ ಇಲ್ಲಾ ಎನ್ನುವವರ ಗುಂಪು ಇನ್ನೊಂದೆಡೆ. ಭ್ರಷ್ಟಾಚಾರ ಇಂದು ಪ್ರಾದೇಶಿಕ, ರಾಷ್ಟ್ರೀಯ ಪಕ್ಷ ಅನ್ನದೇ ಎಡೆ ವ್ಯಾಪಿಸಿದೆ. ಭ್ರಷ್ಟಾಚಾರ ಎನ್ನುವುದು ಯಾವುದೋ ಒಂದು ಪಕ್ಷ ಇಲ್ಲವೇ ವ್ಯಕ್ತಿಯಿಂದ ಬಗೆ ಹರಿಯುವ ಸಮಸ್ಯೆಯಲ್ಲ. ಅದಕ್ಕೆ ಬೇಕಿರುವುದು ಚುನಾವಣೆ ಸುಧಾರಣೆ, ಬೇಕಿಲ್ಲದ ಕ್ಷೇತ್ರಗಳಿಂದ ಸರ್ಕಾರದ ಪಾತ್ರ ಕಡಿಮೆಗೊಳಿಸುವುದು, ರಾಜಕೀಯ ಹಸ್ತಕ್ಷೇಪವಿಲ್ಲದೇ ಕೆಲಸ ನಿರ್ವಹಿಸುವಂತೆ ತನಿಖಾ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವುದು, ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು ಕೆಳ ಹಂತದವರೆಗೆ ಕೊಂಡೊಯ್ಯುವಂತಹ ಸಾಂಸ್ಥಿಕ ಸುಧಾರಣೆಗಳಾಗಬೇಕು.
ಅಂತಹ ಬದಲಾವಣೆಗೆ ಒತ್ತಡ ತರುವ ಕೆಲಸವನ್ನು ಸಾಮಾಜಿಕ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಮಾಡಬೇಕಿವೆ. ಅಂತಹ ಬದಲಾವಣೆಗಳಾಗುವವರೆಗೂ ಇವತ್ತಿನ ಎ ಮೀರಿ ಕೇಂದ್ರಿಕೃತವಾಗಿರುವ ಕೇಂದ್ರದಲ್ಲಿನ ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯದ ಏಳಿಗೆಗೆ ಸಂಪನ್ಮೂಲ ಹೊಂದಿಸಲು ಪ್ರಾದೇಶಿಕ ಪಕ್ಷಗಳ ಅಗತ್ಯ ಕಂಡು ಬರುತ್ತವೆ. ಮುಂದಿನ ದಿನಗಳಲ್ಲಿ ಇಷ್ಟೊಂದು ವೈವಿಧ್ಯತೆಯ ಭಾರತ ಒಕ್ಕೂಟ ಒಂದು ಸರಿಯಾದ ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡುವಂತೆ ಮಾಡುವ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಅಸ್ತಿತ್ವಕ್ಕೆ ಬರುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಈ ಸಂದರ್ಭದಲ್ಲಿ ಕರ್ನಾಟಕದ ಹಿತ ಕಾಯಲು ಸರಿಯಾದ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಕನ್ನಡ, ಕನ್ನಡಿಗರ ಪಾಲಿಗೆ ಅತ್ಯಂತ ಮುಖ್ಯವಾಗಿದೆ.
ಈ ಹಿಂದಿನ ಪ್ರಯತ್ನಕ್ಕೂ ಈಗಿನದ್ದಕ್ಕೂ ತುಂಬಾ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಈ ಹಿಂದೆ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನಗಳು ಗೆಲುವು ಕಂಡಿಲ್ಲ, ಹಾಗಾಗಿ ಈ ಬಾರಿಯ ಪ್ರಯತ್ನಗಳು ಗೆಲುವು ಕಾಣುವುದಿಲ್ಲ ಎನ್ನುವ ಅಭಿಪ್ರಾಯ ಕೆಲವರದ್ದು. ಆದರೆ ಅಂದಿನ ಸೋಲು ಯಾಕಾಯಿತು ಎನ್ನುವ ಅಂಶ ನೋಡಿದಾಗ ಅವುಗಳ ಸೋಲಿನ ಕಾರಣ ಸುಲಭವಾಗಿ ತಿಳಿಯಬಹುದು. ಈ ಹಿಂದೆ ಪಕ್ಷ ಕಟ್ಟಿದ್ದ ದೇವರಾಜ್ ಅರಸು, ಬಂಗಾರಪ್ಪನವರ ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳು ದೇಶಾದ್ಯಂತ ಬಲವಾಗಿದ್ದವು. ಆದರೆ ಇಂದು ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಬಲಗೊಂಡಿರುವ, ಬಲಗೊಳ್ಳುತ್ತಿರುವ ಸಮ್ಮಿಶ್ರ ಸರ್ಕಾರಗಳ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವ ದಿನಗಳಾಗಿವೆ. ಈ ಹಿಂದಿನ ಪ್ರಯತ್ನ ಮಾಡಿದವರು ಕರ್ನಾಟಕದ ಪ್ರಭಾವಿ ಸಮುದಾಯಕ್ಕೆ ಸೇರದ, ರಾಜ್ಯವ್ಯಾಪಿ ರಾಜಕೀಯ ಪ್ರಭಾವ ಹೊಂದಿರದ ನಾಯಕರಾಗಿದ್ದರೆ ಇಂದಿನ ಪ್ರಯತ್ನದಲ್ಲಿರುವವರಿಗೆ ಆ ತೊಡಕು ಅಷ್ಟಾಗಿಲ್ಲ.
ಎಲ್ಲಕ್ಕೂ ಹೆಚ್ಚಾಗಿ ಕರ್ನಾಟಕಕ್ಕೆ ನಿರಂತರವಾಗಿ ಭಾರತ ಒಕ್ಕೂಟದಲ್ಲಿ ನದಿ, ನೆಲ, ಬದುಕಿನ ಹಕ್ಕುಗಳ ವಿಷಯಗಳಲ್ಲಿನ ಅನ್ಯಾಯ ಸರಿಪಡಿಸಲು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಅನ್ನುವ ಚಿಂತನೆ ಈ ಹಿಂದಿನವರು ಪ್ರಯತ್ನ ಮಾಡಿದ್ದ ಹೊತ್ತಲ್ಲಿ ಅಷ್ಟಾಗಿ ಜನಮಾನಸದಲ್ಲಿ ಗಟ್ಟಿಯಾಗಿರಲಿಲ್ಲ, ಆದರೆ ಇಂದು ಈ ವಾದಕ್ಕೆ ರಾಜ್ಯದ ಜನಸಾಮಾನ್ಯನಲ್ಲೂ ಬಹು ದೊಡ್ಡ ಮಟ್ಟದಲ್ಲಿ ಬೆಂಬಲವಿದೆ. ಹೀಗಾಗಿ ಸರಿಯಾದ ಪ್ರಯತ್ನ ಮಾಡಿದರೆ ಕರ್ನಾಟಕದಲ್ಲಿ ಒಂದೆರಡು ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ನೆಲೆ ನಿಲ್ಲುವ ಎಲ್ಲ ಸಾಧ್ಯತೆಗಳಿವೆ ಎನ್ನುವುದು ನನ್ನ ಭಾವನೆ.
ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿಯೂ ಪ್ರಾದೇಶಿಕ ಪಕ್ಷಗಳ ಅಲೆ ತಟ್ಟಿದೆ. ಇಲ್ಲಿಯವರೆಗೆ ರಾಜಕೀಯದಲ್ಲಿ ಕಾಣಿಸಿಕೊಳ್ಳದ ವ್ಯಕ್ತಿಗಳು ರಾಜರೋಷವಾಗಿ ರಾಜಕೀಯ ರಂಗದಲ್ಲಿ ಭಾಗವಹಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಶ್ರೀದೇವಿ ಸಮೂಹ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ ಜೆಡಿಎಸ್‌ನ ಬಾಗಿಲು ತಟ್ಟಿದ್ದರೆ, ಸಾಮಾಜಿಕ ಕಾರ್ಯಕರ್ತ, ಧಾರ್ಮಿಕ ಧುರೀಣರೆಂದು ಹಲವಾರು ಹಿಂದುತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಸರು ಗಳಿಸಿದ ವಿಜಯನಾಥ ವಿಠಲ ಶೆಟ್ಟಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ. ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುವ ನೀರಿಕ್ಷೆಯಿದೆ. ಬಿಜೆಪಿ ಆಡಳಿತವಿರುವಾಗ ಬೆಂಗಳೂರಿಗೆ ಮಂತ್ರಿಸ್ಥಾನ ಕೊಡಿಸುವುದಾಗಿ ಕರೆಸಿಕೊಂಡು ಕೊನೆಗೂ ಬಿಜೆಪಿಯ ದಾಷ್ಟ್ಯಕ್ಕೆ ಬಲಿಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತಟಸ್ಥರಾಗಿರುವುದು ಕಂಡು ಬರುತ್ತಿದೆ. ಆಪ್ತ ವಲಯದಲ್ಲಿ ಅವರು ರಾಜಕೀಯದಿಂದಲೇ ನಿವೃತ್ತಿಯಾಗುತ್ತಾರೆ ಎನ್ನುವ ಮಾತು ಒಂದೆಡೆಯಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಮಾತು ಕೇಳುತ್ತಿದೆ. ಅಲ್ಲದೇ ಕುಂದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹ್ಯಾಟ್ರಿಕ್ ಹುಲಿಯಾಗಿದ್ದ ಹೈಕಾಡಿ ಪ್ರತಾಪ ಚಂದ್ರ ಶೆಟ್ಟಿ ಅವರನ್ನು ಸೋಲಿಸಿ ರಾಜಕೀಯ ಕ್ಷೇತ್ರದಲ್ಲಿ ಬಲವಾಗಿ ಬೇರೂರಿದ್ದರು. ಆದರೆ ಹಾಲಾಡಿಯವರು ನಿವೃತ್ತಿಯಾದರೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೈಕಾಡಿಯವರು ಸ್ಪರ್ಧಿಸುವ ನಿರೀಕ್ಷೆಯಿದೆ. ಹಾಲಾಡಿಯವರು ಸ್ಪರ್ಧಿಸದಿದ್ದರೆ ಕುಂದಾಪುರದಲ್ಲಿ ನಿಲ್ಲುವ ಬಂಟ ಸಮುದಾಯಕ್ಕೆ ಗೆಲುವಾಗುವ ಸಾಧ್ಯತೆ ಒಂದೆಡೆಯಾದರೆ ಬಿಲ್ಲವ ಸಮಾಜವು ಕೂಡ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆನ್ನುವ ಛಲ ತೊಟ್ಟಿದ್ದಾರೆ. ಆದರೂ ರಾಜಕೀಯ ಪಕ್ಷದಲ್ಲಿ ಅಭ್ಯರ್ಥಿಗಳ ಸ್ಫರ್ಧೆ ಹಾಗೂ ಪ್ರಾದೇಶಿಕ ಪಕ್ಷಗಳ ಆಯ್ಕೆ ನಿಗೂಡವಾಗಿದೆ. ರಾಜಕೀಯದಲ್ಲಿ ಬದಲಾವಣೆ ಬೇಕು ಎನ್ನುವ ವರ್ಗ ಒಂದೆಡೆ? ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲಾ ಎನ್ನುವ ಮಂದಿ ಇನ್ನೊಂದೆಡೆ? ಆದರೆ ಯಾವುದು ಆಗಬೇಕು ಎನ್ನುವ ಪ್ರಶ್ನೆಗೆ ಉತ್ತರ ಮುಂಬರುವ ವಿಧಾನ ಸಭಾ ಚುನಾವಣೆ ಉತ್ತರ ನೀಡಲಿದೆ ಅಲ್ಲವೇ? 




No comments:

Post a Comment