ಪ್ರಕೃತಿಯ ರಮ್ಯತಾಣದಲ್ಲಿರುವ ಪ್ರಕೃತಿಯ ಕೂಸು, ಮಾನಸಿಕ ನೆಮ್ಮದಿಯ ತಾಣ. ನೆಲ್ಲಿತೀರ್ಥ -ಸೋಮನಾಥೇಶ್ವರ ಗುಹಾಲಯ

ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಒಂದು ಮಾತನ್ನು ಹೇಳಿರುವುದನ್ನು ನಾವು ನೆನಪಿಸಿಕೊಳ್ಳಲೇ ಬೇಕು. ನನ್ನನ್ನು ಪೂಜಿಸಲು ನಾನೇ ಸೃಷ್ಟಿಸಿದ ವಸ್ತುಗಳಿವೆ. ಪತ್ರ, ಪುಷ್ಪ, ಫಲ, ನೀರು, ಏನನ್ನು ಭಕ್ತಿಯಿಂದ ಸಮರ್ಪಿಸಿದರೂ ನಾನು ಸ್ವೀಕರಿಸುವೆ? ಆ ಮಾತನ್ನು ಈ ಯುಗದಲ್ಲೂ ನಿಜಗೊಳಿಸಲೋಸುಗವೋ ಎನ್ನುವಂತೆ ನೆಲ್ಲಿತೀರ್ಥದ ಗುಹಾಲಯ ಬೆಳೆದು ನಿಂತಿದೆ. ಪ್ರಕೃತಿ ಮುಖೇನ ಭಗವಂತನ ಆರಾಧನೆಗೆ ನೆಲ್ಲಿತೀರ್ಥ ಗುಹೆಯಂತಹ ಇನ್ನೊಂದು ತಾಣವಿಲ್ಲ. ಸಾಧಕನ ಆಧ್ಯಾತ್ಮಿಕ ಉನ್ನತಿಗೆ ನೆಲ್ಲಿತೀರ್ಥ ಗುಹಾಲಯ ಭಗವಂತ ನಿರ್ಮಿಸಿದ ಪ್ರಾಕೃತಿಕ ಗುರುಕುಲವೆಂದರೂ ತಪ್ಪಿಲ್ಲ.
ನಮ್ಮ ಆಧ್ಯಾತ್ಮಕ್ಕೂ ಸಂಖ್ಯೆ ಹದಿನೆಂಟಕ್ಕೂ ಆಳವಾದ ನಂಟಿದೆ, ಸುಲಭವಾಗಿ ಬಿಚ್ಚಲಾಗದ ಗಂಟಿದೆ. ಹದಿನೆಂಟು ಶಾಸ್ತ್ರ, ಹದಿನೆಂಟು ಪುರಾಣ, ಹದಿನೆಂಟು ದಿವಸಗಳ ಭಾರತದ ಯುದ್ಧ, ಹದಿನೆಂಟು ಅಧ್ಯಾಯಗಳ ಗೀತೆ. ಹೀಗೆಯೇ ಮುಂದುವರಿಯುತ್ತದೆ ಹದಿನೆಂಟರ ಲೆಕ್ಕಾಚಾರ. ಏನಿದು ಹದಿನೆಂಟು? ಈ ಹದಿನೆಂಟೇ ನಮ್ಮ ಹಿಂದೂ ಧರ್ಮದ ಒಳತಿರುಳು. ಇದುವೇ ವೇದ ಉಪನಿಷತ್ತು ಶಾಸ್ತ್ರ ಪುರಾಣಗಳೆಲ್ಲದರ ಜೀವಸತ್ತ್ವ. ಈ ಹದಿನೆಂಟನ್ನು ತಲುಪಲು ಪ್ರಪಂಚದ ನಾನಾ ಧರ್ಮಗಳು ಮಂತ್ರ ದೃಷ್ಠಾರರೂ ಶ್ರಮಿಸಿದ್ದು ಪರಮ ಸತ್ಯವಲ್ಲದೇ ಮತ್ತೇನು? ಈ ಪ್ರಯತ್ನ ಇಂದಿನ ವಿಜ್ಞಾನ ಯುಗದಲ್ಲೂ ಮುಂದುವರಿಯುತ್ತದೆ. ಈ ಹದಿನೆಂಟನೆ ಮೆಟ್ಟಿಲೇ ಮೋಕ್ಷ. ನಮ್ಮ ವೈದಿಕ ಧರ್ಮದ ಕೊನೆಯ ಮೆಟ್ಟಲು. ಈ ಮೆಟ್ಟಲನ್ನು ಮುಟ್ಟಬೇಕಾದರೆ ಮನುಷ್ಯನು ಮೊದಲಿನ ಹದಿನೇಳು ಮೆಟ್ಟಲುಗಳನ್ನು ಜನ್ಮದಾರಾಭ್ಯ ಏರಬೇಕಾಗಿದೆ. ಅದು ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಸಾಧ್ಯ. ಅದನ್ನೇ ವೇದ ಉಪನಿಷತ್ತುಗಳು ಸಾರುತ್ತಿರುವುದು.
ನೆಲ್ಲಿತೀರ್ಥದ ಪ್ರಕೃತಿ ನಿರ್ಮಿತ ಗುಹೆಯೊಳಗಿನ ಶಿವಲಿಂಗದ ದರ್ಶನವಾಗಬೇಕಾದರೆ ನಾವು ಮೊದಲಿನ ೧೭ ಮೆಟ್ಟಲುಗಳನ್ನು ಹೇಗೆ ಏರಬೇಕು ಎಂಬುದನ್ನು ಅರ್ಥೈಸಿಕೊಂಡಾಗ ಮಾತ್ರ ಮೇಲೆ ಹೇಳಿದ ಸಿದ್ಧಾಂತದ ಒಳಗುಟ್ಟು ತಿಳಿಯುತ್ತದೆ. ದೇವರ ಸಾನ್ನಿಧ್ಯವನ್ನು ತಲುಪಬೇಕಾದರೆ ಗರ್ಭಸ್ಥ ಶಿಶುವಿನಿಂದ ವೃದ್ಧ್ಯಾಪ್ಯದವರೆಗೆ ಮಾಡಬೇಕಾದ ಸಾಧನೆ ಹಾಗೂ ಭಕ್ತಿಯೊಂದಿಗೆ ದೈಹಿಕ ಶ್ರಮಕ್ಕೂ, ಕರ್ಮಕ್ಕೂ ಅಷ್ಟೆ ಪ್ರಾಮುಖ್ಯತೆ ಇವೆ ಎನ್ನುವುದು ಸ್ಪಷ್ಟ. ಗುಹೆಗೆ ಇಳಿಯುವಾಗ ತಾಯಿಯ ಹೊಟ್ಟೆಯಲ್ಲಿನ ಗರ್ಭಾವಸ್ಥೆಯ ಶಿಶುವಿನ ರೀತಿಯಲ್ಲಿ ಕುಳಿತು ಇಳಿಯಬೇಕು. ವಸುಂಧರೆಯ ಗರ್ಭವನ್ನು ಪ್ರವೇಶಿಸಿದಂತೆ ನಾವು ಮುಂದಕ್ಕೆ ಶಿಶುವಿನ ಜನನದಾರಭ್ಯ ವಿವಿಧ ಬೆಳವಣಿಗೆಯ ಹಂತದ ರೀತಿಯಲ್ಲಿ ಅಂದರೆ ಹೊಟ್ಟೆಯನ್ನು ನೆಲಕ್ಕೆ ತಾಗಿಸಿಕೊಂಡು ಮುಂದೆ ಹೋಗುವುದರಿಂದ ಕುಕ್ಕುರುಗಾಲು, ಅಂಬೆಗಾಲು ಇಡುವವರೆಗೆ ನಾನಾ ರೀತಿಯ ಅವಸ್ಥೆಗಳಲ್ಲಿ ಮುಂದುವರಿಯ ಬೇಕಾಗುತ್ತದೆ.
ಮನುಷ್ಯನ ಆಯುಷ್ಯ ಪ್ರಮಾಣ ೧೨೦ ವರ್ಷ ಎಂದಾದರೆ ಸಾಮಾನ್ಯವಾಗಿ ೨೦ರಿಂದ ೫೦ರ ೩೦ ವರುಷಗಳನ್ನು ಜೀವನದ ಸಾಧನೆಯ ಕಾಲವೆಂದು ಅರ್ಥೈಸಬಹುದು. ಈ ಪ್ರಕಾರ ನಮಗೆ ಸುಮಾರು ೨೫ ವರುಷಗಳಾದಾಗ ಭವಿಷ್ಯದ ಬದುಕನ್ನು ಬೃಹದಾಕಾರವಾಗಿ ನೋಡುವ ಹಂತಕ್ಕೆ ತಲುಪಿರುತ್ತೇವೆ. ಅಂತೆಯೇ ಗುಹೆಯ ಮಧ್ಯಭಾಗಕ್ಕೆ ಬಂದಾಗ ಅದು ನಮಗೆ ಬೃಹದಾಕಾರವಾಗಿ ಕಾಣಿಸ ತೊಡಗುತ್ತದೆ. ಅದರ ಒಳಗೆ ಒಂದು ಚಿಕ್ಕ ಗುಡ್ಡವಿದ್ದು ನಂತರ ಅದನ್ನು ಏರಬೇಕಾಗಿದೆ. ಅದನ್ನು ನಮ್ಮ ಜೀವನದ ಸಾಧನೆಯ ಕಾಲಕ್ಕೆ ಹೋಲಿಸಬಹುದು. ಅದರ ತುದಿ ಮುಟ್ಟಿದಾಗ ೬೦ರ ಅನುಭವ. ಅದು ಷಷ್ಠಿಪೂರ್ತಿ. ನಮ್ಮ ವ್ಯವಹಾರಗಳನ್ನು ಮಕ್ಕಳಿಗೆ ಬಿಟ್ಟು, ಅಂದರೆ ಈ ಮನೆಯ ವ್ಯಾಮೋಹವನ್ನು ತೊರೆದು ಆ ಮನೆಯ ಕಡೆಗೆ ಗಮನ ಕೊಡುವ ಕಾಲ. ಪ್ರತಿ ಮನುಷ್ಯನಿಗೆ ಎರಡು ಮನೆಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮನುಷ್ಯ ಮೋಹಕ್ಕೊಳಪಟ್ಟು ಒಂದನೇ ಮನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತ ಮಡದಿ, ಮಕ್ಕಳು ಹೀಗೆ ಎಲ್ಲಾ ವಿಷಯ ಸುಖಗಳಲ್ಲಿ ಮಗ್ನನಾಗಿ ಬಿಡುತ್ತಾನೆ. ಆದರೆ ಆತನಿಗೆ ಇನ್ನೊಂದು ಮನೆಗೆ ಹೋಗಲಿಕ್ಕಿದೆ. ಆ ಮನೆಗೆ ಅವನ ಹಿರಿಯರೆಲ್ಲಾ ಹೋಗಿರುತ್ತಾರೆ. ತನಗೂ ಅಲ್ಲಿ ಬೇಗನೆ ಹೋಗಲಿಕ್ಕಿದೆ .ಅದಕ್ಕಾಗಿ ಆ ಮನೆಯ ವ್ಯವಸ್ಥೆಗಾಗಿ ಏನಾದರೂ ಸಂಗ್ರಹಿಸು ಎನ್ನುವುದು ಇದರ ತಾತ್ಪರ್ಯ. ಅದಕ್ಕಾಗಿ ಆಧ್ಯಾತ್ಮ ಚಿಂತನೆ, ಸತ್ಕರ್ಮ ಮಾಡುವುದು, ತೀರ್ಥಕ್ಷೇತ್ರಗಳ ಸಂದರ್ಶನ. ನೆಲ್ಲಿತೀರ್ಥದಲ್ಲಿ ನಾವು ಏರಿದ ಗುಡ್ಡವನ್ನು ದಕ್ಷಿಣಾಭಿ ಮುಖವಾಗಿ ಇಳಿಯುತ್ತೇವೆ. ಇಲ್ಲಿ ದಕ್ಷಿಣಾಮುಖ ಎಂಬುದು ಬಹಳ ಪ್ರಾಮುಖ್ಯವಾದ ವಿಷಯ. ಕೆಳಗಿಳಿದಾಗ ನಮಗೆ ಪ್ರಕೃತಿ ನಿರ್ಮಿತ ಸುಂದರ ಸರೋವರ ಎದುರಾಗುತ್ತದೆ. ಅದುವೇ ಸಂಸಾರ ಸರದಿ. ಅದನ್ನು ದಾಟಿದಾಗ ಪರಾತ್ಪರ ಸ್ವರೂಪಿ ಜಾಬಾಲೇಶ್ವರ ಶಿವಲಿಂಗದ ದರ್ಶನ. ಅದುವೇ ಮೋಕ್ಷ.
ಗುಹೆಯ ಪ್ರಾರಂಭದಿಂದ ಕೊನೆಯ ತನಕ ನಾವು ಸಾಗುವಾಗ ಸುಮಾರು ೧೮ ಅವಸ್ಥೆಗಳನ್ನು ದಾಟ ಬೇಕಾಗುತ್ತದೆ. ನಮ್ಮನ್ನೇ ನಾವು ಮರೆತು ಭಗವಂತನ ನಾಮಸ್ಮರಣೆ ಮಾಡುತ್ತಾ, ಧ್ಯಾನದ ಅನುಭವವು ನಮಗೆ ಆಗಿ ಎಲ್ಲವನ್ನು ಮರೆಯುತ್ತೇವೆ. ನೆಲ್ಲಿತೀರ್ಥದ ಸೊಬಗೆ ಅಂಥದ್ದು. ಇದರ ಆನಂದವನ್ನು ಸವಿಯಬೇಕಿದ್ದರೆ ಸ್ವ-ಅನುಭವ ಅಗತ್ಯವಲ್ಲವೇ? ಒಮ್ಮೆ ಬಂದು ಈ ಕ್ಷೇತ್ರದ ದರ್ಶನ ಪಡೆದು ಕೃತಾರ್ಥರಾಗಬೇಕು.
ಪರಿವಾರ ದೇವತೆಗಳು ಮತ್ತು ದೈವಗಳು...

ಮಹರ್ಷಿ ಜಾಬಾಲಿ:
ದೇವಸ್ಥಾನದ ಹೊರಾಂಗಣದ ಉತ್ತರ ದಿಕ್ಕಿನಲ್ಲಿ ವೃಂದಾವನ ಸ್ವರೂಪದಲ್ಲಿ ಮಹರ್ಷಿ ಜಾಬಾಲಿಯು ಕಂಗೊಳಿಸುತ್ತಿದ್ದಾರೆ. ಅಲ್ಲದೆ ಈ ವೃಂದಾವನದ ಇತರ ಮೂರು ದಿಕ್ಕುಗಳಲ್ಲಿ ಅವರ ಆರಾಧ್ಯ ದೇವರುಗಳಾದ ಮಹಾಗಣಪತಿ, ಪಾರ್ವತಿ, ಮಹೇಶ್ವರರು ಪೂಜಿಸಲ್ಪಡುತ್ತಿದ್ದು ಬಹಳ ಕಾರಣೀಕದ ಪೀಠವಾಗಿದೆ. ಗುಹೆಯೊಳಗೆ ತೀರ್ಥಸ್ನಾನ ಮಾಡಿ ಜಾಬಾಲೇಶ್ವರನನ್ನು ಅರ್ಚಿಸಿ ಮಹರ್ಷಿಗಳ ಸನ್ನಿಧಾನದಲ್ಲಿ ಫಲ ಸಮರ್ಪಣೆ ಮಾಡಿ, ಪ್ರಾರ್ಥಿಸಿಕೊಂಡಾಗ ಮನಸ್ಸಿನಲ್ಲಿ ಇಚ್ಚಿಸಿದ ಕಾರ್ಯವು ಕ್ಷಿಪ್ರವಾಗಿ ಈಡೇರುತ್ತಿರುವುದು ಈ ಸ್ಥಳದ ವಿಶೇಷ.
ಮಹರ್ಷಿ ಜಾಬಾಲಿ ಕಾಶೀ ವಿಶ್ವನಾಥನ ಸನ್ನಿಧಿಯಿಂದ ಬಂದು ಅಂದು ಬಿಲ್ವ ವನವೆಂದು ಪ್ರಸಿದ್ಧಿಯಾದ (ನಿರ್ಜರಾರಣ್ಯ - ಕಟೀಲು ಕ್ಷೇತ್ರ) ನೆಲ್ಲಿತೀರ್ಥದ ಗುಹೆಯಲ್ಲಿ ತಪಸ್ಸನ್ನಾಚರಿಸಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ನಂದಿನಿಯನ್ನು ನದಿಯಾಗಿ ಹರಿಸಿ, ಈ ಪ್ರದೇಶದ ಕ್ಷಾಮ ಡಾಮರಗಳನ್ನು ಪರಿಹರಿಸಿ ಮುಂದಕ್ಕೆ ಅರುಣಾಸುರ ವಧೆಗೆ ಕಾರಣೀಭೂತರಾದ ಮಹಾಮಹಿಮರು ಇವರು. ಇಂದಿಗೂ ಗುಹೆಯಲ್ಲಿ ತಪಸ್ಸನ್ನಾಚರಿಸುತ್ತ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಕಾಮಧೇನುವಾಗಿದ್ದಾರೆ ಎನ್ನುವುದು ಹಿಂದಿನಿಂದ ಬಂದ ನಂಬಿಕೆ.

ದೇವಸ್ಥಾನದ ಮುಂಭಾಗದಲ್ಲಿ ಇರುವ ದೈವಕ್ಷೇತ್ರ ಉಲ್ಲಾಯ. ಕ್ಷೇತ್ರರಕ್ಷಕನಾದ ಈತನಿಗೆ ಅವಭೃತ (ಆರಾಟ) ದಿವಸ ವಿಶಿಷ್ಟ ರೀತಿಯ ನೇಮೋತ್ಸವ ನಡೆಯುತ್ತದೆ. ವಿಚಿತ್ರ ಸಂಪ್ರದಾಯದಿಂದ ಕೂಡಿದ ಈ ನೇಮವು ಮಹಾರಾಜನು ಅಧಿಕಾರಿಗಳನ್ನು ಪ್ರಶ್ನಿಸುವ ರೀತಿಯಲ್ಲಿ ಇದ್ದು, ಆತನ ವೇಷಭೂಷಣಗಳು ಇದನ್ನು ಪುಷ್ಟೀಕರಿಸುತ್ತವೆ. ಮುಖದಲ್ಲಿ ಮೀಸೆಯನ್ನು ಹೊತ್ತು ಧನುರ್ಧಾರಿಯಾಗಿ ದೇವರು ಸ್ನಾನ ಮಾಡಿ ವಿಜೃಂಭಣೆಯಿಂದ ಬರುತ್ತಿರುವಾಗ ಅರ್ಧದಲ್ಲಿ ಅಡ್ಡಗಟ್ಟಿ, ತಂತ್ರಿಗಳನ್ನು ಅಧಿಕಾರಯುತವಾಗಿ ಕೇಳುವ ಮಾತುಗಳು ಬಹುಶಃ ದಕ್ಷಿಣ ಕನ್ನಡದಲ್ಲಿಯೇ ವಿಶಿಷ್ಟ ರೀತಿಯದ್ದಾಗಿದೆ? ತಂತ್ರಿಗಳೇ, ನನ್ನ ದೇವರ ಮೂರು ದಿವಸದ ದೇವಬಲಿ, ಒಂದು ದಿವಸದ ಭೂತಬಲಿ, ಆರಡ ಅಂಬೋಲಿ ಸರಿಯಾಗಿ ನೆರೆವೇರಿತು ತಾನೆ? ಶ್ರೀ ದೇವರ ಅಂದರೆ ನನ್ನ ಉಲ್ಲಾಯ ಒಡೆಯನ ನಿತ್ಯ ಬಲಿ, ನಂದಾದೀಪ ಸಾಂಗವಾಗಿ ನೆರವೇರುತ್ತಾ ಇದೆ ತಾನೆ? ಹಾಗಿದ್ದ ಪಕ್ಷದಲ್ಲಿ ಧ್ವಜಾವರೋಹಣವಾಗಲಿ ಮತ್ತು ನನ್ನ ಒಡೆಯ ಗರ್ಭಗುಡಿ ಪ್ರವೇಶಿಸಲಿ, ನಾನು ನನ್ನ ಗುಡಿ ಸೇರುತ್ತೇನೆ? ಎನ್ನುತ್ತಾ ಧರಾಶಾಯಿಯಾಗುತ್ತಾನೆ. ಅಲ್ಲಿಗೆ ನೇಮ ಸಮಾಪ್ತಿಯಾಗುತ್ತದೆ. ಈ ರೀತಿಯ ಸಂಪ್ರದಾಯ ತುಳುನಾಡಿನಲ್ಲಿ ಬೇರೆಲ್ಲೂ ಕಂಡು ಬರುವುದಿಲ್ಲ.
ನಾಗಬ್ರಹ್ಮರು ಮತ್ತು ದೈವಗಳು:
ದೇವಸ್ಥಾನದಿಂದ ವಾಯವ್ಯ ದಿಕ್ಕಿಗೆ ಸುಮಾರು ೨ ಫರ್ಲಾಂಗ್ ದೂರದಲ್ಲಿ ಕಾಡಿನ ಮಧ್ಯೆ ನಾಗಬ್ರಹ್ಮ ಹಾಗೂ ಪರಿವಾರ ದೈವಗಳ ಸಾನ್ನಿಧ್ಯವಿದ್ದು ಜೀರ್ಣೋದ್ಧಾರದ ಹಂತದಲ್ಲಿದೆ. ವರ್ಷಕ್ಕೆ ಎರಡಾವರ್ತಿ ವಾರ್ಷಿಕ ಪೂಜೆಗಳು ನಡೆಯುತ್ತಿದ್ದು, ಬಹಳ ಕಾರಣಿಕ ಸ್ಥಳವಾಗಿದೆ. ಈ ಸನ್ನಿಧಾನದಲ್ಲಿ ವಾರಾಹಿ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ, ಬೊಬ್ಬರ್ಯ, ಪಾಶಾಣಮೂರ್ತಿ ಎಂಬ ಆರು ದೈವಗಳ ಸಾನ್ನಿಧ್ಯವಿದ್ದು ಇವುಗಳ ಮಧ್ಯೆ ನಾಗಬ್ರಹ್ಮರು ರಾರಾಜಿಸುತ್ತಿದ್ದಾರೆ.
ನೆಲ್ಲಿತೀರ್ಥ-ಕೆಲವು ಪ್ರಾಚೀನ ಉಲ್ಲೇಖಗಳು:


No comments:
Post a Comment